ಪ್ರಧಾನ ಮಂತ್ರಿಯವರ ಕಛೇರಿ

ಹೊಸದಿಲ್ಲಿಯ  ವಿಜ್ಞಾನ ಭವನದಲ್ಲಿ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯನ್ನು ಉದ್ಘಾಟಿಸಿದ ಪ್ರಧಾನ ಮಂತ್ರಿಯವರ ಭಾಷಣದ ಕನ್ನಡ ಅವತರಣಿಕೆ

Posted On: 17 SEP 2022 10:18PM by PIB Bengaluru

ಕೇಂದ್ರ ಸಚಿವ ಸಂಪುಟದಲ್ಲಿರುವ ನನ್ನ ಎಲ್ಲ ಸಹೋದ್ಯೋಗಿಗಳೇ, ದೇಶದ ಲಾಜಿಸ್ಟಿಕ್ಸ್ ಮತ್ತು ಕೈಗಾರಿಕೆಗಳ ಪ್ರತಿನಿಧಿಗಳೇ, ಇತರ ಎಲ್ಲ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ!

ದೇಶವು ಇಂದು ಸ್ವಾತಂತ್ರ್ಯದ 'ಅಮೃತ ಕಾಲ'ದಲ್ಲಿ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯನ್ನು ಇಟ್ಟಿದೆ. ಭಾರತದಲ್ಲಿ ವೇಗವಾಗಿ ಕೊನೆಯ ಮೈಲಿಯವರೆಗೂ ಸರಕು, ಸೇವೆಗಳು ವಿತರಣೆಯಾಗಬೇಕು, ಸಾರಿಗೆಗೆ ಸಂಬಂಧಿಸಿದ ಸವಾಲುಗಳನ್ನು ನಿವಾರಿಸಬೇಕು ಮತ್ತು ನಮ್ಮ ಉತ್ಪಾದಕರ ಹಾಗು  ಕೈಗಾರಿಕೆಗಳ ಸಮಯ ಮತ್ತು ಹಣ ಎರಡನ್ನೂ ಉಳಿಸಬೇಕು. ಅದೇ ರೀತಿ, ನಮ್ಮ ಕೃಷಿ ಉತ್ಪನ್ನಗಳ ಸಾಗಾಟ ವಿಳಂಬದಿಂದಾಗಿ ಉಂಟಾಗುವ ನಷ್ಟವನ್ನು ನಾವು ಹೇಗೆ ತಡೆಗಟ್ಟಬಹುದು? ಈ ಎಲ್ಲ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ನಿರಂತರ ಪ್ರಯತ್ನ ನಡೆದಿದೆ ಮತ್ತು ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯು ಅದರ ಒಂದು ಭಾಗವಾಗಿದೆ.  ಈ ಎಲ್ಲ ವ್ಯವಸ್ಥೆಗಳ ಸುಧಾರಣೆಗಾಗಿ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸರ್ಕಾರದ ವಿವಿಧ ಘಟಕಗಳ ನಡುವೆ ಸಮನ್ವಯತೆ ಇರುತ್ತದೆ ಎಂಬುದು ನನಗೆ ಖಾತ್ರಿಯಿದೆ. ಒಂದು ಸಮಗ್ರ ಧೋರಣೆ ಇರುತ್ತದೆ ಮತ್ತು ಅದು ನಾವು ಬಯಸುವ ತ್ವರಿತಗತಿಗೆ ವೇಗವರ್ಧನೆಯನ್ನು  ನೀಡುತ್ತದೆ. ಇಲ್ಲಿ  ಏರ್ಪಟ್ಟಿರುವ ಪ್ರದರ್ಶನದಿಂದಾಗಿ ನನಗೆ 5-7 ನಿಮಿಷಗಳಷ್ಟು ವಿಳಂಬವಾಯಿತು. ಸಮಯದ ಅಭಾವದಿಂದಾಗಿ ನನಗೆ ಪ್ರದರ್ಶನದಲ್ಲಿದ್ದ ಸಂಗತಿಗಳನ್ನು  ಸರಿಯಾಗಿ ನೋಡಲು ಸಾಧ್ಯವಾಗದಿದ್ದರೂ ನಾನು ಅವುಗಳನ್ನು ಸೂಕ್ಷ್ಮವಾಗಿ, ಸ್ಥೂಲವಾಗಿ ನೋಡಿದೆ. ನೀವು ಸ್ವಲ್ಪ ಕಾಲಾವಕಾಶ ಮಾಡಿಕೊಂಡು,  ಈ ಕ್ಯಾಂಪಸ್ ನಲ್ಲಿಯೇ ಇರುವ ವಸ್ತುಪ್ರದರ್ಶನಕ್ಕೆ 15-20 ನಿಮಿಷಗಳ ಕಾಲ ಭೇಟಿ ನೀಡಿ ಎಂದು ನಾನು ನಿಮ್ಮಲ್ಲಿ ವಿನಂತಿಸುತ್ತೇನೆ. ಈ ಕ್ಷೇತ್ರದಲ್ಲಿ ತಂತ್ರಜ್ಞಾನದ ಪಾತ್ರವೇನು? ನಾವು ಬಾಹ್ಯಾಕಾಶ ತಂತ್ರಜ್ಞಾನವನ್ನು ಹೇಗೆ ಬಳಸುತ್ತಿದ್ದೇವೆ? ನೀವು ಎಲ್ಲ ಪ್ರದರ್ಶನಗಳನ್ನು ನೋಡಿದರೆ ಅನೇಕ ಹೊಸ ವಿಷಯಗಳನ್ನು ಕಲಿಯಬಹುದು. ಇಂದು ನಾವು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿದ್ದೇವೆ. ನಿಮಗೆ ಸಂತೋಷವಾಗಿಲ್ಲವೇ? ಹೋಗದೇ ಇರುವುದಕ್ಕಿಂತ ಕೊಂಚ ತಡವಾಗಿಯಾದರೂ ಹೋಗುವುದು ಉತ್ತಮ! ಕೆಲವೊಮ್ಮೆ ಹಾಗೆ ಆಗುತ್ತದೆ. ಏಕೆಂದರೆ ಸುತ್ತಮುತ್ತ  ನಕಾರಾತ್ಮಕತೆ ತುಂಬಿಕೊಂಡು ಇರುವುದರಿಂದ ಕೆಲವೊಮ್ಮೆ ಒಳ್ಳೆಯದನ್ನು ಗಮನಿಸಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ದೇಶ ಬದಲಾಗುತ್ತಿದೆ. ನಾವು ಪಾರಿವಾಳಗಳನ್ನು ಬಿಡುಗಡೆ ಮಾಡುತ್ತಿದ್ದ ಕಾಲವೊಂದಿತ್ತು. ಇಂದು ನಾವು ಚೀತಾಗಳನ್ನು ಬಿಡುಗಡೆ ಮಾಡುತ್ತೇವೆ. ಇದು ಇದ್ದಕ್ಕಿದ್ದಂತೆ ಸಂಭವಿಸುವುದಿಲ್ಲ. ಬೆಳಗ್ಗೆ ಚೀತಾಗಳ ಬಿಡುಗಡೆ ಮತ್ತು ಸಂಜೆ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯನ್ನು ಪ್ರಾರಂಭಿಸುವುದರ ನಡುವೆ ಒಂದಷ್ಟು ಪ್ರಸ್ತುತತೆ ಇದೆ. ಚೀತಾಗಳ ವೇಗದಲ್ಲಿ ಸರಕುಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸಬೇಕೆಂದು ನಾವು ಬಯಸುತ್ತೇವೆ. ದೇಶವು ಅದೇ ವೇಗದಲ್ಲಿ ಮುನ್ನಡೆಯಲು ಬಯಸುತ್ತದೆ.

ಸ್ನೇಹಿತರೇ,

ಮೇಕ್ ಇನ್ ಇಂಡಿಯಾ ಮತ್ತು 'ಆತ್ಮನಿರ್ಭರ ಭಾರತ'ದ ಪ್ರತಿಧ್ವನಿ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಪ್ರತಿಧ್ವನಿಸುತ್ತಿದೆ. ಇಂದು ಭಾರತವು ಬೃಹತ್ ರಫ್ತು ಗುರಿಗಳನ್ನು ನಿಗದಿಪಡಿಸುತ್ತಿದೆ., ಹಿಂದಿನ ಕಾರ್ಯಕ್ಷಮತೆಯನ್ನು, ಸಾಧನೆಯನ್ನು  ಗಮನದಲ್ಲಿಟ್ಟುಕೊಂಡು ಅಂತಹ ದೊಡ್ಡ ಗುರಿಗಳನ್ನು ಆರಂಭದಲ್ಲಿ ನಿಗದಿಪಡಿಸುವುದು ಕಷ್ಟ. ಆದರೆ ಒಮ್ಮೆ ಅದನ್ನು ನಿರ್ಧರಿಸಿದ ನಂತರ ದೇಶವು ಅದನ್ನು ಮಾಡುತ್ತದೆ. ಇಂದು, ದೇಶವು ಆ ಗುರಿಗಳನ್ನು ಈಡೇರಿಸುತ್ತಿದೆ. ಉತ್ಪಾದನಾ ವಲಯದಲ್ಲಿ ದೇಶದ ಸಾಮರ್ಥ್ಯ ಎಷ್ಟಿದೆಯೆಂದರೆ, ಭಾರತವು ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಇಂದು, ಜಗತ್ತು ಕೂಡಾ ಈ ಸಂಗತಿಯನ್ನು ಒಪ್ಪಿಕೊಳ್ಳುತ್ತಿದೆ. ಪಿಎಲ್ಐ ಯೋಜನೆಯನ್ನು ಅಧ್ಯಯನ ಮಾಡುವವರು ಜಗತ್ತು ಈ ಸಂಗತಿಯನ್ನು ಒಪ್ಪಿಕೊಂಡಿದೆ ಎಂಬುದನ್ನು ಅರಿತುಕೊಳ್ಳುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯು ಪ್ರತಿಯೊಂದು ವಲಯಕ್ಕೂ ಸಾಕಷ್ಟು ಹೊಸ ಶಕ್ತಿಯನ್ನು ತಂದಿದೆ. ಈ ಮಹತ್ವದ ಉಪಕ್ರಮಕ್ಕಾಗಿ ನಾನು ದೇಶದ ಎಲ್ಲಾ ಭಾಗೀದಾರರು, ವ್ಯಾಪಾರಿಗಳು,  ಉದ್ಯಮಿಗಳು, ರಫ್ತುದಾರರು ಮತ್ತು ರೈತರಿಗೆ ಅಭಿನಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ., ಇದು ಅವರಿಗೆ ಗೇಮ್-ಚೇಂಜರ್  (ಆಟ ಬದಲಿಸುವ ಅವಕಾಶ) ಆಗಲಿದೆ.

ಸ್ನೇಹಿತರೇ,

ಈ ಕಾರ್ಯಕ್ರಮದಲ್ಲಿ ಅನೇಕ ನೀತಿ ನಿರೂಪಕರು ಮತ್ತು ಉದ್ಯಮದ  ದಿಗ್ಗಜರು ಉಪಸ್ಥಿತರಿದ್ದಾರೆ. ಅವರು ತಮ್ಮ ಜೀವನದಲ್ಲಿ ಕಷ್ಟಗಳನ್ನು ಎದುರಿಸಿದ್ದಾರೆ ಮತ್ತು ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಕೆಲವೊಮ್ಮೆ, ಅವರು ಕಿರುಹಾದಿಗಳನ್ನು ಆಶ್ರಯಿಸಿರಬಹುದು. ಜನರು ನಾಳೆ ಏನು ಬರೆಯುತ್ತಾರೆಂದು ನಾನು ಇಂದು ನಿಮಗೆ ಹೇಳುತ್ತಿದ್ದೇನೆ. ನೀತಿಯೇ ಅಂತಿಮ ಫಲಿತಾಂಶವಲ್ಲ. ವಾಸ್ತವವಾಗಿ, ಇದು ಪ್ರಾರಂಭ. ನೀತಿ ಮತ್ತು ಕಾರ್ಯನಿರ್ವಹಣೆಯು ಜೊತೆಗೂಡಿದಾಗ ಪ್ರಗತಿಯಾಗುತ್ತದೆ. ಅಂದರೆ ಕಾರ್ಯಕ್ಷಮತೆಯ ನಿಯತಾಂಕಗಳು,ಮಾನದಂಡಗಳು, ಕಾರ್ಯನಿರ್ವಹಣೆಗೆ ಮಾರ್ಗಸೂಚಿ ಮತ್ತು ಕಾರ್ಯನಿರ್ವಹಣೆಗೆ ಕಾಲಮಿತಿಯನ್ನು ಒಂದು ನೀತಿಯೊಂದಿಗೆ ಒಟ್ಟುಗೂಡಿಸಿದರೆ, ಆಗ ನೀತಿ ಮತ್ತು ಕಾರ್ಯಕ್ಷಮತೆಯು ಜೊತೆಗೂಡಿ ಪ್ರಗತಿಯಾಗುತ್ತದೆ.  ಆದ್ದರಿಂದ ಒಮ್ಮೆ ನೀತಿಯನ್ನು ಅಂತಿಮಗೊಳಿಸಿದ ನಂತರ ಸರ್ಕಾರ ಮತ್ತು ಈ ಕ್ಷೇತ್ರದಲ್ಲಿ ತೊಡಗಿರುವ ಎಲ್ಲ ಧೀಮಂತರ ಕಾರ್ಯಕ್ಷಮತೆಯ ಜವಾಬ್ದಾರಿಯು ಅನೇಕ ಪಟ್ಟು ಹೆಚ್ಚಾಗುತ್ತದೆ.  ಒಂದು ನೀತಿಗೆ ಸಂಬಂಧಿಸಿದಂತೆ ವ್ಯತಿರಿಕ್ತ ದೃಷ್ಟಿಕೋನಗಳು ಇರಬಹುದು. ಕೆಲವರಿಗೆ ಒಂದು ನೀತಿಯು ಉತ್ತಮವೆನಿಸಬಹುದು, ಇನ್ನು ಕೆಲವರಿಗೆ  ಹಾಗೆ ಕಾಣದಿರಬಹುದು. ಆದರೆ ನೀತಿಯು ಒಂದು ಪ್ರೇರಕ ಶಕ್ತಿ, ಮಾರ್ಗದರ್ಶಕ ಶಕ್ತಿಯಿದ್ದಂತೆ. ಆದ್ದರಿಂದ, ಈ ನೀತಿಯನ್ನು ಕೇವಲ ಸರ್ಕಾರಿ ದಾಖಲೆಯಾಗಿ ನೋಡಬಾರದು. ಚೀತಾದ ವೇಗದಂತೆ ಪೂರ್ವದಿಂದ ಪಶ್ಚಿಮಕ್ಕೆ ಸರಕುಗಳನ್ನು ಸಾಗಿಸಬೇಕಾದ ವೇಗವನ್ನು ನಾವು ಹಿಡಿಯಬೇಕಾಗಿದೆ. ಇಂದಿನ ಭಾರತವು ತನ್ನ ನೀತಿಗಳನ್ನು ರೂಪಿಸುವ ಮತ್ತು ಅನುಷ್ಠಾನಗೊಳಿಸುವ ಮೊದಲು ಒಂದು ನೆಲೆಯನ್ನು ಸಿದ್ಧಪಡಿಸುತ್ತದೆ. ಆಗ ಮಾತ್ರ ಆ ನೀತಿಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತದೆ ಮತ್ತು ಅಲ್ಲಿ ಪ್ರಗತಿಯ ಸಾಧ್ಯತೆಗಳು ಇರುತ್ತವೆ. ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯನ್ನು ಸಹ ಇದ್ದಕ್ಕಿದ್ದಂತೆ ಪ್ರಾರಂಭಿಸಿದ್ದಲ್ಲ. ಇದು ಎಂಟು ವರ್ಷಗಳ ಕಠಿಣ ಪರಿಶ್ರಮದ ಫಲಶ್ರುತಿ. ಹಲವಾರು ನೀತಿಗಳನ್ನು ಬದಲಾಯಿಸಲಾಯಿತು ಮತ್ತು ಪ್ರಮುಖ ನಿರ್ಧಾರಗಳನ್ನು ಸೇರಿಸಲಾಯಿತು. ನಾನು ನನ್ನ ಪರವಾಗಿ ಮಾತನಾಡಿದರೆ, ಅದರ ಹಿಂದೆ 2001 ರಿಂದ 2022 ರವರೆಗೆ ನನ್ನ 22 ವರ್ಷಗಳ ಆಡಳಿತ ಅನುಭವ ಇದೆ ಎಂದು ನಾನು ಹೇಳಬಲ್ಲೆ. ಲಾಜಿಸ್ಟಿಕ್ಸ್ ಸಂಪರ್ಕವನ್ನು ಸುಧಾರಿಸಲು ಮತ್ತು ವ್ಯವಸ್ಥಿತ ಮೂಲಸೌಕರ್ಯ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ನಾವು ಸಾಗರಮಾಲಾ ಮತ್ತು ಭಾರತ್ ಮಾಲಾದಂತಹ ಯೋಜನೆಗಳನ್ನು ಪ್ರಾರಂಭಿಸಿದ್ದೇವೆ. ಮೀಸಲಾದ ಸರಕು ಕಾರಿಡಾರ್ ಗಳ ಕೆಲಸವನ್ನು ತ್ವರಿತಗೊಳಿಸಲು ನಾವು ಪ್ರಯತ್ನಿಸಿದೆವು. ಇಂದು ಭಾರತೀಯ ಬಂದರುಗಳ ಒಟ್ಟು ಸಾಮರ್ಥ್ಯವು ಗಮನಾರ್ಹ ಪ್ರಮಾಣದಲ್ಲಿ  ಹೆಚ್ಚಾಗಿದೆ. ಕಂಟೇನರ್ ಹಡಗುಗಳ ಸರಾಸರಿ ನಿರ್ವಹಣಾ  ಸಮಯವು 44 ಗಂಟೆಗಳಿಂದ 26 ಗಂಟೆಗಳಿಗೆ ಇಳಿದಿದೆ. ಪರಿಸರ ಸ್ನೇಹಿ ಮತ್ತು ಕಡಿಮೆ ವೆಚ್ಚದ ಸಾರಿಗೆಯನ್ನು ಕೈಗೊಳ್ಳಲು ಅನುಕೂಲವಾಗುವಂತೆ ದೇಶದಲ್ಲಿ ಅನೇಕ ಹೊಸ ಜಲಮಾರ್ಗಗಳನ್ನು ನಿರ್ಮಿಸಲಾಗುತ್ತಿದೆ. ರಫ್ತು ವ್ಯವಹಾರಕ್ಕೆ  ನೆರವಾಗಲು ದೇಶದಲ್ಲಿ ಸುಮಾರು 40 ಏರ್ ಕಾರ್ಗೋ ಟರ್ಮಿನಲ್ ಗಳನ್ನು ಸಹ ನಿರ್ಮಿಸಲಾಗಿದೆ. 30 ವಿಮಾನ ನಿಲ್ದಾಣಗಳಲ್ಲಿ ಕೋಲ್ಡ್ ಸ್ಟೋರೇಜ್ ಸೌಲಭ್ಯಗಳನ್ನು ಒದಗಿಸಲಾಗಿದೆ. ದೇಶದಾದ್ಯಂತ ಮೂವತ್ತೈದು ಬಹು-ಮಾದರಿ ಲಾಜಿಸ್ಟಿಕ್ಸ್ ಕೇಂದ್ರಗಳನ್ನು ಸಹ ಸ್ಥಾಪಿಸಲಾಗುತ್ತಿದೆ. ಕೊರೋನಾ ಬಿಕ್ಕಟ್ಟಿನ ಸಮಯದಲ್ಲಿ ದೇಶವು ಕಿಸಾನ್ ರೈಲು ಮತ್ತು ಕೃಷಿ ಉಡಾನ್ ಅನ್ನು ಬಳಸಲು ಪ್ರಾರಂಭಿಸಿದ್ದನ್ನು ನೀವೆಲ್ಲರೂ ನೋಡಿದ್ದೀರಿ. ಅವುಗಳಿಂದ ಕೃಷಿ ಉತ್ಪನ್ನಗಳನ್ನು ದೇಶದ ದೂರದ ಪ್ರದೇಶಗಳಿಂದ ಮುಖ್ಯ ಮಾರುಕಟ್ಟೆಗಳಿಗೆ ಸಾಗಿಸಲು ಸಾಕಷ್ಟು ಸಹಾಯವಾಯಿತು. ಕೃಷಿ ಉಡಾನ್ ರೈತರ ಉತ್ಪನ್ನಗಳನ್ನು ವಿದೇಶಗಳಿಗೆ ಸಾಗಿಸಿತು. ಇಂದು, ಕೃಷಿ ಉಡಾನ್ ಸೌಲಭ್ಯಗಳು ದೇಶದ ಸುಮಾರು 60 ವಿಮಾನ ನಿಲ್ದಾಣಗಳಲ್ಲಿ ಲಭ್ಯವಿವೆ. ನನ್ನ ಭಾಷಣವನ್ನು ಕೇಳಿದ ನಂತರ ನಮ್ಮ ಕೆಲವು ಪತ್ರಕರ್ತ ಸ್ನೇಹಿತರು ನನಗೆ ಕರೆ ಮಾಡುತ್ತಾರೆ ಎಂದು ನನಗೆ ಖಾತ್ರಿಯಿದೆ, ಅವರಿಗೆ ಈ ಎಲ್ಲ ವಿಷಯಗಳ ಬಗ್ಗೆ ತಿಳಿದಿಲ್ಲ. ನಿಮ್ಮಲ್ಲಿ ಕೂಡಾ ಅನೇಕರು ಇರಬಹುದು, ಅವರು ಇಂತಹ ತುಂಬಾ ಸಾಧನೆಗಳು ನಡೆದಿವೆ ಎಂದು ತಿಳಿದರೆ ಆಶ್ಚರ್ಯಚಕಿತರಾಗುತ್ತಾರೆ. ಅದು ಹಾಗೆ ಇರಬಹುದು, ಆದರೆ ನಾವು ಅದಕ್ಕೆ ಗಮನ ಕೊಡುವುದಿಲ್ಲ. ಮೂಲಸೌಕರ್ಯ ಯೋಜನೆಗಳಿಗೆ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುವುದರ ಜೊತೆಗೆ ತಂತ್ರಜ್ಞಾನದ ಸಹಾಯದಿಂದ ಲಾಜಿಸ್ಟಿಕ್ಸ್ ವಲಯವನ್ನು ಬಲಪಡಿಸಲು ಸರ್ಕಾರ ಪ್ರಯತ್ನಿಸಿದೆ. ಇ-ಸಂಚಿತ್ ಮೂಲಕ ಕಾಗದರಹಿತ ಎಕ್ಸಿಮ್ ವ್ಯಾಪಾರ ಪ್ರಕ್ರಿಯೆ, ಕಸ್ಟಮ್ಸ್ ನಲ್ಲಿ  ಮುಖರಹಿತ ಮೌಲ್ಯಮಾಪನ, ಅಥವಾ ಇ-ವೇ ಬಿಲ್ ಗಳು ಮತ್ತು ಫಾಸ್ಟ್ಟ್ಯಾಗ್ ಒದಗಿಸುವಿಕೆ, ಈ ಎಲ್ಲ ಸೌಲಭ್ಯಗಳು ಲಾಜಿಸ್ಟಿಕ್ಸ್ ವಲಯದ ದಕ್ಷತೆಯನ್ನು ಬಹಳವಾಗಿ ಹೆಚ್ಚಿಸಿವೆ.

ಸ್ನೇಹಿತರೇ,

ಕಳೆದ ಕೆಲವು ವರ್ಷಗಳಲ್ಲಿ ನಮ್ಮ ಸರ್ಕಾರವು ಲಾಜಿಸ್ಟಿಕ್ಸ್ ವಲಯದ ಮತ್ತೊಂದು ಪ್ರಮುಖ ಸವಾಲನ್ನು ತೆಗೆದುಹಾಕಿದೆ. ಈ ಹಿಂದೆ, ವಿವಿಧ ರಾಜ್ಯಗಳಲ್ಲಿ ಅನೇಕ ತೆರಿಗೆಗಳಿಂದಾಗಿ ಲಾಜಿಸ್ಟಿಕ್ಸ್ ನ ವೇಗಕ್ಕೆ ತಡೆಗಳು ಇದ್ದವು. ಆದರೆ ಜಿಎಸ್ಟಿ ಈ ಸಮಸ್ಯೆಯನ್ನು ಪರಿಹರಿಸಿದೆ. ಇದರ ಪರಿಣಾಮವಾಗಿ, ಅನಗತ್ಯ ಕಾಗದಪತ್ರಗಳನ್ನು ಕಡಿಮೆ ಮಾಡಲಾಗಿದೆ, ಇದು ಲಾಜಿಸ್ಟಿಕ್ಸ್ ಪ್ರಕ್ರಿಯೆಯನ್ನು ಸರಳೀಕರಿಸಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಡ್ರೋನ್ ನೀತಿಯನ್ನು ಪಿಎಲ್ಐ ಯೋಜನೆಯೊಂದಿಗೆ ಜೋಡಿಸುವ ಮೂಲಕ ಸರ್ಕಾರವು ಅದನ್ನು ಬದಲಾಯಿಸಿದ ರೀತಿಯಿಂದಾಗಿ, ಇಂದು ವಿವಿಧ ಸರಕುಗಳನ್ನು ತಲುಪಿಸಲು ಡ್ರೋನ್ ಗಳನ್ನು ಕೂಡಾ ಬಳಸಲಾಗುತ್ತಿದೆ. ನೀವು ನೋಡುತ್ತಿರಿ- ಯುವ ಪೀಳಿಗೆಯು ಖಂಡಿತವಾಗಿಯೂ ಈ ಕ್ಷೇತ್ರಕ್ಕೆ ಬರುತ್ತದೆ.  ಡ್ರೋನ್ ಸಾರಿಗೆಯು ಒಂದು ಪ್ರಮುಖ ವಲಯವಾಗಲಿದೆ ಮತ್ತು ಹಿಮಾಲಯದ ಶ್ರೇಣಿಗಳ ದೂರದ ಮತ್ತು ಸಣ್ಣ ಹಳ್ಳಿಗಳಲ್ಲಿನ ಕೃಷಿ ಉತ್ಪಾದನೆಯನ್ನು ಡ್ರೋನ್ ಗಳ ಮೂಲಕ ಹೇಗೆ ಸಾಗಿಸಬಹುದು ಎಂಬುದನ್ನು ನೋಡಲು ನಾನು ಬಯಸುತ್ತೇನೆ. ತಾಜಾ ಮೀನುಗಳನ್ನು ದೊಡ್ಡ ನಗರಗಳಲ್ಲಿ ದಟ್ಟಣೆಯ ಪ್ರದೇಶಗಳಿಗೆ ಹೇಗೆ ಸಾಗಿಸಬಹುದು? ಇವೆಲ್ಲವೂ ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿವೆ. ಈ ವಿಚಾರದಿಂದ ಯಾರಿಗಾದರೂ ಪ್ರಯೋಜನವದರೆ ನನಗೆ ರಾಯಧನವೇನೂ ಕೊಡಬೇಕಾದ  ಅಗತ್ಯವಿಲ್ಲ.

ಸ್ನೇಹಿತರೇ,

ನಾನು ಈ ಎಲ್ಲ+ ವಿಷಯಗಳನ್ನು ಪುನರುಚ್ಚರಿಸುತ್ತೇನೆ ಏಕೆಂದರೆ ಡ್ರೋನ್ ಗಳು ಈ ಹಿಂದೆ ಕಠಿಣ ಭೂಪ್ರದೇಶ ಮತ್ತು ಪರ್ವತ ಪ್ರದೇಶಗಳಿಗೆ ಔಷಧಗಳು ಮತ್ತು ಲಸಿಕೆಗಳನ್ನು ಸಾಗಿಸಲು ನಮಗೆ ಸಾಕಷ್ಟು ಸಹಾಯ ಮಾಡಿವೆ. ನಾವು ಅದನ್ನು ಬಳಸಿದ್ದೇವೆ. ನಾನು ಮೊದಲೇ ಹೇಳಿದಂತೆ, ಸಾರಿಗೆ ವಲಯದಲ್ಲಿ ಡ್ರೋನ್ ಗಳ ಗರಿಷ್ಠ ಬಳಕೆಯಿಂದಾಗಿ ಲಾಜಿಸ್ಟಿಕ್ಸ್ ಕ್ಷೇತ್ರವು ಸಾಕಷ್ಟು ಲಾಭ ಪಡೆಯಲಿದೆ. ಆದ್ದರಿಂದ, ನಾವು ನಿಮ್ಮ ಮುಂದೆ ಬಹಳ ಪ್ರಗತಿಪರ ನೀತಿಯನ್ನು ಮಂಡಿಸಿದ್ದೇವೆ.

ಸ್ನೇಹಿತರೇ,

ದೇಶದಲ್ಲಿ ಬಲವಾದ ಲಾಜಿಸ್ಟಿಕ್ಸ್ ನೆಲೆಯನ್ನು ಸೃಷ್ಟಿಸಲು ಸರಣಿ ಸುಧಾರಣೆಗಳ ನಂತರವೇ ನಾವು ಈ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯನ್ನು ತಂದಿದ್ದೇವೆ. ಈ ನೀತಿಯು ಈಗ ಟೇಕ್-ಆಫ್ ಹಂತದಲ್ಲಿದೆ. ಅನೇಕ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಅನೇಕ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈಗ ನಾವೆಲ್ಲರೂ ಟೇಕ್-ಆಫ್ ಗಾಗಿ ಜೊತೆಯಾಗಿ ಬರಬೇಕಾಗಿದೆ. ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿನ ಪ್ರಗತಿಯ ಅವಕಾಶವನ್ನು ನಾನು ಊಹಿಸಬಲ್ಲೆ. ಈ ಬದಲಾವಣೆಯು ಅಭೂತಪೂರ್ವ ಫಲಿತಾಂಶಗಳನ್ನು ತರಲಿದೆ. ಮತ್ತು ಒಂದು ವರ್ಷದ ನಂತರ ನೀವು ಅದನ್ನು ಮೌಲ್ಯಮಾಪನ ಮಾಡಿದರೆ, ನೀವು ಊಹಿಸಿರದ ಯಶಸ್ಸನ್ನು ನೀವೇ ಒಪ್ಪಿಕೊಳ್ಳುತ್ತೀರಿ. ನಾವೆಲ್ಲರೂ 13-14 ಪ್ರತಿಶತದಷ್ಟು ಇರುವ ಲಾಜಿಸ್ಟಿಕ್ಸ್ ವೆಚ್ಚವನ್ನು ಸಾಧ್ಯವಾದಷ್ಟು ಬೇಗ ಸಿಂಗಲ್ ಡಿಜಿಟ್ (ಒಂದಂಕಿ) ಗೆ ತರುವ ಗುರಿಯನ್ನು ಹೊಂದಿರಬೇಕು. ನಾವು ಜಾಗತಿಕವಾಗಿ ಸ್ಪರ್ಧಾತ್ಮಕರಾಗಬೇಕಾದರೆ ಅದು ಒಂದು ರೀತಿಯಲ್ಲಿ ಕಡಿಮೆ ಎತ್ತರದಲ್ಲಿ ತೂಗಾಡುವ ಹಣ್ಣು ಆಗಿರಬೇಕಾಗುತ್ತದೆ. ಇತರ ವಸ್ತುಗಳ ವೆಚ್ಚವನ್ನು ಕಡಿಮೆ ಮಾಡಲು ನಮಗೆ ಕಷ್ಟವಾಗಬಹುದು, ಆದರೆ ಇದು ಕಡಿಮೆ ಎತ್ತರದಲ್ಲಿ ತೂಗಾಡುವ ಹಣ್ಣು. ನಮ್ಮ ಪ್ರಯತ್ನಗಳು, ದಕ್ಷತೆ ಮತ್ತು ಕೆಲವು ನಿಯಮಗಳನ್ನು ಅನುಸರಿಸುವ ಮೂಲಕ ನಾವು ಲಾಜಿಸ್ಟಿಕ್ಸ್ ವೆಚ್ಚವನ್ನು ಚಾಲ್ತಿಯಲ್ಲಿರುವ 13-14 ಪ್ರತಿಶತದಿಂದ ಏಕ ಅಂಕಿಗೆ ತರಬಹುದು.

ಸ್ನೇಹಿತರೇ,

ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯ ಮೂಲಕ ಇನ್ನೂ ಎರಡು ಪ್ರಮುಖ ಸವಾಲುಗಳನ್ನು ಪರಿಹರಿಸಲಾಗಿದೆ. ಒಬ್ಬ ಉತ್ಪಾದಕ ತನ್ನ ವ್ಯವಹಾರಕ್ಕಾಗಿ ವಿವಿಧ ಜಿಲ್ಲೆಗಳಲ್ಲಿ ವಿವಿಧ ಪರವಾನಗಿಗಳಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ನಮ್ಮ ರಫ್ತುದಾರರು ಸಹ ದೀರ್ಘ ಪ್ರಕ್ರಿಯೆಯ ಮೂಲಕ ಹೋಗಬೇಕಾಗಿದೆ. ರಫ್ತುದಾರರು ತಮ್ಮ ಸರಕುಗಳನ್ನು ಪತ್ತೆಹಚ್ಚಲು ಮತ್ತು ನಿಗಾ ಇಡಲು ಶಿಪ್ಪಿಂಗ್ ಬಿಲ್ ಸಂಖ್ಯೆಗಳು, ರೈಲ್ವೆ ಸರಕು ಸಂಖ್ಯೆಗಳು, ಇ-ವೇ ಬಿಲ್ ಸಂಖ್ಯೆಗಳು ಇತ್ಯಾದಿಗಳನ್ನು ಸಂಕಲಿಸಬೇಕಾಗುತ್ತದೆ. ಆಗ ಮಾತ್ರ ಅವರು ದೇಶಕ್ಕೆ ಸೇವೆ ಸಲ್ಲಿಸಲು ಸಾಧ್ಯ. ನೀವೆಲ್ಲರೂ ಬಹಳ ಒಳ್ಳೆಯವರು, ನೀವು ಹೆಚ್ಚು ದೂರುಗಳನ್ನು ನೀಡುವುದಿಲ್ಲ. ಆದರೆ ನಾನು ನಿಮ್ಮ ನೋವನ್ನು ಅರ್ಥಮಾಡಿಕೊಂಡಿದ್ದೇನೆ, ಆದ್ದರಿಂದ ನಾನು ಅದನ್ನು ಸುಧಾರಿಸಲು ಪ್ರಯತ್ನಿಸುತ್ತಿದ್ದೇನೆ. ಇಂದು ಪ್ರಾರಂಭಿಸಲಾದ ಯುನಿಫೈಡ್ ಲಾಜಿಸ್ಟಿಕ್ಸ್ ಇಂಟರ್ಫೇಸ್ ಪ್ಲಾಟ್ಫಾರ್ಮ್ (ಏಕೀಕೃತ ಲಾಜಿಸ್ಟಿಕ್ಸ್ ಇಂಟರ್ಫೇಸ್ ಪ್ಲಾಟ್ಫಾರಂ) ಅಂದರೆ, ಯುಲಿಪ್, ರಫ್ತುದಾರರನ್ನು ಈ ಸುದೀರ್ಘ ಪ್ರಕ್ರಿಯೆಯಿಂದ ರಕ್ಷಿಸುತ್ತದೆ. ಪ್ರದರ್ಶನದಲ್ಲಿ ಅದರ ಡೆಮೊ ಇದೆ. ನೀವು   ಹೇಗೆ ತ್ವರಿತವಾಗಿ ನಿಮ್ಮ ನಿರ್ಧಾರಗಳನ್ನು ಕೈಗೊಳ್ಳಬಹುದು ಮತ್ತು ನಿಮ್ಮ ವ್ಯವಹಾರವನ್ನು ಹೇಗೆ ಸುಧಾರಿಸಬಹುದು ಎಂಬುದನ್ನು ನೀವು ಅರಿತುಕೊಳ್ಳುವಿರಿ. ಯುಲಿಪ್ ಸಾರಿಗೆ ವಲಯಕ್ಕೆ ಸಂಬಂಧಿಸಿದ ಎಲ್ಲಾ ಡಿಜಿಟಲ್ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ತರುತ್ತದೆ. ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯ ಅಡಿಯಲ್ಲಿ ಈಸ್ ಆಫ್ ಲಾಜಿಸ್ಟಿಕ್ಸ್ ಸರ್ವೀಸಸ್ – ಇ-ಲಾಗ್ಸ್ ಎಂಬ ಡಿಜಿಟಲ್ ವೇದಿಕೆ (ಪ್ಲಾಟ್ಫಾರ್ಮ್)ಯನ್ನು  ಸಹ ಇಂದು ಪ್ರಾರಂಭಿಸಲಾಗಿದೆ. ಈ ಪೋರ್ಟಲ್ ಮೂಲಕ, ಕೈಗಾರಿಕಾ ಸಂಘಟನೆಗಳು ತಮ್ಮ ಕಾರ್ಯಾಚರಣೆಗಳು ಮತ್ತು ಕಾರ್ಯನಿರ್ವಹಣೆಯಲ್ಲಿ ತೊಡಕುಗಳನ್ನು ಉಂಟುಮಾಡುತ್ತಿರುವ ಸಮಸ್ಯೆಗಳ ಬಗ್ಗೆ  ನೇರವಾಗಿ ಸರ್ಕಾರಿ ಸಂಸ್ಥೆಯೊಂದಿಗೆ ಪ್ರಸ್ತಾಪಿಸಬಹುದು. ಸಂಕ್ಷಿಪ್ತವಾಗಿ ಹೇಳುವುದಾದರೆ, ನೀವು ಯಾವುದೇ ಅಡೆತಡೆಗಳಿಲ್ಲದೆ ಅತ್ಯಂತ ಪಾರದರ್ಶಕ ರೀತಿಯಲ್ಲಿ ಸರ್ಕಾರವನ್ನು ತಲುಪಲು ಒಂದು ವ್ಯವಸ್ಥೆಯನ್ನು ರಚಿಸಲಾಗಿದೆ. ಅಂತಹ ಪ್ರಕರಣಗಳ ತ್ವರಿತ ಇತ್ಯರ್ಥಕ್ಕಾಗಿ ಸಮಗ್ರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ.

ಸ್ನೇಹಿತರೇ,

ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯು ಪಿಎಂ ಗತಿಶಕ್ತಿ ರಾಷ್ಟ್ರೀಯ ಮಹಾಯೋಜನೆಗೆ  ಗರಿಷ್ಠ ಬೆಂಬಲವನ್ನು ನೀಡಲಿದೆ. ಇಂದು ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರಧಾನ ಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಹಾಯೋಜನೆಗೆ ಸೇರಿಕೊಂಡಿವೆ ಮತ್ತು ಬಹುತೇಕ ಎಲ್ಲಾ ಇಲಾಖೆಗಳು ಒಟ್ಟಾಗಿ ಕೆಲಸ ಮಾಡಲು ಪ್ರಾರಂಭಿಸಿವೆ ಎಂಬುದು ನನಗೆ ಸಂತೋಷದ ಸಂಗತಿಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಮೂಲಸೌಕರ್ಯ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಯ ಬೃಹತ್ ಡೇಟಾಬೇಸ್ (ದತ್ತಾಂಶ ಭಂಡಾರ) ಅನ್ನು ಸಿದ್ಧಪಡಿಸಲಾಗಿದೆ. ಇಂದು ಸುಮಾರು 1500 ಪದರಗಳಲ್ಲಿನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದತ್ತಾಂಶವನ್ನು  ಪಿಎಂ ಗತಿಶಕ್ತಿ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಲಾಗಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಯೋಜನೆಗಳು, ಅರಣ್ಯ ಭೂಮಿ ಮತ್ತು ರಕ್ಷಣಾ ಭೂಮಿ ಇತ್ಯಾದಿಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಈಗ ಒಂದೇ ಸ್ಥಳದಲ್ಲಿ ಲಭ್ಯವಿವೆ. ಇದು ಇನ್ಫ್ರಾ ಯೋಜನೆಗಳ ರೂಪಿಸುವಿಕೆಯನ್ನು ಸುಧಾರಿಸಿದೆ, ಅನುಮತಿಗಳನ್ನು ತ್ವರಿತಗೊಳಿಸಿದೆ ಮತ್ತು ನಂತರ ಗಮನಿಸಿದ ಸಮಸ್ಯೆಗಳನ್ನು ಸರಿಪಡಿಸಿದೆ. ಪಿಎಂ ಗತಿಶಕ್ತಿ ಯೋಜನೆಯಿಂದಾಗಿ ಈ ಹಿಂದೆ ಇದ್ದ ಮೂಲಸೌಕರ್ಯದ ಅಂತರಗಳನ್ನು ತ್ವರಿತವಾಗಿ ಸರಿಪಡಿಸಲಾಗುತ್ತಿದೆ. ಈ ಹಿಂದೆ ಯಾವುದೇ ಎಚ್ಚರಿಕೆಯ, ಜಾಗೃತೆಯ ಪರಿಗಣನೆ ಇಲ್ಲದೆ ಮೂಲಸೌಕರ್ಯ ಯೋಜನೆಗಳನ್ನು ಘೋಷಿಸುವ ಪ್ರವೃತ್ತಿ ಹೇಗಿತ್ತು ಮತ್ತು ಅವು ಹಲವಾರು ದಶಕಗಳ ಕಾಲ ಹೇಗೆ ವಿಳಂಬಗೊಂಡಿದ್ದವು  ಎಂಬುದು ನನಗೆ ನೆನಪಿನಲ್ಲಿದೆ.  ಇದರಿಂದ ದೇಶದ ಲಾಜಿಸ್ಟಿಕ್ಸ್ ವಲಯವು ಭಾರಿ ನಷ್ಟವನ್ನು ಅನುಭವಿಸಿದೆ. ನಾನು ಮಾತನಾಡುತ್ತಿರುವ ಲಾಜಿಸ್ಟಿಕ್ಸ್ ನೀತಿಯು ಮಾನವ ಮಧ್ಯಪ್ರವೇಶವನ್ನೂ (ಇಂಟರ್ಫೇಸ್) ಹೊಂದಿದೆ. ನಾವು ಈ ವ್ಯವಸ್ಥೆಗಳನ್ನು ಸರಿಯಾಗಿ ನಿರ್ವಹಿಸಿದರೆ ಯಾವುದೇ ಟ್ರಕ್ ಚಾಲಕ ರಾತ್ರಿಯಲ್ಲಿ ಹೊರಗೆ ಮಲಗಬೇಕಾಗಿಲ್ಲ. ಅವನು ತನ್ನ ಕರ್ತವ್ಯವನ್ನು ಪೂರ್ಣಗೊಳಿಸಿದ ನಂತರ ಮಲಗಲು ರಾತ್ರಿ ಮನೆಗೆ ಬರಬಹುದು. ಈ ಎಲ್ಲಾ ವ್ಯವಸ್ಥೆಗಳನ್ನು ಸುಲಭವಾಗಿ ಯೋಜಿಸಬಹುದು. ಮತ್ತು ಅದು ಎಂತಹ ದೊಡ್ಡ ಸೇವೆಯಾಗಿರುತ್ತದೆ! ನಾನು ಹೇಳಬಯಸುವುದೇನೆಂದರೆ, ಈ ನೀತಿಯು ಸ್ವತಃ ದೇಶದ ಸಂಪೂರ್ಣ ಆಲೋಚನಾ ವಿಧಾನವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ.

ಸ್ನೇಹಿತರೇ,

ಗತಿಶಕ್ತಿ ಮತ್ತು ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿ ಒಟ್ಟಾಗಿ ಈಗ ದೇಶವನ್ನು ಹೊಸ ಕೆಲಸದ ಸಂಸ್ಕೃತಿಯತ್ತ ಕೊಂಡೊಯ್ಯುತ್ತಿವೆ. ನಾವು ಇತ್ತೀಚೆಗೆ ಗತಿ ಶಕ್ತಿ ವಿಶ್ವವಿದ್ಯಾಲಯಕ್ಕೆ ಅನುಮೋದನೆ ನೀಡಿದ್ದೇವೆ, ಅಂದರೆ ನಾವು ಅದರೊಂದಿಗೆ ಮಾನವ ಸಂಪನ್ಮೂಲ ಅಭಿವೃದ್ಧಿಯ ಕೆಲಸವನ್ನು ಸಹ ಮಾಡಿದ್ದೇವೆ. ಈ ನೀತಿಯನ್ನು ಇಂದು ಪ್ರಾರಂಭಿಸಲಾಗುತ್ತಿದೆ. ಗತಿ ಶಕ್ತಿ ವಿಶ್ವವಿದ್ಯಾಲಯದಿಂದ ಹೊರಬರುವ ಪ್ರತಿಭೆಯೂ ಅದಕ್ಕೆ ಸಾಕಷ್ಟು ಸಹಾಯ ಮಾಡಲಿದೆ.

ಸ್ನೇಹಿತರೇ,

ಈ ಪ್ರಯತ್ನಗಳ ನಡುವೆ, ಇಂದು ಭಾರತದ ಬಗ್ಗೆ ವಿಶ್ವದ ದೃಷ್ಟಿಕೋನವು ಬದಲಾಗುತ್ತಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳುವುದು ಸಹ ಮುಖ್ಯವಾಗಿದೆ. ಇಂದು ಜಗತ್ತು ಭಾರತವನ್ನು ಅತ್ಯಂತ ಸಕಾರಾತ್ಮಕ ರೀತಿಯಲ್ಲಿ ಮೌಲ್ಯಮಾಪನ ಮಾಡುತ್ತಿದೆ, ಆದರೆ ಅದಕ್ಕಾಗಿ ನಮ್ಮ ದೇಶದಲ್ಲಿ ಸ್ವಲ್ಪ ಸಮಯ ಬೇಕಾಗುತ್ತದೆ. ಇದು ಭಾರತದ ಹೊರಗೆ ನಡೆಯುತ್ತಿದೆ. ವಿಶ್ವವು ಭಾರತದಿಂದ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದೆ ಮತ್ತು ವಿದೇಶಗಳಲ್ಲಿ ಸಂಬಂಧಿಕರನ್ನು ಹೊಂದಿರುವ ನಿಮ್ಮಲ್ಲಿ ಅನೇಕರು ತಮ್ಮ ಭೇಟಿಯ ಸಮಯದಲ್ಲಿ ನಿಮಗೆ ಹೇಳುತ್ತಿರಬಹುದು. ಭಾರತವು ಇಂದು 'ಪ್ರಜಾಸತ್ತಾತ್ಮಕ ಸೂಪರ್ ಪವರ್' ಆಗಿ ಹೊರಹೊಮ್ಮುತ್ತಿದೆ ಎಂದು ವಿಶ್ವದ ಪ್ರಮುಖ ತಜ್ಞರು ಹೇಳುತ್ತಿದ್ದಾರೆ. ತಜ್ಞರು ಮತ್ತು ಪ್ರಜಾಸತ್ತಾತ್ಮಕ ಸೂಪರ್ ಪವರ್ ಗಳು ಭಾರತದ 'ಅಸಾಮಾನ್ಯ ಪ್ರತಿಭಾ ಪರಿಸರ ವ್ಯವಸ್ಥೆ'ಯಿಂದ ಗಾಢವಾಗಿ ಪ್ರಭಾವಿತರಾಗಿದ್ದಾರೆ. ತಜ್ಞರು ಭಾರತದ ದೃಢನಿರ್ಧಾರ ಮತ್ತು ಪ್ರಗತಿಯನ್ನು ಶ್ಲಾಘಿಸುತ್ತಿದ್ದಾರೆ. ಮತ್ತು ಇದು ಕೇವಲ ಕಾಕತಾಳೀಯವಲ್ಲ. ಜಾಗತಿಕ ಬಿಕ್ಕಟ್ಟಿನ ನಡುವೆ ಭಾರತ ಮತ್ತು ಭಾರತೀಯ ಆರ್ಥಿಕತೆಯು ತೋರಿಸಿದ ಸ್ಥಿತಿಸ್ಥಾಪಕತ್ವವುಳ್ಳ ಪುನಶ್ಚೇತನ ಜಗತ್ತಿಗೆ ಹೊಸ ವಿಶ್ವಾಸವನ್ನು ನೀಡಿದೆ. ಕಳೆದ ಕೆಲವು ವರ್ಷಗಳಲ್ಲಿ ಭಾರತ ಕೈಗೊಂಡಿರುವ ಸುಧಾರಣೆಗಳು ಮತ್ತು ಅದು ಜಾರಿಗೆ ತಂದಿರುವ ನೀತಿಗಳು ನಿಜವಾಗಿಯೂ ಅಭೂತಪೂರ್ವವಾಗಿವೆ. ಆದ್ದರಿಂದ, ಭಾರತದ ಮೇಲೆ ವಿಶ್ವದ ನಂಬಿಕೆ ಹೆಚ್ಚಾಗಿದೆ ಮತ್ತು ನಿರಂತರವಾಗಿ ಬೆಳೆಯುತ್ತಿದೆ. ಪ್ರಪಂಚದ ಈ ನಂಬಿಕೆಗೆ ಅನುಗುಣವಾಗಿ ನಾವು ಬದುಕಬೇಕು. ಇದು ನಮ್ಮ ಜವಾಬ್ದಾರಿ ಮತ್ತು ಅಂತಹ ಅವಕಾಶವನ್ನು ಕಳೆದುಕೊಳ್ಳುವುದು ನಮಗೆ ಅನುಕೂಲಕರವಾಗಿರದು. ಇಂದು ಪ್ರಾರಂಭಿಸಲಾದ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯು ದೇಶದ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ವೇಗವನ್ನು ತರಲು ಸಹಾಯ ಮಾಡುತ್ತದೆ ಎಂದು ನನಗೆ ಖಾತ್ರಿಯಿದೆ.

ಸ್ನೇಹಿತರೇ,

ನಮ್ಮ ದೇಶವು ಅಭಿವೃದ್ಧಿ ಹೊಂದಿದ ದೇಶವಾಗುವುದನ್ನು ಬಯಸದ ಯಾರೂ ನಿಮ್ಮಲ್ಲಿ ಇಲ್ಲ. ಅಭಿವೃದ್ಧಿ ಹೊಂದಲು ನಿರ್ಧರಿಸಿದ ಭಾರತದಲ್ಲಿ ಅಂತಹ ಯಾವುದೇ ವ್ಯಕ್ತಿ ಇರಲಾರ. ನಾವು ಅದನ್ನು ಇತರರಿಗೆ ಉಳಿಸಿದಾಗ ಸಮಸ್ಯೆ ಉದ್ಭವಿಸುತ್ತದೆ. ನಾವು ಅದನ್ನು ಬದಲಾಯಿಸಬೇಕು ಮತ್ತು ನಾವು ಅದನ್ನು ಒಗ್ಗೂಡಿ ಮಾಡಬೇಕು. ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ  ಸಂಕಲ್ಪವನ್ನು ಹೊಂದಿರುವ ಭಾರತವು ಈಗ ಅಭಿವೃದ್ಧಿ ಹೊಂದಿದ ರಾಷ್ಟ್ರಗಳೊಂದಿಗೆ ಆಕ್ರಮಣಕಾರಿಯಾಗಿ ಸ್ಪರ್ಧಿಸಬೇಕಾಗಿದೆ. ನಾವು ಬಲಶಾಲಿಯಾದಂತೆ, ನಮ್ಮ ಸ್ಪರ್ಧೆಯು ಉಗ್ರವಾಗಿರುತ್ತದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಮತ್ತು ನಾವು ಇದನ್ನು ಸ್ವಾಗತಿಸಬೇಕು, ನಾವು ಹಿಂಜರಿಯಬಾರದು. ಬನ್ನಿ, ನಾವು ಸಿದ್ಧರಿದ್ದೇವೆ, ಅದು ನಮ್ಮ ಮನೋಭಾವವಾಗಿರಬೇಕು. ಆದ್ದರಿಂದ, ನಮ್ಮ ಪ್ರತಿಯೊಂದು ಉತ್ಪನ್ನ, ಪ್ರತಿಯೊಂದು ಉಪಕ್ರಮ ಮತ್ತು ನಮ್ಮ ಪ್ರತಿಯೊಂದು ಪ್ರಕ್ರಿಯೆಯು ತುಂಬಾ ಸ್ಪರ್ಧಾತ್ಮಕವಾಗಿರಬೇಕು ಎಂದು ನಾನು ಭಾವಿಸುತ್ತೇನೆ. ಅದು ಸೇವಾ ಕ್ಷೇತ್ರವಾಗಿರಲಿ, ಉತ್ಪಾದನೆ, ಆಟೋಮೊಬೈಲ್ ಅಥವಾ ಎಲೆಕ್ಟ್ರಾನಿಕ್ಸ್ ಆಗಿರಲಿ, ನಾವು ಪ್ರತಿಯೊಂದು ಕ್ಷೇತ್ರದಲ್ಲೂ ದೊಡ್ಡ ಗುರಿಗಳನ್ನು ನಿಗದಿ ಮಾಡಬೇಕು ಮತ್ತು ಅವುಗಳನ್ನು ಸಾಧಿಸಬೇಕು. ಇಂದು, ಭಾರತದಲ್ಲಿ ತಯಾರಿಸಿದ ಉತ್ಪನ್ನಗಳ ಕಡೆಗೆ ವಿಶ್ವದ ಆಕರ್ಷಣೆಯು ಕೇವಲ ನಮ್ಮ ಬೆನ್ನನ್ನು ತಟ್ಟಿಕೊಳ್ಳುವುದಕ್ಕೆ  ಸೀಮಿತವಾಗಬಾರದು. ಸ್ನೇಹಿತರೇ, ನಾವು ವಿಶ್ವ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳುವ ಬಗ್ಗೆ ಯೋಚಿಸಬೇಕು. ವಿಶ್ವದ ಪ್ರತಿಯೊಬ್ಬರೂ ಭಾರತದ ಕೃಷಿ ಉತ್ಪನ್ನಗಳು, ಮೊಬೈಲ್ ಫೋನ್ ಗಳು ಅಥವಾ ಬ್ರಹ್ಮೋಸ್ ಕ್ಷಿಪಣಿಗಳನ್ನು ಗಮನಿಸುತ್ತಿದ್ದಾರೆ. ಕೊರೋನಾ ಅವಧಿಯಲ್ಲಿ ಭಾರತದಲ್ಲಿ ತಯಾರಿಸಿದ ಲಸಿಕೆಗಳು ಮತ್ತು ಔಷಧಿಗಳು ವಿಶ್ವದ ಲಕ್ಷಾಂತರ ಜನರ ಜೀವಗಳನ್ನು ಉಳಿಸಲು ಸಹಾಯ ಮಾಡಿವೆ. ನಾನು ಇಂದು ಬೆಳಗ್ಗೆ ಉಜ್ಬೇಕಿಸ್ತಾನದಿಂದ ಹಿಂದಿರುಗಿದೆ. ನಾನು ಕಳೆದ ರಾತ್ರಿ ಉಜ್ಬೇಕಿಸ್ತಾನದ ಅಧ್ಯಕ್ಷರೊಂದಿಗೆ ಮಾತನಾಡುತ್ತಿದ್ದೆ. ಅದು ತಡವಾಗಿತ್ತು, ಆದರೂ  ಅವರು ಯೋಗದ ಬಗ್ಗೆ ತುಂಬಾ ಉತ್ಸಾಹದಿಂದ ಹೇಳುತ್ತಿದ್ದರು. ಈ ಹಿಂದೆ ಉಜ್ಬೇಕಿಸ್ತಾನದಲ್ಲಿ ಯೋಗದ ಬಗ್ಗೆ ಒಂದು ರೀತಿಯ ದ್ವೇಷವಿತ್ತು ಎಂದು ಅವರು ಹೇಳಿದರು. ಆದರೆ ಪರಿಸ್ಥಿತಿ ತುಂಬಾ ಬದಲಾಗಿದೆ ಮತ್ತು ಯೋಗವು ತನ್ನ ದೇಶದ ಮೂಲೆಮೂಲೆಗಳಲ್ಲಿ ಎಷ್ಟು ಜನಪ್ರಿಯವಾಗಿದೆಯೆಂದರೆ ಅವರಿಗೆ ಭಾರತದಿಂದ ತರಬೇತುದಾರರ ಅಗತ್ಯವಿದೆ ಎಂದು ಅವರು ಹೇಳಿದರು. ನಾನು ಹೇಳಬಯಸುವುದೇನೆಂದರೆ, ಭಾರತದ ಬಗ್ಗೆ ಪ್ರಪಂಚದ ಚಿಂತನೆಯು ಬಹಳ ವೇಗವಾಗಿ ಬದಲಾಗುತ್ತಿದೆ, ಸ್ನೇಹಿತರೇ. ಭಾರತದಲ್ಲಿ ತಯಾರಾದ ಉತ್ಪನ್ನಗಳು ವಿಶ್ವ ಮಾರುಕಟ್ಟೆಗಳಲ್ಲಿ ಪ್ರಾಬಲ್ಯ ಸಾಧಿಸಲು, ದೇಶದಲ್ಲಿ ಬಲವಾದ ಬೆಂಬಲ ವ್ಯವಸ್ಥೆಯನ್ನು ಹೊಂದಿರುವುದು ಅಷ್ಟೇ ಮುಖ್ಯ. ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯು ಈ ಬೆಂಬಲ ವ್ಯವಸ್ಥೆಯನ್ನು ಆಧುನೀಕರಿಸುವ ನಿಟ್ಟಿನಲ್ಲಿ ನಮ್ಮನ್ನು  ಬಹಳ ದೂರ ಕೊಂಡೊಯ್ಯಲಿದೆ.

ಮತ್ತು ಸ್ನೇಹಿತರೇ,

ದೇಶದ ರಫ್ತು ಹೆಚ್ಚಾದಾಗ, ದೇಶದಲ್ಲಿ ಲಾಜಿಸ್ಟಿಕ್ಸ್ ಸಂಬಂಧಿತ ಸಮಸ್ಯೆಗಳು ಕಡಿಮೆಯಾದಾಗ, ನಮ್ಮ ಸಣ್ಣ ಕೈಗಾರಿಕೆಗಳು ಮತ್ತು ಅವುಗಳಲ್ಲಿ ಕೆಲಸ ಮಾಡುವ ಜನರು ಹೆಚ್ಚು ಪ್ರಯೋಜನ ಪಡೆಯುತ್ತಾರೆ ಎಂದು ನಿಮಗೆ ತಿಳಿದಿದೆ. ಲಾಜಿಸ್ಟಿಕ್ಸ್ ವಲಯವನ್ನು ಬಲಪಡಿಸುವುದರಿಂದ ಅದು ಸಾಮಾನ್ಯ ಜನರ ಜೀವನವನ್ನು ಸುಲಭಗೊಳಿಸುವುದಲ್ಲದೆ, ಕಾರ್ಮಿಕರು ಮತ್ತು ಕಾರ್ಮಿಕರ ಗೌರವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಸ್ನೇಹಿತರೇ,

ಈಗ ಭಾರತದ ಲಾಜಿಸ್ಟಿಕ್ಸ್ ವಲಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೊನೆಗೊಳ್ಳುತ್ತವೆ, ನಿರೀಕ್ಷೆಗಳು ಹೆಚ್ಚಾಗುತ್ತವೆ ಮತ್ತು ಈ ವಲಯವು ಈಗ ದೇಶದ ಯಶಸ್ಸನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯು ಮೂಲಸೌಕರ್ಯಗಳ ಅಭಿವೃದ್ಧಿ, ವ್ಯವಹಾರದ ವಿಸ್ತರಣೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವಂತಹ ಅಪಾರ ಸಾಮರ್ಥ್ಯವನ್ನು ಹೊಂದಿದೆ. ನಾವು ಈ ಸಾಧ್ಯತೆಗಳನ್ನು ಒಟ್ಟಾಗಿ ಅರಿತುಕೊಳ್ಳಬೇಕು. ಈ ಸಂಕಲ್ಪದೊಂದಿಗೆ, ಮತ್ತೊಮ್ಮೆ ನಿಮ್ಮೆಲ್ಲರಿಗೂ ಅನೇಕ ಶುಭ ಹಾರೈಕೆಗಳು. ನೀವು ಚೀತಾದ ವೇಗದಲ್ಲಿ ಸರಕುಗಳನ್ನು ಸಾಗಿಸಬೇಕೆಂದು ನಾನು ನಿರೀಕ್ಷಿಸುತ್ತೇನೆ. ಧನ್ಯವಾದಗಳು.

ಘೋಷಣೆ:  ಇದು ಪ್ರಧಾನಮಂತ್ರಿಯವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

*****



(Release ID: 1860554) Visitor Counter : 155