ಪ್ರವಾಸೋದ್ಯಮ ಸಚಿವಾಲಯ

ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಪ್ರವಾಸೋದ್ಯಮ ತಾಣಗಳ ಸಾಮರ್ಥ್ಯ ಉತ್ತೇಜನಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಬುದ್ಧಿಸ್ಟ್ ಸರ್ಕಿಟ್ ಸಮ್ಮೇಳನ ಆಯೋಜನೆ


ಸ್ವದೇಶ ದರ್ಶನ ಯೋಜನೆಯಡಿ ಪ್ರವಾಸೋದ್ಯಮ ಸಚಿವಾಲಯದಿಂದ
ಮಧ್ಯಪ್ರದೇಶ, ಉತ್ತರಪ್ರದೇಶ, ಬಿಹಾರ, ಗುಜರಾತ್ ಮತ್ತು ಆಂಧ್ರಪ್ರದೇಶಗಳಲ್ಲಿ ಬೌದ್ಧರ ತಾಣಗಳ ಅಭಿವೃದ್ಧಿಗೆ 325.53 ಕೋಟಿ ರೂ. ವೆಚ್ಚದ ಐದು ಯೋಜನೆಗಳಿಗೆ ಅನುಮೋದನೆ

Posted On: 05 OCT 2021 12:32PM by PIB Bengaluru

ಪ್ರಮುಖ ಮುಖ್ಯಾಂಶಗಳು

  • ಪ್ರವಾಸೋದ್ಯಮ ಸಚಿವಾಲಯದಿಂದ 2021ರ ಅಕ್ಟೋಬರ್ 4 ರಿಂದ 8ರ ವರೆಗೆ ಬುದ್ಧಿಸ್ಟ್ ಸರ್ಕಿಟ್ ಟ್ರೈನ್ ಎಫ್ಎಎಂ ಪ್ರವಾಸ ಮತ್ತು ಸಮಾವೇಶ ಆಯೋಜನೆ.
  • ಸಮಾವೇಶದ ವೇಳೆ ಸರ್ಕಿಟ್ ನಲ್ಲಿ ಪ್ರವಾಸೋದ್ಯಮ ಉತ್ತೇಜನ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳ ಕುರಿತು ಸಮಾಲೋಚನೆ.

ದೇಶಾದ್ಯಂತ ಕೋವಿಡ್-19 ಪರಿಸ್ಥಿತಿ ಗಣನೀಯವಾಗಿ ಸುಧಾರಿಸುತ್ತಿರುವುದು ಮತ್ತು ಲಸಿಕೆ ನೀಡಿಕೆ ಗುರಿ ಸಾಧನೆ ಬೆನ್ನಲ್ಲೇ ಪ್ರವಾಸೋದ್ಯಮ ಸಚಿವಾಲಯ ಅತ್ಯಂತ ಸಕ್ರಿಯವಾಗಿ ಉದ್ಯಮದ ಪಾಲುದಾರರ ಸಹಭಾಗಿತ್ವದೊಂದಿಗೆ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಲಾರಂಭಿಸಿದೆ. ವಿದೇಶಿ ಹಾಗೂ ದೇಶೀಯ ಪ್ರವಾಸೋದ್ಯಮ ಭಾರತದಲ್ಲಿ ಒಟ್ಟಾರೆ ಪ್ರವಾಸೋದ್ಯಮದ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಭಾರತ ಹಲವು ವಿಭಿನ್ನ ಪ್ರವಾಸೋದ್ಯಮ ಉತ್ಪನ್ನಗಳನ್ನು ಹೊಂದಿದ್ದು, ಅದರಲ್ಲಿ ಬೌದ್ಧ ತಾಣಗಳ ಪ್ರವಾಸೋದ್ಯಮ ಉತ್ಪನ್ನಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಪ್ರವಾಸೋದ್ಯಮ ಸಚಿವಾಲಯ ಪ್ರವಾಸೋದ್ಯಮ ಉತ್ತೇಜನಕ್ಕೆ ಹಲವು ಉತ್ತೇಜಕ ಚಟುವಟಿಕೆಗಳನ್ನು ಕೈಗೆತ್ತಿಕೊಂಡಿದೆ ಮತ್ತು ಈ ಚಟುವಟಿಕೆಗಳು ಪ್ರಮುಖ ಗುರಿ ಎಂದರೆ ಪ್ರವಾಸೋದ್ಯಮ ತಾಣಗಳು, ಆಕರ್ಷಣೆಗಳು ಮತ್ತು ಉತ್ಪನ್ನಗಳ ಬಗ್ಗೆ ಜಾಗೃತಿ ಹೆಚ್ಚಿಸುವುದು.   

ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಪ್ರವಾಸೋದ್ಯಮ ತಾಣಗಳ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಪ್ರವಾಸೋದ್ಯಮ ಸಚಿವಾಲಯ ಇದೇ ಅಕ್ಟೋಬರ್ 04 ರಿಂದ 08ರ ವರೆಗೆ ಬುದ್ಧಿಸ್ಟ್ ಸರ್ಕಿಟ್ ಟ್ರೈನ್ ಎಫ್ಎಎಂ ಪ್ರವಾಸ ಮತ್ತು ಸಮ್ಮೇಳನವನ್ನು ಆಯೋಜಿಸಿದೆ. ಈ ಎಫ್ಎಎಂ ಪ್ರವಾಸದಲ್ಲಿ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಪ್ರಮುಖ ತಾಣಗಳ ಭೇಟಿ ಅಲ್ಲದೆ ಬೋಧ್ ಗಯಾ ಹಾಗೂ ವಾರಾಣಸಿಯ ಸಮಾವೇಶಗಳು ಸಹ ಒಳಗೊಂಡಿವೆ. ಈ ಕಾರ್ಯಕ್ರಮದಲ್ಲಿ ಪ್ರವಾಸ ಆಪರೇಟರ್ ಗಳು, ಹೋಟೆಲ್ ಪ್ರತಿನಿಧಿಗಳು, ಮಾಧ್ಯಮ ಮತ್ತು ಪ್ರವಾಸೋದ್ಯಮ ಸಚಿವಾಲಯ ಹಾಗೂ ರಾಜ್ಯ ಸರ್ಕಾರಗಳ ಅಧಿಕಾರಿಗಳು ಸೇರಿ ಸುಮಾರು 125 ಪ್ರತಿನಿಧಿಗಳು ಭಾಗವಹಿಸುವ ಸಾಧ್ಯತೆ ಇದೆ. ಇವರಲ್ಲದೆ, ಸುಮಾರು 100 ಸ್ಥಳೀಯ ಟೂರ್ ಆಪರೇಟರ್ ಗಳು ಮತ್ತು ಪ್ರವಾಸೋದ್ಯಮ ಹಾಗೂ ಆತಿಥ್ಯ ವಲಯಕ್ಕೆ ಸಂಬಂಧಿಸಿದ ಇತರೆ ಪಾಲುದಾರರು ಬೋಧ್ ಗಯಾ ಮತ್ತು ವಾರಾಣಸಿಯಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಸರ್ಕಿಟ್ ನಲ್ಲಿ ಪ್ರವಾಸೋದ್ಯಮ ಉತ್ತೇಜನ ಮತ್ತು ಅಭಿವೃದ್ಧಿ ಕುರಿತಂತೆ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ.  

ಭಾರತವು ಇತಿಹಾಸ, ಸಂಸ್ಕೃತಿ, ಸಿದ್ಧಾಂತ, ಪರಂಪರೆ ಮತ್ತು ಧಾರ್ಮಿಕವಾಗಿ ವಿಶ್ವದ ಅತಿದೊಡ್ಡ ನಿಕ್ಷೇಪವಾಗಿದೆ ಮತ್ತು ಇವೆಲ್ಲಾ ದೇಶದಲ್ಲಿ ಪ್ರವಾಸೋದ್ಯಮಿಗಳು ಮತ್ತು ಯಾತ್ರಾರ್ಥಿಗಳಿಗೆ ಹೆಚ್ಚು ಅಪೇಕ್ಷಣೀಯ ಸ್ಥಳವಾಗಿವೆ. ಭಾರತ ಶ್ರೀಮಂತ ಪ್ರಾಚೀನ ಬೌದ್ಧ ಪರಂಪರೆಯನ್ನು ಹೊಂದಿದ್ದು, ಬುದ್ಧ ದೇವನ ಜೀವನಕ್ಕೆ ಸಂಬಂಧಿಸಿದ ಹಲವು ಪ್ರಮುಖ ತಾಣಗಳಿವೆ. ಭಾರತದಲ್ಲಿ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಪ್ರವಾಸೋದ್ಯಮ ತಾಣಗಳು ವಿಪುಲ ಸಾಮರ್ಥ್ಯವನ್ನು ಹೊಂದಿವೆ. ಭಾರತದ ಬೌದ್ಧ ಪರಂಪರೆ ಜಗತ್ತಿನಾದ್ಯಂತ ಬೌದ್ಧ ಧರ್ಮ ಅನುಯಾಯಿಗಳಿಗೆ ತೀವ್ರ ಆಸಕ್ತಿ ಮೂಡಿಸುತ್ತದೆ ಮತ್ತು ಇದು ಸ್ಫೂರ್ತಿಯ ಒಂದು ಪ್ರಮುಖ ಶಕ್ತಿಯಾಗಿಯೇ ಉಳಿದಿದೆ ಹಾಗೂ ಭಾರತದ ಶ್ರೇಷ್ಠ ಪರಂಪರೆ ಮತ್ತು ಸಂಪ್ರದಾಯಗಳಿಗೆ ಮಾರ್ಗದರ್ಶಿಯಾಗಿದೆ. ಪ್ರವಾಸೋದ್ಯಮ ಸಚಿವಾಲಯ ಈ ಅಂಶಗಳನ್ನು ಬಳಸಿಕೊಂಡು ‘ಬುದ್ಧನ ನೆಲೆವೀಡು’ ಭಾರತ ಎಂಬುದನ್ನು ಪ್ರದರ್ಶಿಸುತ್ತಿದೆ.

ಬೌದ್ಧ ಧರ್ಮ 2500 ವರ್ಷಗಳಿಗೂ ಹಿಂದೆ ಪ್ರಾಚೀನ ಭಾರತದಲ್ಲಿ ಜನ್ಮತಳೆಯಿತು ಮತ್ತು ಅದು ನಂತರ ಏಷ್ಯಾದುದ್ದಕ್ಕೂ ಹರಡಿತು. ಸುಮಾರು 500 ದಶಲಕ್ಷಕ್ಕೂ ಅಧಿಕ ಅನುಯಾಯಿಗಳಿದ್ದು, ಬೌದ್ಧ ಧರ್ಮೀಯರು ಜಗತ್ತಿನ ಒಟ್ಟಾರೆ ಜನಸಂಖ್ಯೆಯ ಶೇ.7ರಷ್ಟನ್ನು ಪ್ರತಿನಿಧಿಸುತ್ತಾರೆ. ಪವಿತ್ರ ತಾಣಗಳು ಬುದ್ಧನ ಜೀವನ ಚರಿತ್ರೆಗೆ ಸಂಬಂಧಿಸಿದ ಸ್ಥಳಗಳಾಗಿದ್ದು, ಅವುಗಳಲ್ಲಿ ಪ್ರಮುಖವಾಗಿ ಬುದ್ಧನ ಜನ್ಮಸ್ಥಳ ಲುಂಬಿಣಿ(ನೇಪಾಳ), ಬುದ್ಧ ಜ್ಞಾನೋದಯ ಪಡೆದ ಸ್ಥಳ ಬೋಧ್ ಗಯಾ, ಜ್ಞಾನೋದಯದ ನಂತರ ಬುದ್ಧ ಮೊದಲು ಸಾರಾನಾಥದಲ್ಲಿ ನೀಡಿದ ಧರ್ಮೋಪದೇಶ, ಇದು ಧರ್ಮಚಕ್ರಪ್ರವರ್ತನ ಎಂದು ಹೆಸರಾಗಿದೆ. ಖುಶಿನಗರ ಬುದ್ಧ ತನ್ನ ಅಂತಿಮ ನಿರ್ಗಮನಕ್ಕೆ ಅಥವಾ ಮಹಾಪರಿನಿರ್ವಾಣಕ್ಕೆ ಆಯ್ಕೆಮಾಡಿಕೊಂಡ ಜಾಗ, ನಳಂದಾ ಜಗತ್ತಿನ ಮೊದಲ ವಸತಿ ಒಳಗೊಂಡ ವಿಶ್ವವಿದ್ಯಾಲಯವಾಗಿದೆ ಮತ್ತು ಕಲಿಕೆಯ ಕೇಂದ್ರವಾಗಿತ್ತು. ರಾಜ್ ಗಿರ್ ನಲ್ಲಿ ಬುದ್ಧ ಹಲವು ತಿಂಗಳ ಕಾಲ ಧ್ಯಾನಸ್ಥರಾಗಿದ್ದರು ಮತ್ತು ಗ್ರಿಧಾರ್ ಕೂಟ (ಬಾವಲಿಗಳ ಬೆಟ್ಟ) ಅಲ್ಲಿ ಬೋಧನೆ ಮಾಡಿದ್ದರು. ಶ್ರಾವಸ್ತಿಯಲ್ಲಿ ಅವರು ಹಲವು ಶ್ಲೋಕಗಳನ್ನು ಕಲಿಸಿದ್ದರು ಮತ್ತು ವೈಶಾಲಿಯಲ್ಲಿ ಬುದ್ಧ ಕೊನೆಯ ಉಪನ್ಯಾಸ ನೀಡಿದ್ದರು. ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಸಚಿವಾಲಯ ಬೌದ್ಧ ತಾಣಗಳಾದ ಬೋಧ್ ಗಯಾ, ನಳಂದಾ, ರಾಜ್ ಗಿರ್, ವೈಶಾಲಿ, ಸಾರಾನಾಥ, ಶ್ರಾವಸ್ತಿ, ಖುಷಿನಗರ, ಕೌಶಂಬಿ, ಸಾನ್ ಕಿಸಾ ಮತ್ತು ಕಪಿಲವಸ್ತು ತಾಣಗಳನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಯೋಜನೆಯನ್ನು ರೂಪಿಸಿದೆ. ಸದ್ಯ ಈ ತಾಣಗಳು ರಾಷ್ಟ್ರವ್ಯಾಪಿ ಅಂದಾಜು ಶೇ.6ರಷ್ಟು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಅವುಗಳಲ್ಲಿ ಸಾರಾನಾಥ ಮತ್ತು ಬೋಧ್ ಗಯಾ ಮುಂಚೂಣಿಯಲ್ಲಿವೆ.

ವಾಯು, ರೈಲು, ರಸ್ತೆ ಮಾರ್ಗಗಳ ಮೂಲಕ ಸಂಪರ್ಕ ಸುಧಾರಣೆಗೆ ಸಚಿವಾಲಯ ನಾಲ್ಕು ಹಂತದ ಅಭಿವೃದ್ಧಿ ಕಾರ್ಯಸೂಚಿಯನ್ನು ಕೈಗೆತ್ತಿಕೊಂಡಿದೆ. ಆ ಮೂಲಕ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿ ಮತ್ತು ಅದರ ಅವಲಂಬಿತ ಸೇವೆಗಳು, ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರದರ್ಶಿಸುವುದು ಮತ್ತು ಉತ್ತೇಜಿಸುವುದು ಹಾಗೂ ಬ್ರಾಂಡಿಂಗ್ ಉನ್ನತೀಕರಣಕ್ಕಾಗಿ ಶ್ರಮಿಸುತ್ತಿದೆ. ಸ್ವದೇಶ ದರ್ಶನ ಯೋಜನೆಯಡಿ ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ಗುಜರಾತ್ ಮತ್ತು ಆಂಧ್ರಪ್ರದೇಶಗಳಲ್ಲಿ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ತಾಣಗಳ ಅಭಿವೃದ್ಧಿಗೆ 325.53 ಕೋಟಿ ವೆಚ್ಚದ ಐದು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಮತ್ತು ಆ ಅನುಮೋದಿತ ಯೋಜನೆಗಳು ಅನುಷ್ಠಾನದ ನಾನಾ ಹಂತದಲ್ಲಿವೆ. ಪ್ರಶಾದ್ ಯೋಜನೆಯಡಿ 44.19 ಕೋಟಿ ರೂ. ವೆಚ್ಚದ ಮೂರು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ವಾರಾಣಸಿಯಲ್ಲಿ ದೇಮಕ್ ಸ್ಥೂಪದಲ್ಲಿ ಬೆಳಕು ಮತ್ತು ಶಬ್ಧದ ಪ್ರದರ್ಶನ ಹಾಗೂ ಬುದ್ಧ ಥೀಮ್ ಪಾರ್ಕ್, ಸಾರಾನಾಥದಲ್ಲಿ 9.5 ಕೋಟಿ ರೂಪಾಯಿ ವೆಚ್ಚದಲ್ಲಿ ಬೌದ್ಧ ಕಟ್ಟಡಗಳ ಅಭಿವೃದ್ಧಿ ಕಾರ್ಯ ಪೂರ್ಣಗೊಂಡಿದೆ.

ಇದಲ್ಲದೆ ಪ್ರವಾಸೋದ್ಯಮ ಸಚಿವಾಲಯ ನಾನಾ ಯೋಜನೆಗಳಡಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಮೂಲಸೌಕರ್ಯ ಅಭಿವೃದ್ಧಿಯನ್ನು ಕೈಗೊಳ್ಳುತ್ತಿದೆ. ಭಾರತದೊಳಗೆ ಮತ್ತು ವಿದೇಶಿ ಮಾರುಕಟ್ಟೆಗಳಲ್ಲಿ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ನಾನಾ ತಾಣಗಳ ಉತ್ತೇಜನಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗಿದೆ. ಅದರ ಭಾಗವಾಗಿ ಭಾರತ ಪ್ರವಾಸೋದ್ಯಮ ಕಚೇರಿಗಳನ್ನು ವಿದೇಶಿ ಮಾರುಕಟ್ಟೆಗಳಲ್ಲಿ ತೆರೆದು, ಹಲವು ಪ್ರವಾಸ ಮತ್ತು ಪ್ರವಾಸೋದ್ಯಮ ಮೇಳಗಳಲ್ಲಿ ನಿರಂತರವಾಗಿ ಭಾಗವಹಿಸುವಂತೆ ಮಾಡಲಾಗಿದೆ. ಅಲ್ಲಿ ಭಾರತದ ಬೌದ್ಧರ ತಾಣಗಳ ಉತ್ತೇಜನಕ್ಕೆ ಪ್ರದರ್ಶನಗಳನ್ನು ನಡೆಸಲಾಗುತ್ತಿದೆ. ಅಲ್ಲದೆ ಪ್ರವಾಸೋದ್ಯಮ ಸಚಿವಾಲಯ ಭಾರತದಲ್ಲಿನ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ತಾಣಗಳನ್ನು ಜಗತ್ತಿನಾದ್ಯಂತ ಪ್ರಮುಖ ಮಾರುಕಟ್ಟೆಗಳಲ್ಲಿ ಉತ್ತೇಜಿಸುವ ದೃಷ್ಟಿಯಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ಬೌದ್ಧರ ಸಮ್ಮೇಳನಗಳನ್ನು ಆಯೋಜಿಸುತ್ತಿದೆ. ಮುಂಬರುವ ಅಂತಾರಾಷ್ಟ್ರೀಯ ಬೌದ್ಧರ ಸಮ್ಮೇಳನ 2021ರ ನವೆಂಬರ್ 17 ರಿಂದ 21ರ ವರೆಗೆ ನಿಗದಿಯಾಗಿದೆ. ಸಚಿವಾಲಯ ಬ್ರಾಂಡಿಂಗ್ ಮತ್ತು ಉತ್ತೇಜನಕ್ಕೆ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ರಾಷ್ಟ್ರೀಯ ಮ್ಯೂಸಿಯಂನಲ್ಲಿ ಲೈವ್ ವರ್ಚುವಲ್ ಪ್ರದರ್ಶನ, ವೆಬ್ ಪೋರ್ಟಲ್, ವಾರ್ಷಿಕ ಕಾರ್ಯಕ್ರಮಗಳ ಕ್ಯಾಲೆಂಡರ್, ಸಾಮಾಜಿಕ ಮಾಧ್ಯಮಗಳ ಮಾರುಕಟ್ಟೆ ಸೇರಿ ಹಲವು ಕಾರ್ಯಕ್ರಮಗಳು ಚಾಲ್ತಿಯಲ್ಲಿವೆ. ಜೊತೆಗೆ ವಿಯೆಟ್ನಾಂ, ಥೈಲ್ಯಾಂಡ್, ಜಪಾನ್, ದಕ್ಷಿಣ ಕೊರಿಯಾ, ಶ್ರೀಲಂಕಾ ಮತ್ತಿತರ ಪ್ರಮುಖ ಮಾರುಕಟ್ಟೆಗಳಲ್ಲಿ ಅಭಿಯಾನಗಳನ್ನು ನಡೆಸಲಾಗುತ್ತಿದೆ.  

ಪ್ರವಾಸೋದ್ಯಮ ಸಚಿವಾಲಯ ತನ್ನ ಇನ್ ಕ್ರಡಿಬಲ್ ಇಂಡಿಯಾ ವೆಬ್ ಸೈಟ್ ನಲ್ಲಿ ಬೌದ್ಧರ ತಾಣಗಳ ವಿವರಗಳನ್ನು ಪ್ರದರ್ಶಿಸುತ್ತಿದೆ ಮತ್ತು ಅಲ್ಲದೆ ನಿರ್ದಿಷ್ಟ ವೈಬ್ ಸೈಟ್ www.indiathelandofbuddha.in. ಅನ್ನು ಅಭಿವೃದ್ಧಿಪಡಿಸಿದೆ. ಈ ವೆಬ್ ಸೈಟ್ ಭಾರತದಲ್ಲಿನ ಶ್ರೀಮಂತ ಬುದ್ಧರ ಪಾರಂಪರಿಕ ತಾಣಗಳನ್ನು ಪ್ರತಿಬಿಂಬಿಸುವುದು ಮತ್ತು ಉತ್ತೇಜಿಸುವ ಗುರಿ ಹೊಂದಿದೆ. ಆಧುನಿಕ ಸ್ತೂಪಗಳು ಸೇರಿದಂತೆ ಬೌದ್ಧಿಕ ಪರಂಪರೆಯಲ್ಲಿ ಅವರ ಅನುಯಾಯಿಗಳು ಬಿಟ್ಟುಹೋದ ಮತ್ತು ಬುದ್ಧ ಸ್ವತಃ ಭೇಟಿ ಮಾಡಿದ ದೇಶದ ಪ್ರಮುಖ ತಾಣಗಳನ್ನು ಪರಿಚಯಿಸಲು ಒತ್ತು ನೀಡಲಾಗಿದೆ. ಈ ವೆಬ್ ಸೈಟ್ ಹಲವು ಪ್ರಮುಖ ಉಪಯುಕ್ತ ಅಂಶಗಳನ್ನೊಳಗೊಂಡಿದ್ದು, ಅದು ಹೆಚ್ಚು ಸಂವಾದಾತ್ಮಕವಾಗಿದೆ ಮತ್ತು ಪ್ರವಾಸಿಗರಿಗೆ ವೆಬ್ ಸೈಟ್ ನೀಡುತ್ತದೆ. ಈ ವೆಬ್ ಸೈಟ್ ನ ಉದ್ದೇಶ ಭಾರತದಲ್ಲಿನ ಬೌದ್ಧಿಕ ಪರಂಪರೆಯನ್ನು ಪ್ರಚುರಪಡಿಸುವುದಾಗಿದೆ ಹಾಗೂ ದೇಶದಲ್ಲಿನ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ತಾಣಗಳ ಪ್ರವಾಸೋದ್ಯಮ ಉತ್ತೇಜಿಸುವುದು ಹಾಗೂ ಬೌದ್ಧ ಧರ್ಮದಲ್ಲಿ ಆಸಕ್ತಿ ಹೊಂದಿರುವ ಸಮುದಾಯಗಳು ಮತ್ತು ದೇಶಗಳ ನಡುವೆ ಸ್ನೇಹ ಸಂಬಂಧ ಬೆಳೆಸುವುದಾಗಿದೆ. ಈ ವೆಬ್ ಸೈಟ್ ಬೌದ್ಧ ಧರ್ಮದ ಪರಂಪರೆಯನ್ನು ತಿಳಿಯಲು ಪ್ರವಾಸಿಗರಿಗೆ ಅತ್ಯಂತ ಸುಲಭ ವಿಧಾನವಾಗಿದೆ ಮತ್ತು ತಮ್ಮ ಆಯ್ಕೆಗೆ ತಕ್ಕಂತೆ ಪ್ರವಾಸಿಗರು ಮಾಹಿತಿಯನ್ನು ಬ್ರೌಸ್ ಮಾಡಲು ಅವಕಾಶ ಒದಗಿಸುತ್ತದೆ. ಈ ವೆಬ್ ಸೈಟ್ ಸಂವಾದಾತ್ಮಕವಾಗಿದ್ದು, ಬೌದ್ಧ ಧರ್ಮದ ಬಗ್ಗೆ ಬುದ್ಧನ ಹೆಜ್ಜೆಗುರುತುಗಳು, ಬೌದ್ಧಿಕ ಪರಂಪರೆ ಸ್ತೂಪಗಳು ಹಾಗೂ ಹಲವು ವಿಷಯಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತದೆ.

ಅಲ್ಲದೆ ಸಚಿವಾಲಯ ಥಾಯ್, ಜಪಾನಿಸ್, ವಿಯೆಟ್ನಾಮೀಸ್ ಮತ್ತು ಚೈನೀಸ್ ಭಾಷೆಗಳಲ್ಲಿ ಭಾಷಾ ಪ್ರವಾಸೋದ್ಯಮ ಸಹಾಯಕರ ತರಬೇತಿ ಮೂಲಕ ಸಾಮರ್ಥ್ಯವೃದ್ಧಿಗೆ ಯೋಜನೆಗಳನ್ನು ಹಾಕಿಕೊಂಡು ಕಾರ್ಯೋನ್ಮುಖವಾಗಿದೆ. 2018 ರಿಂದ 2020ರ ನಡುವಿನ ಅವಧಿಯಲ್ಲಿ ಈ ಭಾಷೆಗಳಲ್ಲಿ 525 ಜನರಿಗೆ ತರಬೇತಿ ನೀಡಲಾಗಿದೆ. 2020ರಿಂದ 2023ರ ವರೆಗೆ 600ಕ್ಕೂ ಅಧಿಕ ಮಂದಿಗೆ ತರಬೇತಿ ನೀಡಲಾಗುವುದು. ಏಷ್ಯಾದ ಬಹುತೇಕ ಭಾಗಗಳಲ್ಲಿ ಬೌದ್ಧ ಧರ್ಮ ಹರಡಿಕೊಂಡಿರುವುದರಿಂದ ವಿಶೇಷವಾಗಿ ಶೇ.97ರಷ್ಟು ಬೌದ್ಧ ಧರ್ಮೀಯರು ಪೂರ್ವ ಮತ್ತು ಆಗ್ನೇಯ ಏಷ್ಯಾ ನಡುವೆ ನೆಲೆಸಿದ್ದಾರೆ. ಆದ್ದರಿಂದ ಪ್ರವಾಸಿಗರಿಗೆ ಭಾಷಾ ಸಂಪರ್ಕ ಬೆಳಸುವುದು ಅತ್ಯಗತ್ಯವಾಗಿದೆ.

ಈ ಪ್ರದೇಶದ ಪ್ರಾಚೀನ ಬೇರುಗಳ ಮೂಲಕ ಪ್ರವಾಸೋದ್ಯಮವನ್ನು ಬಳಕೆ ಮಾಡಿಕೊಳ್ಳುವುದು ಮತ್ತು ನವ ಭಾರತದ ಮನೋಧರ್ಮವನ್ನು ಸೆರೆಹಿಡಿಯುವುದರ ಜೊತೆಗೆ ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ಮೂಲಸೌಕರ್ಯವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

***



(Release ID: 1761142) Visitor Counter : 478