ಉಪರಾಷ್ಟ್ರಪತಿಗಳ ಕಾರ್ಯಾಲಯ
ನಮ್ಮ ಕರಕುಶಲ ವಸ್ತುಗಳು ನಮ್ಮ ದೇಶದ ಜೀವಂತ ಪರಂಪರೆ; ಅವುಗಳನ್ನು ಪ್ರೋತ್ಸಾಹಿಸಲು ಎಲ್ಲಾ ಪ್ರಯತ್ನಗಳನ್ನು ಕೈಗೊಳ್ಳಬೇಕು - ಉಪರಾಷ್ಟ್ರಪತಿ
ನಮ್ಮ ಮುಖ್ಯ ಕುಶಲಕರ್ಮಿಗಳು ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿನಿಧಿಸುತ್ತಾರೆ; ಅವರು ನಮ್ಮ ಸಂಸ್ಕೃತಿ ಮತ್ತು ಸೃಜನಶೀಲತೆಯ ರಾಯಭಾರಿಗಳಾಗಿದ್ದಾರೆ - ಉಪರಾಷ್ಟ್ರಪತಿ
ಎಲ್ಲಾ ಸ್ಥಳೀಯ ಕರಕುಶಲ ಗ್ರಾಹಕರಿಗೆ 'ವೋಕಲ್ ಫಾರ್ ಲೋಕಲ್' ಆಗಿರಲು ಶ್ರೀ ಧನಕರ್ ಮನವಿ
ವಿಜ್ಞಾನ ಭವನದಲ್ಲಿ ಇಂದು 'ಶಿಲ್ಪ ಗುರು' ಮತ್ತು 'ರಾಷ್ಟ್ರೀಯ ಪ್ರಶಸ್ತಿ ಪ್ರದಾನ' ಮಾಡಿದ ಉಪರಾಷ್ಟ್ರಪತಿಯವರು
Posted On:
28 NOV 2022 4:44PM by PIB Bengaluru
ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ನಮ್ಮ ಕರಕುಶಲ ವಸ್ತುಗಳು ನಮ್ಮ ಜೀವಂತ ಪರಂಪರೆಯಾಗಿದ್ದು, ಎಲ್ಲಾ ಸ್ಥಳೀಯ ಕರಕುಶಲ ಗ್ರಾಹಕರು ಅವುಗಳನ್ನು ಪ್ರೋತ್ಸಾಹಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿ, ಅದರ ಬಗ್ಗೆ ಧ್ವನಿ ಎತ್ತಿ ಪ್ರಚಾರ ಮಾಡುವಂತೆ ಇಂದು ಮನವಿ ಮಾಡಿದರು. ಭಾರತೀಯ ಕರಕುಶಲ ಉತ್ಪನ್ನಗಳ ಸಂಘಟಿತ ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್ ಅನ್ನು ಉತ್ತೇಜಿಸುವ ಅಗತ್ಯವನ್ನು ಒತ್ತಿ ಹೇಳಿದ ಅವರು, ಒಳಾಂಗಣ ವಿನ್ಯಾಸಕಾರರು ಈ ಸಮೃದ್ಧ ಭಂಡಾರದತ್ತ ಗಮನ ಹರಿಸಬೇಕು ಎಂದು ಹೇಳಿದರು.
ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಶಿಲ್ಪ ಗುರು ಮತ್ತು 2017, 2018, 2019 ರ ಸಾಲಿನ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರದಾನ ಮಾಡಿದ ನಂತರ ಸಭಿಕರನ್ನುದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿ, ನಮ್ಮ ಮಹಾನ್ ಕುಶಲಕರ್ಮಿಗಳ ಅನನ್ಯ ಪ್ರತಿಭೆಯು ಭಾರತದ ಪ್ರತಿನಿಧಿಯಾಗಿದೆ ಎಂದು ಹೇಳಿದರು. "ನಿಮ್ಮ ಸೂಕ್ಷ್ಮ ಕರ ಕೌಶಲ್ಯದಿಂದ, ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ರಂಗೇರಿಸಿ ಶ್ರೀಮಂತಗೊಳಿಸುತ್ತೀರಿ. ಕೌಶಲ್ಯ ಮತ್ತು ಕರಕುಶಲತೆಯ ಭಾರತದ ಶ್ರೀಮಂತ ಪರಂಪರೆಯನ್ನು ನೀವು ಪ್ರತಿನಿಧಿಸುತ್ತೀರಿ" ಎಂದು ಅವರು ಉಪಸ್ಥಿತರಿದ್ದ ಶಿಲ್ಪ ಗುರುಗಳನ್ನು ಉದ್ದೇಶಿಸಿ ಮಾತನಾಡಿದರು.
ಭಾರತೀಯ ಕುಶಲಕರ್ಮಿಗಳು ನಮ್ಮ ಸಂಸ್ಕೃತಿ ಮತ್ತು ಸೃಜನಶೀಲತೆಯ ಪ್ರಭಾವಶಾಲಿ ರಾಯಭಾರಿಗಳಾಗಿದ್ದಾರೆ ಎಂದು ಶ್ರೀ ಧನಕರ್ ಬಣ್ಣಿಸಿದರು. ಅವರನ್ನು ಗೌರವಿಸುವ ಮೂಲಕ, ಅಂತಹ ಶ್ರೀಮಂತ ಪರಂಪರೆಯನ್ನು ಬಿಟ್ಟುಹೋದ ಅಜ್ಞಾತ ನೈಪುಣ್ಯ ಕುಶಲಕರ್ಮಿಗಳ ತಲೆಮಾರುಗಳನ್ನು ರಾಷ್ಟ್ರವು ಗೌರವಿಸುತ್ತಿದೆ ಎಂದು ಹೇಳಿದರು.
ಈ ಕೌಶಲ್ಯವನ್ನು ಕರಗತ ಮಾಡಿಕೊಳ್ಳಲು ತಲೆಮಾರುಗಳ ತರಬೇತಿ ಬೇಕಾಗುತ್ತದೆ ಎಂದು ಹೇಳಿದ ಉಪರಾಷ್ಟ್ರಪತಿಗಳು, ಅವರ ಸೃಜನಶೀಲತೆ, ಕೌಶಲ್ಯ ಮತ್ತು ಕಠಿಣ ಪರಿಶ್ರಮದಿಂದಾಗಿ, ಭಾರತದ ಕರಕುಶಲತೆಗೆ ವಿಶ್ವದಲ್ಲಿ ಅತ್ಯಂತ ಬೇಡಿಕೆಯಿದೆ ಎಂದು ಹೇಳಿದರು. "ನೀವು ಭಾರತದ ಸೃಜನಶೀಲ ಸಂಪ್ರದಾಯವನ್ನು ಪ್ರತಿನಿಧಿಸುತ್ತೀರಿ. ನೀವು ಭಾರತದ ಕರಕುಶಲತೆಯ ಅಮೂರ್ತ ಪರಂಪರೆಯನ್ನು ಹೊಂದಿದ್ದೀರಿ" ಎಂದು ಅವರು ಹೇಳಿದರು.
ಭಾರತೀಯ ಅರ್ಥವ್ಯವಸ್ಥೆಯಲ್ಲಿ ಕರಕುಶಲ ಕ್ಷೇತ್ರದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಶ್ರೀ ಧನಕರ್, ಇದು ಏಳು ದಶಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತಿದೆ, ಅದರಲ್ಲಿ ಹೆಚ್ಚಿನ ಭಾಗ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿನ ಕುಶಲಕರ್ಮಿಗಳು ಸೇರಿದ್ದಾರೆ ಎಂದು ಹೇಳಿದರು. ಭಾರತದ ಕರಕುಶಲ ಉದ್ಯಮವು ಮಹಿಳಾ ಕುಶಲಕರ್ಮಿಗಳ ಪ್ರಾಬಲ್ಯವನ್ನು ಹೊಂದಿದ್ದು, ಅವರು ಒಟ್ಟು ಕುಶಲಕರ್ಮಿಗಳಲ್ಲಿ 56% ಕ್ಕಿಂತ ಹೆಚ್ಚು ಭಾಗವಾಗಿದ್ದಾರೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.
ಭಾರತೀಯ ಕುಶಲಕರ್ಮಿಗಳ ಕಲ್ಯಾಣ ಮತ್ತು ಯೋಗಕ್ಷೇಮವನ್ನು ಕಾಪಾಡುವಲ್ಲಿ, ಕರಕುಶಲ ವಸ್ತುಗಳ ರಫ್ತು ಉತ್ತೇಜನ ಮಂಡಳಿ ಮತ್ತು ಕೇಂದ್ರ ಜವಳಿ ಸಚಿವಾಲಯದ ಉಪಕ್ರಮಗಳನ್ನು ಉಪರಾಷ್ಟ್ರಪತಿಗಳು ಶ್ಲಾಘಿಸಿದರು.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವರಾದ ಶ್ರೀ ಪಿಯೂಷ್ ಗೋಯಲ್, ಜವಳಿ ಸಚಿವಾಲಯದ ಕಾರ್ಯದರ್ಶಿ ಶ್ರೀಮತಿ ರಚನಾ ಷಾ, ಜವಳಿ ಸಚಿವಾಲಯದ ಅಭಿವೃದ್ಧಿ ಆಯುಕ್ತ (ಕರಕುಶಲ ವಸ್ತುಗಳು) ಶ್ರೀ ಶಾಂತಮಾನು, ಭಾರತದಾದ್ಯಂತದ ಪ್ರಶಸ್ತಿ ಪುರಸ್ಕೃತರು ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
*****
(Release ID: 1879685)