ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

'ವಿಕಸನಗೊಳ್ಳುತ್ತಿರುವ ಪ್ರಜ್ಞೆಯ ನಗರದಲ್ಲಿ ಸೂಪರ್ ಮೈಂಡ್ ನ ಮಹತ್ವಾಕಾಂಕ್ಷೆ' ಕುರಿತ ಸಮ್ಮೇಳನಕ್ಕೆ ಆರೋವಿಲ್ಲೆಯಲ್ಲಿ ಚಾಲನೆ ನೀಡಿದ  ಭಾರತದ ರಾಷ್ಟ್ರಪತಿ

Posted On: 08 AUG 2023 6:13PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಆಗಸ್ಟ್ 8, 2023) ಆರೋವಿಲ್ಲೆಯಲ್ಲಿ 'ವಿಕಸನಗೊಳ್ಳುತ್ತಿರುವ ಪ್ರಜ್ಞೆಯ ನಗರದಲ್ಲಿ ಸೂಪರ್ ಮೈಂಡ್ ನ ಆಶೋತ್ತರ' ಕುರಿತ ಸಮ್ಮೇಳನವನ್ನು ಉದ್ಘಾಟಿಸಿದರು. ಇದಕ್ಕೂ ಮುನ್ನ ಅವರು ಮಾತೃಮಂದಿರ ಮತ್ತು ಆರೋವಿಲ್ಲೆಯಲ್ಲಿನ ನಗರ ವಸ್ತುಪ್ರದರ್ಶನಕ್ಕೂ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ಸೂಪರ್ ಮೈಂಡ್ ಮಾನವರನ್ನು ದೈವಿಕ ಜೀವಿಗಳನ್ನಾಗಿ  ಪರಿವರ್ತನೆಗೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಶ್ರೀ ಅರಬಿಂದೋ ನಂಬಿದ್ದರು. ಈ ಭೌತಿಕ ಜಗತ್ತನ್ನು ದೈವಿಕವಾಗಿಸುವ ಶಕ್ತಿ ಸುಪ್ತ  ಮಾನಸಿಕ ಪ್ರಜ್ಞೆಗೆ ಇದೆ ಎಂಬ ತತ್ವವನ್ನು ಅವರು ನೀಡಿದರು. ದೈವತ್ವವು ನಮ್ಮಲ್ಲಿ ಪ್ರತಿಯೊಬ್ಬರಿಗೂ ವಿಭಿನ್ನ ಅರ್ಥ ಮತ್ತು ವ್ಯಾಖ್ಯಾನವನ್ನು ನೀಡಬಲ್ಲುದು ಎಂದು ಹೇಳಿದರು. ಆದರೆ ಎಲ್ಲರಲ್ಲೂ ಒಂದು ವಿಷಯ ಸಾಮಾನ್ಯವಾಗಿರುತ್ತದೆ. ಅದೆಂದರೆ  ದೈವಿಕವಾದುದು  ಭೌತಿಕಕ್ಕಿಂತ ಮೇಲಿರಬೇಕು ಮತ್ತು ಅದು ಅಮೂರ್ತವಾದುದಾಗಿರಬೇಕು.  ದೈವಿಕ ಮನಸ್ಸು ಎಂದರೆ ಅದು ಶುದ್ಧ ಮನಸ್ಸು. ಅದು ಆತ್ಮಕ್ಕಿಂತ ಮೇಲಿದೆ. ಇದು ಎಲ್ಲರ ಪ್ರಗತಿ, ಏಕತೆ ಮತ್ತು ಅಭಿವೃದ್ಧಿಯ ಬಗ್ಗೆ ಯೋಚಿಸುತ್ತದೆ ಎಂದವರು ಹೇಳಿದರು. 

ಮನಸ್ಸಿನ ಆಧ್ಯಾತ್ಮಿಕ ಜಾಗೃತಿಯು ಸಾಮಾನ್ಯ ಜೀವಿಯನ್ನು ಪ್ರಜ್ಞಾವಂತ ಜೀವಿಯಾಗಿ ಪರಿವರ್ತಿಸಬಲ್ಲುದು ಎಂದು ರಾಷ್ಟ್ರಪತಿ ಹೇಳಿದರು. ಈ ಜಾಗೃತಿಯು ವ್ಯಕ್ತಿಗಳು, ಸಂಸ್ಥೆಗಳು, ದೇಶಗಳು ಮತ್ತು ಜಗತ್ತನ್ನು ಬದಲಾಯಿಸಬಲ್ಲುದು. ಜಾಗೃತ ಮನಸ್ಸುಗಳು ಒಗ್ಗೂಡಿ ಸಾಮಾನ್ಯ ಗುರಿಗಳತ್ತ ಕೆಲಸ ಮಾಡತೊಡಗಿದಾಗ, ಊಹಿಸಲಾಗದ ಫಲಿತಾಂಶಗಳನ್ನು ಸಾಧಿಸಬಹುದು ಎಂದೂ ಅವರು ನುಡಿದರು. 

ಮಹರ್ಷಿ ಅರಬಿಂದೋ ಪ್ರತಿಪಾದಿಸಿದ ಬ್ರಹ್ಮಾಂಡದ ಕಲ್ಪನೆಯು ಇಂದು ಜಗತ್ತು ಎದುರಿಸುತ್ತಿರುವ ಸಮಸ್ಯೆಗಳ ಸಂದರ್ಭದಲ್ಲಿ  ಹೆಚ್ಚು ಪ್ರಸ್ತುತವಾಗಿದೆ ಎಂದು ರಾಷ್ಟ್ರಪತಿ ಹೇಳಿದರು. ವಿಶ್ವ ಪ್ರಜ್ಞೆಯ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವ ಮತ್ತು ಅಳವಡಿಸಿಕೊಳ್ಳುವ ಮೂಲಕವೇ ಇಂದು ಜಗತ್ತು ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಸಾಮರಸ್ಯದಿಂದ ಪರಿಹರಿಸಬಹುದು. ಪರಮಾತ್ಮ ಮತ್ತು ಬ್ರಹ್ಮಾಂಡದ ಮನಸ್ಸಿನ ಪರಿಕಲ್ಪನೆಗಳು ಜೀವನದ ಅಂತಿಮ ಉದ್ದೇಶದ ಸಾಕ್ಷಾತ್ಕಾರಕ್ಕೆ ದಾರಿಯಾಗುತ್ತವೆ. ಈ ಆದರ್ಶಗಳು ಜಗತ್ತನ್ನು ಸಾಮರಸ್ಯ ಮತ್ತು ಶಾಂತಿಯುತವಾಗಿ ಬದುಕುವ  ಸ್ಥಳವನ್ನಾಗಿ ಮಾಡಲು ಸಹಾಯ ಮಾಡುತ್ತವೆ ಎಂದವರು ಹೇಳಿದರು. 

ಅತ್ಯುನ್ನತ ಶ್ರೇಷ್ಠ ಪ್ರಜ್ಞೆಯನ್ನು  ಗಳಿಸುವ  ದೊಡ್ಡ ಗುರಿಯನ್ನು ಸಾಧಿಸಲು ಮಾನವ ಮನಸ್ಸುಗಳು ಅನ್ವೇಷಿಸುವ, ವಿಕಸನಗೊಳ್ಳುವ ಮತ್ತು ಒಟ್ಟಾಗಿ ಕೆಲಸ ಮಾಡುವ ಸ್ಥಳವೇ ಆರೋವಿಲ್ಲೆ ಎಂದು ರಾಷ್ಟ್ರಪತಿ ಹೇಳಿದರು. ಇದು ಎಲ್ಲಾ ಮಾನವರ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಎಂದ ಅವರು ಭಾರತವು ಜಾಗತಿಕ ಸವಾಲುಗಳಿಗೆ ಶಾಶ್ವತ ಪರಿಹಾರಗಳನ್ನು ಒದಗಿಸುವಲ್ಲಿ ಜಗತ್ತಿಗೆ ಮಾರ್ಗದರ್ಶನ  ಮಾಡಲು ಸಜ್ಜಾಗಿದೆ ಎಂದೂ  ಹೇಳಿದರು. ಆರೋವಿಲ್ಲೆ ಸಮುದಾಯವು ಈ ಪ್ರಯತ್ನದಲ್ಲಿ ದೊಡ್ಡ ಕೊಡುಗೆ ನೀಡಬಲ್ಲುದು ಎಂದವರು ಅಭಿಪ್ರಾಯಪಟ್ಟರು. 

ರಾಷ್ಟ್ರಪತಿಗಳ ಭಾಷಣವನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

****


(Release ID: 1946931)