ಪ್ರಧಾನ ಮಂತ್ರಿಯವರ ಕಛೇರಿ

ಕೆಂಪು ಕೋಟೆಯಲ್ಲಿ ನಡೆದ “ಪರಾಕ್ರಮ್ ದಿವಸ್” ಆಚರಣೆ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಹಿಂದಿ ಭಾಷಣದ ಕನ್ನಡ ಅವತರಣಿಕೆ

Posted On: 23 JAN 2024 9:51PM by PIB Bengaluru

ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ಕಿಶನ್ ರೆಡ್ಡಿ ಜಿ, ಶ್ರೀ ಅರ್ಜುನ್ ರಾಮ್ ಮೇಘವಾಲ್ ಜಿ, ಶ್ರೀಮತಿ ಮೀನಾಕ್ಷಿ ಲೇಖಿ ಜಿ, ಶ್ರೀ ಅಜಯ್ ಭಟ್ ಜಿ, ಬ್ರಿಗೇಡಿಯರ್ ಆರ್. ಎಸ್. ಚಿಕಾರಾ ಜಿ, ಐ.ಎನ್.ಎ. ಮುಸ್ಸದ್ದಿ ಲೆಫ್ಟಿನೆಂಟ್ ಆರ್ ಮಾಧವನ್ ಜಿ, ಮತ್ತು ನನ್ನ ಪ್ರೀತಿಯ ದೇಶವಾಸಿಗಳೇ!

“ಪರಾಕ್ರಮ್ ದಿವಸ್” ಎಂದು ಅಧಿಕೃತವಾಗಿ ಗುರುತಿಸಲ್ಪಟ್ಟ ನೇತಾಜಿ ಸುಭಾಷ್ ಚಂದ್ರ ಅವರ ಜನ್ಮದಿನದಂದು ನಿಮಗೆಲ್ಲರಿಗೂ ಅಭಿನಂದನೆಗಳು. “ಆಜಾದ್ ಹಿಂದ್ ಫೌಜ್” ಕ್ರಾಂತಿಕಾರಿಗಳ ಶಕ್ತಿಗೆ ಸಾಕ್ಷಿಯಾಗಿದ್ದ ಕೆಂಪು ಕೋಟೆ ಇಂದು ಮತ್ತೊಮ್ಮೆ ನವೀಕೃತ ಶಕ್ತಿಯಿಂದ ತುಂಬಿ ತುಳುಕುತ್ತಿದೆ. ಅಮೃತಕಾಲದ ಆರಂಭಿಕ ವರ್ಷಗಳು, 'ಸಂಕಲ್ಪದಿಂದ ಸಿದ್ದಿ (ಸಂಕಲ್ಪ್ ಸೇ ಸಿದ್ಧಿ)'ಯ ರಾಷ್ಟ್ರವ್ಯಾಪಿ ಉತ್ಸಾಹ ಮತ್ತು ಈ ನಿರ್ದಿಷ್ಟ ಕ್ಷಣವು ನಿಜವಾಗಿಯೂ ಅಭೂತಪೂರ್ವವಾಗಿದೆ. ನಿನ್ನೆಯಷ್ಟೇ ಇಡೀ ವಿಶ್ವವೇ ಭಾರತದ ಸಾಂಸ್ಕೃತಿಕ ಪ್ರಜ್ಞೆಯಲ್ಲಿ ಐತಿಹಾಸಿಕ ಮೈಲಿಗಲ್ಲೊಂದಕ್ಕೆ ಸಾಕ್ಷಿಯಾಯಿತು. ಇಡೀ ಜಗತ್ತು ಮತ್ತು ಮಾನವೀಯತೆಯು ಭವ್ಯವಾದ ರಾಮಮಂದಿರದ 'ಪ್ರಾಣ ಪ್ರತಿಷ್ಠಾ'ಕ್ಕೆ ಸಂಬಂಧಿಸಿದ ಶಕ್ತಿ ಮತ್ತು ಭಾವನೆಗಳನ್ನು ಅನುಭವಿಸಿದೆ. ಮತ್ತು ಇಂದು ನಾವು ಮಹಾನ್ ನಾಯಕರಾದ ಶ್ರೀ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಕಳೆದ ಕೆಲವು ವರ್ಷಗಳಲ್ಲಿ, ಜನವರಿ 23 ಅನ್ನು “ಪರಾಕ್ರಮ್ ದಿವಸ್” ಎಂದು ಘೋಷಿಸಿದಾಗಿನಿಂದ, ಗಣರಾಜ್ಯೋತ್ಸವದ ಮಹತ್ವದ ಹಬ್ಬವು ಈಗ ಜನವರಿ 23 ರಿಂದ ಪ್ರಾರಂಭವಾಗುತ್ತದೆ ಮತ್ತು ಬಾಪು ಅವರ ಪುಣ್ಯತಿಥಿಯಾದ ಜನವರಿ 30 ರವರೆಗೆ ಆ ಉತ್ಸಾಹ ಮುಂದುವರಿಯುತ್ತದೆ. ಈಗ, ಗಣರಾಜ್ಯೋತ್ಸವದ ಈ ಆಚರಣೆಗೆ ಜನವರಿ 22ರ ಭವ್ಯವಾದ ಆಧ್ಯಾತ್ಮಿಕ ಹಬ್ಬವೂ ಸೇರ್ಪಡೆಯಾಗಿದೆ. ಜನವರಿಯ ಈ ಕೊನೆಯ ಕೆಲವು ದಿನಗಳು ನಮ್ಮ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆಗೆ, ಹಾಗೆಯೇ ನಮ್ಮ ಪ್ರಜಾಪ್ರಭುತ್ವ ಮತ್ತು ದೇಶಭಕ್ತಿಗೆ ಹೆಚ್ಚು ಸ್ಪೂರ್ತಿದಾಯಕವಾಗಿವೆ. ನಾನು ದೇಶವಾಸಿಗಳಿಗೆ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ!

ಸ್ನೇಹಿತರೇ,

ನೇತಾಜಿಯವರ ಜೀವನವನ್ನು ಬಿಂಬಿಸುವ ಅನೇಕ ಕಲಾ ಪ್ರದರ್ಶನವನ್ನು ಇಂದು ಏರ್ಪಡಿಸಿದ್ದಾರೆ. ಕಲಾವಿದರು ನೇತಾಜಿಯವರ ಜೀವನವನ್ನು ವಿಶಾಲವಾದ ಕ್ಯಾನ್ವಾಸ್ ನಲ್ಲಿ ಸೆರೆಹಿಡಿದಿದ್ದಾರೆ. ಈ ಪ್ರಯತ್ನದಲ್ಲಿ ತೊಡಗಿರುವ ಎಲ್ಲ ಕಲಾವಿದರನ್ನು ನಾನು ಅಭಿನಂದಿಸುತ್ತೇನೆ. ಸ್ವಲ್ಪ ಸಮಯದ ಹಿಂದೆ, ರಾಷ್ಟ್ರೀಯ ಬಾಲ ಪುರಸ್ಕಾರದಿಂದ ಗೌರವಿಸಲ್ಪಟ್ಟ ನನ್ನ ಯುವ ಸ್ನೇಹಿತರೊಂದಿಗೆ ನಾನು ಸಂವಾದ ನಡೆಸಿದ್ದೇನೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅವರ ಧೈರ್ಯ, ಪ್ರತಿಭೆ ಮತ್ತು ಕೌಶಲ್ಯಗಳು ಬೆರಗು ಮೂಡಿಸುತ್ತವೆ. ಪ್ರತಿ ಬಾರಿಯೂ ನನಗೆ ಭಾರತದ ಯುವಕರನ್ನು ಭೇಟಿಯಾಗಲು ಅವಕಾಶ ಸಿಕ್ಕಾಗ, ಅಭಿವೃದ್ಧಿ ಹೊಂದಿದ ಭಾರತದ ಬಗ್ಗೆ ನನ್ನ ನಂಬಿಕೆ ಬಲಗೊಳ್ಳುತ್ತದೆ. ದೇಶದ ಈ ಸಮರ್ಥ 'ಅಮೃತ್' ಪೀಳಿಗೆಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಉತ್ತಮ ಮಾದರಿಯಾಗಿದ್ದಾರೆ.

ಸ್ನೇಹಿತರೇ,

ಇಂದು, “ಪರಾಕ್ರಮ್ ದಿವಸ್”ನಂದು “ಕೆಂಪು ಕೋಟೆ”ಯ ಕೋಟೆಯಿಂದ “ಭಾರತ್ ಪರ್ವ್” ಸಹ ಪ್ರಾರಂಭವಾಗುತ್ತದೆ. ಮುಂದಿನ ಒಂಬತ್ತು ದಿನಗಳಲ್ಲಿ, ಈ “ಭಾರತ್ ಪರ್ವ್” ಮೂಲಕ  ಗಣರಾಜ್ಯೋತ್ಸವದ ಕೋಷ್ಟಕಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ದೇಶದ ವೈವಿಧ್ಯತೆಯನ್ನು ಪ್ರದರ್ಶಿಸಲಾಗುತ್ತದೆ. “ಭಾರತ್ ಪರ್ವ್” ಸುಭಾಸ್ ಚಂದ್ರ ಬೋಸ್ ಅವರ ಆದರ್ಶಗಳನ್ನು ಪ್ರತಿಬಿಂಬಿಸುತ್ತದೆ. ಇದು 'ಸ್ಥಳೀಯತೆಯ ಧ್ವನಿ(ವೋಕಲ್ ಫಾರ್ ಲೋಕಲ್)' ಅನ್ನು ಅಳವಡಿಸಿಕೊಳ್ಳುವ ಹಬ್ಬವಾಗಿದೆ. ಈ ಉತ್ಸವವು ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ. ಇದು ವೈವಿಧ್ಯತೆಯ ಗೌರವದ ಆಚರಣೆಯಾಗಿದೆ ಮತ್ತು 'ಏಕ್ ಭಾರತ್ ಶ್ರೇಷ್ಠ ಭಾರತ'ವನ್ನು ಹೊಸ ಎತ್ತರಕ್ಕೆ ಏರಿಸುವ ಗುರಿಯನ್ನು ಹೊಂದಿದೆ. ಈ ಉತ್ಸವದಲ್ಲಿ ಭಾಗವಹಿಸುವ ಮೂಲಕ ದೇಶದ ವೈವಿಧ್ಯತೆಯನ್ನು ಆಚರಿಸುವಂತೆ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ.

ನನ್ನ ಕುಟುಂಬದ ಸದಸ್ಯರೇ,

“ಆಜಾದ್ ಹಿಂದ್ ಫೌಜ್”ನ 75 ನೇ ವಾರ್ಷಿಕೋತ್ಸವದಂದು ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ ದಿನವನ್ನು ನಾನು ಎಂದಿಗೂ ಮರೆಯುವುದಿಲ್ಲ. ನೇತಾಜಿಯವರ ಜೀವನವು ಶ್ರಮವನ್ನು ಮಾತ್ರವಲ್ಲದೆ ಶೌರ್ಯವನ್ನೂ ಸಂಕೇತಿಸುತ್ತದೆ. ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಕನಸುಗಳನ್ನು ಮತ್ತು ಆಕಾಂಕ್ಷೆಗಳನ್ನು ತ್ಯಾಗ ಮಾಡಿದರು. ಅವರು ತಮಗಾಗಿ ಸುಲಭವಾದ ಜೀವನವನ್ನು ಆರಿಸಿಕೊಳ್ಳಬಹುದಿತ್ತು, ಆದರೆ ಅವರು ತಮ್ಮ ಕನಸುಗಳನ್ನು ಭರತ ಖಂಡದ ಏಳ್ಗೆಯ ಸಂಕಲ್ಪದೊಂದಿಗೆ ಜೋಡಿಸಿದರು. ವಿದೇಶಿ ಆಡಳಿತವನ್ನು ವಿರೋಧಿಸಿದ್ದಲ್ಲದೆ, ಭಾರತೀಯ ನಾಗರಿಕತೆಯನ್ನು ಪ್ರಶ್ನಿಸುವವರಿಗೆ ತಕ್ಕ ಉತ್ತರವನ್ನು ನೀಡಿದ ದೇಶದ ಮಹಾನ್ ಪುತ್ರರಲ್ಲಿ ನೇತಾಜಿ ಒಬ್ಬರು. ಭಾರತವನ್ನು “ಪ್ರಜಾಪ್ರಭುತ್ವದ ಮಾತೆ” ಎಂದು ಅವರು ಧೈರ್ಯದಿಂದ ಜಗತ್ತಿಗೆ ಪ್ರಸ್ತುತಪಡಿಸಿದರು. ಕೆಲವರು ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಅನುಮಾನಿಸಿದ ಸಮಯದಲ್ಲಿ, ಅವರಿಗೆ ಭಾರತದ ಪ್ರಜಾಪ್ರಭುತ್ವ ಪರಂಪರೆ ಮತ್ತು ಇತಿಹಾಸವನ್ನು ನೇತಾಜಿ ನೆನಪಿಸಿದರು. ಪ್ರಜಾಪ್ರಭುತ್ವವು ಮಾನವ ಸಂಸ್ಥೆ ಎಂದು ನೇತಾಜಿ ಪ್ರತಿಪಾದಿಸುತ್ತಿದ್ದರು, ಇದು ನೂರಾರು ವರ್ಷಗಳಿಂದ ಭಾರತದ ವಿವಿಧ ಭಾಗಗಳಲ್ಲಿ ಪ್ರಚಲಿತವಾಗಿದೆ. ಇಂದು, ಭಾರತವು ಪ್ರಜಾಪ್ರಭುತ್ವದ ತಾಯಿಯೆಂದು ತನ್ನ ಗುರುತನ್ನು ಹೆಮ್ಮೆಪಡುತ್ತದೆ, ಅದು ನೇತಾಜಿಯವರ ಆಲೋಚನೆಗಳನ್ನು ಬಲಪಡಿಸುತ್ತದೆ.

ಸ್ನೇಹಿತರೇ,

ಆಡಳಿತ ಮಾತ್ರವಲ್ಲದೆ ಆಲೋಚನೆಗಳು ಮತ್ತು ನಡವಳಿಕೆಯನ್ನು ಗುಲಾಮರನ್ನಾಗಿ ಮಾಡಬಹುದು ಎಂದು ನೇತಾಜಿ ಅರ್ಥಮಾಡಿಕೊಂಡರು. ಹೀಗಾಗಿ, ವಿಶೇಷವಾಗಿ ಆ ಕಾಲದ ಯುವಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಗುರಿ ಹೊಂದಿದ್ದರು. ನೇತಾಜಿ ಇಂದಿನ ಭಾರತದಲ್ಲಿ ಅಸ್ತಿತ್ವದಲ್ಲಿದ್ದರೆ, ಯುವ ಭಾರತದಲ್ಲಿರುವ ಹೊಸ ಪ್ರಜ್ಞೆಯಿಂದ ಅವರು ಎಷ್ಟು ಸಂತೋಷಪಡುತ್ತಾರೆ ಎಂದು ಯಾರಾದರೂ ಊಹಿಸಬಹುದು. ಇಂದಿನ ಯುವಕರು ತಮ್ಮ ಸಂಸ್ಕೃತಿ, ಮೌಲ್ಯಗಳು ಮತ್ತು ಭಾರತೀಯತೆಯ ಬಗ್ಗೆ ಭಾವಿಸುವ ಹೆಮ್ಮೆ ಅಭೂತಪೂರ್ವವಾಗಿದೆ. ಪ್ರತಿಯೊಬ್ಬ ಯುವ ಭಾರತೀಯರು, ತಮ್ಮ ಸಾಮರ್ಥ್ಯಗಳಲ್ಲಿ ವಿಶ್ವಾಸ ಹೊಂದಿದ್ದಾರೆ ಮತ್ತು ಅವರು ಬೇರೆಯವರೊಂದಿಗೆ ಸಮಾನರು ಎಂದು ದೃಢವಾಗಿ ನಂಬಿಕೆ ಹೊಂದಿದ್ದಾರೆ.

ಈ ಹಿಂದೆ ಯಾರೂ ತಲುಪದ ಚಂದ್ರ ಉಪಗ್ರಹದ ಭಾಗದಲ್ಲಿ ನಾವು ಇಳಿದಿದ್ದೇವೆ. ವೈಜ್ಞಾನಿಕ ಅಧ್ಯಯನಕ್ಕಾಗಿ ನಾವು ಸೂರ್ಯ ಗ್ರಹದ ಕಡೆಗೆ 15 ಲಕ್ಷ ಕಿಲೋಮೀಟರ್ ಪ್ರಯಾಣಿಸಿದ್ದೇವೆ ಮತ್ತು ಪ್ರತಿಯೊಬ್ಬ ಭಾರತೀಯನು ಈ ಸಾಧನೆಯಲ್ಲಿ ಹೆಮ್ಮೆಪಡುತ್ತಾನೆ. ಅದು ಸೂರ್ಯವಾಗಿರಲಿ ಅಥವಾ ಸಮುದ್ರದ ಆಳವಾಗಲಿ, ಎಲ್ಲಿಯಾದರೂ ತಲುಪುವುದು ನಮ್ಮ ಸಾಮರ್ಥ್ಯಗಳನ್ನು ಮೀರುವುದಿಲ್ಲ. ನಾವು ಜಾಗತಿಕವಾಗಿ ಅಗ್ರ ಮೂರು ಆರ್ಥಿಕ ಶಕ್ತಿಗಳಲ್ಲಿ ಒಂದಾಗಿ ಹೊರಹೊಮ್ಮಬಹುದು. ಪ್ರಪಂಚದ ಸವಾಲುಗಳಿಗೆ ಪರಿಹಾರಗಳನ್ನು ನೀಡುವ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ. ಈ ನಂಬಿಕೆ, ಈ ವಿಶ್ವಾಸ ಭಾರತದ ಇಂದಿನ ಯುವಕರಲ್ಲಿ ಎದ್ದುಕಾಣುತ್ತಿದೆ. ಅವರಲ್ಲಿನ ಜಾಗೃತಿಯು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಪ್ರೇರಕ ಶಕ್ತಿಯಾಗಿದೆ. ಆದ್ದರಿಂದ ಇಂದಿನ ಯುವಕರು ‘ಪಂಚ ಪ್ರಾಣ’ ಅಥವಾ ಐದು ಸಂಕಲ್ಪಗಳನ್ನು ಅಳವಡಿಸಿಕೊಂಡು, ಗುಲಾಮಗಿರಿಯಿಂದ ಮುಕ್ತವಾದ ಮನಸ್ಥಿತಿಯೊಂದಿಗೆ ಕೆಲಸ ಮಾಡುತ್ತಿದ್ದಾರೆ.

ನನ್ನ ಕುಟುಂಬದ ಸದಸ್ಯರೇ,

ನೇತಾಜಿಯವರ ಜೀವನ ಮತ್ತು ಕೊಡುಗೆಗಳು ಭಾರತದ ಯುವಕರಿಗೆ ಸ್ಫೂರ್ತಿಯ ಚಿಲುಮೆಯಾಗಿ ಕಾರ್ಯನಿರ್ವಹಿಸುತ್ತಿವೆ. ಕಳೆದ ದಶಕದಲ್ಲಿ, ನಾವು ಈ ಸ್ಫೂರ್ತಿಯು ನಮ್ಮ ಸಾಮೂಹಿಕ ಪ್ರಜ್ಞೆಯಲ್ಲಿ ಪ್ರತಿ ಸಂದಿಯಲ್ಲಿ ಬೇರೂರಿದೆ ಎಂದು ಖಚಿತಪಡಿಸಿಕೊಳ್ಳಿ. ಪ್ರತಿಯೊಬ್ಬ ಸಂದರ್ಶಕನು ಕರ್ತವ್ಯಕ್ಕಾಗಿ ಅವರ ಅಚಲವಾದ ಸಮರ್ಪಣೆಯನ್ನು ನೆನಪಿಸಿಕೊಳ್ಳುವ ಉದ್ದೇಶದಿಂದ ನೇತಾಜಿಯ ಪ್ರಮುಖ ಪ್ರತಿಮೆಯನ್ನು 'ಕರ್ತವ್ಯ ಪಥ'ದಲ್ಲಿ ಇರಿಸಲಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ನೇತಾಜಿ ಹೆಸರನ್ನು ಇಡಲಾಗಿದೆ, ಆಜಾದ್ ಹಿಂದ್ ಸರ್ಕಾರವು ಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದ ಸ್ಥಳವಾಗಿದೆ. ಪ್ರಸ್ತುತ, ಅಂಡಮಾನ್ ನಲ್ಲಿ ನೇತಾಜಿಗೆ ಸಮರ್ಪಿತ ಸ್ಮಾರಕ ನಿರ್ಮಾಣ ಹಂತದಲ್ಲಿದೆ. ಹೆಚ್ಚುವರಿಯಾಗಿ, ನಾವು ನೇತಾಜಿ ಮತ್ತು ಆಜಾದ್ ಹಿಂದ್ ಫೌಜ್ ಅವರ ಕೊಡುಗೆಗಳಿಗೆ ಮೀಸಲಾಗಿರುವ ಕೆಂಪು ಕೋಟೆಯಲ್ಲಿ ವಸ್ತುಸಂಗ್ರಹಾಲಯವನ್ನು ನಿರ್ಮಿಸಿದ್ದೇವೆ. ವಿಪತ್ತು ನಿರ್ವಹಣೆಗಾಗಿ ನೇತಾಜಿ ಅವರ ಹೆಸರಿನಲ್ಲಿ ಪ್ರಥಮ ಬಾರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಆಜಾದ್ ಹಿಂದ್ ಫೌಜ್ ಗೆ ಮೀಸಲಾದ ಸಾಟಿಯಿಲ್ಲದ ಉಪಕ್ರಮಗಳನ್ನು ನಮ್ಮ ಸರ್ಕಾರ ಕೈಗೊಂಡಿದ್ದು, ಸ್ವತಂತ್ರ ಭಾರತದಲ್ಲಿ ಇದುವರೆಗೆ ಯಾವುದೇ ಸರ್ಕಾರ ಮಾಡಿಲ್ಲ ಎಂದು ನಾನು ಭಾವಿಸುತ್ತೇನೆ.

ಸ್ನೇಹಿತರೇ,

ನೇತಾಜಿ ಅವರು ರಾಷ್ಟ್ರದ ಎದುರಿಸುತ್ತಿರುವ ಸವಾಲುಗಳನ್ನು ಸೂಕ್ಷ್ಮವಾಗಿ ಗುರುತಿಸಿದರು ಮತ್ತು ಈ ಪರಿಣಾಮದ ಎಚ್ಚರಿಕೆಗಳನ್ನು ಧ್ವನಿಸಿದರು. ಭಾರತವನ್ನು ಶ್ರೇಷ್ಠತೆಯತ್ತ ಕೊಂಡೊಯ್ಯಲು ಪ್ರಜಾಪ್ರಭುತ್ವ ಸಮಾಜದ ತಳಹದಿಯ ಮೇಲೆ ರಾಜಕೀಯ ಪ್ರಜಾಪ್ರಭುತ್ವವನ್ನು ಬಲಪಡಿಸಲು ಅವರು ಪ್ರತಿಪಾದಿಸಿದರು. ದುರದೃಷ್ಟವಶಾತ್, ಸ್ವಾತಂತ್ರ್ಯದ ನಂತರ ಅವರ ಕಲ್ಪನೆಯನ್ನು ತೀವ್ರವಾಗಿ ಆಕ್ರಮಣ ಮಾಡಲಾಯಿತು. ಸ್ವಾತಂತ್ರ್ಯಾನಂತರ, ಸ್ವಜನಪಕ್ಷಪಾತದಂತಹ ಸಮಸ್ಯೆಗಳು ಭಾರತದ ಪ್ರಜಾಪ್ರಭುತ್ವವನ್ನು ಪೀಡಿಸುತ್ತಲೇ ಇದ್ದವು. ಇದು ಭಾರತದ ಅಭಿವೃದ್ಧಿಗೆ ಗಮನಾರ್ಹ ಅಡಚಣೆಯಾಗಿದೆ, ಅಪೇಕ್ಷಿತ ವೇಗದಲ್ಲಿ ಪ್ರಗತಿಯನ್ನು ತಡೆಯುತ್ತದೆ. ಸಮಾಜದ ಗಣನೀಯ ಭಾಗವು ಅವಕಾಶಗಳಿಂದ ವಂಚಿತವಾಗಿದೆ ಮತ್ತು ರಾಷ್ಟ್ರವು ಆರ್ಥಿಕ ಮತ್ತು ಸಾಮಾಜಿಕ ಉನ್ನತಿಗೆ ಅಗತ್ಯವಾದ ಸಂಪನ್ಮೂಲಗಳನ್ನು ಹೊಂದಿಲ್ಲ. ಆಯ್ದ ಕೆಲವು ಕುಟುಂಬಗಳು ರಾಜಕೀಯ, ಆರ್ಥಿಕ ನಿರ್ಧಾರಗಳು ಮತ್ತು ನೀತಿ ನಿರೂಪಣೆಯ ಮೇಲೆ ನಿಯಂತ್ರಣವನ್ನು ಹೊಂದಿದ್ದವು. ಯುವಕರು ಮತ್ತು ಮಹಿಳೆಯರು ವಿಶೇಷವಾಗಿ ಪ್ರಭಾವಿತರಾಗಿದ್ದಾರೆ. ಯುವಕರು ಪ್ರತಿ ಹಂತದಲ್ಲೂ ತಾರತಮ್ಯ ವ್ಯವಸ್ಥೆಯನ್ನು ಎದುರಿಸಬೇಕಾಯಿತು. ಮಹಿಳೆಯರು ತಮ್ಮ ಮೂಲಭೂತ ಅಗತ್ಯಗಳಿಗಾಗಿ ಸಹ ಬಹಳ ಸಮಯ ಕಾಯಬೇಕಾಯಿತು. ಅಂತಹ ಸಂದರ್ಭಗಳಲ್ಲಿ, ಯಾವುದೇ ದೇಶವು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ ಮತ್ತು ವಿಷಾದನೀಯವಾಗಿ, ಭಾರತವು ಇದಕ್ಕೆ ಹೊರತಾಗಿಲ್ಲ.

ಆದ್ದರಿಂದ, 2014 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ, ನಾವು "ಸಬ್ಕಾ ಸಾಥ್, ಸಬ್ಕಾ ವಿಕಾಸ್" ತತ್ವದೊಂದಿಗೆ ಪ್ರಗತಿ ಹೊಂದಿದ್ದೇವೆ. ಪ್ರಸ್ತುತ, ರಾಷ್ಟ್ರವು ಕಳೆದ ದಶಕದಲ್ಲಿ ಪರಿವರ್ತಕ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಸ್ವತಂತ್ರ ಭಾರತಕ್ಕಾಗಿ ನೇತಾಜಿ ಹೊಂದಿದ್ದ ದೃಷ್ಟಿಕೋನ, ಈಗ ಸಾಕಾರಗೊಳ್ಳುತ್ತಿದೆ. ಬಡ ಕುಟುಂಬಗಳ ಮಕ್ಕಳು (ಪುತ್ರರು ಮತ್ತು ಪುತ್ರಿಯರು ) ಸಹ ಪ್ರಗತಿಗೆ ಸಾಕಷ್ಟು ಅವಕಾಶಗಳನ್ನು ಹೊಂದಿದ್ದಾರೆಂದು ನಂಬುತ್ತಾರೆ. ದೇಶಾದ್ಯಂತ ಮಹಿಳೆಯರು ತಮ್ಮ ಮೂಲಭೂತ ಅಗತ್ಯಗಳಿಗೆ ಸರ್ಕಾರವು ಹೊಂದಿಕೊಂಡಿದೆ ಎಂದು ವಿಶ್ವಾಸ ಹೊಂದಿದ್ದಾರೆ. ವರ್ಷಗಳ ನಿರೀಕ್ಷೆಯ ನಂತರ, “ ನಾರಿ ಶಕ್ತಿ ವಂದನ್ ಅಧಿನಿಯಮ್ “ ಅನ್ನು ಜಾರಿಗೊಳಿಸಲಾಗಿದೆ. ದೇಶದ ಪ್ರತಿಯೊಬ್ಬ ಯುವಕ, ಸಹೋದರಿ ಮತ್ತು ಮಗಳಿಗೆ, ಪ್ರಸ್ತುತ ಯುಗ, 'ಅಮೃತ ಕಾಲ'ವಾಗಿದೆ, ಈ 'ಅಮೃತ ಕಾಲ'  ನಿಮ್ಮ ಧೈರ್ಯವನ್ನು ಪ್ರದರ್ಶಿಸಲು ಮುಕ್ತ ಅವಕಾಶವನ್ನು ಒದಗಿಸುತ್ತದೆ ಎಂದು ನಾನು ಹೇಳುತ್ತೇನೆ. ಅಭಿವೃದ್ಧಿ ಹೊಂದಿದ ಭಾರತದ ರಾಜಕೀಯ ಭೂಚೌಕಟ್ಟನ್ನು ಮರುರೂಪಿಸುವಲ್ಲಿ ನೀವು ಮಹತ್ವದ ಪಾತ್ರವನ್ನು ಹೊಂದಿದ್ದೀರಿ. ನಮ್ಮ ಯುವಕರು ಮತ್ತು ಮಹಿಳೆಯರು ಮಾತ್ರ ರಾಷ್ಟ್ರ ರಾಜಕಾರಣವನ್ನು ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ದುಶ್ಚಟಗಳಿಂದ ಮುಕ್ತಗೊಳಿಸಬಲ್ಲರು. ರಾಜಕೀಯದ ಮೂಲಕ ಈ ರೋಗಗಳನ್ನು ತೊಡೆದುಹಾಕಲು ಮತ್ತು ವಿಜಯಶಾಲಿಯಾಗಿ ಹೊರಹೊಮ್ಮಲು ನಾವು ಧೈರ್ಯವನ್ನು ರೂಢಿಸಿಕೊಳ್ಳಬೇಕು.

ನನ್ನ ಕುಟುಂಬದ ಸದಸ್ಯರೇ,

ನಿನ್ನೆ ಅಯೋಧ್ಯೆಯಲ್ಲಿ, 'ರಾಮಕಾಜ್' (ರಾಮನ ಸೇವೆ) ಮೂಲಕ ರಾಷ್ಟ್ರ ನಿರ್ಮಾಣದ ಸಮಯ ಎಂದು ನಾನು ವ್ಯಕ್ತಪಡಿಸಿದೆ. ರಾಮನ ಭಕ್ತಿಯ ಮೂಲಕ ದೇಶಭಕ್ತಿಯ ಭಾವನೆಗಳನ್ನು ಬಲಪಡಿಸುವ ಅವಧಿ ಇದು. ಜಗತ್ತು ಇಂದು ಭಾರತದ ಪ್ರತಿಯೊಂದು ಹೆಜ್ಜೆ , ಕಾರ್ಯಚಟುವಿಕೆ ಮತ್ತು ಕ್ರಿಯೆಯನ್ನು ಅತಿಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ. ನಾವು ಏನನ್ನು ಸಾಧಿಸುತ್ತೇವೆ, ಎಂದು ಇಡೀ ಜಗತ್ತು ಕುತೂಹಲದಿಂದ ನಿರೀಕ್ಷಿಸುತ್ತದೆ. 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಪರಿವರ್ತಿಸುವುದು ನಮ್ಮ ಉದ್ದೇಶವಾಗಿದೆ. ಭಾರತವನ್ನು ಆರ್ಥಿಕವಾಗಿ ಸಮೃದ್ಧಿ, ಸಾಂಸ್ಕೃತಿಕವಾಗಿ ದೃಢವಾದ ಮತ್ತು ಕಾರ್ಯತಂತ್ರವಾಗಿ ಬಲಿಷ್ಠಗೊಳಿಸುವುದು ನಮ್ಮ ಗುರಿಯಾಗಿದೆ. ಇದನ್ನು ಸಾಧಿಸಲು, ಮುಂದಿನ ಐದು ವರ್ಷಗಳಲ್ಲಿ ನಾವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗುವುದು ಅನಿವಾರ್ಯವಾಗಿದೆ. ಈ ಗುರಿಯು ನಮ್ಮ ವ್ಯಾಪ್ತಿಯಲ್ಲೇ ಇದೆ. ಕಳೆದ ದಶಕದಲ್ಲಿ, ನಾವು ಹತ್ತನೇ ಅತಿದೊಡ್ಡ ಆರ್ಥಿಕತೆಯಿಂದ ಐದನೇ ಅತಿದೊಡ್ಡ ಆರ್ಥಿಕತೆಗೆ ಏರಿದ್ದೇವೆ, ಕಳೆದ ಹತ್ತು ವರ್ಷಗಳಲ್ಲಿ, ಇಡೀ ರಾಷ್ಟ್ರದ ಸಾಮೂಹಿಕ ಪ್ರಯತ್ನಗಳು ಮತ್ತು ಪ್ರೋತ್ಸಾಹದಿಂದಾಗಿ ಸುಮಾರು 25 ಕೋಟಿ ಭಾರತೀಯರು ಬಡತನದಿಂದ ಹೊರಬಂದಿದ್ದಾರೆ. ಭಾರತ, ಇಂದು, ಈ ಹಿಂದೆ ಊಹಿಸಲಾಗದ ಗುರಿಗಳನ್ನು ಮೀರಿ ಮುನ್ನಡೆದಿದೆ, ಸಾಧಿಸುತ್ತಿದೆ.

ನನ್ನ ಕುಟುಂಬದ ಸದಸ್ಯರೇ,

ಕಳೆದ 10 ವರ್ಷಗಳಲ್ಲಿ, ಭಾರತ ತನ್ನ ಕಾರ್ಯತಂತ್ರದ ಸಾಮರ್ಥ್ಯಗಳನ್ನು ಹೆಚ್ಚಿಸಲು ಹೊಸ ಕಾರ್ಯಯೋಜನೆಗಳನ್ನು ನಿಗದಿಪಡಿಸಿದೆ. ವಿಸ್ತೃತ ಅವಧಿಯವರೆಗೆ, ಬಹುಕಾಲ ಭಾರತವು ತನ್ನ ರಕ್ಷಣೆ ಮತ್ತು ಭದ್ರತಾ ಅವಶ್ಯಕತೆಗಳಿಗಾಗಿ ವಿದೇಶಿ ರಾಷ್ಟ್ರಗಳ ಮೇಲೆ ಅವಲಂಬಿತವಾಗಿತ್ತು. ಆದರೆ, ನಾವು ಭಾರತದ ಪಡೆಗಳನ್ನು ಸ್ವಾವಲಂಬಿಯನ್ನಾಗಿ ಮಾಡಲು ಶ್ರಮಿಸುವ ಮೂಲಕ ಈ ಕ್ರಿಯಾತ್ಮಕತೆಯನ್ನು ಬದಲಾಯಿಸುತ್ತಿದ್ದೇವೆ. ಅಂತಹ ನೂರಾರು ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳು ಇವೆ, ಇವುಗಳ ಆಮದನ್ನು ನಮ್ಮ ದೇಶದ ಸೈನ್ಯವು ಇಂದು ಸಂಪೂರ್ಣವಾಗಿ ನಿಲ್ಲಿಸಿದೆ. ಪ್ರಸ್ತುತ, ಡೈನಾಮಿಕ್ ರಕ್ಷಣಾ ಉದ್ಯಮವು ರಾಷ್ಟ್ರವ್ಯಾಪಿಯಾಗಿ ಹೊರಹೊಮ್ಮುತ್ತಿದೆ. ಒಂದು ಕಾಲದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತ, ಈಗ ವಿಶ್ವದ ಅತಿ ದೊಡ್ಡ ರಕ್ಷಣಾ ಸಾಮಗ್ರಿಗಳ ರಫ್ತುದಾರನಾಗುವ ಅಂಚಿನಲ್ಲಿದೆ.

ಸ್ನೇಹಿತರೇ,

ಇಂದಿನ ಭಾರತ, ಜಾಗತಿಕ ಮಿತ್ರರಾಷ್ಟ್ರವಾಗಿ, ಇಡೀ ಜಗತ್ತನ್ನು ಸಂಪರ್ಕಿಸುವಲ್ಲಿ ನಿರತವಾಗಿದೆ. ನಾವು ಪ್ರಸ್ತುತ ಜಾಗತಿಕ ಸವಾಲುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಸಮರ್ಪಿತರಾಗಿದ್ದೇವೆ. ಒಂದೆಡೆ, ನಮ್ಮ ಪ್ರಯತ್ನಗಳು ಜಗತ್ತನ್ನು ಸಂಘರ್ಷದಿಂದ ಶಾಂತಿಗೆ ಪರಿವರ್ತಿಸುವ ಕಡೆಗೆ ನಿರ್ದೇಶಿಸಲಾಗಿದೆ. ಅದೇ ಸಮಯದಲ್ಲಿ, ನಮ್ಮ ಹಿತಾಸಕ್ತಿಗಳನ್ನು ಕಾಪಾಡಲು ನಾವು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ.

ಸ್ನೇಹಿತರೇ,

ಮುಂಬರುವ 25 ವರ್ಷಗಳು ಭಾರತ ಮತ್ತು ಅದರ ಜನರಿಗೆ ಅಪಾರ ಮಹತ್ವದ್ದಾಗಿದೆ. ರಾಷ್ಟ್ರೀಯ ಹಿತಾಸಕ್ತಿಗಾಗಿ ಈ ಅಮೃತಕಾಲದ ಪ್ರತಿ ಕ್ಷಣವನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕು. ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸಲು ಕಠಿಣ ಪರಿಶ್ರಮ ಮತ್ತು ಧೈರ್ಯ ಅತ್ಯಗತ್ಯವಿದೆ.

'ಪರಾಕ್ರಮ್ ದಿವಸ್' ಪ್ರತಿ ವರ್ಷ ಇಂತಹ ಸ್ವಾವಲಂಭಿ ಭಾರತದ ನಿರ್ಣಯವನ್ನು ನಮಗೆ ನೆನಪಿಸುತ್ತದೆ. ಮತ್ತೊಮ್ಮೆ, ಇಡೀ ರಾಷ್ಟ್ರಕ್ಕೆ 'ಪರಾಕ್ರಮ್ ದಿವಸ್' ಸಂದರ್ಭದಲ್ಲಿ ನನ್ನ ಹೃತ್ಪೂರ್ವಕ ಅಭಿನಂದನೆಗಳು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸದ್ಗುಣಗಳನ್ನು ಸ್ಮರಿಸುತ್ತಾ, ನಾನು ಗೌರವಪೂರ್ವಕವಾಗಿ ನನ್ನ ಶ್ರದ್ಧಾಂಜಲಿಯನ್ನು ಅರ್ಪಿಸುತ್ತೇನೆ.    

ಏಕಕಂಠದಲ್ಲಿ ಹೇಳೋಣ, ನನ್ನ ಜೊತೆ ಸೇರಿ ;

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಎಲ್ಲರಿಗೂ, ತುಂಬ ಧನ್ಯವಾದಗಳು!

 ಹಕ್ಕು ನಿರಾಕರಣೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

****



(Release ID: 1999145) Visitor Counter : 82