ಪ್ರಧಾನ ಮಂತ್ರಿಯವರ ಕಛೇರಿ

ಮಧ್ಯ ಪ್ರದೇಶದಲ್ಲಿಯ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನಾದ ಫಲಾನುಭವಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 07 AUG 2021 1:38PM by PIB Bengaluru

ನಮಸ್ತೇ ಜೀ!

ಮಧ್ಯ ಪ್ರದೇಶದ ರಾಜ್ಯಪಾಲರು ಮತ್ತು ನನ್ನ ಬಹಳ ಹಳೆಯ ಸಹೋದ್ಯೋಗಿ ಶ್ರೀ ಮಂಗೂಭಾಯಿ ಪಟೇಲ್. ಅವರು ತಮ್ಮ ಇಡೀ ಬದುಕನ್ನು ಬುಡಕಟ್ಟು ಸಮುದಾಯದ ಕಲ್ಯಾಣಕ್ಕಾಗಿ, ಬುಡಕಟ್ಟು ಸಮಾಜದ ಉತ್ಥಾನಕ್ಕಾಗಿ ಕಳೆದವರು, ಇಂತಹವರು ಮಧ್ಯಪ್ರದೇಶದ ರಾಜ್ಯಪಾಲ ಶ್ರೀ ಮಂಗೂಭಾಯಿ ಅವರು. ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್, ರಾಜ್ಯ ಸರಕಾರದ ಇತರ ಎಲ್ಲಾ ಸಚಿವರೇ, ಸಂಸದರೇ, ಶಾಸಕರೇ ಮತ್ತು ಮಧ್ಯ ಪ್ರದೇಶದ ವಿವಿಧ ಭಾಗಗಳಿಂದ ಕಾರ್ಯಕ್ರಮಕ್ಕೆ ಸೇರ್ಪಡೆಗೊಡಿರುವ ಎಲ್ಲಾ ಸಹೋದರಿಯರೇ  ಮತ್ತು ಸಹೋದರರೇ!.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನಾ ಅಡಿಯಲ್ಲಿ ಆಯೋಜನೆಯಾಗಿರುವ ಆಹಾರ ವಿತರಣಾ ಕಾರ್ಯಕ್ರಮಕ್ಕಾಗಿ ನಿಮಗೆಲ್ಲರಿಗೂ ಬಹಳ ಬಹಳ ಅಭಿನಂದನೆಗಳು. ಯೋಜನೆ ಅಡಿಯಲ್ಲಿ ಮಧ್ಯ ಪ್ರದೇಶದಲ್ಲಿ ಉಚಿತ ಪಡಿತರಕ್ಕಾಗಿ 5 ಕೋಟಿ ಫಲಾನುಭವಿಗಳನ್ನು ತಲುಪುವ ಬೃಹತ್ ಆಂದೋಲನ ನಡೆಯುತ್ತಿದೆ. ಯೋಜನೆ ಹೊಸತೇನಲ್ಲ. ಒಂದೂವರೆ ವರ್ಷದ ಹಿಂದೆ ಕೊರೊನಾ ಕಾಡತೊಡಗಿದಾಗ, ದೇಶದ 80 ಕೋಟಿಗೂ ಅಧಿಕ ಜನರಿಗೆ ಉಚಿತ ಪಡಿತರ ನೀಡಲಾಗುತ್ತಿದೆ. ಆದರೆ ಬಡವರ ಮಧ್ಯದಲ್ಲಿದ್ದುಕೊಂಡು ಮತ್ತು ಅವರೊಂದಿಗೆ ಮಾತನಾಡುವ ಅವಕಾಶ ನನಗೆ ಲಭ್ಯವಾಗಿರಲಿಲ್ಲ. ಇಂದು ಮಧ್ಯ ಪ್ರದೇಶ ಸರಕಾರ ನನಗೆ ಅವಕಾಶವನ್ನು ಒದಗಿಸಿದೆ. ಬಹಳ ದೂರದಲ್ಲಿದ್ದರೂ ನಾನು ನನ್ನ ಬಡ ಸಹೋದರರು ಮತ್ತು ಸಹೋದರಿಯರನ್ನು ಕಾಣಬಲ್ಲೆ. ಮತ್ತು ಅವರಿಂದ ಆಶೀರ್ವಾದವನ್ನು ಪಡೆಯಬಲ್ಲೆ. ಅದರಿಂದಾಗಿ ನನಗೆ ಬಡವರಿಗೆ ಏನಾದರೂ ಮಾಡುತ್ತಿರುವುದಕ್ಕೆ ಶಕ್ತಿ ದೊರೆಯುತ್ತದೆ. ನಿಮ್ಮ ಆಶೀರ್ವಾದದಿಂದ ನಾನು ಶಕ್ತಿಯನ್ನು ಗಳಿಸಿಕೊಳ್ಳುತ್ತೇನೆ. ಈಗ, ನಾನು ಮಧ್ಯ ಪ್ರದೇಶದ ನನ್ನ ಕೆಲವು ಸಹೋದರರ ಮತ್ತು ಸಹೋದರಿಯರ ಜೊತೆ ಮಾತನಾಡುತ್ತಿದ್ದೆ ಮತ್ತು ಬಿಕ್ಕಟ್ಟಿನ ಸಮಯದಲ್ಲಿ ಸರಕಾರದಿಂದ ಉಚಿತ ಪಡಿತರ ಪ್ರತೀ ಕುಟುಂಬಕ್ಕೂ ಬಹಳ ದೊಡ್ಡ ಪರಿಹಾರವಾಗಿ ಲಭಿಸಿರುವುದನ್ನು ಕಂಡುಕೊಂಡೆ. ಅವರ ಮಾತುಗಳಲ್ಲಿ ತೃಪ್ತಿ ಇತ್ತು. ಅವರಲ್ಲಿ ಆತ್ಮವಿಶ್ವಾಸವೂ ಇತ್ತು. ಆದರೆ, ಮಧ್ಯ ಪ್ರದೇಶದಲ್ಲಿ ಮಹಾಪೂರದಂತಹ ಸ್ಥಿತಿ ಉಂಟಾಗಿರುವುದು ಬಹಳ ಖೇದಕರ. ಇದರಿಂದ ಹಲವು ಸ್ನೇಹಿತರ ಜೀವನ ಮತ್ತು ಜೀವನೋಪಾಯಕ್ಕೆ ತೊಂದರೆ ಉಂಟಾಗಿದೆ. ಭಾರತ ಸರಕಾರ ಮತ್ತು ಇಡೀ ದೇಶ ಸಂಕಷ್ಟದ ಸಮಯದಲ್ಲಿ ಮಧ್ಯ ಪ್ರದೇಶದ ಜೊತೆ ನಿಲ್ಲುತ್ತದೆ. ಶಿವರಾಜ್ ಜೀ ಮತ್ತವರ ಇಡೀ ತಂಡ ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸಲು ಮತ್ತು ರಕ್ಷಣಾ ಕಾರ್ಯವನ್ನು ತ್ವರಿತಗೊಳಿಸಲು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದೆ. ಎನ್.ಡಿ.ಆರ್.ಎಫ್., ಕೇಂದ್ರೀಯ ಪಡೆಗಳು ಅಥವಾ ನಮ್ಮ ವಾಯು ಪಡೆ ಸಿಬ್ಬಂದಿಗಳು ನೆರವಿನ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯ ಸರಕಾರಕ್ಕೆ ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲಾ ಸಹಾಯವನ್ನು ನೀಡಲಾಗಿದೆ.

ಸಹೋದರರೇ ಮತ್ತು ಸಹೋದರಿಯರೇ,

ಯಾವುದೇ ವಿಪತ್ತಿನ ಪರಿಣಾಮ ಬಹಳ ದೂರಗಾಮಿಯಾಗಿರುತ್ತದೆ. ನೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ   ಕೊರೊನಾವು ಅತ್ಯಂತ ದೊಡ್ಡ ವಿಪತ್ತಾಗಿ ಇಡೀ ಮನುಕುಲವನ್ನು ಬಾಧಿಸುತ್ತಿದೆ. ಕಳೆದ ವರ್ಷದ ಆರಂಭದಲ್ಲಿ ಯಾವ ದೇಶವೂ ಇಂತಹ ಭಯಾನಕ ಅನುಭವವನ್ನು ಹೊಂದಿರಲಿಲ್ಲ. ಕಳೆದ ವರ್ಷ ಮೊದಲಿಗೆ ಕೊರೊನ ಸೋಂಕು ಹರಡತೊಡಗಿದಾಗ ಇಡೀ ಜಗತ್ತಿನ ಗಮನ ಅದರ ಆರೋಗ್ಯ ಸೌಲಭ್ಯಗಳತ್ತ ಹೋಯಿತು. ಪ್ರತಿಯೊಬ್ಬರೂ ಆವರವರ ಆರೋಗ್ಯ ಸವಲತ್ತುಗಳನ್ನು ಬಲಪಡಿಸುವಲ್ಲಿ ನಿರತರಾದರು. ಆದರೆ ನಮ್ಮ ದೇಶದಲ್ಲಿ ಇಷ್ಟೊಂದು ಬೃಹತ್ ಸಂಖ್ಯೆಯ ಜನಬಾಹುಳ್ಯ ಇರುವಾಗ ಸವಾಲಿನ ತೀವ್ರತೆ ಜಗತ್ತಿನ ಇತರ ರಾಷ್ಟ್ರಗಳಿಗಿಂತ ದೊಡ್ಡ ಪ್ರಮಾಣದಲ್ಲಿತ್ತು. ನಾವು ಕೊರೊನಾ ಹರಡುವಿಕೆ ತಡೆ ಮತ್ತು ಅದಕ್ಕೆ ಚಿಕಿತ್ಸೆಯ ವೈದ್ಯಕೀಯ ಮೂಲಸೌಕರ್ಯವನ್ನು ತಯಾರು ಮಾಡಬೇಕಾಗಿತ್ತು. ಮತ್ತು ಇದರ ಜೊತೆಗೆ ಬಿಕ್ಕಟ್ಟಿನಿಂದ ಉದ್ಭವಿಸುವ ಇತರ ಸಮಸ್ಯೆಗಳನ್ನೂ ಪರಿಹಾರ ಮಾಡಬೇಕಾಗಿತ್ತು. ಕೊರೊನಾ ನಿಯಂತ್ರಣಕ್ಕಾಗಿ ಜಗತ್ತಿನಾದ್ಯಂತ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡವು ಮತ್ತು ಸಂಚಾರವನ್ನು ನಿರ್ಬಂಧಿಸಲಾಯಿತು. ಕ್ರಮ ಭಾರತದಲ್ಲಿ ಬಹಳ ದೊಡ್ಡ ಬಿಕ್ಕಟ್ಟನ್ನು ಉಂಟು ಮಾಡುವುದರಲ್ಲಿತ್ತು. ಆದರೆ ನಾವೆಲ್ಲರೂ ಸವಾಲನ್ನು ಎದುರಿಸಲು ಒಗ್ಗೂಡಿ ಕೆಲಸ ಮಾಡಿದೆವು. ಹಸಿವಿನಿಂದ ಕಂಗೆಡದ ಸ್ಥಿತಿಯನ್ನು ನಿರ್ಮಾಣ ಮಾಡಲು ನಾವು ಕೋಟ್ಯಾಂತರ ಜನರಿಗೆ ಉಚಿತ ಪಡಿತರವನ್ನು ಒದಗಿಸಬೇಕಾಗಿತ್ತು. ನಮ್ಮ ಅನೇಕ ಸಹಚರರು ಉದ್ಯೋಗಕ್ಕಾಗಿ ಹಳ್ಳಿಗಳಿಂದ ನಗರಗಳಿಗೆ ಬರುತ್ತಿದ್ದರು. ನಾವು ಅವರ ಆಹಾರಕ್ಕೆ ಮತ್ತು ತಂಗುವಿಕೆಗೆ ವ್ಯವಸ್ಥೆ ಮಾಡಬೇಕಾಗಿತ್ತು. ಮತ್ತು ಅವರು ಹಳ್ಳಿಗಳಿಗೆ ಮರಳುವಾಗ ಸೂಕ್ತ ಉದ್ಯೋಗದ ಅವಕಾಶಗಳನ್ನೂ ಒದಗಿಸಬೇಕಾಗಿತ್ತು.ದೇಶದ ಪ್ರತೀ ಮೂಲೆಗಳಲ್ಲಿಯೂ ಇಂತಹ ಸವಾಲುಗಳಿದ್ದವು. ಇವುಗಳಿಂದಾಗಿ ಜಗತ್ತಿನ ಇತರ ದೇಶಗಳಿಗಿಂತ ಭಾರತದ ಹೋರಾಟ ಮತ್ತು  ಸವಾಲುಗಳು  ಭಿನ್ನವಾಗಬೇಕಾಯಿತು ಮತ್ತು ಅವುಗಳನ್ನು ದೃಢವಾಗಿ ರೂಪಿಸಬೇಕಾಯಿತು.

ಆದರೆ ಸ್ನೇಹಿತರೇ,

ಸವಾಲು ಎಷ್ಟೇ ದೊಡ್ಡದಾಗಿರಲಿ, ದೇಶವು ಅದನ್ನು ಸಂಯುಕ್ತವಾಗಿ ಎದುರಿಸಿದಾಗ, ಅದಕ್ಕೆ ದಾರಿಗಳು ಗೋಚರಿಸುತ್ತವೆ ಮತ್ತು ಸಮಸ್ಯೆ ಪರಿಹಾರವಾಗುತ್ತದೆ. ಕೊರೊನಾದಿಂದುಂಟಾಗುವ ಬಿಕ್ಕಟ್ಟನು ಪರಿಹರಿಸಲು ಭಾರತವು ತನ್ನ ವ್ಯೂಹದಲ್ಲಿ ಬಡವರಿಗೆ ಹೆಚ್ಚಿನ ಆದ್ಯತೆಯನ್ನು ನೀಡಿತು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನಾ ಅಥವಾ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ರೋಜಗಾರ್ ಯೋಜನಾ ಮೂಲಕ  ಬಡವರಿಗೆ ಮತ್ತು ಕಾರ್ಮಿಕರಿಗೆ   ಪಡಿತರ ಮತ್ತು ಉದ್ಯೋಗ ನೀಡುವುದಕ್ಕೆ ಮೊದಲ ದಿನದಿಂದಲೇ ಆದ್ಯತೆ ನೀಡಲಾಯಿತು. ಇಡೀ ಅವಧಿಯಲ್ಲಿ 80 ಕೋಟಿಗೂ ಅಧಿಕ ದೇಶವಾಸಿಗಳಿಗೆ ಉಚಿತ ಪಡಿತರ ಒದಗಿಸಲಾಗಿದೆ. ಗೋಧಿ, ಅಕ್ಕಿ, ಮತ್ತು ಬೇಳೆ ಕಾಳುಗಳ ಜೊತೆಗೆ , ಲಾಕ್ ಡೌನ್ ಅವಧಿಯಲ್ಲಿ ಅನಿಲ ಸಿಲಿಂಡರ್ ಗಳನ್ನು 8 ಕೋಟಿ ಬಡ ಕುಟುಂಬಗಳ ಜನರಿಗೆ ಉಚಿತವಾಗಿ ಒದಗಿಸಲಾಗಿದೆ.ಅಂದರೆ 80 ಕೋಟಿ ಜನರಿಗೆ ಆಹಾರ ಧಾನ್ಯಗಳು ಮತ್ತು 8 ಕೋಟಿ ಜನರಿಗೆ ಅನಿಲ ಸಿಲಿಂಡರ್ ಗಳುಇದಕ್ಕಿಂತ ಹೆಚ್ಚಾಗಿ 30,000 ಕೋ.ರೂ.ಗಳನ್ನು 20 ಕೋಟಿಗೂ ಅಧಿಕ ಸಹೋದರಿಯರ ಜನ ಧನ್ ಬ್ಯಾಂಕ್ ಖಾತೆಗಳಿಗೆ ನೇರ ವರ್ಗಾವಣೆ ಮಾಡಲಾಗಿದೆ. ಸಾವಿರಾರು ಕೋಟಿ ರೂಪಾಯಿಗಳನ್ನು ಕಾರ್ಮಿಕರು ಮತ್ತು ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ. ಎರಡು ದಿನಗಳ ಬಳಿಕ ಆಗಸ್ಟ್ 9 ರಂದು ಸಾವಿರಾರು ಕೋಟಿ ರೂಪಾಯಿಗಳನ್ನು 10-11 ಕೋಟಿ ರೈತರ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.

ಸ್ನೇಹಿತರೇ,

ಎಲ್ಲಾ ವ್ಯವಸ್ಥೆಗಳ ಜೊತೆಯಲ್ಲಿ, ಭಾರತವು ಭಾರತೀಯ ನಿರ್ಮಿತ ಲಸಿಕೆಗಳಿಗೆ ಹೆಚ್ಚಿನ ಒತ್ತು ನೀಡಿತು. ಇದರಿಂದಾಗಿ ಭಾರತವು ಇಂದು ತನ್ನದೇ ಆದ ಲಸಿಕೆಯನ್ನು ಹೊಂದಿದೆ. ಲಸಿಕೆಗಳು ಪರಿಣಾಮಕಾರಿ ಮತ್ತು ಸುರಕ್ಷಿತ. ನಿನ್ನೆ, ಭಾರತ ಲಸಿಕಾ ಡೋಸ್ ಗಳನ್ನು ಹಾಕುವಲ್ಲಿ 50 ಕೋಟಿ ಲಸಿಕಾ ಡೋಸುಗಳ ಮೈಲಿಗಲ್ಲನ್ನು ದಾಟಿದೆ. ಭಾರತದಲ್ಲಿ ಒಂದು ವಾರದಲ್ಲಿ ಹಾಕಲಾಗುತಿರುವ ಲಸಿಕೆಗಳ ಪ್ರಮಾಣ ಜಗತ್ತಿನ ಹಲವು ದೇಶಗಳ ಒಟ್ಟು ಜನಸಂಖ್ಯೆಗಿಂತ ಹೆಚ್ಚುಇದು ನವ ಭಾರತದ ನವ ಸಾಮರ್ಥ್ಯ, ಮತ್ತು ಆತ್ಮ ನಿರ್ಭರ ಭಾರತ್. ಮೊದಲು ನಾವು ಜಗತ್ತಿನಲ್ಲಿ ಹಿಂದೆ ಉಳಿಯುತ್ತಿದ್ದೆವು. ಇಂದು, ನಾವು ಜಗತ್ತಿನಲ್ಲಿ ಹಲವು ಹೆಜ್ಜೆ ಮುಂದಿದ್ದೇವೆ. ಲಸಿಕಾ ಪ್ರಕ್ರಿಯೆಯ ವೇಗವನ್ನು ಸದ್ಯೋಭವಿಷ್ಯದಲ್ಲಿ ಇನ್ನಷ್ಟು ಹೆಚ್ಚಿಸಬೇಕಾಗಿದೆ.

ಸ್ನೇಹಿತರೇ,

ಕೊರೊನಾ ಘಾಸಿ ಮಾಡಿರುವ ಹಲವಾರು ರಂಗಗಳನ್ನು ಭಾರತವು ಏಕಕಾಲಕ್ಕೆ ಸುಧಾರಿಸುತ್ತಿದೆ, ಇದು ಭಾರತದ ಶಕ್ತಿಯನ್ನು ತೋರಿಸುತ್ತದೆ. ಒಂದು ರಾಷ್ಟ್ರ, ಒಂದು ರೇಶನ್ ಕಾರ್ಡ್ ನ್ನು ಇತರ ರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಒದಗಿಸಲಾಗುತ್ತಿದೆ. ಬೃಹತ್ ನಗರಗಳಲ್ಲಿ ನ್ಯಾಯೋಚಿತ ಬಾಡಿಗೆ ಯೋಜನೆಯನ್ನು ಅನುಷ್ಟಾನಕ್ಕೆ ತರಲಾಗಿದೆ. ಇದರಿಂದ ಕಾರ್ಮಿಕರು ಕೊಳೆಗೇರಿಯಲ್ಲಿ ವಾಸಿಸುವ ಸಂದರ್ಭ ಬರುವುದಿಲ್ಲ. ಪ್ರಧಾನ ಮಂತ್ರಿ ಸ್ವ ನಿಧಿ ಯೋಜನೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಸುಲಭದಲ್ಲಿ ಮತ್ತು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಬ್ಯಾಂಕ್ ಗಳಿಂದ ಒದಗಿಸಲಾಗುತ್ತಿದೆ, ಇದರಿಂದ ಅವರು ತಮ್ಮ ವ್ಯಾಪಾರವನ್ನು ಪುನರಾರಂಭ ಮಾಡಬಹುದು. ನಮ್ಮ ನಿರ್ಮಾಣ ಮತ್ತು ಮೂಲಸೌಕರ್ಯ ವಲಯಗಳು ಉದ್ಯೋಗಾವಕಾಶಗಳ ಬೃಹತ್ ಮೂಲಗಳು. ಆದುದರಿಂದ ದೇಶಾದ್ಯಂತ ತ್ವರಿತಗತಿಯಲ್ಲಿ ಮೂಲಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಸ್ನೇಹಿತರೇ,

ಬಿಕ್ಕಟ್ಟಿನಲ್ಲಿ ಜೀವನೋಪಾಯವನ್ನು ಖಾತ್ರಿ ಮಾಡಲಾಗಿದೆ, ಭಾರತದಲ್ಲಿ ಜೀವನೋಪಾಯ ನಷ್ಟ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಕಳೆದ ವರ್ಷದಿಂದ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ಅವುಗಳನ್ನು ಈಗಲೂ ತೆಗೆದುಕೊಳ್ಳಲಾಗುತ್ತಿದೆ. ಸಣ್ಣ ಮತ್ತು ಕಿರು ಉದ್ಯಮಗಳು ಅವುಗಳ ವ್ಯಾಪಾರೋದ್ಯಮಗಳನ್ನು ಮುಂದುವರೆಸಿಕೊಂಡು ಹೋಗಬೇಕು ಎಂಬ ಕಾರಣಕ್ಕಾಗಿ ಉದ್ಯಮಗಳಿಗೆ ಹಲವು ಲಕ್ಷ ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ. ಕೃಷಿ ಮತ್ತು ಸಂಬಂಧಿ ಚಟುವಟಿಕೆಗಳು ಸುಲಲಿತವಾಗಿ ಮುಂದುವರೆಸಿಕೊಂಡು ಹೋಗಲು ಸರಕಾರ ಕ್ರಮಗಳನ್ನು ಕೈಗೊಂಡಿದೆ. ರೈತರಿಗೆ ಸಹಾಯ ಮಾಡಲು ನಾವು ನವೀನ ವಿಧಾನಗಳನ್ನು ಅನುಸರಿಸಿದೆವು. ಮಧ್ಯ ಪ್ರದೇಶ ನಿಟ್ಟಿನಲ್ಲಿ ಶ್ಲಾಘನೀಯ ಕೆಲಸವನ್ನು ಮಾಡಿದೆ. ಮಧ್ಯ ಪ್ರದೇಶದ ರೈತರು ದಾಖಲೆ ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು ಉತ್ಪಾದಿಸಿದರು. ಮತ್ತು ಸರಕಾರ ಅವರ ಉತ್ಪನ್ನಗಳನ್ನು ಎಂ.ಎಸ್.ಪಿ.ಯಲ್ಲಿ ಖರೀದಿಸುವುದನ್ನು ಖಾತ್ರಿಪಡಿಸಿತು. ಗೋಧಿ ಖರೀದಿಗೆ ಮಧ್ಯಪ್ರದೇಶದಲ್ಲಿ ಗರಿಷ್ಟ ಸಂಖ್ಯೆಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿತ್ತು ಎಂದು ನನಗೆ ತಿಳಿಸಲಾಗಿದೆ. ಮಧ್ಯ ಪ್ರದೇಶವು ತನ್ನ 17 ಲಕ್ಷಕ್ಕೂ ಅಧಿಕ ರೈತರಿಂದ ಗೋಧಿಯನ್ನು ಖರೀದಿ ಮಾಡಿತು ಮತ್ತು 25,000 ಕೋ.ರೂ.ಗಳಿಗೂ ಅಧಿಕ ಮೊತ್ತವನ್ನು ಅವರಿಗೆ ನೇರ ವರ್ಗಾವಣೆ ಮಾಡಿತು

ಸಹೋದರರೇ ಮತ್ತು ಸಹೋದರಿಯರೇ,

ಎರಡು ಇಂಜಿನ್ ಗಳ ಸರಕಾರದ ಅತ್ಯಂತ ದೊಡ್ಡ ಪ್ರಯೋಜನ ಎಂದರೆ ರಾಜ್ಯ ಸರಕಾರವು ಕೇಂದ್ರ ಸರಕಾರದ ಯೋಜನೆಗಳನ್ನು ವಿಸ್ತರಿಸುತ್ತದೆ. ಕೌಶಲ್ಯಾಭಿವೃದ್ಧಿ ಇರಲಿ, ಆರೋಗ್ಯ ಮೂಲಸೌಕರ್ಯ ಇರಲಿ, ಡಿಜಿಟಲ್ ಮೂಲಸೌಕರ್ಯ ಅಥವಾ ರೈಲು-ರಸ್ತೆ ಸಂಪರ್ಕ ಇರಲಿ, ಮಧ್ಯ ಪ್ರದೇಶದಲ್ಲಿ ಕಾಮಗಾರಿಗಳನ್ನು ತ್ವರಿತಗತಿಯಿಂದ ಕೈಗೊಳ್ಳಲಾಗುತ್ತಿದೆ. ಶಿವರಾಜ್ ಜೀ ಅವರ ನಾಯಕತ್ವದಲ್ಲಿ ಮಧ್ಯ ಪ್ರದೇಶವುಭಿಮಾರುರಾಜ್ಯ ಎಂಬ ಗುರುತಿಸುವಿಕೆಯನ್ನು ಹಿಂದೊತ್ತಿ ಬಹಳ ಕಾಲವಾಗಿದೆ. ಇಲ್ಲದಿದ್ದರೆ, ನಾನು ನೆನಪಿಟ್ಟುಕೊಂಡಿದ್ದೇನೆಮಧ್ಯ ಪ್ರದೇಶದಲ್ಲಿಯ ರಸ್ತೆಗಳ ಸ್ಥಿತಿ ಗತಿಗಳನ್ನು. ಇಲ್ಲಿ ಬಹಳಷ್ಟು ದೊಡ್ಡ ಹಗರಣಗಳ ಸುದ್ದಿಗಳಿರುತ್ತಿದ್ದವು. ಇಂದು ಮಧ್ಯಪ್ರದೇಶದ ನಗರಗಳು ಸ್ವಚ್ಚತೆಗೆ ಹೊಸ ಮಾನದಂಡಗಳನ್ನು ಮತ್ತು ಅಭಿವೃದ್ಧಿಗೆ ಹೊಸ ಮಾನದಂಡಗಳನ್ನು ರೂಪಿಸುತ್ತಿವೆ.

ಸಹೋದರರೇ ಮತ್ತು ಸಹೋದರಿಯರೇ,

ಇಂದು ಸರಕಾರದ ಕಾರ್ಯಕ್ರಮಗಳು ತ್ವರಿತಗತಿಯಿಂದ ಜಾರಿಗೆ ಬರುತ್ತಿವೆ ಎಂದಾದರೆ, ಅದಕ್ಕೆ ಕಾರಣ ಸರಕಾರದ ಆಡಳಿತ ವೈಖರಿಯಲ್ಲಾದ ಬದಲಾವಣೆ. ಹಿಂದಿನ ಸರಕಾರಿ ವ್ಯವಸ್ಥೆಯಲ್ಲಿ ಅವ್ಯವಸ್ಥೆಗಳಿದ್ದವು. ಅವರು ಬಡವರ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು ಮತ್ತು ಅವರೇ ಉತ್ತರಿಸುತ್ತಿದ್ದರು. ಯಾರಿಗೆ ಸವಲತ್ತುಗಳನ್ನು ಕೊಡಬೇಕು ಎಂಬ ಬಗ್ಗೆ ಚಿಂತನೆ ಇರಲಿಲ್ಲ. ಕೆಲವರು ಆಲೋಚಿಸುತ್ತಿದ್ದರು, ಬಡವರಿಗೆ ಯಾಕೆ ರಸ್ತೆಗಳು ಬೇಕು? ಅವರಿಗೆ ಮೊದಲು ಬ್ರೆಡ್ ಬೇಕು ಎಂಬುದಾಗಿ. ಕೆಲವರು ಬಡವರಿಗೆ ಅನಿಲ ಸಿಲಿಂಡರ್ ಗಳು ಯಾಕೆ ಬೇಕು ಎಂದು ಪ್ರಶ್ನೆ ಮಾಡುತ್ತಿದ್ದರು. ಯಾಕೆಂದರೆ ಅವರು ಕಟ್ಟಿಗೆ ಒಲೆಯಲ್ಲಿ ಅಡಿಗೆ ಮಾಡುತ್ತಾರಲ್ಲ ಎನ್ನುತ್ತಿದ್ದರು. ಹಣ ಸಂಗ್ರಹಿಸಿಡಲು ಸಾಧ್ಯ ಇಲ್ಲದವರು ಬ್ಯಾಂಕ್ ಖಾತೆ ತೆರೆದು ಏನು ಮಾಡುತ್ತಾರೆ? ಎಂಬ ಚಿಂತನೆ ಆಗ ಇತ್ತು. ನಿವೇಕೆ ಬ್ಯಾಂಕ್ ಖಾತೆಗಳ ಹಿಂದೆ ಬಿದ್ದಿದ್ದೀರಿ ಎಂದು ಕೇಳಲಾಗುತ್ತಿತ್ತು?. ಬಡವರಿಗೆ ಸಾಲ ಕೊಟ್ಟರೆ, ಅವರು ಅದನ್ನು ಹೇಗೆ ಹಿಂಪಾವತಿ ಮಾಡುತ್ತಾರೆ? ಎಂಬ ಪ್ರಶ್ನೆಗಳಿದ್ದವು. ದಶಕಗಳಿಂದ ಇಂತಹ ಪ್ರಶ್ನೆಗಳ ಮೂಲಕ ಬಡವರನ್ನು ಸವಲತ್ತುಗಳಿಂದ ದೂರ ಇಡಲಾಗಿತ್ತು. ಏನನ್ನೂ ಮಾಡದಿರುವುದಕ್ಕೆ ಇಂತಹ ಕಾರಣಗಳನ್ನು ನೀಡುವುದು ಒಂದು ಪರಿಪಾಠವಾಗಿತ್ತು. ರಸ್ತೆಗಳು ಬಡವರನ್ನು ತಲುಪಲಿಲ್ಲ.ಅನಿಲ, ವಿದ್ಯುತ್, ಬದುಕಲು ಪಕ್ಕಾ ಮನೆಯೂ ಸಿಗಲಿಲ್ಲ, ಬಡವರಿಗೆ ಬ್ಯಾಂಕ್ ಖಾತೆಗಳನ್ನೂ ತೆರೆಯಲಾಗಲಿಲ್ಲ. ನೀರು ಕೂಡಾ ಬಡವರನ್ನು ತಲುಪಲಿಲ್ಲ. ಇದರ ಫಲಿತಾಂಶವೆಂದರೆ ಬಡವರಿಗೆ ದಶಕಗಳಿಂದ ಮೂಲಸೌಕರ್ಯಗಳು ನಿರಾಕರಿಸಲ್ಪಟ್ಟವು. ಮತ್ತು ಸಣ್ಣ ಅವಶ್ಯಕತೆಗಳಿಗಾಗಿ ಅವರು ಉದ್ದಕ್ಕೂ ಹೋರಾಟಗಳನ್ನು ಮಾಡಬೇಕಾಯಿತು. ಈಗ ನಾವಿದನ್ನು ಏನೆಂದು ಕರೆಯಬೇಕು? ಅವರು ಬಡವರು ಎಂಬ ಶಬ್ದವನ್ನು ದಿನಕ್ಕೆ ನೂರು ಬಾರಿ ಪಠಿಸುತ್ತಾರೆ, ಬಡವರಿಗಾಗಿ ಹಾಡು ಹಾಡುತ್ತಾರೆ. ಇದು ಅವರ ವರ್ತನೆ!. ಸಂಗತಿಗಳನ್ನು ಹಿಪಾಕ್ರಸಿ (ಆಷಾಢಭೂತಿತನ) ಎಂದು ಕರೆಯಲಾಗುತ್ತದೆ. ಅವರು ಸವಲತ್ತುಗಳನ್ನು ನೀಡಲಾರರು ಆದರೆ ಕಥನದ ರೀತಿಯಲ್ಲಿಕಾಲ್ಪನಿಕ ರೀತಿಯಲ್ಲಿ  ಸುಳ್ಳು ಸುಳ್ಳೇ ಸಹಾನುಭೂತಿ ತೋರಿಸುತ್ತಾರೆ. ಆದರೆ ನಾವು, ತಳಮಟ್ಟದಿಂದ ಮೇಲೆ ಬಂದವರು, ನಿಮ್ಮ ನಡುವಿನಿಂದ ಬಂದವರು. ನಮಗೆ ನಿಮ್ಮ ಸಂತೋಷದ ಅನುಭವವಿದೆ, ದುಃಖದ ನಿಕಟ ಅನುಭವವಿದೆ, ಮತ್ತು ಅದರಿಂದಾಗಿ ನಾವು ನಿಮಗಾಗಿ ವಿಭಿನ್ನವಾಗಿ ಕೆಲಸ ಮಾಡುತ್ತಿದ್ದೇವೆ. ಇಂತಹ ವ್ಯವಸ್ಥೆಯ ದಾರುಣತೆಯನ್ನು  ಅನುಭವಿಸುತ್ತಲೇ ನಾವು ಬೆಳೆದಿದ್ದೇವೆ!. ಆದುದರಿಂದ  ಕಳೆದ ಕೆಲವು ವರ್ಷಗಳಲ್ಲಿ ಬಡವರನ್ನು ಸಶಕ್ತೀಕರಣದ ನೈಜಾರ್ಥದಲ್ಲಿ ಬಲಿಷ್ಟಗೊಳಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇಂದು ದೇಶದ ಪ್ರತೀ ಹಳ್ಳಿಗಳಲ್ಲೂ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ.ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುತ್ತಿದೆ. ರೈತರಿಗೆ ಮಾರುಕಟ್ಟೆಗಳ ಜೊತೆ ಸಂಪರ್ಕ ಸಾಧ್ಯವಾಗುತ್ತಿದೆ. ಮತ್ತು ಬಡವರು ಅನಾರೋಗ್ಯದ ಸಂದರ್ಭಗಳಲ್ಲಿ ಆಸ್ಪತ್ರೆಗಳಿಗೆ ತಲುಪುವುದಕ್ಕೆ ಸಾಧ್ಯವಾಗುತ್ತದೆ. ದೇಶದಲ್ಲಿಯ ಬಡವರಿಗೆ ಜನ ಧನ್ ಬ್ಯಾಂಕ್ ಖಾತೆಗಳನ್ನು ತೆರೆಯುವುದಕ್ಕೆ ಸಾಧ್ಯವಾಗಿರುವುದರಿಂದ, ಅವರು ಬ್ಯಾಂಕಿಂಗ್ ವ್ಯವಸ್ಥೆಯ ಜೊತೆ ಜೋಡಿಸಲ್ಪಟ್ಟಿದ್ದಾರೆ. ಅವರು ಇಂದು ಪ್ರಯೋಜನಗಳನ್ನು ನೇರವಾಗಿ ಪಡೆಯುತ್ತಿದ್ದಾರೆ. ಯಾವುದೇ ಮಧ್ಯವರ್ತಿ ಇಲ್ಲದೆ ಸಾಲ ಪಡೆಯಲು ಸಮರ್ಥರಾಗಿದ್ದಾರೆ. ಪಕ್ಕಾ ಮನೆಗಳು, ವಿದ್ಯುತ್, ನೀರು, ಅನಿಲ, ಮತ್ತು ಶೌಚಾಲಯ ಸೌಲಭ್ಯಗಳು ಗೌರವ, ವಿಶ್ವಾಸವನ್ನು ಬಡವರಿಗೆ ನೀಡಿವೆ.ಮತ್ತು ಅವಮಾನ ಹಾಗು ತೊಂದರೆಗಳನ್ನು ನಿವಾರಣೆ ಮಾಡಿವೆ. ಅದೇ ರೀತಿ ಕೋಟ್ಯಂತರ ಸ್ವ ಉದ್ಯೋಗಿಗಳು ಮುದ್ರಾ ಸಾಲದ ಮೂಲಕ ತಮ್ಮ ವ್ಯಾಪಾರೋದ್ಯಮ ನಡೆಸುತ್ತಿದ್ದಾರೆ. ಮತ್ತು ಅವರು ಇತರರಿಗೆ ಉದ್ಯೋಗ ನೀಡುತ್ತಿದ್ದಾರೆ.

ಸ್ನೇಹಿತರೇ,

ಡಿಜಿಟಲ್ ಇಂಡಿಯಾ, ಕಡಿಮೆ ದರದಲ್ಲಿ ದತ್ತಾಂಶ ಮತ್ತು ಅಂತರ್ಜಾಲದಿಂದ ಬಡವರಿಗೆ ಪ್ರಯೋಜನ ಇಲ್ಲ ಎಂದು ಕೆಲವರು ಹೇಳುತ್ತಿದ್ದರು, ಇಂದು ಇದೇ ಜನರು ಡಿಜಿಟಲ್ ಇಂಡಿಯಾದ ನೈಜ ಶಕ್ತಿಯನ್ನು ಅನುಭವಿಸುತ್ತಿದ್ದಾರೆ. ಸಹೋದರರೇ ಮತ್ತು ಸಹೋದರಿಯರೇ,

ದೇಶದಲ್ಲಿ ಇನ್ನೊಂದು ಬಹಳ ದೊಡ್ಡ ಆಂದೋಲನವನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ. ಗ್ರಾಮಸ್ಥರು, ಬಡವರು ಮತ್ತು ಬುಡಕಟ್ಟು ಸಮುದಾಯಗಳನ್ನು ಸಶಕ್ತೀಕರಣ ಮಾಡುವ ಕಾರ್ಯಕ್ರಮ. ಆಂದೋಲನವು ನಮ್ಮ ಕರಕುಶಲ ಕಲೆ, ಕೈಮಗ್ಗ, ಮತ್ತು ಬಟ್ಟೆಯಲ್ಲಿ ನಮ್ಮ ಕೈಚಳಕದ ಕಾರ್ಯವನ್ನು ಉತ್ತೇಜಿಸುತ್ತದೆ. ಕಾರ್ಯಕ್ರಮ ಸ್ಥಳೀಯತೆಯ ಬಗ್ಗೆ ಪ್ರಚುರಪಡಿಸುತ್ತದೆ. ಸ್ಪೂರ್ತಿಯೊಂದಿಗೆ ದೇಶವು ಇಂದು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸುತ್ತಿದೆ. ನಾವು ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿರುವಾಗ, ಸ್ವಾತಂತ್ರ್ಯದ ಅಮೃತ್ ಉತ್ಸವದ ಸಂದರ್ಭದಲ್ಲಿ ದಿನಕ್ಕೆ ವಿಶೇಷ ಮಹತ್ವ. ಆಗಸ್ಟ್ 7 ಅತ್ಯಂತ ಹೆಚ್ಚು ಪ್ರಾಮುಖ್ಯ ಇರುವ ದಿನ. ನಾವೆಲ್ಲರೂ ನೆನಪಿಸಿಕೊಳ್ಳೋಣ, 1905 ಆಗಸ್ಟ್ 7ರಂದು ಸ್ವದೇಶೀ ಆಂದೋಲನ ಆರಂಭವಾಯಿತು. ಚಾರಿತ್ರಿಕ ದಿನದಿಂದ ಪ್ರೇರಣೆ ಪಡೆದು ಆಗಸ್ಟ್ 7 ನ್ನು ಕೈಮಗ್ಗದ ದಿನವಾಗಿ ನಿಗದಿ ಮಾಡಲಾಯಿತು. ನಮ್ಮ ಅದ್ಭುತ ಕರಕುಶಲಕರ್ಮಿಗಳು, ಹಳ್ಳಿಗಳಲ್ಲಿರುವ ಕಲಾವಿದರು, ಬುಡಕಟ್ಟು ಪ್ರದೇಶಗಳಲ್ಲಿರುವ ಕಲಾವಿದರಿಗೆ ಗೌರವ ಸಲ್ಲಿಸುವ ದಿನ ಇದು ಮತ್ತು ಅವರ ಉತ್ಪನ್ನಗಳಿಗೆ ಜಾಗತಿಕ ವೇದಿಕೆ ಒದಗಿಸಿಕೊಡುವ ಸಂಕಲ್ಪದ ದಿನ.

ಸಹೋದರರೇ ಮತ್ತು ಸಹೋದರಿಯರೇ,

ಇಂದು, ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗ ಕೈಮಗ್ಗ ದಿನಾಚರಣೆ ಬಹಳ ಪ್ರಾಮುಖ್ಯವನ್ನು ಪಡೆಯುತ್ತದೆ. ನಮಗೆಲ್ಲ ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಚರಕದ ಬಹಳ ದೊಡ್ಡ ಕೊಡುಗೆಯ ಬಗ್ಗೆ ಮತ್ತು ಖಾದಿಯ ಕೊಡುಗೆಯ ಬಗ್ಗೆ ಗೊತ್ತಿದೆವರ್ಷಗಳಿಂದ ದೇಶವು ಖಾದಿಗೆ ಬಹಳ ಗೌರವವನ್ನು ಕೊಡುತ್ತಲೇ ಬಂದಿದೆ. ಒಂದು ಕಾಲದಲ್ಲಿ ಅದನ್ನೂ ಮರೆಯಲಾಗಿತ್ತು. ಅದೀಗ ಹೊಸ ಬ್ರಾಂಡ್ ಆಗಿ ಹೊರಹೊಮ್ಮಿದೆ. ನಾವೀಗ ಸ್ವಾತಂತ್ರ್ಯದ 100 ವರ್ಷಗಳತ್ತ ಸಾಗುವ ಹೊಸ ಪ್ರಯಾಣದಲ್ಲಿದ್ದೇವೆ. ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಖಾದಿ ಕುರಿತು ಇದ್ದಂತಹ ಸ್ಫೂರ್ತಿಯನ್ನು ನಾವು ಪ್ರಚುರಪಡಿಸಬೇಕು ಮತ್ತು ಬಲಪಡಿಸಬೇಕು. ಆತ್ಮನಿರ್ಭರ ಭಾರತಕ್ಕಾಗಿ ನಾವು ಲೋಕಲ್ ಉತ್ಪನ್ನಗಳಿಗೆ ಓಕಲ್ ಆಗಬೇಕು. ಮಧ್ಯ ಪ್ರದೇಶವು ಖಾದಿಯಿಂದ ರೇಶ್ಮೆಯವರೆಗೆ ಕರಕುಶಲ ವಸ್ತುಗಳ ಬಹಳ ದೊಡ್ಡ ಪರಂಪರೆಯನ್ನು ಹೊಂದಿದೆ. ಬರಲಿರುವ ಹಬ್ಬಗಳ ಸಂದರ್ಭದಲ್ಲಿ ಯಾವುದಾದರೂ ಸ್ಥಳೀಯ ಕರಕುಶಲ ವಸ್ತುಗಳನ್ನು ಖರೀದಿಸಿ ನಮ್ಮ ಕರಕುಶಲ ವಸ್ತುಗಳನ್ನು ಉತ್ತೇಜಿಸಬೇಕು ಎಂದು ನಾನು ನಿಮ್ಮೆಲ್ಲರನ್ನೂ ಮತ್ತು ಇಡೀ ದೇಶವನ್ನು ಆಗ್ರಹಿಸುತ್ತೇನೆ.

ಮತ್ತು ಸ್ನೇಹಿತರೇ,

ಹಬ್ಬಗಳ ಉತ್ಸಾಹದಲ್ಲಿ ಅದರ ನಡುವೆ ಕೊರೊನಾವನ್ನು ಮರೆಯಬಾರದು ಎಂದೂ ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ನಾವೆಲ್ಲರೂ ಕೊರೊನಾದ ಮೂರನೆ ಅಲೆಯನ್ನು ತಡೆಯಬೇಕಾಗಿದೆ.ಇದನ್ನು ಖಾತ್ರಿಪಡಿಸಲು ನಾವೆಲ್ಲರೂ ಒಗ್ಗೂಡಿ ದುಡಿಯಬೇಕಾಗಿದೆ. ಮುಖಗವಸುಗಳು, ಲಸಿಕೆಗಳು, ಮತ್ತು ಎರಡು ಯಾರ್ಡ್ ಗಳ ಅಂತರ ಬಹಳ ಮುಖ್ಯ. ನಾವು ಆರೋಗ್ಯವಂತ ಮತ್ತು ಸಮೃದ್ಧ ಭಾರತದ ಪ್ರತಿಜ್ಞೆ ಕೈಗೊಳ್ಳಬೇಕಾಗಿದೆ. ಮತ್ತೊಮ್ಮೆ ನಿಮಗೆಲ್ಲಾ ಶುಭಾಶಯಗಳು. ಇಂದು ಮಧ್ಯ ಪ್ರದೇಶದ 25,000 ಕ್ಕೂ ಅಧಿಕ ಪಡಿತರ ಅಂಗಡಿಗಳಲ್ಲಿ ಮಿಲಿಯಾಂತರ ನಾಗರಿಕರು ಸೇರಿದ್ದೀರಿ. ನಾನವರಿಗೆ ಶಿರಬಾಗುತ್ತೇನೆ. ಮತ್ತು ಇಡೀ ಮಾನವ ಕುಲವನ್ನು ಬಾಧಿಸಿದ ಬಿಕ್ಕಟ್ಟಿನಿಂದ ನಾವು ಹೊರ ಬರುತ್ತೇವೆ  ಎಂದೂ ಭರವಸೆ ನೀಡುತ್ತೇನೆ. ನಾವೆಲ್ಲರೂ ಒಗ್ಗೂಡಿ ಪ್ರತಿಯೊಬ್ಬರನ್ನೂ ರಕ್ಷಿಸೋಣ ಮತ್ತು ಎಲ್ಲಾ ನಿಯಮಗಳನ್ನು ಅನುಸರಿಸುವ ಮೂಲಕ ಜಯವನ್ನು ಖಾತ್ರಿಪಡಿಸೋಣ. ನಿಮಗೆಲ್ಲರಿಗೂ ಶುಭವಾಗಲಿ, ಧನ್ಯವಾದಗಳು!.

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***



(Release ID: 1744665) Visitor Counter : 243