ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿ, ಸಿಬ್ಬಂದಿ ಮತ್ತು ವಿಜ್ಞಾನ ಸಚಿವಾಲಯಗಳಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚರ್ಚಿಸಿದರು

Posted On: 08 SEP 2021 7:14PM by PIB Bengaluru

ಪ್ರಸ್ತುತ ದೆಹಲಿಯ ಭೇಟಿಯಲ್ಲಿರುವ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ (ಸ್ವತಂತ್ರ ನಿರ್ವಹಣೆ) ಸಚಿವರು; ಭೂ ವಿಜ್ಞಾನ ಖಾತೆ (ಸ್ವತಂತ್ರ ನಿರ್ವಹಣೆ) ಸಚಿವರು; ಪ್ರಧಾನಮಂತ್ರಿಗಳ ಕಾರ್ಯಾಲಯದ ರಾಜ್ಯ ಸಚಿವರು; ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಖಾತೆ ರಾಜ್ಯ ಸಚಿವರು; ಅಣು ಇಂಧನ ಖಾತೆ ರಾಜ್ಯ ಸಚಿವರು; ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿ ಅರ್ಧಗಂಟೆಗಳ ಕಾಲ ಸಭೆ ನಡೆಸಿ, ಸಿಬ್ಬಂದಿ ಮತ್ತು ವಿಜ್ಞಾನ ಸಚಿವಾಲಯಗಳಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚರ್ಚಿಸಿದರು.

ಈ ಚರ್ಚೆಯ ವೇಳೆ, ಮುಖ್ಯಮಂತ್ರಿಯವರು ರಾಜ್ಯ ಸರ್ಕಾರ ಮಾಡಿದ ಎಲ್ಲ ಮನವಿಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಓಪಿಟಿ)ಯನ್ನು ಪ್ರಶಂಸಿಸಿದರು. ಅವರು ರಾಜ್ಯ ಕೇಡರ್ ಪರಿಶೀಲನೆ ನಡೆಸಲು ನೆರವು ಕೋರಿದರು. ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಗಳನ್ನು ಐ.ಎ.ಎಸ್‌.ಗೆ ಸೇರ್ಪಡೆಮಾಡಿಕೊಳ್ಳುವ ವಿಚಾರ ಕುರಿತಂತೆಯೂ ಬೊಮ್ಮಾಯಿ ಅವರು ಚರ್ಚಿಸಿದರು.

ಡಾ. ಜಿತೇಂದ್ರ ಸಿಂಗ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಿರುವ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸಿದರು. ವಿವಿಧ ರಾಜ್ಯಗಳಿಗೆ ಸಂಬಂಧಿಸಿದ ಎಲ್ಲಾ ಸೇವಾ ವಿಚಾರಗಳ ವಿಲೇವಾರಿ ಮಾಡುವಲ್ಲಿ ಡಿಒಪಿಟಿ ಪ್ರಾಮಾಣಿಕವಾಗಿದ್ದು, ಅಗತ್ಯವಿರುವ ಪ್ರಕ್ರಿಯೆಗಳು ಮತ್ತು ಅವಶ್ಯಕತೆಗಳನ್ನು ಆಯಾ ರಾಜ್ಯ ಸರ್ಕಾರಗಳು ಪೂರೈಸಿದ ತಕ್ಷಣ, ಡಿಒಪಿಟಿ ಪ್ರಕ್ರಿಯೆಯನ್ನು ತ್ವರಿತವಾಗಿ ಮುಂದುವರಿಸುತ್ತದೆ ಎಂದು ಅವರು ಮುಖ್ಯಮಂತ್ರಿಗೆ ಭರವಸೆ ನೀಡಿದರು.

ಡಾ. ಜಿತೇಂದ್ರ ಸಿಂಗ್ ಅವರು ಬೊಮ್ಮಾಯಿ ಅವರಿಗೆ ಬೆಂಗಳೂರಿನಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಿವಿಧ ಚಟುವಟಿಕೆಗಳ ಕುರಿತು ತಾಜಾ ಮಾಹಿತಿ ನೀಡಿದರು. ಬೆಂಗಳೂರು ಪ್ರಮುಖ ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳಲ್ಲಿ ಒಂದಾಗಿರುವ ಹೆಮ್ಮೆಯನ್ನು ಹೊಂದಿದೆ ಮತ್ತು ವಿಶ್ವದಾದ್ಯಂತದ ವೈಜ್ಞಾನಿಕ ಸಮುದಾಯದ ಮನ್ನಣೆಯನ್ನು ಪಡೆಯುತ್ತಿದೆ ಎಂದರು. ಕ್ಷೇತ್ರವಾರು ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಬಳಸಬಹುದಾದ ಬಾಹ್ಯಾಕಾಶ ತಂತ್ರಜ್ಞಾನದ ವಿವಿಧ ಅನ್ವಯಿಕಗಳನ್ನು ಅವರು ಮುಖ್ಯಮಂತ್ರಿಗಳಿಗೆ ವಿವರಿಸಿದರು.

***



(Release ID: 1753323) Visitor Counter : 280


Read this release in: English , Urdu , Hindi , Punjabi