ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಭಾರತದ ಗೌರವಾನ್ವಿತ ರಾಷ್ಟ್ರಪತಿ ಅವರು  ಐಸಿಎಂಆರ್-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ, ದಕ್ಷಿಣ ವಲಯ ಕೇಂದ್ರಕ್ಕೆ ಬೆಂಗಳೂರಿನಲ್ಲಿ ಶಂಕುಸ್ಥಾಪನೆ ನೆರವೇರಿಸಿದರು


ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ವಲಯ ಕ್ಯಾಂಪಸ್ ಗಳ ಮೂಲಕ ವಿಸ್ತರಣೆ, ಭೌಗೋಳಿಕ ಪ್ರದೇಶಗಳ ಬೇಡಿಕೆ ಈಡೇರಿಕೆಗೆ ಶ್ಲಾಘನೀಯ - ಗೌರವಾನ್ವಿತ ರಾಷ್ಟ್ರಪತಿ

"ಮನುಕುಲದ ಇತಿಹಾಸದಲ್ಲಿ ಅತಿ ದೊಡ್ಡ ಲಸಿಕಾ ಅಭಿಯಾನ"- ಗೌರವಾನ್ವಿತ ರಾಷ್ಟ್ರಪತಿ ಶ್ಲಾಘನೆ

ಅತ್ಯಾಧುನಿಕ ಮೂಲ ಸೌಕರ್ಯದೊಂದಿಗೆ ಸುಸಜ್ಜಿತವಾಗಿರುವ ಬೆಂಗಳೂರು ಎನ್ ಐವಿ ದಿಢೀರ್ ಕಾಣಿಸಿಕೊಳ್ಳುವ ಸಾಂಕ್ರಾಮಿಕ ರೋಗದ ಸೋಂಕಿನ ಮೇಲೆ ರಾಷ್ಟ್ರೀಯ ನಿಗಾ ಹೆಚ್ಚಿಸಲು ಸಹಕಾರಿ- ಡಾ. ಭಾರತಿ ಪವಾರ್

"ಯಾವುದೇ ಸಾರ್ವಜನಿಕ ಆರೋಗ್ಯ ತುರ್ತು ಸಿದ್ಧತೆ ಕಾರ್ಯಕ್ರಮದ ನಿರ್ಣಾಯಕ ಅಂಶವೆಂದರೆ ಪ್ರಯೋಗಾಲಯಗಳನ್ನು ಸಜ್ಜುಗೊಳಿಸುವುದು"

Posted On: 27 SEP 2022 1:45PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಸಚಿವರಾದ ಡಾ. ಭಾರತಿ ಪವಾರ್ ಅವರು ಇಂದು ಬೆಂಗಳೂರಿನಲ್ಲಿ ನಡೆದ ಐಸಿಎಂಆರ್ ನ ದಕ್ಷಿಣ ವಲಯದ ರಾಷ್ಟ್ರೀಯ ವೈರಾಲಜಿ (ರೋಗಸೂಕ್ಷ್ಮಾಣುಗಳ ವೈಜ್ಞಾನಿಕ ಅಧ್ಯಯನ) ಕೇಂದ್ರದ ಶುಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿದ್ದರು.

 

https://static.pib.gov.in/WriteReadData/userfiles/image/image002FLXQ.jpg

 

https://static.pib.gov.in/WriteReadData/userfiles/image/image003DGRX.jpg

 
ಸಮಾರಂಭದಲ್ಲಿ ಮಾತನಾಡುತ್ತಾ,ಆಧುನಿಕ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ, ಮನುಕುಲವು ಎದುರಿಸುತ್ತಿರುವ ಸಮಸ್ಯೆಗಳು ಸಹ ವಿಕಸನಗೊಳ್ಳುತ್ತಿವೆ. ಈ ಹೊಸ ಯುಗದ ಸಮಸ್ಯೆಗಳನ್ನು ಪೂರೈಸಲು, ಆಧುನಿಕ ಪರಿಹಾರಗಳನ್ನು ಕಂಡುಕೊಳ್ಳಬೇಕಾಗಿದೆ. ವೈರಾಲಜಿ ಸಂಸ್ಥೆಯ ಸ್ಥಾಪನೆ ಆ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಡಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅಧೀನದಲ್ಲಿ 1952ರಲ್ಲಿ ಪುಣೆಯಲ್ಲಿ ಸ್ಥಾಪಿತವಾದ ಪ್ರಮುಖ ವೈರಾಲಜಿ ಸಂಸ್ಥೆ ರಾಷ್ಟ್ರೀಯ ವೈರಾಲಜಿ ಸಂಸ್ಥೆಯಾಗಿದೆ. ಎಲ್ಲ 27 ಐಸಿಎಂಆರ್ ಸಂಸ್ಥೆಗಳಲ್ಲಿ ಇದು ಅತ್ಯುನ್ನತ ಸ್ಥಾನದಲ್ಲಿದೆ ಮತ್ತು ಜಗತ್ತಿನಾದ್ಯಂತ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇದರ ಅಗತ್ಯತೆ ದಿನೇ ದಿನೇ ಹೆಚ್ಚುತ್ತಿದೆ ಎಂದರು.

ಇಂದು ಜಗತ್ತಿನಾದ್ಯಂತ ಸಾರ್ವಜನಿಕ ಆರೋಗ್ಯವು ಅತ್ಯಂತ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಅತ್ಯಂತ ಶಕ್ತಿಶಾಲಿ ಆರ್ಥಿಕತೆಗಳನ್ನು ಹೊಂದಿರುವ ಬಹುತೇಕ ರಾಷ್ಟ್ರಗಳು ಸಾರ್ವಜನಿಕ ಆರೋಗ್ಯದ ಮೇಲೆ ಆಗುವ ಪರಿಣಾಮಗಳನ್ನು ಗಮನದಲ್ಲಿರಿಸಿಕೊಂಡು ಹೆಚ್ಚಿನ ನೀತಿ ನಿರ್ಧಾರ ಕೈಗೊಳ್ಳುತ್ತವೆ. ಜಗತ್ತು ತ್ವರಿತ ಸಂಪರ್ಕಕ್ಕೆ ಸಾಕ್ಷಿಯಾಗುತ್ತಿರುವುದರ ಜೊತೆಗೆ ಇಡೀ ಪ್ರಪಂಚವೇ ಒಂದು ಕುಟುಂಬವಾಗಿದೆ. ಪ್ರಪಂಚದ ಯಾವುದೇ ಭಾಗದಲ್ಲಿ ಉದ್ಭವಿಸಬಹುದಾದ ಯಾವುದೇ ಅನಿಶ್ಚಿತ ಸಾರ್ವಜನಿಕ ತುರ್ತುಸ್ಥಿತಿಗಳನ್ನು ಎದುರಿಸಲು ವಿಶ್ವ ನಾಯಕರು ತಮ್ಮನ್ನು ತಾವು ಸಜ್ಜುಗೊಳಿಸಿಕೊಳ್ಳುತ್ತಿದ್ದಾರೆ ಎಂದರು.

ಯಾವುದೇ ತುರ್ತುಸ್ಥಿತಿಯ ವಿರುದ್ಧ ನಮ್ಮನ್ನು ನಾವು ಸಜ್ಜುಗೊಳಿಸಿಕೊಳ್ಳುವ ಪ್ರಯತ್ನದಲ್ಲಿ ಮತ್ತು ನಮ್ಮ ದೇಶಕ್ಕೆ ಅಪಾಯಕಾರಿ ರೋಗಕಾರಕಗಳ ಅಪಾಯದ ಮುನ್ಸೂಚನೆ ಅರಿಯಲು ನಾವು ಬಿಎಸ್ಎಲ್-3 ಮತ್ತು ಬಿಎಸ್ಎಲ್-4 ಪ್ರಯೋಗಾಲಯಗಳನ್ನು ಅಭಿವೃದ್ಧಿಪಡಿಸಿದ್ದೇವೆ, ಇವು ದೇಶದ ದೂರದ ಪ್ರದೇಶಗಳಲ್ಲಿ ಡಿಢೀರ್ ಕಾಣಿಸಿಕೊಳ್ಳುವ ರೋಗಗಳ ಪತ್ತೆಗೆ ಬಳಸಲಾಗುವ ಅತ್ಯಾಧುನಿಕ ಸಂಚಾರಿ ಪ್ರಯೋಗಾಲಯಗಳಾಗಿವೆ. ಗೌರವಾನ್ವಿತ ಪ್ರಧಾನಮಂತ್ರಿ ಅವರ ನಾಯಕತ್ವದಲ್ಲಿ ಭಾರತವು ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಕೆ ಮಾಡುತ್ತಿದೆ, ಇದರಿಂದಾಗಿ ಯಾವುದೇ ವೇಳೆ ಸೋಂಕು ಕಾಣಿಸಿಕೊಂಡರೂ ಕೂಡಲೇ ಆರಂಭಿಕ ಹಂತದಲ್ಲೇ ಅದನ್ನು ಪತ್ತೆ ಹಚ್ಚಬಹುದು ಮತ್ತು ಸೋಂಕು ಹರಡದಂತೆ ಅಗತ್ಯ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು. 

ಐಸಿಎಂಆರ್-ಎನ್ಐವಿ ಸಾರ್ವಜನಿಕ ಆರೋಗ್ಯದ ಪ್ರಾಮುಖ್ಯತೆಯ ಪ್ರಮುಖ ಸೋಂಕುಗಳಿಗೆ ತ್ವರಿತ ರೀತಿಯಲ್ಲಿ ಸ್ಪಂದಿಸಿ ಮುಂಚೂಣಿಯಲ್ಲಿದೆ. ಕಳೆದ 2009ರ ಎಚ್1ಎನ್1 ಸಾಂಕ್ರಾಮಿಕದ ವೇಳೆ, ಐಸಿಎಂಆರ್-ಎನ್ಐವಿ ಪ್ರಯೋಗಾಲಯ ಪರೀಕ್ಷೆ ಮತ್ತು ಜೀನೋಮ್ ವಿಶ್ಲೇಷಣೆಯಲ್ಲಿ ದೇಶವನ್ನು ಮುನ್ನಡೆಸಿತು. ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಜಿ ಅವರ ಪ್ರಯತ್ನದ ಫಲವಾಗಿ ಈ ಹೊಸ ಎನ್ಐವಿ ನಮ್ಮ ಆರೋಗ್ಯ ರಕ್ಷಣಾ ವ್ಯವಸ್ಥೆ ಮತ್ತಷ್ಟು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.ಅವರು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ ಮತ್ತು ನಮ್ಮ ವಿಜ್ಞಾನಿಗಳು ಮತ್ತು ವೈದ್ಯರನ್ನು ಭಾರತಕ್ಕಾಗಿ ಮತ್ತು ಭಾರತದಿಂದ ಆವಿಷ್ಕಾರ ಮಾಡಲು ಸದಾ ಪ್ರೋತ್ಸಾಹಿಸುತ್ತಿದ್ದಾರೆ. ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿ, ಅವರ ಉತ್ತೇಜನದಿಂದಾಗಿ ದೇಶವು ಕೊರೊನಾ ಸೋಂಕಿಗೆ ಸ್ಥಳೀಯವಾಗಿ ಲಸಿಕೆಯನ್ನು ಅಭಿವೃದ್ಧಿಪಡಿಸಿತು. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಪುಣೆಯಲ್ಲಿರುವ ಐಸಿಎಂಆರ್ -ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ನಮ್ಮ ದೇಶಕ್ಕೆ ಗಣನೀಯ ಸೇವೆ ಸಲ್ಲಿಸಿದೆ ಎಂದರು.

ಸಂಸ್ಥೆ ಸದಾ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವತ್ತ ಗಮನಹರಿಸುತ್ತದೆ,ಸಾರ್ವಜನಿಕ ಆರೋಗ್ಯ ಸಮುದಾಯದಲ್ಲಿ ಜೈವಿಕ ಅಪಾಯ ತಗ್ಗಿಸುವ ಕುರಿತು ಜಾಗೃತಿಯನ್ನು ಮೂಡಿಸುತ್ತದೆ ಮತ್ತು ಸಾಂಕ್ರಾಮಿಕ ರೋಗಕಾರಕಗಳ ವಿರುದ್ಧ ತ್ವರಿತವಾಗಿ ರೋಗಪತ್ತೆ ಸಾಮರ್ಥ್ಯದ ಪ್ರಯೋಗಾಲಯ ಜಾಲ ಸೃಷ್ಟಿಸಲು ಬೆಂಬಲ ನೀಡುತ್ತದೆ. ಎನ್ಐವಿ ದೇಶದಲ್ಲಿ ಮೊದಲ ಕೋವಿಡ್  ಪ್ರಕರಣಗಳನ್ನು ಪತ್ತೆ ಮಾಡಿತ್ತು, ದೇಶಾದ್ಯಂತ ಇರುವ ಸರ್ಕಾರಿ ಪ್ರಯೋಗಾಲಯಗಳಿಗೆ ಲಕ್ಷಗಟ್ಟಲೆ ಆರ್ ಟಿ-ಪಿಸಿಆರ್ ಪರೀಕ್ಷಾಕಿಟ್ ಗಳನ್ನು ಒದಗಿಸಿದೆ ಎಂದರು.

ಅಲ್ಲದೆ, ಹೆಚ್ಚುವರಿಯಾಗಿ, ಐಸಿಎಂಆರ್-ಎನ್ಐವಿ ಸಂಭಾವ್ಯ ಸೋಂಕು ನಿಗ್ರಹ ಔಷಧಿಗಳ ವಿಶ್ಲೇಷಣೆ ಮಾಡಿತು, ಹಲವು ಕಿಟ್ ಗಳ ಮೌಲ್ಯಮಾಪನ ಕೈಗೊಂಡಿತು, ದೊಡ್ಡ ಪ್ರಮಾಣದ ತರಬೇತಿಯೊಂದಿಗೆ ಹೊಸ ರೋಗಪತ್ತೆ ವಿಧಾನವನ್ನು ಅಭಿವೃದ್ಧಿಪಡಿಸಿತು, ಇದರ ಪರಿಣಾಮವಾಗಿ ಭಾರತದ ಮೊದಲ ಸ್ಥಳೀಯ ಲಸಿಕೆ ಕೋವ್ಯಾಕ್ಸಿನ್ ಅಭಿವೃದ್ಧಿಗೆ ಕೊಡುಗೆ ನೀಡಿತು. ಮುನ್ನೆಚ್ಚರಿಕೆ ಈ ಪ್ರಯತ್ನಗಳು ದೇಶದಲ್ಲಿ ಸಾರ್ಸ್ ಸಿಇವಿ-2  ಆರಂಭದಲ್ಲಿ ಹೆಚ್ಚು ಹರಡುವುದನ್ನು ತಡೆಯಲು ಸಜ್ಜುಗೊಳಿಸಿತು ಎಂದು ತಿಳಿಸಿದರು.

ಕೋವಿಡ್ 19 ವಿರುದ್ಧ ಹೋರಾಡಲು ಸೋಂಕು ನಿವಾರಣಾ ತಜ್ಞರು (ವೈರಾಲಜಿಸ್ಟ್‌ಗಳು) ಮತ್ತು ಇತರ ವೈದ್ಯರು ನೀಡಿದ ಕೊಡುಗೆಗಳನ್ನು ಗೌರವಾನ್ವಿತ ಪ್ರಧಾನಮಂತ್ರಿ ಹಲವು ಸಲ ಉಲ್ಲೇಖಿಸಿದ್ದಾರೆ. ಇತ್ತೀದಿನ ದಿನಗಳಲ್ಲಿ ಮಾರಣಾಂತಿಕ ಸೋಂಕು ಹರಡುವಿಕೆ ವಿರುದ್ಧ ಈ ಹೆಸರಿಸಲಾಗದ ವೀರರು ನೀಡಿರುವ ಪರಿಹಾರದ ಹಿಂದಿನ ಶ್ರಮವನ್ನು ಅವರು ಮುಂದಿಟ್ಟಿದ್ದಾರೆ. ಸೋಂಕಿನ ವಿರುದ್ಧದ ನಮ್ಮ ಹೋರಾಟದಲ್ಲಿ ತಮ್ಮ ಹತ್ತಿರದವರನ್ನು ಕಳೆದುಕೊಂಡವರಿಗೆ ನನ್ನ ಹೃದಯ ಮಿಡಿಯುತ್ತದೆ, ಆದರೆ ಸೂಕ್ತ ಸಮಯದಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಆಗಲಿದ್ದ ನಷ್ಟವು ಇನ್ನೂ ಹೆಚ್ಚು ವಿಕೋಪವಾಗಿರುತ್ತಿತ್ತು ಎಂಬುದನ್ನು ಇಲ್ಲಿ ಗಮನಿಸಲೇಬೇಕಾಗಿದೆ ಎಂದರು.

ಶ್ರೀ ನರೇಂದ್ರ ಮೋದಿ ಜಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತ ಸರ್ಕಾರವು ತನ್ನ ಅಧಿಕಾರಾವಧಿಯಲ್ಲಿ ನಾಗರಿಕರಿಗೆ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಸದಾ ಬದ್ಧವಾಗಿದೆ. ಅವರ ಸಮರ್ಥ ಮಾರ್ಗದರ್ಶನ ಮತ್ತು ಬೆಂಬಲದಿಂದಾಗಿ ನಾವು ನಮ್ಮದೇ ಆದ ಸ್ಥಳೀಯ ಕೋವಿಡ್ 19 ಲಸಿಕೆ ಅಭಿವೃದ್ಧಿಪಡಿಸಿದ್ದೇವೆಂಬುದು ನಮಗೆ ಹೆಮ್ಮೆಸಂಗತಿಯಾಗಿದೆ ಮತ್ತು ಆ ಕೆಲಸವನ್ನು ಅತ್ಯಂತ ಜರೂರಾಗಿ ಮಾಡಿದ ವಿಶ್ವದ ಕೆಲವೇ ರಾಷ್ಟ್ರಗಳಲ್ಲಿ ನಾವು ಕೂಡ ಒಬ್ಬರಾಗಿದ್ದೇವೆ. ನಮ್ಮಂತಹ ದೊಡ್ಡ ದೇಶದಲ್ಲಿ ಲಸಿಕೆ ಹಾಕಲು ನಾವು ವಿದೇಶಿ ಅನುದಾನವನ್ನು ಅವಲಂಬಿಸಿಲ್ಲ ಎಂಬುದು ನಾವು ತಲೆ ಎತ್ತಿ ನಿಲ್ಲುವಂತೆ ಮಾಡಿದೆ.ಇಂದು ಇಡೀ ಜಗತ್ತು ನಮ್ಮ ಸಾಧನೆಗಾಗಿ ನಮ್ಮನ್ನು ಶ್ಲಾಘಿಸುತ್ತಿದೆ. ಕೋವಿಡ್-19  ಮತ್ತು ಇತರ ಬೆಳವಣಿಗೆಗಳ ವಿರುದ್ಧದ ಹೋರಾಟದಲ್ಲಿ ತಮ್ಮ ಪಾಲ್ಗೊಳ್ಳುವಿಕೆಯಲ್ಲಿ ವಿಜ್ಞಾನಿಗಳು, ವೈದ್ಯರು ಮತ್ತು ತಂತ್ರಜ್ಞರು ನೀಡಿದ ಕೊಡುಗೆಗಳಿಗೆ ಧನ್ಯವಾದ ಹೇಳಲು ಪದಗಳು ಸಾಲದು ಎಂದರು.

ಪುಣೆಯ ಎನ್‌ಐವಿ ಮೂಲಕ ರಾಷ್ಟ್ರದ ಸೇವೆಯಲ್ಲಿ ಮಹತ್ವದ ಕೆಲಸವನ್ನು ಮುಂದುವರಿಸಿಕೊಂಡು ನಮ್ಮ  ಗೌರವಾನ್ವಿತ ಪ್ರಧಾನ ಮಂತ್ರಿ ಅವರು ಮಹತ್ವಾಕಾಂಕ್ಷೆಯ “ಪ್ರಧಾನಮಂತ್ರಿ ಆಯುಷ್ಮಾನ್ ಭಾರತ ಆರೋಗ್ಯ ಮೂಲಸೌಕರ್ಯ ಮಿಷನ್ (ಪಿಎಂ-ಎಬಿಎಚ್ಐಎಂ)’’ ಅಡಿಯಲ್ಲಿ ಭಾರತೀಯ ಆರೋಗ್ಯ ಸಂಶೋಧನಾ ಇಲಾಖೆಗೆ, ಜೈವಿಕ-ಸುರಕ್ಷತಾ ಸಿದ್ಧತೆ ಮತ್ತು ದೇಶಾದ್ಯಂತ ಸಾಂಕ್ರಾಮಿಕ ಸಂಶೋಧನೆ ಬಲಪಡಿಸುವ ನಿಟ್ಟಿನಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್ ) ಮೂಲಕ 4 ವಲಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗಳು (ಎನ್ಐವಿಗಳು) ಸೇರಿದಂತೆ ಬಹು-ವಲಯ ರಾಷ್ಟ್ರೀಯ ಸಂಸ್ಥೆಗಳು ಮತ್ತು ವೇದಿಕೆಗಳನ್ನು ಸ್ಥಾಪಿಸಲು ಅನುದಾನ ಬಿಡುಗಡೆಗೆ ಅನುಮೋದನೆ ನೀಡಿದ್ದಾರೆ ಎಂದು ತಿಳಿಸಿದರು.

ಇಂದಿನ ಹೆಚ್ಚು ಸಂಪರ್ಕ ಹೊಂದಿದ ಜಗತ್ತಿನಲ್ಲಿ ಕೋವಿಡ್-19 ಸಾಂಕ್ರಾಮಿಕವು, ಪ್ರಪಂಚದ ಯಾವುದೇ ಮೂಲೆಯಲ್ಲಿ ಪತ್ತೆಯಾದ ರೋಗಗಳು ತಕ್ಷಣವೇ ಜಾಗತಿಕ ಪರಿಣಾಮ ಬೀರಲಿವೆ ಎಂಬ ವಾಸ್ತವವತೆಯನ್ನು ತಿಳಿಸಿಕೊಟ್ಟಿದೆ.ಸಾಂಕ್ರಾಮಿಕ ರೋಗವು ಸಾರ್ವಜನಿಕ ಆರೋಗ್ಯಕ್ಕೆ ಹೊಸ ಹೊಸ ಅಪಾಯಗಳ ಸವಾಲುಗಳನ್ನು ಒಡ್ಡುವಲ್ಲಿ ಮತ್ತು ಅವುಗಳಿಗೆ ಸ್ಪಂದಿಸುವಲ್ಲಿ ವಿಶ್ವಾದ್ಯಂತ ಆರೋಗ್ಯ ವ್ಯವಸ್ಥೆ ಕೊರತೆಯನ್ನು ಬಹಿರಂಗಪಡಿಸಿದೆ. ಈ  ಹಿನ್ನೆಲೆಯಲ್ಲಿ ಯಾವುದೇ ಸಿದ್ಧತಾ ಕಾರ್ಯಕ್ರಮದ ನಿರ್ಣಾಯಕ ಅಂಶವೆಂದರೆ ಅದು ಪ್ರಯೋಗಾಲಯಗಳನ್ನು ಸಜ್ಜುಗೊಳಿಸುವುದು ಎಂದರು.

ಬೆಂಗಳೂರಿನಲ್ಲಿ ಸ್ಥಾಪನೆ ಆಗಲಿರುವ ದಕ್ಷಿಣ ವಲಯ ಐಸಿಎಂಆರ್-ಎನ್ಐವಿ ಪ್ರಯೋಗಾಲಯವು ಅತ್ಯಾಧುನಿಕ ಮೂಲಸೌಕರ್ಯ ಮತ್ತು ನಾನಾ ಬಗೆಯ ಅಪಾಯಗಳನ್ನು ಒಡ್ಡಬಹುದಾದ ಸಾಂಕ್ರಾಮಿಕಗಳನ್ನು  ನಿರ್ವಹಿಸುವಲ್ಲಿ ಪರಿಣತಿಯನ್ನು ಹೊಂದಿರಲಿದೆ.ಇದು ದಕ್ಷಿಣದ ರಾಜ್ಯಗಳಲ್ಲಿನ ಸಾಂಕ್ರಾಮಿಕ ರೋಗಗಳ ಸ್ಥಿತಿಗತಿ ಕುರಿತಂತೆ ಪ್ರಾದೇಶಿಕ ಮಟ್ಟದಲ್ಲಿ ನಿರಂತರ ಮೇಲ್ವಿಚಾರಣೆ ಮಾಡಲು ನಿರ್ಣಾಯಕವಾಗಿದೆ ಮತ್ತು ಆ ಮೂಲಕ  ಭಾರತದ ಮತ್ತು ದಿಢೀರ್ ಕಾಣಿಸಿಕೊಳ್ಳುವ ಸಾಂಕ್ರಾಮಿಕ ರೋಗಗಳ ವೈರಾಣುಗಳ ಮೇಲೆ ರಾಷ್ಟ್ರೀಯ ನಿಗಾ ಹೆಚ್ಚಿಸಲು ಕೊಡುಗೆ ನೀಡುತ್ತದೆ. ಐಸಿಎಂಆರ್-ಎನ್ಐವಿ ಅಗತ್ಯಕ್ಕೆ ಅನುಗುಣವಾಗಿ ಈ ವಲಯ ಎನ್ಐವಿಯನ್ನು ಕೈಹಿಡಿದು ಬೆಂಬಲಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಪ್ರತ್ಯೇಕವಾಗಿ  ಹೇಳುವ ಅಗತ್ಯವಿಲ್ಲ ಎಂದರು.

ಬೆಂಗಳೂರಿನಲ್ಲಿ ಇಂದು ಎನ್‌ಐವಿ-ದಕ್ಷಿಣ ವಲಯದ ಕೇಂದ್ರಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಲು ಭಾರತದ ಗೌರವಾನ್ವಿತ ರಾಷ್ಟ್ರಪತಿ ಒಪ್ಪಿಗೆ ನೀಡಿರುವುದು ಒಂದು ಶ್ರೇಷ್ಠ ಗೌರವವಾಗಿದೆ. ಎನ್‌ಐವಿ ತನ್ನ ಕರ್ತವ್ಯಗಳನ್ನು ಮತ್ತು ನಿರೀಕ್ಷೆಗಳನ್ನು ಪೂರೈಸಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಮತ್ತು ಬಯಸುತ್ತೇನೆ. ಬೆಂಗಳೂರಿನಲ್ಲಿರುವ ದಕ್ಷಿಣ ವಲಯ ಐಸಿಎಂಆರ್-ಎನ್ ಐವಿ ಪ್ರಯೋಗಾಲಯ ಎಲ್ಲ ರೀತಿಯಲ್ಲೂ ಯಶಸ್ಸು ಸಾಧಿಸಲಿ ಎಂದು ಶುಭ ಕೋರಲು ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ ಎಂದು ತಿಳಿಸಿದರು.

*****


(Release ID: 1862615)
Read this release in: English , Urdu , Hindi , Telugu