ಉಪರಾಷ್ಟ್ರಪತಿಗಳ ಕಾರ್ಯಾಲಯ

"ಚಂದ್ರಯಾನ-3ರ ಯಶಸ್ವೀ ಉಡಾವಣೆಯ ಭಾರತದ ಅದ್ಭುತ ಬಾಹ್ಯಾಕಾಶ ಪ್ರಯಾಣ" ಕುರಿತ ಚರ್ಚಾಕೂಟ ಉದ್ದೇಶಿಸಿ ಉಪರಾಷ್ಟ್ರಪತಿ,  ರಾಜ್ಯಸಭೆ ಸಭಾಪತಿ ಭಾಷಣ

Posted On: 20 SEP 2023 1:41PM by PIB Bengaluru

ಗೌರವಾನ್ವಿತ ಸದಸ್ಯರೆ,

ನಮ್ಮ ಬಾಹ್ಯಾಕಾಶ ವಿಜ್ಞಾನಿಗಳ ಅದ್ಭುತ ಸಾಧನೆಗಳನ್ನು ಸ್ಮರಿಸಲು ನಾವು ಬಾಹ್ಯಾಕಾಶ ಅನ್ವೇಷಣೆಯಲ್ಲಿ ಭಾರತದ ಸಾಧನೆಗಳ ಕುರಿತು ಚರ್ಚೆ ನಡೆಸುತ್ತಿದ್ದೇವೆ ಎಂಬುದು ನನಗೆ ಅಪಾರ ಹೆಮ್ಮೆ ನೀಡುತ್ತಿದೆ. ನಮ್ಮ ಬಾಹ್ಯಾಕಾಶ ಕಾರ್ಯಕ್ರಮದ ಆರಂಭದಿಂದಲೂ, ನಾವು ಬಾಹ್ಯಾಕಾಶ ಅನ್ವೇಷಣೆಯ ಗಡಿಗಳನ್ನು ಮತ್ತು ಈ ಕ್ಷೇತ್ರದಲ್ಲಿನ ನಮ್ಮ ಸಾಧನೆಗಳನ್ನು ಸತತವಾಗಿ ಮುಂದುವರಿಸುತ್ತಾ ಬಂದಿದ್ದೇವೆ. ಇವು ರಾಷ್ಟ್ರವನ್ನು ಜಾಗತಿಕ ಪ್ರಧಾನ ವೇದಿಕೆಗೆ ತಂದು ನಿಲ್ಲಿಸಿದೆ. ಚಂದ್ರಯಾನ ಕಾರ್ಯಕ್ರಮಗಳಿಂದ ಹಿಡಿದು ಚಂದ್ರನವರೆಗೆ, ಚಂದ್ರ ಕಕ್ಷೆ ಕಾರ್ಯಕ್ರಮ (ಮಂಗಳಯಾನ) ಮತ್ತು ಆದಿತ್ಯ ಎಲ್‌ಎಲ್‌ನ ಸೌರ ಪರಿಶೋಧನೆಯಲ್ಲಿ ಭಾರತವು ಆಗಸವೇ ಮಿತಿ ಅಲ್ಲ ಎಂಬುದನ್ನು ತೋರಿಸಿದೆ, ನಮ್ಮ ಅನ್ವೇಷಣೆಯ ಈ ಎಲ್ಲಾ ಕಾರ್ಯಕ್ರಮಗಳು ಕೇವಲ ಆರಂಭವಾಗಿವೆ.

ಸುಮಾರು 6 ದಶಕಗಳ ಅವಧಿಯಲ್ಲಿ, ಭಾರತದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ದೇಶವು ವಿದೇಶಿ ಉಡಾವಣಾ ವಾಹನಗಳನ್ನು ಅವಲಂಬಿಸಿತ್ತು. ಆದರೆ ಅದೀಗ, ತನ್ನ ಸ್ಥಳೀಯ ಉಡಾವಣಾ ವಾಹನಗಳನ್ನು ತಯಾರಿಸುವ ಸಾಮರ್ಥ್ಯಗಳೊಂದಿಗೆ ಸಂಪೂರ್ಣ ಸ್ವಾವಲಂಬಿಯಾಗಿ ವಿಕಸನಗೊಂಡಿದೆ. ಗಮನಾರ್ಹವಾಗಿ, ಭಾರತವು ತನ್ನದೇ ಆದ ಉಪಗ್ರಹಗಳನ್ನು ಉಡಾವಣೆ ಮಾಡುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿದೆ. ಜತೆಗೆ, ಇತರೆ ದೇಶಗಳಿಗೆ ಉಪಗ್ರಹಗಳನ್ನು ಉಡಾವಣೆ ಮಾಡಲು ತನ್ನ ಸೇವೆಗಳನ್ನು ಒದಗಿಸುವುದನ್ನು ವಿಸ್ತರಿಸಿದೆ. 2018 ಜನವರಿಯಿಂದ 2022 ನವೆಂಬರ್ ವರೆಗೆ ಇಸ್ರೋ, ವಿವಿಧ ದೇಶಗಳ ಒಟ್ಟು 177 ವಿದೇಶಿ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಇಲ್ಲಿಯವರೆಗೆ ನಾವು 424 ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಿದ್ದೇವೆ. ಅದರಲ್ಲಿ 90%ಗಿಂತ ಹೆಚ್ಚು (389) ಕಳೆದ 9 ವರ್ಷಗಳಲ್ಲಿ ಉಡಾವಣೆಯಾಗಿವೆ. ಅಮೆರಿಕ(231), ಯುನೈಟೆಡ್ ಕಿಂಗ್ ಡಂ(86) ಮತ್ತು ಸಿಂಗಾಪುರ(20) ಇದರಲ್ಲಿ ಸೇರಿವೆ. ಈ ವಲಯದಲ್ಲಿ ಭಾರತವು ಹೊಂದಿರುವ ಅಂತಾರಾಷ್ಟ್ರೀಯ ಸಹಕಾರ ಒಪ್ಪಂದಲ್ಲಿ ಈ ಮೂರು ರಾಷ್ಟ್ರಗಳು ಫಲಾನುಭವಿಗಳಾಗಿವೆ.

ಸಂವಹನ ಮೂಲಸೌಕರ್ಯವನ್ನು ಹೆಚ್ಚಿಸುವ ಮೂಲಕ ದೂರಸಂವೇದಿ ಮತ್ತು ಹವಾಮಾನ ಮುನ್ಸೂಚನೆಯನ್ನು ಸಕ್ರಿಯಗೊಳಿಸುವವರೆಗೆ ನಮ್ಮ ಬಾಹ್ಯಾಕಾಶ ಪ್ರಯತ್ನಗಳ ಮೂಲಕ ನಮ್ಮ ದೇಶದ ಅಭಿವೃದ್ಧಿಯ ಅಗತ್ಯಗಳನ್ನು ಶ್ರದ್ಧೆಯಿಂದ ಪೂರೈಸುತ್ತಿದ್ದೇವೆ. ನಾವು ಈಗ ಗ್ರಹಗಳ ಅನ್ವೇಷಣೆ ಮತ್ತು ಆಳವಾದ ಬಾಹ್ಯಾಕಾಶ ಕಾರ್ಯಾಚರಣೆಗಳ ಗುರುತಿಸಲಾಗದ ಕ್ಷೇತ್ರಗಳತ್ತ ನಮ್ಮ ಗಮನವನ್ನು ಕೇಂದ್ರೀಕರಿಸಿರುವುದು ಸಹಜ.

ಇತ್ತೀಚಿನ ಯಶಸ್ವಿ ಚಂದ್ರಯಾನ-3 ಮಿಷನ್‌ನೊಂದಿಗೆ, ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಬಾಹ್ಯಾಕಾಶ ಪರಿಶೋಧನೆಯ ವಾರ್ಷಿಕಗಳಲ್ಲಿ ತನ್ನ ಹೆಸರನ್ನು ಕೆತ್ತಿದೆ. ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯನ್ನು ಮೃದುವಾಗಿ ಇಳಿಸಿದ ಇತಿಹಾಸ ಹೊಂದಿರುವ ದೇಶಗಳಲ್ಲಿ ಭಾರತವು 4ನೇ ದೇಶವಾಗಿದೆ. ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಮೊದಲ ದೇಶವಾಗಿದೆ.

ಪ್ರಚಂಡ ದೃಢತೆ ತೋರುವ ಮತ್ತು ವೈಫಲ್ಯಗಳನ್ನು ಭವಿಷ್ಯದ ಯಶಸ್ಸಿನ ಮೆಟ್ಟಿಲುಗಳಾಗಿ ಪರಿವರ್ತಿಸುವ ಮೂಲಕ ಇಸ್ರೋ, ಹಿಂದಿನ ಚಂದ್ರಯಾನ 2 ಮಿಷನ್‌ನಿಂದ ಸರಿಯಾದ ಪಾಠಗಳನ್ನು ಕಲಿತಿದೆ. ಪಶ್ಚಿಮ ಬಂಗಾಳ ರಾಜ್ಯದ ಗವರ್ನರ್ ಆಗಿ ನಾನು 2019 ಸೆಪ್ಟೆಂಬರ್ 7ರಂದು ಕೋಲ್ಕತ್ತಾದ ಸೈನ್ಸ್ ಸಿಟಿಯಲ್ಲಿ ಯುವಕರು ಮತ್ತು ಯುವತಿಯರ ಗುಂಪಿನೊಂದಿಗೆ ಇದ್ದೆ. ಚಂದ್ರಯಾನ 2 ಕಾರ್ಯಕ್ರಮ 100% ಯಶಸ್ವಿಯಾಗದಿದ್ದರೂ ದೊಡ್ಡ ಯಶಸ್ಸು ಎಂದು ನಾನು ಕರೆದಿದ್ದೆ. ಈ ಮಿಷನ್‌ನಿಂದ ನಾವು ಕಲಿತ ಪಾಠಗಳು ಚಂದ್ರಯಾನ-3ರಲ್ಲಿ ಅಂತಿಮ ಯಶಸ್ಸು ನೋಡಲು ನಮಗೆ ಸಹಾಯ ಮಾಡಿತು.

ಈ ಸಾಧನೆಯೊಂದಿಗೆ, ಭಾರತವು ಈಗ ಆರ್ಟೆಮಿಸ್ ಅಕಾರ್ಡ್ಸ್‌ನ ಸದಸ್ಯನಾಗಿದೆ. 2025ರ ವೇಳೆಗೆ ಮಾನವರನ್ನು ಚಂದ್ರನ ಮೇಲೆ ಇರಿಸಲು, ತರುವಾಯ ನಮ್ಮ ಸೌರವ್ಯೂಹದ ವಿಶಾಲ ಮಂಡಲದಲ್ಲಿ ಮಾನವ ಬಾಹ್ಯಾಕಾಶ ಪರಿಶೋಧನೆಯನ್ನು ಮುನ್ನಡೆಸಲು ಅಮೆರಿಕ ನೇತೃತ್ವದ ಬಹುಪಕ್ಷೀಯ ಉಪಕ್ರಮವಾಗಿದೆ.

ನಮ್ಮ ಸಾಧನೆಗಳು ಚಂದ್ರನ ಎಲ್ಲೆ ಮೀರಿ ತಲುಪುತ್ತವೆ. ಮಂಗಳಯಾನ ಎಂದು ಅನಧಿಕೃತವಾಗಿ ಕರೆಯಲ್ಪಡುವ ಭಾರತದ ಮಾರ್ಸ್ ಆರ್ಬಿಟರ್ ಮಿಷನ್, ನಮ್ಮ ಮೊದಲ ಪ್ರಯತ್ನದಲ್ಲಿ ಕೆಂಪು ಗ್ರಹವನ್ನು ತಲುಪುವ ನಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿತು. ಮಂಗಳಯಾನ ಬಾಹ್ಯಾಕಾಶ ನೌಕೆಯು 2014 ಸೆಪ್ಟೆಂಬರ್ 23ರಂದು ಮಂಗಳನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿತು, ಇಸ್ರೋವನ್ನು ಮೊದಲ ಏಷ್ಯಾ ಖಂಡದ ಸಂಸ್ಥೆಯಾಗಿ ಮತ್ತು ಭಾರತವನ್ನು ವಿಶ್ವದ 4ನೇ ದೇಶವನ್ನಾಗಿ ಮಾಡಿತು. ಇದು ಸರಿಸಾಟಿಯಿಲ್ಲದ ವೆಚ್ಚ-ಪರಿಣಾಮಕಾರಿ ಕ್ರಮಗಳೊಂದಿಗೆ ಈ ಸಾಧನೆಯನ್ನು ಸಾಧಿಸಿತು.

ನಾವು ಚಂದ್ರಯಾನ-3 ಮಿಷನ್‌ ಸಾಧನೆಗಳನ್ನು ಆಚರಿಸುತ್ತಿರುವಂತೆಯೇ, ಇಸ್ರೋ ಮತ್ತೊಂದು ಮಹತ್ವಾಕಾಂಕ್ಷೆಯ ಪ್ರಯತ್ನವನ್ನು ಅನಾವರಣಗೊಳಿಸಿತು. ಅದೇ ಆದಿತ್ಯ ಎಲ್1 ಮಿಷನ್. ಕಳೆದ ವಾರವಷ್ಟೇ ಪ್ರಾರಂಭವಾದ ಈ ಮಿಷನ್ ಭೂಮಿಯಿಂದ ಸುಮಾರು 1.5 ದಶಲಕ್ಷ ಕಿಲೋಮೀಟರ್ ದೂರದಲ್ಲಿರುವ ವಿಶಿಷ್ಟವಾದ ವಾಂಟೇಜ್ ಪಾಯಿಂಟ್‌ನಿಂದ ಸೂರ್ಯನ ಬಗ್ಗೆ ಆಳವಾದ ತಿಳುವಳಿಕೆ ಪಡೆಯಲು ಪ್ರಯತ್ನಿಸುತ್ತಿದೆ. ಇದು ಸೂರ್ಯನ ನಿರಂತರ ಮತ್ತು ಅಡೆತಡೆಯಿಲ್ಲದ ಅಧ್ಯಯನಕ್ಕೆ ಅನುವು ಮಾಡಿಕೊಡುತ್ತದೆ. ಈ ಮಿಷನ್‌ನೊಂದಿಗೆ, ನಮ್ಮ ಹತ್ತಿರ(ಸಮೀಪ)ದ ನಕ್ಷತ್ರವಾದ ಸೂರ್ಯ(ರವಿ)ನ ಅಧ್ಯಯನಕ್ಕೆ ಮೀಸಲಾಗಿರುವ ದೇಶಗಳ ವಿಶೇಷ ಗುಂಪಿಗೆ ಸೇರ್ಪಡೆಯಾಗಲು ಭಾರತವು ಸಿದ್ಧವಾಗಿದೆ.

ಸೂರ್ಯ ಮತ್ತು ಚಂದ್ರನ ಅನ್ವೇಷಣೆಯ ಯಶಸ್ವಿ ಕಾರ್ಯಾಚರಣೆಗಳ ನಂತರ ಇಸ್ರೋ, ಭವಿಷ್ಯದ ಅತ್ಯಾಕರ್ಷಕ ಪ್ರಯತ್ನಗಳ ಒಂದು ಶ್ರೇಣಿಯನ್ನು ಹೊಂದಿದೆ. ಅದು ಈಗ ನಮ್ಮ ಸೌರವ್ಯೂಹದ 2ನೇ ಅತ್ಯಂತ ಸುಡುವ ಗ್ರಹವಾದ ಶುಕ್ರದ ಮೇಲೆ ತನ್ನ ದೃಷ್ಟಿಯನ್ನು ನೆಡುತ್ತಿದೆ ಎಂಬ ವಿಷಯ ತಿಳಿದುಕೊಳ್ಳಲು ನನಗೆ ಸಂತೋಷವಾಗಿದೆ. ಇಸ್ರೋದ ಮುಂಬರುವ ಬಾಹ್ಯಾಕಾಶ ನೌಕೆ ಶ್ರುಕ್ರಯಾನ್-1 ಮಿಷನ್ 2024 ಡಿಸೆಂಬರ್ ಅಂತ್ಯದ ವೇಳೆಗೆ ಉಡಾವಣೆಯಾಗುವ ಸಾಧ್ಯತೆಯಿದೆ. ನಮ್ಮ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಶುಕ್ರನ ವೈಪರೀತ್ಯ ಪರಿಸ್ಥಿತಿಗಳನ್ನು ತಡೆದುಕೊಳ್ಳುವಂತೆ ಮತ್ತು ಅತ್ಯಂತ ಸವಾಲಿನ ಸಂದರ್ಭಗಳಲ್ಲಿ ಕಾರ್ಯ ನಿರ್ವಹಿಸುವಂತೆ ಶುಕ್ರಯಾನ್-1 ನೌಕೆಯನ್ನು ಗಟ್ಟುಮುಟ್ಟಾಗಿ ಹಾಗೂ ನಿಖರವಾಗಿ ತಯಾರಿಸುತ್ತಿದ್ದಾರೆ.

ಸೌರವ್ಯೂಹದಲ್ಲಿ ಇನ್ನೂ 3 ಉಡಾವಣೆಗಳನ್ನು ನಡೆಸಲು ಚಿತ್ತ ನೆಟ್ಟಿರುವ ಇಸ್ರೋ, ಈ ವರ್ಷ ಮತ್ತು ಮುಂದಿನ ವರ್ಷ ಭೂಮಿಯ ಮೇಲ್ವಿಚಾರಣೆಯನ್ನು ಮುನ್ನಡೆಸುತ್ತದೆ, ಬಾಹ್ಯಾಕಾಶದಲ್ಲಿ ನಿಖರವಾದ ಸಾಮೀಪ್ಯ ಕಾರ್ಯಾಚರಣೆಗಳಿಗಾಗಿ ಸುಧಾರಿತ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ ಮತ್ತು ವಿಶ್ವದಲ್ಲಿನ ಕೆಲವು ನಿಗೂಢ ವಸ್ತುಗಳನ್ನು ಅನ್ವೇಷಿಸುತ್ತದೆ.

ಹೀಗೆ ಹೇಳುತ್ತಾ ಹೋದರೆ, ಬಾಹ್ಯಾಕಾಶ ಪರಿಶೋಧನೆಯಲ್ಲಿ ಇಸ್ರೋದ ಪ್ರಯಾಣವು ಅಸಾಮಾನ್ಯವಾದುದು ಎಂದು ನಾನು ನಂಬುತ್ತೇನೆ. ಬಾಹ್ಯಾಕಾಶದಲ್ಲಿ ಗುರುತಿಸದ ಪ್ರದೇಶಗಳನ್ನು ತಲುಪುವಲ್ಲಿ ಅದರ ಸಾಧನೆಗಳು ಅಂತಾರಾಷ್ಟ್ರೀಯ ಗಮನವನ್ನು ಸೆಳೆದವು. ಅಮೆರಿಕದ  ನಾಸಾ ಮತ್ತು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ESA)ಯಂತಹ ಕೆಲವು ಜಾಗತಿಕ ಪ್ರಮುಖ ಬಾಹ್ಯಾಕಾಶ ಸಂಸ್ಥೆಗಳಿಗೆ ಹೋಲಿಸಿದರೆ, ವೆಚ್ಚದ ಒಂದು ಭಾಗದಲ್ಲಿ ಈ ಗಮನಾರ್ಹ ಸಾಧನೆಗಳನ್ನು ಸಾಧಿಸುವ ಸಾಮರ್ಥ್ಯ ಹೊಂದಿರುವ ಇಸ್ರೋವನ್ನು ನಿಜವಾಗಿಯೂ ಪ್ರತ್ಯೇಕವಾಗಿ ನೋಡಬೇಕಾಗುತ್ತದೆ.  ಆದಾಗ್ಯೂ, ನಿರ್ಣಾಯಕ ಘಟಕಗಳ ಸ್ವದೇಶೀಕರಣದ ಮೇಲೆ ಒತ್ತು ನೀಡುವುದು ಮತ್ತು ಆಮದುಗಳ ಮೇಲಿನ ಅವಲಂಬನೆ ಕಡಿಮೆ ಮಾಡುವುದು ಅದರ ವೆಚ್ಚ-ಪರಿಣಾಮಕಾರಿ ವಿಧಾನಗಳು ನಿರ್ಣಾಯಕ ಅಂಶಗಳಾಗಿವೆ. ಇದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಮುದಾಯದಲ್ಲಿ ವ್ಯಾಪಕ ಚರ್ಚೆಗಳನ್ನು ಹುಟ್ಟುಹಾಕಿದೆ.

ಬಾಹ್ಯಾಕಾಶ ಸಂಶೋಧನೆ ಮತ್ತು ಪರಿಶೋಧನೆಯಲ್ಲಿ ಪ್ರಕಾಶಮಾನವಾದ, ಹೆಚ್ಚು ನವೀನವಾದ ಮತ್ತು ಆರ್ಥಿಕವಾಗಿ ಸದೃಢವಾದ ಭವಿಷ್ಯದ ಕಡೆಗೆ ದೈತ್ಯ ಜಿಗಿತಕ್ಕೆ ಕಾರಣವಾಗಿರುವ 202 ರ ಭಾರತೀಯ ಬಾಹ್ಯಾಕಾಶ ನೀತಿಯು, ಖಾಸಗಿ ಉದ್ಯಮಗಳನ್ನು ಬಾಹ್ಯಾಕಾಶ ಪರಿಶೋಧನೆಯ ಕ್ಷೇತ್ರಕ್ಕೆ ಸ್ವಾಗತಿಸುತ್ತದೆ. ಭಾರತದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ಖಾಸಗಿ ವಲಯವು ನವೀನ ವಿಧಾನಗಳು, ಉದ್ಯಮಶೀಲತಾ ಮನೋಭಾವ ಮತ್ತು ಆರ್ಥಿಕ ಕುಶಾಗ್ರಮತಿಯನ್ನು ಹೊಂದಿದೆ ಎಂದು ಅದು ಒಪ್ಪಿಕೊಳ್ಳುತ್ತದೆ. ಈ ನಿರ್ಧಾರದ ಪರಿಣಾಮಗಳು ಆಳವಾದವು.

ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತದ ಪ್ರಯಾಣವು ನಿಜವಾಗಿಯೂ ರಾಷ್ಟ್ರೀಯ ಹೆಮ್ಮೆಯ ವಿಷಯವಾಗಿದೆ. ಬಾಹ್ಯಾಕಾಶ ಪರಿಶೋಧನೆಯ ರೋಮಾಂಚಕ ಸಾಹಸದಲ್ಲಿ ಅನ್ವೇಷಣೆ, ನಾವೀನ್ಯತೆ ಮತ್ತು ಜಾಗತಿಕ ಸಹಭಾಗಿತ್ವದ ಇನ್ನೂ ಹಲವು ಆಯಾಮಗಳನ್ನು ನಾವು ಎದುರು ನೋಡುತ್ತಿರುವಾಗ, ಭವ್ಯತೆಯತ್ತ ಭಾರತದ ತಡೆಯಲಾಗದ(ನಿರಂತರ) ಪ್ರಯಾಣವನ್ನು ಆಚರಿಸೋಣ!

***

 



(Release ID: 1959096) Visitor Counter : 893


Read this release in: Hindi , Urdu , English , Tamil