ಪ್ರಧಾನ ಮಂತ್ರಿಯವರ ಕಛೇರಿ

ಹಿಂದೂಸ್ತಾನ್ ಟೈಮ್ಸ್ ನಾಯಕತ್ವ ಶೃಂಗಸಭೆ-2023 ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ


2024ರ ಸಾರ್ವತ್ರಿಕ ಚುನಾವಣಾ ಫಲಿತಾಂಶವು ಎಲ್ಲಾ ಅಡೆತಡೆಗಳನ್ನು ದಾಟಲಿದೆ

"ಸ್ವಾತಂತ್ರ್ಯಾ ಸಮಯದಲ್ಲಿ ಎದುರಾದ ಪ್ರತಿರೋಧಗಳು ಮತ್ತು ಸಂಕಷ್ಟಗಳು  ಜನಸಾಮಾನ್ಯರಲ್ಲಿ ಭಾವೋದ್ರೇಕ ಮತ್ತು ಒಗ್ಗಟ್ಟಿನ ಭಾವನೆ ತಂದಿತು ಮತ್ತು ಅನೇಕ ಅಡೆತಡೆಗಳನ್ನು ಮುರಿದುಹಾಕಿತು"

"ಚಂದ್ರಯಾನ-3ರ ಯಶಸ್ಸು ಪ್ರತಿಯೊಬ್ಬ ನಾಗರಿಕನಲ್ಲಿ ಹೆಮ್ಮೆ ಮತ್ತು ಆತ್ಮವಿಶ್ವಾಸದ ಭಾವನೆ ಹುಟ್ಟುಹಾಕಿದೆ; ಪ್ರತಿ ವಲಯದಲ್ಲಿ ಮುನ್ನಡೆಯಲು ಅವರಿಗೆ ಪ್ರೇರಣೆ ನೀಡುತ್ತಿದೆ"

"ಇಂದು ಪ್ರತಿಯೊಬ್ಬ ಭಾರತೀಯನಲ್ಲಿ ಆತ್ಮಸ್ಥೈರ್ಯ ತುಂಬಿದೆ"

"ಜನಧನ್ ಬ್ಯಾಂಕ್ ಖಾತೆಗಳು ಬಡವರ ನಡುವಿನ ಮಾನಸಿಕ ಅಡೆತಡೆಗಳನ್ನು ನಿವಾರಿಸಲು, ಅವರ ಹೆಮ್ಮೆ ಮತ್ತು ಸ್ವಾಭಿಮಾನ ಪುನರುಜ್ಜೀವನಗೊಳಿಸುವ ಮಾಧ್ಯಮವಾಗಿದೆ"

"ಸರ್ಕಾರವು ಜೀವನವನ್ನು ಪರಿವರ್ತಿಸುವ ಜತೆಗೆ, ಬಡವರಿಗೆ ಬಡತನ ಹೋಗಲಾಡಿಸಲು ಸಹಾಯ ಮಾಡಿದೆ"

"ಸಾಮಾನ್ಯ ನಾಗರಿಕರು ಇಂದು ಅಧಿಕಾರ ಮತ್ತು ಪ್ರೋತ್ಸಾಹ ಅನುಭವಿಸುತ್ತಿದ್ದಾರೆ"

"ಇಂದಿನ ಭಾರತದ ಅಭಿವೃದ್ಧಿಯ ವೇಗ ಮತ್ತು ಪ್ರಮಾಣವು ಅದರ ಯಶಸ್ಸಿನ ಸಂಕೇತವಾಗಿದೆ"

"ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿಯ ರದ್ದತಿಯು ಪ್ರಗತಿ ಮತ್ತು ಶಾಂತಿಗೆ ದಾರಿ ಮಾಡಿಕೊಟ್ಟಿದೆ"

"ಭಾರತವು ದಾಖಲೆ ಹಗರಣಗಳಿಂದ ದಾಖಲೆ ರಫ್ತಿಗೆ ಪ್ರಯಾಣ ಮುಂದುವರಿಸಿದೆ"

"ಸ್ಟಾರ್ಟಪ್‌ಗಳು, ಕ್ರೀಡೆಗಳು, ಬಾಹ್ಯಾಕಾಶ ಅಥವಾ ತಂತ್ರಜ್ಞಾನ ಸೇರಿದಂತೆ ಭಾರತದ ಅಭಿವೃದ್ಧಿ ಪಯಣದಲ್ಲಿ , ಮಧ್ಯಮ ವರ್ಗವು ವೇಗದ ಗತಿಯಲ್ಲಿ ಮುನ್ನಡೆಯುತ್ತಿದೆ"

"ನವ ಮಧ್ಯಮ ವರ್ಗವು ದೇಶದ ಬಳಕೆಯ ಬೆಳವಣಿಗೆಗೆ ವೇಗವನ್ನು ನೀಡುತ್ತಿದೆ"

"ಇಂದು, ಬಡವರಲ್ಲಿ ಬಡವರಿಂದ ಹಿಡಿದು ವಿಶ್ವದ ಶ್ರೀಮಂತರವರೆಗೆ ಎಲ್ಲರೂ, ಇದು ಭಾರತದ ಸಮಯ ಎಂದು ನಂಬಲು ಪ್ರಾರಂಭಿಸಿದ್ದಾರೆ"

Posted On: 04 NOV 2023 10:47PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಿಂದೂಸ್ತಾನ್ ಟೈಮ್ಸ್ ನಾಯಕತ್ವ ಶೃಂಗಸಭೆ-2023 ಉದ್ದೇಶಿಸಿ ಮಾತನಾಡಿದರು.

ಹಿಂದೂಸ್ತಾನ್ ಟೈಮ್ಸ್ ನಾಯಕತ್ವ ಶೃಂಗಸಭೆ-2023ಕ್ಕೆ ತಮ್ಮನ್ನು ಆಹ್ವಾನಿಸಿದ್ದಕ್ಕಾಗಿ ಎಚ್ ಟಿ ಸಮೂಹಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ಈ ನಾಯಕತ್ವ ಶೃಂಗಸಭೆಯ ವಿಷಯಗಳೊಂದಿಗೆ ಭಾರತವು ಮುಂದುವರಿಯುವ ಸಂದೇಶವನ್ನು ಎಚ್ ಟಿ ಗ್ರೂಪ್ ಸದಾ ಕಾಲ ಹೇಗೆ ಪ್ರಸಾರ ಮಾಡಿದೆ ಎಂಬುದನ್ನು ಶ್ರೀ ಮೋದಿ ಪ್ರಸ್ತಾಪಿಸಿದರು.  2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ಶೃಂಗಸಭೆಯ ವಿಷಯ ‘ಭಾರತವನ್ನು ಮರುರೂಪಿಸುವುದು ಹೇಗೆ’ ಎಂಬುದಾಗಿತ್ತು ಎಂದು ನೆನಪಿಸಿಕೊಂಡರು. ಸ್ಮರಣೀಯ ಬದಲಾವಣೆಗಳಿಂದ ಭಾರತವನ್ನು ಮರುರೂಪಿಸುವುದು ಈ ಸಮೂಹದ ಹಿನ್ನೋಟವಾಗಿತ್ತು. 2019ರಲ್ಲಿ ಇನ್ನೂ ಹೆಚ್ಚಿನ ಬಹುಮತದಿಂದ ಗೆದ್ದು ಮತ್ತೆ ಅಧಿಕಾರಕ್ಕೆ ಬಂದಾಗ ಎಚ್ ಟಿ ಸಮೂಹವು ಶೃಂಗಸಭೆಗೆ 'ಉತ್ತಮ ನಾಳೆಗಾಗಿ ಸಂವಾದ' ಎಂಬ ಥೀಮ್ ನೀಡಿತ್ತು ಎಂದು ಅವರು ನೆನಪಿಸಿಕೊಂಡರು. ಈಗ 2023ರಲ್ಲಿ ಸಾರ್ವತ್ರಿಕ ಚುನಾವಣೆ ಸಮೀಪದಲ್ಲಿರುವಾಗ, ಈ ಶೃಂಗಸಭೆಯ ಥೀಮ್ 'ಅಡೆತಡೆಗಳನ್ನು ಮುರಿಯುವುದು' ಆಗಿದೆ. ಪ್ರಸ್ತುತ ಸರ್ಕಾರವು ಎಲ್ಲಾ ದಾಖಲೆಗಳನ್ನು ಮುರಿದು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ವಿಜಯಶಾಲಿಯಾಗಲಿದೆ ಎಂಬ ಆಧಾರವಾಗಿರುವ ಸಂದೇಶ ಇದಾಗಿದೆ. 2024ರ ಸಾರ್ವತ್ರಿಕ ಚುನಾವಣಾ ಫಲಿತಾಂಶವು ಎಲ್ಲಾ ಅಡೆತಡೆಗಳನ್ನು ದಾಟಲಿದೆ ಎಂದು ಶ್ರೀ ಮೋದಿ ಹೇಳಿದರು.

‘ಭಾರತವನ್ನು ಮರುರೂಪಿಸುವುದು’ ಥೀಮ್ ನಿಂದ ಹಿಡಿದು ‘ಬಿಯಾಂಡ್ ಬ್ಯಾರಿಯರ್ಸ್’ ವರೆಗಿನ ಭಾರತದ ಪ್ರಯಾಣವು ದೇಶದ ಮುಂಬರುವ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದೆ. ಈ ಅಡಿಪಾಯದ ಮೇಲೆ ಅಭಿವೃದ್ಧಿ ಹೊಂದಿದ, ಭವ್ಯವಾದ ಮತ್ತು ಶ್ರೀಮಂತ ಭಾರತವನ್ನು ನಿರ್ಮಿಸಲಾಗುವುದು. ಭಾರತವು ದೀರ್ಘಕಾಲದಿಂದಲೂ ಬಹು ಅಡೆತಡೆಗಳನ್ನು ಎದುರಿಸುತ್ತಿದೆ. ಸುದೀರ್ಘ ಕಾಲದ ಜೀತಪದ್ಧತಿ ಮತ್ತು ದಾಳಿಗಳು ದೇಶವನ್ನು ಹಲವು ಬಂಧಗಳಲ್ಲಿ ಬಂಧಿಸಿವೆ. ಭಾರತದ ಸ್ವಾತಂತ್ರ್ಯ ಚಳವಳಿಯನ್ನು ಸ್ಮರಿಸಿದ ಶ್ರೀ ಮೋದಿ, ಆ ಸಮಯದಲ್ಲಿ ಎದುರಾದ ಸವಾಲುಗಳು ಮತ್ತು ಸಂಕಷ್ಟಗಳು ಜನಸಾಮಾನ್ಯರ ನಡುವೆ ಒಗ್ಗಟ್ಟಿನ ಭಾವೋದ್ರೇಕ ಮತ್ತು ಅನೇಕ ಅಡೆತಡೆಗಳನ್ನು ಮುರಿದುಹಾಕಿದೆ. ಸ್ವಾತಂತ್ರ್ಯಾ ನಂತರವೂ ಇದೇ ಗತಿ ಮುಂದುವರಿಯುವ ನಿರೀಕ್ಷೆ ಇದೆ. ಆದರೆ"ದುರದೃಷ್ಟವಶಾತ್, ಅದು ಸಂಭವಿಸಲಿಲ್ಲ. ನಮ್ಮ ದೇಶವು ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಬೆಳೆಯಲು ಸಾಧ್ಯವಾಗಲಿಲ್ಲ. ಸ್ವತಂತ್ರ ಭಾರತ ಎದುರಿಸುತ್ತಿರುವ ಕೆಲವು ಸಮಸ್ಯೆಗಳು ನಿಜವಾಗಿದ್ದರೆ ಇನ್ನು ಕೆಲವು ಗ್ರಹಿಸಿದ್ದು, ಮತ್ತೆ ಉಳಿದವುಗಳು ಉತ್ಪ್ರೇಕ್ಷೆಯಿಂದ ಕೂಡಿವೆ ಎಂದರು.

2014ರ ನಂತರ ಭಾರತವು ಈ ಅಡೆತಡೆಗಳನ್ನು ಮುರಿಯಲು ನಿರಂತರವಾಗಿ ಶ್ರಮಿಸುತ್ತಿದೆ. ನಾವು ಅನೇಕ ಅಡೆತಡೆಗಳನ್ನು ದಾಟಿದ್ದೇವೆ, ಈಗ ನಾವು ಅಡೆತಡೆಗಳನ್ನು ಮೀರಿ ಮಾತನಾಡುತ್ತಿದ್ದೇವೆ. "ಇಂದು ಭಾರತವು ಚಂದ್ರನ ಆ ಭಾಗವನ್ನು ತಲುಪಿದೆ, ಅಲ್ಲಿ ಯಾರೂ ಇಳಿದಿರಲಿಲ್ಲ. ಇಂದು ಭಾರತವು ಪ್ರತಿಯೊಂದು ಅಡೆತಡೆಗಳನ್ನು ಮುರಿದು ಡಿಜಿಟಲ್ ವಹಿವಾಟುಗಳಲ್ಲಿ ನಂಬರ್ 1 ಆಗಿದೆ. ಇದು ಮೊಬೈಲ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ, ಸ್ಟಾರ್ಟಪ್‌ಗಳಲ್ಲಿ ವಿಶ್ವದ ಅಗ್ರ 3 ದೇಶಗಳಲ್ಲಿ ಪ್ರಬಲವಾಗಿ ನಿಂತಿದೆ, ನುರಿತ ಜನರ ಗುಂಪನ್ನು ರೂಪಿಸುತ್ತಿದೆ. ಇಂದು ಜಿ 20 ಶೃಂಗಸಭೆಯಂತಹ ಜಾಗತಿಕ ಕಾರ್ಯಕ್ರಮಗಳಲ್ಲಿ ಭಾರತವು ತನ್ನ ಧ್ವಜವನ್ನು ಎತ್ತರಕ್ಕೆ ಹಾರಿಸಿದೆ, ಪ್ರತಿ ಅಡೆತಡೆಗಳನ್ನು ಮುರಿಯುತ್ತಿದೆ ಎಂದರು.

ಲೇಖಕ ಮತ್ತು ರಾಜಕಾರಣಿ ಅಲ್ಲಾಮಾ ಇಕ್ಬಾಲ್ ಅವರ ಗಜಲ್ 'ಸಿತಾರೋಂ ಕೆ ಆಗೇ ಜಹಾನ್ ಔರ್ ಭಿ ಹೈ' ಎಂಬ ಸಾಲನ್ನು ಉಚ್ಚರಿಸಿದ ಪ್ರಧಾನ ಮಂತ್ರಿ, ಭಾರತವು ಇನ್ನೂ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದರು.

 

ಹಿಂದಿನ ಸರ್ಕಾರಗಳ ಸಾಂದರ್ಭಿಕ ವಿಧಾನಗಳ ಬಗ್ಗೆ ಟೀಕೆ ಮತ್ತು ಅಪಹಾಸ್ಯಕ್ಕೆ ಕಾರಣವಾದ ಮನಸ್ಥಿತಿ ಮತ್ತು ನಡೆಯು ರಾಷ್ಟ್ರದ ಅಭಿವೃದ್ಧಿಗೆ ದೊಡ್ಡ ಅಡೆತಡೆ ಆಗಿತ್ತು. ಸಮಯ ಪಾಲನೆ, ಭ್ರಷ್ಟಾಚಾರ ಮತ್ತು ಸರ್ಕಾರದ ಕೆಳಮಟ್ಟದ ಪ್ರಯತ್ನಗಳನ್ನು ಎತ್ತಿ ತೋರಿಸುತ್ತಾ, ಕೆಲವು ಘಟನೆಗಳು ಮಾನಸಿಕ ಅಡೆತಡೆಗಳನ್ನು ದಾಟಲು ಇಡೀ ರಾಷ್ಟ್ರವನ್ನೇ ಪ್ರೇರೇಪಿಸುತ್ತದೆ. ಮಹಾತ್ಮ ಗಾಂಧೀಜಿ ಆರಂಭಿಸಿದ ದಂಡಿ ಮೆರವಣಿಗೆ ಹೇಗೆ ರಾಷ್ಟ್ರಕ್ಕೆ ಸ್ಫೂರ್ತಿ ನೀಡಿತು. ಅದು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟದ ಜ್ವಾಲೆಯನ್ನು ಬೆಳಗಿಸಿತು. ಚಂದ್ರಯಾನ-3ರ ಯಶಸ್ಸು ಪ್ರತಿಯೊಬ್ಬ ನಾಗರಿಕರಲ್ಲಿ ಹೆಮ್ಮೆ ಮತ್ತು ಆತ್ಮವಿಶ್ವಾಸದ ಭಾವನೆ ತುಂಬುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲೂ ಮುನ್ನಡೆಯಲು ಎಲ್ಲರನ್ನು ಪ್ರೇರೇಪಿಸುತ್ತದೆ. "ಇಂದು ಪ್ರತಿಯೊಬ್ಬ ಭಾರತೀಯನೂ ಆತ್ಮಸ್ಥೈರ್ಯದಿಂದ ತುಂಬಿ ತುಳುಕುತ್ತಿದ್ದಾನೆ." ಸ್ವಚ್ಚತೆ, ಶೌಚಾಲಯ ಮತ್ತು ನೈರ್ಮಲ್ಯ  ವಿಷಯಗಳನ್ನು ಕೆಂಪು ಕೋಟೆಯಿಂದ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಸ್ತಾಪಿಸಿದ್ದೇನೆ. ಇದು ಜನರ ಮನಸ್ಥಿತಿಯ ಬದಲಾವಣೆಗೆ ಕಾರಣವಾಯಿತು. "ಸ್ವಚ್ಛತೆ ಈಗ ಸಾರ್ವಜನಿಕ ಆಂದೋಲನವಾಗಿದೆ". ಕಳೆದ 10 ವರ್ಷಗಳಲ್ಲಿ ಖಾದಿ ಮಾರಾಟದಲ್ಲಿ 3 ಪಟ್ಟು ಹೆಚ್ಚಾಗಿದೆ ಎಂದರು.

ಜನ್ ಧನ್ ಬ್ಯಾಂಕ್ ಖಾತೆಗಳು ಬಡವರ ನಡುವಿನ ಮಾನಸಿಕ ಅಡೆತಡೆಗಳನ್ನು ನಿವಾರಿಸಲು, ಅವರ ಹೆಮ್ಮೆ ಮತ್ತು ಸ್ವಾಭಿಮಾನ ಪುನಶ್ಚೇತನಗೊಳಿಸುವ ಮಾಧ್ಯಮವಾಗಿದೆ. ಬ್ಯಾಂಕ್ ಖಾತೆಗಳನ್ನು ಶ್ರೀಮಂತರಿಗೆ ಮಾತ್ರ ಎಂದು ಪರಿಗಣಿಸುವ ನಕಾರಾತ್ಮಕ ಮನಸ್ಥಿತಿಯನ್ನು ಇದು ತೊಡೆದುಹಾಕಿದೆ. ಜನ್ ಧನ್ ಯೋಜನೆಯನ್ನು ಬಡವರ ಮನೆ ಬಾಗಿಲಿಗೆ ತರುವ ಮೂಲಕ ಅವರಿಗೆ ಬ್ಯಾಂಕ್‌ ಸೌಲಭ್ಯಗಳು ಸಿಗುವಂತೆ ಮಾಡಿದೆ. ಬಡವರ ಸಬಲೀಕರಣದ ಮೂಲವಾಗುತ್ತಿರುವ ರುಪೇ ಕಾರ್ಡ್‌ಗಳ ವ್ಯಾಪಕ ಬಳಕೆಯನ್ನು ಅವರು ಪ್ರಸ್ತಾಪಿಸಿದರು. "ಎಸಿ ಕೊಠಡಿಗಳಲ್ಲಿ ಕುಳಿತು ಸಂಖ್ಯೆಗಳು ಮತ್ತು ನಿರೂಪಣೆ ಮಾಡುವವರಿಂದ ಬಡವರ ಮಾನಸಿಕ ಸಬಲೀಕರಣವನ್ನು ಎಂದಿಗೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ". ಭಾರತದ ಗಡಿಯ ಹೊರಗಿನ ಮನಸ್ಥಿತಿಯ ಬದಲಾವಣೆಯ ಮೇಲೆ ಬೆಳಕು ಚೆಲ್ಲುವ ಮೂಲಕ, ಭಯೋತ್ಪಾದನಾ ಕೃತ್ಯಗಳ ಸಮಯದಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳುವ ಭಾರತದ ಹೆಚ್ಚುತ್ತಿರುವ ಸಾಮರ್ಥ್ಯವನ್ನು ಪ್ರಸ್ತಾಪಿಸಿದರು. ಹವಾಮಾನ ಕ್ರಮ ನಿರ್ಣಯಗಳನ್ನು ಮುನ್ನಡೆಸುವುದು ಮತ್ತು ಗಡುವಿನ ಮೊದಲು ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸುವುದು, ಕ್ರೀಡಾ ಕ್ಷೇತ್ರದಲ್ಲಿ ಭಾರತದ ಅದ್ಭುತ ಪ್ರದರ್ಶನ, ಈ ಎಲ್ಲಾ ಸಾಧನೆಗಳಿಗೆ ಮನಸ್ಥಿತಿಯ ಬದಲಾವಣೆ ಕಾರಣ ಎಂದರು.

"ಭಾರತದಲ್ಲಿ ಸಾಮರ್ಥ್ಯಗಳು ಮತ್ತು ಸಂಪನ್ಮೂಲಗಳ ಕೊರತೆಯಿಲ್ಲ". ಬಡತನದ ನಿಜವಾದ ತಡೆಗೋಡೆ ತೊಡೆದುಹಾಕುವುದು ಘೋಷಣೆಗಳ ಹೋರಾಟದಿಂದ ಸಾಧ್ಯವಿಲ್ಲ. ಆದರೆ ಪರಿಹಾರಗಳು, ನೀತಿಗಳು ಮತ್ತು ಉದ್ದೇಶಗಳೊಂದಿಗೆ ಹೋರಾಡಬೇಕು. ಬಡವರು ಸಾಮಾಜಿಕವಾಗಿ ಅಥವಾ ಆರ್ಥಿಕವಾಗಿ ಪ್ರಗತಿ ಸಾಧಿಸಲು ಸಾಧ್ಯವಾಗದ ಹಿಂದಿನ ಸರಕಾರಗಳ ಚಿಂತನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಬಡವರು ಮೂಲಭೂತ ಸೌಕರ್ಯಗಳ ರೂಪದಲ್ಲಿ ಬಡತನವನ್ನು ಜಯಿಸಲು ಸಮರ್ಥರಾಗಿದ್ದಾರೆ. ಬಡವರನ್ನು ಸಬಲೀಕರಣಗೊಳಿಸುವುದು ಕೇಂದ್ರ ಸರ್ಕಾರದ ದೊಡ್ಡ ಆದ್ಯತೆಯಾಗಿದೆ. "ಸರ್ಕಾರವು ಜೀವನವನ್ನು ಪರಿವರ್ತಿಸುವ ಜತೆಗೆ, ಬಡವರಿಗೆ ಬಡತನ ಹೋಗಲಾಡಿಸಲು ಸಹಾಯ ಮಾಡಿದೆ". ಕಳೆದ 5 ವರ್ಷಗಳಲ್ಲಿ 13 ಕೋಟಿಗೂ ಹೆಚ್ಚು ಜನರು ಬಡತನದಿಂದ ಹೊರಬಂದಿದ್ದಾರೆ. 13 ಕೋಟಿ ಜನರು ಬಡತನದ ತಡೆಗೋಡೆಯನ್ನು ಯಶಸ್ವಿಯಾಗಿ ಮುರಿದು ದೇಶದಲ್ಲಿ ನವ ಮಧ್ಯಮ ವರ್ಗದ ಭಾಗವಾಗಿದ್ದಾರೆ ಎಂದು ಪ್ರಧಾನಿ ಹೇಳಿದರು.

ಕ್ರೀಡೆ, ವಿಜ್ಞಾನ, ರಾಜಕೀಯ ಅಥವಾ ಪದ್ಮ ಪ್ರಶಸ್ತಿ ನೀಡುವ ವಿಷಯದಲ್ಲಿ ನಡೆಯುತ್ತಿದ್ದ ಸ್ವಜನಪಕ್ಷಪಾತಗಳ ಬಗ್ಗೆ ಮಾತನಾಡಿದ ಮೋದಿ, ಸಾಧಕರಾದ ಸಾಮಾನ್ಯ ಜನರಿಗೆ ಇವು ಸಿಗುತ್ತಿರಲಿಲ್ಲ, ಕೆಲವೇ ವಲಯಗಳ ಪ್ರತಿಷ್ಠಿತರಿಗೆ ಮಾತ್ರ ಇವು ಲಭ್ಯವಾಗುತ್ತಿದ್ದವು. ಆದರೆ ಇಂದು ಸಾಮಾನ್ಯ ನಾಗರಿಕರು ಅಧಿಕಾರ ಮತ್ತು ಉತ್ತೇಜನ ಅನುಭವಿಸುತ್ತಿದ್ದಾರೆ. ಸರ್ಕಾರದ ಕಾರ್ಯವಿಧಾನದಲ್ಲಿನ ಪರಿವರ್ತನೆಗೆ ಮನ್ನಣೆ ನೀಡಿದ್ದಾರೆ. "ನಿನ್ನೆಯವರೆಗೆ ಬೆಳಕಿಗೆ ಬಾರದ ವೀರರು ಇಂದು ದೇಶದ ನಿಜವಾದ ವೀರರಾಗಿದ್ದಾರೆ" ಎಂದರು.

ಆಧುನಿಕ ಮೂಲಸೌಕರ್ಯಗಳ ತಡೆಗೋಡೆಗಳನ್ನು ನಿಭಾಯಿಸುತ್ತಿರುವ ಭಾರತದ ಬಗ್ಗೆ ಗಮನ ಸೆಳೆದ ಪ್ರಧಾನಿ, ವಿಶ್ವದ ಅತಿದೊಡ್ಡ ಮೂಲಸೌಕರ್ಯ ಯೋಜನೆಗಳಿಗೆ  ಚಾಲನೆ ನೀಡಲಾಗಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಭಾರತದ ವೇಗ ಮತ್ತು ಪ್ರಮಾಣವನ್ನು ಎತ್ತಿ ತೋರಿಸಿದ ಅವರು, 2013-14ರಲ್ಲಿ 12 ಕಿ.ಮೀ.ನಿಂದ 2022-23ರಲ್ಲಿ 30 ಕಿ.ಮೀ.ಗೆ ಹೆಚ್ಚಿದ ಹೆದ್ದಾರಿ ನಿರ್ಮಾಣ, 2014ರಲ್ಲಿ 5 ನಗರಗಳಿಗೆ ಸೀಮಿತವಾಗಿದ್ದ ಮೆಟ್ರೋ ಸಂಪರ್ಕವನ್ನು 2023ರಲ್ಲಿ 20 ನಗರಗಳಿಗೆ ವಿಸ್ತರಿಸಲಾಗಿದೆ.  2014ರಲ್ಲಿ 70 ಇದ್ದ ವಿಮಾನ ನಿಲ್ದಾಣಗಳ ಸಂಖ್ಯೆ ಇಂದು ಸುಮಾರು 150ಕ್ಕೆ ಏರಿಕೆ ಕಂಡಿವೆ. 2014ರಲ್ಲಿ 380 ವೈದ್ಯಕೀಯ ಕಾಲೇಜುಗಳು ಇದ್ದವು. ಇಂದು ಅದು 700ಕ್ಕೆ ಏರಿಕೆ ಕಂಡಿದೆ. 2023ರಲ್ಲಿ ಗ್ರಾಮ ಪಂಚಾಯಿತಿಗಳಿಗೆ ಸಂಪರ್ಕ ಕಲ್ಪಿಸಲು ಆಪ್ಟಿಕಲ್ ಫೈಬರ್ 350 ಕಿ.ಮೀ. ಇತ್ತು. ಅದೀಗ 6 ಲಕ್ಷ ಕಿ.ಮೀ.ಗೆ ವಿಸ್ತರಣೆ ಆಗಿದೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿ  2014ರಲ್ಲಿ ಇದ್ದ 4 ಲಕ್ಷ ಕಿ.ಮೀ ರಸ್ತೆ ನಿರ್ಮಾಣವನ್ನು ಶೇಕಡ 55ರಿಂದ 99ರಷ್ಟು ಹಳ್ಳಿಗಳನ್ನು ಸಂಪರ್ಕಿಸಲಾಗಿದೆ. ಸ್ವಾತಂತ್ರ್ಯದ ನಂತರ ಕೇವಲ 20,000 ಕಿಲೋಮೀಟರ್ ರೈಲು ಮಾರ್ಗಗಳನ್ನು ವಿದ್ಯುದೀಕರಿಸಲಾಗಿದೆ. ಆದರೆ ಕಳೆದ 10 ವರ್ಷಗಳಲ್ಲಿ ಸುಮಾರು 40,000 ಕಿಮೀ ರೈಲು ಮಾರ್ಗಗಳನ್ನು ವಿದ್ಯುದೀಕರಿಸಲಾಗಿದೆ. “ಇದು ಇಂದಿನ ಭಾರತದ ಅಭಿವೃದ್ಧಿಯ ವೇಗ ಮತ್ತು ಪ್ರಮಾಣವಾಗಿದೆ. ಇದು ಭಾರತದ ಯಶಸ್ಸಿನ ಸಂಕೇತವಾಗಿದೆ ಎಂದು ಅವರು ಹೇಳಿದರು.

ಕಳೆದ ಕೆಲವು ವರ್ಷಗಳಲ್ಲಿ ಭಾರತವು ಅನೇಕ ಗ್ರಹಿಸಿದ ಅಡೆತಡೆಗಳಿಂದ ಹೊರಬಂದಿದೆ. ನಮ್ಮ ನೀತಿ ನಿರೂಪಕರು ಮತ್ತು ರಾಜಕೀಯ ತಜ್ಞರ ಉತ್ತಮ ಅರ್ಥಶಾಸ್ತ್ರವು ಉತ್ತಮ ರಾಜಕೀಯವಾಗಿಲ್ಲ. ನಮ್ಮ ದೇಶವು ಎರಡೂ ರಂಗಗಳಲ್ಲಿ ರಾಜಕೀಯ ಮತ್ತು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದ ಕಾರಣ ಅನೇಕ ಸರ್ಕಾರಗಳು ಇದನ್ನು ನಿಜವೆಂದು ಒಪ್ಪಿಕೊಂಡಿವೆ. ಆದರೆ, ನಾವು ಉತ್ತಮ ಆರ್ಥಿಕತೆ ಮತ್ತು ಉತ್ತಮ ರಾಜಕೀಯವನ್ನು ಒಟ್ಟಿಗೆ ತಂದಿದ್ದೇವೆ. ಭಾರತದ ಆರ್ಥಿಕ ನೀತಿಗಳು ದೇಶದಲ್ಲಿ ಪ್ರಗತಿಯ ಹೊಸ ಮಾರ್ಗಗಳನ್ನು ತೆರೆದಿವೆ. ಬ್ಯಾಂಕಿಂಗ್ ಬಿಕ್ಕಟ್ಟು, ಜಿಎಸ್‌ಟಿ ಅನುಷ್ಠಾನ ಮತ್ತು ಕೋವಿಡ್ ಸಾಂಕ್ರಾಮಿಕವನ್ನು ಪರಿಹರಿಸಲು ಪರಿಹಾರಗಳ ಅಗತ್ಯವಿರುವ ಸಮಯದಲ್ಲಿ ಜನಸಾಮಾನ್ಯರಿಗೆ ದೀರ್ಘಾವಧಿಯ ಪ್ರಯೋಜನಗಳನ್ನು ನೀಡುವ ನೀತಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.

ಪ್ರಧಾನ ಮಂತ್ರಿ ಅವರು ಇತ್ತೀಚೆಗೆ ಅಂಗೀಕರಿಸಿದ ನಾರಿ ಶಕ್ತಿ ವಂದನ್ ಅಧಿನಿಯಮವು ಗ್ರಹಿಸಿದ ತಡೆಗೋಡೆಗೆ ಮತ್ತೊಂದು ಉದಾಹರಣೆಯಾಗಿದೆ. ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಮಸೂದೆ, ಅದು ಎಂದಿಗೂ ಅಂಗೀಕಾರವಾಗುವುದಿಲ್ಲ ಎಂಬ ಭಾವನೆ ಇತ್ತು ಎಂದರು.

ಹಿಂದಿನ ಸರ್ಕಾರಗಳು ರಾಜಕೀಯ ಲಾಭಕ್ಕಾಗಿ ಹಲವಾರು ಸಮಸ್ಯೆಗಳನ್ನು ಉತ್ಪ್ರೇಕ್ಷೆಗೊಳಿಸಿವೆ. ಜಮ್ಮು-ಕಾಶ್ಮೀರದಲ್ಲಿನ 370ನೇ ವಿಧಿ ತೊಡೆದುಹಾಕಿದ್ದು ಅಂತಹ ಒಂದು ಉದಾಹರಣೆಯಾಗಿದೆ. ಈ ಹಿಂದೆ, ಅದನ್ನು ಹಿಂತೆಗೆದುಕೊಳ್ಳಲಾಗದು ಎಂದು ಎಲ್ಲರೂ ನಂಬುವಂತೆ ಮಾನಸಿಕ ಒತ್ತಡ ಸೃಷ್ಟಿಸಲಾಯಿತು. ಅದರ ರದ್ದತಿ ಪ್ರಗತಿ ಮತ್ತು ಶಾಂತಿಗೆ ದಾರಿ ಮಾಡಿಕೊಟ್ಟಿದೆ. “ಲಾಲ್ ಚೌಕ್‌ನ ಚಿತ್ರಗಳು ಜಮ್ಮು-ಕಾಶ್ಮೀರ ಹೇಗೆ ಬದಲಾಗುತ್ತಿದೆ ಎಂಬುದನ್ನು ತೋರಿಸಿವೆ. ಇಂದು ಕೇಂದ್ರಾಡಳಿತ ಪ್ರದೇಶದಲ್ಲಿ ಭಯೋತ್ಪಾದನೆ ಅಂತ್ಯವಾಗುತ್ತಿದ್ದು, ಪ್ರವಾಸೋದ್ಯಮ ನಿರಂತರವಾಗಿ ಬೆಳೆಯುತ್ತಿದೆ. ಜಮ್ಮು-ಕಾಶ್ಮೀರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಾವು ಬದ್ಧರಾಗಿದ್ದೇವೆ ಎಂದರು.

ಮಾಧ್ಯಮ ಬಂಧುಗಳ ಗಣ್ಯರ ಉಪಸ್ಥಿತಿಯನ್ನು ಗಮನಿಸಿದ ಪ್ರಧಾನ ಮಂತ್ರಿ, ಬ್ರೇಕಿಂಗ್ ನ್ಯೂಸ್‌ನ ಪ್ರಸ್ತುತತೆ ಮತ್ತು 2014ರಿಂದ ಅದರ ರೂಪಾಂತರದ ಬಗ್ಗೆ ಬೆಳಕು ಚೆಲ್ಲಿದರು. ರೇಟಿಂಗ್ ಏಜೆನ್ಸಿಗಳ ಮೂಲಕ 2013ರ ಅವಧಿಯಲ್ಲಿ ಭಾರತದ ಜಿಡಿಪಿ ಬೆಳವಣಿಗೆಯ ದರ ಇಳಿಮುಖವಾಗಿತ್ತು. ಅದು ನಂತರ ಪರಿಷ್ಕರಣೆಗೆ ಒಳಪಟ್ಟಿತು ಎಂದು ನೆನಪಿಸಿಕೊಂಡ ಪ್ರಧಾನ ಮಂತ್ರಿ. ಇಂದು ಭಾರತದ ಬೆಳವಣಿಗೆಯ ಮುನ್ಸೂಚನೆಯು ಮೇಲ್ಮುಖವಾದ ಪರಿಷ್ಕರಣೆಗಳಿಗೆ ಸಾಕ್ಷಿಯಾಗುತ್ತಿದೆ. 2013ರಲ್ಲಿ ಬ್ಯಾಂಕ್‌ಗಳ ದುರ್ಬಲ ಸ್ಥಿತಿ ಇತ್ತು. ಆದರೆ 2023ರಲ್ಲಿ ಭಾರತೀಯ ಬ್ಯಾಂಕ್‌ಗಳು ತಮ್ಮ ಅತ್ಯುತ್ತಮ ಲಾಭ ದಾಖಲಿಸಿವೆ. 2013ರಲ್ಲಿ ಚಾಪರ್ ಹಗರಣ ಪ್ರಸ್ತಾಪಿಸಿದ ಅವರು, 2013-14ರಿಂದ ಭಾರತದ ರಕ್ಷಣಾ ರಫ್ತುಗಳು ದಾಖಲೆಯ 20  ಪಟ್ಟು ಹೆಚ್ಚಾಗಿದೆ.  "ಭಾರತವು ದಾಖಲೆ ಹಗರಣಗಳಿಂದ ದಾಖಲೆ ಪ್ರಮಾಣದ ರಫ್ತಿಗೆ ಪ್ರಯಾಣ ಬೆಳಸಿದೆ" ಎಂದರು.

 

2013ರಲ್ಲಿ ಮಧ್ಯಮ ವರ್ಗದ ಮೇಲೆ ಕಠಿಣ ಆರ್ಥಿಕ ಪರಿಸ್ಥಿತಿಗಳು ಹಾನಿ ಉಂಟು ಮಾಡುವ ಬಗ್ಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ನೀಡಿದ ಪ್ರಕಟಣೆಗಳ ಋಣಾತ್ಮಕ ಶೀರ್ಷಿಕೆಗಳನ್ನು ಅವರು ಪ್ರಸ್ತಾಪಿಸಿದರು. ಆದರೆ ಇಂದು ಮಧ್ಯಮ ವರ್ಗವು ಭಾರತದ ಅಭಿವೃದ್ಧಿ ಪಯಣದಲ್ಲಿ ತ್ವರಿತ ಗತಿಯಲ್ಲಿ ಮುನ್ನಡೆಯುತ್ತಿದೆ. ಅದು ಸ್ಟಾರ್ಟಪ್‌ಗಳು, ಕ್ರೀಡೆಗಳು, ಬಾಹ್ಯಾಕಾಶ ಅಥವಾ ತಂತ್ರಜ್ಞಾನದವರೆಗೆ ಮುಂದುವರೆದಿದೆ. ಅವರ ಆದಾಯವೂ ಹೆಚ್ಚಿದೆ. 2023ರಲ್ಲಿ 7.5 ಕೋಟಿಗೂ ಹೆಚ್ಚು ಮಂದಿ ಆದಾಯ ತೆರಿಗೆ ಸಲ್ಲಿಸಿದ್ದು, ಅದು 2013-14ರಲ್ಲಿ 4 ಕೋಟಿ ಇತ್ತು. 2014ರಲ್ಲಿ 4.5 ಲಕ್ಷಕ್ಕಿಂತ ಕಡಿಮೆ ಇದ್ದ ಸರಾಸರಿ ಆದಾಯ 2023ರಲ್ಲಿ 13 ಲಕ್ಷಕ್ಕೆ ಏರಿಕೆಯಾಗಿದ್ದು, ಇದರ ಪರಿಣಾಮವಾಗಿ ಲಕ್ಷಗಟ್ಟಲೆ ಜನರು ಕಡಿಮೆ ಆದಾಯದ ಗುಂಪುಗಳಿಂದ ಹೆಚ್ಚಿನ ಆದಾಯದತ್ತ ಸಾಗುತ್ತಿದ್ದಾರೆ ಎಂಬುದು ತೆರಿಗೆ ಮಾಹಿತಿಗೆ ಸಂಬಂಧಿಸಿದ ಅಧ್ಯಯನ ತೋರಿಸುತ್ತಿದೆ. ರಾಷ್ಟ್ರೀಯ ದೈನಿಕದಲ್ಲಿ ಪ್ರಕಟವಾದ ಆರ್ಥಿಕ ವರದಿಯ ಕುತೂಹಲಕಾರಿ ಸಂಗತಿ ಉಲ್ಲೇಖಿಸಿದ ಪ್ರಧಾನಿ, 2011-12ರಲ್ಲಿ 5.5 ಲಕ್ಷದಿಂದ 25 ಲಕ್ಷದವರೆಗಿನ ವೇತನ ಶ್ರೇಣಿಯಲ್ಲಿ ಗಳಿಸುವವರ ಒಟ್ಟು ಆದಾಯವನ್ನು ಸೇರಿಸಿದರೆ, ಈ ಅಂಕಿ ಅಂಶವು ಸುಮಾರು 3.25 ಲಕ್ಷ ಕೋಟಿ ರೂ. ಇದೆ. ಆದರೆ ಇದು 2021ರ ವೇಳೆಗೆ 14.5 ಲಕ್ಷ ಕೋಟಿಗೆ ಏರಿಕೆ ಕಂಡಿದೆ. ಇದು 5 ಪಟ್ಟು ಹೆಚ್ಚಾಗಿದೆ. ಅಂಕಿಅಂಶಗಳು ಸಂಬಳದ ಆದಾಯದ ವಿಶ್ಲೇಷಣೆಯನ್ನು ಆಧರಿಸಿವೆಯೇ ಹೊರತು ಬೇರೆ ಯಾವುದೇ ಮೂಲವಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಈ ಬೃಹತ್ ಆರ್ಥಿಕ ಚಕ್ರದ 2 ಪ್ರಮುಖ ಅಂಶಗಳ ಆಧಾರವಾಗಿ ಬೆಳೆಯುತ್ತಿರುವ ಮಧ್ಯಮ ವರ್ಗದ ಬಡತನ ಇಳಿಮುಖವಾಗುತ್ತಿದೆ. ಬಡತನದಿಂದ ಹೊರಬರುತ್ತಿರುವ ನವ ಮಧ್ಯಮ ವರ್ಗದವರು ದೇಶದ ಬಳಕೆ ಬೆಳವಣಿಗೆಗೆ ವೇಗ ನೀಡುತ್ತಿದ್ದಾರೆ ಎಂದರು. ಮಧ್ಯಮ ವರ್ಗವು ಈ ಬೇಡಿಕೆಯನ್ನು ಪೂರೈಸುವ ಜವಾಬ್ದಾರಿ ಹೊರುವ ಮೂಲಕ ತನ್ನ ಆದಾಯವನ್ನು ಹೆಚ್ಚಿಸಿಕೊಂಡಿದೆ. ಅಂದರೆ ಬಡತನದ ಪ್ರಮಾಣವು ಕಡಿಮೆಯಾಗುತ್ತಿರುವುದು ಮಧ್ಯಮ ವರ್ಗದವರಿಗೂ ಲಾಭದಾಯಕವಾಗಿದೆ. ಈ ಜನರ ಆಕಾಂಕ್ಷೆ ಮತ್ತು ಇಚ್ಛಾಶಕ್ತಿಯೇ ನಮ್ಮ ದೇಶದ ಅಭಿವೃದ್ಧಿಗೆ ಶಕ್ತಿ ನೀಡುತ್ತಿದೆ ಎಂದರು. ಅವರ ಶಕ್ತಿ ಇಂದು ಭಾರತವನ್ನು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿ ಮಾಡಿದೆ. ಭಾರತವು ಶೀಘ್ರದಲ್ಲೇ ವಿಶ್ವದ 3 ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಪ್ರಧಾನಿ ಖಚಿತಪಡಿಸಿದರು.

ಅಮೃತ ಕಾಲದಲ್ಲಿರುವ ಭಾರತವು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿ ಪೂರೈಸಲು ಕೆಲಸ ಮಾಡುತ್ತಿದೆ. ಭಾರತವು ಎಲ್ಲಾ ಅಡೆತಡೆಗಳನ್ನು ಯಶಸ್ವಿಯಾಗಿ ನಿವಾರಿಸುತ್ತದೆ. "ಇಂದು, ಬಡವರಲ್ಲಿ ಬಡವರಿಂದ ಹಿಡಿದು ವಿಶ್ವದ ಶ್ರೀಮಂತರವರೆಗೆ, ಅವರೆಲ್ಲರೂ ಇದು ಭಾರತದ ಸಮಯ ಎಂದು ನಂಬಲು ಪ್ರಾರಂಭಿಸಿದ್ದಾರೆ". ಪ್ರತಿಯೊಬ್ಬ ಭಾರತೀಯನ ದೊಡ್ಡ ಶಕ್ತಿ ಎಂದರೆ ಆತ್ಮಸ್ಥೈರ್ಯ. "ಅದರ ಶಕ್ತಿಯಿಂದ, ನಾವು ಯಾವುದೇ ತಡೆಗೋಡೆಗಳನ್ನು ದಾಟಬಹುದು". 2047ರಲ್ಲಿ ನಡೆಯಲಿರುವ ಹಿಂದೂಸ್ತಾನ್ ಟೈಮ್ಸ್ ನಾಯಕತ್ವ ಶೃಂಗಸಭೆಯು - ಅಭಿವೃದ್ಧಿ ಹೊಂದಿದ ರಾಷ್ಟ್ರ, ಮುಂದೇನು? ಎಂಬ ಥೀಮ್ ಎಂಬುದು ಆಗಿರಲಿದೆ ಎಂದು ನಾನು ನಂಬುತ್ತೇನೆ ಎಂದು ಪ್ರಧಾನ ಮಂತ್ರಿ ತಮ್ಮ ಭಾಷಣ ಮುಕ್ತಾಯಗೊಳಿಸಿದರು.

 

***



(Release ID: 1975065) Visitor Counter : 69