ಸಹಕಾರ ಸಚಿವಾಲಯ
azadi ka amrit mahotsav g20-india-2023

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಜಾರ್ಖಂಡ್ ನ ದಿಯೋಘರ್ ನಲ್ಲಿ ಇಫ್ಕೊ ನ್ಯಾನೊ ಯೂರಿಯಾ ಸ್ಥಾವರದ ಐದನೇ ಘಟಕಕ್ಕೆ ಭೂಮಿ ಪೂಜೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.


ಶ್ರೀ ಅಮಿತ್ ಶಾ ಅವರು ಬಾಬಾ ಬೈದ್ಯನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು ಮತ್ತು ದೇಶದ ಪ್ರಗತಿ ಹಾಗು ಸಮೃದ್ಧಿಗಾಗಿ ಪ್ರಾರ್ಥಿಸಿದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೂ ಸಂರಕ್ಷಣೆಯನ್ನು ಪ್ರಮುಖ ಕಾಳಜಿಯನ್ನಾಗಿ ಮಾಡುವ ಮೂಲಕ ದೇಶಾದ್ಯಂತ ಭೂ ಸಂರಕ್ಷಣೆಗೆ ಸಂಬಂಧಿಸಿದ ಎಲ್ಲ ಕಾರ್ಯಗಳಿಗೆ ಆದ್ಯತೆ ನೀಡಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅನೇಕ ಯೂರಿಯಾ ಕಾರ್ಖಾನೆಗಳನ್ನು ಪುನರುಜ್ಜೀವನಗೊಳಿಸಿದರು ಮತ್ತು 30 ಎಕರೆಯಲ್ಲಿ ನಿರ್ಮಿಸಲಾಗುತ್ತಿರುವ ದ್ರವ ಯೂರಿಯಾದ ಈ ಸಣ್ಣ ಕಾರ್ಖಾನೆಯು ಪ್ರತಿವರ್ಷ ಸುಮಾರು 6 ಕೋಟಿ ದ್ರವ ಯೂರಿಯಾ ಬಾಟಲಿಗಳನ್ನು ತಯಾರಿಸುತ್ತದೆ, ಇದು ಆಮದನ್ನು ಕಡಿಮೆ ಮಾಡಲು ಮತ್ತು ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಸಹಾಯ ಮಾಡುತ್ತದೆ
 
ಲಿಕ್ವಿಡ್ ನ್ಯಾನೊ ಯೂರಿಯಾದ (ದ್ರವ ನ್ಯಾನೋ ಯೂರಿಯಾದ)  ಈ ಕಾರ್ಖಾನೆಯು ಜಾರ್ಖಂಡ್ ನಲ್ಲಿ ಮಾತ್ರವಲ್ಲದೆ ಬಿಹಾರ, ಒಡಿಶಾ ಮತ್ತು ಬಂಗಾಳದ ರೈತರ ಹೊಲಗಳಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ಉಪಯುಕ್ತವಾಗಲಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಹಕಾರಿ ಸಂಸ್ಥೆಗಳನ್ನು ಉತ್ತೇಜಿಸಲು ಬಜೆಟ್ ನಲ್ಲಿ ಹಲವಾರು ಯೋಜನೆಗಳನ್ನು ಘೋಷಿಸಿದ್ದಾರೆ, ಉತ್ಪಾದನಾ ವಲಯದಲ್ಲಿನ ಹೊಸ ಸಹಕಾರಿ ಘಟಕಗಳಿಗೆ ಆದಾಯ ತೆರಿಗೆ ದರವನ್ನು ಶೇ.26ರಿಂದ ಶೇ.15ಕ್ಕೆ ಇಳಿಸಲಾಗಿದೆ.

ವಿಶ್ವದ ಅತಿದೊಡ್ಡ ಸಹಕಾರಿ ಆಹಾರ ಶೇಖರಣಾ ಯೋಜನೆಯನ್ನು ಬಜೆಟ್ ನಲ್ಲಿ ಘೋಷಿಸಲಾಗಿದೆ, ಇದು ಪಿಎಸಿಎಸ್ ಅನ್ನು ಬಹು ಆಯಾಮವನ್ನಾಗಿ ಮಾಡುತ್ತದೆ ಮತ್ತು ಅದರ ಆದಾಯವನ್ನು ಹೆಚ್ಚಿಸುತ್ತದೆ

ಮುಂದಿನ 5 ವರ್ಷಗಳಲ್ಲಿ ಪ್ರತಿ ಪಂಚಾಯಿತಿಯಲ್ಲಿ ಹೊಸ ವಿವಿಧೋದ್ದೇಶ ಸಹಕಾರ ಸಂಘಗಳು, ಪ್ರಾಥಮಿಕ ಮೀನುಗಾರಿಕಾ ಸಂಘಗಳು ಮತ್ತು ಹೈನುಗಾರಿಕೆ ಸಹಕಾರ ಸಂಘಗಳ ಸ್ಥಾಪನೆಗೆ ಸರ್ಕಾರ ಅನುಕೂಲತೆ ಕಲ್ಪಿಸಲಿದೆ.

ಪ್ರತಿ ತಹಸಿಲ್ ನಲ್ಲಿ ಎರಡರಿಂದ ಐದು ಸಾವಿರ ಟನ್ ಸಂಗ್ರಹಣಾ ಸಾಮರ್ಥ್ಯದ ಆಧುನಿಕ ಗೋದಾಮುಗಳನ್ನು ನಿರ್ಮಿಸಲಾಗುವುದು, ಇದು ಆಹಾರ ಧಾನ್ಯಗಳ ಸಾಗಣೆ ವೆಚ್ಚವನ್ನು ಸುಮಾರು 80% ರಷ್ಟು ಕಡಿಮೆ ಮಾಡುತ್ತದೆ

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಬೆಂಬಲದೊಂದಿಗೆ, ಸಹಕಾರ ಸಚಿವಾಲಯವು ಪಿಎಸಿಎಸ್ ಗಳಿಗೆ ಸಮುದಾಯ ಕೇಂದ್ರವಾಗಿ ಮಾನ್ಯತೆ ನೀಡಿದೆ, ಈಗ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರದ 300 ಸೇವೆಗಳು ಪಿಎಸಿಎಸ್ ಮೂಲಕ ಲಭ್ಯವಿರುತ್ತವೆ

Posted On: 04 FEB 2023 7:40PM by PIB Bengaluru

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಜಾರ್ಖಂಡ್ ನ ದಿಯೋಘರ್ ನಲ್ಲಿ ಇಫ್ಕೊ ನ್ಯಾನೊ ಯೂರಿಯಾ ಸ್ಥಾವರದ ಐದನೇ ಘಟಕಕ್ಕೆ ಭೂಮಿ ಪೂಜೆ ನೆರವೇರಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಶ್ರೀ ಅಮಿತ್ ಶಾ ಅವರು ಬಾಬಾ ಬೈದ್ಯನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು ಮತ್ತು ದೇಶದ ಪ್ರಗತಿ ಹಾಗು ಸಮೃದ್ಧಿಗಾಗಿ ಪ್ರಾರ್ಥಿಸಿದರು. ಇಫ್ಕೊ ನ್ಯಾನೋ ಯೂರಿಯಾ ಸ್ಥಾವರದ ಶಂಕುಸ್ಥಾಪನೆ ಸಮಾರಂಭದಲ್ಲಿ ಗೊಡ್ಡಾದ ಸಂಸತ್ ಸದಸ್ಯ ಶ್ರೀ ನಿಶಿಕಾಂತ್ ದುಬೆ, ಇಫ್ಕೊ ಅಧ್ಯಕ್ಷ ಶ್ರೀ ದಿಲೀಪ್ ಸಂಘಾನಿ ಮತ್ತು ಇತರ ಅನೇಕ ಗಣ್ಯರು ಉಪಸ್ಥಿತರಿದ್ದರು.

https://static.pib.gov.in/WriteReadData/userfiles/image/image001O5IY.jpg

ತಮ್ಮ ಭಾಷಣದಲ್ಲಿ ಶ್ರೀ ಅಮಿತ್ ಶಾ ಅವರು, ಇಂದು ಇಲ್ಲಿ ಇಫ್ಕೊದ ನ್ಯಾನೊ ಯೂರಿಯಾ ಸ್ಥಾವರದ ಉತ್ಪಾದನಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು. ನಮ್ಮ ದೇಶದ ಮಣ್ಣಿನ ಸಂರಕ್ಷಣೆಗೆ ದ್ರವ ಯೂರಿಯಾ ಬಹಳ ಮುಖ್ಯ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೂ ಸಂರಕ್ಷಣೆಯನ್ನು ಪ್ರಮುಖ ಕಾಳಜಿಯನ್ನಾಗಿ ಮಾಡಿದರು ಮತ್ತು ನೈಸರ್ಗಿಕ ಕೃಷಿ, ಸಾವಯವ ಕೃಷಿ ಹಾಗು ಸಂಶೋಧನೆಯಿಂದ ನ್ಯಾನೊ ಯೂರಿಯಾ ಉತ್ಪಾದನೆಯವರೆಗಿನ ಪ್ರಕ್ರಿಯೆಯನ್ನು ವೇಗಗೊಳಿಸುವ ಎಲ್ಲಾ ಭೂ ಸಂರಕ್ಷಣಾ ಕಾರ್ಯಗಳಿಗೆ ಆದ್ಯತೆ ನೀಡಿದರು ಎಂದು ಅವರು ಹೇಳಿದರು. ದಿಯೋಘರ್ ಘಟಕದ ನಿರ್ಮಾಣದೊಂದಿಗೆ, ಪ್ರತಿವರ್ಷ ಸುಮಾರು 6 ಕೋಟಿ ದ್ರವ ಯೂರಿಯಾ ಬಾಟಲಿಗಳನ್ನು ಇಲ್ಲಿ ತಯಾರಿಸಲಾಗುವುದು, ಇದು ಯೂರಿಯಾ ಆಮದಿನ ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಭಾರತವು ಸ್ವಾವಲಂಬಿಯಾಗಲಿದೆ ಎಂದೂ ಶ್ರೀ ಶಾ ಹೇಳಿದರು.

https://static.pib.gov.in/WriteReadData/userfiles/image/image002ZVFA.jpg

500 ಎಂಎಲ್ ನ ಈ ಸಣ್ಣ ಬಾಟಲಿಯು ಪೂರ್ಣ ಚೀಲ ಯೂರಿಯಾಕ್ಕೆ ಪರ್ಯಾಯವಾಗಲಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ದೇಶದ ಅನೇಕ ಸ್ಥಳಗಳಲ್ಲಿ, ರೈತರು ಯೂರಿಯಾ ಮತ್ತು ದ್ರವ ಯೂರಿಯಾವನ್ನು ಸಿಂಪಡಿಸುತ್ತಾರೆ, ಇದು ಬೆಳೆಗಳನ್ನು ಮಾತ್ರವಲ್ಲದೆ ಭೂಮಿಯನ್ನು ಸಹ ಹಾನಿಗೊಳಿಸುತ್ತದೆ. ದ್ರವ ಯೂರಿಯಾ ಸಿಂಪಡಿಸಿದ ನಂತರ ಉತ್ಪಾದನೆ ಹೆಚ್ಚಾಗಬಹುದು ಎಂದು ಅವರು ಹೇಳಿದರು. ಭೂಮಾತೆಯ ಸಂರಕ್ಷಣೆಗಾಗಿ ನ್ಯಾನೊ ದ್ರವ ಯೂರಿಯಾವನ್ನು ಅಭಿವೃದ್ಧಿಪಡಿಸುವ ಸಂಶೋಧನಾ ಕಾರ್ಯಗಳನ್ನು ಮಾಡಲಾಗಿದೆ ಎಂದು ಶ್ರೀ ಶಾ ಹೇಳಿದರು. ರಾಸಾಯನಿಕ ಗೊಬ್ಬರವು ನೈಸರ್ಗಿಕವಾಗಿ ಗೊಬ್ಬರವನ್ನು ಉತ್ಪಾದಿಸುವ ಮಣ್ಣಿನಲ್ಲಿರುವ ಎರೆಹುಳುಗಳನ್ನು ಕೊಲ್ಲುತ್ತದೆ, ಆದರೆ ದ್ರವ ಯೂರಿಯಾ ಸಿಂಪಡಿಸುವುದರಿಂದ ಮಣ್ಣು ವಿಷಕಾರಿಯಾಗುವುದಿಲ್ಲ ಎಂದರು.

ರಾಸಾಯನಿಕ ಮತ್ತು ಯೂರಿಯಾ ರಸಗೊಬ್ಬರಗಳ ಬಳಕೆಯನ್ನು ಶೀಘ್ರದಲ್ಲೇ ಕೃಷಿಯಿಂದ ತೆಗೆದುಹಾಕದಿದ್ದರೆ, ವಿಶ್ವದ ಅನೇಕ ದೇಶಗಳಲ್ಲಿ ಆಗಿರುವಂತೆ, ಭೂಮಿಯ ಉತ್ಪಾದಕತೆಯ ಮೇಲೆ ಪ್ರತಿಕೂಲ ಪರಿಣಾಮ ಆಗಲಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ರೈತರ ಸಹಕಾರ ಸಂಸ್ಥೆಯಾದ ಇಫ್ಕೊ ವಿಶ್ವದಲ್ಲೇ ಮೊದಲ ಬಾರಿಗೆ ದ್ರವ ನ್ಯಾನೊ ಯೂರಿಯಾವನ್ನು ತಯಾರಿಸಿದೆ ಮತ್ತು ಈಗ ಡಿಎಪಿ (ಡೈ-ಅಮೋನಿಯಂ ಫಾಸ್ಫೇಟ್) ಕಡೆಗೆ ಸಾಗುತ್ತಿದೆ ಎಂದು ಅವರು ಹೇಳಿದರು. ಇದು ಭಾರತಕ್ಕೆ ಮತ್ತು ಇಡೀ ಸಹಕಾರಿ ಕ್ಷೇತ್ರಕ್ಕೆ ಹೆಮ್ಮೆಯ ವಿಷಯವಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಹಕಾರಿ ಸಂಸ್ಥೆಗಳನ್ನು ಉತ್ತೇಜಿಸಲು ಬಜೆಟ್ ನಲ್ಲಿ ಹಲವಾರು ಯೋಜನೆಗಳನ್ನು ಘೋಷಿಸಿದ್ದಾರೆ ಎಂದೂ ಶ್ರೀ ಶಾ ಹೇಳಿದರು. ಉತ್ಪಾದನಾ ವಲಯದ ಹೊಸ ಸಹಕಾರಿ ಘಟಕಗಳಿಗೆ ಆದಾಯ ತೆರಿಗೆ ದರವನ್ನು ಶೇಕಡಾ 26 ರಿಂದ ಶೇಕಡಾ 15 ಕ್ಕೆ ಇಳಿಸಲಾಗಿದೆ ಎಂದವರು ವಿವರಿಸಿದರು. 

ಸಹಕಾರ ಸಚಿವಾಲಯದ ರಚನೆಯ ನಂತರ, ಭಾರತದಾದ್ಯಂತ ಸಹಕಾರಿಗಳ ಡೇಟಾ ಬ್ಯಾಂಕ್ ಅನ್ನು ರಚಿಸಲಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಮುಂದಿನ 5 ವರ್ಷಗಳಲ್ಲಿ, ಪ್ರಾಥಮಿಕ ಕೃಷಿ ಸೊಸೈಟಿ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಹಕಾರ ಸಂಘಗಳಿಲ್ಲದ ದೇಶದ ಪಂಚಾಯಿತಿಗಳಲ್ಲಿ 2 ಲಕ್ಷ ಬಹು ಆಯಾಮದ ಪಿಎಸಿಎಸ್ ಗಳನ್ನು ನೋಂದಾಯಿಸಲಾಗುವುದು. ದೇಶದಲ್ಲಿ ಹಲವು ವರ್ಷಗಳಿಂದ ಬಳಸಲಾಗುತ್ತಿರುವ ಶೇಖರಣಾ ವ್ಯವಸ್ಥೆಯು ನಮ್ಮ ದೇಶಕ್ಕೆ ಅನುಕೂಲಕರವಾಗಿಲ್ಲ ಎಂದೂ ಅವರು ಹೇಳಿದರು. ರೈತನ ಉತ್ಪನ್ನಗಳನ್ನು ಮೊದಲು ಗೋದಾಮುಗಳಿಗೆ ತರಲಾಗುತ್ತದೆ ಮತ್ತು ನಂತರ ವಿತರಣೆಗಾಗಿ ಮತ್ತೆ ಗ್ರಾಮಕ್ಕೆ ಕೊಂಡೊಯ್ಯಲಾಗುತ್ತದೆ. ಈ ಕಾರಣದಿಂದಾಗಿ, ಸರ್ಕಾರವು ಬಡವರಿಗೆ ನೀಡಲು ಬಯಸುವ ಲಾಭದ 50% ಸಾರಿಗೆಗಾಗಿ ಖರ್ಚಾಗುತ್ತದೆ. ಆದರೆ ಈಗ ಪ್ರತಿ ತಹಸಿಲ್ನಲ್ಲಿ ಎರಡರಿಂದ ಐದು ಸಾವಿರ ಟನ್ ಸಂಗ್ರಹಣಾ ಸಾಮರ್ಥ್ಯದ ಆಧುನಿಕ ಗೋದಾಮುಗಳನ್ನು ನಿರ್ಮಿಸಲಾಗುವುದು, ಇದರಿಂದ ರೈತರ ಉತ್ಪನ್ನಗಳನ್ನು ತಹಸಿಲ್ನಲ್ಲಿಯೇ ಸಂಗ್ರಹಿಸಲಾಗುವುದು ಮತ್ತು ಅಲ್ಲಿಂದ ಅದೇ ತಹಸಿಲ್ನಲ್ಲಿ ಮಧ್ಯಾಹ್ನದ ಊಟ ಮತ್ತು ಉಚಿತ ಧಾನ್ಯಗಳ ರೂಪದಲ್ಲಿ ಬಡವರಿಗೆ ವಿತರಿಸಲಾಗುವುದು, ಇದು ಸಾರಿಗೆ ವೆಚ್ಚವನ್ನು 80% ರಷ್ಟು ಕಡಿಮೆ ಮಾಡುತ್ತದೆ ಎಂದೂ ಅವರು ಅಭಿಪ್ರಾಯಪಟ್ಟರು. 

https://static.pib.gov.in/WriteReadData/userfiles/image/image0032U15.jpg

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಜೆಟ್ ನಲ್ಲಿ ವಿಶ್ವದ ಅತಿದೊಡ್ಡ ಸಹಕಾರಿ ಆಹಾರ ಶೇಖರಣಾ ಯೋಜನೆಯನ್ನು ಘೋಷಿಸಿದ್ದಾರೆ, ಇದು ಇಡೀ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಇದು ಪಿಎಸಿಎಸ್ ಅನ್ನು ಬಹು ಆಯಾಮದವನ್ನಾಗಿ ಮಾಡುತ್ತದೆ ಮತ್ತು ಆದಾಯ ಹೆಚ್ಚಾಗುತ್ತದೆ. ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಬೆಂಬಲದೊಂದಿಗೆ, ಸಹಕಾರ ಸಚಿವಾಲಯವು ಪಿಎಸಿಎಸ್ ಅನ್ನು ಸಮುದಾಯ ಕೇಂದ್ರವಾಗಿ ಗುರುತಿಸಿದೆ ಎಂದು ಅವರು ಹೇಳಿದರು. ಈಗ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರದ 300 ಸೇವೆಗಳು ಪಿಎಸಿಎಸ್ ಮೂಲಕ ಲಭ್ಯವಿರುತ್ತವೆ, ಉದಾಹರಣೆಗೆ ಜನನ-ಮರಣ ನೋಂದಣಿ, ವಿಮಾನ-ರೈಲು ಟಿಕೆಟ್ ಬುಕಿಂಗ್, ಬ್ಯಾಂಕಿಂಗ್ ಇತ್ಯಾದಿ ಎಂದವರು ತಿಳಿಸಿದರು. 

ಇಂದು 5 ದೇಶಗಳಿಗೆ ದ್ರವ ಯೂರಿಯಾವನ್ನು ರಫ್ತು ಮಾಡಲಾಗುತ್ತಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಇಫ್ಕೊ ತಯಾರಿಸಿದ ಈ ದ್ರವ ಯೂರಿಯಾ ಭಾರತದ ರೈತರಿಗೆ ಮಾತ್ರವಲ್ಲದೆ ವಿಶ್ವದ ರೈತರಿಗೂ ಸಹಾಯ ಮಾಡುತ್ತದೆ ಎಂದೂ  ಅವರು ತಿಳಿಸಿದರು. ಈ ಮೊದಲು, ಭಾರತವು ಯೂರಿಯಾವನ್ನು ಆಮದು ಮಾಡಿಕೊಳ್ಳುತ್ತಿತ್ತು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅನೇಕ ಯೂರಿಯಾ ಕಾರ್ಖಾನೆಗಳನ್ನು ಪುನರುಜ್ಜೀವನಗೊಳಿಸಿದ್ದಾರೆ ಮತ್ತು ಇಂದು 30 ಎಕರೆಯಲ್ಲಿ ನಿರ್ಮಿಸಲಾಗುತ್ತಿರುವ ಈ ಸಣ್ಣ ದ್ರವ ಯೂರಿಯಾ ಕಾರ್ಖಾನೆಯು ಆಮದು ಮಾಡುವ 6 ಕೋಟಿ ಯೂರಿಯಾ ರಸಗೊಬ್ಬರ ಚೀಲಗಳಿಗೆ ಪರ್ಯಾಯವನ್ನು ಸೃಷ್ಟಿಸುತ್ತದೆ, ಇದು ಭಾರತವನ್ನು ಈ ಕ್ಷೇತ್ರದಲ್ಲಿ ಸ್ವಾವಲಂಬಿಯನ್ನಾಗಿ ಮಾಡುತ್ತದೆ. ಮತ್ತು ಇದರಿಂದ, ರೈತನ ಭೂಮಿಯ ರಕ್ಷಣೆಯಾಗುತ್ತದೆ ಮತ್ತು ಉತ್ಪಾದನೆಯೂ ಹೆಚ್ಚಾಗುತ್ತದೆ ಎಂದೂ ಸಚಿವರು ತಿಳಿಸಿದರು. ಇಡೀ ಪೂರ್ವ ಭಾರತದ ರೈತರಿಗೆ ಶುಭ ಕೋರಿದ ಶ್ರೀ ಶಾ, ಈ ದ್ರವರೂಪದ ನ್ಯಾನೊ ಯೂರಿಯಾ ಕಾರ್ಖಾನೆಯು ಜಾರ್ಖಂಡ್ ನಲ್ಲಿ ಮಾತ್ರವಲ್ಲದೆ ಬಿಹಾರ, ಒರಿಸ್ಸಾ ಮತ್ತು ಬಂಗಾಳದ ರೈತರ ಹೊಲಗಳಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ಉಪಯುಕ್ತವಾಗಿದೆ ಎಂದರು.

******



(Release ID: 1896401) Visitor Counter : 130