ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಭಾರತದ ಪ್ರಗತಿಯನ್ನು ಜಗತ್ತು ಇಂದು ಗುರುತಿಸಿದೆ: ಶ್ರೀ ಪಿಯೂಷ್ ಗೋಯಲ್


ಸರ್ಕಾರವು ಭಾರತದ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ, ವ್ಯಾಪಕವಾದ ಸಮಾಲೋಚನೆಗಳು ಮತ್ತು ಚರ್ಚೆಯ ನಂತರವೇ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ ಟಿ ಎ) ಗಳಿಗೆ ಪ್ರವೇಶಿಸುತ್ತದೆ: ಶ್ರೀ ಗೋಯಲ್

ಆರ್‌ಸಿಇಪಿಯಿಂದ ಹೊರಗುಳಿಯುವುದು ನಮ್ಮ ರಾಷ್ಟ್ರದ ಹಿತದೃಷ್ಟಿಯಿಂದ ತಳೆದ ಧೈರ್ಯದ ನಿರ್ಧಾರ: ಶ್ರೀ ಗೋಯಲ್

ನವ ಭಾರತವು ಉಜ್ವಲ, ಅತ್ಯಂತ ಶಕ್ತಿಯುತ ಮತ್ತು ಸಮೃದ್ಧ ಭವಿಷ್ಯವನ್ನು ಹೊಂದಿದೆ: ಶ್ರೀ ಗೋಯಲ್

Posted On: 12 NOV 2022 7:01PM by PIB Bengaluru

ಭಾರತದ ಪ್ರಗತಿಯನ್ನು ಜಗತ್ತು ಇಂದು ಗುರುತಿಸುತ್ತಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಹೇಳಿದರು. ಅವರು ಇಂದು ನವದೆಹಲಿಯಲ್ಲಿ ಮಾಧ್ಯಮ ಸಂಸ್ಥೆಯೊಂದು ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದರು.

ರಾಜಕೀಯ ಮತ್ತು ವ್ಯಾಪಾರ ಜಗತ್ತು ಎರಡರಲ್ಲೂ ಎಲ್ಲರೂ ಈಗ ಭಾರತದ ಕಥೆಯನ್ನು ಒಪ್ಪಿಕೊಳ್ಳುತ್ತಿದ್ದಾರೆ ಎಂದು ಶ್ರೀ ಗೋಯಲ್ ಹೇಳಿದರು. ಭಾರತದ ಕಥೆಯು ಬಹಳಷ್ಟು ಸಕಾರಾತ್ಮಕ ಮನಸ್ಥಿತಿಯ ಬಗ್ಗೆ ಹೇಳುತ್ತದೆ, ಉತ್ತಮ ಜೀವನವನ್ನು ಬಯಸುವ ಶತಕೋಟಿ ಜನರ ಆಕಾಂಕ್ಷೆಗಳನ್ನು ತೋರಿಸುತ್ತದೆ ಎಂದು ಅವರು ಹೇಳಿದರು. ಈ ಕಥೆಯು ಆರ್ಥಿಕ ಬೆಳವಣಿಗೆಗೆ ಮಾತ್ರ ಸೀಮಿತವಾಗಿಲ್ಲ, ಇದು ರಾಜಕೀಯ ಸ್ಥಿರತೆಯನ್ನು ಹೇಳುತ್ತದೆ, ಇದು ಭ್ರಷ್ಟಾಚಾರ ಮುಕ್ತ ಸಮಾಜಕ್ಕಾಗಿ ಇರುವ ಭಾರಿ ಒತ್ತಡವನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

ಭಾರತವು ವಿಶ್ವದ ಒಂದು ಜ್ವಾಜಲ್ಯಮಾನವಾದ ತಾಣವಾಗಿದೆ, ಇದು ಶತಕೋಟಿ ಜನರ ಜೀವನವನ್ನು ಸುಧಾರಿಸುವುದಲ್ಲದೆ, ವಿಶ್ವ ಆರ್ಥಿಕತೆಗೆ ಸಹಾಯ ಹಸ್ತವನ್ನು ನೀಡುತ್ತದೆ ಎಂದು ಅವರು ಹೇಳಿದರು. ಪ್ರಪಂಚವು ತನ್ನ ಆರ್ಥಿಕ ಬೆಳವಣಿಗೆಗೆ ಮತ್ತು ಮಾರುಕಟ್ಟೆಗೆ ಮಾತ್ರವಲ್ಲದೆ ಭಾರತದ ಜನಸಂಖ್ಯೆಯ ಪ್ರಯೋಜನ ಮತ್ತು ಪ್ರತಿಭೆಗಳ ಬೃಹತ್ ತಂಡಕ್ಕಾಗಿ ಭಾರತವನ್ನು ಅವಲಂಬಿಸಿದೆ. ಮುಂದಿನ 25 ವರ್ಷಗಳಲ್ಲಿ ಭಾರತವು ಜಾಗತಿಕ ಸೂಪರ್ ಪವರ್ ಆಗುವ ವಿಶ್ವಾಸವಿದೆ ಎಂದು ಶ್ರೀ ಗೋಯಲ್ ಹೇಳಿದರು.

ಇತರ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಗಳನ್ನು ಮಾಡಿಕೊಳ್ಳುವಾಗ ಸರ್ಕಾರವು ಭಾರತದ ಹಿತಾಸಕ್ತಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ಶ್ರೀ ಗೋಯಲ್ ಹೇಳಿದರು. ಭಾರತವು ಕೇವಲ ಒಪ್ಪಂದಗಳಿಗಾಗಿ ಮಾತ್ರ ಒಪ್ಪಂದಗಳನ್ನು ಮಾಡಿಕೊಳ್ಳುವುದಿಲ್ಲ, ಬದಲಿಗೆ ಎಲ್ಲಾ ಮಧ್ಯಸ್ಥಗಾರರೊಂದಿಗೆ ವ್ಯಾಪಕವಾದ ಸಮಾಲೋಚನೆಗಳು ಮತ್ತು ಎಲ್ಲಾ ವಿಷಯಗಳ ಬಗ್ಗೆ ಚರ್ಚೆಯ ನಂತರ ಮಾತ್ರ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು. ಭಾರತವು ತನ್ನ ಬಲದ ಸ್ಥಾನದಿಂದ ಮಾತುಕತೆ ನಡೆಸುತ್ತದೆ, ಆದರೆ ನ್ಯಾಯಯುತ ಮತ್ತು ಸಮತೋಲಿತ ಒಪ್ಪಂದವನ್ನು ಬಯಸುತ್ತದೆ ಎಂದು ಶ್ರೀ ಗೋಯಲ್ ತಿಳಿಸಿದರು.

ಆರ್‌ಸಿಇಪಿ (ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ) ದಿಂದ ಹೊರಗುಳಿಯುವುದು ನಮ್ಮ ಉದ್ಯಮ ಮತ್ತು ನಮ್ಮ ರಾಷ್ಟ್ರದ ಹಿತಾಸಕ್ತಿಯಿಂದ ಮಾಡಿದ ಧೈರ್ಯದ ನಿರ್ಧಾರ ಎಂದು ಶ್ರೀ ಗೋಯಲ್ ಎತ್ತಿ ತೋರಿಸಿದರು.

ನವ ಭಾರತವು ಉಜ್ವಲವಾದ ಭವಿಷ್ಯವನ್ನು ಹೊಂದಿದೆ, ಅತ್ಯಂತ ಶಕ್ತಿಶಾಲಿ ಮತ್ತು ಅತ್ಯಂತ ಸಮೃದ್ಧವಾದ ಭವಿಷ್ಯವನ್ನು ಹೊಂದಿದೆ ಎಂದು ಶ್ರೀ ಗೋಯಲ್ ಹೇಳಿದರು. ಭಾರತವನ್ನು ಶಕ್ತಿಯುತ ಯುವ ರಾಷ್ಟ್ರ ಎಂದು ಕರೆದ ಅವರು, ದೇಶವು ಜೀವನದಲ್ಲಿ ಉತ್ತಮ ವಿಷಯಗಳನ್ನು ಬಯಸುತ್ತದೆ, ಇದು ಪ್ರಯೋಗ, ನಾವೀನ್ಯತೆ ಮತ್ತು ಅಪಾಯಗಳನ್ನು ತೆಗೆದುಕೊಳ್ಳಲು ಸಿದ್ಧವಾಗಿದೆ ಎಂದರು.

ನಿನ್ನೆ ವಾರಾಣಸಿಯಲ್ಲಿ ನವೋದ್ಯಮದ ಯುವಜನರೊಂದಿಗೆ ನಡೆದ ಸಂವಾದದ ಅನುಭವವನ್ನು ಹಂಚಿಕೊಂಡ ಅವರು, ದೇಶದಲ್ಲಿ ಸಾಕಷ್ಟು ಸಕಾರಾತ್ಮಕ ಶಕ್ತಿ ಮತ್ತು ಉನ್ನತ ಮಟ್ಟದ ರಾಷ್ಟ್ರೀಯತೆಯ ಮನೋಭಾವವಿದೆ ಎಂದು ಹೇಳಿದರು. ಜನರ ಮನಸ್ಥಿತಿ ಬದಲಾಗುತ್ತಿದೆ, ಭಾರತದ ವಿಶ್ವಾಸವು ಬಲಗೊಳ್ಳುತ್ತಿದೆ ಮತ್ತು ಭಾರತದ ಭವಿಷ್ಯವು ಸುರಕ್ಷಿತವಾಗಿದೆ ಎಂದು ಸಚಿವರು ಹೇಳಿದರು.

*****



(Release ID: 1875529) Visitor Counter : 110


Read this release in: English , Urdu , Hindi , Telugu