ಪ್ರಧಾನ ಮಂತ್ರಿಯವರ ಕಛೇರಿ

ಕೆಂಪುಕೋಟೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವ ಉದ್ದೇಶಿಸಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 15 AUG 2021 1:41PM by PIB Bengaluru

ನನ್ನ ಪ್ರೀತಿಯ ದೇಶವಾಸಿಗಳೇ,

ನಿಮ್ಮೆಲ್ಲರಿಗೂ ಶುಭಾಶಯಗಳು. ಭಾರತವು ಸ್ವಾತಂತ್ರ್ಯ ಗಳಿಸಿದ ಅಮೃತ ಮಹೋತ್ಸವ ಆಚರಿಸುತ್ತಿರುವ ಸುಸಂದರ್ಭದಲ್ಲಿ ಭಾರತವನ್ನು ಮತ್ತು ಭಾರತದ ಪ್ರಜಾಪ್ರಭುತ್ವವನ್ನು ಪ್ರೀತಿಸುವ ವಿಶ್ವದೆಲ್ಲೆಡೆ ಇರುವ ಜನರಿಗೆ 75ನೇ ಸ್ವಾತಂತ್ರ್ಯೋತ್ಸವದ ಶುಭ ಕಾಮನೆಗಳನ್ನು ಅರ್ಪಿಸುತ್ತೇನೆ.

ದೇಶವಿಂದು ಸ್ವಾತಂತ್ರ್ಯ ಗಳಿಸಿದ 75ನೇ ಸಂಭ್ರಮೋತ್ಸವ ಮತ್ತು ಅಮೃತ ಮಹೋತ್ಸವದ ಸಂತಸದಲ್ಲಿರುವಾಗ, ಇಡೀ ದೇಶವೇ ಒಟ್ಟಾಗಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕೆಚ್ಚೆದೆಯ ಅಪ್ರತಿಮ ನಾಯಕರಿಗೆ ತಲೆಬಾಗಿ ನಮಿಸುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹಗಲಿರುಳು ನಿರಂತರ ಹೋರಾಡಿ, ದೇಶವನ್ನು ಸಂರಕ್ಷಿಸಲು ತ್ಯಾಗ ಬಲಿದಾನ ಮಾಡಿದ  ನಮ್ಮ ಹೀರೊಗಳನ್ನು ನೆನಪು ಮಾಡಿಕೊಳ್ಳುತ್ತಿದ್ದೇವೆ.

ದೇಶದಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಸಾಮೂಹಿಕ ಆಂದೋಲನವಾಗಿ ಪರಿವರ್ತಿಸಿದ ಪೂಜ್ಯ ಮಹಾತ್ಮ ಗಾಂಧೀಜಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ತಮ್ಮ ಜೀವನವನ್ನೇ ತ್ಯಾಗ ಮಾಡಿದ ನೇತಾಜಿ ಸುಭಾಷ್ ಚಂದ್ರ ಬೋಸ್, ಮಹಾನ್ ಕ್ರಾಂತಿಕಾರಿ ನಾಯಕರಾದ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಬಿಸ್ಮಿಲ್ ಮತ್ತು ಅಶ್ಫಾಖುಲ್ಲಾ ಖಾನ್, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಗೈದಿನ್ಲಿ, ಅಸ್ಸಾಂನ ಶೂರರಾದ ಮಾತಾಂಗಿನ ಹಜ್ರಾ, ದೇಶದ ಚೊಚ್ಚಲ ಪ್ರಧಾನ ಮಂತ್ರಿ ಪಂಡಿತ್ ಜವಾಹರ್ ಲಾಲ್ ನೆಹರು, ಸರ್ದಾರ್ ವಲ್ಲಭ್ ಭಾಯ್ ಪಟೇಲ್ ಇವರೆಲ್ಲರೂ ದೇಶವನ್ನು ಏಕೀಕೃತ ರಾಷ್ಟ್ರವಾಗಿ ಪರಿವರ್ತಿಸಿದ ಮಹಾಪುರುಷರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭವಿಷ್ಯದ ಉಜ್ವಲ ಭಾರತಕ್ಕೆ ಸುಗಮವಾದ ಹಾದಿ ತೋರಿಸಿಕೊಟ್ಟರು. ಈ ಎಲ್ಲಾ ಉದಾತ್ತ ಮತ್ತು ಧೀಮಂತ ನಾಯಕರಿಗೆ ದೇಶ ಸದಾಕಾಲ ಋಣಿಯಾಗಿರಲಿದೆ.

ಭಾರತವು ಮುತ್ತು ರತ್ನ ಹರಳುಗಳಿಂದ ಸಮೃದ್ಧವಾಗಿರುವ ರಾಷ್ಟ್ರ. ದೇಶದ ಇತಿಹಾಸ ಪುಟಗಳಲ್ಲಿ ದಾಖಲಾಗದಿದ್ದರೂ, ದೇಶವನ್ನು ಸಮೃದ್ಧವಾಗಿ ಕಟ್ಟಿ ಬೆಳೆಸಲು ಕಾರಣರಾಗಿರುವ ಅಸಂಖ್ಯಾತ ಹೀರೊಗಳಿಗೆ ನಾನಿಂದು ಗೌರವದಿಂದ ನಮಿಸುತ್ತೇನೆ, ಅಭಿನಂದಿಸುತ್ತೇನೆ. ಪ್ರತಿ ಕಾಲಘಟ್ಟದಲ್ಲಿ ದೇಶ ಮುನ್ನಡೆಯಲು ಅಪ್ರತಿಮ ನಾಯಕರ ನಿರಂತರ ಹೋರಾಟ, ಶ್ರಮಗಳೇ ಕಾರಣ.

ಭಾರತ ತನ್ನ ತಾಯಿ ನೆಲಕ್ಕಾಗಿ, ತನ್ನ ಸಂಸ್ಕೃತಿಗಾಗಿ, ತನ್ನ ಸ್ವಾತಂತ್ರ್ಯಕ್ಕಾಗಿ  ಶತಮಾನಗಳ ಕಾಲ ಹೋರಾಡಿದೆ. ಈ ದೇಶವು ಶತಮಾನಗಳಿಂದಲೂ ಗುಲಾಮಗಿರಿಯ ನೋವು ಮತ್ತು ಸ್ವಾತಂತ್ರ್ಯದ ಹಂಬಲವನ್ನು ಬಿಟ್ಟುಕೊಡಲಿಲ್ಲ. ಅನೇಕ ಸೋಲು ಗೆಲುವುಗಳ ನಡುವೆ, ಸ್ವಾತಂತ್ರ್ಯ ಗಳಿಸುವ ಮನದಾಳದ ಆಕಾಂಕ್ಷೆ ಎಂದಿಗೂ ಕಮರಲಿಲ್ಲ. ದೇಶದ ಎಲ್ಲಾ ಹೋರಾಟಗಳಿಗೆ ಎದೆ ಒಡ್ಡಿದ ನಮ್ಮ ಅಪ್ರತಿಮ ನಾಯಕರನ್ನು, ಶತಮಾನಗಳ ಕಾಲ ಹಗಲಿರುಳು ಹೋರಾಡಿದ ಕೆಚ್ಚೆದೆಯ ಯೋಧರಿಗೆ ತಲೆಬಾಗಿ ನಮಿಸಲು, ಅವರ ತ್ಯಾಗ ಬಲಿದಾನಗಳನ್ನು ಸ್ಮರಿಸಲು ನಮಗಿಂದು ಕಾಲ ಕೂಡಿಬಂದಿದೆ. ನಮ್ಮೆಲ್ಲಾ ಗೌರವಗಳಿಗೆ ಅವರು ಪೂಜನೀಯರಾಗಿದ್ದಾರೆ.

ನಮ್ಮ ವೈದ್ಯರು, ದಾದಿಯರು, ಅರೆ ವೈದ್ಯಕೀಯ ಸಿಬ್ಬಂದಿ, ನೈರ್ಮಲ್ಯ ಸಿಬ್ಬಂದಿ, ವಿಜ್ಞಾನಿಗಳು ಮತ್ತು ಸಂಶೋಧಕರು ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಸಂಪೂರ್ಣ ತೊಡಗಿಸಿಕೊಂಡಿದ್ದರು. ಜಾಗತಿಕ ಕೊರೊನಾ ಸಾಂಕ್ರಾಮಿಕ ಸೋಂಕು ದೇಶದಲ್ಲಿ ಕಾಣಿಸಿಕೊಂಡಾಗ ಲಕ್ಷಾಂತರ ದೇಶವಾಸಿಗಳು ಸೇವೆಯ ಸ್ಫೂರ್ತಿಯೊಂದಿಗೆ ಜನತೆಯ ರಕ್ಷಣೆಯಲ್ಲಿ ತೊಡಗಿಸಿಕೊಂಡರು. ಅವರೆಲ್ಲರಿಗೂ ಇಡೀ ದೇಶವೇ ಗೌರವ ಸಲ್ಲಿಸಿದೆ.

ಇದೀಗ ದೇಶದ ವಿವಿಧೆಡೆ ಭಾರಿ ಮಳೆ ಪ್ರವಾಹ ಕಾಣಿಸಿಕೊಂಡಿದೆ. ಭೂಕುಸಿತವೂ ಉಂಟಾಯಿತು. ದುರಂತ ಸುದ್ದಿಗಳು ಸಹ ಬರುತ್ತಿವೆ. ದೇಶದ ಹಲವು ಭಾಗಗಳಲ್ಲಿ ಜನರು ಸಂಕಷ್ಟ ಎದುರಿಸಿದರು. ಆ ಸಂಕಷ್ಟ ಕಾಲದಲ್ಲಿ ಕೇಂದ್ರ ಮತತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ಸಿದ್ಧತೆಯೊಂದಿಗೆ ಜನರೊಂದಿಗೆ ಭಾಗಿಯಾಗಿವೆ. ಟೋಕಿಯೊ ಅಥ್ಲೆಟಿಕ್ಸ್|ನಲ್ಲಿ ನಮ್ಮ ದೇಶಕ್ಕೆ ಪ್ರಶಸ್ತಿ ಮತ್ತು ಕೀರ್ತಿ ತಂದುಕೊಟ್ಟ ಯುವ ಅಥ್ಲೀಟ್|ಗಳು ಇಂದು ಕಾರ್ಯಕ್ರಮದಲ್ಲಿ ನಮ್ಮೊಂದಿಗಿದ್ದಾರೆ. ಕೆಲವರು ಇಲ್ಲೇ ಉಪಸ್ಥಿತರಿದ್ದಾರೆ. ಸಂಭ್ರಮದ 75ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಎಲ್ಲರಿಗೂ ಹಾಗೂ ದೇಶದ ಸಮಗ್ರ ಜನತೆಗೆ ನಾನಿಂದು ಮನವಿ ಮಾಡುವುದೇನೆಂದರೆ, ನಮ್ಮ ಸಾಧಕ ಕ್ರೀಡಾಪಟುಗಳನ್ನು ಗೌರವಿಸುವ ಸಲುವಾಗಿ, ಕೆಲವೇ ಕ್ಷಣಗಳ ಕಾಲ ನಾವೆಲ್ಲರೂ ಅವರಿಗೆ ಚಪ್ಪಾಳೆ ತಟ್ಟಿ ಸ್ವಾಗತಿಸೋಣ, ನಮಸ್ಕರಿಸೋಣ, ಅವರ ಬಹುದೊಡ್ಡ ಸಾಧನೆಗಳಿಗಾಗಿ ಗೌರವ ತೋರೋಣ.

ಭಾರತದ ಕ್ರೀಡೆಗಳಿಗೆ, ಭಾರತದ ಯುವ ಸಮುದಾಯಕ್ಕೆ ಮತ್ತು ಭಾರತ ದೇಶಕ್ಕೆ ಗೌರವ ತಂದ ಯುವ ಭಾರತೀಯರಿಗೆ ನಾವೆಲ್ಲರೂ ಗೌರವ ಪ್ರದರ್ಶಿಸೋಣ. ಕೋಟ್ಯಂತರ ದೇಶವಾಸಿಗಳು ಭಾರತದ ಯುವ ಸಮುದಾಯಕ್ಕೆ ಅದರಲ್ಲೂ ವಿಶೇಷವಾಗಿ ಜಾಗತಿಕ ಮಟ್ಟದ ಅಥ್ಲೆಟಿಕ್ಸ್|ನಲ್ಲಿ ಭಾರತಕ್ಕೆ ಕೀರ್ತಿ ತಂದ ನಮ್ಮ ಅಥ್ಲೀಟ್|ಗಳಿಗೆ ಗೌರವ ತೋರುತ್ತಿದ್ದಾರೆ. ಈ ಅಥ್ಲೀಟ್|ಗಳು ತಮ್ಮ ಅಪಾರ ಸಾಧನೆ ಮೂಲಕ ನಮ್ಮ ಹೃದಯ ಗೆಲ್ಲುವ ಜತೆಗೆ, ಭಾರತದ ಯುವ ಸಮುದಾಯ ಮತ್ತು ಭವಿಷ್ಯದ ಪೀಳಿಗೆಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ.

 

ನನ್ನ ಆತ್ಮೀಯ ದೇಶವಾಸಿಗಳೇ,

ನಾವೆಲ್ಲಾ ಇಂದು 75ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿರುವಾಗ, ದೇಶ ವಿಭಜನೆಯ ನೋವನ್ನು ಎಂದಿಗೂ ಮರೆಯುವಂತಿಲ್ಲ. ಅದು ಎಲ್ಲ ಭಾರತೀಯರ ಹೃದಯವನ್ನು ಸದಾ ಚುಚ್ಚುತ್ತಿದೆ. ಕಳೆದ ಶತಮಾನದಲ್ಲಿ ಘಟಿಸಿದ ದುರಂತಗಳಲ್ಲಿ ಘೋರ ದುರಂತ ಇದಾಗಿದೆ.  ಸ್ವಾತಂತ್ರ್ಯ ಗಳಿಸಿದ ನಂತರ ಜನರು ಬಹುಬೇಗನೇ ಇದನ್ನು ಮರೆತುಬಿಟ್ಟರು. ನಿನ್ನೆಯಷ್ಟೇ ಭಾರತವು ಅವರ ನೆನಪಿನಲ್ಲಿ ಭಾವನಾತ್ಮಕ ನಿರ್ಣಯವೊಂದನ್ನು ತೆಗೆದುಕೊಂಡಿದೆ. ಇನ್ನು ಮುಂದೆ ನಾವು ಪ್ರತಿ ವರ್ಷ ಆಗಸ್ಟ್ 14 ಅನ್ನು ದೇಶ ವಿಭಜನೆ ಸಂದರ್ಭದ ಎಲ್ಲಾ ಸಂತ್ರಸ್ತರ ನೆನಪಿಗಾಗಿ 'ದೇಶ ವಿಭಜನೆಯ ಭಯಾನಕ ನೆನಪಿನ ದಿನ'ವಾಗಿ ಆಚರಿಸಲಿದ್ದೇವೆ. ದೇಶ ವಿಭಜನೆ ಸಂದರ್ಭದಲ್ಲಿ ಅಮಾನವೀಯ ಸನ್ನಿವೇಶಗಳಿಗೆ ಸಿಕ್ಕಿಕೊಂಡವರು, ದೌರ್ಜನ್ಯ ಮತ್ತು ಶೋಷಣೆಗಳಿಗೆ ಬಲಿಯಾದವರಿಗೆ ಗೌರವಯುತ ಅಂತ್ಯಸಂಸ್ಕಾರವೂ ನಡೆದಿಲ್ಲ. ಅವರೆಲ್ಲರೂ ನಮ್ಮೆಲ್ಲರ ಹೃದಯದಲ್ಲಿ ಜೀವಂತವಾಗಿ ಉಳಿಯಬೇಕು, ನಮ್ಮ ಮನಪಟಲದಿಂದ ಅವರೆಂದಿಗೂ ಅಳಿಸಿಹೋಗಬಾರದು. 75ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ "ದೇಶ ವಿಭಜನೆಯ ಭಯಾನಕ ಸ್ಮರಣೆಯ ದಿನ"ವನ್ನು ಆಚರಿಸುವ ನಿರ್ಧಾರವು ಪ್ರತಿಯೊಬ್ಬ ಭಾರತೀಯ ಸಂತ್ರಸ್ತರಿಗೆ ಸಲ್ಲಿಸುವ ಪ್ರತಿ ಗೌರವವಾಗಿದೆ.

 

ನನ್ನ ಪ್ರೀತಿಯ ಭಾರತೀಯರೇ,

ಇಡೀ ವಿಶ್ವದಲ್ಲೇ ಭಾರತವು ಪ್ರಗತಿ ಮತ್ತು ಮಾನವೀಯತೆಯ ಮಾರ್ಗದಲ್ಲಿ ಮುನ್ನಡೆಯುತ್ತಿದೆ. ಕೊರೊನಾ ಸಂಕಷ್ಟ ಕಾಲ ನಮ್ಮ ಪಾಲಿಗೆ ಸವಾಲಾಗಿ ಬಂತು. ಆಗ ಭಾರತೀಯರು ಅಪಾರ ಧೈರ್ಯ ಮತ್ತು ತಾಳ್ಮೆಯಿಂದ ನಿರಂತರ ಹೋರಾಟ ನಡೆಸಿದರು. ಇಂತಹ ಹಲವಾರು ಸವಾಲುಗಳನ್ನು ಹಿಂದೆಯೂ ಎದುರಿಸಿದ್ದೇವೆ. ಕೊರೊನಾ ಕಾಲಘಟ್ಟದಲ್ಲಿ ದೇಶವಾಸಿಗಳು ಪ್ರತಿ ಕ್ಷೇತ್ರದಲ್ಲೂ ಅಸಾಧಾರಣ ಕೆಲಸ ಮಾಡಿದರು. ಕೋವಿಡ್-19 ಲಸಿಕೆಗೆ ದೇಶ ಯಾರೊಬ್ಬರನ್ನು ಅಥವಾ ಯಾವುದೇ ದೇಶವನ್ನು ಅವಲಂಬಿಸದಿರಲು ನಮ್ಮ ಉದ್ಯಮಶೀಲರು ಮತ್ತು ವಿಜ್ಞಾನಿಗಳು ತೋರಿದ ಶಕ್ತಿ ಮತ್ತು ತಾಕತ್ತು ಕಾರಣ. ನೀವೇ ಒಂದು ಕ್ಷಣ ಊಹಿಸಿಕೊಳ್ಳಿ,  ನಾವು ಲಸಿಕೆ ಕಂಡುಹಿಡಿಯದಿದ್ದರೆ, ಪೋಲಿಯೊ ಲಸಿಕೆ ಪಡೆಯಲು(ತರಿಸಲು) ನಮಗೆ ಎಷ್ಟು ಸಮಯ ಹಿಡಿಯುತ್ತಿತ್ತು ಎಂಬುದನ್ನು?

ಸಾಂಕ್ರಾಮಿಕ ರೋಗವು ಇಡೀ ಜಗತ್ತನ್ನೇ ಕಾಡುತ್ತಾ ಬಹುದೊಡ್ಡ ಬಿಕ್ಕಟ್ಟು ಸೃಷ್ಟಿಯಾದ ಕಾಲಘಟ್ಟದಲ್ಲಿ ಲಸಿಕೆ ಪಡೆಯುವುದು ತೀರಾ ಕಷ್ಟಕರವಾಗಿತ್ತು. ಭಾರತ ಆಗ ಲಸಿಕೆ ಪಡೆದಿರಬಹುದು, ಪಡೆಯದಿರಲೂಬಹುದು, ಪಡೆದಿದ್ದರೂ ಅದನ್ನು ಸಕಾಲದಲ್ಲಿ ಪಡೆದಿರುವ ಖಚಿತತೆ ಇಲ್ಲ. ಆದರೆ ಇದೀಗ ಭಾರತವು ವಿಶ್ವದಲ್ಲೇ ಅತಿ ದೊಡ್ಡ ಕೋವಿಡ್-19 ಲಸಿಕಾ ಅಭಿಯಾನವನ್ನು ದೇಶದಲ್ಲಿ ನಡೆಸುತ್ತಿದೆ ಎಂದು ನಾವೆಲ್ಲಾ ಹೆಮ್ಮೆಯಿಂದ ಬೀಗಬಹುದು. 54 ಕೋಟಿಗಿಂತ ಹೆಚ್ಚಿನ ಭಾರತೀಯರು ಲಸಿಕೆ ಡೋಸ್ ಗಳನ್ನು ಹಾಕಿಸಿಕೊಂಡಿದ್ದಾರೆ. ಭಾರತ ಅಳವಡಿಸಿಕೊಂಡಿರುವ ಕೊವಿನ್ ಆನ್|ಲೈನ್ ವ್ಯವಸ್ಥೆ ಮತ್ತು ಡಿಜಿಟಲ್ ಪ್ರಮಾಣಪತ್ರಗಳು ಇದೀಗ ಇಡೀ ವಿಶ್ವವನ್ನೇ ಆಕರ್ಷಿಸುತ್ತಿದೆ. ಕೋವಿಡ್-19 ಸೋಂಕು ಕಾಣಿಸಿಕೊಂಡ ಸಂಕಷ್ಟ ಕಾಲದಲ್ಲಿ ಭಾರತದ 80 ಕೋಟಿ ದೇಶವಾಸಿಗಳಿಗೆ ನಿರತರವಾಗಿ ಉಚಿತ ಆಹಾರ ಧಾನ್ಯ ಪೂರೈಸಿ, ಬಡ ಕುಟುಂಬಗಳ ಮನೆಗಳಲ್ಲಿ ಒಲೆಗಳು ನಿರಂತರ ಉರಿಯುವಂತೆ ಮಾಡಲಾಗಿದೆ. ಇದು ಇಡೀ ವಿಶ್ವವನ್ನೇ ಬೆರಗುಗೊಳಿಸುವ ಜತೆಗೆ, ವ್ಯಾಪಕ ಚರ್ಚಾ ವಿಷಯವಾಗಿದೆ. ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತದಲ್ಲಿ ಕಡಿಮೆ ಜನರು ಸೋಂಕಿಗೆ ಒಳಗಾಗಿದ್ದಾರೆ ಎಂಬುದು ನಿಜ. ಬೇರೆ ರಾಷ್ಟ್ರಗಳ ಜನಸಂಖ್ಯೆಗೆ ಹೋಲಿಸಿದರೆ, ಭಾರತದಲ್ಲಿ ನಾವು ಹೆಚ್ಚಿನ ನಾಗರಿಕರನ್ನು ಸೋಂಕಿನಿಂದ ರಕ್ಷಿಸಿದ್ದೇವೆ ಎಂಬುದು ಸಹ ನಿಜ. ಆದರೆ, ಇದು ಹೆಮ್ಮೆಪಡುವ ವಿಷಯವೇನಲ್ಲ. ಇಂತಹ ಪ್ರಶಂಸೆಗಳಿಂದ ನಾವು ವಿರಮಿಸುವಂತಿಲ್ಲ. ಯಾವುದೇ ಸವಾಲುಗಳಿಲ್ಲ ಎಂದು ಹೇಳುವುದು, ನಮ್ಮ ಸ್ವಂತ ಅಭಿವೃದ್ಧಿಯ ಪಥಕ್ಕೆ ಹಾಕಿಕೊಳ್ಳುವ ನಿರ್ಬಂಧಿತ (ಸೀಮಿತ) ಆಲೋಚನೆಯಾಗುತ್ತದೆ.

ವಿಶ್ವದ ಶ್ರೀಮಂತ ರಾಷ್ಟ್ರಗಳಿಗೆ ಹೋಲಿಸಿದರೆ, ನಮ್ಮಲ್ಲಿ ಸಾಕಷ್ಟು ವ್ಯವಸ್ಥೆಗಳಿಲ್ಲ, ವ್ಯವಸ್ಥೆಗಳ ಕೊರತೆ ಇದೆ. ಎಲ್ಲಕ್ಕಿಂತ ಹೆಚ್ಚಾಗಿ, ವಿಶ್ವದ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ಜನಸಂಖ್ಯೆ ಪ್ರಮಾಣ ಅತ್ಯಂತ ಹೆಚ್ಚು ಮತ್ತು ನಮ್ಮ ಜೀವನಶೈಲಿಯೂ ವಿಭಿನ್ನವಾಗಿದೆ. ನಮ್ಮೆಲ್ಲಾ ಪ್ರಯತ್ನಗಳ ಹೊರತಾಗಿ, ನಾವು ಹಲವಾರು ಜನರನ್ನು ರಕ್ಷಿಸಲಾಗಲಿಲ್ಲ. ಅದೆಷ್ಟೋ ಮಕ್ಕಳು ಅನಾಥರಾದರು. ಈ ಅಸಹನೀಯ ನೋವು ನಮ್ಮನ್ನು ಶಾಶ್ವತವಾಗಿ ಕಾಡುತ್ತದೆ.

 

ನನ್ನ ಪ್ರೀತಿಯ ದೇಶ ಬಂಧುಗಳೇ,

ಪ್ರತಿಯೊಂದು ದೇಶದ ಅಭಿವೃದ್ಧಿ ಪಯಣದಲ್ಲಿ ತನ್ನನ್ನು ಹೊಸದಾಗಿ ವ್ಯಾಖ್ಯಾನಿಸಲು ಮತ್ತು ಹೊಸ ಸಂಕಲ್ಪದೊಂದಿಗೆ ಮುಂದಡಿ ಇಡಲು ದೇಶಕ್ಕೆ ಒಳ್ಳೆಯ ಸಮಯ ಬರುತ್ತದೆ. ಅದೇ ರೀತಿ, ಭಾರತದ ಅಭಿವೃದ್ಧಿ ಪಯಣದಲ್ಲಿ ಇದೀಗ ಸಕಾಲ ಬಂದಿದೆ. 75ನೇ ಭಾರತ ಸ್ವಾತಂತ್ರ್ಯೋತ್ಸವವನ್ನು ನಾವು ಒಂದು ದಿನದ ಸಂಭ್ರಮಾಚರಣೆಗೆ ಸೀಮಿತಗೊಳಿಸಬಾರದು, ನಾವು ನವ ಸಂಕಲ್ಪಗಳಿಗೆ ಭದ್ರ ಬುನಾದಿ ಹಾಕಬೇಕು, ಆ ಹೊಸ ಸಂಕಲ್ಪಗಳೊಂದಿಗೆ ಮುನ್ನಡೆಯಬೇಕು. ಇಲ್ಲಿಂದ ಆರಂಭಿಸಿ, ಮುಂದಿನ 25 ವರ್ಷಗಳ ಕಾಲದ ಸಂಪೂರ್ಣ ಪಯಣದವರೆಗೆ, ಅಂದರೆ ಸ್ವಾತಂತ್ರ್ಯ ಗಳಿಸಿದ ಶತಮಾನೋತ್ಸವ ಆಚರಿಸುವ ಹೊತ್ತಿಗೆ ‘ಅಮೃತ ಕಾಲಾವಧಿ’ಯಲ್ಲಿ ನವಭಾರತ ಸೃಷ್ಟಿಯಾಗಬೇಕು. 25 ವರ್ಷಗಳ ಅಮೃತ ಕಾಲಾವಧಿಯಲ್ಲಿ ನಮ್ಮೆಲ್ಲಾ ಸಂಕಲ್ಪಗಳು ಈಡೇರಬೇಕು. ಅದರೊಂದಿಗೆ ಸ್ವಾತಂತ್ರ್ಯದ ಶತಮಾನೋತ್ಸವನ್ನು ಹೆಮ್ಮೆಯಿಂದ, ಮತ್ತಷ್ಟು ಸಂಭ್ರಮದಿಂದ ಆಚರಿಸುವಂತಾಗಬೇಕು.

ಭಾರತ ದೇಶ ಮತ್ತು ಭಾರತದ ನಾಗರಿಕರು  ಸಮೃದ್ಧಿಯ ಹೊಸ ಎತ್ತರಕ್ಕೆ ಏರುವುದೇ ‘ಅಮೃತ ಕಾಲಾವಧಿ’ಯ ಗುರಿಯಾಗಿದೆ. ಗ್ರಾಮ ಮತ್ತು ನಗರದಲ್ಲಿ ಸಿಗುವ ಸೌಲಭ್ಯಗಳ ಮಟ್ಟದಲ್ಲಿ ವ್ಯತ್ಯಾಸ ಇಲ್ಲದ ಭಾರತ ನಿರ್ಮಾಣವೇ ‘ಅಮೃತ ಕಾಲ’ದ ಗುರಿಯಾಗಿದೆ. ಸರ್ಕಾರ ದೇಶದ ನಾಗರಿಕರ ಜೀವನದಲ್ಲಿ ಅನಗತ್ಯವಾಗಿ ಮಧ್ಯಪ್ರವೇಶ ಮಾಡದಂತೆ ನವಭಾರತ ಕಟ್ಟುವುದೇ ಅಮೃತ ಕಾಲದ ಗುರಿಯಾಗಿದೆ. ವಿಶ್ವ ದರ್ಜೆಯ ಆಧುನಿಕ ಮೂಲಸೌಕರ್ಯಗಳನ್ನು ಸೃಜಿಸುವುದೇ ಅಮೃತ ಕಾಲದ ಗುರಿಯಾಗಿದೆ. ನಾವು ಯಾರೊಬ್ಬರಿಗೂ ಕಡಿಮೆ ಇರಬಾರದು. ಇದು ಕೋಟ್ಯಂತರ ದೇಶವಾಸಿಗಳ ಸಂಕಲ್ಪವಾಗಿದೆ. ಆದರೆ ಸಂಕಲ್ಪ ಈಡೇರಬೇಕಾದರೆ, ಅತ್ಯಂತ ಕಠಿಣ ಪರಿಶ್ರಮ ಮತ್ತು ಧೈರ್ಯ ತೋರಬೇಕು. ಅದಾಗದಿದ್ದರೆ ಸಂಕಲ್ಪ ಅಪೂರ್ಣವಾಗಿ ಉಳಿಯುತ್ತದೆ. ಆದ್ದರಿಂದ, ನಮ್ಮ ಸಂಕಲ್ಪಗಳ ಜತೆಗೆ ಕಠಿಣ ಪರಿಶ್ರಮ ಮತ್ತು ಧೈರ್ಯ ಹಾಕಬೇಕು ಎಂಬುದನ್ನು ನಾವು ಮನಗಾಣಬೇಕು. ಈ ಕನಸುಗಳು ಮತ್ತು ಸಂಕಲ್ಪಗಳು ನಮ್ಮ ಗಡಿಯಾಚೆಗಿನ ಸುರಕ್ಷಿತ ಮತ್ತು ಸಮೃದ್ಧ ಜಗತ್ತಿಗೆ ಪರಿಣಾಮಕಾರಿ ಕೊಡುಗೆಯಾಗಿವೆ.

ಅಮೃತ ಕಾಲ 25 ವರ್ಷಗಳ ಅವಧಿಯಾಗಿದೆ. ನಾವು ನಮ್ಮ ಗುರಿಗಳನ್ನು ಸಾಧಿಸಲು ಮತ್ತಷ್ಟು ಕಾಯಬೇಕಿಲ್ಲ. ಈಗಲೇ ನಾವು ಆರಂಭಿಸಬೇಕು. ಕಳೆದುಕೊಳ್ಳಲು ನಮಗೆ ಕ್ಷಣಕಾಲವೂ ಇಲ್ಲ, ಇದು ಸಕಾಲ. ನಮ್ಮ ದೇಶವೂ ಸಹ  ಬದಲಾಗಬೇಕು. ನಾಗರೀಕರಾಗಿ ನಾವು ಸಹ ಬದಲಾಗಬೇಕಿದೆ. ಬದಲಾಗುತ್ತಿರುವ ಯುಗಕ್ಕೆ ಹೊಂದಿಕೊಳ್ಳುವ ಪ್ರವೃತ್ತಿಯನ್ನು ನಾವು ಅಳವಡಿಸಿಕೊಳ್ಳಬೇಕು. ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಸ್ಫೂರ್ತಿಯಿಂದ ನಾವೆಲ್ಲಾ ಕಾರ್ಯ ಆರಂಭಿಸಿದ್ದೇವೆ. ಕೆಂಪುಕೋಟೆಯ ಮೇಲೆ ನಿಂತು ನಾನಿಂದು ಮನವಿ ಮಾಡುತ್ತಿದ್ದೇನೆ... ನಮ್ಮ ಮಹತ್ವಾಕಾಂಕ್ಷಿ ಗುರಿಗಳನ್ನು ಸಾಧಿಸಬೇಕಾದರೆ, ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಇದೀಗ ಸಬ್ಕಾ ಪ್ರಯಾಸ್ ಸ್ಫೂರ್ತಿ ಅತಿಮುಖ್ಯವಾಗಿದೆ. ಕಳೆದ 7 ವರ್ಷಗಳಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವಾರು ಕಾರ್ಯಕ್ರಮಗಳು ಮತ್ತು ಯೋಜನೆಗಳ ಪ್ರಯೋಜನಗಳನ್ನು ಕೋಟ್ಯಂತರ ಜನರು ಪಡೆಯುತ್ತಿದ್ದಾರೆ. ಉಜ್ವಲ ಮತ್ತು ಆಯುಷ್ಮಾನ್ ಭಾರತ್ ಯೋಜನೆಯ ಮಹತ್ವ ದೇಶದ ಪ್ರತಿ ಬಡವನಿಗೂ ಅರ್ಥವಾಗಿದೆ. ಇದೀಗ ಸರ್ಕಾರದ ಯೋಜನೆಗಳ ವೇಗ ಹೆಚ್ಚಾಗಿದೆ ಮತ್ತು ಅವು ಇಚ್ಛಿತ ಗುರಿಗಳನ್ನು ಸಾಧಿಸುತ್ತಿವೆ. ಯೋಜನೆಗಳ ವಿಚಾರದಲ್ಲಿ ನಾವು ಹಿಂದೆಂದಿಗಿಂತಲೂ ಮುಂದೆ ಸಾಗುತ್ತಿದ್ದೇವೆ. ಆದರೆ ಇದು ಇಲ್ಲಿಗೇ ಅಂತ್ಯವಾಗುವುದಿಲ್ಲ. ನಾವು ಸಂತೃಪ್ತಿ ಮಟ್ಟಕ್ಕೆ  ತಲುಪಬೇಕಿದೆ. ಎಲ್ಲ ಗ್ರಾಮಗಳಿಗೂ ರಸ್ತೆಗಳಾಗಬೇಕು, ಎಲ್ಲಾ ಕುಟುಂಬಗಳಿಗೂ ಬ್ಯಾಂಕ್ ಖಾತೆಗಳಾಗಬೇಕು, ಎಲ್ಲಾ ಫಲಾನುಭವಿಗಳು ಆಯುಷ್ಮಾನ್ ಭಾರತ್ ಕಾರ್ಡ್ ಹೊಂದಿರಬೇಕು, ಎಲ್ಲಾ ಅರ್ಹ ಫಲಾನುಭವಿಗಳು ಉಜ್ವಲ ಯೋಜನೆಯ ಪ್ರಯೋಜನ ಪಡೆದು, ಉಚಿತ ಅನಿಲ ಸಂಪರ್ಕ ಹೊಂದಬೇಕು, ಪ್ರತಿ ಅರ್ಹ ವ್ಯಕ್ತಿಗೆ ಸರ್ಕಾರದ ವಿಮೆ, ಪಿಂಚಣಿ ಮತ್ತು ವಸತಿ ಸೌಲಭ್ಯ ಸಿಗುವಂತಾಗಬೇಕು, ಈ ಎಲ್ಲಾ ಚಿಂತನೆಗಳಿಗೆ ನಾವು 100% ಮನಸ್ಥಿತಿಯೊಂದಿಗೆ ಮುನ್ನಡೆಯಬೇಕು. ಇಲ್ಲಿಯ ತನಕ, ಬೀದಿ ಬದಿ ವ್ಯಾಪಾರಿಗಳು, ಫುಟ್ ಪಾತ್ ವ್ಯಾಪಾರಿಗಳು, ಗಾಡಿ ವ್ಯಾಪಾರಿಗಳ ವೃತ್ತಿ ಬದುಕಿನ ಬಗ್ಗೆ ಹಿಂದಿನ ಸರ್ಕಾರಗಳು ಗಮನವನ್ನೇ ನೀಡಿಲ್ಲ. ಇದೀಗ ಎಲ್ಲಾ ಕೆಳ ಹಂತದ ವ್ಯಾಪಾರಿಗಳನ್ನು ‘ಸ್ವಾನಿಧಿ’ ಯೋಜನೆ ಮೂಲಕ ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕ ಕಲ್ಪಿಸಲಾಗುತ್ತಿದೆ. ನಾವೀಗ 100% ಮನೆಗಳಿಗೆ ವಿದ್ಯುತ್ ಲಭ್ಯವಾಗುವಂತೆ ಮಾಡಿದ್ದೇವೆ, 100% ಮನೆಗಳಿಗೆ ಶೌಚಾಲಯಗಳನ್ನು ನಿರ್ಮಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಅಂತೆಯೇ, ಈ ನಿಟ್ಟಿನಲ್ಲಿ ನಾವೀಗ ಮುಂದೆ ಸಾಗಿ ಯೋಜನೆಗಳ ಸಂತೃಪ್ತ ಗುರಿ ಸಾಧಿಸಬೇಕಿದೆ. ಇದನ್ನು ಸಾಧಿಸಬೇಕಾದರೆ, ನಾವು ದೂರದ ಗಡುವು ಹಾಕಿಕೊಳ್ಳಬಾರದು. ಕೆಲವೇ ಕೆಲವು ವರ್ಷಗಳಲ್ಲಿ ನಮ್ಮ ಸಂಕಲ್ಪಗಳನ್ನು ಸಾಕಾರಗೊಳಿಸಲು ಕಾರ್ಯೋನ್ಮುಖರಾಗಬೇಕು.

ಇದೀಗ, ನಮ್ಮ ದೇಶ ಹರ್ ಘರ್ ಜಲ್ ಮಿಷನ್|ಗಾಗಿ ವೇಗವಾಗಿ ಕಾರ್ಯ ನಿರ್ವಹಿಸುತ್ತಿದೆ. ಕೇವಲ 2 ವರ್ಷಗಳಲ್ಲಿ ಜಲ್ ಜೀವನ್ ಮಿಷನ್ ಅಡಿ, ನಾಲ್ಕೂವರೆ ಕೋಟಿಗಿಂತ ಹೆಚ್ಚಿನ ಕುಟುಂಬಗಳಿಗೆ ನಲ್ಲಿ ನೀರು ಪೂರೈಕೆ ಮಾಡಿದ್ದೇವೆ ಎಂದು ಹೇಳಲು ನನಗೆ ಸಂತೋಷವಾಗುತ್ತಿದೆ. ಅವರೆಲ್ಲರೂ ಪೈಪ್ ನೀರು ಪಡೆಯುತ್ತಿದ್ದಾರೆ. ಕೋಟ್ಯಂತರ ತಾಯಂದಿರು ಮತ್ತು ಸಹೋದರಿಯರಿಂದ ಸಿಗುತ್ತಿರುವ ಆಶೀರ್ವಾದವೇ ನಮಗೆ ನಿಜವಾದ ಬಂಡವಾಳವಾಗಿದೆ. ಈ 100% ಸಾಧನೆ ದರದ ಅತಿದೊಡ್ಡ ಪ್ರಯೋಜನವೆಂದರೆ, ಸರ್ಕಾರದ ಯೋಜನೆಯ ಪ್ರಯೋಜನಗಳಿಂದ ಯಾರೊಬ್ಬರೂ  ವಂಚಿತರಾಗಿ ಉಳಿಯಬಾರದು ಎಂಬುದಾಗಿದೆ. ದೇಶದ ಕಟ್ಟಕಡೆಯ ವ್ಯಕ್ತಿಗೆ ಸವಲತ್ತು ಒದಗಿಸುವ ಗುರಿಯೊಂದಿಗಿನ ಸರ್ಕಾರದ ಕಾರ್ಯಾಚರಣೆಯಿಂದ ತಾರತಮ್ಯ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಂತಾಗಿದೆ.

 

ನನ್ನ ಪ್ರೀತಿಯ ದೇಶವಾಸಿಗಳೇ,

ದೇಶದ ಪ್ರತಿ ಬಡ ವ್ಯಕ್ತಿಗೆ ಪೌಷ್ಟಿಕ ಆಹಾರ ಒದಗಿಸುವುದು ಸರ್ಕಾರದ ಆದ್ಯತೆಯ ಗಮನವಾಗಿದೆ. ಬಡ ಮಹಿಳೆಯರು ಮತ್ತು ಮಕ್ಕಳ ಅಪೌಷ್ಟಿಕತೆ ಮತ್ತು ಪೌಷ್ಟಿಕಾಂಶ ಕೊರತೆಯು ಅವರ ಅಭಿವೃದ್ಧಿಗೆ ಬಹುದೊಡ್ಡ ತೊಡಕಾಗಿದೆ. ಈ ನಿಟ್ಟಿನಲ್ಲಿ, ವಿವಿಧ ಯೋಜನೆಗಳ ಮೂಲಕ ಅವರಿಗೆ ಒದಗಿಸುತ್ತಿರುವ ಅಕ್ಕಿಯ ಪೌಷ್ಟಿಕಾಂಶ ಹೆಚ್ಚಿಸಲು ನಿರ್ಧರಿಸಿ, ಪೌಷ್ಟಿಕಾಂಶಭರಿತ ಅಕ್ಕಿಯನ್ನು ಅವರಿಗೆ ಪೂರೈಸಲು ತೀರ್ಮಾನಿಸಲಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಪೂರೈಸುವ ಅಕ್ಕಿಯೇ ಇರಬಹುದು, ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಮಕ್ಕಳಿಗೆ ನೀಡುವ ಅಕ್ಕಿಯೇ ಇರಬಹುದು, ಪ್ರತಿ ಯೋಜನೆಯಲ್ಲಿ ಪೂರೈಸುವ ಅಕ್ಕಿಯೇ ಇರಬಹುದು, 2024ರ ಹೊತ್ತಿಗೆ ಪೌಷ್ಟಿಕಾಂಶ ಸಮೃದ್ಧ ಆಹಾರಧಾನ್ಯ ಪೂರೈಸಲು ನಿರ್ಧರಿಸಲಾಗಿದೆ.

 

ನನ್ನ ಪ್ರೀತಿಯ ದೇಶವಾಸಿಗಳೇ,

ದೇಶದ ಪ್ರತಿ ಬಡ ವ್ಯಕ್ತಿಗೆ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಆಂದೋಲನ ತ್ವರಿತ ಗತಿಯಲ್ಲಿ ನಡೆಯುತ್ತಿದೆ. ಇದಕ್ಕಾಗಿ ವೈದ್ಯಕೀಯ ಶಿಕ್ಷಣದಲ್ಲಿ ಮಹತ್ವದ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ. ನಿರ್ಬಂಧಕ ಆರೋಗ್ಯ ಸಂರಕ್ಷಣಾ ವಲಯಕ್ಕೂ ಸಮಾನ ಗಮನ ನೀಡಲಾಗಿದೆ. ಏಕಕಾಲದಲ್ಲಿ, ದೇಶದ ವೈದ್ಯಕೀಯ ಕಾಲೇಜುಗಳಲ್ಲಿ ವೈದ್ಯ ಸೀಟುಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆ ಅಡಿ, ದೇಶದ ಪ್ರತಿ ಗ್ರಾಮಕ್ಕೂ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತಿದೆ. ಜನ್ ಔಷಧಿ ಯೋಜನೆ ಮೂಲಕ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಕೈಗೆಟಕುವ ಬೆಲೆಗೆ ಗುಣಮಟ್ಟದ ಔಷಧಗಳನ್ನು ಒದಗಿಸಲಾಗುತ್ತಿದೆ. ಇದುವರೆಗೆ, ದೇಶಾದ್ಯಂತ 75 ಸಾವಿರಕ್ಕಿಂತ ಹೆಚ್ಚಿನ ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಉತ್ತಮ ಆಸ್ಪತ್ರೆಗಳು ಮತ್ತು ಆಧುನಿಕ ಪ್ರಯೋಗಾಲಯಗಳ ಜಾಲದಡಿ, ಆಧುನಿಕ ಆರೋಗ್ಯ ಮೂಲಸೌಕರ್ಯಗಳನ್ನು ಪ್ರತ್ಯೇಕವಾಗಿ ಸ್ಥಾಪಿಸಲಾಗುತ್ತಿದೆ. ಅತಿ ಶೀಘ್ರವೇ ದೇಶದ ಸಾವಿರಾರು ಆಸ್ಪತ್ರೆಗಳು ತಮ್ಮದೇ ಆದ ಸ್ವಂತ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಹೊಂದಲಿವೆ.

 

ಆತ್ಮೀಯ ದೇಶಬಂಧುಗಳೇ,

21ನೇ ಶತಮಾನದಲ್ಲಿ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು, ಭಾರತದಲ್ಲಿರುವ ಅಪಾರ ಸಾಮರ್ಥ್ಯದ ಸೂಕ್ತ ಮತ್ತು ಗರಿಷ್ಠ ಬಳಕೆ ಹೊತ್ತಿನ ಅಗತ್ಯವಾಗಿದೆ. 

ಇದು ಅತ್ಯಂತ ಪ್ರಮುಖವಾಗಿದೆ. ಇದಕ್ಕಾಗಿ ನಾವು ಹಿಂದುಳಿದ ವರ್ಗಗಳು ಮತ್ತು ವಲಯಗಳನ್ನು ಕೈಹಿಡಿದು ನಡೆಸಬೇಕಿದೆ. ಅವರಲ್ಲಿರುವ ಕಳವಳಗಳನ್ನು ನಿವಾರಣೆ ಮಾಡಿ, ಅವರಿಗೆ ಮೂಲ ಅಗತ್ಯಗಳನ್ನು ಪೂರೈಸಬೇಕಿದೆ. ಹಿಂದುಳಿದ ವರ್ಗಗಳು, ಆದಿವಾಸಿಗಳು ಮತ್ತು ಸಾಮಾನ್ಯ ವರ್ಗಗಳ ಬಡ ಜನರಿಗೆ ಮೀಸಲಾತಿ ಖಾತರಿಪಡಿಸಲಾಗುತ್ತಿದೆ. ಇತ್ತೀಚೆಗಷ್ಟೇ, ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಇತರೆ ಹಿಂದುಳಿದ ವರ್ಗ(ಒಬಿಸಿ)ಗಳಿಗೆ ಅಖಿಲ ಭಾರತೀಯ ಕೋಟಾದಲ್ಲಿ ಮೀಸಲಾತಿ ಖಾತರಿಪಡಿಸಲಾಗಿದೆ. ಸಂವಿಧಾನದ 27ನೇ ತಿದ್ದುಪಡಿ ಕಾಯಿದೆಯನ್ನು ಇತ್ತೀಚೆಗಷ್ಟೇ ಸಂಸತ್ತು ಅಂಗೀಕರಿಸಿದೆ. ಇದರಿಂದ ರಾಜ್ಯಗಳು ತಮ್ಮದೇ ಆದ ಒಬಿಸಿ ಪಟ್ಟಿ ಸಿದ್ಧಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

 

ದೇಶವಾಸಿಗಳೇ,

ಸಮಾಜದ ಅಭಿವೃದ್ಧಿ ಪಯಣದಲ್ಲಿ ಯಾವುದೇ ವ್ಯಕ್ತಿ ಅಥವಾ ಯಾವುದೇ ವರ್ಗ ಹಿಂದುಳಿಯಬಾರದು ಎಂಬುದನ್ನು ನಾವು ಖಚಿತಪಡಿಸಿರುವಂತೆ, ದೇಶದ ಯಾವುದೇ ಒಂದು ಭಾಗ ಅಥವಾ ಮೂಲೆ ಅಭಿವೃದ್ಧಿಯಿಂದ ಹಿಂದುಳಿಯದಂತೆ ಗಮನ ಹರಿಸಲಾಗಿದೆ. ಅಭಿವೃದ್ಧಿ ಎಂಬುದು ಸರ್ವತೋಮುಖವಾಗಿರಬೇಕು, ಅಭಿವೃದ್ಧಿ ಸರ್ವವ್ಯಾಪಿಯಾಗಿರಬೇಕು, ಅಭಿವೃದ್ಧಿ ಎಲ್ಲರನ್ನೂ ಒಳಗೊಂಡಿರಬೇಕು ಎಂಬ ದೃಷ್ಟಿಕೋನದಲ್ಲಿ ನಾವು ಕಳೆದ 7 ವರ್ಷಗಳಿಂದ ನಮ್ಮೆಲ್ಲಾ ಪ್ರಯತ್ನಗಳಿಗೆ ವೇಗ ನೀಡಿದ್ದೇವೆ. ಹಿಂದುಳಿದಿರುವ ಪ್ರದೇಶಗಳನ್ನು ಅಭಿವೃದ್ಧಿ ಹಾದಿಗೆ ತರಲು ಗಮನ ಹರಿಸಿದ್ದೇವೆ. ಅದು ಈಶಾನ್ಯ ಭಾರತವೇ ಆಗಿರಬಹುದು, ಜಮ್ಮು-ಕಾಶ್ಮೀರ, ಲಡಖ್ ಸೇರಿದಂತೆ ಇಡೀ ಹಿಮಾಲಯ ಭಾಗವೇ ಆಗಿರಬಹುದು, ಬುಡಕಟ್ಟು ಪ್ರದೇಶದ ಕರಾವಳಿ ಪ್ರದೇಶವೇ ಆಗಿರಬಹುದು, ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಪ್ರದೇಶಗಳು ಭವಿಷ್ಯದಲ್ಲಿ ಭಾರತದ ಅಭಿವೃದ್ಧಿಯ ಬಲಿಷ್ಠ ಅಡಿಪಾಯವಾಗಿ ಬದಲಾಗಲಿವೆ.

ದೇಶದ ಈಶಾನ್ಯ ರಾಜ್ಯಗಳ ಸಂಪರ್ಕ ಕ್ಷೇತ್ರದಲ್ಲಿ ಹೊಸ ಇತಿಹಾಸಕ್ಕೆ ಇದೀಗ ಮುನ್ನುಡಿ ಬರೆಯಲಾಗುತ್ತಿದೆ. ಈ ಭಾಗದ ಜನರ ಹೃದಯ ಮತ್ತು ಮೂಲಸೌಕರ್ಯಕ್ಕೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಈಶಾನ್ಯ ರಾಜ್ಯಗಳ ಎಲ್ಲ ರಾಜಧಾನಿ ನಗರಗಳಿಗೆ ರೈಲು ಸಂಪರ್ಕ ಕಲ್ಪಿಸುವ ಕಾಮಗಾರಿ ಅತಿ ಶೀಘ್ರವೇ ಪೂರ್ಣವಾಗಲಿದೆ. ಈಶಾನ್ಯ ರಾಜ್ಯಗಳ ನೀತಿಗಳಿಗೆ ಒತ್ತು ನೀಡಿರುವ ಕಾರ್ಯಕ್ರಮ(ಆಕ್ಟ್ ಈಸ್ಟ್ ಪಾಲಿಸಿ)ದಡಿ, ಇದೀಗ ಈಶಾನ್ಯ ರಾಜ್ಯಗಳಿಗೆ ಬಾಂಗ್ಲಾದೇಶ, ಮ್ಯಾನ್ಮಾರ್ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಪರ್ಕ ಕಲ್ಪಿಸಲಾಗುತ್ತಿದೆ. ಕಳೆದ 7 ವರ್ಷಗಳಲ್ಲಿ ಹಾಕಿರುವ ಪ್ರಯತ್ನಗಳ ಫಲವಾಗಿ, ಶ್ರೇಷ್ಠ ಭಾರತ ಸೃಜಿಸುವ ಮತ್ತು ಈಶಾನ್ಯ ರಾಜ್ಯಗಳಲ್ಲಿ ಕಳೆದುಹೋಗಿದ್ದ ಶಾಂತಿ ಮರುಸ್ಥಾಪಿಸುವ ಉತ್ಸಾಹ ಹಲವು ಪಟ್ಟು ಹೆಚ್ಚಾಗಿದೆ.

ಈಶಾನ್ಯ ರಾಜ್ಯಗಳಲ್ಲಿ ಪ್ರವಾಸೋದ್ಯಮ, ಸಾಹಸ ಕ್ರೀಡೆಗಳು, ಸಾವಯವ ಕೃಷಿ, ಗಿಡಮೂಲಿಕೆ ಔಷಧಗಳು ಮತ್ತು ತೈಲ ಪಂಪ್|ಗಳ ಕ್ಷೇತ್ರದಲ್ಲಿ ಅಪಾರ ಅವಕಾಶಗಳು ಮತ್ತು ಸಾಮರ್ಥ್ಯಗಳಿವೆ. ಈ ಎಲ್ಲಾ ಸಾಮರ್ಥ್ಯಗಳನ್ನು ನಾವು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡು, ದೇಶದ ಅಭಿವೃದ್ಧಿ ಪಯಣದ ಭಾಗವಾಗಿಸಬೇಕಿದೆ. ಅಮೃತ ಕಾಲದ ಕೆಲವೇ ವರ್ಷಗಳಲ್ಲಿ ನಾವು ಎಲ್ಲಾ ಕೆಲಸಗಳನ್ನು ಪೂರೈಸಬೇಕಿದೆ. ಇಲ್ಲಿರುವ ಎಲ್ಲಾ ಸಾಮರ್ಥ್ಯಗಳಿಗೆ ನಾವು ನ್ಯಾಯಯುತ ಅವಕಾಶಗಳನ್ನು ಒದಗಿಸುವುದೇ ಪ್ರಜಾಸತ್ತೆಯ ನೈಜ ಸ್ಫೂರ್ತಿಯಾಗಿದೆ. ಜಮ್ಮು-ಕಾಶ್ಮೀರವೇ ಇರಬಹುದು, ದೇಶದ ಬೇರೆ ಯಾವುದೇ ಭಾಗವಿರಬಹುದು, ಅಭಿವೃದ್ಧಿಯ ಸಮತೋಲನ ಇದೀಗ ನೆಲೆಗಟ್ಟಿನಲ್ಲಿ ಗೋಚರಿಸುತ್ತಿದೆ.

ಜಮ್ಮು-ಕಾಶ್ಮೀರದಲ್ಲಿ ಪ್ರದೇಶ ಅಥವಾ ಪ್ರಾಂತ್ಯ ಪುನರ್ವಿಂಗಡಣೆ ಆಯೋಗವನ್ನು ರಚಿಸಲಾಗಿದೆ. ಅಲ್ಲಿ ವಿಧಾನಸಭೆ ಚುನಾವಣೆ ನಡೆಸಲು ಸಕಲ ಸಿದ್ಧತೆಗಳು ಸಹ ನಡೆಯುತ್ತಿವೆ. ಅಭಿವೃದ್ಧಿಯ ಅಮಿತ ಸಾಧ್ಯತೆಗಳು ಮತ್ತು ಅವಕಾಶಗಳನ್ನು ಹೊಂದಿರುವ ಲಡಖ್ ಪ್ರಗತಿಯತ್ತ ಮುನ್ನಡೆಯುತ್ತಿದೆ. ಒಂದೆಡೆ, ಆಧುನಿಕ ಮೂಲಸೌಕರ್ಯಗಳಿಗೆ ಅದು ಸಾಕ್ಷಿಯಾಗುತ್ತಿದೆ. ಮತ್ತೊಂದೆಡೆ, ಸಿಂಧು ಕೇಂದ್ರೀಯ ವಿಶ್ವವಿದ್ಯಾಲಯವು ಲಡಖ್ ಅನ್ನು ಉನ್ನತ ಶಿಕ್ಷಣದ ಕೇಂದ್ರವಾಗಿ ರೂಪಿಸುತ್ತಿದೆ.

21ನೇ ಶತಮಾನದ ದಶಕದಲ್ಲಿ, ಭಾರತವು ನೀಲಿ ಆರ್ಥಿಕತೆ ಹೊಂದಲು ತನ್ನೆಲ್ಲಾ ಪ್ರಯತ್ನಗಳನ್ನು ಮತ್ತಷ್ಟು ಹೆಚ್ಚಿಸಲಿದೆ. ಜಲಕೃಷಿಯ ಜತೆಗೆ, ನಾವು ಸಮುದ್ರ ಕಳೆಯಲ್ಲಿ ಉದಯಿಸುತ್ತಿರುವ ಹೊಸ ಸಾಧ್ಯತೆಗಳ ಪೂರ್ಣ ಪ್ರಯೋಜನಗಳನ್ನು ಪಡೆಯಬೇಕಿದೆ. ಸಾಗರ ಭಾಗದ ಅಮಿತ ಅವಕಾಶಗಳು ಮತ್ತು ಸಾಧ್ಯತೆಗಳ ನಮ್ಮ ಮಹತ್ವಾಕಾಂಕ್ಷೆಗಳ ಫಲವಾಗಿ ಸಾಗರದಾಳದ ಕಾರ್ಯಾಚರಣೆ ಸಾಧ್ಯವಾಗಿದೆ. ಸಾಗರದಾಳದಲ್ಲಿ ಖನಿಜ ಸಂಪತ್ತೇ ಅಡಗಿದೆ. ಸಾಗರ ನೀರಿನಲ್ಲಿ ಉತ್ಪಾದಿಸುವ ಉಷ್ಣ ವಿದ್ಯುತ್ತು, ದೇಶದ ಅಭಿವೃದ್ಧಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ.

ದೇಶದ ಹಿಂದುಳಿದಿರುವ ಜಿಲ್ಲೆಗಳ ಆಕಾಂಕ್ಷೆಗಳ ಬಗ್ಗೆ ನಾವು ಜಾಗೃತರಾಗಿದ್ದೇವೆ. ಈ ನಿಟ್ಟಿನಲ್ಲಿ ದೇಶದ 110ಕ್ಕಿಂತ ಹೆಚ್ಚಿನ ಆಯ್ದ ಜಿಲ್ಲೆಗಳಲ್ಲಿ ಶಿಕ್ಷಣ, ಆರೋಗ್ಯ, ಪೌಷ್ಟಿಕತೆ ಮತ್ತು ರಸ್ತೆ ಯೋಜನೆಗಳಿಗೆ ಆದ್ಯತೆ ನೀಡಿದ್ದೇವೆ. ಬಹುತೇಕ ಜಿಲ್ಲೆಗಳು ಬುಡಕಟ್ಟು ಪ್ರದೇಶಗಳಿಗೆ ಸೇರಿದ್ದಾಗಿವೆ. ಈ ಜಿಲ್ಲೆಗಳ ನಡುವೆ ಅಭಿವೃದ್ಧಿಗೆ ನಾವು ಆರೋಗ್ಯಕರ ಸ್ಪರ್ಧೆಯ ಸ್ಫೂರ್ತಿಯನ್ನು ಸೃಜಿಸಿದ್ದೇವೆ. ಈ ನಿಟ್ಟಿನಲ್ಲಿ, ಈ ಜಿಲ್ಲೆಗಳ ನಡುವೆ ಪ್ರಬಲ ಸ್ಪರ್ಧೆಯೇ ಏರ್ಪಟ್ಟಿದೆ. ಈ ಎಲ್ಲ ಆಕಾಂಕ್ಷಿತ ಜಿಲ್ಲೆಗಳು ದೇಶದ ಇನ್ನುಳಿದ ಜಿಲ್ಲೆಗಳಿಗೆ ತಕ್ಕಂತೆ ಅಭಿವೃದ್ಧಿ ಹೊಂದಲಿವೆ.

 

ನನ್ನ ಪ್ರೀತಿಯ ದೇಶವಾಸಿಗಳೇ,

ಬಂಡವಾಳಶಾಹಿತ್ವ ಮತ್ತು ಸಮಾಜವಾದ ಕುರಿತು ವಿಶ್ವದ ಆರ್ಥಿಕತೆಯಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ. ಆದರೆ ಭಾರತ ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಒತ್ತು ನೀಡಿದೆ. ನಮ್ಮ ಸಂಪ್ರದಾಯಗಳು ಮತ್ತು ಮೌಲ್ಯಗಳೊಂದಿಗೆ ಸಹಕಾರಿ ಒಕ್ಕೂಟ ವ್ಯವಸ್ಥೆ ಹೊಂದಿಕೊಳ್ಳುತ್ತದೆ. ಸಹಕಾರಿ ಒಕ್ಕೂಟ ವ್ಯವಸ್ಥೆಯು ಸಮುದಾಯದ ಸಂಘಟಿತ ಬಲವಾಗಿದ್ದು, ದೇಶದ ಆರ್ಥಿಕತೆಯ ಚಾಲನಾಶಕ್ತಿಯಾಗಿದೆ, ದೇಶದ ಕೆಳಮಟ್ಟದ ಆರ್ಥಿಕತೆಗೆ ಇದು ಅತಿಮುಖ್ಯ. ಸಹಕಾರಿ ವಲಯ ಕೇವಲ ಕಾನೂನುಗಳು ಮತ್ತು ನಿಯಮಗಳ ಜಾಲವನ್ನು ಹೊಂದಿರುವ ವ್ಯವಸ್ಥೆಯಲ್ಲ, ಆದರೆ ಸಹಕಾರವು ಒಂದು ಚೈತನ್ಯ, ಸಂಸ್ಕೃತಿ ಮತ್ತು ಸಾಮೂಹಿಕ ಬೆಳವಣಿಗೆಯ ಮನಸ್ಥಿತಿಯಾಗಿದೆ. ಸಹಕಾರಿಗಳನ್ನು ಸಬಲೀಕರಿಸುವ ನಿಟ್ಟಿನಲ್ಲಿ ನಾವು ರಾಜ್ಯಗಳಲ್ಲಿ ಪ್ರತ್ಯೇಕ ಸಹಕಾರ ಸಚಿವಾಲಯವನ್ನು ಸ್ಥಾಪಿಸಿದ್ದೇವೆ.

 

ಪ್ರೀತಿಯ ದೇಶವಾಸಿಗಳೇ,

ದಶಕದಲ್ಲಿ ದೇಶದ ಗ್ರಾಮೀಣ ಭಾಗದಲ್ಲಿ ಹೊಸ ಆರ್ಥಿಕತೆ ಸೃಷ್ಟಿಸಲು ನಾವು ಎಲ್ಲಾ ಪ್ರಯತ್ನಗಳನ್ನು ಹಾಕಬೇಕಿದೆ. ಇದೀಗ ಹಳ್ಳಿಗಳು ತ್ವರಿತವಾಗಿ ಬದಲಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಕಳೆದ ಕೆಲವು ವರ್ಷಗಳಲ್ಲಿ ನಮ್ಮ ಸರ್ಕಾರ ಗ್ರಾಮಗಳಿಗೆ ರಸ್ತೆ ಮತ್ತು ವಿದ್ಯುತ್ ಒದಗಿಸಿದೆ. ಹಳ್ಳಿಗಳಿಗೆ  ಆಪ್ಟಿಕಲ್ ಫೈಬರ್ ಜಾಲದ ಡೇಟಾ ಮತ್ತು ಅಂತರ್ಜಾಲ  ಸಂಪರ್ಕ ನೀಡಿ ಗ್ರಾಮಗಳನ್ನು ಬಲಪಡಿಸಲಾಗಿದೆ. ಹಳ್ಳಿಗಳಲ್ಲಿ ಸಹ ಡಿಜಿಟಲ್ ಉದ್ಯಮಶೀಲರು ಉದಯಿಸುತ್ತಿದ್ದಾರೆ. 8 ಕೋಟಿಗಿಂತ ಹೆಚ್ಚಿನ ಗ್ರಾಮೀಣ ಸಹೋದರಿಯರು  ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಲ್ಲಿ ಸೇರಿಕೊಂಡು ಉನ್ನತ ಗುಣಮಟ್ಟದ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸರ್ಕಾರ ಇದೀಗ -ವಾಣಿಜ್ಯ ವೇದಿಕೆಗಳನ್ನು ಸೃಜಿಸಲು ಸಿದ್ಧತೆ ನಡೆಸಿದ್ದು, ಅವರ ಉತ್ಪನ್ನಗಳಿಗೆ ದೇಶ, ವಿದೇಶಗಳಲ್ಲಿ ಬೃಹತ್ ಮಾರುಕಟ್ಟೆ ಸೌಲಭ್ಯ ಒದಗಿಸಲಿದೆ. ಸ್ಥಳೀಯ ಉತ್ಪನ್ನಗಳ ಉತ್ತೇಜನದ ಮಂತ್ರದೊಂದಿಗೆ ದೇಶವೀಗ ಮುಂದಡಿ ಇಡುತ್ತಿದ್ದು, ಮಹಿಳೆಯರ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯಾಪ್ತಿ ಹೆಚ್ಚಾಗಲಿದೆ.

ಕೊರೊನಾ ಕಾಲಾವಧಿಯಲ್ಲಿ ದೇಶವು ತಂತ್ರಜ್ಞಾನದ ಶಕ್ತಿಯನ್ನು ಅರಿಯಲು ಸಾಧ್ಯವಾಯಿತು. ಜತೆಗೆ, ನಮ್ಮ ವಿಜ್ಞಾನಿಗಳ ಬದ್ಧತೆ ಮತ್ತು ಸಾಮರ್ಥ್ಯವನ್ನು ತಿಳಿಯಲು ಸಾಧ್ಯವಾಯಿತು. ನಮ್ಮ ದೇಶದ ವಿಜ್ಞಾನಿಗಳು ಬಹಳ ಶ್ರದ್ಧೆಯಿಂದ ಮತ್ತು ಕಾರ್ಯತಂತ್ರದಿಂದ ಕೆಲಸ ಮಾಡುತ್ತಿದ್ದಾರೆ. ಈಗ ನಮ್ಮ ಕೃಷಿ ವಲಯದಲ್ಲಿ ವಿಜ್ಞಾನಿಗಳ ಸಾಮರ್ಥ್ಯ ಮತ್ತು ಅವರ ಸಲಹೆಗಳನ್ನು ಬಳಸಿಕೊಳ್ಳುವ ಸಮಯ ಬಂದಿದೆ. ಇದಕ್ಕಾಗಿ ನಾವು ಬಹಳ ಕಾಲ ಕಾದು ಕುಳಿತುಕೊಂಡು ಸಮಯ ವ್ಯರ್ಥ ಮಾಡುವ ಅಗತ್ಯವಿಲ್ಲ. ನಾವು ನಮ್ಮ ವಿಜ್ಞಾನಿಗಳ ಶಕ್ತಿಯನ್ನು ಬಳಸಿಕೊಳ್ಳಬೇಕು. ಇದು ದೇಶಕ್ಕೆ ಆಹಾರ ಭದ್ರತೆ ನೀಡುವ ಜತೆಗೆ ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳ ಉತ್ಪಾದನೆ ಹೆಚ್ಚಿಸಲು ಬಹು ದೂರ ಸಾಗಲಿದೆ. ಹೀಗೆ ನಾವು ಬಲವಾಗಿ ಜಾಗತಿಕ ಮಾರುಕಟ್ಟೆಗೆ ಸೇರಬೇಕಿದೆ.

ಎಲ್ಲಾ ಸಂಘಟಿತ ಪ್ರಯತ್ನಗಳ ಮೂಲಕ, ನಮ್ಮ ಕೃಷಿ ವಲಯಕ್ಕೆ ಎದುರಾಗಿರುವ ಪ್ರಮುಖ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಬೇಕಿದೆ. ಜನಸಂಖ್ಯೆ ಹೆಚ್ಚಳದಿಂದ ಗ್ರಾಮೀಣರ ಕೃಷಿ ಭೂಮಿ ಗಾತ್ರ ಸಣ್ಣದಾಗುತ್ತಿದೆ. ಕುಟುಂಬದಲ್ಲಿ ನಡೆಯುವ ಪಾಲುದಾರಿಕೆಯಿಂದ ಕೃಷಿ ಭೂಮಿ ಹಿಡಿತ ಸಣ್ಣದಾಗುತ್ತಿದೆ. ಜತೆಗೆ, ಕೃಷಿ ಭೂಮಿ ವಿಸ್ತೀರ್ಣ ದಿನೇದಿನೆ ಸಂಕುಚಿತವಾಗುತ್ತಿದೆ. ಇವೆಲ್ಲವೂ ಸವಾಲುಗಳೇ. ದೇಶದ 80%ಗಿಂತ ಹೆಚ್ಚಿನ ರೈತರು 2 ಹೆಕ್ಟೇರ್ ಗಿಂತ ಕಡಿಮೆ ಕೃಷಿಭೂಮಿ ಹೊಂದಿದ್ದಾರೆ. 100ರಲ್ಲಿ 80 ರೈತರಿಗೆ 2 ಹೆಕ್ಟೇರ್ ಗಿಂತ ಕಡಿಮೆ ಕೃಷಿಭೂಮಿ ಇದೆ. ಅಂದರೆ ನಮ್ಮ ದೇಶದ ಹೆಚ್ಚಿನ ರೈತರು ಅನುಭವದಲ್ಲಿ ಸಣ್ಣ ರೈತರ ಗುಂಪಿಗೆ ಸೇರಿದವರಾಗಿದ್ದಾರೆ. ದುರದೃಷ್ಟಕರ ವಿಚಾರವೆಂದರೆ, ಹಿಂದಿನ ಕೃಷಿ ನೀತಿಗಳಲ್ಲಿ ಗುಂಪಿನ ರೈತರನ್ನು ಸವಲತ್ತುಗಳಿಂದ ಹೊರಗಿಡಲಾಗಿತ್ತು. ಸರ್ಕಾರದ ನೀತಿಗಳಲ್ಲಿ ಅವರಿಗೆ ಮಹತ್ವವನ್ನೇ ನೀಡಿಲ್ಲ. ಅವರಿಗೆ ಸರ್ಕಾರದ ಯಾವ ಸವಲತ್ತುಗಳು ಸಹ ಸಿಕ್ಕಿಲ್ಲ. ಎಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ನಾವೀಗ ಕೃಷಿ ಸುಧಾರಣೆಗಳನ್ನು ಕೈಗೊಂಡಿದ್ದೇವೆ. ದೇಶದ ಸಣ್ಣ ವರ್ಗದ ರೈತರಿಗೆ ಸವಲತ್ತು ಒದಗಿಸಲು ನಿರ್ಣಾಯಕ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ಬೆಳೆ ವಿಮಾ ಯೋಜನೆಯ ಸುಧಾರಣೆ ಅಥವಾ ಬೆಳೆಗಳಿಗೆ ನೀಡುವ ಕನಿಷ್ಠ ಬೆಂಬಲ ಬೆಲೆಯನ್ನು ಒಂದೂವರೆ ಪಟ್ಟು ಹೆಚ್ಚಿಸುವ ನಿರ್ಧಾರ, ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರಿಗೆ ಅಗ್ಗದ ಬಡ್ಡಿದರಕ್ಕೆ ಬ್ಯಾಂಕ್ ಗಳಿಂದ ಸಾಲ ಸೌಲಭ್ಯ, ಕೃಷಿಗೆ ಸೌರಶಕ್ತಿ ವಿದ್ಯುತ್ ಘಟಕಗಳನ್ನು ಒದಗಿಸುವುದು, ರೈತ ಉತ್ಪಾದಕ ಸಂಘಗಳ  ಸ್ಥಾಪನೆ ಇತ್ಯಾದಿ ಕ್ರಮಗಳು ಮತ್ತು ಪ್ರಯತ್ನಗಳ ಮೂಲಕ ಸಣ್ಣ ರೈತರ ಬಲ ಹೆಚ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಬ್ಲಾಕ್ ಮಟ್ಟದಲ್ಲಿ ಉಗ್ರಾಣ ಸೌಲಭ್ಯಗಳನ್ನು ಒದಗಿಸುವ ಆಂದೋಲನ ಆರಂಭಿಸಲಾಗುವುದು.

ಸಣ್ಣ ರೈತರಿಗೆ ಕನಿಷ್ಠ ವೆಚ್ಚಗಳನ್ನು ಭರಿಸುವ ಶಕ್ತಿ ನೀಡುವುದನ್ನು ಗಮನದಲ್ಲಿ ಇಟ್ಟುಕೊಂಡು, ಪ್ರಧಾನ ಮಂತ್ರಿಗಳ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ನಡೆಸಲಾಗುತ್ತಿದೆ. ಇದುವರೆಗೆ, 1.5 ಲಕ್ಷ ಕೋಟಿಗಿಂತ ಹೆಚ್ಚಿನ ಅನುದಾನವನ್ನು 10 ಕೋಟಿಗಿಂತ ಹೆಚ್ಚಿನ ರೈತ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಠೇವಣಿ ಇರಿಸಲಾಗಿದೆ. ದೇಶದ ಸಣ್ಣ ರೈತರ ಅಭ್ಯುದಯವೇ ನಮ್ಮ ಸಂಕಲ್ಪ ಮತ್ತು ಮಂತ್ರವಾಗಿದೆ. ಅತಿ ಸಣ್ಣ ರೈತರೇ ನಮ್ಮ ದೇಶದ ಹೆಮ್ಮೆಯಾಗಿದ್ದಾರೆ. ಇದು ನಮ್ಮ ಕನಸು ಸಹ ಆಗಿದೆ. ಮುಂಬರುವ ವರ್ಷಗಳಲ್ಲಿ, ಸಣ್ಣ ರೈತರ ಸಂಘಟಿತ ಬಲವನ್ನು ನಾವು ಹೆಚ್ಚಿಸಬೇಕಿದೆ. ಇದಕ್ಕಾಗಿ ಅವರಿಗೆ ಹೊಸ ಸೌಲಭ್ಯಗಳನ್ನು ಒದಗಿಸಿಕೊಡುತ್ತೇವೆ.

ದೇಶದ 70ಕ್ಕಿಂತ ಹೆಚ್ಚಿನ ಮಾರ್ಗಗಳಲ್ಲಿ ಕಿಸಾನ್ ರೈಲುಗಳು ಸಂಚರಿಸುತ್ತಿವೆ. ಕೃಷಿ ಉತ್ಪನ್ನಗಳನ್ನು ಕೈಗೆಟಕುವ ದರದಲ್ಲಿ ಸಾಗಿಸಲು ರೈಲುಗಳು ಸಣ್ಣ ರೈತರಿಗೆ ನೆರವಾಗುತ್ತಿವೆ. ರೈಲುಗಳಿಗೆ ಆಧುನಿಕ ಸೌಲಭ್ಯ ಒದಗಿಸಲಾಗಿದೆ. ಅರಿಶಿಣ, ಕಪ್ಪು ಅಕ್ಕಿ, ಮೆಣಸಿನಕಾಯಿ ಸೇರಿದಂತೆ ನಾನಾ ಕೃಷಿ ಉತ್ಪನ್ನಗಳನ್ನು ರೈಲುಗಳು ದೇಶ ಮತ್ತು ಹೊರರಾಷ್ಟ್ರಗಳ ವಿವಿಧ ಭಾಗಗಳಿಗೆ ರಫ್ತು ಮಾಡುತ್ತಿವೆಭಾರತದ ಮಣ್ಣಿನಲ್ಲಿ ಉತ್ಪತ್ತಿಯಾದ ಆಹಾರ ಉತ್ಪನ್ನಗಳ ಸೊಗಡು ಮತ್ತು ಸುವಾಸನೆಯು ಇಂದು, ವಿಶ್ವದ ನಾನಾ ದೇಶಗಳನ್ನು ತಲುಪುತ್ತಿರುವುದರಿಂದ ಇಡೀ ದೇಶವೇ ಹರ್ಷಚಿತ್ತವಾಗಿದೆ, ಸಂತಸ ಅನುಭವಿಸುತ್ತಿದೆ. ಭಾರತದ ಸತ್ವಭರಿತ ನೆಲದಲ್ಲಿ ಬೆಳೆದ ತರಕಾರಿಗಳು, ಹಣ್ಣುಗಳು ಮತ್ತು ಆಹಾರ ಧಾನ್ಯಗಳ ರುಚಿಯನ್ನು ಇಡೀ ವಿಶ್ವವೇ ಸವಿಯುತ್ತಿದೆ, ಆನಂದಿಸುತ್ತಿದೆ.

 

ನನ್ನ ಪ್ರೀತಿಯ ದೇಶವಾಸಿಗಳೇ,

ಇಂದು ಗ್ರಾಮಗಳ ಸಾಮರ್ಥ್ಯವನ್ನು ಹೆಚ್ಚಿಸಲು ಕೈಗೊಂಡ ಉಪಕ್ರಮಗಳಿಗೆ ಒಂದು ಉದಾಹರಣೆ ಸ್ವಾಮಿತ್ವ ಯೋಜನಾ. ನಮಗೆಲ್ಲರಿಗೂ ಗೊತ್ತಿದೆ, ಗ್ರಾಮಗಳಲ್ಲಿ ಭೂಮಿಯ ಬೆಲೆ ಏನಾಗುತ್ತದೆ ಎಂಬ ಸಂಗತಿ. ಅವರಿಗೆ ನೆಲದ ಆಧಾರದ ಮೇಲೆ ಬ್ಯಾಂಕ್ ಗಳಿಂದ ಯಾವುದೇ ಸಾಲ ದೊರೆಯುವುದಿಲ್ಲ. ಆ ನೆಲದ ಒಡೆಯರಾಗಿದ್ದರೂ ಸಹ, ಯಾಕೆಂದರೆ ಹಲವಾರು ವರ್ಷಗಳಿಂದ ಗ್ರಾಮೀಣ ಭೂಮಿಗೆ ಸಂಬಂಧಿಸಿದ ದಾಖಲೆಗಳಿಗೆ ಅನ್ಯಯಿಸುವ ಯಾವುದೇ ಕೆಲಸಗಳಾಗಿಲ್ಲ. ಇಂತಹ ಒಂದು ವ್ಯವಸ್ಥೆ ಜನರಲ್ಲಿರಲಿಲ್ಲ. ಸ್ವಾಮಿತ್ವ ಯೋಜನೆ ಪರಿಸ್ಥಿತಿಯನ್ನು ಬದಲಾವಣೆ ಮಾಡಲು ಬಯಸಿತು. ಇಂದು ಪ್ರತೀ ಗ್ರಾಮ, ಪ್ರತೀ ಮನೆ, ಪ್ರತೀ ಭೂಮಿಯನ್ನು ಡ್ರೋನ್ ಮೂಲಕ ಮ್ಯಾಪ್ ಮಾಡಲಾಗಿದೆ. ಗ್ರಾಮಗಳ ಭೂಮಿಗೆ ಸಂಬಂಧಿಸಿದ ದತ್ತಾಂಶ ಮತ್ತು ಭೂ ಒಡೆತನದ ದಾಖಲೆಗಳು ಆನ್ ಲೈನ್ ಮೂಲಕ ಅಪ್ಲೋಡ್ ಆಗುತ್ತಿವೆ. ಇದರೊಂದಿಗೆ ಗ್ರಾಮಗಳಲ್ಲಿ ಭೂಮಿಗೆ ಸಂಬಂಧಿಸಿದ ವಿವಾದಗಳು ಕೊನೆಗೊಳ್ಳುತ್ತಿರುವುದು ಮಾತ್ರವಲ್ಲ, ಗ್ರಾಮಸ್ಥರಿಗೆ ಬ್ಯಾಂಕುಗಳಿಂದ ಸುಲಭದಲ್ಲಿ ಸಾಲ ಪಡೆಯಲು ಅನುಕೂಲವಾದಂತಹ ವ್ಯವಸ್ಥೆಯೊಂದನ್ನು ರೂಪಿಸಲಾಗಿದೆ. ಗ್ರಾಮೀಣ ಬಡವರ ಭೂಮಿ ವಿವಾದಗಳಿಗೆ ಒಳಗಾಗುವುದಕ್ಕೆ ಬದಲು ಅಭಿವೃದ್ಧಿಯ ತಳಪಾಯವಾಗಬೇಕು. ಮತ್ತು ದೇಶವು ಇಂದು ಅದೇ ದಿಕ್ಕಿನಲ್ಲಿ ಮುಂದುವರೆಯುತ್ತಿದೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಸ್ವಾಮೀ ವಿವೇಕಾನಂದರು ಭಾರತದ ಭವಿಷ್ಯದ ಬಗ್ಗೆ ಮಾತನಾಡುವಾಗ, ತನ್ನ ಕಣ್ಣ ಮುಂದೆ ಭಾರತ ಮಾತೆಯ ಭವ್ಯತೆಯನ್ನು ತಂದುಕೊಳ್ಳುವಾಗ, ಅವರು ಹೇಳುತ್ತಿದ್ದರು-ಭೂತಕಾಲವನ್ನು ಎಷ್ಟು ಹಿಂದೆ ನೋಡಲು ಸಾಧ್ಯವಾಗುತ್ತದೋ ಅಷ್ಟು ಹಿಂದೆ ಹೋಗಿ ನೋಡಿ ಎಂದು. ಹಿಂದೆ ಹರಿಯುತ್ತಿರುವ ಪ್ರತಿಯೊಂದು ಹೊಸ ಝರಿಗಳ ನೀರನ್ನು ಕುಡಿದು ನೋಡಿ ಮತ್ತು ಬಳಿಕ ಮುಂದೆ ನೋಡಿ ಎಂಬುದಾಗಿ. ಮುಂದೆ ಸಾಗಿ ಭಾರತವನ್ನು ಭವ್ಯವಾಗಿಸಿ, ಶ್ರೇಷ್ಟವನ್ನಾಗಿಸಿ ಮತ್ತು ಹಿಂದೆಂದಿಗಿಂತಲೂ ಉತ್ತಮವನ್ನಾಗಿಸಿ. ಸ್ವಾತಂತ್ರ್ಯದ 75 ನೇ ವರ್ಷದಲ್ಲಿ, ದೇಶದ ಅಪರಿಮಿತ ಸಾಮರ್ಥ್ಯವನ್ನು ನಂಬಿಕೊಂಡು ಮುಂದೆ ಸಾಗುವುದು ನಮ್ಮ ಕರ್ತವ್ಯ. ನಾವು ಹೊಸ ತಲೆಮಾರಿನ ಮೂಲಸೌಕರ್ಯಕ್ಕಾಗಿ ಒಗ್ಗೂಡಿ ಕೆಲಸ ಮಾಡಬೇಕು, ವಿಶ್ವದರ್ಜೆಯ ಉತ್ಪಾದನೆಗಾಗಿ ನಾವು ಒಗ್ಗೂಡಿ ಕೆಲಸ ನಿರ್ವಹಿಸಬೇಕು, ನವೀನ ಅನ್ವೇಷಣೆಗಳಿಗಾಗಿ ನಾವು ಜೊತೆಗೂಡಿ ಕೆಲಸ ಮಾಡಬೇಕು, ನಾವು ಹೊಸ ಕಾಲದ ತಂತ್ರಜ್ಞಾನಕ್ಕಾಗಿ ಜತೆಗೂಡಿ ಕೆಲಸ ಮಾಡಬೇಕು.

ನನ್ನ ಪ್ರೀತಿಯ ದೇಶವಾಸಿಗಳೇ,

ಆಧುನಿಕ ಜಗತ್ತಿನ ಪ್ರಗತಿಯ ನೆಲೆಗಟ್ಟು ಆಧುನಿಕ ಮೂಲಸೌಕರ್ಯದ ಮೇಲೆ ನಿಂತಿದೆ. ಇದು ಮಧ್ಯಮ ವರ್ಗದ ಜನತೆಯ ಆವಶ್ಯಕತೆಗಳು ಮತ್ತು ಆಶೋತ್ತರಗಳನ್ನು ಈಡೇರಿಸಲಿದೆ. ದುರ್ಬಲ ಮೂಲಸೌಕರ್ಯವು ಅಭಿವೃದ್ಧಿಯ ವೇಗವನ್ನು ಕುಂಟಿತ ಮಾಡುತ್ತದೆ ಮತ್ತು ನಗರದ ಮಧ್ಯಮ ವರ್ಗ ಕೂಡಾ ಇದರಿಂದ ಬಳಲುತ್ತದೆ.

ನಾವು ಮುಂದಿನ ತಲೆಮಾರಿನ ಮೂಲಸೌಕರ್ಯಕ್ಕಾಗಿ ಒಗ್ಗೂಡಿ ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ವಿಶ್ವ ದರ್ಜೆಯ ಉತ್ಪಾದನಾ ಸೌಲಭ್ಯ, ಅತ್ಯಾಧುನಿಕ ಶೋಧನೆ ಮತ್ತು ಹೊಸ ಕಾಲದ ತಂತ್ರಜ್ಞಾನವನ್ನು ನಾವು ಅಳವಡಿಸಿಕೊಳ್ಳಬೇಕಿದೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಆವಶ್ಯಕತೆಯನ್ನು ಮನಗಂಡು, ದೇಶವು ಸಾಗರಗಳಿಂದ ಮೊದಲ್ಗೊಂಡು ಭೂಮಿ ಹಾಗು ಆಗಸ ವಲಯದಲ್ಲಿ ಅಸಾಮಾನ್ಯವಾದ ವೇಗ ಮತ್ತು ಪ್ರಮಾಣವನ್ನು ತೋರಿಸಿದೆ. ಹೊಸ ಜಲಮಾರ್ಗಗಳಾಗಿರಲಿ, ಅಥವಾ ಹೊಸ ಸ್ಥಳಗಳನ್ನು ಸಮುದ್ರ ವಿಮಾನಗಳ ಮೂಲಕ ಸಂಪರ್ಕಿಸುವುದಾಗಿರಲಿ, ತ್ವರಿತ ಪ್ರಗತಿಯಲ್ಲಿ ಕಾರ್ಯಗಳು ನಡೆಯುತ್ತಿವೆ. ಭಾರತೀಯ ರೈಲ್ವೇ ಕೂಡ ಅದರ ಆಧುನಿಕ ಅವತಾರಕ್ಕೆ ತ್ವರಿತವಾಗಿ ಹೊಂದಿಕೊಳ್ಳುತ್ತಿದೆ. ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲು ನಿರ್ಧರಿಸಿದೆ. ನಿಮಗೆ ಗೊತ್ತಿರಬಹುದು ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು 75 ವಾರಗಳ ಕಾಲ ಆಚರಿಸಲು ನಿರ್ಧರಿಸಿದ್ದೇವೆ. ಅದು ಮಾರ್ಚ್ 12 ರಿಂದ ಆರಂಭಗೊಂಡು 2023ರ ಆಗಸ್ಟ್ 15ರವರೆಗೆ ನಡೆಯಲಿದೆ. ನಾವು ಹೊಸ ಉತ್ಸಾಹದೊಂದಿಗೆ ಮುನ್ನಡೆಯಬೇಕು ಮತ್ತು ಆದುದರಿಂದ ದೇಶವು ಬಹಳ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ.

75 ವಾರಗಳ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ 75 ವಂದೇ ಭಾರತ್ ರೈಲುಗಳು ದೇಶದ ಪ್ರತೀ ಮೂಲೆಗಳನ್ನು ಜೋಡಿಸಲಿವೆ. ದೇಶದಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿರುವ ವೇಗ ಮತ್ತು ಉಡಾನ್ ಯೋಜನೆ ದೂರ ಪ್ರದೇಶಗಳನ್ನು ಬೆಸೆಯುತ್ತಿರುವ ವೇಗ ಅಭೂತಪೂರ್ವವಾದುದು. ಉತ್ತಮ ವಾಯು ಸಂಪರ್ಕ ಜನರ ಕನಸುಗಳಿಗೆ ಹೇಗೆ ಹೊಸ ವಿಮಾನಗಳನ್ನು ಒದಗಿಸುತ್ತಿದೆ ಎಂಬುದನ್ನು ನಾವು ಕಾಣಬಹುದು.

ನನ್ನ ಪ್ರೀತಿಯ ದೇಶವಾಸಿಗಳೇ,

ಆಧುನಿಕ ಮೂಲಸೌಕರ್ಯಗಳ ಜೊತೆಗೆ ಮೂಲಸೌಕರ್ಯ ನಿರ್ಮಾಣದಲ್ಲಿ ಸಮಗ್ರ ಮತ್ತು ಸಂಯೋಜಿತ ಧೋರಣೆಯನ್ನು ಅನುಸರಿಸಬೇಕಾದ ಅವಶ್ಯಕತೆ ಬಹಳವಿದೆ. ಸದ್ಯೋಭವಿಷ್ಯದಲ್ಲಿ, ನಾವು ಪ್ರಧಾನ ಮಂತ್ರಿ ಅವರ ರಾಷ್ಟ್ರೀಯ ಮಹಾ ಯೋಜನೆ ’ಗತಿ ಶಕ್ತಿ” ಯನ್ನು ಆರಂಭ ಮಾಡಲಿದ್ದೇವೆ. ಇದೊಂದು ಬೃಹತ್ ಯೋಜನೆಯಾಗಿದ್ದು, ಕೋಟ್ಯಾಂತರ ದೇಶವಾಸಿಗಳ ಕನಸುಗಳನ್ನು ಈಡೇರಿಸಲಿದೆ. 100 ಲಕ್ಷ ಕೋ.ರೂ.ಗಳಿಗೂ ಅಧಿಕ ಮೊತ್ತದ ಯೋಜನೆ ಲಕ್ಷಾಂತರ ಯುವ ಜನತೆಗೆ ಹೊಸ ಉದ್ಯೋಗಾವಕಾಶಗಳನ್ನು ನಿರ್ಮಾಣ ಮಾಡಲಿದೆ.

ಗತಿ ಶಕ್ತಿಯು ನಮ್ಮ ದೇಶಕ್ಕೆ ರಾಷ್ಟ್ರೀಯ ಮೂಲಸೌಕರ್ಯ ಮಹಾ ಯೋಜನೆ ಆಗಲಿದೆ. ಇದು ಸಮಗ್ರ ಮೂಲಸೌಕರ್ಯಕ್ಕೆ ಅಡಿಪಾಯ ಹಾಕಲಿದೆ ಮತ್ತು ಅದು ನಮ್ಮ ಆರ್ಥಿಕತೆಯ ಮುನ್ನಡೆಗೆ ಸಮಗ್ರ ಮತ್ತು ಸಂಯೋಜಿತ ಪಥವನ್ನು ಒದಗಿಸಲಿದೆ. ಈಗ ನಮ್ಮ ಸಾರಿಗೆ ವ್ಯವಸ್ಥೆಗಳ ನಡುವೆ ಸಮನ್ವಯ ಎಂಬುದು ಇಲ್ಲ. ಗತಿ ಶಕ್ತಿ ಇಂತಹ ತಡೆಗಳನ್ನು ನಿವಾರಿಸಲಿದೆ. ಇದು ಜನಸಾಮಾನ್ಯರ ಪ್ರಯಾಣ ಅವಧಿಯನ್ನು ಕಡಿಮೆ ಮಾಡಲಿದೆ ಮತ್ತು ನಮ್ಮ ಉದ್ಯಮ ವಲಯದ ಉತ್ಪಾದಕತೆ ಕೂಡಾ ಹೆಚ್ಚಲಿದೆ. ಗತಿ ಶಕ್ತಿಯು ನಮ್ಮ ಸ್ಥಳೀಯ ಉತ್ಪಾದಕರು ಜಾಗತಿಕ ಸ್ಪರ್ಧೆಗಳನ್ನು ಎದುರಿಸಲು ಸಮರ್ಥವಾಗುವಂತೆ ಮಾಡುವ ನಿಟ್ಟಿನಲ್ಲಿ ಬಹಳ ದೂರ ಕೊಂಡೊಯ್ಯಲಿದೆ ಮತ್ತು ಇದು ಭವಿಷ್ಯದ ಆರ್ಥಿಕ ವಲಯಗಳನ್ನು ನಿರ್ಮಾಣ ಮಾಡುವ ಹೊಸ ಸಾಧ್ಯತೆಗಳನ್ನು ಅಭಿವೃದ್ಧಿ ಮಾಡಲಿದೆ. ಈ ದಶಕದಲ್ಲಿ ವೇಗ ಎಂಬ ಶಕ್ತಿಯು ಭಾರತದ ಪರಿವರ್ತನೆಗೆ ತಳಪಾಯವಾಗಲಿದೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಭಾರತವು ಅಭಿವೃದ್ಧಿಯ ಪಥದಲ್ಲಿ ಮುಂದಕ್ಕೆ ಸಾಗುತ್ತಿರುವಾಗ ಅದು ತನ್ನ ಉತ್ಪಾದನಾ ಮತ್ತು ರಫ್ತು ಪ್ರಮಾಣ –ಇವೆರಡನ್ನೂ ಹೆಚ್ಚಿಸಬೇಕು.

ನನ್ನ ಪ್ರೀತಿಯ ದೇಶವಾಸಿಗಳೇ,

ಅಭಿವೃದ್ಧಿಯ ಪಥದ ಮೆಟ್ಟಿಲುಗಳನ್ನೇರಲು, ಭಾರತವು ಅದರ ಉತ್ಪಾದನೆ ಮತ್ತು ರಫ್ತುಗಳನ್ನು ಸಂಯೋಜಿಸಬೇಕು. ನೀವು ಗಮನಿಸಿದ್ದೀರಿ, ಕೆಲವು ದಿನಗಳ ಹಿಂದೆ, ಭಾರತವು ತನ್ನ ಮೊದಲ ದೇಶೀಯ ವಿಮಾನ ವಾಹಕ ಐ.ಎನ್.ಎಸ್. ವಿಕ್ರಾಂತ್ ನ್ನು ಪರೀಕ್ಷಾರ್ಥವಾಗಿ ಸಮುದ್ರಕ್ಕಿಳಿಸಿದೆ. ಇಂದು ಭಾರತವು ತನ್ನದೇ ಆದ ದೇಶೀಯ ಯುದ್ದ ವಿಮಾನವನ್ನು , ತನ್ನದೇ ಸಬ್ ಮೆರೀನ್ ತಯಾರಿಸುತ್ತಿದೆ. ಗಗನಯಾನ್ ಬಾಹ್ಯಾಕಾಶದಲ್ಲಿ ಭಾರತದ ಧ್ವಜವನ್ನು ಅರಳಿಸಲಿದೆ. ಇದು ದೇಶೀಯ ಉತ್ಪಾದನೆಗಳಲ್ಲಿ ನಮ್ಮ ಅಪರಿಮಿತ ಸಾಮರ್ಥ್ಯಗಳಿಗೆ ಸಾಕ್ಷಿ.

ದೇಶವು ಉತ್ಪಾದನಾ ಆಧಾರಿತ ಪ್ರೋತ್ಸಾಹಧನವನ್ನೂ ಘೋಷಿಸಿದೆ. ಕೊರೊನಾದಿಂದಾಗಿ ಉದ್ಭವಿಸಿರುವ ಹೊಸ ಆರ್ಥಿಕ ಪರಿಸ್ಥಿತಿಗಳಿಂದಾಗಿ ನಮ್ಮ ಮೇಕ್ ಇನ್ ಇಂಡಿಯಾವನ್ನು ಬಲಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಯೋಜನೆಯಿಂದಾಗಿ ಬದಲಾವಣೆಗಳು ಜಾರಿಗೆ ಬಂದಿರುವುದಕ್ಕೆ ಇಲೆಕ್ಟ್ರಾನಿಕ್ ಉತ್ಪಾದನಾ ವಲಯ ಒಂದು ಉದಾಹರಣೆ. ಏಳು ವರ್ಷಗಳ ಹಿಂದೆ ನಾವು ಎಂಟು ಬಿಲಿಯನ್ ಡಾಲರ್ ಮೌಲ್ಯದ ಮೊಬೈಲ್ ಫೋನ್ ಗಳನ್ನು ಆಮದು ಮಾಡುತ್ತಿದ್ದೆವು. ಆದರೆ ಈಗ ಆಮದು ಗಮನೀಯವಾಗಿ ಇಳಿಕೆಯಾಗಿದೆ, ಮತ್ತು ಇಂದು ನಾವು ಕೂಡಾ ಮೂರು ಬಿಲಿಯನ್ ಡಾಲರ್ ಮೌಲ್ಯದ ಮೊಬೈಲ್ ಫೋನುಗಳನ್ನು ರಫ್ತು ಮಾಡುತ್ತಿದ್ದೇವೆ.

ಇಂದು, ನಮ್ಮ ಉತ್ಪಾದನಾ ವಲಯ ವೇಗ ಪಡೆದುಕೊಳ್ಳುತ್ತಿರುವಾಗ, ನಮ್ಮ ಗಮನವು ನಾವು ಭಾರತದಲ್ಲಿ ಉತ್ಪಾದಿಸುತ್ತಿರುವ ವಸ್ತುಗಳು ಅತ್ಯುನ್ನತ ಗುಣಮಟ್ಟದವಾಗಿರಬೇಕು ಮತ್ತು ಅವು ಜಾಗತಿಕ ಸ್ಪರ್ಧೆಯನ್ನು ಎದುರಿಸಲು ಸಮರ್ಥವಾಗಿರಬೇಕು ಎಂಬುದರತ್ತ ಇರಬೇಕು. ಸಾಧ್ಯವಿದ್ದರೆ ನಾವು ಒಂದು ಹೆಜ್ಜೆ ಮುಂದೆ ಹೋಗಿ ಜಾಗತಿಕ ಮಾರುಕಟ್ಟೆಗೆ ನಮ್ಮನ್ನು ನಾವು ಸಿದ್ಧವಾಗಿರಲು ಮುಂಚಿತವಾಗಿ ಪೂರಕವಾದಂತಹ ಕ್ರಮಗಳನ್ನು ಕೈಗೊಳ್ಳಬೇಕು. ನಾವು ಗುರಿಯನ್ನು ಇಟ್ಟುಕೊಳ್ಳಬೇಕು. ನಾನು ದೇಶದ ಎಲ್ಲಾ ಉತ್ಪಾದಕರಿಗೆ ಕಳಕಳಿಯಿಂದ ಮನವಿ ಮಾಡಿಕೊಳ್ಳುವುದೇನೆಂದರೆ, ನೀವು ಸಾಗರೋತ್ತರ ದೇಶಗಳಲ್ಲಿ ಮಾರಾಟ ಮಾಡುವ ಉತ್ಪನ್ನ ಬರೇ ನಿಮ್ಮ ಕಂಪೆನಿ ತಯಾರಿಸಿದ ಉತ್ಪನ್ನ ಮಾತ್ರವಲ್ಲ ಅದು ನಮ್ಮ ದೇಶದ ಗುರುತು ಎಂಬುದನ್ನು ನೀವು ಎಂದೂ ಮರೆಯಬಾರದು. ಭಾರತದ ಪ್ರತಿಷ್ಟೆ ಮತ್ತು ನಮ್ಮ ದೇಶದ ಎಲ್ಲಾ ನಾಗರಿಕರ ನಂಬಿಕೆಯನ್ನೂ ಅದು ಒಳಗೊಂಡಿರುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಆದುದರಿಂದ ನಾನು ನಮ್ಮೆಲ್ಲ ಉತ್ಪಾದಕರಿಗೆ, ತಯಾರಕರಿಗೆ ಹೇಳುತ್ತೇನೆ-ನಿಮ್ಮ ಪ್ರತಿಯೊಂದು ಉತ್ಪನ್ನವೂ ಭಾರತದ ಬ್ರಾಂಡ್ ಅಂಬಾಸೆಡರ್ ಇದ್ದಂತೆ. ಯಾರಾದರೊಬ್ಬರು ಅದನ್ನು ಖರೀದಿಸಿದಾಗ ಮತ್ತು ಅದನ್ನು ಬಳಸುವಾಗ, ಗ್ರಾಹಕ ಆಗ ಹೆಮ್ಮೆಯಿಂದ ಹೇಳುವಂತಾಗಬೇಕು -”ಇದು ಭಾರತದ ತಯಾರಿಕೆ” ಎಂಬುದಾಗಿ. ಆ ಮನಸ್ಥಿತಿ ನಮಗೆ ಅಗತ್ಯ. ನೀವೆಲ್ಲರೂ ಈಗ ಜಾಗತಿಕ ಮಾರುಕಟ್ಟೆಯನ್ನು ಗೆಲ್ಲಲು ಯತ್ನಿಸಬೇಕು. ಈ ಕನಸನ್ನು ನನಸು ಮಾಡಲು ಸರಕಾರ ಪೂರ್ಣವಾಗಿ ನಿಮ್ಮೊಂದಿಗೆ ಇದೆ

ನನ್ನ ಪ್ರೀತಿಯ ದೇಶವಾಸಿಗಳೇ,

ದೇಶದಲ್ಲಿ ಇಂದು ಹಲವು ವಲಯಗಳಲ್ಲಿ ಮತ್ತು, ಸಣ್ಣ ಟಯರ್ 2 ಮತ್ತು ಟಯರ್ 3 ನಗರಗಳಲ್ಲಿ ಅನೇಕ ಹೊಸ ನವೋದ್ಯಮಗಳು ಸ್ಥಾಪನೆಯಾಗುತ್ತಿವೆ. ಭಾರತೀಯ ಉತ್ಪನ್ನಗಳು ಅಂತರರಾಜ್ಯ ಮಾರುಕಟ್ಟೆಗಳನ್ನು ಪ್ರವೇಶಿಸುವಲ್ಲಿ ಅವುಗಳು ಬಹಳ ದೊಡ್ಡ ಪಾತ್ರವನ್ನು ವಹಿಸುತ್ತವೆ. ಸರಕಾರವು ನವೋದ್ಯಮಗಳ ಜೊತೆ ನಿಲ್ಲುತ್ತದೆ. ಅವುಗಳಿಗೆ ಹಣಕಾಸು ನೆರವು ನೀಡುವುದಿರಲಿ, ನಗದು ರಿಯಾಯತಿ ನೀಡುವುದಿರಲಿ, ಅವುಗಳಿಗಾಗಿ ನಿಯಮಗಳ ಸರಳೀಕರಣ ಮಾಡುವುದಿರಲಿ, ಸರಕಾರವು ಪೂರ್ಣವಾಗಿ ಅವರೊಂದಿಗೆ ಇರುತ್ತದೆ. ಕೊರೊನಾದ ಸಂಕಷ್ಟದ ಸಮಯದಲ್ಲಿಯೂ ಸಾವಿರಾರು ನವೋದ್ಯಮಗಳು ಉದ್ಭವಿಸಿರುವುದನ್ನು ನಾವು ನೋಡುತ್ತಿದ್ದೇವೆ. ಅವುಗಳು ಅತ್ಯದ್ಭುತ ಯಶಸ್ಸಿನೊಂದಿಗೆ ಮುನ್ನಡೆ ಸಾಧಿಸುತ್ತಿವೆ. ಹಿಂದಿನ ವರ್ಷದ ನವೋದ್ಯಮಗಳು ಇಂದಿನ ಬೃಹತ್ ಉದ್ಯಮಗಳಾಗುತ್ತಿವೆ. ಅವುಗಳ ಮಾರುಕಟ್ಟೆ ಮೌಲ್ಯ ಸಾವಿರಾರು ಕೋಟಿ ರೂಪಾಯಿಗಳಾಗುತ್ತಿದೆ.

ಇವು ನಮ್ಮ ದೇಶದಲ್ಲಿ ಇಂದು ಸಂಪತ್ತು ನಿರ್ಮಾಣ ಮಾಡುತ್ತಿರುವ ಹೊಸ ಮಾದರಿಗಳು. ಅವುಗಳು ತಮ್ಮ ವಿಶಿಷ್ಟ ಯೋಜನೆ, ಚಿಂತನೆಗಳ ಮೂಲಕ ತಮ್ಮ ಕಾಲ ಮೇಲೆ ನಿಂತು ಮುನ್ನಡೆಯುತ್ತಿವೆ ಮತ್ತು ಜಗತ್ತನ್ನು ಗೆಲ್ಲುವ ಕನಸಿನೊಂದಿಗೆ ಸಾಗುತ್ತಿವೆ. ಅವು ಹೊಸ ರೀತಿಯ ಸಂಪತ್ತು ಸೃಷ್ಟಿಕಾರರು.ಅವುಗಳು ಅವುಗಳ ವಿಶಿಷ್ಟ ಚಿಂತನೆಯ ಬಲದಲ್ಲಿ ಮುನ್ನಡೆಯುತ್ತಿವೆ ಮತ್ತು ಜಗತ್ತನ್ನು ಗೆಲ್ಲುವ ಕನಸನ್ನು ಹೊಂದಿವೆ. ಈ ದಶಕದಲ್ಲಿ ನಾವು ಭಾರತದ ನವೋದ್ಯಮಗಳು ಮತ್ತು ನವೋದ್ಯಮ ಪರಿಸರ ವ್ಯವಸ್ಥೆ ಇಡೀ ಜಗತ್ತಿನಲ್ಲಿಯೇ ಅತ್ಯುತ್ತಮವಾಗಿರುವಂತೆ ಮಾಡುವಲ್ಲಿ ಅವಿರತವಾಗಿ ದುಡಿಯಬೇಕಾದ ಅಗತ್ಯವಿದೆ.

ನನ್ನ ದೇಶವಾಸಿಗಳೇ,

ಪ್ರಮುಖ ಬದಲಾವಣೆಗಳನ್ನು ಕೈಗೊಳ್ಳಲು ಮತ್ತು ಸುಧಾರಣೆಗಳನ್ನು ಜಾರಿಗೆ ತರಲು ರಾಜಕೀಯ ಇಚ್ಛಾಶಕ್ತಿ ಬೇಕು. ಭಾರತದಲ್ಲಿ ರಾಜಕೀಯ ಇಚ್ಛಾಶಕ್ತಿಗೆ ಯಾವುದೇ ಕೊರತೆ ಇಲ್ಲದಿರುವುದನ್ನು ಜಗತ್ತು ಈಗ ಗಮನಿಸುತ್ತಿದೆ. ಸುಧಾರಣೆಗಳನ್ನು ಅನುಷ್ಟಾನಕ್ಕೆ ತರಲು ಉತ್ತಮ ಮತ್ತು ಸ್ಮಾರ್ಟ್ ಆಡಳಿತ ಅವಶ್ಯ. ಆಡಳಿತದಲ್ಲಿ ಇಲ್ಲಿ ಭಾರತ ಹೇಗೆ ಹೊಸ ಅಧ್ಯಾಯವನ್ನು ಬರೆಯುತ್ತಿದೆ ಎಂಬುದನ್ನು ಜಗತ್ತು ಈಗ ನೋಡುತ್ತಿದೆ. “ಅಮೃತ ಕಾಲ” ದ ದಶಕದಲ್ಲಿ ನಾವು ಮುಂದಿನ ತಲೆಮಾರಿನ ಸುಧಾರಣೆಗಳಿಗೆ ಆದ್ಯತೆಯನ್ನು ನೀಡುತ್ತೇವೆ...ಸೇವಾ ಪೂರೈಕೆಯಂತಹ ಎಲ್ಲಾ ಸೌಲಭ್ಯಗಳು ನಾಗರಿಕರಿಗೆ ಕೊನೆಯ ಮೈಲಿನವರೆಗೂ ತಲುಪುವುದನ್ನು, ಕೊನೆಯ ವ್ಯಕ್ತಿಗೂ ಯಾವುದೇ ಅಡೆ ತಡೆ ಇಲ್ಲದೆ ಅಥವಾ ತೊಂದರೆಗಳಿಲ್ಲದೆ ತಲುಪುವುದನ್ನು ಖಾತ್ರಿಗೊಳಿಸುತ್ತೇವೆ. ದೇಶದ ಸಮಗ್ರ ಅಭಿವೃದ್ಧಿಗಾಗಿ ಜನರ ಬದುಕಿನಲ್ಲಿ ಸರಕಾರದ ಅನವಶ್ಯಕ ಮಧ್ಯಪ್ರವೇಶ ಮತ್ತು ಸರಕಾರದ ಪ್ರಕ್ರಿಯೆಗಳನ್ನು ಕೊನೆಗಾಣಿಸಬೇಕಾಗಿದೆ.

ಮೊದಲು, ಸರಕಾರವೇ ಚಾಲಕನ ಸ್ಥಾನದಲ್ಲಿರುತ್ತಿತ್ತು. ಮತ್ತು ಇದು ಕಾಲದ ಬೇಡಿಕೆಯೂ ಆಗಿದ್ದಿರಬಹುದು. ಆದರೆ ಈಗ ಕಾಲ ಬದಲಾಗಿದೆ. ಕಳೆದ ಏಳು ವರ್ಷಗಳಲ್ಲಿ ದೇಶದ ಜನರನ್ನು ಅನವಶ್ಯಕ ಕಾನೂನುಗಳ ಮತ್ತು ಪ್ರಕ್ರಿಯೆಗಳ ಜಾಲದಿಂದ ಮುಕ್ತ ಮಾಡುವ ಪ್ರಯತ್ನಗಳು ತೀವ್ರಗತಿಯಿಂದ ನಡೆಯುತ್ತಿವೆ. ಇದುವರೆಗೆ ದೇಶದ ನೂರಾರು ಹಳೆಯ ಕಾನೂನುಗಳನ್ನು ತೆಗೆದು ಹಾಕಲಾಗಿದೆ. ಈ ಕೊರೊನಾ ಜಾಗತಿಕ ಸಾಂಕ್ರಾಮಿಕದ ಕಾಲದಲ್ಲಿಯೂ ಸರಕಾರವು 15,000 ಕ್ಕೂ ಅಧಿಕ ಬದ್ಧತೆ, ಅನುಸರಣೆಗಳನ್ನು ತೆಗೆದುಹಾಕಿದೆ. ಈಗ ನೀವು ನೋಡಿ, ನಿಮ್ಮ ಅನುಭವಕ್ಕೂ ಬಂದಿರಬಹುದು, ಸರಕಾರದ ಸಣ್ಣ ಕೆಲಸಕ್ಕೆ ಬಹಳಷ್ಟು ಅಡೆ ತಡೆಗಳು ಮತ್ತು ಕಾಗದ ಪತ್ರಗಳ ಕೆಲಸ ಇರುತ್ತಿತ್ತು. ಇದುವರೆಗೆ ಇಂತಹ ಸ್ಥಿತಿ ಇತ್ತು. ನಾವು 15,000 ಅನುಸರಣೆಗಳಿಗೆ ವಿದಾಯ ಹೇಳಿದ್ದೇವೆ.

ಸುಮ್ಮನೆ ಕಲ್ಪಿಸಿಕೊಳ್ಳಿ –ನಾನು ನಿಮಗೊಂದು ಉದಾಹರಣೆ ಕೊಡಲಿಚ್ಛಿಸುತ್ತೇನೆ. ಭಾರತದಲ್ಲಿ ಒಂದು ಕಾನೂನು 200 ವರ್ಷಗಳಿಂದ ಜಾರಿಯಲ್ಲಿತ್ತು, 200 ವರ್ಷ ಅಂದರೆ 1857 ಕ್ಕಿಂತಲೂ ಮೊದಲು. ಈ ಕಾನೂನಿನ ಅನ್ವಯ, ದೇಶದ ನಾಗರಿಕರಿಗೆ ನಕ್ಷೆಯನ್ನು (ಮ್ಯಾಪ್) ಮಾಡುವ ಹಕ್ಕು ಇರಲಿಲ್ಲ. ಈಗ ಕಲ್ಪಿಸಿಕೊಳ್ಳಿ, ಅದು 1857 ರಿಂದ ಜಾರಿಯಲ್ಲಿತ್ತು. ನೀವೊಂದು ನಕ್ಷೆಯನ್ನು ತಯಾರಿಸಬೇಕಾದರೆ ಆಗ ಸರಕಾರದಿಂದ ಅನುಮತಿ ಪಡೆಯಬೇಕು, ನೀವು ಪುಸ್ತಕದಲ್ಲಿ ನಕ್ಷೆಯನ್ನು ಮುದ್ರಿಸಬೇಕಿದ್ದರೆ ಆಗಲೂ ಸರಕಾರದಿಂದ ಅನುಮತಿ ಪಡೆಯಬೇಕಿತ್ತು; ನಕ್ಷೆ ಕಳೆದುಹೋದಲ್ಲಿ ಬಂಧನದ ಅವಕಾಶವೂ ಇತ್ತು. ಈಗಿನ ದಿನಗಳಲ್ಲಿ ಪ್ರತೀ ಫೋನಿನಲ್ಲಿಯೂ ಮ್ಯಾಪ್ ಆಪ್ ಇರುತ್ತದೆ. ಉಪಗ್ರಹಗಳಿಗೆ ಬಹಳಷ್ಟು ಅಧಿಕಾರವಿದೆ!. ಈಗ ನಾವು ಇಂತಹ ಕಾನೂನುಗಳ ಹೊರೆಯನ್ನು ಹೊತ್ತುಕೊಂಡು ಮುನ್ನಡೆಯುವುದು ಹೇಗೆ ಸಾಧ್ಯ?.ಈ ಬದ್ಧತೆಯ, ಅನುಸರಣೆಯ ಹೊರೆಯಿಂದ ಕಳಚಿಕೊಳ್ಳುವುದು, ಮುಕ್ತವಾಗುವುದು ಬಹಳ ಮುಖ್ಯ. ಮ್ಯಾಪಿಂಗ್, ಬಾಹ್ಯಾಕಾಶ, ಮಾಹಿತಿ ತಂತ್ರಜ್ಞಾನ ಮತ್ತು ಬಿ.ಪಿ.ಒ. ಗಳಂತಹ ವಿವಿಧ ಕ್ಷೇತ್ರಗಳಲ್ಲಿ ಹಲವಾರು ನಿಬಂಧನೆಗಳನ್ನು ನಾವು ತೆಗೆದು ಹಾಕಿದ್ದೇವೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಜೀವನಕ್ಕೆ ಅನುಕೂಲಕರ ತಾಣವನ್ನಾಗಿ ಮಾಡಲು ಮತ್ತು ವ್ಯಾಪಾರೋದ್ಯಮಕ್ಕೆ ಅನುಕೂಲಕರ ತಾಣವನ್ನಾಗಿ ರೂಪಿಸಲು ಅನಗತ್ಯ ಕಾನೂನುಗಳ ಹಿಡಿತದಿಂದ ಮುಕ್ತಿ ಕೂಡಾ ಬಹಳ ಮುಖ್ಯ. ನಮ್ಮ ದೇಶದ ಕೈಗಾರಿಕೋದ್ಯಮಗಳು ಮತ್ತು ವ್ಯಾಪಾರೋದ್ಯಮಗಳು ಬದಲಾವಣೆಯನ್ನು ಇಂದು ಅನುಭವಿಸುತ್ತಿವೆ.

ಇಂದು ಡಜನ್ನುಗಟ್ಟಲೆ ಕಾರ್ಮಿಕ ಕಾನೂನುಗಳನ್ನು ಬರೇ ನಾಲ್ಕು ಸಂಹಿತೆಗಳಲ್ಲಿ ಅಡಕ ಮಾಡಲಾಗಿದೆ. ತೆರಿಗೆ ಸಂಬಂಧಿ ವ್ಯವಸ್ಥೆಗಳನ್ನು ಸುಲಭ ಮಾಡಲಾಗಿದೆ ಮತ್ತು ಇಂದು ಅವು ಮುಖರಹಿತವಾಗಿವೆ. ಈ ಸುಧಾರಣೆಗಳು ಸರಕಾರಕ್ಕೆ ಮಾತ್ರ ಸೀಮಿತವಾಗಿರದಂತೆ ನಾವೆಲ್ಲರೂ ಇಂದು ಒಗ್ಗೂಡಿ ಕೆಲಸ ಮಾಡಬೇಕು ಹಾಗು ಅವು ಗ್ರಾಮ ಪಂಚಾಯತ್ ಗಳು, ಮುನ್ಸಿಪಲ್ ಕಾರ್ಪೋರೇಶನ್ ಗಳು ಹಾಗು ಮುನ್ಸಿಪಾಲ್ಟಿಗಳ ಮಟ್ಟಕ್ಕೆ ತಲುಪುವಂತೆ ಮಾಡಬೇಕು. ನಾನು ಎಲ್ಲಾ ಕೇಂದ್ರ ಮತ್ತು ರಾಜ್ಯ ಸರಕಾರಗಳ ಇಲಾಖೆಗಳಿಗೆ ಈಗಿರುವ ನಿಯಮಗಳು ಮತ್ತು ಪ್ರಕ್ರಿಯೆಗಳನ್ನು ಪರಿಷ್ಕರಿಸಲು ಪ್ರಚಾರಾಂದೋಲನವನ್ನು ಕೈಗೊಳ್ಳಬೇಕು ಎಂದು ಕಳಕಳಿಯ ಮನವಿ ಮಾಡುತ್ತೇನೆ. ನಾವು ದೇಶದ ಜನರಿಗೆ ಹೊರೆಯಾಗಿರುವ, ಹಿಂಜರಿಕೆ ಉಂಟು ಮಾಡುತ್ತಿರುವ ಪ್ರತೀ ನಿಯಮಗಳನ್ನು, ಪ್ರಕ್ರಿಯೆಗಳನ್ನು ತೆಗೆದು ಹಾಕಬೇಕು. 70-75 ವರ್ಷಗಳಲ್ಲಿ ದಾಸ್ತಾನು ಆಗಿರುವಂತಹದು ಒಂದು ದಿನ ಅಥವಾ ಒಂದು ವರ್ಷದಲ್ಲಿ ತೊಲಗಿ ಹೋಗಲಾರದು ಎಂಬುದು ನನಗೆ ತಿಳಿದಿದೆ. ಆದರೆ ನಾವು ಉದ್ದೇಶದೊಂದಿಗೆ ಕೆಲಸ ಆರಂಭ ಮಾಡಿದರೆ, ನಾವದನ್ನು ಮಾಡಲು ಖಂಡಿತವಾಗಿಯೂ ಶಕ್ತರಾಗುತ್ತೇವೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಇದನ್ನು ಮನಸ್ಸಿನಲ್ಲಿಟ್ಟುಕೊಂಡು, ಸರಕಾರವು ಕರ್ಮಯೋಗಿ ಆಂದೋಲನವನ್ನು ಮತ್ತು ಸಾಮರ್ಥ್ಯ ವೃದ್ಧಿ ಆಯೋಗವನ್ನು ಅಧಿಕಾರಶಾಹಿಯಲ್ಲಿ ಜನ ಕೇಂದ್ರಿತ ಧೋರಣೆಯನ್ನು ಹೆಚ್ಚಿಸುವುದಕ್ಕಾಗಿ ಮತ್ತು ಅವರ ದಕ್ಷತೆಯನ್ನು ಸುಧಾರಿಸುವುದಕ್ಕಾಗಿ ಆರಂಭಿಸಿದೆ.

ನನ್ನ ಪ್ರೀತಿಯ ದೇಶವಾಸಿಗಳೇ,

ನಮ್ಮ ಶಿಕ್ಷಣ , ಶಿಕ್ಷಣ ವ್ಯವಸ್ಥೆ, ಶಿಕ್ಷಣ ಸಂಪ್ರದಾಯಗಳು ಯುವ ಜನತೆಯನ್ನು ತಯಾರು ಮಾಡುವಲ್ಲಿ ಬಹಳ ದೊಡ್ಡ ಪಾತ್ರವನ್ನು ವಹಿಸುತ್ತವೆ. ಅವರು ಕೌಶಲ್ಯ ಗಳಿಸುವಲ್ಲಿ, ಸಾಮರ್ಥ್ಯ ಗಳಿಸುವಲ್ಲಿ ಮತ್ತು ದೇಶಕ್ಕಾಗಿ ಏನನ್ನಾದರೂ ಮಾಡುವ ಸ್ಪೂರ್ತಿ ಮೂಡಿಸುವಲ್ಲಿ ಇವುಗಳಿಗೆ ಮಹತ್ವದ ಪಾತ್ರವಿದೆ. ಇಂದು ದೇಶವು 21 ನೇ ಶತಮಾನದ ಆವಶ್ಯಕತೆಗಳನ್ನು ಈಡೇರಿಸುವುದಕ್ಕಾಗಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಂದಿದೆ. ಈಗ ನಮ್ಮ ಮಕ್ಕಳು ಕೌಶಲ್ಯಗಳ ಕೊರತೆಯಿಂದಲಾಗಲೀ, ಭಾಷೆಯ ತೊಡಕಿನಿಂದಾಗಲೀ ಸ್ಥಗಿತಗೊಳ್ಳುವುದಿಲ್ಲ ಅಥವಾ ಅವರ ಅಭಿವೃದ್ಧಿಗೆ ತೊಂದರೆಯಾಗುವುದಿಲ್ಲ. ದುರದೃಷ್ಟವಶಾತ್ ನಮ್ಮ ದೇಶದಲ್ಲಿ ಭಾಷೆಗಳಿಗೆ ಸಂಬಂಧಿಸಿ ಬೃಹತ್ ಕಂದಕಗಳಿವೆ. ನಾವು ನಮ್ಮ ದೇಶದ ಬೃಹತ್ ಪ್ರತಿಭಾ ಸಂಗ್ರಹವನ್ನು ಭಾಷೆಯ ಪಂಜರಕ್ಕೆ ಕಟ್ಟಿ ಹಾಕಿದ್ದೇವೆ. ಯಾರೇ ಆದರೂ ಅವರ ಮಾತೃ ಭಾಷೆಯಲ್ಲಿ ಭರವಸೆಯ ವ್ಯಕ್ತಿಗಳನ್ನು ಕಾಣಬಹುದು. ಸ್ಥಳೀಯ ಮಾಧ್ಯಮದ ಭಾಷೆಗಳಿಂದ ಜನರು ಮುಂದೆ ಬಂದರೆ, ಅವರ ಆತ್ಮವಿಶ್ವಾಸ ಹೆಚ್ಚುತ್ತದೆ. ಬಡ ವಿದ್ಯಾರ್ಥಿಗಳು ತಮ್ಮ ಮಾತೃ ಭಾಷೆಯಲ್ಲಿ ಕಲಿತು ವೃತ್ತಿಪರರಾದರೆ ಆಗ ಅವರ ಸಾಮರ್ಥ್ಯಕ್ಕೆ ನ್ಯಾಯ ಒದಗಿಸಿದಂತಾಗುತ್ತದೆ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಭಾಷೆಯು ಬಡತನದ ವಿರುದ್ಧ ಹೋರಾಡಲು ಸಾಧನವಾಗಿರುತ್ತದೆ ಎಂದು ನಾನು ನಂಬಿದ್ದೇನೆ. ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರೀತಿಯಾಗಿ ಬಡತನದ ವಿರುದ್ಧ ಹೋರಾಡಲು ದೊಡ್ಡ ಸಾಧನವಾಗಿ ಬಳಕೆಯಾಗಲಿದೆ. ಬಡತನದ ವಿರುದ್ಧದ ಯುದ್ದ ಗೆಲ್ಲಲು ಶಿಕ್ಷಣ , ಪ್ರತಿಷ್ಟೆ, ಮತ್ತು ಪ್ರಾದೇಶಿಕ ಭಾಷೆಗಳು ತಳಹದಿಯಾಗಿರುತ್ತವೆ. ದೇಶವು ಇದನ್ನು ಆಟದ ಮೈದಾನಗಳಲ್ಲಿ ನೋಡಿದೆ..ಮತ್ತು ನಾವು ಭಾಷೆಯು ಒಂದು ಅಡ್ಡಿಯಲ್ಲ ಎಂಬುದನ್ನು ಅನುಭವದಿಂದ ಕಲಿತಿದ್ದೇವೆ. ಮತ್ತು ಇದರ ಪರಿಣಾಮವಾಗಿ ನಾವು ನೋಡುತ್ತಿದ್ದೇವೆ, ಯುವ ಜನತೆ ಆಡುತ್ತಿದ್ದಾರೆ ಮತ್ತು ಅರಳುತ್ತಿದ್ದಾರೆ. ಈಗ ಅಂತಹದೇ ಸಂಗತಿಗಳು ಜೀವನದ ಇತರ ಕ್ಷೇತ್ರಗಳಲ್ಲೂ ನಡೆಯುತ್ತವೆ.

ರಾಷ್ಟ್ರೀಯ ಶಿಕ್ಷಣ ನೀತಿಯ ಇನ್ನೊಂದು ವಿಶೇಷ ಅಂಶ ಎಂದರೆ ಕ್ರೀಡೆಯನ್ನು ಪಠ್ಯೇತರ ಚಟುವಟಿಕೆ ಎಂದು ಪರಿಗಣಿಸದೇ ಅದನ್ನು ಶಿಕ್ಷಣದ ಮುಖ್ಯಭೂಮಿಕೆಯ ಭಾಗವನ್ನಾಗಿ ಮಾಡಲಾಗಿದೆ. ಜೀವನ ನಡೆಸಲು ಕ್ರೀಡೆ ಕೂಡಾ ಒಂದು ಬಹಳ ಸಮರ್ಪಕ ಸಲಕರಣೆ. ಜೀವನದಲ್ಲಿ ಖಚಿತತೆ ಸಾಧಿಸುವುದಕ್ಕಾಗಿ ಕ್ರೀಡೆ ಬಹಳ ಮುಖ್ಯ. ಕ್ರೀಡೆಯನ್ನು ಮುಖ್ಯ ಭಾಗವಾಗಿ ಪರಿಗಣಿಸದ ಕಾಲವೊಂದಿತ್ತು. ಪೋಷಕರು ಕೂಡಾ ಕ್ರೀಡೆಯಲ್ಲಿ ತೊಡಗುವುದೆಂದರೆ ಜೀವನ ವ್ಯರ್ಥ ಮಾಡುವುದು ಎಂದು ಪರಿಗಣಿಸಿದ್ದರು. ಈಗ ಅಲ್ಲಿ ದೈಹಿಕ ಕ್ಷಮತೆ ಮತ್ತು ಕ್ರೀಡೆಯ ಬಗ್ಗೆ ಹೊಸ ಜಾಗೃತಿ ಮೂಡಿದೆ. ನಾವಿದನ್ನು ಒಲಿಂಪಿಕ್ಸ್ ನಲ್ಲಿ ನೋಡಿದ್ದೇವೆ ಮತ್ತು ಅನುಭವಿಸಿದ್ದೇವೆ. ಈ ಬದಲಾವಣೆ ನಮಗೆ ಬಹಳ ದೊಡ್ಡ ತಿರುವು. ಅದಕ್ಕಾಗಿ, ನಾವು ಪ್ರತಿಭಾ ಸೇರ್ಪಡೆ, ತಂತ್ರಜ್ಞಾನ ಮತ್ತು ವೃತ್ತಿಪರತೆಯ ಬಗ್ಗೆ ದೇಶದಲ್ಲಿ ನಡೆಯುತ್ತಿರುವ ಆಂದೋಲನವನ್ನು ವಿಸ್ತರಿಸಬೇಕಾಗಿದೆ ಮತ್ತು ಅದಕ್ಕೆ ವೇಗವನ್ನು ಕೊಡಬೇಕಾದ ಅಗತ್ಯವಿದೆ.

ಶಿಕ್ಷಣ, ಕ್ರೀಡೆ, ಮಂಡಳಿಗಳ ಪರೀಕ್ಷೆ ಅಥವಾ ಒಲಿಂಪಿಕ್ಸ್ ಕ್ಷೇತ್ರಗಳಲ್ಲಿ ನಮ್ಮ ಹೆಣ್ಣು ಮಕ್ಕಳು ಅಭೂತಪೂರ್ವ ರೀತಿಯಲ್ಲಿ ಸಾಧನೆ ಮಾಡುತ್ತಿದ್ದಾರೆ. ಇದು ದೇಶಕ್ಕೆ ಹೆಮ್ಮೆಯ ಸಂಗತಿ. ಇಂದು ಹೆಣ್ಣು ಮಕ್ಕಳು ತಮ್ಮ ಸ್ಥಾನಗಳನ್ನು ಹೊಂದಲು ಉತ್ಸಾಹಪೂರ್ಣರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರತೀ ಕ್ಷೇತ್ರದಲ್ಲಿಯೂ ಮತ್ತು ಕೆಲಸದ ಸ್ಥಳದಲ್ಲಿಯೂ ಮಹಿಳೆಯರಿಗೆ ಸಮಾನ ಸಹಭಾಗಿತ್ವ ಲಭಿಸುವಂತೆ ನಾವು ಖಾತ್ರಿಪಡಿಸಬೇಕಾಗಿದೆ. ಅವರು ರಸ್ತೆಗಳಿಂದ ಹಿಡಿದು ಕೆಲಸದ ಸ್ಥಳಗಳಲ್ಲಿ ಮತ್ತು ಎಲ್ಲೆಡೆಯೂ ಸುರಕ್ಷಿತವಾಗಿರುವಂತೆ ಖಾತ್ರಿಪಡಿಸಬೇಕು. ಅವರಿಗಾಗಿ ಗೌರವದ ಭಾವನೆ ಇರಬೇಕು ಮತ್ತು ಇದರಲ್ಲಿ ಸರಕಾರ, ಆಡಳಿತ, ಪೊಲೀಸ್ ಹಾಗು ನ್ಯಾಯಾಂಗ ವ್ಯವಸ್ಥೆ ಅವರವರ ಕರ್ತವ್ಯವನ್ನು ಶೇಖಡಾ ನೂರರಷ್ಟು ಮಾಡಬೇಕಾಗುತ್ತದೆ. ನಾವು ದೃಢ ಸಂಕಲ್ಪವನ್ನು ಮಾಡಬೇಕು. ಸ್ವಾತಂತ್ರ್ಯದ 75 ವರ್ಷಗಳ ಸಂದರ್ಭದ ನಿರ್ಧಾರ ಇದಾಗಬೇಕು.

ಇಂದು ನಾನು ದೇಶವಾಸಿಗಳೊಂದಿಗೆ ಸಿಹಿ ಸುದ್ದಿಯೊಂದನ್ನು ಹಂಚಿಕೊಳ್ಳುತ್ತಿದ್ದೇನೆ. ನಮ್ಮ ಹೆಣ್ಣುಮಕ್ಕಳಿಂದ ಸೈನಿಕ ಶಾಲೆಯಲ್ಲಿ ಕಲಿಯಬೇಕು ಎಂದು ಇಚ್ಛಿಸುವ ಲಕ್ಷಾಂತರ ಸಂದೇಶಗಳು ನನಗೆ ಬರುತ್ತಿರುತ್ತವೆ. ಶಾಲೆಗಳ ಬಾಗಿಲುಗಳು ಅವರಿಗೆ ತೆರೆಯಲ್ಪಡಬೇಕು. ನಾವು ಪೈಲೆಟ್ ಯೋಜನೆ ಅಡಿಯಲ್ಲಿ ಎರಡು-ಎರಡೂವರೆ ವರ್ಷಗಳ ಹಿಂದೆ ಮಿಜೋರಾಂನ ಸೈನಿಕ ಶಾಲೆಯಲ್ಲಿ ನಮ್ಮ ಹೆಣ್ಣು ಮಕ್ಕಳಿಗೆ ಪ್ರವೇಶ ನೀಡಿದ್ದೆವು. ಈಗ ಸರಕಾರವು ಎಲ್ಲಾ ಸೈನಿಕ ಶಾಲೆಗಳಲ್ಲಿಯೂ ಹೆಣ್ಣು ಮಕ್ಕಳಿಗೆ ಅವಕಾಶ ನೀಡಲು ನಿರ್ಧರಿಸಿದೆ. ದೇಶದ ಎಲ್ಲಾ ಸೈನಿಕ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಅಧ್ಯಯನದ ಅವಕಾಶವಿದೆ.

ಪರಿಸರ ಭದ್ರತೆ ಕೂಡಾ ಈಗ ಜಗತ್ತಿನಲ್ಲಿ ರಾಷ್ಟ್ರೀಯ ಭದ್ರತೆಯಷ್ಟೇ ಮಹತ್ವವನ್ನು ಪಡೆದುಕೊಳ್ಳುತ್ತಿದೆ. ಇಂದು ಭಾರತವು ಪರಿಸರ ಭದ್ರತೆಯಲ್ಲಿ ,ಅದು ಜೀವ ವೈವಿಧ್ಯತೆ ಇರಲಿ ಅಥವಾ ಭೂ ತಟಸ್ಥತೆ ಇರಲಿ, ವಾತಾವರಣ ಬದಲಾವಣೆ, ಅಥವಾ ತ್ಯಾಜ್ಯ ಮರುಬಳಕೆ, ಸಾವಯವ ಕೃಷಿ, ಜೈವಿಕ ಅನಿಲ, ಇಂಧನ ಸಂರಕ್ಷಣೆ, ಅಥವಾ ಸ್ವಚ್ಛ ಇಂಧನ ಪರಿವರ್ತನೆ ಇರಲಿ, ಎಲ್ಲದರಲ್ಲೂ ರೋಮಾಂಚಕ ಧ್ವನಿಯಾಗಿ ಮೂಡಿ ಬಂದಿದೆ. ಪರಿಸರ ವಲಯದಲ್ಲಿ ಭಾರತದ ಪ್ರಯತ್ನಗಳು ಇಂದು ಫಲ ನೀಡಲಾರಂಭಿಸಿವೆ. ಅರಣ್ಯ ವ್ಯಾಪ್ತಿ ಹೆಚ್ಚಾಗಿದೆ, ರಾಷ್ಟ್ರೀಯ ಉದ್ಯಾನವನಗಳ ಸಂಖ್ಯೆ ಹೆಚ್ಚಾಗಿದೆ, ಹುಲಿಗಳ ಸಂಖ್ಯೆ ಹೆಚ್ಚಿದೆ, ಏಶ್ಯನ್ ಸಿಂಹಗಳ ಸಂಖ್ಯೆ ಹೆಚ್ಚಾಗಿದೆ. ಇದು ದೇಶವಾಸಿಗಳಿಗೆ ಸಂತಸದ ಸಂಗತಿಯಾಗಿದೆ.

ಎಲ್ಲಾ ಯಶೋಗಾಥೆಗಳಲ್ಲಿ ಒಂದು ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಭಾರತ ಇನ್ನೂ ಇಂಧನ ಕ್ಷೇತ್ರದಲ್ಲಿ ಸ್ವತಂತ್ರವಾಗಿಲ್ಲ, ಸ್ವಾವಲಂಬಿಯಾಗಿಲ್ಲ. ಭಾರತವು ಇಂದು ವಾರ್ಷಿಕವಾಗಿ ಇಂಧನ ಆಮದಿಗಾಗಿ 12 ಲಕ್ಷ ಕೋ.ರೂ.ಗಳಿಗೂ ಅಧಿಕ ಮೊತ್ತವನ್ನು ವ್ಯಯ ಮಾಡುತ್ತಿದೆ. ಭಾರತದ ಪ್ರಗತಿಗೆ ಮತ್ತು ಸ್ವಾವಲಂಬಿ ಭಾರತ ನಿರ್ಮಾಣ ಮಾಡಲು ಇಂಧನ ವಲಯದಲ್ಲಿ ಭಾರತ ಸ್ವಾತಂತ್ರ್ಯ ಸಾಧಿಸುವುದು ಹೊತ್ತಿನ ಆವಶ್ಯಕತೆಯಾಗಿದೆ!. ಆದುದರಿಂದ ಇಂದು , ಭಾರತವು ಸ್ವಾತಂತ್ರ್ಯೋತ್ಸವದ 100 ವರ್ಷ ಪೂರ್ಣಗೊಳಿಸುವುದಕ್ಕೆ ಮೊದಲು ಭಾರತವನ್ನು ಇಂಧನ ಸ್ವತಂತ್ರವನ್ನಾಗಿ ಮಾಡುವ ನಿರ್ಧಾರವನ್ನು ಕೈಗೊಳ್ಳಬೇಕು. ಮತ್ತು ಅದನ್ನು ಸಾಧಿಸಲು ಶಕ್ಯವಾಗುವಂತಹ ಮಾರ್ಗಸೂಚಿಯನ್ನು ನಾವು ಸ್ಪಷ್ಟವಾಗಿ ರೂಪಿಸಿಕೊಳ್ಳಬೇಕು. ಅದು ಅನಿಲ ಆಧಾರಿತ ಆರ್ಥಿಕತೆ ಆಗಬೇಕು. ದೇಶಾದ್ಯಂತ ಸಿ.ಎನ್.ಜಿ. ಮತ್ತು ಪಿ.ಎನ್.ಜಿ. ಜಾಲ ಇರಬೇಕು. ಅಲ್ಲಿ 20 ಶೇಖಡಾ ಎಥೆನಾಲ್ ಮಿಶ್ರಣದ ಗುರಿ ಇರಬೇಕು. ನಿಗದಿ ಮಾಡಲಾದ ಗುರಿಯನ್ನು ಮೀರಿ ಭಾರತ ಸಾಗುವಂತಿರಬೇಕು. ವಿದ್ಯುತ್ ಚಾಲಿತ ಸಂಚಾರ ವ್ಯವಸ್ಥೆಯ ಬಗ್ಗೆ ಭಾರತ ಮುಂದಡಿ ಇಟ್ಟಿದೆ ಮತ್ತು ರೈಲ್ವೇಯನ್ನು ಶೇಖಡಾ ನೂರರಷ್ಟು ವಿದ್ಯುದ್ದೀಕರಣ ಮಾಡುವ ಕಾರ್ಯ ತ್ವರಿತಗತಿಯಿಂದ ನಡೆಯುತ್ತಿದೆ. ಭಾರತೀಯ ರೈಲ್ವೇಯು 2030 ರೊಳಗೆ ಶೂನ್ಯ ಕಾರ್ಬನ್ ವಿಸರ್ಜಕವಾಗುವ ಅಂದರೆ ಕಾರ್ಬನ್ ವಿಸರ್ಜನೆಯನ್ನು ಶೂನ್ಯ ಪ್ರಮಾಣಕ್ಕೆ ಇಳಿಸುವ ಗುರಿ ನಿಗದಿ ಮಾಡಿದೆ. ಈ ಪ್ರಯತ್ನಗಳಲ್ಲದೆ ದೇಶವು ವೃತ್ತಾಕಾರದ ಆರ್ಥಿಕತೆ ಮಿಶನ್ ನಿಟ್ಟಿನಲ್ಲಿಯೂ ಆದ್ಯತೆಯಾಧಾರದಲ್ಲಿ ಕಾರ್ಯೋನ್ಮುಖವಾಗಿದೆ. ನಮ್ಮ ವಾಹನ ಗುಜರಿ ನೀತಿ ಇದಕ್ಕೆ ಒಂದು ದೊಡ್ಡ ಉದಾಹರಣೆ. ಇಂದು ಭಾರತವು ಜಿ-20 ಗುಂಪಿನ ರಾಷ್ಟ್ರಗಳಲ್ಲಿ ವಾತಾವರಣಕ್ಕೆ ಸಂಬಂಧಿಸಿದ ತನ್ನ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ತ್ವರಿತವಾಗಿ ಸಾಗುತ್ತಿರುವ ಏಕೈಕ ರಾಷ್ಟ್ರವಾಗಿದೆ.

ಭಾರತವು ದಶಕದ ಅಂತ್ಯದೊಳಗೆ 450 ಜಿ.ಡಬ್ಲ್ಯು. (ಗಿಗಾ ವ್ಯಾಟ್) ಮರುನವೀಕೃತ ಇಂಧನದ ಗುರಿಯನ್ನು ಅಂದರೆ 2030 ರೊಳಗೆ 450 ಗಿಗಾ ವ್ಯಾಟ್ ಉತ್ಪಾದನೆಯ ಗುರಿಯನ್ನು ಹಾಕಿಕೊಂಡಿದೆ. ಇದರಲ್ಲಿ 100 ಗಿಗಾ ವ್ಯಾಟ್ ಗುರಿಯನ್ನು ಭಾರತವು ನಿಗದಿತ ಕಾಲಮಿತಿಗೆ ಮುಂಚಿತವಾಗಿಯೇ ಸಾಧಿಸಿದೆ. ಈ ಪ್ರಯತ್ನಗಳು ಜಗತ್ತಿನಲ್ಲಿ ಭರವಸೆಯನ್ನು ಮೂಡಿಸುತ್ತಿವೆ. ಜಾಗತಿಕ ಮಟ್ಟದಲ್ಲಿ ಅಂತಾರಾಷ್ಟ್ರೀಯ ಸೌರ ಮಿತ್ರಕೂಟ ಸ್ಥಾಪನೆ ಇದಕ್ಕೊಂದು ಬಹಳ ದೊಡ್ಡ ಉದಾಹರಣೆ.

ಭಾರತ ಇಂದು ಮಾಡುತ್ತಿರುವ ಪ್ರತಿಯೊಂದು ಪ್ರಯತ್ನದಲ್ಲಿ, ಹಸಿರು ಜಲಜನಕ ಕ್ಷೇತ್ರದಲ್ಲಿ ಮಾಡುತ್ತಿರುವ ಪ್ರಯತ್ನ ವಾತಾವರಣಕ್ಕೆ ಸಂಬಂಧಿಸಿದ ಬಹಳ ದೊಡ್ಡ ನೆಗೆತ. ಹಸಿರು ಜಲಜನಕದ ಗುರಿಯನ್ನು ಸಾಧಿಸಲು, ನಾನು ರಾಷ್ಟ್ರೀಯ ಜಲಜನಕ ಮಿಷನ್ ನನ್ನು ಇಂದು ತ್ರಿವರ್ಣ ಧ್ವಜದ ಸಾಕ್ಷಿಯಾಗಿ ಘೋಷಿಸುತ್ತಿದ್ದೇನೆ. ಹಸಿರು ಜಲಜನಕ ಉತ್ಪಾದನೆಗೆ ನಾವು ಭಾರತವನ್ನು ಜಾಗತಿಕ ತಾಣವನ್ನಾಗಿಸಬೇಕು ಮತ್ತು “ಅಮೃತ ಕಾಲ”ದಲ್ಲಿ ರಫ್ತು ಮಾಡಬೇಕು. ಇದರಿಂದ ಇಂಧನ ಸ್ವಾವಲಂಬನೆ ಕ್ಷೇತ್ರದಲ್ಲಿ ಹೊಸ ಪ್ರಗತಿಗೆ ಭಾರತಕ್ಕೆ ಸಹಾಯವಾಗುವುದು ಮಾತ್ರವಲ್ಲ ಅದು ವಿಶ್ವದಾದ್ಯಂತ ಸ್ವಚ್ಛ ಇಂಧನ ಪರಿವರ್ತನೆಗೆ ಹೊಸ ಪ್ರೇರಣೆಯೂ ಆಗಲಿದೆ. ನಮ್ಮ ನವೋದ್ಯಮಗಳಿಗೆ ಮತ್ತು ಯುವಜನತೆಗೆ ಹಸಿರು ಬೆಳವಣಿಗೆಯಿಂದ ಹಸಿರು ಉದ್ಯೋಗಗಳವರೆಗೆ ಹೊಸ ಅವಕಾಶಗಳು ಇಂದು ತೆರೆಯಲ್ಪಡುತ್ತಿವೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಇಂದು 21 ನೇ ಶತಮಾನದ ಭಾರತವು ದೊಡ್ಡ ಗುರಿಗಳನ್ನು ಸಾಧಿಸಲು ಮತ್ತು ರೂಪಿಸಲು ಸಾಮರ್ಥ್ಯವನ್ನು ಹೊಂದಿದೆ. ದಶಕಗಳಿಂದ ಮತ್ತು ಶತಮಾನಗಳಿಂದ ಜ್ವಲಂತವಾಗಿ ಕಾಡುತ್ತಿದ್ದ ವಿಷಯಗಳಿಗೆ ಪ್ರವೇಶ ಮಾಡಿ ಅವುಗಳನ್ನು ಪರಿಹಾರ ಮಾಡುತ್ತಿದೆ. ಸಂವಿಧಾನದ 370 ನೇ ವಿಧಿಯನ್ನು ತೆಗೆದುಹಾಕುವ ಚಾರಿತ್ರಿಕ ನಿರ್ಧಾರ ಇರಲಿ, ಜಿ.ಎಸ್.ಟಿ. ಜಾರಿ ಇರಲಿ, ದೇಶವನ್ನು ತೆರಿಗೆ ಜಾಲದಿಂದ ಮುಕ್ತ ಮಾಡುವ ವ್ಯವಸ್ಥೆಯಾಗಿರಲಿ, ಸೈನಿಕ ಸ್ನೇಹಿತರಿಗೆ “ಒಂದು ಹುದ್ದೆ-ಒಂದು ನಿವೃತ್ತಿ ವೇತನ”ಕ್ಕೆ ಸಂಬಂಧಿಸಿದ ನಿರ್ಧಾರ ಇರಲಿ, ರಾಮ ಜನ್ಮಭೂಮಿಗೆ ಸಂಬಂಧಿಸಿದ ವಿಷಯದಲ್ಲಿ ಶಾಂತಿಯುತ ಪರಿಹಾರವಿರಲಿ, ನಾವಿದೆಲ್ಲಾ ಕೆಲವು ವರ್ಷಗಳಲ್ಲಿ ನಿಜ ಸಾಧ್ಯವಾಗಿರುವುದನ್ನು ನೋಡಿದ್ದೇವೆ.

ತ್ರಿಪುರಾದಲ್ಲಿ ಬ್ರೂ-ರಿಯಾಂಗ್ ಒಪ್ಪಂದ ದಶಕಗಳ ಬಳಿಕ ಸಾಕಾರಗೊಳಿಸುವುದಿರಲಿ, ಒ.ಬಿ.ಸಿ. ಆಯೋಗಕ್ಕೆ ಸಾಂವಿಧಾನಿಕ ಸ್ಥಾನ ಮಾನ ಅಥವಾ ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ವಾತಂತ್ರ್ಯದ ಬಳಿಕ ಇದೇ ಮೊದಲ ಬಾರಿಗೆ ಬಿ.ಡಿ.ಸಿ. ಮತ್ತು ಡಿ.ಡಿ.ಸಿ. ಚುನಾವಣೆಗಳಿರಲಿ ಭಾರತದ ಇಚ್ಛಾಶಕ್ತಿ ಎಲ್ಲಾ ದೃಢ ಸಂಕಲ್ಪಗಳನ್ನು ಸಾಕಾರಗೊಳಿಸಿದೆ.

ಕೊರೊನಾದ ಕಾಲಘಟ್ಟದಲ್ಲಿಯೂ, ಭಾರತಕ್ಕೆ ದಾಖಲೆ ಪ್ರಮಾಣದ ವಿದೇಶೀ ಹೂಡಿಕೆ ಹರಿದು ಬರುತ್ತಿದೆ. ಭಾರತದ ವಿದೇಶೀ ವಿನಿಮಯ ಮೀಸಲು ಸಾರ್ವಕಾಲಿಕ ಗರಿಷ್ಟತಮ ಮಟ್ಟದಲ್ಲಿದೆ. ಸರ್ಜಿಕಲ್ ಮತ್ತು ವಾಯು ದಾಳಿಗಳನ್ನು ನಡೆಸುವ ಮೂಲಕ ದೇಶದ ಶತ್ರುಗಳಿಗೆ ನವಭಾರತ ಎಂದರೇನು ಎಂಬ ಸಂದೇಶವನ್ನು ಭಾರತ ನೀಡಿದೆ. ಇದು ಭಾರತ ಬದಲಾಗುತ್ತಿದೆ ಎಂಬುದನ್ನು ತೋರಿಸುತ್ತಿದೆ. ಭಾರತ ಈಗ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬಲ್ಲುದು ಮತ್ತು ಅದು ಅತ್ಯಂತ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ಹಿಂಜರಿಯದು ಮತ್ತು ನಿರ್ಧಾರಗಳನ್ನು ತಡೆ ಹಿಡಿಯದು.

ನನ್ನ ಪ್ರೀತಿಯ ದೇಶವಾಸಿಗಳೇ

ಎರಡನೇ ಮಹಾಯುದ್ದದ ಬಳಿಕ ಜಾಗತಿಕ ಬಾಂಧವ್ಯಗಳ ಸ್ವಭಾವ, ಸ್ವರೂಪ ಬದಲಾಯಿತು. ಕೊರೊನಾ ಬಳಿಕ ಹೊಸ ಜಾಗತಿಕ ವ್ಯವಸ್ಥೆಯೊಂದು ಅಸ್ತಿತ್ವಕ್ಕೆ ಬರುವ ಸಾಧ್ಯತೆಗಳಿವೆ. ಕೊರೊನಾದ ಕಾಲಘಟ್ಟದಲ್ಲಿ ಭಾರತದ ಕಾರ್ಯವೈಖರಿಯನ್ನು ಜಗತ್ತು ನೋಡಿದೆ ಮತ್ತು ಅದನ್ನು ಶ್ಲಾಘಿಸಿದೆ. ಇಂದು ಜಗತ್ತು ಭಾರತವನ್ನು ಹೊಸ ದೃಷ್ಟಿಕೋನದಿಂದ ನೋಡುತ್ತಿದೆ. ಈ ದೃಷ್ಟಿಕೋನದಲ್ಲಿ ಎರಡು ಪ್ರಮುಖ ಅಂಶಗಳಿವೆ-ಒಂದು ಭಯೋತ್ಪಾದನೆ ಮತ್ತು ಇನ್ನೊಂದು ವಿಸ್ತರಣಾವಾದ. ಭಾರತವು ಎರಡು ಸವಾಲುಗಳ ವಿರುದ್ಧವೂ ಹೋರಾಡುತ್ತಿದೆ. ಮತ್ತು ಅವುಗಳಿಗೆ ಬಲವಾದ ಪ್ರತಿರೋಧ ಒಡ್ಡಿ ಪ್ರತಿಕ್ರಿಯಿಸುತ್ತಿದೆ. ಭಾರತವು ತನ್ನ ಬದ್ಧತೆಗಳನ್ನು ಸಮರ್ಪಕವಾಗಿ ಪೂರೈಸಬೇಕಿದ್ದರೆ ನಮ್ಮ ಸೇನಾ ಸಿದ್ಧತಾ ಸ್ಥಿತಿ ಅಷ್ಟೇ ಬಲಿಷ್ಟ ಇರಬೇಕಾಗುತ್ತದೆ.

ನಾವು ನಮ್ಮ ಕಠಿಣ ಪರಿಶ್ರಮಿ ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ಒದಗಿಸಲು ಮತ್ತು ರಕ್ಷಣಾ ವಲಯದಲ್ಲಿ ಭಾರತೀಯ ಕಂಪೆನಿಗಳು ದೇಶವನ್ನು ಸ್ವಾವಲಂಬಿಯಾಗಿಸಲು ಅವುಗಳಿಗೆ ಉತ್ತೇಜನವನ್ನು ನೀಡುವ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ತೊಡಗಿರುವ ಪಡೆಗಳ ಕೈಗಳನ್ನು ಬಲಪಡಿಸಲು ನಾವು ಸಾಧ್ಯ ಇರುವ ಎಲ್ಲವನ್ನೂ ಮಾಡುತ್ತೇವೆ ಎಂದು ನಾನು ದೇಶಕ್ಕೆ ಭರವಸೆ ನೀಡುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಇಂದು ದೇಶದ ಶ್ರೇಷ್ಟ ಚಿಂತಕ ಶ್ರೀ ಅರಬಿಂದೋ ಅವರ ಜನ್ಮ ದಿನ ಕೂಡಾ. 2022 ರಲ್ಲಿ ಅವರ 150 ನೇ ಜನ್ಮವರ್ಷಾಚರಣೆಯನ್ನು ನಡೆಸಲಾಗುತ್ತದೆ. ಭಾರತದ ಭವ್ಯ ಭವಿತವ್ಯದ ಮುಂಗಾಣ್ಕೆಯನ್ನು ಮಾಡಿದ ದೂರದರ್ಶಿತ್ವವನ್ನು ಹೊಂದಿದ್ದವರು ಶ್ರೀ ಅರಬಿಂದೋ. ನಾವು ಹಿಂದೆಂದಿಗಿಂತಲೂ ಶಕ್ತಿಶಾಲಿಯಾಗಬೇಕು ಎಂದವರು ಹೇಳುತ್ತಿದ್ದರು. ನಾವು ನಮ್ಮ ಅಭ್ಯಾಸಗಳನ್ನು ಬದಲಿಸಿಕೊಳ್ಳಬೇಕು. ನಾವು ನಮ್ಮನ್ನು ಪುನರ್ಜಾಗೃತಿ ಮಾಡಿಕೊಳ್ಳಬೇಕು. ಶ್ರೀ ಅರಬಿಂದೋ ಅವರ ಮಾತುಗಳು ನಮ್ಮ ಕರ್ತವ್ಯವನ್ನು ನಮಗೆ ನೆನಪಿಸುತ್ತವೆ. ನಾವು ದೇಶದ ನಾಗರಿಕರಾಗಿ ಮತ್ತು ಸಮಾಜವಾಗಿ ದೇಶಕ್ಕೆ ಏನನ್ನು ಕೊಡುತ್ತಿದ್ದೇವೆ ಎಂಬುದರ ಬಗ್ಗೆ ನಾವು ಚಿಂತಿಸಬೇಕು. ನಾವು ಸದಾ ಹಕ್ಕುಗಳಿಗೆ ಆದ್ಯತೆ ನೀಡಿದ್ದೇವೆ. ಅವುಗಳು ಅವಧಿಯಲ್ಲಿ ಬೇಕಿದ್ದವು, ಆದರೆ ಈಗ ನಮ್ಮ ಕರ್ತವ್ಯಗಳನ್ನು ಪ್ರಥಮಾದ್ಯತೆಯಾಗಿ ಪರಿಗಣಿಸಬೇಕು. ಪ್ರತಿಯೊಬ್ಬರೂ ದೇಶದ ದೃಢ ಸಂಕಲ್ಪಗಳನ್ನು ಕಾರ್ಯಗತ ಮಾಡಲು ಕೊಡುಗೆಯನ್ನು ನೀಡಬೇಕು. ಪ್ರತಿಯೊಬ್ಬ ನಾಗರಿಕರೂ ಇದನ್ನು ಎತ್ತಿ ಹಿಡಿಯಬೇಕು.ಇದರ ಹೊಣೆಗಾರಿಕೆ ಹೊರಬೇಕು.

ನಮ್ಮ ದೇಶವು ಜಲ ಸಂರಕ್ಷಣೆಯ ಆಂದೋಲನವನ್ನು ಆರಂಭಿಸಿದೆ. ಆದುದರಿಂದ ನೀರುಳಿಸುವುದನ್ನು ನಮ್ಮ ಅಭ್ಯಾಸಗಳಲ್ಲಿ ಒಂದಾಗಿಸುವುದು ನಮ್ಮ ಕರ್ತವ್ಯ. ದೇಶವು ಡಿಜಿಟಲ್ ವರ್ಗಾವಣೆಯನ್ನು ಒತ್ತಿ ಹೇಳುತ್ತಿದ್ದರೆ, ಆಗ ನಗದು ವ್ಯವಹಾರವನ್ನು ಕನಿಷ್ಟಗೊಳಿಸುವುದು ನಮ್ಮ ಕರ್ತವ್ಯ. ದೇಶವು ಲೋಕಲ್ ಫಾರ್ ಲೋಕಲ್ ಅಂದರೆ ಸ್ಥಳಿಯ ಉತ್ಪನ್ನಗಳಿಗೆ ಆದ್ಯತೆ ಆಂದೋಲನವನ್ನು ಆರಂಭಿಸಿದೆ, ಹಾಗಾಗಿ ಸಾಧ್ಯವಾದಷ್ಟು ಸ್ಥಳೀಯ ಉತ್ಪಾದನೆಗಳನ್ನು ಖರೀದಿಸುವುದು ನಮ್ಮ ಕರ್ತವ್ಯ. ನಮ್ಮ ದೇಶದ ಪ್ಲಾಸ್ಟಿಕ್ ಮುಕ್ತ ಭಾರತ ಚಿಂತನೆಯನ್ನು ಬಲಪಡಿಸುವುದಕ್ಕಾಗಿ ಏಕ ಬಳಕೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ನಮ್ಮ ಕರ್ತವ್ಯ. ನಮ್ಮ ನದಿಗಳಲ್ಲಿ ಕಸ,ಕಡ್ಡಿ ಹಾಕದೇ ಇರುವುದು, ಸಮುದ್ರ ಕಿನಾರೆಗಳನ್ನು ಸ್ವಚ್ಛವಾಗಿಡುವುದು ನಮ್ಮ ಕರ್ತವ್ಯ. ನಾವು ಸ್ವಚ್ಛ ಭಾರತ್ ಆಂದೋಲನವನ್ನು ಇನ್ನೊಂದು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕು.

ಇಂದು, ದೇಶವು ಸ್ವಾತಂತ್ರ್ಯದ 75 ವರ್ಷಗಳ ಅಂಗವಾಗಿ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗ, ಈ ಕಾರ್ಯಕ್ರಮಕ್ಕೆ ಕೈಜೋಡಿಸುವುದು ನಮ್ಮೆಲ್ಲರ ಕರ್ತವ್ಯ. ಇದರಲ್ಲಿ ಉತ್ಸಾಹದಿಂದ ಭಾಗವಹಿಸುವುದು, ಮತ್ತು ನಮ್ಮ ದೃಢ ಸಂಕಲ್ಪಗಳನ್ನು ಆಗಾಗ ನೆನಪು ಮಾಡಿಕೊಳ್ಳುವುದು ನಮ್ಮ ಕರ್ತವ್ಯ. ಸ್ವಾತಂತ್ರ್ಯ ಹೋರಾಟವನ್ನು ಮನಸ್ಸಿನಲ್ಲಿಟ್ಟುಕೊಂಡು, ನೀವು ಎಷ್ಟೇ ಸಣ್ಣ ಕೆಲಸವನ್ನು ಮಾಡಿದರೂ, ಅದೇನೇ ಇದ್ದರೂ ..ಅದು ಮಕರಂದದ ಹನಿಯಂತೆ ಅತ್ಯಂತ ನಿರ್ಮಲವಾದುದಾಗಿರುತ್ತದೆ. ಮತ್ತು ಹಲವು ಭಾರತೀಯರ ನಿರ್ಮಲ ಪ್ರಯತ್ನಗಳ ಫಲವಾಗಿ ತಯಾರಾದ ಅಮೃತ ಕುಂಭ ಬರಲಿರುವ ವರ್ಷಗಳಲ್ಲಿ ಇಡೀ ದೇಶವನ್ನು ಪ್ರಭಾವಿಸಲಿದೆ.

ನನ್ನ ಪ್ರೀತಿಯ ದೇಶವಾಸಿಗಳೇ,

ನಾನು ಭವಿಷ್ಯವನ್ನು ಹೇಳುವವನಲ್ಲ. ನಾನು ಕರ್ಮದಲ್ಲಿ, ಕ್ರಿಯೆಯಲ್ಲಿ ನಂಬಿಕೆ ಇಟ್ಟವನು. ನನಗೆ ನನ್ನ ದೇಶದ ಯುವ ಜನತೆಯಲ್ಲಿ ನಂಬಿಕೆ ಇದೆ, ನಾನು ದೇಶದ ಸಹೋದರಿಯರನ್ನು ನಂಬುತ್ತೇನೆ. ದೇಶದ ಹೆಣ್ಣು ಮಕ್ಕಳನ್ನು, ದೇಶದ ರೈತರನ್ನು, ದೇಶದ ವೃತ್ತಿಪರರನ್ನು ನಾನು ನಂಬುತ್ತೇನೆ. ಈ “ಮಾಡಬಲ್ಲೆವು” ಎಂಬ ತಲೆಮಾರು ಕಲ್ಪಿಸಿಕೊಳ್ಳಬಹುದಾದ ಯಾವುದೇ ಗುರಿಯನ್ನು ಸಾಧಿಸಲು ಶಕ್ತವಿದೆ.

2047 ರಲ್ಲಿ ಸ್ವಾತಂತ್ರ್ಯದ ನೂರು ವರ್ಷಗಳ ಆಚರಣೆಯ ಸಂದರ್ಭದಲ್ಲಿ ..ಯಾರೇ ಪ್ರಧಾನ ಮಂತ್ರಿಯಾಗಿರಲಿ..ಇಂದಿನಿಂದ 25 ವರ್ಷಗಳ ಬಳಿಕ ಯಾರೇ ಪ್ರಧಾನಿಯಾಗಿರಲಿ, ಅವರು ರಾಷ್ಟ್ರಧ್ವಜವನ್ನು ಅರಳಿಸುವಾಗ ..ನಾನಿದನ್ನು ಇಂದು ವಿಶ್ವಾಸದಿಂದ , ಭರವಸೆಯಿಂದ ಹೇಳುತ್ತೇನೆ, ಅವರು ತಮ್ಮ ಭಾಷಣದಲ್ಲಿ ದೇಶವು ಇಂದು ಕೈಗೊಂಡ ಪ್ರತಿಜ್ಞೆಗಳ ಅನ್ವಯ ಸಾಧಿತವಾದ ಧೀರ್ಘ ಸಾಧನೆಗಳ ಪಟ್ಟಿಯನ್ನು ಪ್ರಸ್ತಾಪಿಸುತ್ತಾರೆ ..ಇದು ವಿಜಯದ ಬಗ್ಗೆ ನನ್ನ ದೃಢವಾದ ನಂಬಿಕೆ.

ಇಂದು, ನಾನು ದೃಢ ಸಂಕಲ್ಪದ ರೀತಿಯಲ್ಲಿ ಏನು ಹೇಳುತ್ತಿದ್ದೇನೋ, 25 ವರ್ಷಗಳ ಬಳಿಕ ಯಾರು ಧ್ವಜವನ್ನು ಅರಳಿಸುತ್ತಾರೋ ಅವರು ಇದನ್ನು ಸಾಧಿಸಿದ ರೀತಿಯಲ್ಲಿ ಹೇಳುವಂತಾಗಬೇಕು. ದೇಶವು ತನ್ನ ವೈಭವವನ್ನು ಸಾಧನೆಗಳ ರೀತಿಯಲ್ಲಿ ಹಾಡಬೇಕು. ದೇಶದ ಇಂದಿನ ಯುವ ಜನತೆ, ಆ ಸಮಯದಲ್ಲಿ ದೇಶವು ವೈಭವವನ್ನು ಹೇಗೆ ಸಾಧಿಸಿತು ಎಂಬುದನ್ನು ನೋಡುವಂತಾಗಬೇಕು.

21 ನೇ ಶತಮಾನದಲ್ಲಿ ಭಾರತದ ಕನಸುಗಳನ್ನು ನನಸು ಮಾಡುವಲ್ಲಿ, ಆಶೋತ್ತರಗಳನ್ನು ಈಡೇರಿಸುವಲ್ಲಿ ಯಾವ ಅಡೆ ತಡೆಯೂ ನಮ್ಮನ್ನು ನಿಲ್ಲಿಸಲಾರದು. ನಮ್ಮ ಬಲ ಎಂದರೆ ನಮ್ಮ ಹುರುಪು, ಉತ್ಸಾಹ, ನಮ್ಮ ಶಕ್ತಿ ಎಂದರೆ ಒಗ್ಗಟ್ಟು, ಬೆಂಬಲ. ನಮ್ಮ ಹುರುಪು ದೇಶವೇ ಮೊದಲು -ಸದಾ ಮೋದಲು ಎನ್ನುವ ಸ್ಪೂರ್ತಿಯ ಶಕ್ತಿ. ಇದು ಕನಸುಗಳನ್ನು ಹಂಚಿಕೊಳ್ಳುವ ಕಾಲ, ಇದು ಒಗ್ಗೂಡಿ ನಿರ್ಧಾರಗಳನ್ನು ಮಾಡುವ ಕಾಲ. ಶ್ರಮವನ್ನು ಹಂಚಿಕೊಂಡು ಮುನ್ನಡೆಯುವ ಕಾಲ...ಮತ್ತು ಇದು ವಿಜಯದತ್ತ ಸಾಗುವ ಕಾಲ.

ಮತ್ತು ಹಾಗಾಗಿ ನಾನು ಮತ್ತೊಮ್ಮೆ ಹೇಳುತ್ತೇನೆ-

ಸಮಯ

ಸಮಯ, ಸರಿಯಾದ ಸಮಯ!

ಭಾರತದ ಅಮೂಲ್ಯ ಸಮಯ!

ಸಮಯ, ಸರಿಯಾದ ಸಮಯ!, ಭಾರತದ ಅಮೂಲ್ಯ ಸಮಯ!

ಅಸಂಖ್ಯಾತ ತೋಳುಗಳ ಶಕ್ತಿ

ಅಸಂಖ್ಯಾತ ತೋಳುಗಳ ಶಕ್ತಿ

ಎಲ್ಲೆಲ್ಲೂ ಕಾಣುತ್ತಿದೆ ದೇಶಭಕ್ತಿ !

ಅಲ್ಲಿದೆ ಅಸಂಖ್ಯಾತ ತೋಳುಗಳ ಶಕ್ತಿ, ಅಲ್ಲ್ಲಿ ಎಲ್ಲೆಲ್ಲೂ ಇದೆ ದೇಶಭಕ್ತಿ..

ಬನ್ನಿ, ಎದ್ದೇಳಿ ಮತ್ತು ಅರಳಿಸಿ ತ್ರಿವರ್ಣ ಧ್ವಜವ!

ಬದಲಾಯಿಸಿ ಭಾರತದ ವಿಧಿಯ ಬರಹವ

ಬದಲಾಯಿಸಿ ಭಾರತದ ವಿಧಿಯ ಬರಹವ,

ಸಮಯ, ಸರಿಯಾದ ಸಮಯ!, ಭಾರತದ ಅಮೂಲ್ಯ ಸಮಯ!

ಅಲ್ಲಿ ಏನೂ ಇಲ್ಲ..

ಅಲ್ಲಿ ನೀವು ಮಾಡಲಾಗದಂತಹದು ಏನೂ ಇಲ್ಲ

ಅಲ್ಲಿ ನೀವು ಸಾಧಿಸಲಾಗದಂತಹದು ಏನೂ ಇಲ್ಲ.

ನೀವು ಎದ್ದೇಳಿ

ನೀವು ಎದ್ದೇಳಿ ಮತ್ತು ಆರಂಭ ಮಾಡಿ

ನಿಮ್ಮ ಸಾಮರ್ಥ್ಯವ ಅರಿತುಕೊಳ್ಳಿ

ನಿಮ್ಮ ಸಾಮರ್ಥ್ಯವ ಅರಿತುಕೊಳ್ಳಿ

ನಿಮ್ಮೆಲ್ಲ ಕರ್ತವ್ಯಗಳ ತಿಳಿದುಕೊಳ್ಳಿ

ನಿಮ್ಮೆಲ್ಲ ಕರ್ತವ್ಯಗಳ ತಿಳಿದುಕೊಳ್ಳಿ!

ಸಮಯ, ಸರಿಯಾದ ಸಮಯ!, ಭಾರತದ ಅಮೂಲ್ಯ ಸಮಯ!

ದೇಶವು ಸ್ವಾತಂತ್ರ್ಯದ 100 ವರ್ಷಗಳನ್ನು ಪೂರ್ಣಗೊಳಿಸುವಾಗ, ದೇಶವಾಸಿಗಳ ಗುರಿ ನಿಜ ವಾಸ್ತವವಾಗಿ ಮೈದಳೆದಿರಬೇಕು; ಅದು ನನ್ನ ಆಶಯ. ನನ್ನ ಶುಭಾಶಯಗಳೊಂದಿಗೆ ನಾನು ಎಲ್ಲಾ ದೇಶವಾಸಿಗಳನ್ನು 75 ನೇ ಸ್ವಾತಂತ್ರ್ಯ ದಿನದಂದು ಮತ್ತೊಮ್ಮೆ ಅಭಿನಂದಿಸುತ್ತೇನೆ! ಗಟ್ಟಿಯಾಗಿ ಮುಷ್ಟಿ ಕಟ್ಟಿ ಕೈಮೇಲೆತ್ತಿ ಹೇಳಿ

ಜೈ ಹಿಂದ್

ಜೈ ಹಿಂದ್

ಜೈ ಹಿಂದ್

ವಂದೇ ಮಾತರಂ!

ವಂದೇ ಮಾತರಂ!

ವಂದೇ ಮಾತರಂ!

ಭಾರತ ಮಾತೆ ಚಿರಾಯುವಾಗಲಿ

ಭಾರತ ಮಾತೆ ಚಿರಾಯುವಾಗಲಿ

ಭಾರತ ಮಾತೆ ಚಿರಾಯುವಾಗಲಿ!

ಬಹಳ ಧನ್ಯವಾದಗಳು!

***



(Release ID: 1746356) Visitor Counter : 3201