ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಸುಸ್ಥಿರ ಇಂಧನ ಭವಿಷ್ಯದ ಅನ್ವೇಷಣೆಯಲ್ಲಿ ಭಾರತವು ಜಾಗತಿಕ ಉದ್ದೇಶದ ಧ್ವನಿಯಾಗಿದೆ: ಶ್ರೀ ಪ್ರಲ್ಹಾದ್ ಜೋಶಿ


ಜರ್ಮನಿಯಲ್ಲಿ ನಡೆದ ಹ್ಯಾಂಬರ್ಗ್ ಸುಸ್ಥಿರತೆ ಸಮ್ಮೇಳನದಲ್ಲಿ ನವೀಕರಿಸಬಹುದಾದ ಇಂಧನ ಮತ್ತು ಗ್ರೀನ್ ಶಿಪ್ಪಿಂಗ್‌ ನಲ್ಲಿ ಭಾರತದ ಪ್ರಗತಿಯನ್ನು ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಎತ್ತಿ ತೋರಿಸಿದರು

2014 ರಿಂದ, ಭಾರತವು ತನ್ನ ನವೀಕರಿಸಬಹುದಾದ ಇಂಧನ ಸಾಮರ್ಥ್ಯದಲ್ಲಿ ಪರಿವರ್ತಕ ಹೆಚ್ಚಳಕ್ಕೆ ಸಾಕ್ಷಿಯಾಗಿದೆ, 75 GW ನಿಂದ 208 GW ಗೆ ಶೇ. 175 ರಷ್ಟು ಏರಿಕೆಯಾಗಿದೆ: ಕೇಂದ್ರ ಸಚಿವರು

ಭಾರತವು ಗ್ರೀನ್ ಶಿಪ್ಪಿಂಗ್ ವಲಯದಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ, 2030 ರ ವೇಳೆಗೆ ಅಗ್ರ ಹತ್ತು ಹಡಗು ನಿರ್ಮಾಣ ರಾಷ್ಟ್ರಗಳಲ್ಲಿ ಮತ್ತು 2047 ರ ವೇಳೆಗೆ ಅಗ್ರ ಐದು ರಾಷ್ಟ್ರಗಳಲ್ಲಿ ಸೇರುವ ಗುರಿ ಹೊಂದಿದೆ: ಕೇಂದ್ರ ಸಚಿವರಾದ​​​​​​​ ಜೋಶಿ

Posted On: 07 OCT 2024 6:57PM by PIB Bengaluru

7 ಅಕ್ಟೋಬರ್ 2024 ರಂದು ಜರ್ಮನಿಯಲ್ಲಿ ನಡೆದ ಹ್ಯಾಂಬರ್ಗ್ ಸುಸ್ಥಿರತೆ ಸಮ್ಮೇಳನದಲ್ಲಿ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಗ್ರೀನ್ ಶಿಪ್ಪಿಂಗ್ ಮತ್ತು ಇಂಧನ ಪರಿವರ್ತನೆಯಲ್ಲಿ ಭಾರತದ ಮಹತ್ವದ ಪ್ರಗತಿಯನ್ನು ಒತ್ತಿಹೇಳಿದರು. ಸಮ್ಮೇಳನದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ನಮ್ಮ ಅಭಿವೃದ್ಧಿ ಮಹತ್ವಾಕಾಂಕ್ಷೆಗಳು ಮತ್ತು ಪರಿಸರದ ಹೊಣೆಗಾರಿಕೆಗಳೊಂದಿಗೆ ಹೊಂದಿಕೊಳ್ಳುವ ಸುಸ್ಥಿರ ಇಂಧನ ಭವಿಷ್ಯದ ಅನ್ವೇಷಣೆಯ ಬದ್ಧತೆಯಲ್ಲಿ ಭಾರತವು ಜಾಗತಿಕ ಉದ್ದೇಶದ ಧ್ವನಿಯಾಗಿ ನಿಂತಿದೆ ಎಂದು ಹೇಳಿದರು.

ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು, ಭಾರತದ ಇಂಧನ ಪರಿವರ್ತನೆಯನ್ನು ಎತ್ತಿ ತೋರಿಸಿದರು ಮತ್ತು ನವೀಕರಿಸಬಹುದಾದ ಇಂಧನದತ್ತ ಸಾಗುವಲ್ಲಿ ಭಾರತವು ಗಮನಾರ್ಹ ಸಾಧನೆಗಳನ್ನು ಮಾಡಿದೆ ಎಂದು ಹೇಳಿದರು. "ಜಿ 20 ದೇಶಗಳಲ್ಲಿ ಅತಿ ಕಡಿಮೆ ತಲಾವಾರು ಹೊರಸೂಸುವಿಕೆಯನ್ನು ಹೊಂದಿದ್ದರೂ ಸಹ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ತನ್ನ ಹವಾಮಾನ ಗುರಿಗಳನ್ನು ಪೂರೈಸಿದ ಏಕೈಕ ಜಿ 20 ದೇಶ ಭಾರತವಾಗಿದೆ" ಎಂದು ಅವರು ಹೇಳಿದರು. ಭಾರತಕ್ಕೆ ಇಂಧನ ಭದ್ರತೆ ಮತ್ತು ಪ್ರವೇಶವು ಅತ್ಯಂತ ಮಹತ್ವದ್ದಾಗಿದೆ. ಆದರೆ ಇದು ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಇಂಧನ ಪರಿವರ್ತನೆಯ ಕಡೆಗೆ ದೇಶದ ಬದ್ಧತೆಗೆ ಎಂದಿಗೂ ಅಡ್ಡಿಯಾಗಲಿಲ್ಲ ಎಂದು ಅವರು ಒತ್ತಿ ಹೇಳಿದರು,

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು 2014 ರಿಂದ ನವೀಕರಿಸಬಹುದಾದ ಇಂಧನ ಸಾಮರ್ಥ್ಯದಲ್ಲಿ ಪರಿವರ್ತನೆಯ ಬೆಳವಣಿಗೆಯನ್ನು ಕಂಡಿದೆ ಎಂದು ಕೇಂದ್ರ ಸಚಿವರು ಹೇಳಿದರು, ಇದು ಇಂದು 75 GW ನಿಂದ 208 GW ಗೆ ಶೇ.175 ರಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ಒಟ್ಟು ನವೀಕರಿಸಬಹುದಾದ ಇಂಧನವು 193.5 ಶತಕೋಟಿ ಯೂನಿಟ್‌ಗಳಿಂದ 360 ಶತಕೋಟಿ ಯೂನಿಟ್‌ ಗೆ ಏರಿತು, ಇದು ಶೇ.86 ರಷ್ಟು ಹೆಚ್ಚಳವನ್ನು ತೋರಿಸುತ್ತದೆ. ಕಳೆದ 10 ವರ್ಷಗಳಲ್ಲಿ ಸೌರಶಕ್ತಿ ಸಾಮರ್ಥ್ಯವೂ 33 ಪಟ್ಟು ಹೆಚ್ಚಾಗಿದೆ. 100 ಕ್ಕೂ ಹೆಚ್ಚು ದೇಶಗಳಿಂದ ಬೆಂಬಲಿತವಾಗಿರುವ ಅಂತರರಾಷ್ಟ್ರೀಯ ಸೌರ ಒಕ್ಕೂಟವು ಸೌರ ಶಕ್ತಿಯ ಮೂಲಕ ಹವಾಮಾನ ಬದಲಾವಣೆಯನ್ನು ನಿಭಾಯಿಸುವ ಜಾಗತಿಕ ಪ್ರಯತ್ನಗಳಲ್ಲಿ ಭಾರತದ ನಾಯಕತ್ವವನ್ನು ಪ್ರತಿಬಿಂಬಿಸುತ್ತದೆ ಎಂದು ಶ್ರೀ ಜೋಶಿ ಹೇಳಿದರು.

ಭಾರತದ ಸಾಂಸ್ಕೃತಿಕ ಪರಂಪರೆಯತ್ತ ಗಮನ ಸೆಳೆದ ಸಚಿವರು ಸುಸ್ಥಿರತೆಯ ಪರಿಕಲ್ಪನೆಯು ಭಾರತೀಯ ಸಂಪ್ರದಾಯದಲ್ಲಿ ಆಳವಾಗಿ ಬೇರೂರಿದೆ ಎಂದು ಹೇಳಿದರು. ಅವರು ಋಗ್ವೇದದಿಂದ ಗಾಯತ್ರಿ ಮಂತ್ರವನ್ನು ಪಠಿಸಿದರು ಮತ್ತು ಮನುಕುಲ ಮತ್ತು ಪ್ರಕೃತಿಯ ನಡುವಿನ ಸಾಮರಸ್ಯದ ಭಾರತದ ಪ್ರಾಚೀನ ನಂಬಿಕೆಯನ್ನು ಒತ್ತಿಹೇಳಿದರು.

ಗ್ರೀನ್ ಶಿಪ್ಪಿಂಗ್ ಉಪಕ್ರಮಗಳು:

ಗ್ರೀನ್ ಶಿಪ್ಪಿಂಗ್ ವಿಷಯವನ್ನು ಕುರಿತು ಮಾತನಾಡಿದ ಶ್ರೀ ಜೋಶಿ, ಜಾಗತಿಕ ವ್ಯಾಪಾರದಲ್ಲಿ ಸಮುದ್ರ ವಲಯದ ನಿರ್ಣಾಯಕ ಪಾತ್ರ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಯ ಮೇಲೆ ಅದರ ಪ್ರಭಾವವನ್ನು ಒತ್ತಿ ಹೇಳಿದರು. “ನಾವು ನಿವ್ವಳ-ಶೂನ್ಯ ಹೊರಸೂಸುವಿಕೆಯನ್ನು ಸಾಧಿಸುವತ್ತ ಸಾಗುತ್ತಿರುವಾಗ, ಸುಸ್ಥಿರ ಸಮುದ್ರ ಸಾರಿಗೆಯ ಅಗತ್ಯವು ಬಹಳ ಮುಖ್ಯವಾಗಿದೆ. ಸರ್ಕಾರದ ಉಪಕ್ರಮಗಳು, ತಾಂತ್ರಿಕ ಪ್ರಗತಿಗಳು ಮತ್ತು ಅಂತರರಾಷ್ಟ್ರೀಯ ಸಹಯೋಗಗಳಿಂದ ನಡೆಸಲ್ಪಡುವ ಗ್ರೀನ್ ಶಿಪ್ಪಿಂಗ್ ವಲಯದಲ್ಲಿ ಭಾರತವು ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದೆ ಎಂದುಅವರು ಹೇಳಿದರು.

ಗ್ರೀನ್ ಶಿಪ್ಪಿಂಗ್ ನಿರ್ಮಾಣ ಸಾಮರ್ಥ್ಯವನ್ನು ವಿಸ್ತರಿಸಲು ಭಾರತೀಯ ಹಡಗುಕಟ್ಟೆಗಳನ್ನು ಹೇಗೆ ಆಧುನೀಕರಿಸಲಾಗುತ್ತಿದೆ ಮತ್ತು ಹಳೆಯ ಡಾಕ್‌ಯಾರ್ಡ್‌ ಗಳನ್ನು ಹೇಗೆ ಮರು-ತೆರೆಯಲಾಗುತ್ತಿದೆ ಎಂದು ಸಚಿವರು ವಿವರಿಸಿದರು. ಭಾರತವು ಹಸಿರು ಹಡಗು ನಿರ್ಮಾಣಕ್ಕೆ ಭರವಸೆಯ ಕೇಂದ್ರವಾಗುತ್ತಿದೆ ಎಂದು ಅವರು ಹೇಳಿದರು, ಪರ್ಯಾಯ ಇಂಧನಗಳು ಮತ್ತು ಜೈವಿಕ ಇಂಧನ ಮತ್ತು ಪವನ ಶಕ್ತಿಯಂತಹ ನವೀಕರಿಸಬಹುದಾದ ಇಂಧನ ಮೂಲಗಳಿಗೆ ಸರ್ಕಾರ ಒತ್ತು ನೀಡುತ್ತಿದೆ. ಹಸಿರು ಹಡಗು ಇಂಧನಗಳು ಮತ್ತು ಹೈಬ್ರಿಡ್ ಮಾದರಿಗಳನ್ನು ಬಳಸುವ ಹಡಗುಗಳನ್ನು ಬೆಂಬಲಿಸಲು ಭಾರತವು ತನ್ನ ಬಂದರು ಮೂಲಸೌಕರ್ಯವನ್ನು ನವೀಕರಿಸುತ್ತಿದೆ, 2047 ರ ವೇಳೆಗೆ ಅಗ್ರ ಐದು ಹಡಗು ನಿರ್ಮಾಣ ರಾಷ್ಟ್ರಗಳಲ್ಲಿ ಸ್ಥಾನ ಪಡೆಯುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಹಸಿರು ಜಲಜನಕ ಮಿಷನ್ (ಎನ್‌ ಜಿ ಎಚ್‌ ಎಮ್)‌ ಅನ್ನು $2.4 ಶತಕೋಟಿ ವೆಚ್ಚದಲ್ಲಿ ಪ್ರಾರಂಭಿಸಲಾಗಿದೆ, 2030 ರ ವೇಳೆಗೆ ವಾರ್ಷಿಕವಾಗಿ 5 ಮಿಲಿಯನ್ ಮೆಟ್ರಿಕ್ ಟನ್ ಹಸಿರು ಹೈಡ್ರೋಜನ್ ಅನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ, $100 ಶತಕೋಟಿಗೂ ಹೆಚ್ಚು ಹೂಡಿಕೆಗಳನ್ನು ಆಕರ್ಷಿಸುತ್ತದೆ ಮತ್ತು 6 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಸಚಿವರು ಹೇಳಿದರು. ಭಾರತದ ಮಹತ್ವಾಕಾಂಕ್ಷೆಯ ಹಸಿರು ಜಲಜನಕ ಮತ್ತು ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಬೆಂಬಲಿಸುವಂತೆ ಅವರು ಅಂತರರಾಷ್ಟ್ರೀಯ ಪಾಲುದಾರರಿಗೆ ಆಹ್ವಾನ ನೀಡಿದರು.

$14 ಮಿಲಿಯನ್ ಹೂಡಿಕೆಯೊಂದಿಗೆ ರಾಷ್ಟ್ರೀಯ ಹಸಿರು ಜಲಜನಕ ಮಿಷನ್ ಅಡಿಯಲ್ಲಿ ಪ್ರಾಯೋಗಿಕ ಯೋಜನೆಗಳು ಈಗಾಗಲೇ ಹಡಗು ವಲಯದಲ್ಲಿ ಹಸಿರು ಹೈಡ್ರೋಜನ್ ಬಳಕೆಯನ್ನು ಅನ್ವೇಷಿಸುತ್ತಿವೆ. ನಾವು ಅಸ್ತಿತ್ವದಲ್ಲಿರುವ ಹಡಗುಗಳನ್ನು ಹಸಿರು ಜಲಜನಕ ಅಥವಾ ಅದರ ಉತ್ಪನ್ನಗಳಿಗೆ ಪರಿವರ್ತಿಸುವತ್ತ ಗಮನಹರಿಸುತ್ತಿದ್ದೇವೆ. ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಪ್ರಸ್ತುತ ಎರಡು ಹಡಗುಗಳನ್ನು ಹಸಿರು ಮೆಥೆನಾಲ್‌ ನಲ್ಲಿ ಚಲಿಸುವಂತೆ ಪರಿವರ್ತಿಸುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು. ಸರಿಸುಮಾರು $25 ಮಿಲಿಯನ್ ಹೂಡಿಕೆಯೊಂದಿಗೆ, ಭಾರತವು ತನ್ನ ಇಂಧನ ವಲಯವನ್ನು ಪರಿವರ್ತಿಸುವ ಸಮಗ್ರ ಹೈಡ್ರೋಜನ್ ಪೂರಕ ವ್ಯವಸ್ಥೆಗೆ ವೇದಿಕೆಯನ್ನು ಹೊಂದಿಸುತ್ತಿದೆ. ಇದಲ್ಲದೇ ದೀನದಯಾಳ್, ಪಾರದೀಪ್ ಮತ್ತು ವಿ.ಓ. ಚಿದಂಬರನಾರ್‌ ನಂತಹ ಬಂದರುಗಳನ್ನು ಹಸಿರು ಜಲಜನಕ-ಚಾಲಿತ ಹಡಗುಗಳನ್ನು ಬೆಂಬಲಿಸಲು ಬಂಕರ್ ಮತ್ತು ಇಂಧನ ತುಂಬುವ ಸೌಲಭ್ಯಗಳೊಂದಿಗೆ ಪ್ರಮುಖ ಹೈಡ್ರೋಜನ್ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.

ಭಾರತದ ನವೀನ ತಂತ್ರಜ್ಞಾನಗಳ ಅಳವಡಿಕೆ, ದೃಢವಾದ ಮೂಲಸೌಕರ್ಯದಲ್ಲಿ ಹೂಡಿಕೆ ಮತ್ತು ಅಂತಾರಾಷ್ಟ್ರೀಯ ಸಹಕಾರದ ಪೋಷಣೆಯ ಮೂಲಕ ಈ ಜಾಗತಿಕ ಪರಿವರ್ತನೆಯಲ್ಲಿ ನಮ್ಮನ್ನು ಕೇವಲ ಪಾಲ್ಗೊಳ್ಳುವ ದೇಶದಿಂದ ಪ್ರಮುಖ ಶಕ್ತಿಯಾಗಿ ಪರಿವರ್ತಿಸಲಾಗಿದೆ ಎಂದು ಹೇಳಿದ ಶ್ರೀ ಪ್ರಲ್ಹಾದ್ ಜೋಶಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

 

*****



(Release ID: 2062965) Visitor Counter : 18


Read this release in: English , Urdu , Hindi