ಪ್ರಧಾನ ಮಂತ್ರಿಯವರ ಕಛೇರಿ

ಜಾಗತಿಕ ಸಿರಿಧಾನ್ಯಗಳ (ಶ್ರೀ ಅನ್ನ) ಸಮಾವೇಶವನ್ನು ಉದ್ಘಾಟಿಸಿದ ಪ್ರಧಾನಿ



ಸ್ಮರಣಾರ್ಥ ಅಂಚೆಚೀಟಿ ಮತ್ತು ಸ್ಮರಣಾರ್ಥ ನಾಣ್ಯವನ್ನು ಅನಾವರಣಗೊಳಿಸಿದರು

ʻಭಾರತೀಯ ಸಿರಿಧಾನ್ಯ (ಶ್ರೀ ಅನ್ನ) ನವೋದ್ಯಮಗಳ ಪಟ್ಟಿʼ ಮತ್ತು ಸಿರಿಧಾನ್ಯಗಳ (ಶ್ರೀ ಅನ್ನ) ಮಾನದಂಡಗಳ ಪುಸ್ತಕವನ್ನು  ಡಿಜಿಟಲ್ ರೂಪದಲ್ಲಿ ಬಿಡುಗಡೆ ಮಾಡಲಾಯಿತು

ʻಭಾರತೀಯ ಕೃಷಿ ಸಂಶೋಧನಾ ಮಂಡಳಿ(ಐಸಿಎಆರ್) ಅಡಿಯಲ್ಲಿನ ʻಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆʼಯನ್ನು ʻಜಾಗತಿಕ ಉತ್ಕೃಷ್ಟತಾ ಕೇಂದ್ರʼವೆಂದು ಘೋಷಿಸಲಾಯಿತು

"ಜಾಗತಿಕ ಸಿರಿಧಾನ್ಯಗಳ ಸಮ್ಮೇಳನವು ಜಾಗತಿಕ ಒಳಿತಿಗಾಗಿ ಭಾರತದ ಜವಾಬ್ದಾರಿಗಳ ಸಂಕೇತವಾಗಿದೆ"

"ಶ್ರೀ ಅನ್ನ ಭಾರತದಲ್ಲಿ ಸಮಗ್ರ ಅಭಿವೃದ್ಧಿಯ ಮಾಧ್ಯಮವಾಗುತ್ತಿದೆ. ಇದು ಗಾಂವ್ ಮತ್ತು ಗರೀಬ್ (ಹಳ್ಳಿ ಮತ್ತು ಬಡವರು) ಜೊತೆ ಸಂಪರ್ಕ ಹೊಂದಿದೆ

"ಮನೆಯಲ್ಲಿ ಪ್ರತಿ ವ್ಯಕ್ತಿಗೆ ತಿಂಗಳವಾರು ಸಿರಿಧಾನ್ಯ ಬಳಕೆಯು 3 ಕಿಲೋಗ್ರಾಂಗಳಿಂದ 14 ಕಿಲೋಗ್ರಾಂಗಳಿಗೆ ಹೆಚ್ಚಿದೆ"

"ಭಾರತದ ಸಿರಿಧಾನ್ಯ ಅಭಿಯಾನವು ದೇಶದ 2.5 ಕೋಟಿ ಸಿರಿಧಾನ್ಯ ಉತ್ಪಾದಿಸುವ ರೈತರಿಗೆ ವರದಾನವಾಗಲಿದೆ"

"ಭಾರತವು ಸದಾ ವಿಶ್ವದೆಡೆಗಿನ ಜವಾಬ್ದಾರಿ ಮತ್ತು ಮಾನವೀಯತೆಯ ಸೇವೆ ಮಾಡುವ ಸಂಕಲ್ಪಕ್ಕೆ ಆದ್ಯತೆ ನೀಡಿದೆ"

"ನಮಗೆ ಆಹಾರ ಭದ್ರತೆ ಮತ್ತು ಆಹಾರ ಪದ್ಧತಿಯ ಸಮಸ್ಯೆ ಇದೆ, ʻಶ್ರೀ ಅನ್ನʼ ಇದಕ್ಕೆ  ಪರಿಹಾರ ಒದಗಿಸಬಲ್ಲದು"

"ಭಾರತವು ತನ್ನ ಪರಂಪರೆಯಿಂದ ಸ್ಫೂರ್ತಿ ಪಡೆಯುತ್ತದೆ, ಸಮಾಜದಲ್ಲಿ ಬದಲಾವಣೆಯನ್ನು ಪ್ರೇರೇಪಿಸುತ್ತದೆ ಮತ್ತು ಆ ಬದಲಾವಣೆಯನ್ನು ಜಾಗತಿಕ ಯೋಗಕ್ಷೇಮ ವಿಚಾರದಲ್ಲಿ ಮುನ್ನೆಲೆಗೆ ತರುತ್ತದೆ "

"ಸಿರಿಧಾನ್ಯಗಳು ತಮ್ಮೊಂದಿಗೆ ಅಂತ್ಯವಿಲ್ಲದ ಸಾಧ್ಯತೆಗಳನ್ನು ತೆರೆದಿಡುತ್ತವೆ"

Posted On: 18 MAR 2023 1:39PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಆವರಣದಲ್ಲಿರುವ ʻಎನ್‌ಎಎಸ್‌ಎʼ ಕಾಂಪ್ಲೆಕ್ಸ್‌ನ ʻಸುಬ್ರಮಣ್ಯಂ ಹಾಲ್‌ʼನಲ್ಲಿ ʻಜಾಗತಿಕ ಸಿರಿಧಾನ್ಯಗಳ (ಶ್ರೀ ಅನ್ನ) ಸಮ್ಮೇಳನʼವನ್ನು ಉದ್ಘಾಟಿಸಿದರು. ಎರಡು ದಿನಗಳ ಈ ಜಾಗತಿಕ ಸಮ್ಮೇಳನವು ಸಿರಿಧಾನ್ಯಗಳಿಗೆ ಸಂಬಂಧಿಸಿದ ಎಲ್ಲಾ ಪ್ರಮುಖ ವಿಷಯಗಳ ಬಗ್ಗೆ ಗೋಷ್ಠಿಗಳನ್ನು ಒಳಗೊಂಡಿದೆ. ಉದಾಹರಣೆಗೆ ಉತ್ಪಾದಕರು, ಗ್ರಾಹಕರು ಮತ್ತು ಇತರ ಮಧ್ಯಸ್ಥಗಾರರಲ್ಲಿ ಸಿರಿಧಾನ್ಯಗಳ ಪ್ರಚಾರ ಮತ್ತು ಜಾಗೃತಿ; ಸಿರಿಧಾನ್ಯಗಳ ಮೌಲ್ಯ ಸರಪಳಿ ಅಭಿವೃದ್ಧಿ; ಸಿರಿಧಾನ್ಯಗಳ ಆರೋಗ್ಯ ಮತ್ತು ಪೌಷ್ಠಿಕಾಂಶದ ಅಂಶಗಳು; ಮಾರುಕಟ್ಟೆ ಸಂಪರ್ಕಗಳು; ಸಂಶೋಧನೆ ಮತ್ತು ಅಭಿವೃದ್ಧಿ ಇತ್ಯಾದಿ.

ಪ್ರಧಾನಮಂತ್ರಿಯವರು ವಸ್ತುಪ್ರದರ್ಶನ ಮತ್ತು ಖರೀದಿದಾರರ ಮಾರಾಟಗಾರರ ಸಭೆ ಪೆವಿಲಿಯನ್ ಅನ್ನು ಉದ್ಘಾಟಿಸಿದರು ಮತ್ತು ಅಲ್ಲಿಗೆ ಭೇಟಿ ನೀಡಿದರು. ಅವರು ಸ್ಮರಣಾರ್ಥ ಅಂಚೆಚೀಟಿ ಮತ್ತು ಸ್ಮರಣಾರ್ಥ ನಾಣ್ಯವನ್ನು ಅನಾವರಣಗೊಳಿಸಿದರು. ಇದಾದ ನಂತರ ಪ್ರಧಾನಮಂತ್ರಿಯವರು ಭಾರತೀಯ ಸಿರಿಧಾನ್ಯ (ಶ್ರೀ ಅನ್ನ) ನವೋದ್ಯಮಗಳ ಪಟ್ಟಿ ಮತ್ತು ಸಿರಿಧಾನ್ಯ (ಶ್ರೀ ಅನ್ನ) ಮಾನದಂಡಗಳ ಪುಸ್ತಕವನ್ನು ಡಿಜಿಟಲ್ ರೂಪದಲ್ಲಿ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಅಂತರರಾಷ್ಟ್ರೀಯ ನಾಯಕರು ತಮ್ಮ ಸಂದೇಶಗಳನ್ನು ತಿಳಿಸಿದರು. ಇಥಿಯೋಪಿಯಾದ ಅಧ್ಯಕ್ಷ ಘನತೆವೆತ್ತ ಸಾಹ್ಲೆ-ವರ್ಕ್ ಜೆವ್ಡೆ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಭಾರತ ಸರಕಾರವನ್ನು ಅಭಿನಂದಿಸಿದರು. ಈ ಸಮಯದಲ್ಲಿ ಜನರಿಗೆ ಆಹಾರ ನೀಡಲು ಸಿರಿಧಾನ್ಯಗಳು ಕೈಗೆಟುಕುವ ಮತ್ತು ಪೌಷ್ಟಿಕ ಆಯ್ಕೆಯನ್ನು ಒದಗಿಸುತ್ತವೆ ಎಂದು ಅವರು ಹೇಳಿದರು. ಇಥಿಯೋಪಿಯಾ ದೇಶವು ಉಪ-ಸಹಾರ ಆಫ್ರಿಕಾದಲ್ಲಿ ರಾಗಿ ಉತ್ಪಾದಿಸುವ ಪ್ರಮುಖ ದೇಶವಾಗಿದೆ. ಸಿರಿಧಾನ್ಯಗಳ ಪ್ರಚಾರಕ್ಕೆ ಅಗತ್ಯವಾದ ನೀತಿಯತ್ತ ಗಮನವನ್ನು ಸೆಳೆಯಲು ಮತ್ತು ಅವುಗಳ ಪರಿಸರ ವ್ಯವಸ್ಥೆಗೆ ಅನುಗುಣವಾಗಿ ಬೆಳೆಗಳ ಸೂಕ್ತತೆಯನ್ನು ಅಧ್ಯಯನ ಮಾಡಲು ಈ ಕಾರ್ಯಕ್ರಮ ಹೇಗೆ ಉಪಯೋಗವಾಗಲಿದೆ ಅವರು ಒತ್ತಿಹೇಳಿದರು.

ಗಯಾನದ ಅಧ್ಯಕ್ಷ ಗೌರವಾನ್ವಿತ ಡಾ. ಮುಹಮ್ಮದ್ ಇರ್ಫಾನ್ ಅಲಿ ಅವರು ಮಾತನಾಡಿ, ಸಿರಿಧಾನ್ಯಗಳನ್ನು ಉತ್ತೇಜಿಸುವಲ್ಲಿ ಭಾರತವು ಜಾಗತಿಕ ನಾಯಕತ್ವವನ್ನು ವಹಿಸಿಕೊಂಡಿದೆ ಮತ್ತು ಹಾಗೆ ಮಾಡುವ ಮೂಲಕ ಅದು ತನ್ನ ಪರಿಣತಿಯನ್ನು ವಿಶ್ವದ ಇತರ ಭಾಗಗಳ ಬಳಕೆಗೆ ಮುಂದಿಡುತ್ತಿದೆ ಎಂದು ಹೇಳಿದರು. ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷದ ಯಶಸ್ಸು ʻಸುಸ್ಥಿರ ಅಭಿವೃದ್ಧಿ ಗುರಿʼಗಳನ್ನು ಸಾಧಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದ ಅವರು, ಆಹಾರ ಭದ್ರತೆಯನ್ನು ಖಾತ್ರಿಪಡಿಸುವಲ್ಲಿ ಸಿರಿಧಾನ್ಯಗಳು ಪ್ರಮುಖ ಅಂಶವೆಂದು ಗಯಾನಾ ಗುರುತಿಸುವುದಾಗಿ ತಿಳಿಸಿದರು. ರಾಗಿ ಉತ್ಪಾದನೆಗಾಗಿ ಗಯಾನಾ 200 ಎಕರೆ ಭೂಮಿಯನ್ನು ಮೀಸಲಿಡುವ ಮೂಲಕ ದೊಡ್ಡ ಮಟ್ಟದಲ್ಲಿ ಸಿರಿಧಾನ್ಯಗಳ ಉತ್ಪಾದನೆಗಾಗಿ ಭಾರತದೊಂದಿಗೆ ಸಹಯೋಗವನ್ನು ಪ್ರಾರಂಭಿಸುತ್ತಿದೆ, ಗಯಾನಾ ದೇಶಕ್ಕೆ ಭಾರತವು ತಂತ್ರಜ್ಞಾನದ ಜೊತೆಗೆ ತಾಂತ್ರಿಕ ಮಾರ್ಗದರ್ಶನ ಮತ್ತು ಬೆಂಬಲವನ್ನು ನೀಡುತ್ತದೆ ಎಂದರು. 

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ʻಜಾಗತಿಕ ಸಿರಿಧಾನ್ಯಗಳ ಸಮ್ಮೇಳನʼ  ಆಯೋಜನೆಗಾಗಿ ಎಲ್ಲರನ್ನೂ ಅಭಿನಂದಿಸಿದರು. ಇಂತಹ ಕಾರ್ಯಕ್ರಮಗಳು ಕೇವಲ ಜಾಗತಿಕ ಒಳಿತಿಗಾಗಿ ಮಾತ್ರವಲ್ಲದೆ, ಜಾಗತಿಕ ಒಳಿತಿಗಾಗಿ ಭಾರತದ ಜವಾಬ್ದಾರಿಗಳ ಸಂಕೇತವಾಗಿದೆ ಎಂದರು. ಯಾವುದೇ ನಿರ್ಣಯವನ್ನು ಅಪೇಕ್ಷಣೀಯ ಫಲಿತಾಂಶವಾಗಿ ಪರಿವರ್ತಿಸುವ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಭಾರತದ ನಿರಂತರ ಪ್ರಯತ್ನಗಳ ನಂತರ 2023ನೇ ವರ್ಷವನ್ನು ವಿಶ್ವಸಂಸ್ಥೆಯು ʻಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷʼವೆಂದು ಘೋಷಿಸಿದೆ ಎಂದು ಪುನರುಚ್ಚರಿಸಿದರು. ವಿಶ್ವ ಸಿರಿಧಾನ್ಯಗಳ ವರ್ಷವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಭಾರತದ ಅಭಿಯಾನವು ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿ, ಕೃಷಿ ಕೇಂದ್ರಗಳು, ಶಾಲೆಗಳು, ಕಾಲೇಜುಗಳು ಮತ್ತು ಕೃಷಿ ವಿಶ್ವವಿದ್ಯಾಲಯಗಳು, ಭಾರತೀಯ ರಾಯಭಾರ ಕಚೇರಿಗಳು ಮತ್ತು ಹಲವಾರು ವಿದೇಶಗಳ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಸಿರಿಧಾನ್ಯಗಳ ಕೃಷಿ, ಸಿರಿಧಾನ್ಯಗಳ ಆರ್ಥಿಕತೆ, ಆರೋಗ್ಯ ಪ್ರಯೋಜನಗಳು ಮತ್ತು ರೈತರ ಆದಾಯ ಮುಂತಾದ ವಿಷಯಗಳ ಬಗ್ಗೆ ಚಿಂತನ-ಮಂಥನ ಅಧಿವೇಶನಗಳು ನಡೆಯಲಿವೆ ಎಂದು ಪ್ರಧಾನಿ ಒತ್ತಿ ಹೇಳಿದರು. ಇಂದು 75 ಲಕ್ಷಕ್ಕೂ ಹೆಚ್ಚು ರೈತರು ಈ ಕಾರ್ಯಕ್ರಮದೊಂದಿಗೆ ವರ್ಚ್ಯುವಲ್‌ ರೂಪದಲ್ಲಿ ಸಂಪರ್ಕ ಹೊಂದಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯ ಅನಾವರಣದ ಬಗ್ಗೆ, ಸಿರಿಧಾನ್ಯ ಮಾನದಂಡಗಳ ಪುಸ್ತಕ ಬಿಡುಗಡೆ ಬಗ್ಗೆ ಮತ್ತು ʻಐಸಿಎಆರ್ʼನ ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆಯನ್ನು ʻಜಾಗತಿಕ ಉತ್ಕೃಷ್ಟತಾ ಕೇಂದ್ರʼವೆಂದು ಘೋಷಿಸಿದ ಬಗ್ಗೆ ಪ್ರಧಾನಿ ಒತ್ತಿ ಹೇಳಿದರು. 

ವಸ್ತುಪ್ರದರ್ಶನಕ್ಕೆ ಭೇಟಿ ನೀಡಿದ ಪ್ರಧಾನಿ ಅವರು, ಸಿರಿಧಾನ್ಯ ಕೃಷಿಗೆ ಸಂಬಂಧಿಸಿದ ಎಲ್ಲ ಆಯಾಮಗಳನ್ನು ಒಂದೇ ಸೂರಿನಡಿ ಅರ್ಥಮಾಡಿಕೊಳ್ಳುವಂತೆ ಪ್ರತಿನಿಧಿಗಳಿಗೆ ಸಲಹೆ ನೀಡಿದರು. ಸಿರಿಧಾನ್ಯ ಸಂಬಂಧಿತ ಉದ್ಯಮಗಳು ಮತ್ತು ಕೃಷಿಗಾಗಿ ನವೋದ್ಯಮಗಳನ್ನು ಆರಂಭಿಸಿರುವ ಯುವಕರ ಪ್ರಯತ್ನಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. "ಇದು ಸಿರಿಧಾನ್ಯಗಳ ಬಗ್ಗೆ ಭಾರತದ ಬದ್ಧತೆಯ ಸೂಚನೆಯಾಗಿದೆ," ಎಂದು ಅವರು ಬಣ್ಣಿಸಿದರು.

ಭಾರತವು ಈಗ ಸಿರಿಧಾನ್ಯಗಳನ್ನು ʻಶ್ರೀ ಅನ್ನʼ ಎಂದು ಕರೆಯುತ್ತಿರುವುದರಿಂದ, ಸಿರಿಧಾನ್ಯಗಳ ಬ್ರಾಂಡಿಂಗ್‌ಗೆ ಭಾರತ ಕೈಗೊಂಡ ಉಪಕ್ರಮಗಳ ಬಗ್ಗೆ ಪ್ರಧಾನಮಂತ್ರಿಯವರು ವಿದೇಶಿ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.            ʻಶ್ರೀ ಅನ್ನʼವು ಕೇವಲ ಆಹಾರ ಅಥವಾ ಕೃಷಿಗೆ ಸೀಮಿತವಾಗಿಲ್ಲ ಎಂದು ಅವರು ವಿವರಿಸಿದರು. ಭಾರತೀಯ ಸಂಪ್ರದಾಯದ ಪರಿಚಯವಿರುವವವರಿಗೆ ಎಲ್ಲಕ್ಕಿಂತ ಮೊದಲು ʻಶ್ರೀʼ ಶಬ್ಧವನ್ನು ಏಕೆ ಸೇರಿಸುತ್ತಾರೆ ಎಂಬುದರ ಮಹತ್ವವನ್ನು ಅರ್ಥವಾಗಿರುತ್ತದೆ ಎಂದರು. "ಶ್ರೀ ಅನ್ನ ಭಾರತದಲ್ಲಿ ಸಮಗ್ರ ಅಭಿವೃದ್ಧಿಯ ಮಾಧ್ಯಮವಾಗುತ್ತಿದೆ. ಇದು ಗಾಂವ್ ಮತ್ತು ಗರೀಬ್ (ಹಳ್ಳಿ ಮತ್ತು ಬಡವರು) ಜೊತೆ ಸಂಪರ್ಕ ಹೊಂದಿದೆ", ಎಂದು ವಿವರಿಸಿದರು.  “ಶ್ರೀ ಅನ್ನ- ದೇಶದ ಸಣ್ಣ ರೈತರಿಗೆ ಸಮೃದ್ಧಿಯ ಬಾಗಿಲು, ಶ್ರೀ ಅನ್ನ - ಕೋಟ್ಯಂತರ ದೇಶವಾಸಿಗಳಿಗೆ ಪೌಷ್ಠಿಕಾಂಶದ ಮೂಲಾಧಾರ, ಶ್ರೀ ಅನ್ನ - ಆದಿವಾಸಿ ಸಮುದಾಯಕ್ಕೆ ಸನ್ಮಾನ, ಶ್ರೀ ಅನ್ನ - ಕಡಿಮೆ ನೀರಿಗೆ ಹೆಚ್ಚಿನ ಬೆಳೆಗಳನ್ನು ಪಡೆಯುವುದು, ಶ್ರೀ ಅನ್ನ - ರಾಸಾಯನಿಕ ಮುಕ್ತ ಕೃಷಿಗೆ ದೊಡ್ಡ ಅಡಿಪಾಯ, ಶ್ರೀ ಅನ್ನ - ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುವಲ್ಲಿ ದೊಡ್ಡ ಸಹಾಯ" ಎಂದು ಅವರು ಹೇಳಿದರು.

ಶ್ರೀ ಅನ್ನವನ್ನು ಜಾಗತಿಕ ಆಂದೋಲನವನ್ನಾಗಿ ಪರಿವರ್ತಿಸುವ ಸರಕಾರದ ನಿರಂತರ ಪ್ರಯತ್ನಗಳನ್ನು ಒತ್ತಿಹೇಳಿದ ಪ್ರಧಾನಮಂತ್ರಿಯವರು, 2018ರಲ್ಲಿ ಸಿರಿಧಾನ್ಯಗಳನ್ನು ಪೌಷ್ಟಿಕ-ಧಾನ್ಯಗಳೆಂದು ಘೋಷಿಸಲಾಯಿತು. ರೈತರಿಗೆ ಅದರ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವುದರಿಂದ ಹಿಡಿದು ಮಾರುಕಟ್ಟೆಯಲ್ಲಿ ಆಸಕ್ತಿಯನ್ನು ಉಂಟುಮಾಡುವವರೆಗೆ ಎಲ್ಲಾ ಹಂತಗಳಲ್ಲಿ ಕೆಲಸಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಸಿರಿಧಾನ್ಯಗಳನ್ನು ಪ್ರಾಥಮಿಕವಾಗಿ ದೇಶದ 12-13 ವಿವಿಧ ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ, ಅಲ್ಲಿ ಪ್ರತಿ ವ್ಯಕ್ತಿಗೆ ತಿಂಗಳಿಗೆ ಮನೆಯಲ್ಲಿ ಸಿರಿಧಾನ್ಯಗಳ ಬಳಕೆ 3 ಕಿಲೋಗ್ರಾಂಗಿಂತ ಹೆಚ್ಚಾಗಿ ಇರಲಿಲ್ಲ. ಆದರೆ, ಇಂದು ಈ ಪ್ರಮಾಣವು ಇಂದು ತಿಂಗಳಿಗೆ 14 ಕಿಲೋಗ್ರಾಂಗಳಿಗೆ ಏರಿದೆ ಎಂದು ಪ್ರಧಾನಿ ಹೇಳಿದರು. ಸಿರಿಧಾನ್ಯಗಳ ಆಹಾರ ಉತ್ಪನ್ನಗಳ ಮಾರಾಟವೂ ಸರಿಸುಮಾರು 30% ರಷ್ಟು ಹೆಚ್ಚಾಗಿದೆ ಎಂದು ಅವರು ಮಾಹಿತಿ ನೀಡಿದರು. ಸಿರಿಧಾನ್ಯಗಳ ಪಾಕವಿಧಾನಗಳಿಗೆ ಮೀಸಲಾಗಿರುವ ಸಾಮಾಜಿಕ ಮಾಧ್ಯಮ ಚಾನೆಲ್‌ಗಳ ಜೊತೆಗೆ, ರಾಗಿ ಕೆಫೆಗಳ ಪ್ರಾರಂಭದ ಬಗ್ಗೆ  ಅವರು ಗಮನ ಸೆಳೆದರು. 'ಒಂದು ಜಿಲ್ಲೆ, ಒಂದು ಉತ್ಪನ್ನ' ಯೋಜನೆಯಡಿ ದೇಶದ 19 ಜಿಲ್ಲೆಗಳಲ್ಲಿ ಸಿರಿಧಾನ್ಯಗಳನ್ನು ಆಯ್ಕೆ ಮಾಡಲಾಗಿದೆ ಎಂದು ಶ್ರೀ ಮೋದಿ ಮಾಹಿತಿ ನೀಡಿದರು.

ಭಾರತದಲ್ಲಿ ಸುಮಾರು 2.5 ಕೋಟಿ ಸಣ್ಣ ರೈತರು ಸಿರಿಧಾನ್ಯಗಳ ಉತ್ಪಾದನೆಯಲ್ಲಿ ನೇರವಾಗಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದ ಪ್ರಧಾನಮಂತ್ರಿಯವರು, "ರೈತರು ಕಡಿಮೆ ಭೂಮಿಯನ್ನು ಹೊಂದಿದ್ದರೂ ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಿದ್ದಾರೆ. ಭಾರತದ ಸಿರಿಧಾನ್ಯ ಅಭಿಯಾನ - ʻಶ್ರೀ ಅನ್ನʼ ಅಭಿಯಾನವು ದೇಶದ 2.5 ಕೋಟಿ ರೈತರಿಗೆ ವರದಾನವಾಗಲಿದೆ" ಎಂದು ಹೇಳಿದರು. ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಸಿರಿಧಾನ್ಯಗಳನ್ನು ಬೆಳೆಯುವ 2.5 ಕೋಟಿ ಸಣ್ಣ ರೈತರ ಬಗ್ಗೆ ಸರಕಾರ ಕಾಳಜಿ ವಹಿಸಿದೆ ಎಂದು ಅವರು ತಿಳಿಸಿದರು. ಸಿರಿಧಾನ್ಯಗಳು ಈಗ ಸಂಸ್ಕರಿಸಿದ ಮತ್ತು ಪ್ಯಾಕೇಜ್ ಮಾಡಿದ ಆಹಾರ ಪದಾರ್ಥಗಳ ಮೂಲಕ ಅಂಗಡಿಗಳು ಮತ್ತು ಮಾರುಕಟ್ಟೆಗಳನ್ನು ತಲುಪುತ್ತಿವೆ ಎಂದು ಹೇಳಿದ ಪ್ರಧಾನಿ, ʻಶ್ರೀ ಅನ್ನʼ ಮಾರುಕಟ್ಟೆಗೆ ಉತ್ತೇಜನ ದೊರೆತಾಗ ಈ 2.5 ಕೋಟಿ ಸಣ್ಣ ರೈತರ ಆದಾಯ ಹೆಚ್ಚಾಗುತ್ತದೆ, ಆ ಮೂಲಕ ಗ್ರಾಮೀಣ ಆರ್ಥಿಕತೆಗೆ ಬಲ ನೀಡುತ್ತದೆ ಎಂದು ಒತ್ತಿ ಹೇಳಿದರು. ʻಶ್ರೀ ಅನ್ನʼ ಕ್ಷೇತ್ರದಲ್ಲಿ 500ಕ್ಕೂ ಹೆಚ್ಚು ನವೋದ್ಯಮಗಳು ತಲೆ ಎತ್ತಿವೆ. ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯ ʻಕೃಷಿ ಉತ್ಪನ್ನ ಸಂಘಗಳು (ಎಫ್‌ಪಿಒ) ಸಹ ಮುಂದೆ ಬರುತ್ತಿವೆ ಎಂದು ಪ್ರಧಾನಿ ಮಾಹಿತಿ ನೀಡಿದರು. ದೇಶದಲ್ಲಿ ಸಂಪೂರ್ಣ ಪೂರೈಕೆ ಸರಪಳಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ, ಅಲ್ಲಿ ಸಣ್ಣ ಹಳ್ಳಿಗಳ ಸ್ವಸಹಾಯ ಗುಂಪುಗಳ ಮಹಿಳೆಯರು ರಾಗಿ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ, ಅದು ಮಾಲ್‌ಗಳು ಮತ್ತು ಸೂಪರ್‌ ಮಾರ್ಕೆಟ್‌ಗಳನ್ನು ಪ್ರವೇಶಿಸುತ್ತಿದೆ ಎಂದು ಅವರು ಗಮನಸೆಳೆದರು.

ʻಜಿ-20ʼ ಶೃಂಗಸಭೆಗೆ ʻಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯʼ ಎಂಬ ಭಾರತದ ಧ್ಯೇಯವಾಕ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಇಡೀ ಜಗತ್ತನ್ನು ಒಂದು ಕುಟುಂಬವಾಗಿ ಪರಿಗಣಿಸುವುದು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷದಲ್ಲಿಯೂ ಪ್ರತಿಬಿಂಬಿತವಾಗಿದೆ ಎಂದರು. "ಭಾರತವು ಸದಾ ವಿಶ್ವದ ಬಗ್ಗೆ ಕರ್ತವ್ಯದ ಭಾವನೆ ಮತ್ತು ಮಾನವೀಯತೆಯ ಸೇವೆ ಮಾಡುವ ಸಂಕಲ್ಪಕ್ಕೆ ಆದ್ಯತೆ ನೀಡಿದೆ" ಎಂದು ಪ್ರಧಾನಿ ಹೇಳಿದರು. ಯೋಗದ ಉದಾಹರಣೆಯನ್ನು ನೀಡಿದ ಪ್ರಧಾನಮಂತ್ರಿಯವರು, ʻಅಂತಾರಾಷ್ಟ್ರೀಯ ಯೋಗ ದಿನʼದ ಮೂಲಕ ಯೋಗದ ಪ್ರಯೋಜನಗಳು ಇಡೀ ವಿಶ್ವವನ್ನು ತಲುಪುವಂತೆ ಭಾರತ ಖಾತ್ರಿಪಡಿಸಿದೆ ಎಂದರು. ಇಂದು ವಿಶ್ವದ 100ಕ್ಕೂ ಹೆಚ್ಚು ದೇಶಗಳಲ್ಲಿ ಯೋಗವನ್ನು ಉತ್ತೇಜಿಸಲಾಗುತ್ತಿದೆ ಮತ್ತು ವಿಶ್ವದ 30ಕ್ಕೂ ಹೆಚ್ಚು ದೇಶಗಳು ಆಯುರ್ವೇದಕ್ಕೂ ಮಾನ್ಯತೆ ನೀಡಿವೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ʻಅಂತಾರಾಷ್ಟ್ರೀಯ ಸೌರ ಒಕ್ಕೂಟʼದ ಬಗ್ಗೆಯೂ ಬೆಳಕು ಚೆಲ್ಲಿದ ಅವರು, ಸುಸ್ಥಿರ ಭೂಮಿಯನ್ನು ಸೃಷ್ಟಿಸಲು ಇದು ಪರಿಣಾಮಕಾರಿ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ. 100ಕ್ಕೂ ಹೆಚ್ಚು ದೇಶಗಳು ಆಂದೋಲನಕ್ಕೆ ಕೈ ಜೋಡಿಸಿವೆ ಎಂದು ಹೇಳಿದರು. "ಲೈಫ್‌ (LiFE) ಮಿಷನ್ ಅನ್ನು ಮುನ್ನಡೆಸುವುದಿರಲಿ ಅಥವಾ ಹವಾಮಾನ ಬದಲಾವಣೆಯ ಗುರಿಗಳನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಸಾಧಿಸುವುದಿರಲಿ ಎಲ್ಲರದರಲ್ಲೂ ಭಾರತವು ತನ್ನ ಪರಂಪರೆಯಿಂದ ಸ್ಫೂರ್ತಿ ಪಡೆಯುತ್ತದೆ, ಸಮಾಜದಲ್ಲಿ ಬದಲಾವಣೆಯನ್ನು ಪ್ರೇರೇಪಿಸುತ್ತದೆ ಮತ್ತು ಆ ಬದಲಾವಣೆಯನ್ನು ಜಾಗತಿಕ ಯೋಗಕ್ಷೇಮದ ವಿಚಾರದಲ್ಲಿ ಮುನ್ನೆಲೆಗೆ ತರುತ್ತದೆ" ಎಂದು ಪ್ರಧಾನಿ ಹೇಳಿದರು. ಭಾರತದ ವಿವಿಧ ಪ್ರದೇಶಗಳಲ್ಲಿ ಪ್ರಚಲಿತದಲ್ಲಿರುವ ಜೋಳ, ಸಜ್ಜೆ, ರಾಗಿ, ಸಾಮಾ, ಕಂಗ್ನಿ, ಚಿನಾ, ಕೊಡೋನ್, ಕುಟ್ಕಿ ಮತ್ತು ಕುಟ್ಟುಗಳಂತಹ ʻಶ್ರೀ ಅನ್ನʼದ ಉದಾಹರಣೆಗಳನ್ನು ನೀಡಿದ ಪ್ರಧಾನಮಂತ್ರಿಯವರು, ಸಿರಿಧಾನ್ಯಗಳು ಶತಮಾನಗಳಿಂದ ಭಾರತದ ಜೀವನಶೈಲಿಯ ಭಾಗವಾಗಿದವೆ ಎಂದರು. ಭಾರತವು ತನ್ನ ಕೃಷಿ ಪದ್ಧತಿಗಳು ಮತ್ತು ಶ್ರೀ ಅನ್ನಕ್ಕೆ ಸಂಬಂಧಿಸಿದ ಅನುಭವಗಳನ್ನು ವಿಶ್ವದೊಂದಿಗೆ ಹಂಚಿಕೊಳ್ಳಲು ಬಯಸುತ್ತದೆ ಮತ್ತು ಇತರ ದೇಶಗಳಿಂದ ಕಲಿಯಲು ಬಯಸುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ ಸ್ಥಿರವಾದ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸುವಂತೆ ಉಪಸ್ಥಿತರಿರುವ ಮಿತ್ರ ರಾಷ್ಟ್ರಗಳ ಕೃಷಿ ಸಚಿವರಿಗೆ ವಿಶೇಷವಾಗಿ ಪ್ರಧಾನಿ ವಿನಂತಿಸಿದರು. ಹೊಲದಿಂದ ಮಾರುಕಟ್ಟೆಗೆ ಮತ್ತು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸಿರಿಧಾನ್ಯಗಳ ಹಂಚಿಕೆಯ ಜವಾಬ್ದಾರಿಗಳೊಂದಿಗೆ ಹೊಸ ಪೂರೈಕೆ ಸರಪಳಿಯನ್ನು ಅಭಿವೃದ್ಧಿಪಡಿಸಬೇಕು ಎಂದು ಒತ್ತಿ ಹೇಳಿದರು.

ಸಿರಿಧಾನ್ಯಗಳ ಹವಾಮಾನ ಸ್ಥಿತಿಸ್ಥಾಪಕತ್ವದ ಬಗ್ಗೆಯೂ ಪ್ರಧಾನಿ ಬೆಳಕು ಚೆಲ್ಲಿದರು. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿಯೂ ಅವುಗಳನ್ನು ಸುಲಭವಾಗಿ ಉತ್ಪಾದಿಸಬಹುದು ಎಂದು ಮಾಹಿತಿ ನೀಡಿದರು. ಇದು ನೀರಿನ ಕೊರತೆಯಿರುವ ಪ್ರದೇಶಗಳಿಗೆ ಆದ್ಯತೆಯ ಬೆಳೆಯಾಗಿದೆ. ಏಕೆಂದರೆ ಇದನ್ನು ಉತ್ಪಾದಿಸಲು ತುಲನಾತ್ಮಕವಾಗಿ ಕಡಿಮೆ ನೀರು ಬೇಕಾಗುತ್ತದೆ ಎಂದು ಅವರು ಮಾಹಿತಿ ನೀಡಿದರು. ರಾಸಾಯನಿಕಗಳಿಲ್ಲದೆ ಸಿರಿಧಾನ್ಯಗಳನ್ನು ನೈಸರ್ಗಿಕವಾಗಿ ಬೆಳೆಯಬಹುದು ಮತ್ತು ಆ ಮೂಲಕ ಮಾನವರು ಮತ್ತು ಮಣ್ಣಿನ ಆರೋಗ್ಯವನ್ನು ಕಾಪಾಡಬಹುದು ಎಂದು ಅವರು ಹೇಳಿದರು.

ಇಂದಿನ ಜಗತ್ತಿನಲ್ಲಿ ಎದುರಿಸುತ್ತಿರುವ ಆಹಾರ ಭದ್ರತೆಯ ಸವಾಲುಗಳನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಜಗತ್ತಿನ ದಕ್ಷಿಣ ಭಾಗದಲ್ಲಿ ಬಡವರನ್ನು ಕಾಡುತ್ತಿರುವ ಆಹಾರ ಭದ್ರತೆಯ ಸವಾಲು ಹಾಗೂ ಜಾಗತ್ತಿನ ಉತ್ತರದಲ್ಲಿ ಆಹಾರ ಪದ್ಧತಿಗೆ ಸಂಬಂಧಿಸಿದ ರೋಗಗಳ ಬಗ್ಗೆ ಬೆಳಕು ಚೆಲ್ಲಿದರು. "ಒಂದು ಕಡೆ ನಮಗೆ ಆಹಾರ ಭದ್ರತೆಯ ಸಮಸ್ಯೆಯಿದ್ದರೆ, ಮತ್ತೊಂದೆಡೆ ಆಹಾರ ಪದ್ಧತಿಯ ಸಮಸ್ಯೆ ಇದೆ" ಎಂದು ಅವರು ಹೇಳಿದರು. ಉತ್ಪನ್ನಗಳಲ್ಲಿ ರಾಸಾಯನಿಕಗಳ ಭಾರಿ ಬಳಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ʻಶ್ರೀ ಅನ್ನʼವು ಅಂತಹ ಪ್ರತಿಯೊಂದು ಸಮಸ್ಯೆಗೂ ಪರಿಹಾರಗಳನ್ನು ಒದಗಿಸುತ್ತದೆ. ಏಕೆಂದರೆ ಅವುಗಳನ್ನು ಬೆಳೆಯುವುದು ಸುಲಭ, ಅದರ ವೆಚ್ಚವೂ ಕಡಿಮೆ. ಜೊತೆಗೆ ಇದು ಇತರ ಬೆಳೆಗಳಿಗಿಂತ ವೇಗವಾಗಿ ಕೃಷಿಗೆ ಸಿದ್ಧವಾಗುತ್ತದೆ ಎಂದು ಪ್ರಧಾನಿ ಹೇಳಿದರು. ʻಶ್ರೀ ಅನ್ನʼದ ಪ್ರಯೋಜನಗಳನ್ನು ಪಟ್ಟಿ ಮಾಡಿದ ಪ್ರಧಾನಮಂತ್ರಿಯವರು, ಇವುಗಳು ಪೌಷ್ಠಿಕಾಂಶದಲ್ಲಿ ಸಮೃದ್ಧವಾಗಿದೆ, ರುಚಿಯಲ್ಲಿ ವಿಶೇಷವಾಗಿದೆ, ಹೆಚ್ಚಿನ ಫೈಬರ್ ಅಂಶವನ್ನು ಹೊಂದಿವೆ. ದೇಹ ಮತ್ತು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿವೆ. ಜೀವನಶೈಲಿಗೆ ಸಂಬಂಧಿಸಿದ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತವೆ ಎಂದು ಹೇಳಿದರು.

"ಸಿರಿಧಾನ್ಯಗಳು ತಮ್ಮೊಂದಿಗೆ ಅನಂತ ಸಾಧ್ಯತೆಗಳನ್ನು ಅನಾವರಣಗೊಳಿಸುತ್ತವೆ" ಎಂದು ಪ್ರಧಾನಿ ಬಣ್ಣಿಸಿದರು. ಭಾರತದ ರಾಷ್ಟ್ರೀಯ ಆಹಾರ ಉತ್ಪಾದನೆಗೆ ʻಶ್ರೀ ಅನ್ನʼದ ಕೊಡುಗೆ ಕೇವಲ 5-6 ಪ್ರತಿಶತದಷ್ಟಿದೆ ಎಂದು ತಿಳಿಸಿದ ಪ್ರಧಾನಮಂತ್ರಿಯವರು, ಈ ಕೊಡುಗೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಕೃಷಿ ಕ್ಷೇತ್ರದ ವಿಜ್ಞಾನಿಗಳು ಮತ್ತು ತಜ್ಞರನ್ನು ಒತ್ತಾಯಿಸಿದರು. ಅಲ್ಲದೆ, ಪ್ರತಿ ವರ್ಷ ಸಾಧಿಸಬಹುದಾದ ಗುರಿಗಳನ್ನು ನಿಗದಿಪಡಿಸುವಂತೆ ಸಲಹೆ ನೀಡಿದರು. ಆಹಾರ ಸಂಸ್ಕರಣಾ ಕ್ಷೇತ್ರಕ್ಕೆ ಉತ್ತೇಜನ ನೀಡಲು ದೇಶವು ʻಉತ್ಪಾದನೆ ಆಧರಿತ ಪ್ರೋತ್ಸಾಹಧನʼ(ಪಿಎಲ್‌ಐ) ಯೋಜನೆಯನ್ನು ಸಹ ಪ್ರಾರಂಭಿಸಿದೆ ಎಂದು ಅವರು ಮಾಹಿತಿ ನೀಡಿದರು. ಸಿರಿಧಾನ್ಯ ವಲಯವು ಇದರಿಂದ ಗರಿಷ್ಠ ಲಾಭ ಪಡೆಯುವುದನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರ ಅವರು ಸಿರಿಧಾನ್ಯ ಉತ್ಪನ್ನಗಳನ್ನು ತಯಾರಿಸಲು ಹೆಚ್ಚಿನ ಕಂಪನಿಗಳು ಮುಂದೆ ಬರುತ್ತವೆ ಎಂದರು. ಅನೇಕ ರಾಜ್ಯಗಳು ʻಶ್ರೀ ಅನ್ನʼವನ್ನು ತಮ್ಮ ಪಡಿತರ ವ್ಯವಸ್ಥೆಯಲ್ಲಿ ಸೇರಿಸಿವೆ. ಇತರ ರಾಜ್ಯಗಳೂ ಇದನ್ನು ಅನುಸರಿಸಬೇಕೆಂದು ಅವರು ಸಲಹೆ ನೀಡಿದರು. ಮಧ್ಯಾಹ್ನದ ಊಟದಲ್ಲಿ ʻಶ್ರೀ ಅನ್ನʼವನ್ನು ಸೇರಿಸಲು ಅವರು ಸಲಹೆ ನೀಡಿದರು. ಇದರಿಂದ ಮಕ್ಕಳು ಸರಿಯಾದ ಪೌಷ್ಠಿಕಾಂಶವನ್ನು ಪಡೆಯಲು ಸಾಧ್ಯವಾಗುವುದಲ್ಲದೆ, ಆಹಾರಕ್ಕೆ ಹೊಸ ರುಚಿ ಮತ್ತು ವೈವಿಧ್ಯತೆಯನ್ನು ತರಬಹುದು ಎಂದರು.

ಭಾಷಣವನ್ನು ಮುಗಿಸುವ ಮುನ್ನ ಪ್ರಧಾನಮಂತ್ರಿಯವರು, ಈ ಎಲ್ಲ ವಿಷಯಗಳ ಬಗ್ಗೆ ವಿವರವಾಗಿ ಚರ್ಚೆ ನಡಸುವ ಮತ್ತು ಅನುಷ್ಠಾನಕ್ಕಾಗಿ ಮಾರ್ಗಸೂಚಿಯನ್ನು ಸಹ ಸಿದ್ಧಪಡಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. "ರೈತರು ಮತ್ತು ಎಲ್ಲ ಪಾಲುದಾರರ ಜಂಟಿ ಪ್ರಯತ್ನಗಳೊಂದಿಗೆ, ಆಹಾರವು ಭಾರತ ಮತ್ತು ವಿಶ್ವದ ಸಮೃದ್ಧಿಗೆ ಹೊಸ ಹೊಳಪನ್ನು ನೀಡುತ್ತದೆ" ಎಂದು ಪ್ರಧಾನಿ ಮಾತು ಮುಗಿಸಿದರು.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್, ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್‌ ಜೈಶಂಕರ್, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಮನ್ಸುಖ್ ಮಾಂಡವೀಯ, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಮತ್ತು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಹಾಯಕ ಸಚಿವರಾದ ಶ್ರೀ ಕೈಲಾಶ್ ಚೌಧರಿ ಹಾಗೂ ಶ್ರೀಮತಿ ಶೋಭಾ ಕರಂದ್ಲಾಜೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಭಾರತದ ಪ್ರಸ್ತಾವನೆಯ ಆಧಾರದ ಮೇಲೆ, 2023ನೇ ಸಾಲಿನ ವರ್ಷವನ್ನು ʻಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷʼ (ಐವೈಎಂ) ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ (ಯುಎನ್‌ಜಿಎ) ಘೋಷಿಸಿದೆ. 2023ನೇ ಸಾಲಿನಲ್ಲಿ ʻಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷʼ ಆಚರಣೆಯನ್ನು ಒಂದು 'ಜನಾಂದೋಲನ'ವನ್ನಾಗಿ ಮಾಡುವ ಮತ್ತು ಭಾರತವನ್ನು 'ಸಿರಿಧಾನ್ಯಗಳ ಜಾಗತಿಕ ಕೇಂದ್ರ'ವನ್ನಾಗಿ ಮಾಡುವ ಪ್ರಧಾನ ಮಂತ್ರಿಯವರ ಆಶಯಕ್ಕೆ ಅನುಗುಣವಾಗಿ, ಕೇಂದ್ರ ಸರಕಾರದ ಎಲ್ಲಾ ಸಚಿವಾಲಯಗಳು / ಇಲಾಖೆಗಳು, ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು, ರೈತರು, ನವೋದ್ಯಮಗಳು, ರಫ್ತುದಾರರು, ಚಿಲ್ಲರೆ ವ್ಯಾಪಾರಗಳು ಮತ್ತು ಇತರ ಮಧ್ಯಸ್ಥಗಾರರನ್ನು ಸಿರಿಧಾನ್ಯಗಳ (ಶ್ರೀ ಅನ್ನ) ಪ್ರಯೋಜನಗಳ ಬಗ್ಗೆ ಪ್ರಚಾರ ಮಾಡಲು ಹಾಗೂ ಅವುಗಳ ಬಳಕೆಗೆ ಉತ್ತೇಜಿಸಲು ತೊಡಗಿಸಿಕೊಳ್ಳಲಾಗುತ್ತಿದೆ.  ಗ್ರಾಹಕರು, ಕೃಷಿಕರು  ಮತ್ತು ಹವಾಮಾನಕ್ಕೆ ಇವುಗಳಿಂದ ಆಗುವ ಅನುಕೂಲದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಭಾರತದಲ್ಲಿ ʻಜಾಗತಿಕ ಸಿರಿಧಾನ್ಯಗಳ (ಶ್ರೀ ಅನ್ನ) ಸಮಾವೇಶʼವನ್ನು ಆಯೋಜಿಸಲಾಗಿದೆ. 

ಎರಡು ದಿನಗಳ ಜಾಗತಿಕ ಸಮ್ಮೇಳನದಲ್ಲಿ ಸಿರಿಧಾನ್ಯಗಳಿಗೆ ಸಂಬಂಧಿಸಿದ ಎಲ್ಲಾ ಪ್ರಮುಖ ವಿಷಯಗಳ ಬಗ್ಗೆ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಉದಾಹರಣೆಗೆ ಉತ್ಪಾದಕರು, ಗ್ರಾಹಕರು ಮತ್ತು ಇತರ ಮಧ್ಯಸ್ಥಗಾರರಲ್ಲಿ ಸಿರಿಧಾನ್ಯಗಳ ಪ್ರಚಾರ ಮತ್ತು ಜಾಗೃತಿ; ಸಿರಿಧಾನ್ಯಗಳ ಮೌಲ್ಯ ಸರಪಳಿ ಅಭಿವೃದ್ಧಿ; ಸಿರಿಧಾನ್ಯಗಳ ಆರೋಗ್ಯ ಮತ್ತು ಪೌಷ್ಠಿಕಾಂಶದ ಅಂಶಗಳು; ಮಾರುಕಟ್ಟೆ ಸಂಪರ್ಕಗಳು; ಸಂಶೋಧನೆ ಮತ್ತು ಅಭಿವೃದ್ಧಿ ಇತ್ಯಾದಿ. ಸಮ್ಮೇಳನದಲ್ಲಿ ವಿವಿಧ ದೇಶಗಳ ಕೃಷಿ ಸಚಿವರು, ಅಂತರರಾಷ್ಟ್ರೀಯ ವಿಜ್ಞಾನಿಗಳು, ಪೌಷ್ಟಿಕ ತಜ್ಞರು, ಆರೋಗ್ಯ ತಜ್ಞರು, ನವೋದ್ಯಮ ನಾಯಕರು ಮತ್ತು ಇತರ ಪಾಲುದಾರರು ಭಾಗವಹಿಸಲಿದ್ದಾರೆ.

 

***



(Release ID: 1908414) Visitor Counter : 307