ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿಯವರು ರಷ್ಯಾದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದರು

Posted On: 09 JUL 2024 2:40PM by PIB Bengaluru

ಇಂದು ಮಾಸ್ಕೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಷ್ಯಾದಲ್ಲಿರುವ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಿದರು. ಪ್ರಧಾನಿಯವರನ್ನು ಭಾರತೀಯ ಸಮುದಾಯದ ಸದಸ್ಯರು ವಿಶೇಷ ಅಕ್ಕರೆ ಮತ್ತು ಆತ್ಮೀಯತೆಯಿಂದ ಸ್ವಾಗತಿಸಿದರು.

ಸಮುದಾಯವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ಪ್ರಧಾನಮಂತ್ರಿಯವರು ಭಾರತೀಯ ಸಮುದಾಯದ ಆತ್ಮೀಯ ಸ್ವಾಗತಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಭಾರತ-ರಷ್ಯಾ ಸಂಬಂಧವನ್ನು ಗಾಢಗೊಳಿಸುವಲ್ಲಿ ಸಮುದಾಯದ ಕೊಡುಗೆಯನ್ನು ಶ್ಲಾಘಿಸಿದರು. 1.4 ಶತಕೋಟಿ ಭಾರತೀಯರ ಪರವಾಗಿ ಈ ಸಮುದಾಯವನ್ನು ಅಭಿನಂದಿಸುವಾಗ, ಸಮುದಾಯದೊಂದಿಗಿನ ತಮ್ಮ ಸಂವಾದವು ವಿಶೇಷವಾಗಿದೆ. ಏಕೆಂದರೆ ಇದು ತಮ್ಮ ಐತಿಹಾಸಿಕ ಮೂರನೇ ಅವಧಿಯಲ್ಲಿ ಭಾರತೀಯ ಸಮುದಾಯದೊಂದಿಗೆ ಮೊದಲ ಭಾಷಣವಾಗಿದೆ ಎಂದು ಅವರು ಹೇಳಿದರು.

ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಆಗಿರುವ ಗೋಚರ ಬದಲಾವಣೆಗಳ ಬಗ್ಗೆ ಪ್ರಧಾನಮಂತ್ರಿ ಮಾತನಾಡಿದರು. ಇದು ಎಲ್ಲಾ ಭಾರತೀಯರಿಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದು ಅವರು ಹೇಳಿದರು. ತಮ್ಮ ಮೂರನೇ ಅವಧಿಯಲ್ಲಿ, ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವುದು ತಮ್ಮ ಸರ್ಕಾರದ ಉದ್ದೇಶವಾಗಿದೆ ಎಂದು ಅವರು ಹೇಳಿದರು. ಜಾಗತಿಕ ಬೆಳವಣಿಗೆಯ ಗಮನಾರ್ಹ ಶೇಕಡಾವಾರು ಪ್ರಮಾಣವನ್ನು ಹೊಂದಿರುವ ಭಾರತದ ಆರ್ಥಿಕ ಬೆಳವಣಿಗೆಯ ಬಗ್ಗೆ ಅವರು ಮಾತನಾಡಿದರು; ಅದರ ಡಿಜಿಟಲ್ ಮತ್ತು ಫಿನ್ಟೆಕ್ ಯಶಸ್ಸು; ಅದರ ಹಸಿರು ಅಭಿವೃದ್ಧಿ ಸಾಧನೆಗಳು; ಮತ್ತು ಅದರ ಪ್ರಭಾವಶಾಲಿ ಸಾಮಾಜಿಕ-ಆರ್ಥಿಕ ಕಾರ್ಯಕ್ರಮಗಳು ಸಾಮಾನ್ಯ ಜನರನ್ನು ಸಬಲೀಕರಣಗೊಳಿಸುತ್ತಿವೆ. 1.4 ಶತಕೋಟಿ ಭಾರತೀಯರ ಸಮರ್ಪಣೆ, ಬದ್ಧತೆ ಮತ್ತು ಕೊಡುಗೆಯಿಂದಾಗಿ ಭಾರತದಲ್ಲಿ ಪರಿರ್ತನಾಶೀಲ ಯಶಸ್ಸು ಸಂಭವಿಸಿದೆ ಎಂದು ಅವರು ಒತ್ತಿ  ಹೇಳಿದರು. ಪ್ರತಿಯೊಬ್ಬರೂ ಇಂದು ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಕನಸು ಹೊಂದಿದ್ದಾರೆ. ಭಾರತವು ವಿಶ್ವಬಂಧುವಾಗಿ ತನ್ನ ಬದ್ಧ ಪ್ರಯತ್ನಗಳ ಮೂಲಕ ಹವಾಮಾನ ಬದಲಾವಣೆಯನ್ನು ನಿಭಾಯಿಸುವುದರಿಂದ ಹಿಡಿದು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವವರೆಗೆ ಜಾಗತಿಕ ಸಮೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಅವರು ಹೇಳಿದರು. ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಶಾಂತಿ, ಮಾತುಕತೆ ಮತ್ತು ರಾಜತಾಂತ್ರಿಕತೆಗಾಗಿ ಭಾರತ ನೀಡಿದ ಕರೆಯು ಹೆಚ್ಚು ಪ್ರತಿಧ್ವನಿಸುತ್ತಿದೆ ಎಂದು ಅವರು ಹೇಳಿದರು.

ರಷ್ಯಾದೊಂದಿಗೆ ಬಲವಾದ ಮತ್ತು ಗಾಢವಾದ ಪಾಲುದಾರಿಕೆಯನ್ನು ರೂಪಿಸುವಲ್ಲಿ ಸಕ್ರಿಯ ಪಾತ್ರ ವಹಿಸುವುದನ್ನು ಮುಂದುವರಿಸುವಂತೆ ಪ್ರಧಾನಮಂತ್ರಿ ಭಾರತೀಯ ಸಮುದಾಯವನ್ನು ಪ್ರೋತ್ಸಾಹಿಸಿದರು. ಕಜಾನ್ ಮತ್ತು ಎಕಟೆರಿನ್‌ಬರ್ಗ್‌ ನಲ್ಲಿ ಎರಡು ಹೊಸ ಭಾರತೀಯ ರಾಯಭಾರ ಕಚೇರಿಗಳನ್ನು ತೆರೆಯುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು, ಇದು ಜನರು-ಜನರ ನಡುವಿನ ಸಂಬಂಧಗಳಿಗೆ ಮತ್ತಷ್ಟು ಉತ್ತೇಜನ ನೀಡುತ್ತದೆ ಎಂದರು. ಈ ಘೋಷಣೆಯನ್ನು ಭಾರಿ ಚಪ್ಪಾಳೆಯೊಂದಿಗೆ ಸ್ವಾಗತಿಸಲಾಯಿತು. ದೇಶದಲ್ಲಿ ಭಾರತೀಯ ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸಲು ಮತ್ತು ಬೆಳೆಸಲು ಮತ್ತು ರಷ್ಯಾದ ಜನರೊಂದಿಗೆ ಅದರ ಕಂಪನ್ನು ಹಂಚಿಕೊಳ್ಳಲು ಸಮುದಾಯ ಮಾಡುತ್ತಿರುವ ಪ್ರಯತ್ನಗಳನ್ನು ಪ್ರಧಾನಿ ಶ್ಲಾಘಿಸಿದರು.

 

*****

 



(Release ID: 2031758) Visitor Counter : 20