ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav g20-india-2023

ನಿವ್ವಳ ಶೂನ್ಯ ಇಂಗಾಲ ಹೊರಸೂಸುವಿಕೆ ಸಾಧಿಸುವ ಕಾರ್ಯತಂತ್ರಗಳು

Posted On: 08 AUG 2024 1:18PM by PIB Bengaluru

ಹವಾಮಾನ ಬದಲಾವಣೆಯ ಪ್ರತೀಕೂಲಗಳನ್ನು ತಡೆಯುವುದು ಸಂಘಟಿತ  ಕ್ರಿಯೆಯ ಜಾಗತಿಕ ಸಮಸ್ಯೆಯಾಗಿದೆ. ಇದು ಪ್ರಾಥಮಿಕವಾಗಿ ಪ್ರಸ್ತುತ ಹಸಿರುಮನೆ ಅನಿಲ (ಜಿಎಚ್|ಜಿ) ಹೊರಸೂಸುವಿಕೆಯಿಂದ ಮಾತ್ರವಲ್ಲದೆ, ಮುಖ್ಯವಾಗಿ ಅಭಿವೃದ್ಧಿ ಹೊಂದಿದ ದೇಶಗಳಿಂದ ಐತಿಹಾಸಿಕವಾಗಿ ಸಂಚಿತ ಹಸಿರುಮನೆ ಅನಿಲ(ಜಿಎಚ್|ಜಿ) ಹೊರಸೂಸುವಿಕೆಯಿಂದ ಉಂಟಾಗಿದೆ. ಭಾರತದ ತಲಾವಾರು ಹಸಿರುಮನೆ ಅನಿಲ ಹೊರ ಕಡಿಮೆಯಾದರೂ, ರಾಷ್ಟ್ರೀಯ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಸಮಾನತೆ ಮತ್ತು ಸಾಮಾನ್ಯ ಆದರೆ ವಿಭಿನ್ನ ಜವಾಬ್ದಾರಿಗಳು ಮತ್ತು ಆಯಾ ಸಾಮರ್ಥ್ಯಗಳ(ಸಿಬಿಡಿಆರ್-ಆರ್|ಸಿ) ತತ್ವವನ್ನು ಆಧರಿಸಿ ಬಹುಪಕ್ಷೀಯತೆಯ ದೃಢವಾದ ಅನುಸರಣೆಯೊಂದಿಗೆ ಸವಾಲನ್ನು ಎದುರಿಸಲು ಭಾರತ ಬದ್ಧವಾಗಿದೆ. ಯುನೈಟೆಡ್ ನೇಷನ್ಸ್ ಫ್ರೇಮ್‌ವರ್ಕ್ ಕನ್ವೆನ್ಷನ್ ಆನ್ ಕ್ಲೈಮೇಟ್ ಚೇಂಜ್ (UNFCCC) ನಲ್ಲಿ ಇದನ್ನು ಪ್ರತಿಷ್ಠಾಪಿಸಲಾಗಿದೆ. ಅಭಿವೃದ್ಧಿ ಹೊಂದಿದ ದೇಶಗಳು ತಮ್ಮ ಹಸಿರುಮನೆ ಅನಿಲ ಹೊರಸೂಸುವಿಕೆ ಕಡಿಮೆ ಮಾಡಲು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹಣಕಾಸು, ತಂತ್ರಜ್ಞಾನ ಮತ್ತು ಸಾಮರ್ಥ್ಯ ವೃದ್ಧಿ ಬೆಂಬಲ ಒದಗಿಸಲು ನೇತೃತ್ವ ವಹಿಸಬೇಕು.

2021 ನವೆಂಬರ್ ನಲ್ಲಿ ನಡೆದ UNFCCC 26ನೇ ಸಮ್ಮೇಳನದಲ್ಲಿ ಭಾರತವು, 2070ರ ವೇಳೆಗೆ ಇಂಗಾಲ ಹೊರಸೂಸುವಿಕೆಯನ್ನು ನಿವ್ವಳ ಶೂನ್ಯಕ್ಕೆ ನಿಯಂತ್ರಿಸುವ ಗುರಿ ಸಾಧಿಸುವುದಾಗಿ ಘೋಷಿಸಿತು. ಅದರ ಅನುಸರಣೆಯಲ್ಲಿ, 2022 ನವೆಂಬರ್ ನಲ್ಲಿ ನಡೆದ UNFCCC ಸಮ್ಮೇಳನದಲ್ಲಿ ಭಾರತವು ತಾನು ರೂಪಿಸಿದ ದೀರ್ಘಾವಧಿಯ ಕಡಿಮೆ ಹಸಿರುಮನೆ ಅನಿಲ ಹೊರಸೂಸುವಿಕೆ ಅಭಿವೃದ್ಧಿ ಕಾರ್ಯತಂತ್ರಗಳನ್ನು(LT-LEDS) ಸಲ್ಲಿಸಿತು. ಇದು 2070ರ ವೇಳೆಗೆ ಇಂಗಾಲದ ನಿವ್ವಳ-ಶೂನ್ಯ ತಲುಪುವ ಗುರಿಯನ್ನು ಪುನರುಚ್ಚರಿಸುತ್ತದೆ. ಭಾರತದ ಕಾರ್ಯವಿಧಾನವು ತನ್ನ ದೀರ್ಘಾವಧಿಯ ಕಡಿಮೆ-ಇಂಗಾಲ ಅಭಿವೃದ್ಧಿ ಕಾರ್ಯತಂತ್ರವನ್ನು ಆಧಾರವಾಗಿರುವ ಕೆಳಗಿನ 4 ಪ್ರಮುಖ ಪರಿಗಣನೆಗಳನ್ನು ಆಧರಿಸಿದೆ:

 

  • ಜಾಗತಿಕ ತಾಪಮಾನ ಏರಿಕೆಗೆ ಭಾರತವು ಕಡಿಮೆ ಕೊಡುಗೆ ನೀಡಿದೆ: 1850 ಮತ್ತು 2019ರ ನಡುವಿನ ದತ್ತಾಂಶದ ಪ್ರಕಾರ, ಭಾರತವು ವಿಶ್ವದ ಜನಸಂಖ್ಯೆಯ ~17% ಪಾಲು ಹೊಂದಿದ್ದರೂ ಸಹ ಸಂಚಿತ ಜಾಗತಿಕ ಹಸಿರು ಮನೆ ಹೊರಸೂಸುವಿಕೆಗೆ ಭಾರತದ ಐತಿಹಾಸಿಕ ಕೊಡುಗೆ ಕೇವಲ 4% ಆಗಿದೆ.
  •  ಭಾರತವು ತನ್ನ ಅಭಿವೃದ್ಧಿಗೆ ಗಮನಾರ್ಹವಾದ ಇಂಧನ ಅಗತ್ಯಗಳನ್ನು ಹೊಂದಿದೆ: 2019ರಲ್ಲಿ ಭಾರತದ ವಾರ್ಷಿಕ ಪ್ರಾಥಮಿಕ ಇಂಧನದ ತಲಾವಾರು ಬಳಕೆ 28.7 ಗಿಗಾ ಜೌಲ್ಸ್(ಜಿಜೆ). ಇದು ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗಿಂತ ಗಣನೀಯವಾಗಿ ಕಡಿಮೆಯಾಗಿದೆ.
  • ಭಾರತವು ಅಭಿವೃದ್ಧಿಗಾಗಿ ಕಡಿಮೆ-ಇಂಗಾಲ ಕಾರ್ಯತಂತ್ರಗಳನ್ನು ಅನುಸರಿಸಲು ಬದ್ಧವಾಗಿದೆ, ರಾಷ್ಟ್ರೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಅವುಗಳನ್ನು ಸಕ್ರಿಯವಾಗಿ ಅನುಸರಿಸುತ್ತಿದೆ: ಭಾರತವು ಕಡಿಮೆ-ಇಂಗಾಲದ ಅಭಿವೃದ್ಧಿ ಮಾರ್ಗಗಳಿಗೆ ಬದಲಾಯಿಸುವ ಅವಕಾಶಗಳನ್ನು ಗುರುತಿಸಲು ಮತ್ತು ಅನ್ವೇಷಿಸಲು ಪ್ರಯತ್ನಿಸುತ್ತದೆ, ಆದರೆ ಕೌಟುಂಬಿಕ ಇಂಧನ, ಇಂಧನ ಭದ್ರತೆ  ಮತ್ತು ಆರ್ಥಿಕತೆಯ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಇಂಧನದ ಸಾಕಷ್ಟು ಪ್ರವೇಶವನ್ನು ಖಾತ್ರಿಪಡಿಸುತ್ತದೆ.
  • ಭಾರತವು ಹವಾಮಾನ ಚೇತರಿಕೆಯ ವ್ಯವಸ್ಥೆ ನಿರ್ಮಿಸುವ ಅಗತ್ಯವಿದೆ: ಭಾರತವು ವೈವಿಧ್ಯಮಯ ಭೌಗೋಳಿಕತೆಯನ್ನು ಹೊಂದಿದೆ, ಅದು ಪರ್ವತಗಳಿಂದ ಮರುಭೂಮಿಗಳಿಗೆ, ಒಳನಾಡಿನಿಂದ ಕರಾವಳಿ ಪ್ರದೇಶಗಳಿಗೆ ಮತ್ತು ಬಯಲು ಪ್ರದೇಶದಿಂದ ಕಾಡುಗಳವರೆಗೆ ವ್ಯಾಪಕವಾದ ಪರಿಸರ ವ್ಯವಸ್ಥೆಗಳನ್ನು ಒಳಗೊಂಡಿದೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ಗುರಿಯಾಗುತ್ತದೆ. ಭಾರತದ ಅಭಿವೃದ್ಧಿಯ ಲಾಭಗಳು ಮತ್ತು ಮಾನವ ಅಭಿವೃದ್ಧಿಯ ಫಲಿತಾಂಶಗಳನ್ನು ಕಾಪಾಡಿಕೊಳ್ಳಲು ಮತ್ತು ಅದರ ಬೆಳವಣಿಗೆ ಮತ್ತು ಅಭಿವೃದ್ಧಿ ಉಳಿಸಿಕೊಳ್ಳಲು ಹೊಂದಾಣಿಕೆಯ ಕ್ರಮಗಳು ಮತ್ತು ಸಂಭಾವ್ಯ ಹವಾಮಾನ ಪರಿಣಾಮಗಳಿಗೆ ಚೇತರಿಕೆ ಅಥವಾ ಹೊಂದಾಣಿಕೆಯ ವ್ಯವಸ್ಥೆ ನಿರ್ಮಿಸುವುದು ಅವಶ್ಯಕ.

ಭಾರತದ LT-LEDS 7 ಪ್ರಮುಖ ಕಾರ್ಯತಂತ್ರ ಪರಿವರ್ತನೆಗಳನ್ನು ಒಳಗೊಂಡಿದೆ, ಅವುಗಳೆಂದರೆ: 1. ಅಭಿವೃದ್ಧಿಗೆ ಅನುಗುಣವಾಗಿ ವಿದ್ಯುತ್ ವ್ಯವಸ್ಥೆಗಳ ಕಡಿಮೆ ಇಂಗಾಲದ ಅಭಿವೃದ್ಧಿ. 2. ಸಂಯೋಜಿತ, ಪರಿಣಾಮಕಾರಿ, ಎಲ್ಲರನ್ನೂ ಒಳಗೊಂಡ ಕಡಿಮೆ ಇಂಗಾಲದ ಸಾರಿಗೆ ವ್ಯವಸ್ಥೆ ಅಭಿವೃದ್ಧಿಪಡಿಸುವುದು. 3. ನಗರ ವಿನ್ಯಾಸದಲ್ಲಿ ರೂಪಾಂತರವನ್ನು ಉತ್ತೇಜಿಸುವುದು, ಕಟ್ಟಡಗಳಲ್ಲಿ ಇಂಧನ ಮತ್ತು ವಸ್ತು-ದಕ್ಷತೆ ಮತ್ತು ಸುಸ್ಥಿರ ನಗರೀಕರಣ. 4. ಇಂಗಾಲ ಹೊರಸೂಸುವಿಕೆಯಿಂದ ಬೆಳವಣಿಗೆಯ ಆರ್ಥಿಕ-ವ್ಯಾಪಕ ಡಿಕೌಪ್ಲಿಂಗ್ ಉತ್ತೇಜಿಸುವುದು ಮತ್ತು ಸಮರ್ಥ, ನವೀನ ಕಡಿಮೆ-ಇಂಗಾಲ ಹೊರಸೂಸುವಿಕೆ ಕೈಗಾರಿಕಾ ವ್ಯವಸ್ಥೆಯ ಅಭಿವೃದ್ಧಿ. 5. ಇಂಗಾಲ ನಿರ್ಮೂಲನೆ ಮತ್ತು ಸಂಬಂಧಿತ ಎಂಜಿನಿಯರಿಂಗ್ ಪರಿಹಾರಗಳು. 6. ಸಾಮಾಜಿಕ-ಆರ್ಥಿಕ ಮತ್ತು ಪರಿಸರ ಪರಿಗಣನೆಗಳಿಗೆ ಅನುಗುಣವಾಗಿ ಅರಣ್ಯ ಮತ್ತು ಸಸ್ಯವರ್ಗದ ರಕ್ಷಣೆ ಹೆಚ್ಚಿಸುವುದು ಮತ್ತು 7. ಕಡಿಮೆ ಇಂಗಾಲ ಅಭಿವೃದ್ಧಿಯ ಆರ್ಥಿಕ ಮತ್ತು ಹಣಕಾಸಿನ ಅಂಶಗಳು ಮತ್ತು 2070ರ ವೇಳೆಗೆ ನಿವ್ವಳ ಶೂನ್ಯಕ್ಕೆ ದೀರ್ಘಾವಧಿಯ ಪರಿವರ್ತನೆ.

ಇಂಗಾಲ ಸೆರೆ ಹಿಡಿಯುವಿಕೆ, ಬಳಕೆ ಮತ್ತು ಸಂಗ್ರಹ)ಕಾರ್ಬನ್ ಕ್ಯಾಪ್ಚರ್ ಯುಟಿಲೈಸೇಶನ್ ಮತ್ತು ಸ್ಟೋರೇಜ್-ಸಿಸಿಯುಎಸ್ ನ ಆರ್ಥಿಕ, ತಾಂತ್ರಿಕ ಮತ್ತು ರಾಜಕೀಯ ಕಾರ್ಯಸಾಧ್ಯತೆಯು ಹೆಚ್ಚು ಅನಿಶ್ಚಯದಿಂದ ಕೂಡಿದೆ. ತಂತ್ರಜ್ಞಾನವು ವೆಚ್ಚ ಪರಿಣಾಮಕಾರಿ ಮತ್ತು ಕಡಿಮೆ ಇಂಧನ ತೀವ್ರತೆ ಇರುವ ತನಕ,  ಪ್ರಸ್ತುತ, ಸಿಸಿಯುಎಸ್ ಅಳವಡಿಕೆಗಾಗಿ ಅಸ್ತಿತ್ವದಲ್ಲಿರುವ ಥರ್ಮಲ್ ಪವರ್ ಉತ್ಪಾದಿಸುವ ಘಟಕಗಳ ಮರುಹೊಂದಿಕೆಯು ಕಾರ್ಯಸಾಧುವಾದ ಆಯ್ಕೆಯಾಗಿಲ್ಲ. ಯಾವುದೇ ಮಹತ್ವದ ಪ್ರಮಾಣದಲ್ಲಿ ಸಿಸಿಯುಎಸ್ ಅನ್ನು ಕಾರ್ಯಗತಗೊಳಿಸಲು ಪರಿಣಾಮಕಾರಿ ಅಂತಾರಾಷ್ಟ್ರೀಯ ಸಹಯೋಗದೊಂದಿಗೆ ಭಾರತಕ್ಕೆ ಗಣನೀಯವಾದ ಹವಾಮಾನ ಹಣಕಾಸು ಮತ್ತು ತಂತ್ರಜ್ಞಾನ ವರ್ಗಾವಣೆಯ ಅಗತ್ಯವಿದೆ. ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಪರಿವರ್ತನೆಯು LT-LEDS ಕಾರ್ಯತಂತ್ರದ ಪ್ರಮುಖ ಅಂಶವಾಗಿದೆ. ಆದಾಗ್ಯೂ, ಸೌರ ಮತ್ತು ಪವನ ಶಕ್ತಿಯ ಉತ್ಪಾದನೆಯಲ್ಲಿನ ವ್ಯತ್ಯಾಸ ಮತ್ತು ಅದರ ಮರುಕಳಿಸುವ ಸ್ವಭಾವವನ್ನು ಗಮನಿಸಿದರೆ, ಎಲ್ಲ ಸಮಯಕ್ಕೂ ಇಂಧನ ಶೇಖರಣಾ ವ್ಯವಸ್ಥೆಯು ಸಹ ಅಗತ್ಯವಿದೆ. ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್‌ಗಳು (PSP) ಮತ್ತು ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ಸ್ (BESS) ದೇಶದಲ್ಲಿ ಲಭ್ಯವಿರುವ ಪ್ರಮುಖ ಶೇಖರಣಾ ತಂತ್ರಜ್ಞಾನಗಳಾಗಿವೆ.

ಹವಾಮಾನ ಬದಲಾವಣೆಯ ಅಂತರ್-ಸರ್ಕಾರಿ ಸಮಿತಿ(ಐಪಿಸಿಸಿ)ಯ 6ನೇ ಮೌಲ್ಯಮಾಪನ ವರದಿಯ ಪ್ರಕಾರ, ಒಂದು ದೇಶ/ವಲಯದಲ್ಲಿ ಅಳವಡಿಸಲಾಗಿರುವ ಇಂದಾಲ ಹೊರಸೂಸುವಿಕೆ ತಗ್ಗಿಸುವಿಕೆಯ ಕ್ರಮಗಳು ಇತರ ದೇಶಗಳು/ವಲಯಗಳಲ್ಲಿ ಹೆಚ್ಚಿದ ಹೊರಸೂಸುವಿಕೆಗೆ ಕಾರಣವಾದಾಗ 'ಇಂಗಾಲ ಸೋರಿಕೆ' ಸಂಭವಿಸುತ್ತದೆ. ಜಾಗತಿಕ ಸರಕು ಮೌಲ್ಯ ಸರಪಳಿಗಳು ಮತ್ತು ಸಂಬಂಧಿತ ಅಂತಾರಾಷ್ಟ್ರೀಯ ಸಾರಿಗೆ ವ್ಯವಸ್ಥೆಯು ಇಂಗಾಲದ ಸೋರಿಕೆ ಸಂಭವಿಸುವ ಪ್ರಮುಖ ಕಾರ್ಯವಿಧಾನಗಳಾಗಿವೆ. ಈ ಸಮಸ್ಯೆ ಪರಿಹರಿಸಲು, ಅಭಿವೃದ್ಧಿ ಹೊಂದಿದ ದೇಶಗಳು ತಮ್ಮ ಸಂಪನ್ಮೂಲಗಳ ಬಳಕೆಯನ್ನು ತೀವ್ರವಾಗಿ ಕಡಿಮೆಗೊಳಿಸಬೇಕು, ಹವಾಮಾನ ಸ್ನೇಹಿ ಜೀವನಶೈಲಿ ಅಳವಡಿಸಿಕೊಳ್ಳಬೇಕು. 2022ರಲ್ಲಿ ಭಾರತವು ಪ್ರಾರಂಭಿಸಿದ 'ಮಿಷನ್ ಲೈಫ್' ವ್ಯಕ್ತಿಗಳು ಮತ್ತು ಸಮುದಾಯಗಳ ಪ್ರಯತ್ನಗಳನ್ನು ಸಕಾರಾತ್ಮಕ ನಡವಳಿಕೆಯ ಬದಲಾವಣೆಯ ಜಾಗತಿಕ ಸಾಮೂಹಿಕ ಆಂದೋಲನವಾಗಿ ಪರಿವರ್ತಿಸಲು ಪ್ರಯತ್ನಿಸುತ್ತದೆ, ಇದು ಬೇಡಿಕೆಯಲ್ಲಿ ಬದಲಾವಣೆಗೆ ಕಾರಣವಾಗುತ್ತದೆ. ಅದರ ಪರಿಣಾಮವಾಗಿ ನೀತಿಗಳ ಬದಲಾವಣೆಯು ಬುದ್ದಿಹೀನ ಮತ್ತು ವಿನಾಶಕಾರಿ ಬಳಕೆಯಿಂದ ಸಂಪನ್ಮೂಲಗಳ ಉದ್ದೇಶಪೂರ್ವಕ ಬಳಕೆಗೆ ಕಾರಣವಾಗುತ್ತದೆ. ಇದು ಸರ್ಕಾರ ಹಾಗೂ ಖಾಸಗಿ ವಲಯ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸಾರ್ವಜನಿಕರನ್ನು ಒಳಗೊಂಡ ಜನಾಂದೋಲನಕ್ಕೆ ಕರೆ ನೀಡುತ್ತದೆ. "ಸಂಪ್ರದಾಯಗಳು ಮತ್ತು ಸಂರಕ್ಷಣೆ ಮತ್ತು ಮಿತವಾದ ಮೌಲ್ಯಗಳ ಆಧಾರದ ಮೇಲೆ ಆರೋಗ್ಯಕರ ಮತ್ತು ಸುಸ್ಥಿರ ಜೀವನ ವಿಧಾನವನ್ನು ಮುಂದಿಡಲು ಮತ್ತು ಮತ್ತಷ್ಟು ಪ್ರಚಾರ ಮಾಡಲು, ಭಾರತವು ತನ್ನ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಯನ್ನು(NDCs) ಪರಿಷ್ಕರಿಸಿದೆ ಎಂದು ಉಲ್ಲೇಖಿಸುವುದು ಪ್ರಸ್ತುತವಾಗಿದೆ. ಜೀವನ'–ಹವಾಮಾನ ಬದಲಾವಣೆ ಎದುರಿಸಲು ಒಂದು ಕೀಲಿಯಾಗಿ 'ಪರಿಸರಕ್ಕಾಗಿ ಜೀವನಶೈಲಿ' ಗುರಿಗಳಲ್ಲಿ ಒಂದಾಗಿದೆ.

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ರಾಜ್ಯ ಸಚಿವರಾದ ಶ್ರೀ ಕೀರ್ತಿ ವರ್ಧನ್ ಸಿಂಗ್ ಅವರು ರಾಜ್ಯಸಭೆಯಲ್ಲಿಂದು ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದರು.

 

*****

 



(Release ID: 2043459) Visitor Counter : 25