ಪ್ರಧಾನ ಮಂತ್ರಿಯವರ ಕಛೇರಿ

ವಿಜಯದಶಮಿಯ ಪವಿತ್ರ ಸಂದರ್ಭದಲ್ಲಿ 7 ಹೊಸ ರಕ್ಷಣಾ ಕಂಪನಿಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ದೇಶಿಸಿ ವಿಡಿಯೊ ಭಾಷಣ ಮಾಡಿದ ಪ್ರಧಾನಮಂತ್ರಿ


“ಈ ಹೊಸ 7 ಕಂಪನಿಗಳ ಸೃಷ್ಟಿಯಿಂದ ಡಾ. ಕಲಾಂ ಅವರ ಬಲಿಷ್ಠ ಭಾರತದ ಕನಸಿಗೆ ಬಲ”

“ಈ 7 ಹೊಸ ಕಂಪನಿಗಳಿಂದ ಮುಂಬರುವ ದಿನಗಳಲ್ಲಿ ದೇಶದ ಮಿಲಿಟರಿ ಶಕ್ತಿಗೆ ಭದ್ರ ಬುನಾದಿ”

65,000 ಕೋಟಿಗೂ ಅಧಿಕ ಮೊತ್ತದ ಬೇಡಿಕೆ, ಈ ಕಂಪನಿಗಳಲ್ಲಿ ದೇಶದ ವಿಶ್ವಾಸವೃದ್ಧಿ ಪ್ರತಿಬಿಂಬ

ಇಂದು ರಕ್ಷಣಾ ವಲಯದಲ್ಲಿ ಹಿಂದೆಂದೂ ಇಲ್ಲದಂತಹ ಪಾರದರ್ಶಕತೆ, ವಿಶ್ವಾಸ ಮತ್ತು ತಂತ್ರಜ್ಞಾನ ಆಧಾರಿತ ವಿಧಾನಕ್ಕೆ ಸಾಕ್ಷಿಯಾಗಿದೆ

ಕಳೆ 5 ವರ್ಷಗಳಿಂದೀಚೆಗೆ ನಮ್ಮ ರಕ್ಷಣಾ ರಫ್ತು ಶೇ.325ಷ್ಟು ಹೆಚ್ಚಳ

“ಸ್ಪರ್ಧಾತ್ಮಕ ದರ ನಮ್ಮ ಬಲ, ಗುಣಮಟ್ಟ ಮತ್ತು ವಿಶ್ವಾಸಾರ್ಹತೆ ನಮ್ಮ ಹೆಗ್ಗುರುತು”

Posted On: 15 OCT 2021 12:57PM by PIB Bengaluru

ರಕ್ಷಣಾ ಸಚಿವಾಲಯ ಆಯೋಜಿಸಿದ್ದ 7 ಹೊಸ ರಕ್ಷಣಾ ಕಂಪನಿಗಳನ್ನು ರಾಷ್ಟ್ರಕ್ಕೆ ಸಮರ್ಪಿಸುವ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಮತ್ತು ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀ ಅಜಯ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಧಾನಮಂತ್ರಿ ಅವರು ತಮ್ಮ ಭಾಷಣದಲ್ಲಿ ಇಂದು ಪವಿತ್ರ ವಿಜಯದಶಮಿ ದಿನವಾಗಿದೆ. ಈ ದಿನ ಶಸ್ತ್ರಾಸ್ತ್ರಗಳ ಮತ್ತು ಆಯುಧಗಳ ಪೂಜೆ ಮಾಡುವ ಸಾಂಪ್ರದಾಯಿಕ ದಿನವಾಗಿದೆ ಎಂದು ಉಲ್ಲೇಖಿಸಿದರು. ಭಾರತದಲ್ಲಿ ನಾವು ಶಕ್ತಿಯನ್ನು ಸೃಷ್ಟಿ ಮಾಧ್ಯಮವಾಗಿ ನೋಡುತ್ತೇವೆ ಎಂದು ಹೇಳಿದ ಅವರು, ಅದೇ ಭಾವನೆಯೊಂದಿಗೆ ರಾಷ್ಟ್ರ ಬಲವರ್ಧನೆಯತ್ತ ಸಾಗಿದೆ ಎಂದರು.

ಪ್ರಧಾನಮಂತ್ರಿ ಅವರು, ಡಾ. ಎಪಿಜೆ ಕಲಾಂ ಅವರಿಗೆ ಗೌರವ ನಮನ ಸಲ್ಲಿಸಿದರು ಮತ್ತು ಡಾ. ಕಲಾಂ ಅವರು ಬಲಿಷ್ಠ ರಾಷ್ಟ್ರಕಾರಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಶಸ್ತ್ರಾಸ್ತ್ರಗಳ ಕಾರ್ಖಾನೆಯನ್ನು ಪುನರ್ ರಚಿಸಿ, 7 ಹೊಸ ಕಂಪನಿಗಳನ್ನು ಹುಟ್ಟುಹಾಕಿರುವುದು ಕಲಾಂ ಅವರ ಬಲಿಷ್ಠ ಭಾರತದ ಕನಸಿಗೆ ಪೂರಕವಾಗಿದೆ ಎಂದರು. ಭಾರತದ ಸ್ವಾತಂತ್ರ್ಯೋತ್ಸವದ ಅಮೃತ ಕಾಲದ  ಈ ಸಂದರ್ಭದಲ್ಲಿ ರಾಷ್ಟ್ರಕ್ಕೆ ಹೊಸ ಭವಿಷ್ಯ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕೈಗೊಂಡ ಹಲವು ನಿರ್ಣಯಗಳ ಭಾಗ  ಹೊಸ ರಕ್ಷಣಾ ಕಂಪನಿಗಳ ಸ್ಥಾಪನೆಯಾಗಿದ ಎಂದು ಹೇಳಿದರು.

ಈ ಕಂಪನಿಗಳನ್ನು ಸೃಷ್ಟಿಸುವ ನಿರ್ಧಾರ ದೀರ್ಘಕಾಲದಿಂದ ನನೆಗುದಿಗೆ ಬಿದ್ದಿತ್ತು ಎಂದು ಹೇಳಿದ ಪ್ರಧಾನಮಂತ್ರಿ ಅವರು, ಈ 7 ಹೊಸ ಕಂಪನಿಗಳು ಮುಂಬರುವ ದಿನಗಳಲ್ಲಿ ರಾಷ್ಟ್ರದ ಮಿಲಿಟರಿ ಶಕ್ತಿಗೆ ಭದ್ರ ಬುನಾದಿಯನ್ನು ಹಾಕಿಕೊಡಲಿವೆ ಎಂದರು. ಭಾರತೀಯ ಶಸ್ತ್ರಾಸ್ತ್ರಗಳ ಕಾರ್ಖಾನೆಯ ವೈಭವದ ಇತಿಹಾಸವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು ಸ್ವಾತಂತ್ರ್ಯಾ ನಂತರದ ಅವಧಿಯಲ್ಲಿ ಈ ಕಂಪನಿಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯವನ್ನು ನಿರ್ಲಕ್ಷಿಸಲಾಗಿತ್ತು, ಅದರಿಂದಾಗಿ ದೇಶ ತನ್ನ ಅಗತ್ಯಗಳಿಗೆ ವಿದೇಶಿ ಪೂರೈಕೆಯನ್ನು ಅವಲಂಬಿಸಬೇಕಾಗಿತ್ತು ಎಂದು ಪ್ರಧಾನಮಂತ್ರಿ ಹೇಳಿದರು. “ಈ 7 ಹೊಸ ರಕ್ಷಣಾ ಕಂಪನಿಗಳು ಈ ಪರಿಸ್ಥಿತಿಯನ್ನು ಬದಲಾಯಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಲಿವೆ” ಎಂದು ಹೇಳಿದರು.

ಈ 7 ಹೊಸ ಕಂಪನಿಗಳು ಆತ್ಮನಿರ್ಭರ ದೃಷ್ಟಿಕೋನಕ್ಕೆ ಅನುಗುಣವಾಗಿ ಆಮದು ಬದಲಿಯಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಲಿವೆ ಎಂದು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಇದು 65,000 ಕೋಟಿಗೂ ಅಧಿಕ ಬೇಡಿಕೆ ಸೃಷ್ಟಿಯಾಗಿರುವುದು ಈ ಕಂಪನಿಗಳಲ್ಲಿ ದೇಶದಲ್ಲಿ ವಿಶ್ವಾಸ ಹೆಚ್ಚಳವನ್ನು ಪ್ರತಿಬಿಂಬಿಸುತ್ತದೆ ಎಂದರು.

ಇತ್ತೀಚೆಗೆ ಕೈಗೊಂಡ ಹಲವು ಸುಧಾರಣಾ ಮತ್ತು ಉಪಕ್ರಮಗಳನ್ನು ಅವರು ನೆನಪು ಮಾಡಿಕೊಂಡು,  ಅದು ಹಿಂದೆಂದೂ ಇಲ್ಲದ ಹಾಗೆ  ರಕ್ಷಣಾ ವಲಯದಲ್ಲಿ ವಿಶ್ವಾಸ, ಪಾರದರ್ಶಕತೆ ಮತ್ತು ತಂತ್ರಜ್ಞಾನ ಆಧಾರಿತ ವಿಧಾನಕ್ಕೆ ಸಾಕ್ಷಿಯಾಗಿದೆ ಎಂದರು. ಇಂದು ರಾಷ್ಟ್ರೀಯ ಸುರಕ್ಷತೆಯ ಮಿಷನ್ ನಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯ ಕೈಜೋಡಿಸಿವೆ ಎಂದು ಹೇಳಿದರು. ಉತ್ತರ ಪ್ರದೇಶ ಮತ್ತು ತಮಿಳುನಾಡು ರಕ್ಷಣಾ ಕಾರಿಡಾರ್ ಗಳ ಹೊಸ ವಿಧಾನಗಳನ್ನು ಉದಾಹರಣೆಯಾಗಿ ಉಲ್ಲೇಖಿಸಿದರು. ಇತ್ತೀಚಿನ ವರ್ಷಗಳಲ್ಲಿ ಕೈಗೊಂಡ ನೀತಿ ಬದಲಾವಣೆಗಳ ಕಾರಣದಿಂದಾಗಿ ದೇಶದಲ್ಲಿ ಎಂಎಸ್ಎಂಇ ವಲಯದಲ್ಲಿ ಯುವಕರಿಗೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ ಎಂದು ಹೇಳಿದರು. “ಕಳೆದ 5 ವರ್ಷಗಳಲ್ಲಿ ನಮ್ಮ ರಕ್ಷಣಾ ರಫ್ತು ಪ್ರಮಾಣ ಶೇ.325ರಷ್ಟು ಹೆಚ್ಚಳವಾಗಿದೆ.” ಎಂದು ಹೇಳಿದರು.

ನಮ್ಮ ಗುರಿ ಎಂದರೆ ನಮ್ಮ ಕಂಪನಿಗಳು ತಮ್ಮ ಉತ್ಪನ್ನಗಳಲ್ಲಿ ಮಾತ್ರ ಪರಿಣತಿಯನ್ನು ಸ್ಥಾಪಿಸುವುದೇ ಅಲ್ಲದೆ ಜಾಗತಿಕ ಬ್ರಾಂಡ್ ಗಳಾಗಿ ರೂಪುಗೊಳ್ಳಬೇಕು ಎಂಬುದು. ಸ್ಪರ್ಧಾತ್ಮಕ ದರ ನಮ್ಮ ಬಲವಾಗಿದೆ. ಗುಣಮಟ್ಟ ಮತ್ತು ವಿಶ್ವಾಸಾರ್ಹತೆ ನಮ್ಮ ಹೆಗ್ಗುರುತಾಗಿದೆ ಎಂದು ಅವರು ಹೇಳಿದರು. 21ನೇ ಶತಮಾನದಲ್ಲಿ ಯಾವುದೇ ದೇಶದ ಅಥವಾ ಯಾವುದೇ ಕಂಪನಿಯ ಪ್ರಗತಿ ಮತ್ತು ಬ್ರಾಂಡ್ ಮೌಲ್ಯ ಅದರ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಆವಿಷ್ಕಾರವನ್ನು ನಿಶ್ಚಯಿಸುತ್ತದೆ ಎಂದರು. ಹೊಸ ಕಂಪನಿಗಳಲ್ಲಿ ಸಂಶೋಧನೆ ಮತ್ತು ಆವಿಷ್ಕಾರ ಕಾರ್ಯ ಸಂಸ್ಕೃತಿಯ ಭಾಗವಾಗಬೇಕು. ಹಾಗಾದಾಗ ಅವುಗಳು ಕೇವಲ  ಹೊಸತನ್ನು ಅಳವಡಿಸಿಕೊಳ್ಳುವ ಕಂಪನಿ ಮಾತ್ರವಾಗಿರದೆ ಭವಿಷ್ಯದ ತಂತ್ರಜ್ಞಾನಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತವೆ ಎಂದರು. ಈ ಮರು ವ್ಯವಸ್ಥಾಪನೆಯಿಂದಾಗಿ ಹೊಸ ಕಂಪನಿಗಳಿಗೆ ಆವಿಷ್ಕಾರ ಮತ್ತು ಪರಿಣತಿಯನ್ನು ಪೋಷಿಸಲು ಹೆಚ್ಚಿನ ಸ್ವಾಯತ್ತತೆ ದೊರಕಲಿದೆ ಮತ್ತು ಹೊಸ ಕಂಪನಿಗಳು ಅಂತಹ ಪ್ರತಿಭೆಗಳನ್ನು ಉತ್ತೇಜಿಸುತ್ತವೆ ಎಂದು ಹೇಳಿದರು. ಈ ಕಂಪನಿಗಳ ಮೂಲಕ ನವೋದ್ಯಮಗಳು ತಮ್ಮ ಹೊಸ ಪಯಣದ ಭಾಗವಾಗಲಿವೆ ಮತ್ತು ಅವು ಪರಸ್ಪರ ಸಂಶೋಧನೆ ಮತ್ತು ಪರಿಣತಿಯನ್ನು ಬಳಸಿಕೊಳ್ಳಲಿವೆ ಎಂದರು.

ಸರ್ಕಾರ ಹೊಸ ಕಂಪನಿಗಳಿಗೆ ಕೇವಲ ಉತ್ತಮ ಉತ್ಪಾದನಾ ವಾತಾವರಣವನ್ನಷ್ಟೇ ನೀಡಿಲ್ಲ. ಅದರ ಜತೆಗೆ ಸಂಪೂರ್ಣ ಕಾರ್ಯ ನಿರ್ವಹಣಾ ಸ್ವಾಯತ್ತತೆಯನ್ನು ನೀಡಿದೆ ಎಂದು ಅವರು ಉಲ್ಲೇಖಿಸಿದರು. ನೌಕರರ ಹಿತಾಸಕ್ತಿಯನ್ನು ಸಂಪೂರ್ಣವಾಗಿ ರಕ್ಷಿಸುವುದನ್ನು ಸರ್ಕಾರ ಖಾತ್ರಿಪಡಿಸುತ್ತದೆ ಎಂದು  ಅವರು ಪುನರುಚ್ಚರಿಸಿದರು.

ಕಾರ್ಯನಿರ್ವಹಣಾ ಸ್ವಾಯತ್ತತೆ, ದಕ್ಷತೆ ವೃದ್ಧಿಗೆ ಮತ್ತು ಹೊಸ ಪ್ರಗತಿಯ ಸಂಭವನೀಯತೆ ಮತ್ತು ಆವಿಷ್ಕಾರ ಬಳಸಿಕೊಳ್ಳಲು ಸರ್ಕಾರ ಶಸ್ತ್ರಾಸ್ತ್ರ ಕಾರ್ಖಾನೆ ಮಂಡಳಿಯನ್ನು ಪರಿವರ್ತಿಸಿ ಶೇಕಡ 100ರಷ್ಟು ಸರ್ಕಾರಿ ಒಡೆತನ ಇರುವ 7 ಕಾರ್ಪೊರೇಟ್ ಕಂಪನಿಗಳನ್ನು ಸೃಷ್ಟಿಸಲು ನಿರ್ಧರಿಸಿದೆ. ದೇಶವನ್ನು ರಕ್ಷಣಾ ಸನ್ನದ್ಧ ರಾಷ್ಟ್ರವಾಗಿ ಸಿದ್ಧಪಡಿಸುವುದು ಮತ್ತು ಸ್ವಾವಲಂಬನೆ ಸಾಧಿಸುವುದು ಈ ಕ್ರಮದ ಉದ್ದೇಶವಾಗಿದೆ. ಅದರಂತೆ 7 ಹೊಸ ರಕ್ಷಣಾ ಕಂಪನಿಗಳನ್ನು ಸ್ಥಾಪಿಸಲಾಗಿದೆ. ಅವುಗಳೆಂದರೆ ಮುನಿಷನ್ಸ್ ಇಂಡಿಯಾ ಲಿಮಿಟೆಡ್ (ಎಂಐಎಲ್); ಆರ್ಮೊರ್ಡ್ ವೆಹಿಕಲ್ಸ್(ಶಸ್ತ್ರ ಸಜ್ಜಿತ ವಾಹನಗಳು) ನಿಗಮ ಲಿಮಿಟೆಡ್(ಎವಿಎಎನ್ ಐ); ಅಡ್ವಾನ್ಸ್ಡ್ ವೆಪನ್ಸ್ ಅಂಡ್ ಎಕ್ಯೂಪ್ ಮೆಂಟ್ ಇಂಡಿಯಾ ಲಿಮಿಟೆಡ್(ಎಡಬ್ಲ್ಯೂಇ ಇಂಡಿಯಾ); ಟ್ರೂಪ್ ಕಂಫರ್ಟ್ಸ್ ಲಿಮಿಟೆಡ್(ಟಿಸಿಎಲ್); ಯಂತ್ರ ಇಂಡಿಯಾ ಲಿಮಿಟೆಡ್ (ವೈಐಎಲ್); ಇಂಡಿಯಾ ಒಪ್ಟೆಲ್ ಲಿಮಿಟೆಡ್(ಐಒಎಲ್ ) ಮತ್ತು ಗ್ಲೈಡರ್ಸ್ ಇಂಡಿಯಾ ಲಿಮಿಟೆಡ್(ಜಿಐಎಲ್).

***



(Release ID: 1764299) Visitor Counter : 219