ಪ್ರಧಾನ ಮಂತ್ರಿಯವರ ಕಛೇರಿ

ರಾಜಸ್ಥಾನದ ಮಾನ್ ಗಢ್ ಹಿಲ್ಸ್ ನಲ್ಲಿ ನಡೆದ 'ಮಂಗರ್ ಧಾಮ್ ಕಿ ಗೌರವ್ ಗಾಥಾ' ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

Posted On: 01 NOV 2022 2:49PM by PIB Bengaluru

ಭಾರತ್ ಮಾತಾ ಕಿ - ಜೈ!
ಭಾರತ್ ಮಾತಾ ಕಿ - ಜೈ!
ರಾಜಸ್ಥಾನದ ಮಾನ್ಯ ಮುಖ್ಯಮಂತ್ರಿ ಶ್ರೀ ಅಶೋಕ್ ಗೆಹ್ಲೋಟ್ ಜಿ, ಮಧ್ಯಪ್ರದೇಶದ ರಾಜ್ಯಪಾಲರು ಮತ್ತು ಬುಡಕಟ್ಟು ಸಮುದಾಯದ ಅತ್ಯಂತ ಎತ್ತರದ ನಾಯಕ ಶ್ರೀ ಮಂಗುಭಾಯಿ ಪಟೇಲ್, ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಜಿ ಚೌಹಾಣ್, ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ಫಗ್ಗನ್ ಸಿಂಗ್ ಕುಲಸ್ತೆ ಜಿ ಮತ್ತು ಶ್ರೀ ಅರ್ಜುನ್ ಮೇಘವಾಲ್ ಜಿ, ವಿವಿಧ ಸಂಘಟನೆಗಳ ಪ್ರಮುಖರು, ಸಂಸದರು, ಶಾಸಕರು ಮತ್ತು ಬುಡಕಟ್ಟು ಸಮುದಾಯದ ಸೇವೆಗೆ ಇಡೀ ಜೀವನವನ್ನೇ ಮುಡಿಪಾಗಿಟ್ಟ ನನ್ನ ಹಳೆಯ ಸ್ನೇಹಿತ ಮತ್ತು ಸಹೋದರ ಮಹೇಶ್ ಜಿ ಮತ್ತು ನನ್ನ ಪ್ರೀತಿಯ ಬುಡಕಟ್ಟು ಬಂಧುಗಳು ಮತ್ತು ದೂರದೂರುಗಳಿಂದ ಮಂಗರ್ ಧಾಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವ ಸಹೋದರ, ಸಹೋದರಿಯರೆ!

ಈ ಪುಣ್ಯಭೂಮಿಯಾದ ಮಂಗರದಲ್ಲಿ ಮತ್ತೊಮ್ಮೆ ತಲೆಬಾಗಿ ನಮಸ್ಕರಿಸುವ ಅವಕಾಶ ಸಿಕ್ಕಿರುವುದು ನನ್ನ ಪಾಲಿನ ಸೌಭಾಗ್ಯ. ಮುಖ್ಯಮಂತ್ರಿ ಅಶೋಕ್ ಜಿ ಮತ್ತು ನಾನು ಹಲವಾರು ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡಿದ್ದೇವೆ ಮತ್ತು ಅಶೋಕ್ ಜಿ ಅವರು ಮುಖ್ಯಮಂತ್ರಿಗಳ ಪೈಕಿ ಅತ್ಯಂತ ಹಿರಿಯರಾಗಿದ್ದಾರೆ. ಈಗಲೂ ಅವರು ಅತ್ಯಂತ ಹಿರಿಯ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದಾರೆ. ವೇದಿಕೆಯ ಮೇಲೆ ಕುಳಿತಿರುವ ಮುಖ್ಯಮಂತ್ರಿಗಳ ಪೈಕಿ ಅಶೋಕ್ ಜಿ ಅವರೇ ಹಿರಿಯರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.


ಸ್ನೇಹಿತರೆ,

ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ನಾವೆಲ್ಲರೂ ಮಂಗರ್ ಧಾಮದಲ್ಲಿ ಕಲೆತಿರುವುದು ನಮಗೆಲ್ಲರಿಗೂ ಆಹ್ಲಾದಕರ ಮತ್ತು ಸ್ಫೂರ್ತಿದಾಯಕವಾಗಿದೆ. ಮಂಗರ್ ಧಾಮ್ ಬುಡಕಟ್ಟು ವೀರರ ಹೋರಾಟವು ದೇಶಭಕ್ತಿಯ ಪ್ರತಿಬಿಂಬವಾಗಿದೆ. ಇದು ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಜನರ ಸಾಮಾನ್ಯ ಪರಂಪರೆಯಾಗಿದೆ. ನಿನ್ನೆ ಮೊನ್ನೆ ಅಂದರೆ ಅಕ್ಟೋಬರ್ 30ರಂದು ಗೋವಿಂದ ಗುರುಗಳ ಪುಣ್ಯತಿಥಿ. ಎಲ್ಲಾ ದೇಶವಾಸಿಗಳ ಪರವಾಗಿ, ನಾನು ಮತ್ತೊಮ್ಮೆ ಗೋವಿಂದ ಗುರು ಜೀ ಅವರಿಗೆ ಗೌರವ ಸಲ್ಲಿಸುತ್ತೇನೆ. ಗೋವಿಂದ ಗುರು ಜಿ ಅವರ ಹೋರಾಟಗಳು, ಚಿಂತನೆಗಳು ಮತ್ತು ಆದರ್ಶಗಳಿಗೆ ನಾನು ತಲೆಬಾಗಿ ನಮಸ್ಕರಿಸುತ್ತೇನೆ.

ಸಹೋದರ ಸಹೋದರಿಯರೇ,

ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಗುಜರಾತಿನ ಮನ್‌ಗಢ್ ಪ್ರದೇಶದಲ್ಲಿ ಸೇವೆ ಸಲ್ಲಿಸುವ ಸೌಭಾಗ್ಯ ನನಗೆ ಸಿಕ್ಕಿತ್ತು. ಗೋವಿಂದ ಗುರುಗಳು ತಮ್ಮ ಜೀವನದ ಕೊನೆಯ ವರ್ಷಗಳನ್ನು ಅಲ್ಲಿಯೇ ಕಳೆದಿದ್ದರು. ಅವರ ಶಕ್ತಿ ಮತ್ತು ಬೋಧನೆಗಳನ್ನು ಈ ಮಣ್ಣಿನಲ್ಲಿ ಇಂದಿಗೂ ಅನುಭವಿಸಲಾಗುತ್ತಿದೆ. ನಮ್ಮ ಕಟಾರ ಕಂಕಮಲ್ ಜೀ ಮತ್ತು ಇಲ್ಲಿನ ಸಮುದಾಯಕ್ಕೆ ನಾನು ವಿಶೇಷವಾಗಿ ತಲೆಬಾಗಿ ವಂದಿಸಲು ಬಯಸುತ್ತೇನೆ. ಮೊನ್ನೆ ನಾನು ಬರುವಾಗ ಆ ಜಾಗ ಸಂಪೂರ್ಣ ನಿರ್ಜನವಾಗಿತ್ತು. ‘ವನ ಮಹೋತ್ಸವ’ ಆಯೋಜಿಸುವಂತೆ ಮನವಿ ಮಾಡಿದ್ದೆ. ಇದೀಗ ಎಲ್ಲೆಡೆ ಹಸಿರು ಆವರಿಸಿರುವುದರಿಂದ ನನಗೆ ತುಂಬಾ ತೃಪ್ತಿಯಾಗಿದೆ. ಇಲ್ಲಿಯ ಅರಣ್ಯವನ್ನು ಸಂಪೂರ್ಣ ಸಮರ್ಪಣಾ ಮನೋಭಾವದಿಂದ ಅಭಿವೃದ್ಧಿಪಡಿಸಿ ಈ ಪ್ರದೇಶವನ್ನು ಮತ್ತೆ ಹಸಿರಾಗಿಸಿರುವ ಬುಡಕಟ್ಟು ಸಮುದಾಯದ ಎಲ್ಲಾ ಗೆಳೆಯರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.

ಸ್ನೇಹಿತರೆ,

ಈ ಪ್ರದೇಶವನ್ನು ಅಭಿವೃದ್ಧಿಪಡಿಸಿ ರಸ್ತೆಗಳನ್ನು ನಿರ್ಮಿಸಿದಾಗ, ಅಲ್ಲಿನ ಜನರ ಜೀವನ ಸುಧಾರಿಸಿತು. ಜತೆಗೆ, ಗೋವಿಂದ ಗುರುಗಳ ಬೋಧನೆಗಳು ಸಹ ವಿಸ್ತರಿಸಿದವು.

ಸ್ನೇಹಿತರೆ,

ಗೋವಿಂದ ಗುರುಗಳು ಇತರ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಂತೆ ಭಾರತೀಯ ಸಂಪ್ರದಾಯಗಳು ಮತ್ತು ಆದರ್ಶಗಳ ಪ್ರತಿನಿಧಿಯಾಗಿದ್ದರು. ಅವರು ಯಾವುದೇ ರಾಜಪ್ರಭುತ್ವದ ರಾಜನಾಗಿರಲಿಲ್ಲ, ಆದರೆ ಲಕ್ಷಾಂತರ ಬುಡಕಟ್ಟು ಜನರ ನಾಯಕರಾಗಿದ್ದರು. ಅವರು ತನ್ನ ಕುಟುಂಬವನ್ನು ಕಳೆದುಕೊಂಡರು. ಆದರೆ ಅವರು  ಎಂದಿಗೂ ತನ್ನ ಧೈರ್ಯ ಕಳೆದುಕೊಳ್ಳಲಿಲ್ಲ. ಅವರು ಪ್ರತಿಯೊಬ್ಬ ಬುಡಕಟ್ಟು, ದುರ್ಬಲ, ಬಡ ಮತ್ತು ಭಾರತೀಯ ನಾಗರಿಕರನ್ನು ತನ್ನ ಕುಟುಂಬವನ್ನಾಗಿ ಮಾಡಿಕೊಂಡರು. ಗೋವಿಂದ ಗುರುಗಳು ಬುಡಕಟ್ಟು ಸಮಾಜದ ಶೋಷಣೆಗಾಗಿ ಬ್ರಿಟಿಷ್ ಸರ್ಕಾರದ ವಿರುದ್ಧ ಹೋರಾಟದ ಕಹಳೆ ಊದುವ ಜತೆಗೆ, ಅವರು ತಮ್ಮ ಸಮಾಜದಲ್ಲಿದ್ದ ಅನಿಷ್ಟಗಳ ವಿರುದ್ಧವೂ ಹೋರಾಡಿದರು.

ಅವರು ಸಮಾಜ ಸುಧಾರಕರೂ ಆಗಿದ್ದರು. ಅವರು ಆಧ್ಯಾತ್ಮಿಕ ಗುರುವೂ ಆಗಿದ್ದರು. ಅವರು ಸಂತರಾಗಿದ್ದರು. ಅವರು ಜನನಾಯಕರೂ ಆಗಿದ್ದರು. ಧೈರ್ಯ ಮತ್ತು ಶೌರ್ಯದ ಜೊತೆಗೆ, ಅವರ ತಾತ್ವಿಕ ಮತ್ತು ಬೌದ್ಧಿಕ ಚಿಂತನಧಾರೆಗಳು ಸಮಾನವಾಗಿ ಉನ್ನತವಾಗಿದ್ದವು. ಗೋವಿಂದ ಗುರುವಿನ ಪ್ರತಿಬಿಂಬ ಮತ್ತು ಸಾಕ್ಷಾತ್ಕಾರವು ಅವರ 'ಧುನಿ' ರೂಪದಲ್ಲಿ ಮಂಗರ್ ಧಾಮ್‌ನಲ್ಲಿ ಪ್ರಕಾಶಿಸುತ್ತಲೇ ಇದೆ. ಅವರ 'ಸಂಪ ಸಭೆ' ನೋಡಿ! ಸಂಪ ಸಭೆ ಎಂಬ ಪದ ಎಷ್ಟು ಕಟುವಾಗಿದೆ! ಅವರ ‘ಸಂಪ ಸಭೆ’ಯ ಆದರ್ಶಗಳು ಇಂದಿಗೂ ಸಮಾಜದ ಪ್ರತಿಯೊಂದು ವರ್ಗದಲ್ಲಿ ಸೌಹಾರ್ದತೆಯ ಭಾವ ಮೂಡಿಸಲು ಏಕತೆ, ಪ್ರೀತಿ ಮತ್ತು ಸಹೋದರತ್ವವನ್ನು ಪ್ರೇರೇಪಿಸುತ್ತಿವೆ. ಅವರ 'ಭಗತ್' ಅನುಯಾಯಿಗಳು ಭಾರತದ ಆಧ್ಯಾತ್ಮಿಕತೆಯನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದಾರೆ.

ಸ್ನೇಹಿತರು,

1913ರ ನವೆಂಬರ್ 17ರಂದು ಮಂಗರ್‌ನಲ್ಲಿ ನಡೆದ ಹತ್ಯಾಕಾಂಡವು ಬ್ರಿಟಿಷ್ ಆಳ್ವಿಕೆಯ ಕ್ರೌರ್ಯದ ಪರಮಾವಧಿಯಾಗಿತ್ತು. ಒಂದೆಡೆ ಸ್ವಾತಂತ್ರ್ಯದಲ್ಲಿ ನಂಬಿಕೆಯಿಟ್ಟ ಮುಗ್ಧ ಬುಡಕಟ್ಟು ಸಮುದಾಯದ ಬಂಧು ಬಳಗದವರಿದ್ದರೆ, ಇನ್ನೊಂದೆಡೆ ಇಡೀ ಜಗತ್ತನ್ನೇ ಗುಲಾಮರನ್ನಾಗಿಸುವ ಬ್ರಿಟಿಷರ ಚಿಂತನೆ ಮಾರ್ದನಿಸುತ್ತಿತ್ತು. ಬ್ರಿಟಿಷ್ ಸರ್ಕಾರವು ಮಂಗರ್ ಬೆಟ್ಟದಲ್ಲಿ 1,500ಕ್ಕೂ ಹೆಚ್ಚು ಯುವಕರು, ವೃದ್ಧರು ಮತ್ತು ಮಹಿಳೆಯರನ್ನು ಸುತ್ತುವರೆದು ಕಗ್ಗೊಲೆ ಮಾಡಿತು. ನೀವು ಊಹಿಸಬಹುದು, 1,500ಕ್ಕೂ ಹೆಚ್ಚು ಜನರ ಘೋರ ಹತ್ಯೆಯ ಪಾಪ ಮಾಡಲಾಗಿದೆ. ದುರದೃಷ್ಟವಶಾತ್, ಬುಡಕಟ್ಟು ಸಮಾಜದ ಈ ಹೋರಾಟ ಮತ್ತು ತ್ಯಾಗವನ್ನು ಸ್ವಾತಂತ್ರ್ಯಾ ನಂತರ ಬರೆದ ಇತಿಹಾಸದಲ್ಲಿ ಪ್ರಸ್ತಾಪಿಸಿಯೇ ಇಲ್ಲ, ಅವರ ಹೋರಾಟಕ್ಕೆ ಸರಿಯಾದ ಸ್ಥಾನ ಸಿಗಲಿಲ್ಲ. ಇಂದು ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸುಸಂದರ್ಭದಲ್ಲಿ ಆ ನ್ಯೂನತೆಯನ್ನು ಸರಿಪಡಿಸಲು ಪ್ರಯತ್ನಿಸುತ್ತಿದೆ. ದಶಕಗಳ ಹಿಂದೆ ಮಾಡಿದ ತಪ್ಪುಗಳನ್ನು ಇಂದು ದೇಶ ಸರಿಪಡಿಸುತ್ತಿದೆ.

ಸ್ನೇಹಿತರೆ,

ಭಾರತದ ಭೂತಕಾಲ, ಭಾರತದ ಇತಿಹಾಸ, ಭಾರತದ ವರ್ತಮಾನ ಮತ್ತು ಭಾರತದ ಭವಿಷ್ಯವು ಬುಡಕಟ್ಟು ಸಮಾಜವಿಲ್ಲದೆ ಸಂಪೂರ್ಣವಾಗುವುದಿಲ್ಲ. ನಮ್ಮ ಸ್ವಾತಂತ್ರ್ಯ ಹೋರಾಟ ಮತ್ತು ಇತಿಹಾಸದ ಪ್ರತಿಯೊಂದು ಪುಟವು ಬುಡಕಟ್ಟು ಸಮುದಾಯಗಳ ಅಪ್ರತಿಮ ಶೌರ್ಯದಿಂದ ತುಂಬಿದೆ. ಬುಡಕಟ್ಟು ಸಮಾಜವು 1857ರ ಕ್ರಾಂತಿಗೆ ಮುಂಚೆಯೇ ವಿದೇಶಿ ಆಡಳಿತದ ವಿರುದ್ಧದ ಹೋರಾಟವನ್ನು ಧ್ವನಿಸಿತ್ತು. 1780ರಲ್ಲಿ ಅಂದರೆ  1857ರ ಕ್ರಾಂತಿಗೆ ಮುಂಚೆಯೇ, ತಿಲ್ಕಾ ಮಾಂಝಿ ನೇತೃತ್ವದಲ್ಲಿ ಸಂತಾಲ್ ನಲ್ಲಿ ಸಶಸ್ತ್ರ ದಂಗೆ ನಡೆಯಿತು. 1830-32ರಲ್ಲಿ ಬುಧು ಭಗತ್ ನೇತೃತ್ವದಲ್ಲಿ ದೇಶವು ‘ಲರ್ಕಾ ಚಳವಳಿ’ಗೆ ಸಾಕ್ಷಿಯಾಯಿತು. ಇಲ್ಲಿ 1855ರಲ್ಲಿ ‘ಸಿದ್ದು ಕನ್ಹು ಕ್ರಾಂತಿ’ಯ ರೂಪದಲ್ಲಿ ಸ್ವಾತಂತ್ರ್ಯದ ಜ್ಯೋತಿ ಬೆಳಗಿತು. ಹಾಗೆಯೇ ಭಗವಾನ್ ಬಿರ್ಸಾ ಮುಂಡಾ ಅವರು ಲಕ್ಷಾಂತರ ಆದಿವಾಸಿಗಳಲ್ಲಿ ಕ್ರಾಂತಿಯ ಜ್ವಾಲೆಯನ್ನು ಹೊತ್ತಿಸಿದರು. ಅವರು ಬಹಳ ಚಿಕ್ಕ ವಯಸ್ಸಿನಲ್ಲೇ ತೀರಿಕೊಂಡರು. ಆದರೆ ಅವರ ಶಕ್ತಿ, ದೇಶಪ್ರೇಮ ಮತ್ತು ಧೈರ್ಯ 'ತಾನಾ ಭಗತ್ ಆಂದೋಲನ'ದಂತಹ ಕ್ರಾಂತಿಗಳಿಗೆ ಆಧಾರಸ್ತಂಭವಾಯಿತು.

ಸ್ನೇಹಿತರೆ, 

ಗುಲಾಮಗಿರಿಯ ಆರಂಭಿಕ ಶತಮಾನಗಳಿಂದ 20ನೇ ಶತಮಾನದವರೆಗೆ, ಬುಡಕಟ್ಟು ಸಮಾಜವು ಸ್ವಾತಂತ್ರ್ಯ ಹೋರಾಟದ ಜ್ಯೋತಿ ಹಿಡಿಯದ ಯಾವುದೇ ಅವಧಿಯನ್ನು ನಾವು ಕಾಣಲು ಸಾಧ್ಯವೇ ಇಲ್ಲ. ಆಂಧ್ರ ಪ್ರದೇಶದಲ್ಲಿ ಅಲ್ಲೂರಿ ಸೀತಾರಾಮ ರಾಜು ಅವರ ನೇತೃತ್ವದಲ್ಲಿ ಬುಡಕಟ್ಟು ಸಮುದಾಯವು  'ರಾಂಪ ಕ್ರಾಂತಿ'ಗೆ ಹೊಸ ರೂಪು ನೀಡಿತು. ರಾಜಸ್ಥಾನದ ಈ ನೆಲವು ಅದಕ್ಕಿಂತ ಮುಂಚೆಯೇ ಬುಡಕಟ್ಟು ಸಮುದಾಯದ ದೇಶಪ್ರೇಮಕ್ಕೆ ಸಾಕ್ಷಿಯಾಗಿದೆ. ಈ ನೆಲದಲ್ಲಿ, ನಮ್ಮ ಬುಡಕಟ್ಟು ಸಹೋದರರು ಮತ್ತು ಸಹೋದರಿಯರು ಮಹಾರಾಣಾ ಪ್ರತಾಪ್ ಅವರ ಹೆಗಲಿಗೆ ಹೆಗಲು ಕೊಟ್ಟರು.

ಸ್ನೇಹಿತರೆ,

ಬುಡಕಟ್ಟು ಸಮಾಜದ ಅಪಾರ ಮತ್ತು ನಿಸ್ವಾರ್ಥ ತ್ಯಾಗ, ಬಲಿದಾನಗಳಿಗೆ ನಾವು ಋಣಿಯಾಗಿದ್ದೇವೆ. ಅವರ ಕೊಡುಗೆಗಳಿಗೆ ನಾವು ಚಿರಋಣಿಯಾಗಿದ್ದೇವೆ. ಈ ಸಮುದಾಯವು ಪ್ರಕೃತಿ, ಪರಿಸರ, ಸಂಸ್ಕೃತಿ, ಸಂಪ್ರದಾಯಗಳು ಮತ್ತು ಭಾರತದ ಸ್ವರೂಪವನ್ನು ಸಂರಕ್ಷಿಸಿದೆ ಮತ್ತು ಪಾಲಿಸಿದೆ. ಈ ಕೊಡುಗೆಗಾಗಿ ಬುಡಕಟ್ಟು ಸಮಾಜಕ್ಕೆ ಸೇವೆ ಸಲ್ಲಿಸುವ ಮೂಲಕ ದೇಶವು ಈ ಋಣಕ್ಕಾಗಿ ಧನ್ಯವಾದ ಸಲ್ಲಿಸಬೇಕಾದ ಸಮಯ ಇದೀಗ ಬಂದಿದೆ. ಈ ಚೈತನ್ಯವು ಕಳೆದ 8 ವರ್ಷಗಳಿಂದ ನಮ್ಮ ಪ್ರಯತ್ನಗಳಿಗೆ ಉತ್ತೇಜನ ನೀಡುತ್ತಿದೆ. ಇಂದಿನಿಂದ ಕೆಲವು ದಿನಗಳಲ್ಲಿ ಅಂದರೆ ನವೆಂಬರ್ 15ರಂದು, ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನದಂದು ದೇಶವು ‘ಜಂಜಾಟಿಯಾ ಗೌರವ್ ದಿವಸ್’ (ಬುಡಕಟ್ಟು ಸಮುದಾಯದ ಹೆಮ್ಮೆಯ ದಿನ) ಆಚರಿಸುತ್ತಿದೆ. ಇಂದು ಬುಡಕಟ್ಟು ಸಮಾಜದ ಹಿಂದಿನ ಮತ್ತು ಇತಿಹಾಸವನ್ನು ಜನಸಾಮಾನ್ಯರಿಗೆ ತಲುಪಿಸಲು ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರಿಗೆ ಮೀಸಲಾದ ವಿಶೇಷ ವಸ್ತುಸಂಗ್ರಹಾಲಯಗಳನ್ನು ದೇಶಾದ್ಯಂತ ನಿರ್ಮಿಸಲಾಗುತ್ತಿದೆ. ಬುಡಕಟ್ಟು ಸಮುದಾಯದ ಭವ್ಯ ಪರಂಪರೆಗಳಿಂದ ವಂಚಿತವಾಗಿದ್ದ ನಮ್ಮ ಹೊಸ ಪೀಳಿಗೆಯು ಈಗ ಅವರ ಚಿಂತನೆ ಮತ್ತು ಸ್ಫೂರ್ತಿಯ ಭಾಗವಾಗಲಿದೆ.

ಸಹೋದರ ಸಹೋದರಿಯರೇ,

ದೇಶದಲ್ಲಿ ಬುಡಕಟ್ಟು ಸಮುದಾಯದ ವಿಸ್ತರಣೆ ಮತ್ತು ಅವರ ಅನನ್ಯ ಪಾತ್ರವು ಅತಿ ದೊಡ್ಡದಾಗಿದೆ, ಅದಕ್ಕಾಗಿ ನಾವು ಅವರಿಗಾಗಿ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಬೇಕಾಗಿದೆ. ರಾಜಸ್ಥಾನ ಮತ್ತು ಗುಜರಾತ್‌ನಿಂದ ಈಶಾನ್ಯ ಮತ್ತು ಒಡಿಶಾದವರೆಗೆ, ಇಂದು ದೇಶವು ವೈವಿಧ್ಯಮಯ ಬುಡಕಟ್ಟು ಸಮುದಾಯಕ್ಕೆ ಸೇವೆ ಸಲ್ಲಿಸಲು ಸರ್ಕಾರಗಳು ಸ್ಪಷ್ಟ ನೀತಿಗಳೊಂದಿಗೆ ಕೆಲಸ ಮಾಡುತ್ತಿವೆ. ಇಂದು ಬುಡಕಟ್ಟು ಜನರನ್ನು 'ವನಬಂಧು ಕಲ್ಯಾಣ ಯೋಜನೆ' ಮೂಲಕ ನೀರು, ವಿದ್ಯುತ್, ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಾವಕಾಶಗಳೊಂದಿಗೆ ಸೌಲಭ್ಯ ಒದಗಿಸಲಾಗುತ್ತಿದೆ. ಇಂದು ದೇಶದಲ್ಲಿ ಅರಣ್ಯ ಪ್ರದೇಶಗಳು ಸಹ ಹೆಚ್ಚಾಗುತ್ತಿವೆ, ಅರಣ್ಯ ಸಂಪತ್ತನ್ನು ಸಹ ರಕ್ಷಿಸಲಾಗುತ್ತಿದೆ. ಅದೇ ಸಮಯದಲ್ಲಿ ಬುಡಕಟ್ಟು ಪ್ರದೇಶಗಳು ಸಹ ಡಿಜಿಟಲ್ ಇಂಡಿಯಾದ ಭಾಗವಾಗುತ್ತಿವೆ. ಬುಡಕಟ್ಟು ಯುವಕರಿಗೆ ಸಾಂಪ್ರದಾಯಿಕ ಕೌಶಲ್ಯದ ಜೊತೆಗೆ ಆಧುನಿಕ ಶಿಕ್ಷಣದ ಅವಕಾಶಗಳನ್ನು ಪಡೆಯಲು 'ಏಕಲವ್ಯ ವಸತಿ ಶಾಲೆ'ಗಳನ್ನು ಸಹ ತೆರೆಯಲಾಗುತ್ತಿದೆ. ಈ ಕಾರ್ಯಕ್ರಮದ ನಂತರ, ನಾನು ಜಂಬೂಗೋಡಕ್ಕೆ ಹೋಗುತ್ತಿದ್ದೇನೆ, ಅಲ್ಲಿ ನಾನು ಗೋವಿಂದ ಗುರು ಜಿ ಅವರ ಹೆಸರಿನ ವಿಶ್ವವಿದ್ಯಾಲಯದ ಭವ್ಯವಾದ ಆಡಳಿತ ಕ್ಯಾಂಪಸ್ ಅನ್ನು ಉದ್ಘಾಟಿಸುತ್ತೇನೆ.

ಸ್ನೇಹಿತರೆ,

ಈಗ ನಾನು ನಿಮ್ಮ ನಡುವೆ ಇದ್ದೇನೆ, ನಾನು ನಿಮಗೆ ಇನ್ನೊಂದು ವಿಷಯ ಹೇಳಲು ಬಯಸುತ್ತೇನೆ. ನಿನ್ನೆ ಸಂಜೆ ಬ್ರಾಡ್ ಗೇಜ್ ಮಾರ್ಗದಲ್ಲಿ ಸಂಚರಿಸುವ ಅಹಮದಾಬಾದ್-ಉದಯಪುರ ರೈಲಿಗೆ ಹಸಿರುನಿಶಾನೆ ತೋರಲು ನನಗೆ ಅವಕಾಶ ಸಿಕ್ಕಿದ್ದನ್ನು ನೀವು ನೋಡಿರಬೇಕು. 300 ಕಿ.ಮೀ. ಉದ್ದದ ಈ ರೈಲು ಮಾರ್ಗವನ್ನು ಬ್ರಾಡ್ ಗೇಜ್‌ಗೆ ಪರಿವರ್ತಿಸುವುದು ರಾಜಸ್ಥಾನದ ನಮ್ಮ ಸಹೋದರ ಸಹೋದರಿಯರಿಗೂ ಬಹಳ ಮುಖ್ಯವಾಗಿದೆ. ರಾಜಸ್ಥಾನದ ಹಲವು ಬುಡಕಟ್ಟು ಪ್ರದೇಶಗಳು ಈಗ ಗುಜರಾತ್‌ನ ಬುಡಕಟ್ಟು ಪ್ರದೇಶಗಳೊಂದಿಗೆ ಸಂಪರ್ಕ ಹೊಂದಲಿವೆ. ಈ ಹೊಸ ರೈಲು ಮಾರ್ಗದಿಂದ ರಾಜಸ್ಥಾನದ ಪ್ರವಾಸೋದ್ಯಮವೂ ಹೆಚ್ಚಿನ ಪ್ರಯೋಜನ ಪಡೆಯುತ್ತದೆ, ಇದು ಇಲ್ಲಿನ ಕೈಗಾರಿಕಾ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಇದರಿಂದ ಯುವಕರಿಗೆ ಹೊಸ ಉದ್ಯೋಗಾವಕಾಶಗಳೂ ಸೃಷ್ಟಿಯಾಗಲಿವೆ.

ಸ್ನೇಹಿತರೆ,

ಇಲ್ಲಿನ ಮಂಗರ್ ಧಾಮದ ಸಂಪೂರ್ಣ ಅಭಿವೃದ್ಧಿ ಬಗ್ಗೆಯೂ ಚರ್ಚೆ ನಡೆದಿದೆ. ಮಂಗರ್ ಧಾಮದ ಭವ್ಯವಾದ ವಿಸ್ತರಣೆಗೆ  ನಾವೆಲ್ಲರೂ ಬಲವಾದ ಬಯಕೆ ಹೊಂದಿದ್ದೇವೆ. ಆದ್ದರಿಂದ ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ 4 ರಾಜ್ಯ ಸರ್ಕಾರಗಳು ವಿಸ್ತೃತ ಚರ್ಚೆ ನಡೆಸಿ ಗೋವಿಂದ ಗುರುಗಳ ಈ ಸ್ಮಾರಕವು ವಿಶ್ವದಲ್ಲಿ ತನ್ನ ಛಾಪು ಮೂಡಿಸಲು ಮಾರ್ಗಸೂಚಿ ಸಿದ್ಧಪಡಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಮಂಗರ್ ಧಾಮದ ಅಭಿವೃದ್ಧಿಯು ಈ ಪ್ರದೇಶವನ್ನು ಹೊಸ ಪೀಳಿಗೆಗೆ ಸ್ಫೂರ್ತಿಯ ಜಾಗೃತ ತಾಳವನ್ನಾಗಿ ಮಾಡುತ್ತದೆ ಎಂದು ನನಗೆ ಖಾತ್ರಿಯಿದೆ. ನಾವು ಹಲವಾರು ದಿನಗಳಿಂದ ಈ ನಿಟ್ಟಿನಲ್ಲಿ ಚರ್ಚೆ ನಡೆಸುತ್ತಿರುವುದರಿಂದ, ಸೂಕ್ತ ಸ್ಥಳವನ್ನು ತ್ವರಿತವಾಗಿ ಗುರುತಿಸುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಭಾರತ ಸರ್ಕಾರದ ಬೆಂಬಲದೊಂದಿಗೆ ನಾವು ಅದನ್ನು ಇನ್ನಷ್ಟು ಅಭಿವೃದ್ಧಿಪಡಿಸಬಹುದು. ಇದನ್ನು ರಾಷ್ಟ್ರೀಯ ಸ್ಮಾರಕ ಅಥವಾ ಇನ್ನೇನಾದರೂ ಕರೆಯಬಹುದು, ಆದರೆ ಭಾರತ ಸರ್ಕಾರ ಮತ್ತು ಈ 4 ರಾಜ್ಯಗಳು ಬುಡಕಟ್ಟು ಸಮುದಾಯದ ಜತೆಗೆ ನೇರ ಸಂಬಂಧ ಹೊಂದಿವೆ. ಈ 4 ರಾಜ್ಯಗಳು ಮತ್ತು ಭಾರತ ಸರ್ಕಾರವು ಒಟ್ಟಾಗಿ ಅದನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕಾಗಿದೆ. ಆ ನಿಟ್ಟಿನಲ್ಲಿ ಭಾರತ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ನಾನು ಮತ್ತೊಮ್ಮೆ ನಿಮಗೆ ಶುಭ ಹಾರೈಸುತ್ತೇನೆ. ಗೋವಿಂದ ಗುರುಗಳ ಪಾದಗಳಿಗೆ ನಮಸ್ಕರಿಸುತ್ತೇನೆ. ಅವರ ಮಾತುಗಳಿಂದ ಸ್ಫೂರ್ತಿ ಪಡೆದು ಬುಡಕಟ್ಟು ಸಮುದಾಯದ ಕಲ್ಯಾಣಕ್ಕಾಗಿ ನಾವೆಲ್ಲರೂ ಪಣ ತೊಡೋಣ.

ತುಂಬು ಧನ್ಯವಾದಗಳು!

ಹಕ್ಕು ನಿರಾಕರಣೆ: ಪ್ರಧಾನಿ ಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದ ಇದಾಗಿದೆ. ಅವರು ಮೂಲ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

*****



(Release ID: 1873250) Visitor Counter : 119