ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ದಿನಾಂಕ 30.07.2023 ರಂದು ಮಾಡಿದ ‘ಮನ್ ಕಿ ಬಾತ್’ – 103 ನೇ ಸಂಚಿಕೆಯ ಕನ್ನಡ ಅವತರಣಿಕೆ

Posted On: 30 JUL 2023 11:45AM by PIB Bengaluru

ನನ್ನ ಪ್ರಿಯ ದೇಶಬಾಂಧವರೆ, ನಮಸ್ಕಾರಗಳು.

'ಮನದ ಮಾತಿಗೆ' ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ. ಜುಲೈ ತಿಂಗಳು ಎಂದರೆ ಮುಂಗಾರಿನ ತಿಂಗಳು, ಮಳೆಯ ಋತುಮಾನ. ಕಳೆದ ಕೆಲವು ದಿನಗಳಿಂದ ಪ್ರಕೃತಿ ವಿಕೋಪದಿಂದ ಚಿಂತೆ ಮತ್ತು ಆತಂಕ ಕವಿದಿತ್ತು. ಯಮುನೆ ಸೇರಿದಂತೆ ಹಲವು ನದಿಗಳ ಪ್ರವಾಹದಿಂದಾಗಿ ಹಲವು ಪ್ರದೇಶಗಳ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತವೂ ಸಂಭವಿಸಿದೆ. ಇದೇ ಸಮಯದಲ್ಲಿ, ದೇಶದ ಪಶ್ಚಿಮ ಭಾಗ ಮತ್ತು ಕೆಲವು ದಿನಗಳ ಹಿಂದೆ ಗುಜರಾತ್ ನ ಕೆಲ ಪ್ರದೇಶಗಳಿಗೆ ಬಿಪರ್ಜೋಯ್ ಚಂಡಮಾರುತವು ಸಹ ಅಪ್ಪಳಿಸಿತ್ತು. ಆದರೆ ಸ್ನೇಹಿತರೇ, ಈ ವಿಪತ್ತುಗಳ ಮಧ್ಯೆ, ನಾವು ದೇಶವಾಸಿಗಳೆಲ್ಲರೂ ಮತ್ತೊಮ್ಮೆ ಸಾಮೂಹಿಕ ಪ್ರಯತ್ನದ ಶಕ್ತಿಯನ್ನು ತೋರಿಸಿದ್ದೇವೆ. ಸ್ಥಳೀಯ ಜನತೆ, ನಮ್ಮ ಎನ್‌ಡಿಆರ್‌ಎಫ್ ಯೋಧರು, ಸ್ಥಳೀಯ ಆಡಳಿತ ಇಂತಹ ವಿಪತ್ತುಗಳನ್ನು ಎದುರಿಸಲು ಹಗಲಿರುಳು ಶ್ರಮಿಸಿದ್ದಾರೆ. ಯಾವುದೇ ವಿಪತ್ತನ್ನು ಎದುರಿಸುವಲ್ಲಿ ನಮ್ಮ ಸಾಮರ್ಥ್ಯ ಮತ್ತು ಸಂಪನ್ಮೂಲಗಳು ಬಹು ದೊಡ್ಡ ಪಾತ್ರವನ್ನು ವಹಿಸುತ್ತವೆ - ಆದರೆ ಅದೇ ವೇಳೆ, ನಾವು ತೋರುವ ಸಂವೇದನಶೀಲತೆ ಮತ್ತು ಪರಸ್ಪರರಿಗೆ ಆಸರೆಯಾಗಿ ನಿಲ್ಲುವ ಮನೋಭಾವವು ಮಹತ್ವಪೂರ್ಣವಾಗಿರುತ್ತದೆ. ಸರ್ವಜನ ಹಿತ ಎಂಬ  ಭಾವನೆಯೇ ಭಾರತದ ಹೆಗ್ಗುರುತಾಗಿದೆ ಮತ್ತು ಭಾರತದ ಶಕ್ತಿಯಾಗಿದೆ. 

ಸ್ನೇಹಿತರೇ, ಮಳೆಗಾಲದ ಇದೇ ಸಮಯ 'ವೃಕ್ಷಾರೋಪನೆ' ಮತ್ತು 'ಜಲ ಸಂರಕ್ಷಣೆ' ಗೂ ಅಷ್ಟೇ ಮಹತ್ವಪೂರ್ಣವಾಗಿದೆ,  ಸ್ವಾತಂತ್ರ್ಯದ 'ಅಮೃತ ಮಹೋತ್ಸವ'ದ ಸಂದರ್ಭದಲ್ಲಿ ಸಿದ್ಧಪಡಿಸಲಾದ 60 ಸಾವಿರಕ್ಕೂ ಹೆಚ್ಚು ಅಮೃತ ಸರೋವರಗಳ ಶೋಭೆಯೂ ಹೆಚ್ಚಿದೆ. ಇದೀಗ 50 ಸಾವಿರಕ್ಕೂ ಹೆಚ್ಚು ಅಮೃತ ಸರೋವರಗಳನ್ನು ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ನಮ್ಮ ದೇಶಬಾಂಧವರು ಸಂಪೂರ್ಣ ಅರಿವು ಮತ್ತು ಜವಾಬ್ದಾರಿಯೊಂದಿಗೆ 'ಜಲ ಸಂರಕ್ಷಣೆ'ಗಾಗಿ ಹೊಸ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ನಾನು, ಮಧ್ಯಪ್ರದೇಶದ ಶಹದೋಲ್ ಗೆ ಭೇಟಿ ನೀಡಿದ್ದು ನಿಮಗೆ ನೆನಪಿರಬಹುದು. ಅಲ್ಲಿ ನಾನು ಪಕಾರಿಯಾ ಗ್ರಾಮದ ಬುಡಕಟ್ಟು ಸಹೋದರ ಸಹೋದರಿಯರನ್ನು ಭೇಟಿಯಾದೆ. ಇದೇ ವೇಳೆ ಪ್ರಕೃತಿ, ಜಲ ಸಂಪನ್ಮೂಲ ರಕ್ಷಿಸುವ ಕುರಿತು ಅವರೊಂದಿಗೆ ಚರ್ಚಿಸಿದೆ. ಇದೀಗ ಪಕರಿಯಾ ಗ್ರಾಮದ ಆದಿವಾಸಿ ಸಹೋದರ ಸಹೋದರಿಯರು ಈ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದಾರೆ ಎಂದು ತಿಳಿದು ಬಂದಿದೆ. ಇಲ್ಲಿ, ಸ್ಥಳೀಯ ಆಡಳಿತದ ಸಹಾಯದಿಂದ, ಜನರು ಸುಮಾರು 100 ಬಾವಿಗಳನ್ನು ಜಲ ಮರುಪೂರಣ ವ್ಯವಸ್ಥೆಯಂತೆ ಪರಿವರ್ತಿಸಿದ್ದಾರೆ. ಮಳೆಯ ನೀರು ಈಗ ಈ ಬಾವಿಗಳನ್ನು ಸೇರುತ್ತದೆ ಮತ್ತು ಬಾವಿಗಳ ನೀರು ಭೂಮಿಯನ್ನು ಸೇರುತ್ತದೆ. ಇದರಿಂದ ಕ್ರಮೇಣ ಆ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಸುಧಾರಿಸುತ್ತದೆ. ಎಲ್ಲ ಗ್ರಾಮಸ್ಥರು ಈಗ ಸಂಪೂರ್ಣ ಪ್ರದೇಶದಲ್ಲಿ ಸುಮಾರು 800 ಬಾವಿಗಳನ್ನು ಜಲ ಮರುಪೂರಣಕ್ಕೆ ಬಳಸಿಕೊಳ್ಳುವ ಗುರಿಯನ್ನು ಹೊಂದಿದ್ದಾರೆ. ಉತ್ತರಪ್ರದೇಶದಿಂದ ಇಂತಹದ್ದೇ ಒಂದು ಪ್ರೋತ್ಸಾಹದಾಯಕ ಸುದ್ದಿ ಬಂದಿದೆ. ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ಒಂದೇ ದಿನದಲ್ಲಿ 30 ಕೋಟಿ ಮರಗಳನ್ನು ನೆಟ್ಟು ದಾಖಲೆ ನಿರ್ಮಿಸಲಾಗಿತ್ತು. ಈ ಅಭಿಯಾನವನ್ನು ರಾಜ್ಯ ಸರ್ಕಾರ ಪ್ರಾರಂಭಿಸಿದರೆ, ಅದನ್ನು ಅಲ್ಲಿನ ಜನತೆ ಪೂರ್ಣಗೊಳಿಸಿದರು. ಇಂತಹ ಪ್ರಯತ್ನಗಳು ಸಾರ್ವಜನಿಕ ಸಹಭಾಗಿತ್ವದ ಜೊತೆಗೆ ಸಾರ್ವಜನಿಕ ಜಾಗೃತಿಗೆ ಉತ್ತಮ ಉದಾಹರಣೆಗಳಾಗಿವೆ. ಮರಗಳನ್ನು ನೆಡುವ ಮತ್ತು ನೀರನ್ನು ಉಳಿಸುವ ಈ ಪ್ರಯತ್ನಗಳಲ್ಲಿ ನಾವೆಲ್ಲರೂ ಭಾಗಿಯಾಗಬೇಕೆಂದು ನಾನು ಬಯಸುತ್ತೇನೆ.

ನನ್ನ ಪ್ರೀತಿಯ ದೇಶಬಾಂಧವರೆ, ಪ್ರಸ್ತುತ ಶ್ರಾವಣ ಮಾಸದ ಪವಿತ್ರ ತಿಂಗಳು. ಮಹಾದೇವ ಸದಾಶಿವನನ್ನು ಪೂಜಿಸುವುದರ ಜೊತೆಗೆ, 'ಶ್ರಾವಣ' ಹಚ್ಚ ಹಸಿರಿನೊಂದಿಗೆ ಸಂತೋಷ ಸಂಭ್ರಮದೊಂದಿಗೆ ನಂಟು ಹೊಂದಿದೆ. ಅದಕ್ಕಾಗಿಯೇ 'ಶ್ರಾವಣ' ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ದೃಷ್ಟಿಯಲ್ಲಿ ಬಹಳ ಮಹತ್ವದ್ದಾಗಿದೆ. 'ಶ್ರಾವಣದ ಜೋಕಾಲಿ, ಶ್ರಾವಣದ ಗೋರಂಟಿ , ಶ್ರಾವಣದ ಆಚರಣೆಗಳು ಹೀಗೆ 'ಶ್ರಾವಣ' ಅಂದರೇನೆ ಸಂತೋಷ ಮತ್ತು ಸಂಭ್ರಮ.


 ಸ್ನೇಹಿತರೇ, ಈ ನಂಬಿಕೆ ಮತ್ತು ನಮ್ಮ ಈ ಸಂಪ್ರದಾಯಗಳ ಇನ್ನೊಂದು ಆಯಾಮವಿದೆ. ನಮ್ಮ ಈ ಹಬ್ಬಗಳು ಮತ್ತು ಸಂಪ್ರದಾಯಗಳು ನಮ್ಮನ್ನು ಚಟುವಟಿಕೆಯಿಂದ ಇರಿಸುತ್ತವೆ. 'ಶ್ರಾವಣ' ದಲ್ಲಿರುವ ಶಿವನನ್ನು ಆರಾಧಿಸುವ ಅನೇಕ ಭಕ್ತರು ಕಾವಡಿ ಯಾತ್ರೆಗೆ ತೆರಳುತ್ತಾರೆ. 'ಶ್ರಾವಣ'ದ ಈ ದಿನಗಳಲ್ಲಿ ಅನೇಕ ಭಕ್ತರು 12 ಜ್ಯೋತಿರ್ಲಿಂಗಗಳ ದರ್ಶನಕ್ಕೆ ತೆರಳುತ್ತಿದ್ದಾರೆ. ಬನಾರಸ್ ತಲುಪುವ ಜನರ ಸಂಖ್ಯೆಯೂ ಹೊಸ ದಾಖಲೆ ಬರೆಯುತ್ತಿದೆ ಎಂದು ತಿಳಿದು ನಿಮಗೆ ಸಂತೋಷವಾಗಬಹುದು. ಈಗ ಪ್ರತಿ ವರ್ಷ 10 ಕೋಟಿಗೂ ಹೆಚ್ಚು ಪ್ರವಾಸಿಗರು ಕಾಶಿಗೆ ಆಗಮಿಸುತ್ತಿದ್ದಾರೆ. ಅಯೋಧ್ಯೆ, ಮಥುರಾ, ಉಜ್ಜಯಿನಿಯಂತಹ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ವೇಗವಾಗಿ ವೃದ್ಧಿಸುತ್ತಿದೆ. ಇದರಿಂದ ಲಕ್ಷಾಂತರ ಬಡವರು ಉದ್ಯೋಗ ಪಡೆದು ಜೀವನ ನಿರ್ವಹಿಸುತ್ತಿದ್ದಾರೆ. ಇದೆಲ್ಲವೂ ನಮ್ಮ ಸಾಮೂಹಿಕ ಸಾಂಸ್ಕೃತಿಕ ಜಾಗೃತಿಯ ಫಲಿತಾಂಶವಾಗಿದೆ. ಅದರ ದರ್ಶನಕ್ಕಾಗಿ ಈಗ ಪ್ರಪಂಚದಾದ್ಯಂತದಿಂದ  ಜನರು ನಮ್ಮ ತೀರ್ಥಕ್ಷೇತ್ರಗಳಿಗೆ ಬರುತ್ತಿದ್ದಾರೆ. ಅಮರನಾಥ ಯಾತ್ರೆ ಮಾಡಲು ಕ್ಯಾಲಿಫೋರ್ನಿಯಾದಿಂದ ಇಲ್ಲಿಗೆ ಬಂದಿದ್ದ ಇಬ್ಬರು ಅಮೇರಿಕನ್ ಸ್ನೇಹಿತರ ಬಗ್ಗೆ ನನಗೆ ತಿಳಿದು ಬಂದಿದೆ. ಈ ವಿದೇಶಿ ಅತಿಥಿಗಳು ಅಮರನಾಥ ಯಾತ್ರೆಗೆ ಸಂಬಂಧಿಸಿದ ಸ್ವಾಮಿ ವಿವೇಕಾನಂದರ ಅನುಭವಗಳನ್ನು ಎಲ್ಲೋ ಕೇಳಿದ್ದರು. ಅದರಿಂದ ಅವರು ಎಷ್ಟು ಪ್ರೇರಿತರಾದರೆಂದರೆ ಸ್ವತಃ  ಅವರೇ ಅಮರನಾಥ ಯಾತ್ರೆಗೆ ಆಗಮಿಸಿದರು. ಇದನ್ನು ಅವರು ಭಗವಾನ್ ಭೋಲೆನಾಥನ ಆಶೀರ್ವಾದ ಎಂದು ಅವರು ಪರಿಗಣಿಸುತ್ತಾರೆ. ಪ್ರತಿಯೊಬ್ಬರನ್ನು ಸ್ವೀಕರಿಸುವದು, ಎಲ್ಲರಿಗೂ ಏನನ್ನಾದರೂ ನೀಡುವುದೇ ಭಾರತದ ವಿಶೇಷತೆಯಾಗಿದೆ. ಷಾರ್ಲೆಟ್ ಶೋಪಾ ಎಂಬ ಫ್ರೆಂಚ್ ಮಹಿಳೆಯೊಬ್ಬರಿದ್ದಾರೆ. ಹಿಂದೆ ನಾನು ಫ್ರಾನ್ಸ್ ಗೆ ಹೋಗಿದ್ದಾಗ ಅವರನ್ನು ಭೇಟಿಯಾಗಿದ್ದೆ. ಷಾರ್ಲೆಟ್ ಶೋಪಾ (ಷಾರ್ಲೆಟ್ ಶೋಪಾ) ಯೋಗಾಪಟು, ಯೋಗ ಶಿಕ್ಷಕಿವಾಗಿದ್ದಾರೆ, ಅಲ್ಲದೆ ಅವರು 100 ಸಂವತ್ಸರಗಳಿಗಿಂತ ಹೆಚ್ಚಿನ ವಯೋಮಾನದವರಾಗಿದ್ದು, ಶತಕ ದಾಟಿದ್ದಾರೆ. 

ಕಳೆದ 40 ವರ್ಷಗಳಿಂದ ಅವರು ಯೋಗಾಭ್ಯಾಸ ಮಾಡುತ್ತಿದ್ದಾರೆ. ಅವರು ತಮ್ಮ ಆರೋಗ್ಯ ಮತ್ತು 100 ವರ್ಷಗಳ ಆಯಸ್ಸಿನ ಶ್ರೇಯಸ್ಸನ್ನು ಯೋಗಕ್ಕೆ ಸಲ್ಲಿಸುತ್ತಾರೆ. ಅವರು ಭಾರತದ ಯೋಗ ವಿಜ್ಞಾನ ಮತ್ತು ಅದರ ಶಕ್ತಿಯ ಪ್ರಮುಖ ಪ್ರತಿಬಿಂಬವಾಗಿದ್ದಾರೆ. ಪ್ರತಿಯೊಬ್ಬರೂ ಇವರಿಂದ ಕಲಿಯಬೇಕಿದೆ. ನಾವು ನಮ್ಮ ಪರಂಪರೆಯನ್ನು ಒಪ್ಪಿಕೊಳ್ಳುವುದು ಮಾತ್ರವಲ್ಲದೇ, ಅದನ್ನು ವಿಶ್ವದೆದುರು ಜವಾಬ್ದಾರಿಯುತವಾಗಿ ಪ್ರಸ್ತುತಪಡಿಸಬೇಕಿದೆ. ಇತ್ತೀಚೆಗೆ ಇಂತಹ ಒಂದು ಪ್ರಯತ್ನ ಉಜ್ಜಯಿನಿಯಲ್ಲಿ ನಡೆಯುತ್ತಿರುವುದು ನನಗೆ  ಸಂತಸ  ತಂದಿದೆ. ಇಲ್ಲಿ ದೇಶದ 18 ಚಿತ್ರಕಲಾವಿದರು ಪುರಾಣಗಳನ್ನು ಆಧರಿಸಿ ಆಕರ್ಷಕ ಕಥಾಚಿತ್ರಗಳನ್ನು ಸಿದ್ಧಪಡಿಸುತ್ತಿದ್ದಾರೆ. ಈ ವರ್ಣಚಿತ್ರಗಳನ್ನು ಬುಂದಿ ಶೈಲಿ, ನಾಥದ್ವಾರ ಶೈಲಿ, ಪಹಾಡಿ ಶೈಲಿ ಮತ್ತು ಅಪಭ್ರಂಶ ಶೈಲಿಯಂತಹ ಹಲವು ವಿಶಿಷ್ಟ ಶೈಲಿಗಳಲ್ಲಿ ನಿರ್ಮಿಸಲಾಗುವುದು. ಇವುಗಳನ್ನು ಉಜ್ಜಯಿನಿಯ ತ್ರಿವೇಣಿ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗುತ್ತದೆ, ಅಂದರೆ ಕೆಲ ದಿನಗಳ ನಂತರ ನೀವು ಉಜ್ಜಯಿನಿಗೆ ಹೋದಾಗ, ಮಹಾಕಾಲ್ ಮಹಾಲೋಕದ ಜೊತೆಗೆ ಮತ್ತೊಂದು ದಿವ್ಯ ಸ್ಥಳವನ್ನು ನೋಡಲು ಸಾಧ್ಯವಾಗುತ್ತದೆ.

ಸ್ನೇಹಿತರೇ, ಉಜ್ಜಯಿನಿಯಲ್ಲಿ ತಯಾರಾಗುತ್ತಿರುವ ಈ ಚಿತ್ರಗಳ ಬಗ್ಗೆ ಹೇಳುವಾಗ ನನಗೆ ಮತ್ತೊಂದು ವಿಶಿಷ್ಟವಾದ ಚಿತ್ರಕಲೆ ನೆನಪಿಗೆ ಬರುತ್ತದೆ. ಈ ವರ್ಣಚಿತ್ರವನ್ನು ರಾಜ್‌ಕೋಟ್‌ನ ಕಲಾವಿದ ಪ್ರಭಾತ್ ಸಿಂಗ್ ಮೋಡಭಾಯಿ ಬರ್ಹಾಟ್ ಅವರು ರಚಿಸಿದ್ದಾರೆ. ಈ ಚಿತ್ರವು ಛತ್ರಪತಿ ವೀರ ಶಿವಾಜಿ ಮಹಾರಾಜರ ಜೀವನದ ಒಂದು ಘಟನೆಯ ಮೇಲೆ ಆಧಾರಿತವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರು ಪಟ್ಟಾಭಿಷೇಕದ ನಂತರ ತಮ್ಮ ಕುಲದೇವಿ 'ತುಳಜಾ ಮಾತೆಯ' ದರ್ಶನಕ್ಕೆ ಹೋಗುತ್ತಿದ್ದಾಗ, ಅಂದಿನ ಅಲ್ಲಿಯ ವಾತಾವರಣ ಹೇಗಿತ್ತು ಎಂಬುದನ್ನು ಕುರಿತು ಕಲಾವಿದ ಪ್ರಭಾತ್ ಭಾಯಿ ಚಿತ್ರಿಸಿದ್ದಾರೆ. ನಮ್ಮ ಸಂಪ್ರದಾಯಗಳನ್ನು, ನಮ್ಮ ಪರಂಪರೆಯನ್ನು ಜೀವಂತವಾಗಿಡಲು, ನಾವು ಅವುಗಳನ್ನು ಉಳಿಸಬೇಕು, ಬಾಳಬೇಕು, ಮುಂದಿನ ಪೀಳಿಗೆಗೆ ಅದನ್ನು ಕಲಿಸಬೇಕು. ಈ ನಿಟ್ಟಿನಲ್ಲಿ ಇಂದು ಹಲವಾರು ಪ್ರಯತ್ನಗಳು ನಡೆಯುತ್ತಿರುವುದು ಸಂತಸ ತಂದಿದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಪರಿಸರ, ಸಸ್ಯಗಳು, ಪ್ರಾಣಿಗಳು, ಜೈವಿಕ ವೈವಿಧ್ಯತೆಯಂತಹ ಪದಗಳನ್ನು ನಾವು ಅನೇಕ ಬಾರಿ ಕೇಳಿದಾಗ, ಕೆಲವರಿಗೆ ಇವು ವಿಶೇಷ ವಿಷಯಗಳು, ತಜ್ಞರಿಗೆ ಸಂಬಂಧಿಸಿದ ವಿಷಯಗಳು ಎಂದು ಭಾಸವಾಗುತ್ತದೆ. ಆದರೆ ಅದು ಹಾಗಲ್ಲ. ನಾವು ನಿಜವಾಗಿಯೂ ಪ್ರಕೃತಿ ಪ್ರಿಯರಾಗಿದ್ದರೆ ನಾವು ಏನೆಲ್ಲ ಮಾಡಬಹುದು. ನಮ್ಮ ಸಣ್ಣಪುಟ್ಟ ಪ್ರಯತ್ನಗಳಿಂದಲೂ ನಾವು ಬಹಳಷ್ಟು ಕೆಲಸ ಮಾಡಬಹುದು. ಸುರೇಶ್ ರಾಘವನ್ ಜಿ ತಮಿಳುನಾಡಿನ ವಡವಳ್ಳಿಯ ಒಬ್ಬ ಸ್ನೇಹಿತರು. ರಾಘವನ್‌ ಅವರಿಗೆ ಚಿತ್ರಕಲೆ ಹವ್ಯಾಸವಿದೆ. ಚಿತ್ರಕಲೆ ಎಂಬುದು ಕಲೆ ಮತ್ತು ಕ್ಯಾನ್ವಾಸ್‌ಗೆ ಸಂಬಂಧಿಸಿದ ಕೆಲಸವೆಂದು ನಿಮಗೆ ತಿಳಿದಿದೆ, ಆದರೆ ರಾಘವನ್ ಅವರು ತಮ್ಮ ಚಿತ್ರಗಳ ಮೂಲಕ ಸಸ್ಯಗಳು ಮತ್ತು ಪ್ರಾಣಿಗಳ ಮಾಹಿತಿಯನ್ನು ಸಂರಕ್ಷಿಸಲು ನಿರ್ಧರಿಸಿದರು. ಅವರು ವಿವಿಧ ಸಸ್ಯ ಮತ್ತು ಪ್ರಾಣಿಗಳ ವರ್ಣಚಿತ್ರಗಳನ್ನು ಮಾಡುವ ಮೂಲಕ ಅವುಗಳ ಮಾಹಿತಿಯ ಜೊತೆಗೆ ದಾಖಲಿಸುತ್ತಿದ್ದಾರೆ. ಇಲ್ಲಿಯವರೆಗೆ ಅವರು ಅಳಿವಿನ ಅಂಚಿನಲ್ಲಿರುವ ಇಂತಹ ಹತ್ತಾರು ಪಕ್ಷಿಗಳು, ಪ್ರಾಣಿಗಳು, ಆರ್ಕಿಡ್‌ಗಳ ವರ್ಣಚಿತ್ರಗಳನ್ನು ರಚಿಸಿದ್ದಾರೆ. ಕಲೆಯ ಮೂಲಕ ಪ್ರಕೃತಿ ಸೇವೆ ಮಾಡುವ ಈ ಉದಾಹರಣೆ ನಿಜಕ್ಕೂ ಅದ್ಭುತವಾಗಿದೆ. 

ನನ್ನ ಪ್ರೀತಿಯ ದೇಶಬಾಂಧವರೆ ಇಂದು ನಾನು ಮತ್ತೊಂದು ಆಸಕ್ತಿಕರ ವಿಷಯ ಹೇಳಲು ಬಯಸುತ್ತೇನೆ. ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಅದ್ಭುತ ಕ್ರೇಜ್ ಕಾಣಿಸಿಕೊಂಡಿತ್ತು. ಅಮೇರಿಕಾ ನಮಗೆ ನೂರಕ್ಕೂ ಹೆಚ್ಚು ಅಪರೂಪದ ಮತ್ತು ಪ್ರಾಚೀನ ಕಲಾಕೃತಿಗಳನ್ನು ಹಿಂದಿರುಗಿಸಿದೆ.  ಈ ಸುದ್ದಿ ಬೆಳಕಿಗೆ ಬಂದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಈ ಕಲಾಕೃತಿಗಳ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಯುವಕರಲ್ಲಿ ತಮ್ಮ ಪರಂಪರೆಯ ಬಗ್ಗೆ ಗೌರವದ ಭಾವನೆ ಕಂಡುಬಂದಿತು. ಭಾರತಕ್ಕೆ ಹಿಂದಿರುಗಿಸಲಾದ ಈ ಕಲಾಕೃತಿಗಳು 250 ರಿಂದ 2500 ವರ್ಷಗಳಷ್ಟು ಪುರಾತಣವಾದದ್ದಾಗಿವೆ. ಈ ಅಪರೂಪದ ಕಲಾಕೃತಿಗಳ ನಂಟು ದೇಶದ ವಿವಿಧ ಪ್ರದೇಶಗಳಿಗೆ ಸಂಬಂಧಿಸಿದೆ ಎಂದು ತಿಳಿದರೆ ನಿಮಗೂ ಸಂತೋಷವಾಗುತ್ತದೆ. ಇವುಗಳನ್ನು ಟೆರಾಕೋಟಾ, ಕಲ್ಲು, ಲೋಹ ಮತ್ತು ಮರವನ್ನು ಬಳಸಿ ತಯಾರಿಸಲಾಗಿವೆ. ಇವುಗಳಲ್ಲಿ ಕೆಲವು ನಿಮ್ಮನ್ನು ಆಶ್ಚರ್ಯಚಕಿತರನ್ನಾಗಿಸುತ್ತವೆ. ಅವನ್ನು ಕಣ್ಣರಳಿಸಿ ನೋಡುತ್ತಲೇ ಇದ್ದುಬಿಡುವಿರಿ. ಇವುಗಳಲ್ಲಿ 11 ನೇ ಶತಮಾನದ ಸುಂದರವಾದ ಮರಳುಗಲ್ಲಿನ ಶಿಲ್ಪವನ್ನು ಸಹ ನೀವು ನೋಡಬಹುದು. ಇದು ಮಧ್ಯಪ್ರದೇಶಕ್ಕೆ ಸೇರಿದ ನೃತ್ಯ ಮಾಡುತ್ತಿರುವ 'ಅಪ್ಸರೆ' ಯ ಕಲಾಕೃತಿಯಾಗಿದೆ. ಇವುಗಳಲ್ಲಿ ಚೋಳರ ಕಾಲದ ಅನೇಕ ವಿಗ್ರಹಗಳೂ ಸೇರಿವೆ. ದೇವಿ ಮತ್ತು ಮುರುಗನ್ ದೇವರ ವಿಗ್ರಹಗಳು 12 ನೇ ಶತಮಾನದಷ್ಟು ಹಿಂದಿನವು ಮತ್ತು ತಮಿಳುನಾಡಿನ ಶ್ರೀಮಂತ ಸಂಸ್ಕೃತಿಯೊಂದಿಗೆ ಸಂಬಂಧ ಹೊಂದಿವೆ. ಸುಮಾರು ಸಾವಿರ ವರ್ಷಗಳಷ್ಟು ಹಳೆಯದಾದ ಗಣೇಶನ ಕಂಚಿನ ಪ್ರತಿಮೆಯನ್ನು ಸಹ ಭಾರತಕ್ಕೆ ಹಿಂತಿರುಗಿಸಲಾಗಿದೆ. ಲಲಿತಾಸನದಲ್ಲಿ ಕುಳಿತಿರುವ ಉಮಾ-ಮಹೇಶ್ವರರ ವಿಗ್ರಹವನ್ನು 11 ನೇ ಶತಮಾನದ್ದು ಎನ್ನಲಾಗಿದೆ, ಇದರಲ್ಲಿ ಉಮಾ-ಮಹೇಶ್ವರರಿಬ್ಬರೂ ನಂದಿಯ ಮೇಲೆ ಆಸೀನರಾಗಿದ್ದಾರೆ. ಜೈನ ತೀರ್ಥಂಕರರ ಎರಡು ಕಲ್ಲಿನ ವಿಗ್ರಹಗಳು ಕೂಡ ಭಾರತಕ್ಕೆ ಮರಳಿ ಬಂದಿವೆ. ಸೂರ್ಯ ಸೂರ್ಯದೇವನ ಎರಡು ವಿಗ್ರಹಗಳು ಸಹ ನಿಮ್ಮನ್ನು ಆಕರ್ಷಿಸುತ್ತವೆ. ಇವುಗಳಲ್ಲಿ ಒಂದು ಮರಳುಗಲ್ಲಿನಿಂದ ಮಾಡಲ್ಪಟ್ಟಿದೆ. ಹಿಂದಿರುಗಿಸಿದ ವಸ್ತುಗಳಲ್ಲಿ ಮರದಿಂದ ಮಾಡಿದ ಫಲಕವು ಸಮುದ್ರ ಮಂಥನದ ಕಥೆಯನ್ನು ಬೆಳಕಿಗೆ ತರುತ್ತದೆ. 16-17 ನೇ ಶತಮಾನದ ಈ ಫಲಕವು ದಕ್ಷಿಣ ಭಾರತಕ್ಕೆ ಸೇರಿದ್ದು.

ಸ್ನೇಹಿತರೇ, ನಾನು ಇಲ್ಲಿ ಕೆಲವನ್ನು ಮಾತ್ರ ಪ್ರಸ್ತಾಪಿಸಿದ್ದೇನೆ. ಆದರೆ, ಈ ಪಟ್ಟಿ ತುಂಬಾ ದೊಡ್ಡದಾಗಿದೆ. ನಮ್ಮ ಈ ಅಮೂಲ್ಯವಾದ ಪರಂಪರೆಯನ್ನು ಹಿಂದಿರುಗಿಸಿದ ಅಮೆರಿಕನ್ ಸರ್ಕಾರಕ್ಕೆ ನಾನು ಧನ್ಯವಾದ ಹೇಳಬಯಸುತ್ತೇನೆ. 2016 ಮತ್ತು 2021ರಲ್ಲಿ ಅಮೆರಿಕಕ್ಕೆ ನಾನು ಭೇಟಿ ನೀಡಿದಾಗಲೂ ಹಲವಾರು ಕಲಾಕೃತಿಗಳನ್ನು ಭಾರತಕ್ಕೆ ಹಿಂತಿರುಗಿಸಲಾಗಿತ್ತು. ಇಂತಹ ಪ್ರಯತ್ನಗಳಿಂದ ನಮ್ಮ ಸಾಂಸ್ಕೃತಿಕ ಪರಂಪರಾಗತ ನಿಧಿಯ ಕಳ್ಳತನವನ್ನು ತಡೆಗಟ್ಟಲು ದೇಶದಾದ್ಯಂತ ಜಾಗೃತಿ ಮೂಡುತ್ತದೆ ಎಂಬ ಭರವಸೆ ನನಗಿದೆ. ಇದರಿಂದ ನಮ್ಮ ಸಮೃದ್ಧ ಪರಂಪರೆ ಬಗ್ಗೆ ದೇಶಬಾಂಧವರ ಒಲವು ಮತ್ತಷ್ಟು ಹೆಚ್ಚುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ, ದೇವಭೂಮಿ ಉತ್ತರಾಖಂಡದ ಕೆಲವು ತಾಯಂದಿರು ಮತ್ತು ಸಹೋದರಿಯರು ನನಗೆ ಬರೆದ ಪತ್ರಗಳು ಹೃದಯಸ್ಪರ್ಶಿಯಾಗಿವೆ. ಅವರು ತಮ್ಮ ಈ ಮಗ, ಸಹೋದರನಿಗೆ ಅನಂತ ಆಶೀರ್ವಾದಗಳನ್ನು ನೀಡಿದ್ದಾರೆ. ಅವರು ಹೀಗೆ ಬರೆದಿದ್ದಾರೆ - 'ನಮ್ಮ ಸಾಂಸ್ಕೃತಿಕ ಪರಂಪರೆಯಾದ 'ಭೋಜಪತ್ರ' ತನ್ನ ಜೀವನೋಪಾಯದ ಸಾಧನವಾಗಬಹುದೆಂದು ಅವರು ಎಂದಿಗೂ ಊಹಿಸಿರಲಿಲ್ಲ. ಇದು ಯಾವ ವಿಚಾರಕ್ಕೆ ಸಂಬಂಧಿಸಿದ್ದು ಎಂದು ನೀವು ಆಶ್ಚರ್ಯಪಡುತ್ತಿದ್ದೀರಾ?

ಸ್ನೇಹಿತರೇ, ನನಗೆ  ಈ ಪತ್ರವನ್ನು ಚಮೋಲಿ ಜಿಲ್ಲೆಯ ನೀತಿ-ಮಾಣ ಕಣಿವೆಯ ಮಹಿಳೆಯರು ಬರೆದಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ ತಿಂಗಳಿನಲ್ಲಿ ಭೋಜಪತ್ರದಲ್ಲಿ (ಭೂಯಪಾತ್ರ) ನನಗೆ ಒಂದು ವಿಶಿಷ್ಟ ಕಲಾಕೃತಿಯನ್ನು ಉಡುಗೊರೆ ನೀಡಿದ್ದ ಮಹಿಳೆಯರೇ ಇವರು.  ಈ ಉಡುಗೊರೆಯನ್ನು ಸ್ವೀಕರಿಸಿದ ನಂತರ ನಾನು ತುಂಬಾ ಸಂತೋಷಗೊಂಡಿದ್ದೆ. ಪ್ರಾಚೀನ ಕಾಲದಿಂದಲೂ, ನಮ್ಮ ಧರ್ಮಗ್ರಂಥಗಳು ಮತ್ತು ಪುರಾಣ ಕಥೆಗಳನ್ನು ಇದೇ ಭೂಯಪಾತ್ರದ ಮೇಲೆ ಮೇಲೆ ಬರೆದು ಉಳಿಸಲಾಗಿದೆ.  ಮಹಾಭಾರತವನ್ನೂ ಈ ಭೂಯಪಾತ್ರದ ಮೇಲೆಯೇ ಬರೆಯಲಾಗಿದೆ. ಇಂದು, ದೇವಭೂಮಿಯ ಈ ಮಹಿಳೆಯರು ಈ ಭೂಯಪಾತ್ರದಿಂದ ಅತ್ಯಂತ ಸುಂದರ ಕಲಾಕೃತಿಗಳು ಮತ್ತು ಸ್ಮಾರಕ ಚಿಹ್ನೆಗಳನ್ನು ತಯಾರಿಸುತ್ತಿದ್ದಾರೆ. ನಾನು ಮಾಣಾ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರ ವಿಶಿಷ್ಟ ಪ್ರಯತ್ನವನ್ನು ಶ್ಲಾಘಿಸಿದ್ದೆ.  ಪ್ರವಾಸದ ಸಮಯದಲ್ಲಿ ಹೆಚ್ಚು ಹೆಚ್ಚು ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವಂತೆ ನಾನು ದೇವಭೂಮಿಗೆ ಆಗಮಿಸುವ ಪ್ರವಾಸಿಗರಲ್ಲಿ ಮನವಿ ಮಾಡಿದ್ದೆ. ಇದು ಅಲ್ಲಿ ಸಾಕಷ್ಟು ಪ್ರಭಾವ ಬೀರಿತು.  ಇಂದು ಭೋಜಪತ್ರದ ಉತ್ಪನ್ನಗಳನ್ನು ಇಲ್ಲಿಗೆ ಆಗಮಿಸುವ ತೀರ್ಥಯಾತ್ರಾರ್ಥಿಗಳು ಬಹಳ ಇಷ್ಟಪಡುತ್ತಿದ್ದಾರೆ ಮತ್ತು ಇದನ್ನು ಉತ್ತಮ ದರಕ್ಕೆ ಖರೀದಿಸುತ್ತಿದ್ದಾರೆ.  ಭೋಜಪತ್ರದ ಈ ಪ್ರಾಚೀನ ಪರಂಪರೆ, ಉತ್ತರಾಖಂಡದ ಮಹಿಳೆಯರ ಜೀವನದಲ್ಲಿ ಸಂತೋಷದ ಹೊಸ ರಂಗು ತುಂಬುತ್ತಿದೆ. ಭೋಜಪತ್ರದಿಂದ ಹೊಸ ಹೊಸ ಉತ್ಪನ್ನಗಳನ್ನು ತಯಾರಿಸಲು ರಾಜ್ಯ ಸರ್ಕಾರ ಮಹಿಳೆಯರಿಗೆ ತರಬೇತಿ ಕೂಡಾ ನೀಡುತ್ತಿದೆ ಎಂದು ತಿಳಿದು ನನಗೆ ಬಹಳ ಸಂತೋಷವಾಯಿತು. 

ರಾಜ್ಯ ಸರ್ಕಾರವ ಭೋಜಪತ್ರದ ಅಪರೂಪದ ಪ್ರಬೇಧಗಳನ್ನು ಸಂರಕ್ಷಿಸುವುದಕ್ಕಾಗಿ ಕೂಡಾ ಅಭಿಯಾನ ಆರಂಭಿಸಿದೆ. ಯಾವ ಪ್ರದೇಶಗಳನ್ನು ಹಿಂದೆ ದೇಶದ ಕೊನೆಯ ಹಿಂದುಳಿದ ಭಾಗಗಳೆಂದು ಪರಿಗಣಿಸಲ್ಪಟ್ಟಿತ್ತೋ, ಈಗ ಅದನ್ನು ದೇಶದ ಪ್ರಥಮ ಗ್ರಾಮವೆಂದು ಪರಿಗಣಿಸಿ, ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಪ್ರಯತ್ನ ನಮ್ಮ ಪರಂಪರೆ ಮತ್ತು ಸಂಸ್ಕೃತಿಯನ್ನು ಉಳಿಸುವುದರೊಂದಿಗೆ ಆರ್ಥಿಕ ಪ್ರಗತಿಗೆ ಸಾಧನವೂ ಆಗುತ್ತಿದೆ. 

ನನ್ನ ಪ್ರೀತಿಯ ದೇಶವಾಸಿಗಳೇ, ಈ ಬಾರಿಯ ‘ಮನದ ಮಾತಿನಲ್ಲಿ’ ನನ್ನ ಮನಸ್ಸಿಗೆ ಹೆಚ್ಚಿನ ಸಂತೋಷ ನೀಡುವಂತಹ ಇಂತಹ ಬಹಳಷ್ಟು ಪತ್ರಗಳು ಬಂದಿವೆ. ಇತ್ತೀಚೆಗಷ್ಟೇ ‘ಹಜ್’ ಯಾತ್ರೆ ಪೂರ್ಣಗೊಳಿಸಿ ಹಿಂದಿರುಗಿ ಬಂದಿರುವ ಮುಸ್ಲಿಂ ಮಹಿಳೆಯರು ಈ ಪತ್ರವನ್ನು ನನಗೆ ಬರೆದಿದ್ದಾರೆ. ಈ ಯಾತ್ರೆ ಅವರಿಗೆ ಹಲವು ರೀತಿಯಲ್ಲಿ ವಿಶೇಷವಾಗಿತ್ತು. ಯಾವುದೇ ಪುರುಷರ ಜೊತೆ ಇಲ್ಲದಂತೆ ಅಥವಾ ಮೆಹರಮ್ ಇಲ್ಲದಂತೆಯೇ ‘ಹಜ್’ ಯಾತ್ರೆ ಮಾಡಿದ ಇಂತಹ ಮಹಿಳೆಯರ ಸಂಖ್ಯೆ ಐವತ್ತು-ನೂರು ಅಲ್ಲ, ನಾಲ್ಕು ಸಾವಿರಕ್ಕಿಂತಲೂ ಅಧಿಕ. ಇದೊಂದು ನಿಜಕ್ಕೂ ಅತಿ ದೊಡ್ಡ ಬದಲಾವಣೆ. ಈ ಮೊದಲು ಮುಸ್ಲಿಂ ಮಹಿಳೆಯರಿಗೆ ಮೆಹರಮ್ ಇಲ್ಲದಂತೆ ‘ಹಜ್’ ಯಾತ್ರೆ ಮಾಡಲು ಅವಕಾಶ, ಅನುಮತಿ ಇರಲಿಲ್ಲ.  ನಾನು ಮನದ ಮಾತಿನ ಮೂಲಕ ಸೌದಿ ಅರೇಬಿಯಾ ಸರ್ಕಾರಕ್ಕೆ ಕೂಡಾ ಹೃದಯಪೂರ್ವಕ ಕೃತಜ್ಞತೆ ವ್ಯಕ್ತಪಡಿಸಲು ಬಯಸುತ್ತೇನೆ.  ಮೆಹರಮ್ ಇಲ್ಲದಂತೆ ‘ಹಜ್’ ಯಾತ್ರೆಗೆ ಹೊರಟಿದ್ದ ಮಹಿಳೆಯರಿಗಾಗಿ, ವಿಶೇಷವಾಗಿ ಮಹಿಳಾ ಸಮನ್ವಯಕಾರರನ್ನು ನಿಯೋಜಿಸಲಾಗಿತ್ತು. 

ಸ್ನೇಹಿತರೇ, ಕಳೆದ ಕೆಲವು ವರ್ಷಗಳಲ್ಲಿ Haj ನೀತಿಯಲ್ಲಿ ಮಾಡಲಾಗಿರುವ ಬದಲಾವಣೆಗಳ ಬಗ್ಗೆ ಸಾಕಷ್ಟು ಪ್ರಶಂಸೆಗಳು ದೊರೆತಿವೆ. ನಮ್ಮ ಮುಸ್ಲಿಂ ಮಾತೆಯರು ಮತ್ತು ಸೋದರಿಯರು ನನಗೆ ಈ ಕುರಿತು ಸಾಕಷ್ಟು ಬರೆದು ಕಳಿಸಿದ್ದಾರೆ. ಈಗ, ಹೆಚ್ಚು ಹೆಚ್ಚು ಜನರಿಗೆ ‘ಹಜ್’ ಯಾತ್ರೆಗೆ ಹೋಗುವುದಕ್ಕೆ ಅವಕಾಶ ದೊರೆಯುತ್ತಿದೆ. ‘ಹಜ್’ ಯಾತ್ರೆಯಿಂದ ಹಿಂದಿರುಗಿದ ಜನರು, ವಿಶೇಷವಾಗಿ ನಮ್ಮ ಮಾತೃಸಮಾನ ಮಹಿಳೆಯರು -ಸೋದರಿಯರು,  ಕಾಗದ ಬರೆದು ನನಗೆ ನೀಡಿರುವ ಆಶೀರ್ವಾದ ಬಹಳ ಪ್ರೇರಣಾದಾಯಕವಾಗಿದೆ. 

ನನ್ನ ಪ್ರೀತಿಯ ದೇಶವಾಸಿಗಳೇ, ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಗೀತ ರಸಸಂಜೆಗಳಿರಲಿ, ಎತ್ತರದ ಪ್ರದೇಶಗಳಲ್ಲಿ ಬೈಕ್ ರಾಲಿಗಳಿರಲಿ, ಚಂಡೀಗಢದ ಸ್ಥಳೀಯ ಕ್ಲಬ್ ಗಳಿರಲಿ, ಮತ್ತು ಪಂಜಾಬ್ ನ ಹಲವಾರು ಕ್ರೀಡಾ ಸಮೂಹಗಳಿರಲಿ, ಅವುಗಳ ಬಗ್ಗೆ ಕೇಳಿಸಿಕೊಂಡಾಗ, ಮನರಂಜನೆಯ ಕುರಿತು, ಸಾಹಸ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಅರ್ಥವಾಗಿಬಿಡುತ್ತದೆ.  ಆದರೆ ವಿಷಯ ಬೇರೆಯೇ ಇದೆ. ಈ ಆಯೋಜನೆಯು ‘ಒಂದೇ ರೀತಿಯ ಉದ್ದೇಶಕ್ಕಾಗಿದೆ’. ಈ ಏಕ ಉದ್ದೇಶವೆಂದರೆ  ಮಾದಕ ಪದಾರ್ಥಗಳ ವಿರುದ್ಧ ಜಾಗರೂಕತೆ ಮೂಡಿಸುವ ಅಭಿಯಾನ.  ಜಮ್ಮು-ಕಾಶ್ಮೀರದ ಯುವಜನರನ್ನು ಮಾದಕ ವಸ್ತುಗಳಿಂದ ರಕ್ಷಿಸುವುದಕ್ಕಾಗಿ ಹಲವು ವಿನೂತನ ಪ್ರಯತ್ನಗಳು ನಡೆಯುತ್ತಿವೆ. ಇಲ್ಲಿ ಸಂಗೀತ ರಸಸಂಜೆ, ಬೈಕ್ ರಾಲಿಗಳಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಚಂಡೀಗಢದಲ್ಲಿ ಈ ಸಂದೇಶವನ್ನು ಪ್ರಸಾರ ಮಾಡುವುದಕ್ಕಾಗಿ ಸ್ಥಳೀಯ ಕ್ಲಬ್ ಗಳನ್ನು ಇದರಲ್ಲಿ ಸೇರಿಸಿಕೊಳ್ಳಲಾಗಿದೆ. ಅವರು ಇದನ್ನು ವಾದಾ (वादा) ಕ್ಲಬ್ ಗಳೆಂದು ಕರೆಯುತ್ತಾರೆ. VADA ಅಂದರೆ, Victory Against Drugs Abuse. ಪಂಜಾಬ್ ನಲ್ಲಿ ಹಲವು ಕ್ರೀಡಾ ಸಮೂಹಗಳನ್ನು ಮಾಡಲಾಗಿದೆ, ಇವು ದೇಹದಾರ್ಢ್ಯತೆಗೆ ಗಮನ ನೀಡುತ್ತಾ, ಯುವಜನರನ್ನು ಮಾದಕ ವಸ್ತು ಮುಕ್ತಗೊಳಿಸುವುದಕ್ಕಾಗಿ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ಮಾದಕ ವಸ್ತುಗಳ ವಿರುದ್ಧದ ಅಭಿಯಾನದಲ್ಲಿ ಯುವಜನತೆಯ ಹೆಚ್ಚಿನ ಪಾಲ್ಗೊಳ್ಳುವಿಕೆಯು ಉತ್ಸಾಹವನ್ನು ಹೆಚ್ಚಿಸುವಂತದ್ದಾಗಿದೆ. ಈ ಪ್ರಯತ್ನವು, ಭಾರತದಲ್ಲಿ ಮಾದಕ ವಸ್ತುಗಳ ವಿರುದ್ಧದ ಅಭಿಯಾನಕ್ಕೆ ಬಹಳ ಬಲ ತುಂಬುತ್ತದೆ. ನಾವು ದೇಶದ ಭವಿಷ್ಯದ ಪೀಳಿಗೆಯನ್ನು ರಕ್ಷಿಸಬೇಕೆಂದರೆ ಅವರನ್ನು ಮಾದಕ ವಸ್ತುಗಳಿಂದ ದೂರವಿರಿಸಬೇಕು. ಇದೇ ಚಿಂತನೆಯೊಂದಿಗೆ, 2020, ಆಗಸ್ಟ್ 15 ರಂದು ಮಾದಕವಸ್ತು ಮುಕ್ತ ಭಾರತ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಈ ಅಭಿಯಾನದೊಂದಿಗೆ 11 ಕೋಟಿಗೂ ಹೆಚ್ಚು ಜನ ಕೈಜೋಡಿಸಿದ್ದಾರೆ. ಎರಡು ವಾರಗಳ ಹಿಂದಷ್ಟೇ ಭಾರತ ಮಾದಕ ವಸ್ತುಗಳ ವಿರುದ್ಧ ಬಹು ದೊಡ್ಡ ಕಾರ್ಯಾಚರಣೆ ನಡೆಸಿತ್ತು. ಸುಮಾರು ಒಂದೂವರೆ ಲಕ್ಷ ಕಿಲೋ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡ ನಂತರ ಅವುಗಳನ್ನು ನಾಶಪಡಿಸಲಾಯಿತು. 10 ಲಕ್ಷ ಕಿಲೋ ಮಾದಕ ವಸ್ತುಗಳನ್ನು ನಾಶಪಡಿಸುವ ವಿಶಿಷ್ಠ ದಾಖಲೆಯನ್ನು ಕೂಡಾ ಭಾರತ ಮಾಡಿದೆ. ಈ ಮಾದಕ ವಸ್ತುಗಳ ಮೌಲ್ಯ ಸುಮಾರು 12,000 ಕೋಟಿ ರೂಪಾಯಿಗಿಂತ ಅಧಿಕ.  ವ್ಯಸನಮುಕ್ತಗೊಳಿಸುವ ಈ ಉದಾತ್ತ ಅಭಿಯಾನದಲ್ಲಿ ಕೈಜೋಡಿಸಿ ಸಹಕರಿಸುತ್ತಿರುವ, ತಮ್ಮ ಕೊಡುಗೆ ನೀಡುತ್ತಿರುವ ಎಲ್ಲರನ್ನೂ ನಾನು ಪ್ರಶಂಸಿಸಲು ಬಯಸುತ್ತೇನೆ. ಮಾದಕ ವ್ಯಸನ ಕೇವಲ ಕುಟುಂಬವನ್ನು ಮಾತ್ರವಲ್ಲದೇ ಇಡೀ ಸಮಾಜಕ್ಕೆ ದೊಡ್ಡ ಆತಂಕದ ವಿಷಯವಾಗಿಬಿಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಈ ಅಪಾಯ ಶಾಶ್ವತವಾಗಿ ಕೊನೆಗೊಳ್ಳಬೇಕಾದರೆ, ನಾವೆಲ್ಲರೂ ಒಗ್ಗೂಡಿ ಈ ನಿಟ್ಟಿನಲ್ಲಿ ಮುಂದೆ ಸಾಗುವುದು ಬಹಳ ಅಗತ್ಯವಾಗಿದೆ. 

   ನನ್ನ ಪ್ರೀತಿಯ ದೇಶವಾಸಿಗಳೇ, ಮಾದಕ ಪದಾರ್ಥಗಳು ಮತ್ತು ಯುವ ಪೀಳಿಗೆಯ ಕುರಿತು ಮಾತನಾಡುತ್ತಿರುವಾಗ, ಮಧ್ಯಪ್ರದೇಶದ ಒಂದು ಸ್ಫೂರ್ತಿದಾಯಕ ಪಯಣ ಕುರಿತು ಹೇಳಲು ಬಯಸುತ್ತೇನೆ.  ಈ ಸ್ಫೂರ್ತಿದಾಯಕ ಪಯಣ ಮಿನಿ ಬ್ರೆಜಿಲ್ ದಾಗಿದೆ. ನೀವು ಯೋಚಿಸುತ್ತಿರಬಹುದು, ಮಧ್ಯಪ್ರದೇಶದಲ್ಲಿ ಮಿನಿ ಬ್ರೆಜಿಲ್ ಎಲ್ಲಿಂದ ಬಂತು ಎಂದು. ಅದೇ ಟ್ವಿಸ್ಟ್. ಮಧ್ಯಪ್ರದೇಶದ ಶಹಡೋಲ್ ನಲ್ಲಿರುವ ಒಂದು ಗ್ರಾಮ ಬಿಚಾರ್ ಪೂರ್. ಬಿಚಾರ್ ಪೂರ್ ಅನ್ನು ಮಿನಿ ಬ್ರೆಜಿಲ್ ಎಂದು ಕರೆಯುತ್ತಾರೆ. ಮಿನಿ ಬ್ರೆಜಿಲ್ ಎಂದು ಏತಕ್ಕಾಗಿ ಕರೆಯುತ್ತಾರೆಂದರೆ, ಈ ಗ್ರಾಮ ಈಗ ಫುಟ್ಬಾಲ್ ಕ್ರೀಡೆಯ ಉದಯೋನ್ಮುಕ ಕ್ರೀಡಾಪಟುಗಳ ಭದ್ರಕೋಟೆಯಾಗಿದೆ. ನಾನು ಕೆಲವು ವಾರಗಳ ಹಿಂದೆ ಶಹಡೋಲ್ ಗೆ ಹೋಗಿದ್ದಾಗ, ಅಲ್ಲಿ ಇಂತಹ ಅನೇಕ ಫುಟ್ಬಾಲ್ ಕ್ರೀಡಾಪಟುಗಳನ್ನು ಭೇಟಿಯಾಗಿದ್ದೆ.  ನಮ್ಮ ದೇಶವಾಸಿಗಳು ವಿಶೇಷವಾಗಿ ಯುವ ಸ್ನೇಹಿತರು ಈ ಬಾರಿ ಈ ಬಗ್ಗೆ ಖಂಡಿತವಾಗಿಯೂ ತಿಳಿದುಕೊಳ್ಳಬೇಕೆಂದು ನನಗೆ ಅನಿಸಿತು. 

ಸ್ನೇಹಿತರೇ, ಬಿಚಾರ್ ಪೂರ್ ಗ್ರಾಮ  ಮಿನಿ ಬ್ರೆಜಿಲ್ ಆಗುವ ಪಯಣ ಸುಮಾರು ಎರಡೂವರೆ ದಶಕಗಳ ಹಿಂದೆ ಆರಂಭವಾಯಿತು. ಆ ಸಮಯದಲ್ಲಿ ಬಿಚಾರ್ ಪೂರ್ ಗ್ರಾಮ ಅಕ್ರಮ ಮದ್ಯಕ್ಕೆ ಕುಖ್ಯಾತವಾಗಿತ್ತು. ಮಾದಕ ವಸ್ತು ವ್ಯಸನದ ಹಿಡಿತದಲ್ಲಿತ್ತು. ಈ ಪರಿಸರದ ನಷ್ಟ ಇಲ್ಲಿನ ಯುವಜನತೆಯ ಮೇಲಾಗುತ್ತಿತ್ತು. ಓರ್ವ ಮಾಜಿ ರಾಷ್ಟ್ರೀಯ ಕ್ರೀಡಾಪಟು ಮತ್ತು ಕೋಚ್ ರೈಸ್ ಅಹಮದ್ ಅವರು ಈ ಯುವಕರ ಪ್ರತಿಭೆಯನ್ನು ಗುರುತಿಸಿದರು. ರೈಸ್ ಅವರ ಬಳಿ ಸಂಪನ್ಮೂಲಗಳು ಹೆಚ್ಚಾಗಿ ಇರಲಿಲ್ಲ.ಆದರೆ ಅವರು, ಸಂಪೂರ್ಣ ಶ್ರದ್ಧೆಯಿಂದ ಯುವಕರಿಗೆ ಫುಟ್ಬಾಲ್ ಕಲಿಸಲು ಆರಂಭಿಸಿದರು. ಕೆಲವೇ ವರ್ಷಗಳಲ್ಲಿ ಇಲ್ಲಿ ಫುಟ್ಬಾಲ್ ಅದೆಷ್ಟು ಜನಪ್ರಿಯವಾಯಿತೆಂದರೆ, ಜನರು ಬಿಚಾರ್ ಪುರವನ್ನು ಫುಟ್ ಬಾಲ್  ಹೆಸರಿನಿಂದಲೇ ಗುರುತಿಸಲಾರಂಭಿಸಿದರು.  ಈಗ ಇಲ್ಲಿ ಫುಟ್ಬಾಲ್ ಕ್ರಾಂತಿ ಹೆಸರಿನ ಒಂದು ಕಾರ್ಯಕ್ರಮ ಕೂಡಾ ನಡೆಯುತ್ತಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಯುವಜನರನ್ನು ಈ ಕ್ರೀಡೆಯೊಂದಿಗೆ ಬೆಸೆಯಲಾಗುತ್ತದೆ ಮತ್ತು ಅವರಿಗೆ ತರಬೇತಿಯನ್ನೂ ನೀಡಲಾಗುತ್ತದೆ. ಈ ಕಾರ್ಯಕ್ರಮ ಎಷ್ಟೊಂದು ಯಶಸ್ವಿಯಾಯಿತೆಂದರೆ, ಬಿಚಾರ್ ಪುರದಿಂದ ಸುಮಾರು 40 ಕ್ಕೂ ಅಧಿಕ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಕ್ರೀಡಾಪುಟಗಳು ಹೊರಹೊಮ್ಮಿದರು. ಈ ಫುಟ್ಬಾಲ್ ಕ್ರಾಂತಿ ಈಗ ಮೆಲ್ಲ ಮೆಲ್ಲಗೆ ಇಡೀ ಪ್ರದೇಶದಲ್ಲಿ ವ್ಯಾಪಿಸುತ್ತಿದೆ. ಶಹಡೋಲ್ ಮತ್ತು ಅದರ ಸುತ್ತಮುತ್ತಲಿನ ಸಾಕಷ್ಟು ದೊಡ್ಡ ಪ್ರದೇಶಗಳಲ್ಲಿ 1200 ಕ್ಕೂ ಅಧಿಕ ಫುಟ್ಬಾಲ್ ಕ್ಲಬ್ ಗಳು ತಲೆ ಎತ್ತಿವೆ. ಇವುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಹೊರಹೊಮ್ಮುತ್ತಿದ್ದಾರೆ ಮತ್ತು ರಾಷ್ಟ್ರ ಮಟ್ಟದಲ್ಲಿ ಆಡುತ್ತಿದ್ದಾರೆ. ಫುಟ್ಬಾಲ್ ಆಟದ ಅನೇಕ ಹಿರಿಯ ಮತ್ತು ಮಾಜಿ  ಕ್ರೀಡಾಕಾರರು ಮತ್ತು ಕೋಚ್ ಗಳು, ಇಂದು ಇಲ್ಲಿ ಯುವಜನರಿಗೆ ತರಬೇತಿ ನೀಡುತ್ತಿದ್ದಾರೆ.  ಅಕ್ರಮ ಮದ್ಯಕ್ಕೆ ಹೆಸರಾಗಿದ್ದ, ಮಾದಕ ವ್ಯಸನಕ್ಕೆ ಕುಖ್ಯಾತವಾಗಿದ್ದ ಬುಡಕಟ್ಟು ಪ್ರದೇಶ ಈಗ ದೇಶದ ಫುಟ್ಬಾಲ್ ನರ್ಸರಿಯಾಗಿ ಮಾರ್ಪಟ್ಟಿದೆ ಎಂದರೆ ನೀವೇ ಯೋಚಿಸಿ. ಆದ್ದರಿಂದಲೇ ಹೇಳುತ್ತಾರೆ ಮನಸ್ಸಿದ್ದರೆ ಮಾರ್ಗ ಎಂದು. ನಮ್ಮ ದೇಶದಲ್ಲಿ ಪ್ರತಿಭಾವಂತರ ಕೊರತೆ ಇಲ್ಲ. ಅವುಗಳನ್ನು ಪತ್ತೆ ಹಚ್ಚುವ ಮತ್ತು ಸರಿಯಾದ ರೀತಿಯಲ್ಲಿ ರೂಪಿಸುವ ಅಗತ್ಯವಿದೆ. ನಂತರ ಇದೇ ಯುವಜನತೆ ದೇಶದ ಹೆಸರನ್ನು ಪ್ರಜ್ವಲಿಸುವಂತೆ ಮಾಡುತ್ತಾರೆ ಮತ್ತು ದೇಶದ ಪ್ರಗತಿಗೆ ದಿಕ್ಕನ್ನು ಕೂಡಾ ತೋರಿಸುತ್ತಾರೆ. 

 ನನ್ನ ಪ್ರೀತಿಯ ದೇಶವಾಸಿಗಳೇ,  ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ನಾವೆಲ್ಲರೂ ಸಂಪೂರ್ಣ ಉತ್ಸಾಹದಿಂದ ‘ಅಮೃತ ಮಹೋತ್ಸವ’ ಆಚರಿಸುತ್ತಿದ್ದೇವೆ. ‘ಅಮೃತ ಮಹೋತ್ಸವ’ ಸಂದರ್ಭದಲ್ಲಿ ದೇಶದಲ್ಲಿ ಸುಮಾರು ಎರಡು ಲಕ್ಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಗಳು ಒಂದಕ್ಕಿಂತ ಒಂದು ವೈವಿಧ್ಯಮಯ ಬಣ್ಣಗಳಿಂದ ಕೂಡಿದ್ದವು. ಈ ಆಯೋಜನೆಗಳ ಒಂದು ವಿಶೇಷತೆಯೂ ಇತ್ತು ಅದೆಂದರೆ, ಇದರಲ್ಲಿ ದಾಖಲೆಯ ಸಂಖ್ಯೆಯಲ್ಲಿ ಯುವಜನರು ಭಾಗವಹಿಸಿದ್ದರು.  ಈ ಸಂದರ್ಭದಲ್ಲಿ ನಮ್ಮ ಯುವಜನರಿಗೆ ದೇಶದ ಮಹಾನ್ ವ್ಯಕ್ತಿಗಳ  ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿದುಕೊಳ್ಳುವ ಅವಕಾಶ ದೊರೆಯಿತು. ಮೊದಲ ಕೆಲವು ತಿಂಗಳುಗಳ ಬಗ್ಗೆ ಹೇಳಬೇಕೆಂದರೆ, ಸಾರ್ವಜನಿಕ ಭಾಗವಹಿಸುವಿಕೆಯ ಅನೇಕ ಆಸಕ್ತಿದಾಯಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಅಂತಹದ್ದೇ ಒಂದು ಕಾರ್ಯಕ್ರಮ – ದಿವ್ಯಾಂಗ ಲೇಖಕರಿಗಾಗಿ ಆಯೋಜಿಸಲಾಗಿದ್ದ ‘ಲೇಖಕರ ಸಮಾವೇಶ‘.  ಇದರಲ್ಲಿ ದಾಖಲೆಯ ಸಂಖ್ಯೆಯಲ್ಲಿ ಜನರ ಪಾಲ್ಗೊಳ್ಳುವಿಕೆ ಕಂಡು ಬಂದಿತು. ಆಂಧ್ರ ಪ್ರದೇಶದ ತಿರುಪತಿಯಲ್ಲಿ ‘ರಾಷ್ಟ್ರೀಯ ಸಂಸ್ಕೃತ ಸಮ್ಮೇಳನ’ ಆಯೋಜಿಸಲಾಗಿತ್ತು.

ನಮ್ಮ ಇತಿಹಾಸದಲ್ಲಿ ಕೋಟೆಗಳ ಮಹತ್ವ ಎಷ್ಟೆಂದು ನಾವೆಲ್ಲರೂ ಅರಿತಿದ್ದೇವೆ. ಇವುಗಳನ್ನು ಪ್ರದರ್ಶಿಸುವ ಒಂದು ಅಭಿಯಾನ, ‘ಕೋಟೆಗಳು ಮತ್ತು ಕತೆಗಳು’ ಅಂದರೆ ಕೋಟೆಗಳೊಂದಿಗೆ ಬೆಸೆದುಕೊಂಡ ಕತೆಗಳು ಕೂಡಾ ಜನರಿಗೆ ಬಹಳ ಇಷ್ಟವಾದವು. 

ಸ್ನೇಹಿತರೇ, ಇಂದು ದೇಶದಲ್ಲಿ, ನಾಲ್ಕೂ ನಿಟ್ಟಿನಲ್ಲಿ ‘ಅಮೃತ ಮಹೋತ್ಸವದ’ ಸ್ವರ ಪ್ರತಿಧ್ವನಿಸುತ್ತಿರುವಾಗ, ಆಗಸ್ಟ್ 15 ಇನ್ನೇನು ಸಮೀಪಿಸುತ್ತಿದೆ, ದೇಶದಲ್ಲಿ ಮತ್ತೊಂದು ದೊಡ್ಡ ಅಭಿಯಾನ ಆರಂಭವಾಗುತ್ತಿದೆ. ಹುತಾತ್ಮ ವೀರರಿಗೆ-ವೀರ ವನಿಯೆತರಿಗೆ ಗೌರವ- ಸಮ್ಮಾನ ನೀಡುವುದಕ್ಕಾಗಿ ‘ನನ್ನ ಭೂಮಿ ನನ್ನ ದೇಶ’ ಅಭಿಯಾನ ಆರಂಭವಾಗುತ್ತದೆ. ಇದರ ಅಡಿಯಲ್ಲಿ, ದೇಶಾದ್ಯಂತ ನಮ್ಮ ಅಮರ ಹುತಾತ್ಮರ ಸ್ಮರಣೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಈ ಮಹಾನ್ ವ್ಯಕ್ತಿಗಳ ನೆನಪಿನಲ್ಲಿ, ದೇಶದ ಲಕ್ಷಾಂತರ ಗ್ರಾಮ ಪಂಚಾಯಿತಿಗಳಲ್ಲಿ, ವಿಶೇಷ ಶಿಲಾ ಶಾಸನಗಳನ್ನು ಸ್ಥಾಪಿಸಲಾಗುವುದು. ಈ ಅಭಿಯಾನದ ಅಡಿಯಲ್ಲಿ, ದೇಶಾದ್ಯಂತ, ‘ಅಮೃತ ಕಳಶ ಯಾತ್ರಾ’ ಕೂಡಾ ಕೈಗೊಳ್ಳಲಾಗುವುದು. ದೇಶದ ಹಳ್ಳಿ ಹಳ್ಳಿಗಳಿಂದ, ಮೂಲೆ ಮೂಲೆಗಳಿಂದ, 7500 ಕಳಶಗಳಲ್ಲಿ, ಮಣ್ಣು ಸಂಗ್ರಹಿಸಿ, ಈ ‘ಅಮೃತ ಕಳಶ ಯಾತ್ರೆ’ ದೇಶದ ರಾಜಧಾನಿ ದೆಹಲಿ ತಲುಪುತ್ತದೆ. ಈ ಯಾತ್ರೆ ದೇಶದ ಬೇರೆ ಬೇರೆ ಭಾಗಗಳಿಂದ ಗಿಡಗಳನ್ನು ಕೂಡಾ ತನ್ನೊಂದಿಗೆ ತೆಗೆದುಕೊಂಡು ಬರುತ್ತದೆ.7500 ಕಳಶಗಳಲ್ಲಿ ತರಲಾದ ಮಣ್ಣು ಮತ್ತು ಗಿಡವನ್ನು ಸೇರಿಸಿ, ರಾಷ್ಟ್ರೀಯ ಯುದ್ಧ ಸ್ಮಾರಕದ ಸಮೀಪ ‘ಅಮೃತ ಉದ್ಯಾನವನ’ ನಿರ್ಮಿಸಲಾಗುವುದು. ಈ ‘ಅಮೃತ ಉದ್ಯಾನವನ’,  ‘ಏಕ್ ಭಾರತ್ – ಶ್ರೇಷ್ಠ್ ಭಾರತ್’ ನ ಬಹುದೊಡ್ಡ,  ಭವ್ಯ ಪ್ರತೀಕವಾಗಲಿದೆ.  ನಾನು ಕಳೆದ ವರ್ಷ ಕೆಂಪು ಕೋಟೆಯಿಂದ ಮುಂದಿನ 25 ವರ್ಷಗಳ ಅಮೃತ ಕಾಲಕ್ಕಾಗಿ ‘ಪಂಚ ಪ್ರಾಣ್ ‘  ಕುರಿತು ಮಾತನಾಡಿದ್ದೆ.  ನನ್ನ ಭೂಮಿ ನನ್ನ ದೇಶ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ನಾವು ಈ ಪಂಚ ಪ್ರಾಣ್ ಈಡೇರಿಸುವ ಪ್ರತಿಜ್ಞೆಯನ್ನು ಕೂಡಾ ಮಾಡೋಣ.  ನೀವೆಲ್ಲರೂ, ದೇಶದ ಪವಿತ್ರ ಮಣ್ಣನ್ನು ಕೈಯಲ್ಲಿ ತೆಗೆದುಕೊಂಡು ಪ್ರತಿಜ್ಞೆ ಮಾಡುತ್ತಾ ನಿಮ್ಮ ಸೆಲ್ಫಿಯನ್ನು yuva.gov.in ನಲ್ಲಿ ಖಂಡಿತವಾಗಿ ಅಪ್ಲೋಡ್ ಮಾಡಿ. ಕಳೆದ ವರ್ಷ ಸ್ವಾತಂತ್ರ್ಯ ದಿನದಂದು ‘ಮನೆ ಮನೆಯಲ್ಲೂ ತ್ರಿವರ್ಣ ಧ್ವಜ’ ಅಭಿಯಾನದಲ್ಲಿ ಇಡೀ ದೇಶ ಯಾವರೀತಿ ಕೈಜೋಡಿಸಿತ್ತೋ, ಅಂತೆಯೇ ಈ ಬಾರಿ ಕೂಡಾ ಮತ್ತೊಮ್ಮೆ ಮನೆ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸಬೇಕು. ಮತ್ತು ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕು. ಇಂತಹ ಪ್ರಯತ್ನಗಳಿಂದ ನಮಗೆ ನಮ್ಮ ಕರ್ತವ್ಯದ ಅರಿವಾಗುತ್ತದೆ, ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಅಸಂಖ್ಯಾತ ವೀರರ ನೆನಪು ಬರುತ್ತದೆ, ಸ್ವಾತಂತ್ರ್ಯದ ಮೌಲ್ಯ ತಿಳಿದುಬರುತ್ತದೆ.  ಆದ್ದರಿಂದ ಪ್ರತಿಯೊಬ್ಬ ದೇಶವಾಸಿಯೂ ಈ ಪ್ರಯತ್ನಗಳೊಂದಿಗೆ ಖಂಡಿತವಾಗಿಯೂ ಕೈಜೋಡಿಸಬೇಕು. 

ನನ್ನ ಪ್ರೀತಿಯ ದೇಶವಾಸಿಗಳೇ, ಇಂದಿನ ‘ಮನದ ಮಾತು’ ಇಷ್ಟು ವಿಚಾರಗಳೊಂದಿಗೆ ಇಲ್ಲಿಗೆ ಮುಕ್ತಾಯಗೊಳಿಸುತ್ತಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ನಾವು ಆಗಸ್ಟ್ 15 ರಂದು ಸ್ವಾತಂತ್ರ್ಯದ ಈ ಮಹಾನ್ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದೇವೆ. ದೇಶದ ಸ್ವಾತಂತ್ರ್ಯಕ್ಕಾಗಿ, ಬಲಿದಾನಗೈದವರನ್ನು ನಾವು ಸದಾ ಕಾಲ ಸ್ಮರಿಸಬೇಕು. ನಾವು ಅವರ ಕನಸುಗಳನ್ನು ಸಾಕಾರಗೊಳಿಸುವುದಕ್ಕಾಗಿ ಹಗಲಿರುಳೂ ಶ್ರಮಿಸಬೇಕು ಮತ್ತು ‘ಮನದ ಮಾತು’ ದೇಶವಾಸಿಗಳ ಈ ಶ್ರಮವನ್ನು, ಅನೇಕ ಸಾಮೂಹಿಕ ಪ್ರಯತ್ನಗಳನ್ನು ಜನರ ಮುಂದಿರಿಸುವ ಒಂದು ಮಾಧ್ಯಮವಾಗಿದೆ. ಮುಂದಿನ ಬಾರಿ, ಕೆಲವು ಹೊಸ ವಿಷಯಗಳೊಂದಿಗೆ, ನಿಮ್ಮನ್ನು ಭೇಟಿಯಾಗುತ್ತೇನೆ. ಅನೇಕಾನೇಕ ಧನ್ಯವಾದ. ನಮಸ್ಕಾರ.

*****



(Release ID: 1944164) Visitor Counter : 163