ಪ್ರಧಾನ ಮಂತ್ರಿಯವರ ಕಛೇರಿ

​​​​​​​108ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದ ಪ್ರಧಾನಮಂತ್ರಿ


" ಭಾರತದ ವೈಜ್ಞಾನಿಕ ಸಮುದಾಯವು ನಮ್ಮ ದೇಶಕ್ಕೆ ಅರ್ಹವಾದ ಸ್ಥಳವನ್ನು ಖಾತ್ರಿಪಡಿಸುತ್ತದೆ " 

" 21 ನೇ ಶತಮಾನದ ಭಾರತದಲ್ಲಿ ದತ್ತಾಂಶ ಮತ್ತು ತಂತ್ರಜ್ಞಾನದ ಹೇರಳ ಲಭ್ಯತೆಯು ವಿಜ್ಞಾನಕ್ಕೆ ಸಹಾಯ ಮಾಡುತ್ತದೆ "

" ನಾವು ವಿಜ್ಞಾನದ ಮೂಲಕ ಮಹಿಳೆಯರನ್ನು ಸಶಕ್ತಗೊಳಿಸಬೇಕು ಮಾತ್ರವಲ್ಲ, ಮಹಿಳೆಯರ ಕೊಡುಗೆಯಿಂದ ವಿಜ್ಞಾನವನ್ನು ಸಶಕ್ತಗೊಳಿಸಬೇಕು ಎಂಬುದು ನಮ್ಮ ಆಲೋಚನೆಯಾಗಿದೆ " 

" ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ರಾಷ್ಟ್ರದಲ್ಲಿ ಮಹಿಳೆಯರು ಮತ್ತು ವಿಜ್ಞಾನ ಎರಡೂ ಪ್ರಗತಿ ಸಾಧಿಸುತ್ತಿವೆ ಎಂಬುದಕ್ಕೆ ಪುರಾವೆಯಾಗಿದೆ "

" ವಿಜ್ಞಾನದ ಪ್ರಯತ್ನಗಳು ಪ್ರಯೋಗಾಲಯದಿಂದ ಹೊರಬಂದು ಭೂಮಿಯನ್ನು ತಲುಪಿದಾಗ ಮಾತ್ರ ದೊಡ್ಡ ಸಾಧನೆಗಳಾಗಿ ಬದಲಾಗಬಹುದು ಮತ್ತು ಅವುಗಳ ಪರಿಣಾಮವು ಜಾಗತಿಕದಿಂದ ತಳಮಟ್ಟದವರೆಗೆ ತಲುಪಿದಾಗ, ಅದರ ವ್ಯಾಪ್ತಿಯು ನಿಯತಕಾಲಿಕದಿಂದ ಭೂಮಿ, ದೈನಂದಿನ ಜೀವನಕ್ಕೆ ಮತ್ತು ಸಂಶೋಧನೆಯಿಂದ ನಿಜ ಜೀವನಕ್ಕೆ ಬದಲಾವಣೆಯು ಗೋಚರಿಸಿದಾಗ ಮಾತ್ರ"

"ದೇಶವು ಭವಿಷ್ಯದ ಕ್ಷೇತ್ರಗಳಲ್ಲಿ ಉಪಕ್ರಮವನ್ನು ತೆಗೆದುಕೊಂಡರೆ ನಾವು ಉದ್ಯಮ 4.0 ಅನ್ನು ಮುನ್ನಡೆಸುವ ಸ್ಥಾನದಲ್ಲಿರುತ್ತೇವೆ,"

Posted On: 03 JAN 2023 11:55AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 108ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ (ಐಎಸ್ ಸಿ)ಯನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದರು. ಈ ವರ್ಷದ ಐಎಸ್ ಸಿಯ ಕೇಂದ್ರ ಧ್ಯೇಯವಾಕ್ಯ " ಮಹಿಳಾ ಸಬಲೀಕರಣದೊಂದಿಗೆ ಸುಸ್ಥಿರ ಅಭಿವೃದ್ಧಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ " ಎಂಬುದಾಗಿದ್ದು, ಇದು ಸುಸ್ಥಿರ ಅಭಿವೃದ್ಧಿ, ಮಹಿಳಾ ಸಬಲೀಕರಣ ಮತ್ತು ಇದನ್ನು ಸಾಧಿಸುವಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರದ ಬಗ್ಗೆ ಚರ್ಚೆಗಳಿಗೆ ಸಾಕ್ಷಿಯಾಗಲಿದೆ.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಮುಂದಿನ 25 ವರ್ಷಗಳಲ್ಲಿ ಭಾರತದ ಅಭಿವೃದ್ಧಿಯ ಕಥೆಯಲ್ಲಿ ಭಾರತದ ವೈಜ್ಞಾನಿಕ ಶಕ್ತಿಯ ಪಾತ್ರವನ್ನು ಒತ್ತಿ ಹೇಳಿದರು. " ರಾಷ್ಟ್ರೀಯ ಸೇವಾ ಮನೋಭಾವವು ಉತ್ಸಾಹದೊಂದಿಗೆ ವಿಜ್ಞಾನದಲ್ಲಿ ಬೆರೆತಾಗ, ಫಲಿತಾಂಶಗಳು ಅಭೂತಪೂರ್ವವಾಗಿರುತ್ತವೆ. ಭಾರತದ ವೈಜ್ಞಾನಿಕ ಸಮುದಾಯವು ನಮ್ಮ ದೇಶಕ್ಕೆ ಯಾವಾಗಲೂ ಅರ್ಹವಾದ ಸ್ಥಳವನ್ನು ಖಚಿತಪಡಿಸುತ್ತದೆ ಎಂದು ನನಗೆ ಖಾತ್ರಿಯಿದೆ," ಎಂದು ಅವರು ಹೇಳಿದರು.

ಅವಲೋಕನವು ವಿಜ್ಞಾನದ ಮೂಲವಾಗಿದೆ ಮತ್ತು ಅಂತಹ ಅವಲೋಕನದ ಮೂಲಕವೇ ವಿಜ್ಞಾನಿಗಳು ಮಾದರಿಗಳನ್ನು ಅನುಸರಿಸುತ್ತಾರೆ ಮತ್ತು ಅಗತ್ಯ ಫಲಿತಾಂಶಗಳನ್ನು ತಲುಪುತ್ತಾರೆ ಎಂದು ಸೂಚಿಸಿದ ಪ್ರಧಾನಮಂತ್ರಿ ಅವರು, ದತ್ತಾಂಶಗಳನ್ನು ಸಂಗ್ರಹಿಸುವ ಮತ್ತು ಫಲಿತಾಂಶಗಳನ್ನು ವಿಶ್ಲೇಷಿಸುವ ಮಹತ್ವವನ್ನು ಉಲ್ಲೇಖಿಸಿದರು. 21ನೇ ಶತಮಾನದ ಭಾರತದಲ್ಲಿ ದತ್ತಾಂಶ ಮತ್ತು ತಂತ್ರಜ್ಞಾನದ ಹೇರಳ ಲಭ್ಯತೆಯ ಬಗ್ಗೆ ಬೆಳಕು ಚೆಲ್ಲಿದ ಅವರು, ಭಾರತೀಯ ವಿಜ್ಞಾನವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಸಾಮರ್ಥ್ಯವನ್ನು ಇದು ಹೊಂದಿದೆ ಎಂದು ಹೇಳಿದರು. ದತ್ತಾಂಶ ವಿಶ್ಲೇಷಣೆಯ ಕ್ಷೇತ್ರವು ಉಲ್ಕಾಪಾತದ ವೇಗದಲ್ಲಿ ಮುಂದುವರಿಯುತ್ತಿದೆ, ಇದು ಮಾಹಿತಿಯನ್ನು ಒಳನೋಟವಾಗಿ ಪರಿವರ್ತಿಸಲು ಮತ್ತು ವಿಶ್ಲೇಷಣೆಯನ್ನು ಕ್ರಿಯಾತ್ಮಕ ಜ್ಞಾನವಾಗಿ ಪರಿವರ್ತಿಸಲು ಬಹಳ ಸಹಾಯ ಮಾಡುತ್ತದೆ ಎಂದು ಅವರು ಮಾಹಿತಿ ನೀಡಿದರು. " ಅದು ಸಾಂಪ್ರದಾಯಿಕ ಜ್ಞಾನವಾಗಿರಲಿ ಅಥವಾ ಆಧುನಿಕ ತಂತ್ರಜ್ಞಾನವಾಗಿರಲಿ, ಪ್ರತಿಯೊಂದೂ ವೈಜ್ಞಾನಿಕ ಆವಿಷ್ಕಾರದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ," ಎಂದು ಪ್ರಧಾನಮಂತ್ರಿ ಹೇಳಿದರು. ಸಂಶೋಧನೆ-ನೇತೃತ್ವದ ಅಭಿವೃದ್ಧಿಯ ವಿವಿಧ ತಂತ್ರಗಳನ್ನು ಅನ್ವಯಿಸುವ ಮೂಲಕ ವೈಜ್ಞಾನಿಕ ಪ್ರಕ್ರಿಯೆಗಳನ್ನು ಬಲಪಡಿಸುವ ಅಗತ್ಯವನ್ನು ಅವರು ಇದೇ ವೇಳೆ ಪ್ರತಿಪಾದಿಸಿದರು.

ವೈಜ್ಞಾನಿಕ ದೃಷ್ಟಿಕೋನದೊಂದಿಗೆ ಭಾರತದ ಪ್ರಯತ್ನದ ಫಲಿತಾಂಶದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ಅವರು, 2015 ರಲ್ಲಿ 81 ನೇ ಸ್ಥಾನದಲ್ಲಿದ್ದ ಭಾರತ, 2022 ರಲ್ಲಿ ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ 40 ನೇ ಸ್ಥಾನಕ್ಕೆ ಏರುತ್ತಿದ್ದಂತೆ ಭಾರತವನ್ನು ವಿಶ್ವದ ಅಗ್ರ ರಾಷ್ಟ್ರಗಳಲ್ಲಿ ಪರಿಗಣಿಸಲಾಗುತ್ತಿದೆ ಎಂದು ಹೇಳಿದರು. ಪಿಎಚ್ ಡಿಗಳು ಮತ್ತು ನವೋದ್ಯಮಗಳ ಪರಿಸರ ವ್ಯವಸ್ಥೆಗಳ ಸಂಖ್ಯೆಯಲ್ಲಿ ಭಾರತವು ವಿಶ್ವದ ಅಗ್ರ ಮೂರು ರಾಷ್ಟ್ರಗಳಲ್ಲಿ ಒಂದಾಗಿದೆ ಎಂದರು.

ಸುಸ್ಥಿರ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣವನ್ನು ಸಂಯೋಜಿಸುವ ಈ ವರ್ಷದ ವಿಜ್ಞಾನ ಕಾಂಗ್ರೆಸ್ ನ ವಿಷಯದ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಪ್ರಧಾನಮಂತ್ರಿ ಅವರು, ಎರಡೂ ಕ್ಷೇತ್ರಗಳ ನಡುವಿನ ಪೂರಕತೆಯನ್ನು ಒತ್ತಿ ಹೇಳಿದರು. ಆದಾಗ್ಯೂ, " ನಾವು ವಿಜ್ಞಾನದ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವುದು ಮಾತ್ರವಲ್ಲ, ಮಹಿಳೆಯರ ಕೊಡುಗೆಯಿಂದ ವಿಜ್ಞಾನವನ್ನು ಸಶಕ್ತಗೊಳಿಸಬೇಕು ಎಂಬುದು ನಮ್ಮ ಆಲೋಚನೆಯಾಗಿದೆ," ಎಂದು ಅವರು ಪ್ರತಿಪಾದಿಸಿದರು.

ಜಿ-20 ಶೃಂಗಸಭೆಯ ಅಧ್ಯಕ್ಷತೆ ವಹಿಸುವ ಅವಕಾಶವನ್ನು ಭಾರತಕ್ಕೆ ನೀಡಲಾಗಿದೆ ಎಂದು ತಿಳಿಸಿದ ಪ್ರಧಾನಮಂತ್ರಿ ಅವರು, ಮಹಿಳಾ ನೇತೃತ್ವದ ಅಭಿವೃದ್ಧಿಯು ಅಧ್ಯಕ್ಷರು ತೆಗೆದುಕೊಂಡಿರುವ ಹೆಚ್ಚಿನ ಆದ್ಯತೆಯ ವಿಷಯಗಳಲ್ಲಿ ಒಂದಾಗಿದೆ ಎಂದು ಗಮನ ಸೆಳೆದರು. ಕಳೆದ 8 ವರ್ಷಗಳಲ್ಲಿ, ಭಾರತವು ಆಡಳಿತದಿಂದ ಸಮಾಜದಿಂದ ಆರ್ಥಿಕತೆಯವರೆಗೆ ಅಸಾಧಾರಣ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ, ಇದನ್ನು ಇಂದು ವಿಶ್ವದಾದ್ಯಂತ ಚರ್ಚಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಸಣ್ಣ ಕೈಗಾರಿಕೆಗಳು ಮತ್ತು ಉದ್ಯಮಗಳಲ್ಲಿನ ಪಾಲುದಾರಿಕೆಯಾಗಿರಲಿ ಅಥವಾ ನವೋದ್ಯಮ ಜಗತ್ತಿನಲ್ಲಿ ನಾಯಕತ್ವವಾಗಿರಲಿ, ವಿಶ್ವಕ್ಕೆ ತಮ್ಮ ಶಕ್ತಿಯನ್ನು ಪ್ರದರ್ಶಿಸುವ ಮಹಿಳೆಯರ ಬಗ್ಗೆ ಬಿಂಬಿಸಿದ ಪ್ರಧಾನಮಂತ್ರಿ ಅವರು, ಮುದ್ರಾ ಯೋಜನೆಯ ಉದಾಹರಣೆಯನ್ನು ನೀಡಿದರು, ಇದು ಭಾರತದ ಮಹಿಳೆಯರನ್ನು ಸಬಲೀಕರಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಬಾಹ್ಯ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ದ್ವಿಗುಣಗೊಳ್ಳುತ್ತಿರುವುದನ್ನು ಅವರು ಗಮನಸೆಳೆದರು. " ಮಹಿಳೆಯರ ಹೆಚ್ಚುತ್ತಿರುವ ಭಾಗವಹಿಸುವಿಕೆಯು ಮಹಿಳೆಯರು ಮತ್ತು ವಿಜ್ಞಾನ ಎರಡೂ ರಾಷ್ಟ್ರದಲ್ಲಿ ಪ್ರಗತಿ ಹೊಂದುತ್ತಿವೆ ಎಂಬುದಕ್ಕೆ ಪುರಾವೆಯಾಗಿದೆ," ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಜ್ಞಾನವನ್ನು ಕ್ರಿಯಾಶೀಲ ಮತ್ತು ಸಹಾಯಕ ಉತ್ಪನ್ನಗಳನ್ನಾಗಿ ಪರಿವರ್ತಿಸುವ ವಿಜ್ಞಾನಿಗಳ ಸವಾಲಿನ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು, “ ವಿಜ್ಞಾನದ ಪ್ರಯತ್ನಗಳು ಪ್ರಯೋಗಾಲಯದಿಂದ ಹೊರಬಂದು ಭೂಮಿಯನ್ನು ತಲುಪಿದಾಗ ಮಾತ್ರ ದೊಡ್ಡ ಸಾಧನೆಗಳಾಗಿ ಬದಲಾಗುತ್ತವೆ ಮತ್ತು ಅವುಗಳ ಪ್ರಭಾವವು ಜಾಗತಿಕ ಮಟ್ಟದಿಂದ ತಳಮಟ್ಟದವರೆಗೆ ತಲುಪುತ್ತದೆ. ಅದರ ವ್ಯಾಪ್ತಿಯು ಜರ್ನಲ್‌ನಿಂದ ಭೂಮಿ, ದೈನಂದಿನ ಜೀವನ ಮತ್ತು ಸಂಶೋಧನೆಯಿಂದ ನಿಜ ಜೀವನಕ್ಕೆ ಬದಲಾವಣೆಯು ಗೋಚರಿಸಿದಾಗ," ಮಾತ್ರ ಇದು ಸಾಧ್ಯ ಎಂದು ಹೇಳಿದರು. ವಿಜ್ಞಾನದ ಸಾಧನೆಗಳು ಪ್ರಯೋಗಗಳು ಮತ್ತು ಜನರ ಅನುಭವಗಳ ನಡುವಿನ ಅಂತರವನ್ನು ಪೂರ್ಣಗೊಳಿಸಿದಾಗ, ಅದು ಪ್ರಮುಖ ಸಂದೇಶವನ್ನು ನೀಡುತ್ತದೆ ಮತ್ತು ವಿಜ್ಞಾನದ ಪಾತ್ರದ ಬಗ್ಗೆ ಮನವರಿಕೆಯಾಗುವ ಯುವ ಪೀಳಿಗೆಯನ್ನು ಆಕರ್ಷಿಸುತ್ತದೆ ಎಂದು ಅವರು ಹೇಳಿದರು. ಅಂತಹ ಯುವಕರಿಗೆ ಸಹಾಯ ಮಾಡುವ ಸಲುವಾಗಿ, ಸಾಂಸ್ಥಿಕ ಚೌಕಟ್ಟಿನ ಅಗತ್ಯವನ್ನು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ಅಂತಹ ಸಶಕ್ತ ಸಾಂಸ್ಥಿಕ ಚೌಕಟ್ಟನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಅವರು ಸಭಿಕರಿಗೆ ಕರೆ ನೀಡಿದರು. 

ಪ್ರತಿಭಾನ್ವೇಷಣೆ ಮತ್ತು ಹ್ಯಾಕಥಾನ್ ಗಳ ಉದಾಹರಣೆಗಳನ್ನು ನೀಡಿದ ಪ್ರಧಾನಮಂತ್ರಿ, ಇದರ ಮೂಲಕ ವೈಜ್ಞಾನಿಕ ಮನೋಭಾವದ ಮಕ್ಕಳನ್ನು ಕಂಡುಹಿಡಿಯಬಹುದು ಎಂದರು.

ಕ್ರೀಡಾ ಕ್ಷೇತ್ರದಲ್ಲಿ ಭಾರತದ ದಾಪುಗಾಲು ಮತ್ತು ಯಶಸ್ಸಿಗೆ ಉದಯೋನ್ಮುಖ ದೃಢವಾದ ಸಾಂಸ್ಥಿಕ ಕಾರ್ಯವಿಧಾನ ಮತ್ತು ಗುರು-ಶಿಷ್ಯ ಪರಂಪರೆ ಕಾರಣವಾಗಿದೆ ಎಂದು ಹೇಳಿದ ಪ್ರಧಾನಮಂತ್ರಿ, ಈ ಸಂಪ್ರದಾಯವು ವಿಜ್ಞಾನ ಕ್ಷೇತ್ರದಲ್ಲಿ ಯಶಸ್ಸಿನ ಮಂತ್ರವಾಗಬಲ್ಲದು ಎಂದು ಸಲಹೆ ನೀಡಿದರು.

ರಾಷ್ಟ್ರದಲ್ಲಿ ವಿಜ್ಞಾನದ ಬೆಳವಣಿಗೆಗೆ ದಾರಿ ಮಾಡಿಕೊಡುವ ವಿಷಯಗಳನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು, ಭಾರತದ ಆವಶ್ಯಕತೆಗಳನ್ನು ಪೂರೈಸುವುದು ಇಡೀ ವೈಜ್ಞಾನಿಕ ಸಮುದಾಯಕ್ಕೆ ಎಲ್ಲ ಸ್ಫೂರ್ತಿಯ ಮೂಲವಾಗಬೇಕು ಎಂದು ಹೇಳಿದರು. " ಭಾರತದಲ್ಲಿ ವಿಜ್ಞಾನವು ದೇಶವನ್ನು ಆತ್ಮನಿರ್ಭರವನ್ನಾಗಿ ಮಾಡಬೇಕು," ಎಂದು ಹೇಳಿದ ಪ್ರಧಾನಮಂತ್ರಿ, ಮಾನವ ಜನಸಂಖ್ಯೆಯ ಶೇ. 17-18 ರಷ್ಟು ಜನರು ಭಾರತದಲ್ಲಿ ವಾಸಿಸುತ್ತಿದ್ದಾರೆ ಮತ್ತು ಅಂತಹ ವೈಜ್ಞಾನಿಕ ಬೆಳವಣಿಗೆಗಳು ಇಡೀ ಜನಸಂಖ್ಯೆಗೆ ಪ್ರಯೋಜನಕಾರಿಯಾಗಬೇಕು ಎಂದು ಹೇಳಿದರು. ಇಡೀ ಮನುಕುಲಕ್ಕೆ ಮಹತ್ವಪೂರ್ಣವಾದ ವಿಷಯಗಳ ಬಗ್ಗೆ ಕೆಲಸ ಮಾಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ದೇಶದಲ್ಲಿ ಹೆಚ್ಚುತ್ತಿರುವ ಇಂಧನ ಅಗತ್ಯಗಳನ್ನು ಪೂರೈಸಲು, ಭಾರತವು ರಾಷ್ಟ್ರೀಯ ಹೈಡ್ರೋಜನ್ ಮಿಷನ್ ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದ ಪ್ರಧಾನಮಂತ್ರಿ, ಅದನ್ನು ಯಶಸ್ವಿಗೊಳಿಸಲು ಭಾರತದಲ್ಲಿ ಎಲೆಕ್ಟ್ರೋಲೈಸರ್ ಗಳಂತಹ ನಿರ್ಣಾಯಕ ಉಪಕರಣಗಳನ್ನು ತಯಾರಿಸುವ ಅಗತ್ಯವನ್ನು ಒತ್ತಿ ಹೇಳಿದರು.

ಹೊಸದಾಗಿ ಕಂಡು ಬರುತ್ತಿರುವ ರೋಗಗಳನ್ನು ನಿಭಾಯಿಸುವ ವಿಧಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ವೈಜ್ಞಾನಿಕ ಸಮುದಾಯದ ಪಾತ್ರ ಮತ್ತು ಹೊಸ ಲಸಿಕೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಂಶೋಧನೆಯನ್ನು ಉತ್ತೇಜಿಸುವ ಅಗತ್ಯವನ್ನು ಪ್ರಧಾನಮಂತ್ರಿ ಅವರು ಪ್ರತಿಪಾದಿಸಿದರು. ರೋಗಗಳನ್ನು ಸಕಾಲದಲ್ಲಿ ಪತ್ತೆಹಚ್ಚಲು ಸಮಗ್ರ ರೋಗ ಕಣ್ಗಾವಲಿನ ಬಗ್ಗೆ ಮಾತನಾಡಿದ ಅವರು, ಇದಕ್ಕಾಗಿ, ಅವರು ಎಲ್ಲಾ ಸಚಿವಾಲಯಗಳ ಸಂಘಟಿತ ಪ್ರಯತ್ನಗಳ ಅಗತ್ಯವನ್ನು ಒತ್ತಿ ಹೇಳಿದರು. ಅದೇ ರೀತಿ , ಲೈಫ್ ಅಂದರೆ ಜೀವನ ಶೈಲಿ ಪರಿಸರ ಚಳವಳಿಗೆ ವಿಜ್ಞಾನಿಗಳು ಹೆಚ್ಚು ಸಹಾಯ ಮಾಡಬಹುದಾಗಿದೆ ಎಂದರು.

ಭಾರತದ ಕರೆಯ ಮೇರೆಗೆ ವಿಶ್ವಸಂಸ್ಥೆಯು 2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸಿರುವುದು ಪ್ರತಿಯೊಬ್ಬ ನಾಗರಿಕನಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಪ್ರಧಾನಿ ಹೇಳಿದರು. ಭಾರತದ ಸಿರಿಧಾನ್ಯಗಳು ಮತ್ತು ಅದರ ಬಳಕೆಯನ್ನು ಸುಧಾರಿಸುವ ಕೆಲಸವನ್ನು ಮಾಡಬಹುದು ಮತ್ತು ಜೈವಿಕ ತಂತ್ರಜ್ಞಾನದ ಸಹಾಯದಿಂದ ಸುಗ್ಗಿಯ ನಂತರದ ನಷ್ಟವನ್ನು ಕಡಿಮೆ ಮಾಡಲು ವೈಜ್ಞಾನಿಕ ಸಮುದಾಯವು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಅವರು ಗಮನಸೆಳೆದರು.

ಪುರಸಭೆಯ ಘನತ್ಯಾಜ್ಯ, ವಿದ್ಯುನ್ಮಾನ ತ್ಯಾಜ್ಯ, ಜೈವಿಕ ವೈದ್ಯಕೀಯ ತ್ಯಾಜ್ಯ ಮತ್ತು ಕೃಷಿ ತ್ಯಾಜ್ಯಗಳು ವಿಸ್ತಾರಗೊಳ್ಳುತ್ತಿರುವುದರಿಂದ ಮತ್ತು ಸರ್ಕಾರವು ವೃತ್ತಾಕಾರದ ಆರ್ಥಿಕತೆಯನ್ನು ಉತ್ತೇಜಿಸುತ್ತಿರುವುದರಿಂದ ತ್ಯಾಜ್ಯ ನಿರ್ವಹಣೆಯಲ್ಲಿ ವಿಜ್ಞಾನದ ಪಾತ್ರವನ್ನು ಪ್ರಧಾನ ಮಂತ್ರಿಯವರು ಒತ್ತಿ ಹೇಳಿದರು.

ಭಾರತದ ಪ್ರವರ್ಧಮಾನಕ್ಕೆ ಬರುತ್ತಿರುವ ಬಾಹ್ಯಾಕಾಶ ಕ್ಷೇತ್ರದಲ್ಲಿ ಕಡಿಮೆ ವೆಚ್ಚದ ಉಪಗ್ರಹ ಉಡಾವಣಾ ವಾಹನಗಳ ಪಾತ್ರವನ್ನು ಪ್ರಧಾನಮಂತ್ರಿ ಅವರು ಒಪ್ಪಿಕೊಂಡರು ಮತ್ತು ನಮ್ಮ ಸೇವೆಗಳನ್ನು ತೆಗೆದುಕೊಳ್ಳಲು ಜಗತ್ತು ಮುಂದೆ ಬರಲಿದೆ ಎಂದು ಉಲ್ಲೇಖಿಸಿದರು. ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಕೈಜೋಡಿಸುವ ಮೂಲಕ ಖಾಸಗಿ ಕಂಪನಿಗಳು ಮತ್ತು ನವೋದ್ಯಮಗಳಿಗೆ ಇರುವ ಅವಕಾಶಗಳನ್ನು ಪ್ರಧಾನಮಂತ್ರಿ ಅವರು ಬಿಂಬಿಸಿದರು. ಕ್ವಾಂಟಮ್ ಕಂಪ್ಯೂಟಿಂಗ್ (ಕಂಪ್ಯೂಟರ್ ಆಧಾರಿತ ತಂತ್ರಜ್ಞಾನಗಳ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದ ಅಧ್ಯಯನದ ಕ್ಷೇತ್ರ) ಮತ್ತು ಕ್ವಾಂಟಮ್ ಗಡಿರೇಖೆಯಾಗಿ ಭಾರತವು ವಿಶ್ವದಲ್ಲಿ ಹೇಗೆ ತನ್ನ ಛಾಪು ಮೂಡಿಸುತ್ತಿದೆ ಎಂಬುದನ್ನು ಅವರು ಗಮನಸೆಳೆದರು. " ಭಾರತವು ಕ್ವಾಂಟಮ್ ಕಂಪ್ಯೂಟರ್ ಗಳು, ರಸಾಯನಶಾಸ್ತ್ರ, ಸಂವಹನ, ಸಂವೇದಕಗಳು, ಕ್ರಿಪ್ಟೋಗ್ರಫಿ ಮತ್ತು ಹೊಸ ವಸ್ತುಗಳ ದಿಕ್ಕಿನಲ್ಲಿ ವೇಗವಾಗಿ ಸಾಗುತ್ತಿದೆ," ಎಂದು ಹೇಳಿದ ಪ್ರಧಾನಮಂತ್ರಿ ಅವರು, ಯುವ ಸಂಶೋಧಕರು ಮತ್ತು ವಿಜ್ಞಾನಿಗಳಿಗೆ ಕ್ವಾಂಟಮ್ ಕ್ಷೇತ್ರದಲ್ಲಿ ಪರಿಣತಿಯನ್ನು ಗಳಿಸಿ ನಾಯಕರಾಗುವಂತೆ ಕರೆ ನೀಡಿದರು.

ಶ್ರೀ ನರೇಂದ್ರ ಮೋದಿ ಅವರು ಭವಿಷ್ಯದ ವಿಚಾರಗಳು ಮತ್ತು ಯಾವುದೇ ಕೆಲಸ ನಡೆಯದ ಕ್ಷೇತ್ರಗಳತ್ತ ಗಮನ ಹರಿಸುವ ಅಗತ್ಯವನ್ನು ಪ್ರತಿಪಾದಿಸಿದರು. ಅಲ್ಲದೆ, ಎಐ, ಎಆರ್ ಮತ್ತು ವಿಆರ್ ಅನ್ನು ಆದ್ಯತೆಗಳಾಗಿ ಇಟ್ಟುಕೊಳ್ಳುವಂತೆ ಅವರು ಕೇಳಿದರು.

ಸೆಮಿಕಂಡಕ್ಟರ್ ಚಿಪ್ಸ್ ನಲ್ಲಿ ಆವಿಷ್ಕಾರಗಳನ್ನು ಮಾಡುವಂತೆ ಅವರು ವೈಜ್ಞಾನಿಕ ಸಮುದಾಯವನ್ನು ಉತ್ತೇಜಿಸಿದರು ಮತ್ತು ಇಂದಿನಿಂದ ಸೆಮಿಕಂಡಕ್ಟರ್ ಪುಷ್ ಭವಿಷ್ಯವನ್ನು ಸಿದ್ಧವಾಗಿಡುವ ಬಗ್ಗೆ ಯೋಚಿಸುವಂತೆ ಹೇಳಿದರು" ದೇಶವು ಈ ಕ್ಷೇತ್ರಗಳಲ್ಲಿ ಉಪಕ್ರಮವನ್ನು ತೆಗೆದುಕೊಂಡರೆ ನಾವು ಉದ್ಯಮ 4.0 ಅನ್ನು ಮುನ್ನಡೆಸುವ ಸ್ಥಾನದಲ್ಲಿರುತ್ತೇವೆ," ಎಂದು ಅವರು ಹೇಳಿದರು.

ಭಾಷಣವನ್ನು ಮುಕ್ತಾಯಗೊಳಿಸಿದ ಪ್ರಧಾನಮಂತ್ರಿ ಅವರು, ಭಾರತೀಯ ವಿಜ್ಞಾನ ಕಾಂಗ್ರೆಸ್ ನ ಈ ಅಧಿವೇಶನದಲ್ಲಿ ವಿವಿಧ ರಚನಾತ್ಮಕ ಅಂಶಗಳ ಮೇಲೆ ಭವಿಷ್ಯದ ಸ್ಪಷ್ಟ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗುವುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. " ಅಮೃತ್ ಕಾಲಿನಲ್ಲಿ, ನಾವು ಭಾರತವನ್ನು ಆಧುನಿಕ ವಿಜ್ಞಾನದ ಅತ್ಯಂತ ಸುಧಾರಿತ ಪ್ರಯೋಗಾಲಯವನ್ನಾಗಿ ಮಾಡಬೇಕಾಗಿದೆ," ಎಂದು ಶ್ರೀ ನರೇಂದ್ರ ಮೋದಿ ಅವರು ಮಾತು ಮುಕ್ತಾಯಗೊಳಿಸಿದರು.

ಹಿನ್ನೆಲೆ

ಈ ವರ್ಷದ ಐಎಸ್ ಸಿಯ ಕೇಂದ್ರ ವಿಷಯವು " ಮಹಿಳಾ ಸಬಲೀಕರಣದೊಂದಿಗೆ ಸುಸ್ಥಿರ ಅಭಿವೃದ್ಧಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ". ಇದು ಸುಸ್ಥಿರ ಅಭಿವೃದ್ಧಿ, ಮಹಿಳಾ ಸಬಲೀಕರಣ ಮತ್ತು ಇದನ್ನು ಸಾಧಿಸುವಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರದ ಬಗ್ಗೆ ಚರ್ಚೆಗಳಿಗೆ ಸಾಕ್ಷಿಯಾಗಲಿದೆ. ಎಸ್ ಟಿಇಎಂ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ) ಶಿಕ್ಷಣ, ಸಂಶೋಧನಾ ಅವಕಾಶಗಳು ಮತ್ತು ಆರ್ಥಿಕ ಪಾಲ್ಗೊಳ್ಳುವಿಕೆಗೆ ಮಹಿಳೆಯರಿಗೆ ಸಮಾನ ಪ್ರವೇಶವನ್ನು ಒದಗಿಸುವ ಮಾರ್ಗಗಳನ್ನು ಕಂಡುಹಿಡಿಯಲು ಪ್ರಯತ್ನಿಸುವುದರ ಜತೆಗೆ ಬೋಧನೆ, ಸಂಶೋಧನೆ ಮತ್ತು ಉದ್ಯಮದ ಉನ್ನತ ಶ್ರೇಣಿಗಳಲ್ಲಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸುವ ಮಾರ್ಗಗಳ ಬಗ್ಗೆ ಭಾಗವಹಿಸುವವರು ಚರ್ಚಿಸುತ್ತಾರೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮಹಿಳೆಯರ ಕೊಡುಗೆಯನ್ನು ಪ್ರದರ್ಶಿಸುವ ವಿಶೇಷ ಕಾರ್ಯಕ್ರಮವನ್ನು ಸಹ ನಡೆಸಲಾಗುವುದು, ಇದು ಪ್ರಸಿದ್ಧ ಮಹಿಳಾ ವಿಜ್ಞಾನಿಗಳ ಉಪನ್ಯಾಸಗಳಿಗೆ ಸಾಕ್ಷಿಯಾಗಲಿದೆ.

ಐಎಸ್ ಸಿಯೊಂದಿಗೆ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುವುದು. ಮಕ್ಕಳಲ್ಲಿ ವೈಜ್ಞಾನಿಕ ಆಸಕ್ತಿ ಮತ್ತು ಮನೋಧರ್ಮವನ್ನು ಉತ್ತೇಜಿಸಲು ಸಹಾಯ ಮಾಡಲು ಮಕ್ಕಳ ವಿಜ್ಞಾನ ಕಾಂಗ್ರೆಸ್ ಅನ್ನು ಸಹ ಆಯೋಜಿಸಲಾಗುವುದು. ರೈತ ವಿಜ್ಞಾನ ಕಾಂಗ್ರೆಸ್, ಜೈವಿಕ ಆರ್ಥಿಕತೆಯನ್ನು ಸುಧಾರಿಸಲು ಮತ್ತು ಯುವಕರನ್ನು ಕೃಷಿಯತ್ತ ಆಕರ್ಷಿಸಲು ವೇದಿಕೆಯನ್ನು ಒದಗಿಸುತ್ತದೆ. ಬುಡಕಟ್ಟು ವಿಜ್ಞಾನ ಸಮಾವೇಶವನ್ನು ಸಹ ನಡೆಸಲಾಗುವುದು, ಇದು ಬುಡಕಟ್ಟು ಮಹಿಳೆಯರ ಸಬಲೀಕರಣದ ಮೇಲೆ ಕೇಂದ್ರೀಕರಿಸುವುದರ ಜತೆಗೆ ದೇಶೀಯ ಪ್ರಾಚೀನ ಜ್ಞಾನ ವ್ಯವಸ್ಥೆಗಳು ಮತ್ತು ಅಭ್ಯಾಸಗಳ ವೈಜ್ಞಾನಿಕ ಪ್ರದರ್ಶನಕ್ಕೆ ವೇದಿಕೆಯಾಗಲಿದೆ.

ಭಾರತೀಯ ವಿಜ್ಞಾನ ಕಾಂಗ್ರೆಸ್ಸಿನ ಮೊದಲ ಅಧಿವೇಶನವು 1914ರಲ್ಲಿ ನಡೆದಿತ್ತು. ಐಎಸ್ ಸಿಯ 108 ನೇ ವಾರ್ಷಿಕ ಅಧಿವೇಶನ ರಾಷ್ಟ್ರಸಂತ ತುಕಾಡೋಜಿ ಮಹಾರಾಜ್ ನಾಗ್ಪುರ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದು, ಇದು ಈ ವರ್ಷ ತನ್ನ ಶತಮಾನೋತ್ಸವವನ್ನು ಆಚರಿಸುತ್ತಿದೆ.

*****



(Release ID: 1888346) Visitor Counter : 650