ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಪುಣೆಯಲ್ಲಿ ನಡೆದ ನಾಲ್ಕನೇ ʻವೈ 20ʼ ಸಮಾಲೋಚನಾ ಸಭೆಯು 'ಕೆಲಸದ ಭವಿಷ್ಯ: ಉದ್ಯಮ 4.0, ನಾವೀನ್ಯತೆ ಮತ್ತು 21 ನೇ ಶತಮಾನದ ಕೌಶಲ್ಯಗಳು' ಎಂಬ ಚರ್ಚಾ ಗೋಷ್ಠಿಯೊಂದಿಗೆ ಸಂಪನ್ನಗೊಂಡಿತು 


ಪ್ರಪಂಚದಾದ್ಯಂತದ 700ಕ್ಕೂ ಹೆಚ್ಚು ವಿದ್ಯಾರ್ಥಿ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು

Posted On: 16 MAR 2023 5:34PM by PIB Bengaluru

ಪುಣೆ, 16 ಮಾರ್ಚ್ 2023

ಪುಣೆಯ ಸಿಂಬಿಯೋಸಿಸ್ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಮಾರ್ಚ್ 11 ರಂದು ʻವೈ 20ʼ ಸಮಾಲೋಚನಾ ಸಭೆಯ ಆರನೇ ಮತ್ತು ಸಮಾರೋಪ ಚರ್ಚಾಗೋಷ್ಠಿಯು ನಡೆಯಿತು. ʻಕೆಲಸದ ಭವಿಷ್ಯ: ಉದ್ಯಮ 4.0, ನಾವೀನ್ಯತೆ ಮತ್ತು 21 ನೇ ಶತಮಾನದ ಕೌಶಲ್ಯಗಳುʼ ಎಂಬುದು ಚರ್ಚಾಗೋಷ್ಠಿಯ ವಿಷಯವಾಗಿತ್ತು.

ʻಅಮೆಜಾನ್ ವೆಬ್ ಸರ್ವಿಸ್ʼನ ಭಾರತ ಮತ್ತು ದಕ್ಷಿಣ ಏಷ್ಯಾದ ಗ್ರಾಹಕ ಪರಿಹಾರಗಳ ನಿರ್ವಹಣೆಯ ಮುಖ್ಯಸ್ಥ ಡಾ.ಬಿಸ್ವಜಿತ್ ಮೊಹಾಪಾತ್ರ ಅವರು ಜಗತ್ತು ಹೇಗೆ ಹೆಚ್ಚು ಪರಸ್ಪರ ಸಂಪರ್ಕ ಹೊಂದಿದೆ ಎಂಬುದರ ಬಗ್ಗೆ ಈ ಚರ್ಚಾಗೋಷ್ಠಿಯಲ್ಲಿ ಬೆಳಕು ಚೆಲ್ಲಿದರು. ಡಿಜಿಟಲ್ ರೂಪಾಂತರವನ್ನು ಅವರು 4 ಆಯಾಮಗಳಲ್ಲಿ ವ್ಯಾಖ್ಯಾನಿಸಿದರು. ಅವುಗಳೆಂದರೆ, ನೈಜ ಸಮಯದಲ್ಲಿ ನಡೆಯುವ ಸಂವಹನ, ವ್ಯವಹಾರ ಮತ್ತು ಗ್ರಾಹಕರನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ʻಪ್ರೆಡಿಕ್ಟಿವ್ ಅನಾಲಿಟಿಕ್ಸ್‌ʼನ ನಡವಳಿಕೆ, ಸಕ್ರಿಯ ಬುದ್ಧಿಮತ್ತೆಯ ಪರಿಕಲ್ಪನೆ ಮತ್ತು ಅಂತಿಮವಾಗಿ ನಾವೀನ್ಯತೆಯಲ್ಲಿ ವೇಗ. ಇದಲ್ಲದೆ, ಸದೃಢ ಭವಿಷ್ಯವನ್ನು ನಿರ್ಮಿಸಲು ʻಡೇಟಾ ಅನಾಲಿಟಿಕ್ಸ್ʼ ಹೊಸ ಕೀಲಿಯಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಭಾರತ ಸರಕಾರದ ಸಂವಹನ ಸಚಿವರ ನೀತಿ ಸಲಹೆಗಾರ ಶ್ರೀ ದೇವಾಂಶ್ ಶಾ ಅವರು, "ನಾವಿಂದು ಜಗತ್ತು ಎಂದೂ ಕಂಡಿರದ ಕ್ರಾಂತಿಯ ಭಾಗವಾಗಿದ್ದೇವೆ. ವಿವಿಧ ಕ್ಷೇತ್ರಗಳಲ್ಲಿ ವಿದೇಶಿ ನೇರ ಹೂಡಿಕೆ(ಎಫ್‌ಡಿಐ) ವಿಚಾರದಲ್ಲಿ ಭಾರತವು ಬಲವಾಗಿ ನಿಂತಿದೆ. ಜೊತೆಗೆ ನಾವೀನ್ಯತೆ ಮತ್ತು ನವೋದ್ಯಮಗಳ ವಿಷಯದಲ್ಲಿ ನವ ಭಾರತವು ತನ್ನನ್ನು ತಾನು ನಿರ್ದೇಶಿಸಿಕೊಳ್ಳುತ್ತಿದೆ. ಇಂದು ಭಾರತೀಯ ಯುವಕರು ಮುಂದಿನ ದಾರಿಯನ್ನು ಮುನ್ನಡೆಸಲು ಪರಿಪೂರ್ಣ ಸ್ಥಾನದಲ್ಲಿದ್ದಾರೆ," ಎಂದು ಹೇಳಿದರು. ನಾವಿನ್ಯತೆಯು ಮುಂದುವರಿಯುವ ಮಾರ್ಗವಾಗಿದ್ದು, ಅದು ಖಾಸಗಿ ವಲಯ ಮತ್ತು ಸಾರ್ವಜನಿಕ ಉದ್ಯಮಗಳಲ್ಲಿ ಹೆಚ್ಚು ಗೋಚರಿಸುತ್ತದೆ ಎಂದು ಯುವಕರು ಬಲವಾಗಿ ನಂಬುತ್ತಾರೆ ಎಂದರು. ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಗೆ ಅವಕಾಶ ನೀಡುವ ಮೂಲಕ ಸಾರ್ವಜನಿಕ ಖಾಸಗಿ ಸಹಭಾಗಿತ್ವವು ನಾವೀನ್ಯತೆ ಮತ್ತು ಒಳಗೊಳ್ಳುವಿಕೆಗೆ ಹೇಗೆ ಅನುಕೂಲ ಮಾಡಿಕೊಡುತ್ತಿದೆ ಎಂಬುದನ್ನು ಅವರು ವಿವರಿಸಿದರು.

ʻಕಿರ್ಲೋಸ್ಕರ್ ಬ್ರದರ್ಸ್ ಲಿಮಿಟೆಡ್ʼನ (ಕೆಇಪಿಎಲ್) ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಮತ್ತು ʻಕಿರ್ಲೋಸ್ಕರ್ ಎಬಾರಾ ಪಂಪ್ಸ್ ಲಿಮಿಟೆಡ್ʼ (ಕೆಇಪಿಎಲ್) ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ರಮಾ ಕಿರ್ಲೋಸ್ಕರ್ ಅವರು ಸಾಂಪ್ರದಾಯಿಕ ಮತ್ತು ಜಾಗತಿಕ ಉತ್ಪಾದನೆ ಹಾಗೂ ಹೊಸ ಯುಗದ ತಂತ್ರಜ್ಞಾನದಲ್ಲಿ ಹೆಚ್ಚುತ್ತಿರುವ ಹೂಡಿಕೆ ಪ್ರವೃತ್ತಿಯ ಬಗ್ಗೆ ಬೆಳಕು ಚೆಲ್ಲಿದರು. ಆರ್ಥಿಕತೆಯಲ್ಲಿ ಮಹಿಳೆಯರು ಹೊಂದಿರುವ ಪ್ರಾಮುಖ್ಯತೆಯ ಬಗ್ಗೆಯೂ ಅವರು ವಿವರಿಸಿದರು.

ಹೊಸ ಯುಗದ ಸಾಧನಗಳು ನಾವೀನ್ಯತೆ ಮತ್ತು ಸೃಜನಶೀಲತೆಯ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ. ಕೃತಕ ಬುದ್ಧಿಮತ್ತೆಯು ದೊಡ್ಡ ಮಟ್ಟದ ಉತ್ಪಾದನೆ ಮತ್ತು ಪ್ರೋಗ್ರಾಮಿಂಗ್ ಕಾನ್ಫಿಗರೇಶನ್ ಕೆಲಸವನ್ನು ಮಾತ್ರ ನಿರ್ವಹಿಸುತ್ತದೆ ಎಂದು ಚರ್ಚೆಯ ವೇಳೆ ಭಾಷಣಕಾರರು ಅಭಿಪ್ರಾಯಪಟ್ಟರು. ಕೊನೆಯಲ್ಲಿ, ವಿಶೇಷ ವಿಶ್ವವಿದ್ಯಾಲಯಗಳ ಆಗಮನವು ಈಗ ವಿಶೇಷ ಕೌಶಲ್ಯದ ಕಾರ್ಯಪಡೆ ಸೃಷ್ಟಿಗೆ ಕಾರಣವಾಗುತ್ತದೆ ಎಂಬ ವಿಷಯವನ್ನು ಒತ್ತಿ ಹೇಳಲಾಯಿತು. ಭಾರತೀಯ ವಲಸಿಗರು ಅತಿ ಹೆಚ್ಚು ಹೊಂದಾಣಿಕೆ ಗುಣವನ್ನು ಹೊಂದಿದ್ದಾರಾದರೂ ಬದಲಾಗುತ್ತಿರುವ ಸನ್ನಿವೇಶದಲ್ಲಿ ಕೌಶಲ್ಯ ಅಭಿವೃದ್ಧಿಯ ವಿಷಯಕ್ಕೆ ಅವರು ಸ್ವಲ್ಪ ಒತ್ತು ನೀಡುವುದರಿಂದ ಮುಂದಿನ ಪೀಳಿಗೆಗೆ ಹೊಸ ಅವಕಾಶಗಳ ಬಾಗಿಲುಗಳು ತೆರೆದುಕೊಳ್ಳುತ್ತವೆ ಎಂದು ಚರ್ಚಾಗೋಷ್ಠಿ ಸದಸ್ಯರು ಅಭಿಪ್ರಾಯಪಟ್ಟರು. ʻವೆರಿಟಾಸ್ ಟೆಕ್ನಾಲಜೀಸ್ʼನ ಹಿರಿಯ ಐಟಿ ಮ್ಯಾನೇಜರ್ ಆಕಾಶ್ ದೀಪ್ ಮಕ್ಕರ್ ಅವರು ಗೋಷ್ಠಿಯನ್ನು ನಿರ್ವಹಿಸಿದರು.


 

ಈ ಚರ್ಚಾಗೋಷ್ಠಿಯೊಂದಿಗೆ ಪುಣೆಯ ಸಿಂಬಿಯೋಸಿಸ್ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದ ನಾಲ್ಕನೇ ʻವೈ 20ʼ ಸಮಾಲೋಚನಾ ಸಭೆಯು ಸಂಪನ್ನಗೊಂಡಿತು. ʻವೈ 20ʼ ಸಚಿವಾಲಯದ ಅಧ್ಯಕ್ಷರು ಮತ್ತು ಟ್ರ್ಯಾಕ್ ಅಧ್ಯಕ್ಷರಲ್ಲದೆ, ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಅಧಿಕಾರಿಗಳು, ಗಣ್ಯರು ಮತ್ತು ಇತರ ವಿಶೇಷ ಆಹ್ವಾನಿತರು ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದರು. ಭಾರತ ಹಾಗೂ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಫ್ರಾನ್ಸ್, ಜರ್ಮನಿ, ಇಂಡೋನೇಷ್ಯಾ, ಜಪಾನ್, ಇಟಲಿ, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಕೊರಿಯಾ, ಬ್ರಿಟನ್‌, ಅಮೆರಿಕ ಸೇರಿದಂತೆ ಜಿ 20 ದೇಶಗಳ 700 ವಿದ್ಯಾರ್ಥಿ ಪ್ರತಿನಿಧಿಗಳು ಭಾಗವಹಿಸಿದ್ದರು. ನೈಜೀರಿಯಾ, ತಾಂಜೇನಿಯಾ, ಇಥಿಯೋಪಿಯಾ, ಟೋಗೊ, ಯೆಮೆನ್, ಅಫ್ಘಾನಿಸ್ತಾನ, ಬೋಟ್ಸ್‌ವಾನಾ, ಗಾಂಬಿಯಾ, ಚಾಡ್, ಲೆಸೊಥೊ, ನೇಪಾಳ, ಭೂತಾನ್‌ನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಿಂಬಿಯೋಸಿಸ್ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯ, ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಪುಣೆಯ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು, ಎನ್ಎಸ್ಎಸ್ ಮತ್ತು ಎನ್‌ವೈಕೆಎಸ್, ಮಹಾರಾಷ್ಟ್ರದ ಉನ್ನತ ಶಿಕ್ಷಣ ನಿರ್ದೇಶನಾಲಯ, ರೋಟರಿ ಮತ್ತು ʻವೈ 20ʼ ಸಚಿವಾಲಯದ ಸಹಯೋಗದ ಮೂಲಕ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು.
 

* * *



(Release ID: 1907988) Visitor Counter : 112


Read this release in: Marathi , English , Urdu , Hindi