ಸಂಸ್ಕೃತಿ ಸಚಿವಾಲಯ

ಗುರು ಪದ್ಮಸಂಭವ ಅವರ ಜೀವನ ಮತ್ತು ಪರಂಪರೆ ಕುರಿತು ಬಿಹಾರದ ನಳಂದದಲ್ಲಿ ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟದಿಂದ ಎರಡು ದಿನಗಳ ಸಮ್ಮೇಳನ ಆಯೋಜನೆ

Posted On: 27 AUG 2024 4:03PM by PIB Bengaluru

ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟವು, ನವ ನಳಂದ ಮಹಾವಿಹಾರದ ಸಹಯೋಗದೊಂದಿಗೆ ಗುರು ಪದ್ಮಸಂಭವ ಅವರ ಜೀವನ ಮತ್ತು ಜೀವಂತ ಪರಂಪರೆಯ ಕುರಿತು ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನವನ್ನು 2024 ರ ಆಗಸ್ಟ್ 28 ಮತ್ತು 29 ರಂದು ಬಿಹಾರದ ನಳಂದದಲ್ಲಿ ಆಯೋಜಿಸಿದೆ. ಗುರು ರಿಂಪೋಚೆ ಎಂದೂ ಕರೆಯಲ್ಪಡುವ ಗುರು ಪದ್ಮಸಂಭವ ಅವರು ಪ್ರಾಚೀನ ಭಾರತದಲ್ಲಿ ಎಂಟನೇ ಶತಮಾನದಲ್ಲಿ ಜೀವಿಸಿದ್ದರು. ಇಂದು ಬುದ್ಧ ಧಮ್ಮದ ಅತ್ಯಂತ ಪೂಜ್ಯ ವ್ಯಕ್ತಿಗಳಲ್ಲಿ ಒಬ್ಬರಾದ ಅವರು ಹಿಮಾಲಯದ ಬೆಲ್ಟ್ ನಾದ್ಯಂತ ಬುದ್ಧ ಧಮ್ಮವನ್ನು ಹರಡಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಬಿಹಾರದ ರಾಜ್ಯಪಾಲ ಶ್ರೀ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ನೇಪಾಳದ ಲುಂಬಿನಿ ಅಭಿವೃದ್ಧಿ ಟ್ರಸ್ಟ್ ಉಪಾಧ್ಯಕ್ಷ ಪರಮ ಪೂಜ್ಯ  ಖೆನ್ಪೊ ಚಿಮೆಡ್ ಮತ್ತು ಭೂತಾನ್ ರಾಯಲ್ ಭೂತಾನ್ ದೇವಾಲಯದ ಕಾರ್ಯದರ್ಶಿ / ಮುಖ್ಯ ಗುರು/ಸನ್ಯಾಸಿ ಪೂಜ್ಯ ಖೆನ್ಪೊ ಉಗ್ಯೆನ್ ನಮ್ಗಯೆಲ್ ಅವರು ಸಮ್ಮೇಳನದಲ್ಲಿ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎರಡನೇ ಬುದ್ಧ ಎಂದು ಪರಿಗಣಿಸಲ್ಪಟ್ಟ, ಗುರು ರಿಂಪೋಚೆ ಎಂದೂ ಕರೆಯಲ್ಪಡುವ ಗುರು ಪದ್ಮಸಂಭವ, ಪ್ರಾಚೀನ ಭಾರತದಲ್ಲಿ ಎಂಟನೇ ಶತಮಾನದಲ್ಲಿ ವಾಸಿಸುತ್ತಿದ್ದ ಹಿಮಾಲಯದ ಪ್ರಸಿದ್ಧ ಋಷಿ (ಅಥವಾ ಸಂತ).

ಸಮ್ಮೇಳನದ ಪ್ರಮುಖ ವಿಷಯಗಳಲ್ಲಿ ಅವರ ಜೀವನ ಮತ್ತು ಬೋಧನೆಗಳು, ಹಿಮಾಲಯದಾದ್ಯಂತ ಅವರ ಪ್ರಯಾಣಗಳು ಮತ್ತು ಮುಖ್ಯವಾಗಿ ಪ್ರಸ್ತುತ ಸಮಯದಲ್ಲಿ ಅವರ ಚಿಂತನೆಯ ಪ್ರಸ್ತುತತೆಯನ್ನು ಒಳಗೊಂಡಿರುತ್ತವೆ. ಗುರು ಪದಸಂಭವ ಅವರು ಯೋಗ ಮತ್ತು ತಾಂತ್ರಿಕ ಅಭ್ಯಾಸಗಳಿಂದ ಹಿಡಿದು ಧ್ಯಾನ, ಕಲೆ, ಸಂಗೀತ, ನೃತ್ಯ, ಮ್ಯಾಜಿಕ್, ಜಾನಪದ ಮತ್ತು ಧಾರ್ಮಿಕ ಬೋಧನೆಗಳವರೆಗಿನ ಸಂಸ್ಕೃತಿಯ ಅನೇಕ ಎಳೆಗಳ ಕ್ರೋಢೀಕರಣವನ್ನು ಪ್ರತಿನಿಧಿಸುತ್ತಾರೆ. ಸಮ್ಮೇಳನದಲ್ಲಿ ಹಸ್ತಪ್ರತಿಗಳು, ಪವಿತ್ರ ಅವಶೇಷಗಳು, ವರ್ಣಚಿತ್ರಗಳು ಮತ್ತು ಸ್ಮಾರಕಗಳ ಮೂಲಕ ಅವರ ಧಮ್ಮ ಪರಂಪರೆಯನ್ನು ಆಚರಿಸಲು ಸಂಘಟಿತ ಪ್ರಯತ್ನ ನಡೆಯಲಿದೆ.

ಸಮ್ಮೇಳನದ ಪ್ರಮುಖ ವಿಷಯಗಳು ಹೀಗಿವೆ:

1. ಜೀವನಚರಿತ್ರೆ ಒಳನೋಟಗಳು ಮತ್ತು ಪುರಾಣಗಳು

2. ವಜ್ರಯಾನ ಬುದ್ಧ, ಧಮ್ಮ ಮತ್ತು ತಂತ್ರಗಳ ಬೋಧನೆಗಳು

3. ಸಾಂಸ್ಕೃತಿಕ ಮತ್ತು ಕಲಾತ್ಮಕ ಕೊಡುಗೆಗಳು

4. ಪ್ರಯಾಣ ಮತ್ತು ಪ್ರಾದೇಶಿಕ ಪರಿಣಾಮ

5. ಪರಂಪರೆ ಮತ್ತು ಸಮಕಾಲೀನ ಪ್ರಸ್ತುತತೆ

ಬುದ್ಧ ಧಮ್ಮದ ಮೂಲ ತತ್ವಗಳನ್ನು ಪ್ರಸಾರಿಸಲು ಪ್ರಯತ್ನಿಸುವಾಗ, ಗುರು ಪದ್ಮಸಂಭವ ಅವರು ಸ್ಥಳದ ವಿಶೇಷತೆಗಳನ್ನು ಮತ್ತು ಜನರ ಸಂವೇದನೆಗಳನ್ನು ಅರ್ಥಮಾಡಿಕೊಳ್ಳುತ್ತಿದ್ದರು. ಹೀಗಾಗಿ, ಅವರು ತಮ್ಮ ಬೋಧನೆಗಳನ್ನು ಸ್ಥಳೀಯ ನುಡಿಗಟ್ಟು ಮತ್ತು ಸಂಸ್ಕೃತಿಯಲ್ಲಿ ರೂಪಿಸಿದರು, ನಂಬಿಕೆಯ ಸಮೀಕರಣವನ್ನು ಹೆಚ್ಚು ಸರಳ-ಸುಲಭಗೊಳಿಸಿದರು. ಭಗವಾನ್ ಬುದ್ಧ ಅವರ  ಉದಾತ್ತ ಸಂದೇಶವನ್ನು ಪ್ರಸಾರ ಮಾಡಲು ಸ್ಥಳೀಯ ಸಂಕೇತಗಳು/ಚಿಹ್ನೆಗಳು ಮತ್ತು ಆಚರಣೆಗಳನ್ನು ವಾಹಕಗಳಾಗಿ ಬಳಸಿಕೊಂಡು, ವೈವಿಧ್ಯಮಯ ಸಂಸ್ಕೃತಿಗಳು ಮತ್ತು ಧಾರ್ಮಿಕ ಸಂಪ್ರದಾಯಗಳನ್ನು ನಿರ್ವಹಿಸುವ ಅವರ ವಿಧಾನದ ಬಗ್ಗೆ ಒಳನೋಟಗಳನ್ನು ಪಡೆಯಲು ಸಮ್ಮೇಳನವು ಆಶಿಸಿದೆ.

 

*****



(Release ID: 2049290) Visitor Counter : 14