ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ನವದೆಹಲಿಯಲ್ಲಿ 3ನೇ ಕೌಟಿಲ್ಯ ಅರ್ಥಶಾಸ್ತ್ರ ಸಮಾವೇಶ(ಸಮ್ಮೇಳನ) ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ


ಇಂದು ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ: ಪಿಎಂ

ಸರ್ಕಾರವು ಸುಧಾರಣೆ, ಸಾಧನೆ ಮತ್ತು ಪರಿವರ್ತನೆಯ ಮಂತ್ರವನ್ನು ಅನುಸರಿಸುತ್ತಿದೆ: ಪಿಎಂ

ಭಾರತದ ಅಭಿವೃದ್ಧಿಗೆ ರಚನಾತ್ಮಕ ಸುಧಾರಣೆಗಳನ್ನು ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ: ಪಿಎಂ

ಭಾರತದಲ್ಲಿ ಬೆಳವಣಿಗೆಯೊಂದಿಗೆ ಹಣಕಾಸು ಸೇರ್ಪಡೆ ನಡೆಯುತ್ತಿದೆ: ಪಿಎಂ

ಭಾರತವು 'ಸುಧಾರಣೆ ಪ್ರಕ್ರಿಯೆ'ಗಳನ್ನು ಸರ್ಕಾರದ ನಿರಂತರ ಚಟುವಟಿಕೆಗಳ ಭಾಗವಾಗಿ ಮಾಡಿದೆ: ಪಿಎಂ

ಇಂದು ಭಾರತದ ಗಮನವು ಕೃತ ಬುದ್ಧಿಮತ್ತೆ ಮತ್ತು ಸೆಮಿಕಂಡಕ್ಟರ್‌ನಂತಹ  ನಿರ್ಣಾಯಕ ತಂತ್ರಜ್ಞಾನಗಳ ಮೇಲೆ ಕೇಂದ್ರೀಕೃತವಾಗಿದೆ: ಪಿಎಂ

ಯುವಕರ ಕೌಶಲ್ಯ ಮತ್ತು ಇಂಟರ್ನ್‌ಶಿಪ್‌ಗಾಗಿ ವಿಶೇಷ ಪ್ಯಾಕೇಜ್: ಪಿಎಂ

Posted On: 04 OCT 2024 7:44PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿಂದು ಕೌಟಿಲ್ಯ ಅರ್ಥಶಾಸ್ತ್ರ ಸಮಾವೇಶ(ಸಮ್ಮೇಳನ) ಉದ್ದೇಶಿಸಿ ಭಾಷಣ ಮಾಡಿದರು. ಹಣಕಾಸು ಸಚಿವಾಲಯದ ಸಹಭಾಗಿತ್ವದಲ್ಲಿ “ದಿ ಇನ್‌ಸ್ಟಿಟ್ಯೂಟ್ ಆಫ್ ಎಕನಾಮಿಕ್ ಗ್ರೋಥ್” ಆಯೋಜಿಸಿರುವ ಕೌಟಿಲ್ಯ ಆರ್ಥಶಾಸ್ತ್ರ(ಆರ್ಥಿಕ) ಸಮ್ಮೇಳನವು ಹಸಿರು ಪರಿವರ್ತನೆ ಯೋಜನೆಗಳಿಗೆ ಹಣಕಾಸು ಒದಗಿಸುವುದು, ಭೂ-ಆರ್ಥಿಕ ಬೇರ್ಪಡಿಕೆ(ವಿಭಾಗೀಕರಣ)  ಮತ್ತು ಬೆಳವಣಿಗೆಯ ಪರಿಣಾಮಗಳು,  ಹೊಂದಾಣಿಕೆ ಕಾಪಾಡುವ ನೀತಿ ಕ್ರಮದ ತತ್ವಗಳು ಮತ್ತು ಇತರೆ ವಸ್ತು ವಿಷಯಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, 3ನೇ ಕೌಟಿಲ್ಯ ಅರ್ಥಶಾಸ್ತ್ರ ಸಮ್ಮೇಳನದಲ್ಲಿ ಉಪಸ್ಥಿತರಿರುವ ಎಲ್ಲಾ ಗಣ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಸಮಾವೇಶವು ಮುಂದಿನ 3 ದಿನಗಳ ಕಾಲ ಅನೇಕ ಕಲಾಪಗಳಿಗೆ ಸಾಕ್ಷಿಯಾಗಲಿದೆ.  ಇಲ್ಲಿ ಆರ್ಥಿಕತೆಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಈ ಚರ್ಚೆಗಳು ಭಾರತದ ಬೆಳವಣಿಗೆಯನ್ನು ವೇಗಗೊಳಿಸಲು ಸಹಾಯ ಮಾಡಲಿವೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ವಿಶ್ವದ 2 ಪ್ರಮುಖ ಪ್ರದೇಶಗಳು ಯುದ್ಧದಲ್ಲಿ ತೊಡಗಿರುವ ಸಮಯದಲ್ಲೇ ಈ ಸಮಾವೇಶ ಆಯೋಜಿಸಲಾಗಿದೆ. ಜಾಗತಿಕ ಆರ್ಥಿಕತೆಗೆ ವಿಶೇಷವಾಗಿ ಇಂಧನ ಭದ್ರತೆಯ ವಿಷಯದಲ್ಲಿ ಈ ಎರಡು ಪ್ರದೇಶಗಳ ಪ್ರಾಮುಖ್ಯತೆ ಮಹತ್ವದ್ದು. "ಇಂತಹ ದೊಡ್ಡ ಜಾಗತಿಕ ಅನಿಶ್ಚಿಯದ ನಡುವೆ, ನಾವು ಇಲ್ಲಿ ಭಾರತದ ಯುಗದ ಬಗ್ಗೆ ಚರ್ಚಿಸುತ್ತಿದ್ದೇವೆ". ಇದು ಭಾರತದ ಮೇಲಿನ ನಂಬಿಕೆ ಮತ್ತು ಅದರ ಆತ್ಮ ವಿಶ್ವಾಸವನ್ನು ಎತ್ತಿ ತೋರಿಸುತ್ತಿದೆ ಎಂದರು.

"ಭಾರತ ಇಂದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ". ಪ್ರಸ್ತುತ ಭಾರತವು ಜಿಡಿಪಿಯಲ್ಲಿ 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಜಾಗತಿಕ ಹಣಕಾಸು ತಂತ್ರಜ್ಞಾನ ಅಳವಡಿಕೆ ದರದಲ್ಲಿ ಮತ್ತು ಸ್ಮಾರ್ಟ್‌ಫೋನ್ ಡೇಟಾ ಬಳಕೆಯಲ್ಲಿ ಭಾರತವು ಮೊದಲ ಸ್ಥಾನದಲ್ಲಿ. ಇಂಟರ್ನೆಟ್ ಬಳಕೆದಾರರ ವಿಷಯದಲ್ಲಿ ಭಾರತವು ವಿಶ್ವದಲ್ಲಿ 2ನೇ ಸ್ಥಾನದಲ್ಲಿದೆ. ವಿಶ್ವದ ಅರ್ಧದಷ್ಟು ನೈಜ-ಸಮಯದ ಡಿಜಿಟಲ್ ವಹಿವಾಟುಗಳು ಭಾರತದಲ್ಲಿ ನಡೆಯುತ್ತಿವೆ. ಪ್ರಸ್ತುತ ಭಾರತವು ವಿಶ್ವದ 3ನೇ ಅತಿದೊಡ್ಡ ಸ್ಟಾರ್ಟಪ್ ಪರಿಸರ ವ್ಯವಸ್ಥೆ ಹೊಂದಿದೆ. ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ವಿಷಯದಲ್ಲಿ ಭಾರತವು 4ನೇ ಸ್ಥಾನದಲ್ಲಿದೆ. ಉತ್ಪಾದನೆಯಲ್ಲೂ ಮುಂಚೂಣಿಯಲ್ಲಿರುವ ಭಾರತ, ವಿಶ್ವದ 2ನೇ ಅತಿ ದೊಡ್ಡ ಮೊಬೈಲ್ ತಯಾರಕ ದೇಶವಾಗಿದೆ. ದ್ವಿಚಕ್ರ ವಾಹನ ಮತ್ತು ಟ್ರ್ಯಾಕ್ಟರ್‌ಗಳ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ. "ಭಾರತವು ವಿಶ್ವದ ಅತಿ ಹೆಚ್ಚಿನ ಯುವ ಸಮುದಾಯ ಹೊಂದಿರುವದೇಶ". ಭಾರತವು ವಿಶ್ವದ 3ನೇ ಅತಿದೊಡ್ಡ ವಿಜ್ಞಾನಿಗಳು ಮತ್ತು ತಂತ್ರಜ್ಞರನ್ನು ಹೊಂದಿದೆ. ಅದು ವಿಜ್ಞಾನವೇ ಆಗಿರಲಿ, ತಂತ್ರಜ್ಞಾನವೇ ಆಗಿರಲಿ ಅಥವಾ ನಾವೀನ್ಯತೆಯೇ ಆಗಿರಲಿ, ಭಾರತವು ಮುಂಚೂಣಿ ಸ್ಥಾನದಲ್ಲಿದೆ ಎಂದು ಹೇಳಿದರು.

"ಸರ್ಕಾರವು ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆಯ ಮಂತ್ರವನ್ನು ಅನುಸರಿಸುತ್ತಿದೆ. ದೇಶವನ್ನು ಮುನ್ನಡೆಸಲು ನಿರಂತರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ". 60 ವರ್ಷಗಳ ನಂತರ ಸತತ 3ನೇ ಬಾರಿಗೆ ದೇಶದ ಜನತೆ ಅದೇ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಜನರು ತಮ್ಮ ಜೀವನವನ್ನು ಉತ್ತಮವಾಗಿ ಪರಿವರ್ತಿಸಿದಾಗ ದೇಶವು ಸರಿಯಾದ ಮಾರ್ಗದಲ್ಲಿ ಸಾಗುತ್ತದೆ ಎಂಬ ವಿಶ್ವಾಸ ಪಡೆಯುತ್ತದೆ. ಈ ಭಾವನೆಯು ಭಾರತದ ಜನರ ಜನಾದೇಶದಲ್ಲಿ ಗೋಚರಿಸುತ್ತಿದೆ. 140 ಕೋಟಿ ದೇಶವಾಸಿಗಳ ವಿಶ್ವಾಸವು ಈ ಸರ್ಕಾರದ ದೊಡ್ಡ ಆಸ್ತಿಯಾಗಿದೆ ಎಂದು ಪ್ರಧಾನಿ ಹೇಳಿದರು. ಭಾರತದ ಅಭಿವೃದ್ಧಿಗೆ ರಚನಾತ್ಮಕ ಸುಧಾರಣೆಗಳನ್ನು ಕೈಗೊಳ್ಳುವ ಸರ್ಕಾರದ ಬದ್ಧತೆಯನ್ನು ಪ್ರಸ್ತಾಪಿಸಿದರು. 3ನೇ ಅವಧಿಯ ಮೊದಲ 3 ತಿಂಗಳಲ್ಲಿ ಮಾಡಿದ ಕೆಲಸ ಮತ್ತು ದಿಟ್ಟ ನೀತಿ ಬದಲಾವಣೆಗಳ ಉದಾಹರಣೆಗಳನ್ನು ನೀಡಿದರು. ಉದ್ಯೋಗಗಳು ಮತ್ತು ಕೌಶಲ್ಯಗಳ ಕಡೆಗೆ ಬಲವಾದ ಬದ್ಧತೆ, ಸುಸ್ಥಿರ ಬೆಳವಣಿಗೆ ಮತ್ತು ನಾವೀನ್ಯತೆ, ಆಧುನಿಕ ಮೂಲಸೌಕರ್ಯ, ಜೀವನದ ಗುಣಮಟ್ಟ ಮತ್ತು ವೇಗದ ಬೆಳವಣಿಗೆಯ ನಿರಂತರತೆಯ ಮೇಲೆ ಗಮನ ಕೇಂದ್ರೀಕರಿಸಲಾಗಿದೆ. "ಇದು ಮೊದಲ 3 ತಿಂಗಳ ನಮ್ಮ ನೀತಿಗಳ ಪ್ರತಿಬಿಂಬವಾಗಿದೆ". ಈ ಅವಧಿಯಲ್ಲಿ 15 ಟ್ರಿಲಿಯನ್ ಅಥವಾ 15 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಮೌಲ್ಯದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ದೇಶದಲ್ಲಿ 12 ಕೈಗಾರಿಕಾ ಪ್ರದೇಶ(ನೋಡ್‌)ಗಳ ಸ್ಥಾಪನೆ ಮತ್ತು 3 ಕೋಟಿ ಹೊಸ ಮನೆಗಳ ನಿರ್ಮಾಣಕ್ಕೆ ಅನುಮೋದನೆ ಸೇರಿದಂತೆ ಭಾರತದಲ್ಲಿ ಅನೇಕ ಬೃಹತ್ ಮೂಲಸೌಕರ್ಯ ಯೋಜನೆಗಳ ಕೆಲಸ ಪ್ರಾರಂಭವಾಗಿದೆ ಎಂದರು.

ಭಾರತದ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯ ಮನೋಭಾವವು ಭಾರತದ ಬೆಳವಣಿಗೆಯ ಯಶೋಗಾಥೆಯ ಮತ್ತೊಂದು ಗಮನಾರ್ಹ ಅಂಶವಾಗಿದೆ. ಬೆಳವಣಿಗೆಯೊಂದಿಗೆ ಅಸಮಾನತೆ ಹೆಚ್ಚಾಗುತ್ತದೆ ಎಂದು ಮೊದಲು ನಂಬಲಾಗುತ್ತಿತ್ತು, ಆದರೆ ಇದಕ್ಕೆ ಪ್ರತಿಯಾಗಿ, ಈಗ ಭಾರತದಲ್ಲಿ ಬೆಳವಣಿಗೆಯೊಂದಿಗೆ ಹಣಕಾಸು ಸೇರ್ಪಡೆ ಹೆಚ್ಚುತ್ತಿದೆ. ಪರಿಣಾಮವಾಗಿ, ಕಳೆದ ದಶಕದಲ್ಲಿ 25 ಕೋಟಿ ಅಥವಾ 250 ದಶಲಕ್ಷ ಜನರು ಬಡತನದಿಂದ ಹೊರಬಂದಿದ್ದಾರೆ. ಭಾರತದ ಕ್ಷಿಪ್ರ ಪ್ರಗತಿಯ ಜೊತೆಗೆ, ಅಸಮಾನತೆಯ ನಿವಾರಣೆ ಮತ್ತು ಅಭಿವೃದ್ಧಿಯ ಪ್ರಯೋಜನಗಳು ಎಲ್ಲರಿಗೂ ತಲುಪುವುದನ್ನು ಸರ್ಕಾರ ಖಾತ್ರಿಪಡಿಸುತ್ತಿದೆ ಎಂದು ಹೇಳಿದರು.

ಭಾರತದ ಇಂದಿನ ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದ ರೇಟಿಂಗ್ ಸಂಸ್ಥೆಗಳ ಮುನ್ನೋಟಗಳನ್ನು ಎತ್ತಿ ಹಿಡಿದ ಪ್ರಧಾನ ಮಂತ್ರಿ, ಭಾರತ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಅವರ ವಿಶ್ವಾಸವೇ ಸೂಚಿಸುತ್ತಿದೆ. ಕಳೆದ ಕೆಲವು ವಾರಗಳು ಮತ್ತು ತಿಂಗಳ ದತ್ತಾಂಶದಿಂದ ಕೂಡ ಇದು ಸಾಬೀತಾಗಿದೆ. ಭಾರತದ ಆರ್ಥಿಕತೆಯು ಕಳೆದ ವರ್ಷದ ಪ್ರತಿಯೊದು ಮುನ್ನೋಟಕ್ಕಿಂತ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. ವಿಶ್ವ ಬ್ಯಾಂಕ್, ಐಎಂಎಫ್ ಅಥವಾ ಮೂಡೀಸ್ ಈ ಎಲ್ಲಾ ಸಂಸ್ಥೆಗಳು ಭಾರತಕ್ಕೆ ಸಂಬಂಧಿಸಿದ ತಮ್ಮ ಮುನ್ಸೂಚನೆಗಳನ್ನು ಪರಿಷ್ಕರಿಸಿವೆ. “ಈ ಎಲ್ಲಾ ಸಂಸ್ಥೆಗಳು ಜಾಗತಿಕ ಅನಿಶ್ಚಯದ ಹೊರತಾಗಿಯೂ, ಭಾರತದ ಜಿಡಿಪಿ 7%ಗಿಂತ ಹೆಚ್ಚಿನ ದರದಲ್ಲಿ ಬೆಳೆಯುವುದನ್ನು ಮುಂದುವರಿಸುತ್ತದೆ ಎಂದು ಹೇಳುತ್ತಿವೆ. ಆದಾಗ್ಯೂ, ಭಾರತವು ಇದಕ್ಕಿಂತ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ ಎಂಬ ಸಂಪೂರ್ಣ ವಿಶ್ವಾಸವನ್ನು ನಾವು ಭಾರತೀಯರು ಹೊಂದಿದ್ದೇವೆ ಎಂದು ಮೋದಿ ಹೇಳಿದರು.

ಭಾರತದ ಈ ವಿಶ್ವಾಸದ ಹಿಂದೆ ಕೆಲವು ಸದೃಢವಾದ ಕಾರಣಗಳಿವೆ. ಅದು ಉತ್ಪಾದನೆಯೇ ಆಗಿರಲಿ ಅಥವಾ ಸೇವಾ ಕ್ಷೇತ್ರವೇ ಆಗಿರಲಿ, ಇಂದು ಜಗತ್ತು ಭಾರತವನ್ನು ಹೂಡಿಕೆಗೆ ಆದ್ಯತೆಯ ಸ್ಥಳವೆಂದು ಪರಿಗಣಿಸುತ್ತಿದೆ. ಇದು ಕಾಕತಾಳೀಯವಲ್ಲ, ಆದರೆ ಕಳೆದ 10 ವರ್ಷಗಳಲ್ಲಿ ಮಾಡಿದ ಪ್ರಮುಖ ಸುಧಾರಣೆಗಳ ಫಲಿತಾಂಶವಾಗಿದೆ. ಇದು ಭಾರತದ ಬೃಹತ್ ಅರ್ಥ ವ್ಯವಸ್ಥೆಯ ಮೂಲಭೂತ ಅಂಶಗಳನ್ನು ಪರಿವರ್ತಿಸಿದೆ. ಸುಧಾರಣೆಗಳ ನಿದರ್ಶನ ಪ್ರಸ್ತಾಪಿಸಿದ ಶ್ರೀ ಮೋದಿ, ಭಾರತದ ಬ್ಯಾಂಕಿಂಗ್ ಸುಧಾರಣೆಗಳು ಬ್ಯಾಂಕ್‌ಗಳ ಆರ್ಥಿಕ ಪರಿಸ್ಥಿತಿಗಳನ್ನು ಬಲಪಡಿಸಿದೆ ಮಾತ್ರವಲ್ಲದೆ, ಸಾಲ ನೀಡುವ ಸಾಮರ್ಥ್ಯವನ್ನು ಹೆಚ್ಚಿಸಿದೆ. ಅದೇ ರೀತಿ, ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ವಿವಿಧ ಕೇಂದ್ರ ಮತ್ತು ರಾಜ್ಯಗಳ ಪರೋಕ್ಷ ತೆರಿಗೆಗಳನ್ನು ಸಂಯೋಜಿಸಿದೆ. ದಿವಾಳಿತನ ಮತ್ತು ಋಣಭಾರ ಸಂಕೇತವು(ಐಬಿಸಿ) ಜವಾಬ್ದಾರಿಯುತವಾದ, ಚೇತರಿಕೆಯ ಮತ್ತು ನಿರ್ಣಾಯಕವಾದ ಹೊಸ ಸಾಲ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಿದೆ. ಭಾರತವು ಗಣಿಗಾರಿಕೆ, ರಕ್ಷಣೆ ಮತ್ತು ಬಾಹ್ಯಾಕಾಶದಂತಹ ಹಲವು ಕ್ಷೇತ್ರಗಳನ್ನು ಖಾಸಗಿ ಪಾಲುದಾರರು ಮತ್ತು ಭಾರತದ ಯುವ ಉದ್ಯಮಿಗಳಿಗೆ ತೆರೆದಿದೆ. ಜಾಗತಿಕ ಹೂಡಿಕೆದಾರರಿಗೆ ಸಾಕಷ್ಟು ಅವಕಾಶಗಳ ಸೃಷ್ಟಿಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಎಫ್‌ಡಿಐ ನೀತಿ ಉದಾರಗೊಳಿಸಿದೆ. ಸರಕು ಸಾಗಣೆ ವೆಚ್ಚ ಮತ್ತು ಸಮಯ ಕಡಿಮೆ ಮಾಡಲು ಸರ್ಕಾರವು ಆಧುನಿಕ ಮೂಲಸೌಕರ್ಯಗಳತ್ತ ಗಮನ ಹರಿಸುತ್ತಿದೆ. ಕಳೆದ ದಶಕದಲ್ಲಿ ಮೂಲಸೌಕರ್ಯ ಹೂಡಿಕೆಯಲ್ಲಿ ಅಭೂತಪೂರ್ವ ಹೆಚ್ಚಳವಾಗಿದೆ ಎಂದು ಅವರು ಹೇಳಿದರು.

"ಭಾರತವು ಸರ್ಕಾರದ ನಿರಂತರ ಚಟುವಟಿಕೆಗಳ ಭಾಗವಾಗಿ ' ಸುಧಾರಣೆ ಪ್ರಕ್ರಿಯೆ' ಗಳನ್ನು ಮಾಡಿದೆ". ಸರ್ಕಾರವು 40,000ಕ್ಕೂ ಹೆಚ್ಚು ಅನುಸರಣೆಗಳನ್ನು ತೆಗೆದುಹಾಕಿದೆ. ಕಂಪನಿಗಳ ಕಾಯಿದೆಯನ್ನು ಅಪರಾಧ ಮುಕ್ತಗೊಳಿಸಿದೆ. ಕಂಪನಿ ಪ್ರಾರಂಭಿಸಲು ಮತ್ತು ಮುಚ್ಚಲು ಅನುಮೋದನೆ ಪ್ರಕ್ರಿಯೆಯನ್ನು ಸರಾಗಗೊಳಿಸುವ ಸಲುವಾಗಿ ವ್ಯಾಪಾರ ಮತ್ತು ರಾಷ್ಟ್ರೀಯ ಏಕಗವಾಕ್ಷಿ ವ್ಯವಸ್ಥೆ ರೂಪಿಸಲಾಗಿದೆ. ಕಷ್ಟಕರವಾದ ಡಜನ್ ಗಟ್ಟಲೆ ನಿಬಂಧನೆಗಳನ್ನು ಸುಧಾರಿಸಲಾಗಿದೆ. ರಾಜ್ಯ ಮಟ್ಟದಲ್ಲಿ 'ಸುಧಾರಣೆ ಪ್ರಕ್ರಿಯೆ'ಗಳನ್ನು ವೇಗಗೊಳಿಸಲು ರಾಜ್ಯ ಸರ್ಕಾರಗಳನ್ನು ಉತ್ತೇಜಿಸಲಾಗುತ್ತಿದೆ ಎಂದರು.

ಇಂದು ಅನೇಕ ಕ್ಷೇತ್ರಗಳಲ್ಲಿ ಭಾರತದ ಉತ್ಪಾದನೆ ವೇಗಗೊಳಿಸಲು ಉತ್ಪಾದನೆ ಸಂಪರ್ಕಿತ ಉತ್ತೇಜನಾ ಯೋಜನೆ(ಪಿಎಲ್ಐ) ಜಾರಿಗೆ ತರಲಾಗಿದೆ. ಕಳೆದ 3 ವರ್ಷಗಳಲ್ಲಿ ಅದರ ಪ್ರಭಾವದಿಂದಾಗಿ, ಸುಮಾರು 1.25 ಟ್ರಿಲಿಯನ್ ಅಥವಾ 1.25 ಲಕ್ಷ ಕೋಟಿ ರೂ. ಹರಿದುಬಂದಿದೆ. ಉತ್ಪಾದನೆ ಮತ್ತು ಮಾರಾಟದಿಂದ ಸುಮಾರು 11 ಟ್ರಿಲಿಯನ್ ಅಥವಾ 11 ಲಕ್ಷ ಕೋಟಿ ರೂ. ಆದಾಯ ಬಂದಿದೆ. ಭಾರತದ ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರಗಳು ಇತ್ತೀಚೆಗೆ ತೆರೆದುಕೊಂಡಿವೆ. ಈ ವಲಯಗಳು ಅದ್ಭುತ ಬೆಳವಣಿಗೆ ಕಾಣುತ್ತಿವೆ. ಬಾಹ್ಯಾಕಾಶ ಕ್ಷೇತ್ರದಲ್ಲಿ 200ಕ್ಕೂ ಹೆಚ್ಚು ಸ್ಟಾರ್ಟಪ್‌ಗಳು ಬಂದಿವೆ. ಭಾರತದ ಒಟ್ಟು ರಕ್ಷಣಾ ಉತ್ಪಾದನಾ ಕೊಡುಗೆಯ 20 ಪ್ರತಿಶತ ಪಾಲು ಈಗ ಖಾಸಗಿ ಪಾಲುದಾರರಿಂದ ಬಂದಿದೆ ಎಂದರು.

ಎಲೆಕ್ಟ್ರಾನಿಕ್ಸ್ ವಲಯದ ಬೆಳವಣಿಗೆ ಯಶೋಗಾಥೆ ಪ್ರಸ್ತಾಪಿಸಿದ ಪ್ರಧಾನಿ, 10 ವರ್ಷಗಳ ಹಿಂದೆ ಭಾರತವು ಹೆಚ್ಚಿನ ಮೊಬೈಲ್ ಫೋನ್‌ಗಳ ದೊಡ್ಡ ಆಮದು ರಾಷ್ಟ್ರವಾಗಿತ್ತು. ಆದರೆಇಂದು ದೇಶದಲ್ಲಿ 33 ಕೋಟಿಗೂ ಹೆಚ್ಚು ಮೊಬೈಲ್ ಫೋನ್‌ಗಳನ್ನು ಉತ್ಪಾದಿಸಲಾಗುತ್ತಿದೆ. ಹೂಡಿಕೆದಾರರು ತಮ್ಮ ಹೂಡಿಕೆಯ ಮೇಲೆ ಹೆಚ್ಚಿನ ಆದಾಯ ಗಳಿಸಲು ಭಾರತದ ಎಲ್ಲಾ ಕ್ಷೇತ್ರಗಳು ಅತ್ಯುತ್ತಮ ಅವಕಾಶಗಳನ್ನು ಹೊಂದಿವೆ ಎಂದರು.

ಪ್ರಸ್ತುತ ಕೃತಕ ಬುದ್ಧಿಮತ್ತೆ ಮತ್ತು ಸೆಮಿಕಂಡಕ್ಟರ್‌ನಂತಹ ನಿರ್ಣಾಯಕ ತಂತ್ರಜ್ಞಾನಗಳ ಮೇಲೆ ಭಾರತದ ಗಮನ ನೀಡಿದೆ. ಈ ಎರಡೂ ಕ್ಷೇತ್ರಗಳಲ್ಲಿ ಸರ್ಕಾರವು ದೊಡ್ಡ ಹೂಡಿಕೆ ಮಾಡಿದೆ. ಭಾರತದ ಎಐ ಮಿಷನ್ ಎಐ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಕೌಶಲ್ಯ ಎರಡನ್ನೂ ಹೆಚ್ಚಿಸುತ್ತದೆ. ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಮೂಲಕ 1.5 ಟ್ರಿಲಿಯನ್ ಅಥವಾ ಒಂದೂವರೆ ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲಾಗುತ್ತಿದೆ. ಶೀಘ್ರದಲ್ಲೇ ಭಾರತದ 5 ಸೆಮಿಕಂಡಕ್ಟರ್ ಘಟಕಗಳು ಮೇಡ್ ಇನ್ ಇಂಡಿಯಾ ಚಿಪ್‌ಗಳನ್ನು ವಿಶ್ವದ ಮೂಲೆ ಮೂಲೆಗೆ ತಲುಪಿಸಲು ಪ್ರಾರಂಭಿಸುತ್ತವೆ ಎಂದು ತಿಳಿಸಿದರು.

ಕೈಗೆಟುಕುವ ಬೌದ್ಧಿಕ ಶಕ್ತಿಯ ವಿಶ್ವದ ಅತಿದೊಡ್ಡ ಗಮ್ಯತಾಣವಾಗಿ ಭಾರತ ಹೊರಹೊಮ್ಮಲಿದೆ. ಪ್ರಸ್ತುತ ಭಾರತದಲ್ಲಿ 1,700 ಜಾಗತಿಕ ಸಾಮರ್ಥ್ಯ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಇವು 2 ದಶಲಕ್ಷಕ್ಕಿಂತಲೂ ಹೆಚ್ಚಿನ ನುರಿತ ಭಾರತೀಯ ವೃತ್ತಿಪರರನ್ನು ನೇಮಿಸಿಕೊಂಡಿವೆ. ಶಿಕ್ಷಣ, ನಾವೀನ್ಯತೆ, ಕೌಶಲ್ಯ ಮತ್ತು ಸಂಶೋಧನೆಯ ಮೇಲೆ ಬಲವಾದ ಗಮನ ಕೇಂದ್ರೀಕರಿಸುವ ಮೂಲಕ ಭಾರತದ ಜನಸಂಖ್ಯಾ ಲಾಭಾಂಶ ಬಳಸಿಕೊಳ್ಳುವ ಉದ್ದೇಶ ಹೊಂದಲಾಗಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಮುಖ ಸುಧಾರಣೆಗಳನ್ನು ತರಲಾಗಿದೆ. ವಾರಕ್ಕೊಂದು ಹೊಸ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ, ಕಳೆದ ದಶಕದಲ್ಲಿ ಪ್ರತಿ 2 ದಿನಕ್ಕಂದು ಹೊಸ ಕಾಲೇಜುಗಳನ್ನು ತೆರೆಯಲಾಗಿದೆ. ಕಳೆದ 10 ವರ್ಷಗಳಲ್ಲಿ ನಮ್ಮ ದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ದ್ವಿಗುಣಗೊಂಡಿದೆ ಎಂದರು.

ಸರ್ಕಾರವು ಶಿಕ್ಷಣ ಸಂಸ್ಥೆಗಳ ಪ್ರಮಾಣ ಹೆಚ್ಚಿಸುವುದು ಮಾತ್ರವಲ್ಲದೆ, ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ. ಈ ಅವಧಿಯಲ್ಲಿ “ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ” ಶ್ರೇಯಾಂಕದಲ್ಲಿ ಭಾರತೀಯ ಸಂಸ್ಥೆಗಳ ಸಂಖ್ಯೆ 3 ಪಟ್ಟು ಹೆಚ್ಚಾಗಿದೆ, ಸರ್ಕಾರ ದೇಶದ ಶೈಕ್ಷಣಿಕ ಉತ್ಕೃಷ್ಟತೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಈ ವರ್ಷದ ಬಜೆಟ್‌ನಲ್ಲಿ ಕೋಟ್ಯಂತರ ಯುವಕರಿಗೆ ಕೌಶಲ್ಯ ಮತ್ತು ಇಂಟರ್ನ್‌ಶಿಪ್‌ಗಾಗಿ ವಿಶೇಷ ಪ್ಯಾಕೇಜ್ ಪ್ರಕಟಿಸಲಾಗಿದೆ. ಪ್ರಧಾನ ಮಂತ್ರಿಗಳ ಇಂಟರ್ನ್‌ಶಿಪ್ ಯೋಜನೆಯಲ್ಲಿ 1 ಕೋಟಿ ಯುವ ಭಾರತೀಯರಿಗೆ ಪ್ರಮುಖ ಕಂಪನಿಗಳಲ್ಲಿ ನೈಜ ಪ್ರಪಂಚದ ಅನುಭವ ಪಡೆಯುವ ಅವಕಾಶವನ್ನು ನೀಡಲಾಗುವುದು. ಯೋಜನೆಯ ಮೊದಲ ದಿನದಲ್ಲಿ ಭಾಗವಹಿಸಲು 111 ಕಂಪನಿಗಳು ನೋಂದಾಯಿಸಿಕೊಂಡಿವೆ, ಈ ಮೂಲಕ ಉದ್ಯಮದ ಉತ್ಸಾಹಭರಿತ ಸ್ಪಂದನೆಯನ್ನು ಪ್ರದರ್ಶಿಸುತ್ತದೆ ಎಂದು ಅವರು ಹೇಳಿದರು.

ಭಾರತದ ಸಂಶೋಧನಾ ಪರಿಸರ ವ್ಯವಸ್ಥೆ ಬಲಗೊಳ್ಳುತ್ತಿದೆ. ಕಳೆದ ದಶಕದಲ್ಲಿ ಸಂಶೋಧನಾ ಉತ್ಪಾದನೆ ಮತ್ತು ಪೇಟೆಂಟ್‌ಗಳು ವೇಗವಾಗಿ ಬೆಳೆದಿವೆ. ಒಂದು ದಶಕಕ್ಕೂ ಕಡಿಮೆ ಅವಧಿಯಲ್ಲಿ, ಜಾಗತಿಕ ಆವಿಷ್ಕಾರ ಸೂಚ್ಯಂಕ ಶ್ರೇಯಾಂಕದಲ್ಲಿ ಭಾರತದ ಶ್ರೇಯಾಂಕವು 80ನೇ ಸ್ಥಾನದಿಂದ 39ನೇ ಸ್ಥಾನಕ್ಕೆ ಏರಿದೆ. ಭಾರತವು ಇಲ್ಲಿಂದ ಮುಂದೆ ಸಾಗಬೇಕು. ಭಾರತದ ಸಂಶೋಧನಾ ಪರಿಸರ ವ್ಯವಸ್ಥೆ ಬಲಪಡಿಸಲು 1 ಟ್ರಿಲಿಯನ್ ರೂಪಾಯಿ ಮೊತ್ತದ ಸಂಶೋಧನಾ ನಿಧಿ ಸ್ಥಾಪಿಸಲಾಗಿದೆ ಎಂದರು.

"ಇಂದು ಇಡೀ ವಿಶ್ವವೇ ಹಸಿರು ಉದ್ಯೋಗಗಳು ಮತ್ತು ಸುಸ್ಥಿರ ಭವಿಷ್ಯದ ಬಗ್ಗೆ ಹೆಚ್ಚಿನ ನಿರೀಕ್ಷೆಗಳೊಂದಿಗೆ ಭಾರತದತ್ತ ನೋಡುತ್ತಿದೆ". ಅದು ವಿಶಾಲವಾದ ಅವಕಾಶಗಳನ್ನು ಪ್ರಸ್ತುತಪಡಿಸಲಿದೆ. ಭಾರತದ ಜಿ-20 ಅಧ್ಯಕ್ಷತೆಯ ಯಶಸ್ಸನ್ನು ಉಲ್ಲೇಖಿಸಿದ ಪ್ರಧಾನಿ, ಶೃಂಗಸಭೆಯಿಂದ ಹೊರಹೊಮ್ಮಿದ ಹಸಿರು ಪರಿವರ್ತನೆಯ ಹೊಸ ಆವೇಗಕ್ಕೆ ಸದಸ್ಯ ರಾಷ್ಟ್ರಗಳಿಂದ ವ್ಯಾಪಕ ಬೆಂಬಲ ದೊರೆಯಿತು. ಶೃಂಗಸಭೆಯ ಸಮಯದಲ್ಲಿ ಜಾಗತಿಕ ಜೈವಿಕ ಇಂಧನ ಒಕ್ಕೂಟ ಪ್ರಾರಂಭದ ಭಾರತದ ಉಪಕ್ರಮವನ್ನು ಹೆಮ್ಮೆಯಿಂದ ಘೋಷಿಸಿದರು. ಈ ದಶಕದ ಅಂತ್ಯದ ವೇಳೆಗೆ 5 ದಶಲಕ್ಷ ಟನ್ ಹಸಿರು ಹೈಡ್ರೋಜನ್ ಉತ್ಪಾದಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಭಾರತ ಹೊಂದಿದೆ. ಸೂಕ್ಷ್ಮ ಮಟ್ಟದಲ್ಲಿ ಸೌರ ವಿದ್ಯುತ್ ಉತ್ಪಾದನೆ ವಿಸ್ತರಿಸಲು ಭಾರತ ಬದ್ಧತೆ ಹೊಂದಿದೆ. ಈಗಾಗಲೇ 13 ದಶಲಕ್ಷ ಅಥವಾ 1 ಕೋಟಿ 30 ಲಕ್ಷ ಕುಟುಂಬಗಳನ್ನು ಸೌರಶಕ್ತಿ ಉತ್ಪಾದನೆಗೆ ನೋಂದಾಯಿಸಲಾಗಿದೆ. ಮೇಲ್ಛಾವಣಿ ಸೌರಶಕ್ತಿ ಉಪಕ್ರಮವಾದ ಪ್ರಧಾನಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಗೆ ಸರ್ಕಾರ ಧನಸಹಾಯ ನೀಡುತ್ತಿದೆ. "ಈ ಯೋಜನೆಯು ಕೇವಲ ಪ್ರಮಾಣದಲ್ಲಿ ದೊಡ್ಡದಾಗಿದೆ, ಆದರೆ ಅದರ ಕಾರ್ಯವಿಧಾನದಲ್ಲಿ ಕ್ರಾಂತಿಕಾರಿಯಾಗಿದೆ. ಪ್ರತಿ ಕುಟುಂಬವನ್ನು ಸೌರಶಕ್ತಿ ಉತ್ಪಾದಕರಾಗಿ ಪರಿವರ್ತಿಸುತ್ತದೆ". ಪ್ರತಿ 3 ಕಿಲೋವ್ಯಾಟ್ ಸೋಲಾರ್ ಪವರ್‌ ಉತ್ಪಾದನೆಯು 50-60 ಟನ್ ಇಂಗಾಲ ಹೊರಸೂಸುವಿಕೆಯನ್ನು ತಡೆಯುತ್ತದೆ. ಜತೆಗೆ, ಕುಟುಂಬಗಳು ವಾರ್ಷಿಕ ಸರಾಸರಿ 25,000 ರೂ.ಉಳಿಸುವ ನಿರೀಕ್ಷೆಯಿದೆ. ಈ ಯೋಜನೆಯು ನುರಿತ ಯುವ ಉದ್ಯೋಗಿಗಳ ದೊಡ್ಡ ಸೈನ್ಯವನ್ನು ಸೃಷ್ಟಿಸುತ್ತದೆ.  ಈ ವಲಯದಲ್ಲಿ ಸುಮಾರು 17 ಲಕ್ಷ ಉದ್ಯೋಗಗಳು ಮತ್ತು ಹೊಸ ಹೂಡಿಕೆ ಅವಕಾಶಗಳಿಗೆ ದಾರಿ ಮಾಡಿಕೊಡುತ್ತವೆ ಎಂದರು.

ಭಾರತದ ಆರ್ಥಿಕತೆಯು ಬೃಹತ್ ಪರಿವರ್ತನೆಯ ಮೂಲಕ ಸಾಗುತ್ತಿದೆ, ಬೃಹತ್ ಅರ್ಥ ವ್ಯವಸ್ಥೆಯ ಬಲವಾದ ಆರ್ಥಿಕ ಮೂಲಭೂತ ಅಂಶಗಳನ್ನು ಆಧರಿಸಿ ನಿರಂತರ ಹೆಚ್ಚಿನ ಬೆಳವಣಿಗೆಯ ಹಾದಿಯಲ್ಲಿದೆ. "ಇಂದು ಭಾರತವು ಉನ್ನತ ಸ್ಥಾನ ತಲುಪಲು ಮಾತ್ರ ತಯಾರಿ ನಡೆಸುತ್ತಿಲ್ಲ, ಅದೇ ಸ್ಥಾನದಲ್ಲಿ ಉಳಿಯಲು ಶ್ರಮಿಸುತ್ತಿದೆ" ಎಂದರು.

ಈ ಸಮ್ಮೇಳನದಲ್ಲಿ ನಡೆಯುತ್ತಿರುವ ಚರ್ಚೆಗಳಿಂದ ಅನೇಕ ಅಮೂಲ್ಯವಾದ ಒಳಹರಿವು ಬರಲಿದೆ ಎಂಬ ವಿಶ್ವಾಸ ನನಗಿದೆ. ಅಂತಹ ಚರ್ಚೆಗಳಲ್ಲಿ ಸ್ವೀಕರಿಸಿದ ಒಳಹರಿವುಗಳು, ವಿಶೇಷವಾಗಿ ಮಾಡಬೇಕಾದ ಮತ್ತು ಮಾಡಬಾರದಾದ ವಿಷಯಗಳನ್ನು ಸಹಜವಾಗಿ ಸರ್ಕಾರಿ ವ್ಯವಸ್ಥೆಗಳಲ್ಲಿ ಅನುಸರಿಸಲಾಗುತ್ತದೆ, ಇವು ನೀತಿ ಮತ್ತು ಆಡಳಿತದ ಭಾಗವಾಗಲಿವೆ. ಉದ್ಯಮ ಪ್ರಮುಖರ ಪ್ರಾಮುಖ್ಯತೆ, ಪರಿಣತಿ ಮತ್ತು ಅನುಭವವನ್ನು ಪ್ರಸ್ತಾಪಿಸಿ, ಪ್ರಧಾನಿ ತಮ್ಮ ಭಾಷಣ ಮುಕ್ತಾಯಗೊಳಿಸಿದರು. ಈ ಸಮ್ಮೇಳನದಲ್ಲಿ ಅಪಾರ ಕೊಡುಗೆ ನೀಡಿರುವ ಇನ್‌ಸ್ಟಿಟ್ಯೂಟ್ ಆಫ್ ಎಕನಾಮಿಕ್ ಗ್ರೋಥ್ ಅಧ್ಯಕ್ಷ ಶ್ರೀ ಎನ್.ಕೆ. ಸಿಂಗ್ ಮತ್ತು ಅವರ ಇಡೀ ತಂಡಕ್ಕೆ ಮೋದಿ ಧನ್ಯವಾದ ಸಲ್ಲಿಸಿದರು.

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್,  ಇನ್‌ಸ್ಟಿಟ್ಯೂಟ್ ಆಫ್ ಎಕನಾಮಿಕ್ ಗ್ರೋಥ್ ಅಧ್ಯಕ್ಷ ಶ್ರೀ ಎನ್.ಕೆ. ಸಿಂಗ್ ಮತ್ತು ಇತರೆ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

3ನೇ ಆವೃತ್ತಿಯ ಕೌಟಿಲ್ಯ ಅರ್ಥಶಾಸ್ತ್ರ ಸಮಾವೇಶ ಅಕ್ಟೋಬರ್ 4ರಿಂದ 6ರ ವರೆಗೆ ನಡೆಯಲಿದೆ. ಭಾರತದ ಆರ್ಥಿಕತೆ ಮತ್ತು ಜಾಗತಿಕ ದಕ್ಷಿಣದ ಆರ್ಥಿಕತೆಗಳು ಎದುರಿಸುತ್ತಿರುವ ಕೆಲವು ಪ್ರಮುಖ ಸಮಸ್ಯೆಗಳನ್ನು ಭಾರತೀಯ ಮತ್ತು ಅಂತಾರಾಷ್ಟ್ರೀಯ ವಿದ್ವಾಂಸರು ಮತ್ತು ನೀತಿ ನಿರೂಪಕರು ಈ ಸಮ್ಮೇಳನದಲ್ಲಿ ಚರ್ಚಿಸಲಿದ್ದಾರೆ. ಜಾಗತಿಕ ಪ್ರತಿನಿಧಿಗಳ ಭಾಗವಹಿಸುವಿಕೆಗೆ ಸಮ್ಮೇಳನ ಸಾಕ್ಷಿಯಾಗಲಿದೆ.

 

 

*****



(Release ID: 2062319) Visitor Counter : 7