ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

​​​​​​​ಡೂನ್ ವಿಶ್ವವಿದ್ಯಾನಿಲಯದ 3 ನೇ ಘಟಿಕೋತ್ಸವದಲ್ಲಿ ಭಾರತದ ರಾಷ್ಟ್ರಪತಿ ಭಾಗವಹಿಸಿದರು

Posted On: 09 DEC 2022 4:35PM by PIB Bengaluru

ಘನತೆವೆತ್ತ ಭಾರತದ ರಾಷ್ಟ್ರಪತಿ  ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಡಿಸೆಂಬರ್ 9, 2022) ಡೆಹ್ರಾಡೂನ್ ನಲ್ಲಿರುವ ಡೂನ್ ವಿಶ್ವವಿದ್ಯಾಲಯದ 3 ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

“ಯಾವುದೇ ದೇಶದ ಪ್ರಗತಿಯು ಮಾನವ ಸಂಪನ್ಮೂಲದ ಗುಣಮಟ್ಟವನ್ನು ಅವಲಂಬಿಸಿರುತ್ತದೆ ಮತ್ತು ಮಾನವ ಸಂಪನ್ಮೂಲದ ಗುಣಮಟ್ಟವು ಶಿಕ್ಷಣದ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ‘ಇಂದಿನ ಯುವಕರೇ ನಾಳಿನ ಭವಿಷ್ಯ’ ಎಂಬ ಧ್ಯೇಯವಾಕ್ಯವನ್ನು ಅನುಸರಿಸಿ ಗುಣಮಟ್ಟದ ಮಾನವ ಸಂಪನ್ಮೂಲವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಡೂನ್ ವಿಶ್ವವಿದ್ಯಾಲಯವು ಕೆಲಸ ಮಾಡುತ್ತಿದೆ” ಎಂದು ಭಾರತದ ರಾಷ್ಟ್ರಪತಿ ಅವರು ಹೇಳಿದರು.

ಚೈನೀಸ್, ಸ್ಪ್ಯಾನಿಷ್, ಜರ್ಮನ್, ಜಪಾನೀಸ್ ಮತ್ತು ಫ್ರೆಂಚ್ ಎಂಬ ಐದು ವಿದೇಶಿ ಭಾಷೆಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವ ಏಕೈಕ ಭಾರತೀಯ ಸಂಸ್ಥೆ ಡೂನ್ ವಿಶ್ವವಿದ್ಯಾಲಯ. ವಿದ್ಯಾರ್ಥಿಗಳು ಇಲ್ಲಿ ಗರ್ವಾಲಿ, ಕುಮಾವೋನಿ ಮತ್ತು ಜೌನ್ಸಾರಿ ಎಂಬ ಮೂರು ಸ್ಥಳೀಯ ಭಾಷೆಗಳನ್ನು ಕೂಡಾ ಕಲಿಯಬಹುದು. ನಮ್ಮ ಜಾನಪದ ಸಂಸ್ಕೃತಿಯನ್ನು ಉಳಿಸುವಲ್ಲಿ ಸ್ಥಳೀಯ ಭಾಷೆಗಳ ಅಧ್ಯಯನವನ್ನು ಪ್ರೋತ್ಸಾಹಿಸುವುದು ಶ್ಲಾಘನೀಯ ಹೆಜ್ಜೆಯಾಗಿದೆ. ಜನಪದ ಭಾಷೆಗಳು ನಮ್ಮ ಸಂಸ್ಕೃತಿಯ ಅಮೂರ್ತ ಪರಂಪರೆ. ವಿಶ್ವವಿದ್ಯಾನಿಲಯವು ಈ ಉಪಕ್ರಮವನ್ನು ಮುಂದುವರಿಸಬೇಕು ಎಂದು ಭಾರತದ ರಾಷ್ಟ್ರಪತಿ ಅವರು ಹೇಳಿದರು.

“ಎನ್.ಟಿ.ಪಿ.ಸಿ. ಸಹಯೋಗದೊಂದಿಗೆ ಡೂನ್ ವಿಶ್ವವಿದ್ಯಾನಿಲಯದಲ್ಲಿ ಸಾರ್ವಜನಿಕ ನೀತಿ ಪೀಠವನ್ನು ಸ್ಥಾಪಿಸಲಾಗಿದೆ, ಇದು ಬಹಳ ವಿಶೇಷ ಸಂಗತಿಯಾಗಿದೆ. ಇದು ರಾಜ್ಯದ ಅಭಿವೃದ್ಧಿಗಾಗಿ ನೀತಿ ರಚನೆ ಮತ್ತು ಸಾಮರ್ಥ್ಯ ವರ್ಧನೆಗೆ ಮೀಸಲಾಗಿರುತ್ತದೆ. ರಾಜ್ಯದ ಭೌಗೋಳಿಕ, ಪರಿಸರ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ವಿಷಯಗಳ ಸಂಶೋಧನೆ ಮತ್ತು ಅಧ್ಯಯನಕ್ಕಾಗಿ ಡಾ. ನಿತ್ಯಾನಂದ ಹಿಮಾಲಯನ್ ಸಂಶೋಧನೆ ಮತ್ತು ಅಧ್ಯಯನ ಕೇಂದ್ರವನ್ನು ಸಹ ಸ್ಥಾಪಿಸಲಾಗಿದೆ” ಎಂದು ಭಾರತದ ರಾಷ್ಟ್ರಪತಿ ಅವರು ಹೇಳಿದರು. ಹಾಗೂ ಈ ಉಪಕ್ರಮಗಳಿಗಾಗಿ ಅವರು ವಿಶ್ವವಿದ್ಯಾಲಯವನ್ನು ಶ್ಲಾಘಿಸಿದರು.

“ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆ ಮತ್ತು ಆವಿಷ್ಕಾರಗಳಿಗೆ ಉತ್ತೇಜನ ನೀಡಬೇಕು, ಈ ಮೂಲಕ ವಿದ್ಯಾರ್ಥಿಗಳು ತಾಂತ್ರಿಕ ಕೌಶಲಗಳನ್ನು ಹೆಚ್ಚು ಸಜ್ಜುಗೊಳಿಸಬೇಕು ಮತ್ತು ಅವರು ಉದ್ಯೋಗವನ್ನು ಹುಡುಕುತ್ತಾ ಹೋಗುವ ಬದಲು ಇತರರಿಗೆ ಅವರು ಉದ್ಯೋಗವನ್ನು ಒದಗಿಸಬಹುದು” ಎಂದು ಭಾರತದ ರಾಷ್ಟ್ರಪತಿ ಅವರು ಹೇಳಿದರು.

“ಇಂದಿನ ಘಟಿಕೋತ್ಸವದಲ್ಲಿ ಹುಡುಗಿಯರು 36 ರಲ್ಲಿ 23 ಚಿನ್ನದ ಪದಕಗಳನ್ನು ಮತ್ತು 16 ರಲ್ಲಿ 8 ಪಿ.ಎಚ್.ಡಿ ಪದವಿಗಳನ್ನು ಪಡೆದಿದ್ದು,  ಡೂನ್ ವಿಶ್ವವಿದ್ಯಾಲಯದಲ್ಲಿ ಮಹಿಳೆಯರ ಶಿಕ್ಷಣಕ್ಕೆ ಸಾಕಷ್ಟು ಅವಕಾಶಗಳಿವೆ ಮತ್ತು ಹೆಣ್ಣುಮಕ್ಕಳನ್ನು ಪ್ರೋತ್ಸಾಹಿಸಲು ಬದ್ಧವಾಗಿದೆ ಎಂಬುದನ್ನು ಇದು ತೋರಿಸಿಕೊಡುತ್ತದೆ” ಎಂದು ಭಾರತದ ರಾಷ್ಟ್ರಪತಿ ಅವರು ಹೇಳಿದರು.

ಭಾರತದ ರಾಷ್ಟ್ರಪತಿ ಅವರು ತಮ್ಮ ಅಭಿಪ್ರಾಯದಲ್ಲಿ, ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (ಎಸ್.ಟಿ.ಇ.ಎಂ.) ನಂತಹ ವಿಷಯಗಳಲ್ಲಿ ಹುಡುಗಿಯರು ಹೆಚ್ಚು ಸಾಧನೆ ಮಾಡಿದಾಗ ಮಹಿಳಾ ಸಬಲೀಕರಣದ ಪ್ರಕ್ರಿಯೆಯು ಮತ್ತಷ್ಟು ಬಲಗೊಳ್ಳುತ್ತದೆ. ಎಸ್.ಟಿ.ಇ.ಎಂ. ನಲ್ಲಿನ ಶ್ರೇಷ್ಠತೆಯ ಆಧಾರದ ಮೇಲೆ ವೃತ್ತಿಜೀವನವನ್ನು ನಿರ್ಮಿಸಲು ಅವರಿಗೆ ಅನೇಕ ಅವಕಾಶಗಳಿವೆ ಎಂದು ಭಾರತದ ರಾಷ್ಟ್ರಪತಿ ಅವರು ಹೇಳಿದರು.

“ಪದವಿ ಪಡೆದ ನಂತರ ಅವರ ಜವಾಬ್ದಾರಿ ಮತ್ತಷ್ಟು ಹೆಚ್ಚುತ್ತದೆ. ಅವರು ಯಾವುದೇ ಕ್ಷೇತ್ರಕ್ಕೆ ಹೋದರೂ ಪ್ರಾಮಾಣಿಕವಾಗಿ ಮತ್ತು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡಲು ಸಲಹೆ ನೀಡಬೇಕು. ಅಂದಾಗ ಮಾತ್ರ ಅವರ ಶಿಕ್ಷಣ ಸಾರ್ಥಕವಾಗುತ್ತದೆ ಹಾಗೂ ತಮ್ಮ ಜ್ಞಾನದಿಂದ ಸಮಾಜಕ್ಕೆ, ದೇಶಕ್ಕೆ ಉಪಯೋಗವಾಗಲು ಸಾಧ್ಯವಾಗುತ್ತದೆ. ನಿರಂತರ ಮತ್ತು ತ್ವರಿತ ಬದಲಾವಣೆಯ ಯುಗದಲ್ಲಿ, ಭಾರತವು ಆತ್ಮ-ನಿರ್ಭರ್ ಗುರಿಯತ್ತ ಸಾಗುತ್ತಿದೆ ಮತ್ತು ಈ ದೇಶಕ್ಕೆ ರಾಷ್ಟ್ರ ನಿರ್ಮಾಣದ ಕಡೆಗೆ ಅವರ ಬದ್ಧತೆ ಮತ್ತು ಸಮರ್ಪಣೆ ಅಗತ್ಯವಿದೆ. ಮುಂಬರುವ ದಿನಗಳಲ್ಲಿ ಅವರು ಈ ರಾಷ್ಟ್ರೀಯ ನಿರೀಕ್ಷೆಯನ್ನು ಸಂಪೂರ್ಣ ಸಮರ್ಪಣೆಯೊಂದಿಗೆ ಪೂರೈಸುತ್ತಾರೆ ಎಂಬ ವಿಶ್ವಾಸ ನನಗಿದೆ” ಎಂದು ಪದವಿ ಪಡೆದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಭಾರತದ ರಾಷ್ಟ್ರಪತಿ ಅವರು ಹೇಳಿದರು.

ರಾಷ್ಟ್ರಪತಿಯವರ ಭಾಷಣದ ಪಠ್ಯವನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ -

*****


(Release ID: 1882285)
Read this release in: English , Urdu , Hindi , Punjabi