ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
azadi ka amrit mahotsav

ಪಿಎಂ-ಪ್ರಣಾಮ್ ಉಪಕ್ರಮವು ರಸಗೊಬ್ಬರಗಳ ಸುಸ್ಥಿರ ಮತ್ತು ಸಮತೋಲಿತ ಬಳಕೆಯನ್ನು ಉತ್ತೇಜಿಸುವ ಮೂಲಕ, ಪರ್ಯಾಯ ರಸಗೊಬ್ಬರಗಳನ್ನು ಅಳವಡಿಸಿಕೊಳ್ಳುವ ಮೂಲಕ, ಸಾವಯವ ಮತ್ತು ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವ ಮೂಲಕ ಭೂಮಾತೆಯ ಆರೋಗ್ಯವನ್ನು ಉಳಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಯತ್ನಗಳಿಗೆ ಪೂರಕವಾಗಿದೆ

Posted On: 30 JUL 2024 2:24PM by PIB Bengaluru

ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ  ಸಮಿತಿ (ಸಿಸಿಇಎ ಜೂನ್ 28, 2023 ರಂದು "ಮತ್ತೆ-ಭೂಮಾತೆಯ ಪುನಃಸ್ಥಾಪನೆ, ಜಾಗೃತಿ ಮೂಡಿಸುವಿಕೆ, ಪೋಷಣೆ ಮತ್ತು ಸುಧಾರಣೆಗಾಗಿ ಪಿಎಂ ಕಾರ್ಯಕ್ರಮ (PM-PRANAM)" ವನ್ನು ಅನುಮೋದಿಸಿದೆ. ಈ ಉಪಕ್ರಮವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರಾರಂಭಿಸಿದ ಪ್ರಯತ್ನಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ.  ಇದರ ಉದ್ದೇಶ ಗೊಬ್ಬರಗಳ ಸುಸ್ಥಿರ ಮತ್ತು ಸಮತೋಲಿತ ಬಳಕೆಯನ್ನು ಉತ್ತೇಜಿಸುವ ಮೂಲಕ ಭೂಮಾತೆಯ ಆರೋಗ್ಯವನ್ನು ಉಳಿಸಲು , ಪರ್ಯಾಯ ರಸಗೊಬ್ಬರಗಳನ್ನು ಅಳವಡಿಸಿಕೊಳ್ಳುವುದು, ಸಾವಯವ ಮತ್ತು ನೈಸರ್ಗಿಕ ಕೃಷಿ ಇತ್ಯಾದಿಗಳನ್ನು ಉತ್ತೇಜಿಸುವುದಾಗಿದೆ.

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪಿಎಂ-ಪ್ರಣಾಮ್ (PM- PRANAM) ಅಡಿಯಲ್ಲಿ ಒಳಗೊಂಡಿರುತ್ತವೆ. ಈ ಯೋಜನೆಯಡಿಯಲ್ಲಿ, ಹಿಂದಿನ 3 ವರ್ಷಗಳ ಸರಾಸರಿ ಬಳಕೆಗೆ ಹೋಲಿಸಿದರೆ ರಾಸಾಯನಿಕ ಗೊಬ್ಬರಗಳ (ಯೂರಿಯಾ, ಡಿಎಪಿ, ಎನ್ಪಿಕೆ, ಎಂಒಪಿ) ಬಳಕೆಯಲ್ಲಿನ ಕಡಿತದ ಮೂಲಕ ನಿರ್ದಿಷ್ಟ ಹಣಕಾಸು ವರ್ಷದಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಿಂದ 50% ರಸಗೊಬ್ಬರ ಸಬ್ಸಿಡಿ ಉಳಿತಾಯವಾಗುತ್ತದೆ, ಇದನ್ನು ಅನುದಾನವಾಗಿ ಸಂಬಂಧಪಟ್ಟ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವರ್ಗಾಯಿಸಲಾಗುವುದು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಅನುದಾನವನ್ನು ರೈತರು ಸೇರಿದಂತೆ ರಾಜ್ಯದ ಜನತೆಯ ಅನುಕೂಲಕ್ಕಾಗಿ ಬಳಸಿಕೊಳ್ಳಬಹುದು.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವರಾದ  ಶ್ರೀಮತಿ ಅನುಪ್ರಿಯಾ ಪಟೇಲ್ ಅವರು ಇಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಈ ಮಾಹಿತಿ ನೀಡಿದರು.

 

*****



(Release ID: 2039291) Visitor Counter : 41