ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)

ಸರ್ಕಾರದ ಎಲ್ಲಾ ಯೋಜನೆಗಳಲ್ಲಿ ಸಾರವರ್ಧಿತ ಅಕ್ಕಿ ವಿತರಣೆಗೆ ಸಂಪುಟ ಅನುಮೋದನೆ


ಪ್ರಧಾನಿಯವರು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಅಕ್ಕಿಯ ಸಾರವರ್ಧನೆ ಬಗ್ಗೆ ಘೋಷಿಸಿದ್ದರು

ಭತ್ತದ ಸಾರವರ್ಧನೆಯ ಸಂಪೂರ್ಣ ವೆಚ್ಚವನ್ನು (ವರ್ಷಕ್ಕೆ ರೂ. 2,700 ಕೋಟಿ) ಸರ್ಕಾರವು ಭರಿಸಲಿದೆ

ಸಾರವರ್ಧನೆಯು ದೇಶದ ಪ್ರತಿಯೊಬ್ಬ ಬಡವರಿಗೆ ಪೌಷ್ಟಿಕಾಂಶವನ್ನು ಒದಗಿಸುತ್ತದೆ ಹಾಗೂ ಮಹಿಳೆಯರು, ಮಕ್ಕಳು, ಹಾಲುಣಿಸುವ ತಾಯಂದಿರಲ್ಲಿ ಅಪೌಷ್ಟಿಕತೆ ಮತ್ತು ಅಗತ್ಯ ಪೋಷಕಾಂಶಗಳ ಕೊರತೆಯನ್ನು ನಿವಾರಿಸಲು ನೆರವಾಗಲಿದೆ

ಭಾರತದ ಆಹಾರ ನಿಗಮ (FCI) ಮತ್ತು ರಾಜ್ಯ ಏಜೆನ್ಸಿಗಳು ಈಗಾಗಲೇ ಪೂರೈಕೆ ಮತ್ತು ವಿತರಣೆಗಾಗಿ 88.65 ಲಕ್ಷ ಮೆಟ್ರಿಕ್ ಟನ್ ಸಾರವರ್ಧಿತ ಅಕ್ಕಿಯನ್ನು ಸಂಗ್ರಹಿಸಿವೆ

Posted On: 08 APR 2022 3:58PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ)  ಅಡಿಯಲ್ಲಿ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆ (ICDS), ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ-PM POSHAN [ಹಿಂದಿನ ಮಧ್ಯಾಹ್ನದ ಬಿಸಿಊಟದ ಯೋಜನೆ (MDM)] ಮತ್ತು ಭಾರತ ಸರ್ಕಾರದ ಇತರ ಕಲ್ಯಾಣ ಯೋಜನೆಗಳ  (OWS) ಮೂಲಕ 2024 ರ ವೇಳೆಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ (UTs) ಹಂತ ಹಂತವಾಗಿ 'ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆ' (ಟಿಪಿಡಿಎಸ್) ವ್ಯಾಪ್ತಿಯುದ್ದಕ್ಕೂ ಸಾರವರ್ಧಿತ ಅಕ್ಕಿಯನ್ನು ಪೂರೈಸಲು ತನ್ನ ಅನುಮೋದನೆಯನ್ನು ನೀಡಿದೆ.

ಭತ್ತದ ಸಾರವರ್ಧನೆಯ ಸಂಪೂರ್ಣ ವೆಚ್ಚವನ್ನು (ವರ್ಷಕ್ಕೆ ರೂ. 2,700 ಕೋಟಿ) ಸರ್ಕಾರವು ಭರಿಸಲಿದೆ. ಜೂನ್, 2024 ರವರೆಗೆ ಯೋಜನೆಯ ಸಂಪೂರ್ಣ ಅನುಷ್ಠಾನದವರೆಗೆ ಆಹಾರ ಸಬ್ಸಿಡಿ ಭಾಗವಾಗಿ ಸರಕಾರವು ಈ ವೆಚ್ಚವನ್ನು ಭರಿಸಲಿದೆ.

 ಈ ಕೆಳಗಿನ ಮೂರು ಹಂತಗಳ ಮೂಲಕ ಈ ಉಪಕ್ರಮದ ಸಂಪೂರ್ಣ ಅನುಷ್ಠಾನಕ್ಕೆ ಯೋಜಿಸಲಾಗಿದೆ.

ಹಂತ-1: ಮಾರ್ಚ್, 2022 ರೊಳಗೆ ಭಾರತದಲ್ಲಿ 'ಐಸಿಡಿಎಸ್'  ಮತ್ತು 'ಪ್ರಧಾನ ಮಂತ್ರಿ ಪೋಷಣೆ' (PM POSHAN) ಯೋಜನೆಯ ಸಂಪೂರ್ಣ ವ್ಯಾಪ್ತಿಯಲ್ಲಿ ಇದನ್ನು ಅನುಷ್ಠಾನಗೊಳಿಸುವುದು.

ಹಂತ-2 : ಮೇಲಿನ ಹಂತ 1ರ ಜೊತೆಗೆ  ಮಾರ್ಚ್ 2023ರ ವೇಳೆಗೆ ಎಲ್ಲಾ ಮಹತ್ವಾಕಾಂಕ್ಷೆಯ ಮತ್ತು ಹೆಚ್ಚಿನ ಹೊರೆ ಜಿಲ್ಲೆಗಳಲ್ಲಿನ (ಒಟ್ಟು 291 ಜಿಲ್ಲೆಗಳು) 'ಟಿಡಿಪಿಎಸ್' ಮತ್ತು 'ಓಡಬ್ಲ್ಯೂಎಸ್' ಯೋಜನೆಗಳಲ್ಲಿ ಅನುಷ್ಠಾನ.

ಹಂತ-3: ಮೇಲಿನ ಹಂತ 2ರ ಜೊತೆಗೆ ಮಾರ್ಚ್ 2024 ರೊಳಗೆ ದೇಶದ ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಅನುಷ್ಠಾನ.


 ವೆಗವರ್ಧಿತ ಅನುಷ್ಠಾನ ಪ್ರಯತ್ನಗಳ ಭಾಗವಾಗಿ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ರಾಜ್ಯ ಸರ್ಕಾರ / ಕೇಂದ್ರಾಡಳಿತ ಪ್ರದೇಶಗಳು, ಸಂಬಂಧಪಟ್ಟ ಸಚಿವಾಲಯಗಳು / ಇಲಾಖೆ, ಅಭಿವೃದ್ಧಿ ಪಾಲುದಾರರು, ಕೈಗಾರಿಕೆಗಳು, ಸಂಶೋಧನಾ ಸಂಸ್ಥೆ ಇತ್ಯಾದಿಗಳೊಂದಿಗೆ ಎಲ್ಲಾ ಪರಿಸರ ವ್ಯವಸ್ಥೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಸಂಯೋಜಿಸುತ್ತಿದೆ.  ಎಫ್.ಸಿ.ಐ. ಮತ್ತು ರಾಜ್ಯ ಏಜೆನ್ಸಿಗಳು ಈಗಾಗಲೇ ಸಾರವರ್ಧಿತ ಅಕ್ಕಿಯ ಖರೀದಿಯಲ್ಲಿ ತೊಡಗಿವೆ ಮತ್ತು ಸರಬರಾಜು ಹಾಗೂ ವಿತರಣೆಗಾಗಿ ಇದುವರೆಗೆ ಸುಮಾರು 88.65 ಲಕ್ಷ ಮೆಟ್ರಿಕ್ ಟನ್ (LMT) ಸಾರವರ್ಧಿತ ಅಕ್ಕಿಯನ್ನು  ಸಂಗ್ರಹಿಸಲಾಗಿದೆ.

ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಯವರು 75ನೇ ಸ್ವಾತಂತ್ರ್ಯ ದಿನದಂದು (15 ಆಗಸ್ಟ್, 2021) ತಮ್ಮ ಭಾಷಣದಲ್ಲಿ ದೇಶದ ಪ್ರತಿಯೊಬ್ಬ ಬಡವರಿಗೆ ಅಪೌಷ್ಟಿಕತೆಯನ್ನು ನಿವಾರಿಸಲು ಹಾಗೂ  ಮಹಿಳೆಯರು, ಮಕ್ಕಳು, ಹಾಲುಣಿಸುವ ತಾಯಂದಿರಿಗೆ
ಪೌಷ್ಟಿಕಾಂಶವನ್ನು ಒದಗಿಸಲು ಅಕ್ಕಿಯ ಸಾರವರ್ಧನೆ ಕುರಿತು ಘೋಷಣೆ ಮಾಡಿದರು.   ಅವರ ಬೆಳವಣಿಗೆಯಲ್ಲಿ ಪ್ರಮುಖ ಅಡೆತಡೆಗಳನ್ನು ತಡೆಯುವುದು ಇದರ ಹಿಂದಿನ ಆಶಯವಾಗಿದೆ.

ಇದಕ್ಕೂ ಮೊದಲು,  "ಅಕ್ಕಿಯ ಸಾರವರ್ಧನೆ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಅದರ ವಿತರಣೆ" ಎಂಬ ಕೇಂದ್ರ ಪ್ರಾಯೋಜಿತ ಪ್ರಾಯೋಗಿಕ ಯೋಜನೆಯನ್ನು 2019-20ರಿಂದ ಆರಂಭಗೊಂಡು 3 ವರ್ಷಗಳ ಅವಧಿಗೆ ಜಾರಿಗೊಳಿಸಲಾಗಿದೆ. ಹನ್ನೊಂದು (11) ರಾಜ್ಯಗಳು- ಆಂಧ್ರ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ಛತ್ತೀಸ್‌ಗಢ, ಉತ್ತರ ಪ್ರದೇಶ, ಒಡಿಶಾ, ತೆಲಂಗಾಣ, ಮಧ್ಯಪ್ರದೇಶ, ಉತ್ತರಾಖಂಡ ಮತ್ತು ಜಾರ್ಖಂಡ್‌ಗಳು ಪ್ರಾಯೋಗಿಕ ಯೋಜನೆಯಡಿಯಲ್ಲಿ ತಮ್ಮ ಗುರುತಿಸಲಾದ ಜಿಲ್ಲೆಗಳಲ್ಲಿ (ಪ್ರತಿ ರಾಜ್ಯಕ್ಕೆ ಒಂದು ಜಿಲ್ಲೆ) ಸಾರವರ್ಧಿತ ಅಕ್ಕಿಯನ್ನು ಯಶಸ್ವಿಯಾಗಿ ವಿತರಿಸಿವೆ. 

****



(Release ID: 1814887) Visitor Counter : 270