ಬುಡಕಟ್ಟು ವ್ಯವಹಾರಗಳ ಸಚಿವಾಲಯ

“ಸಂಕಲ್ಪ್ ಸೆ ಸಿದ್ಧಿ- ವನ್ ಧನ್ ಆಂದೋಲನ”ಕ್ಕೆ ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಅರ್ಜುನ್ ಮುಂಡಾ ಅವರಿಂದ ಚಾಲನೆ.


ಜಗದಾಲ್ಪುರ, ರಾಂಚಿ, ಜೆಮ್ ಶೆಡ್ಪುರ, ಸಾರಾನಾಥಗಳಲ್ಲಿ ವರ್ಚುವಲ್ ಮೂಲಕ ಏಳು ಹೊಸ ಟ್ರೈಬ್ಸ್ ಇಂಡಿಯಾ ಅಂಗಡಿಗಳ ಉದ್ಘಾಟನೆ

ಬೃಹತ್ ಉದ್ಘಾಟನಾ ಕಾರ್ಯಕ್ರಮದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಬುಟ್ಟಿಗಳು, ಟ್ರೈಬ್ಸ್ ಇಂಡಿಯಾ ಕಾಫಿ ಟೇಬಲ್ ಪುಸ್ತಕ, ಹೊಸ ಟ್ರೈಫೆಡ್ ಕೇಂದ್ರ ಕಚೇರಿ ಸಹಿತ ಹಲವು ಪ್ರಮುಖಾಂಶಗಳು.

Posted On: 15 JUN 2021 9:57PM by PIB Bengaluru

ಬುಡಕಟ್ಟು ವ್ಯವಹಾರಗಳ ಸಚಿವರಾದ ಶ್ರೀ ಅರ್ಜುನ್ ಮುಂಡಾ ಅವರು ಬುಡಕಟ್ಟು ಜೀವನೋಪಾಯಗಳ ಉಪಕ್ರಮವಾದ “ಸಂಕಲ್ಪ ಸೇ ಸಿದ್ದಿ-ವನ ಧನ ಆಂದೋಲನಕ್ಕೆ ಚಾಲನೆ ನೀಡಿದರು. ಜಗದಾಲ್ಪುರ, ರಾಂಚಿ, ಜೆಮ್ ಶೆಡ್ ಪುರ ಮತ್ತು ಸಾರಾನಾಥಗಳಲ್ಲಿ ಏಳು ಹೊಸ ಟ್ರೈಬ್ಸ್ ಇಂಡಿಯಾ ಅಂಗಡಿಗಳನ್ನು ವರ್ಚುವಲ್ ಮೂಲಕ ಉದ್ಘಾಟಿಸಿದರು. ರೋಗನಿರೋಧಕ ಶಕ್ತಿ ಹೆಚ್ಚಳದ ಬುಟ್ಟಿಗಳು, ಟ್ರೈಬ್ಸ್   ಇಂಡಿಯಾ ಕಾಫಿ ಟೇಬಲ್ ಪುಸ್ತಕ, ಹೊಸ ಟ್ರೈಫೆಡ್ ಕೇಂದ್ರ ಕಚೇರಿ ಆರಂಭ –ಇವುಗಳು ಬುಡಕಟ್ಟು ವ್ಯವಹಾರಗಳ ಸಚಿವರಾದ ಶ್ರೀ ಅರ್ಜುನ್ ಮುಂಡಾ ಅವರು ಹೊಸದಿಲ್ಲಿಯಲ್ಲಿಂದು ಟ್ರೈಫೆಡ್ ಕೇಂದ್ರ ಕಚೇರಿಯಲ್ಲಿ ಆರಂಭ ಮಾಡಿದ ಬೃಹತ್ ಉದ್ಘಾಟನಾ ಕಾರ್ಯಕ್ರಮ  “ಸಂಕಲ್ಪ್ ಸೇ ಸಿದ್ಧಿ”- ವನ್ ಧನ್ ಆಂದೋಲನ ಪ್ರಮುಖಾಂಶಗಳು. ಕಾರ್ಯಕ್ರಮಕ್ಕೆ ಮೊದಲು ಹೊಸದಿಲ್ಲಿಯ  ಓಖ್ಲಾ ಕೈಗಾರಿಕಾ ಪ್ರದೇಶದಲ್ಲಿ ಟ್ರೈಫೆಡ್ ಹೊಸ ಕಟ್ಟಡವನ್ನು ಶ್ರೀ ಅರ್ಜುನ್ ಮುಂಡಾ ಉದ್ಘಾಟಿಸಿದರು. ಈ ಕಾರ್ಯಕ್ರಮವು “ ಸಂಕಲ್ಪ್  ಸೇ ಸಿದ್ದಿ-ವನ್ ಧನ್ ಆಂದೋಲನ”, ಏಳು ಹೊಸ ಟ್ರೈಬ್ಸ್ ಇಂಡಿಯಾ ಮಳಿಗೆಗಳು, ವನ್ ಧನ್ ಜಾಲತಾಣ ಮತ್ತು ಸಾಫ್ಟ್ ವೇರ್ ಅಪ್ಲಿಕೇಶನ್ ಗಳು, ಕಾಫಿ ಟೇಬಲ್ ಪುಸ್ತಕ ಸಹಿತ ಇತರ ಉದ್ಘಾಟನೆಗಳನ್ನು ಸಾಕ್ಷೀಕರಿಸಿತು. ಸ್ಥಳೀಯ ಉತ್ಪನ್ನಗಳಿಗೆ ವೋಕಲ್ ಎಂಬ ಪ್ರಧಾನ ಮಂತ್ರಿ ಅವರ ಘಂಟಾಷೋಷದ ಮಾತುಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಆತ್ಮ ನಿರ್ಭರ ಭಾರತ ನಿರ್ಮಾಣ ಮಾಡಲು ಟ್ರೈಫೆಡ್ ಹಲವಾರು ಉಪಕ್ರಮಗಳನ್ನು ಕೈಗೆತ್ತಿಕೊಂಡಿದೆ. ಅವೆಲ್ಲವೂ ನಮ್ಮ ಬುಡಕಟ್ಟು ಜನಸಮುದಾಯದ ಸುಸ್ಥಿರ ಅಭಿವೃದ್ಧಿಯನ್ನು ಮುಖ್ಯ ಉದ್ದೇಶವನ್ನಾಗಿಸಿಕೊಂಡಿವೆ.

ಈ ಉಪಕ್ರಮಗಳನ್ನು ಹೈಬ್ರಿಡ್ ಮಾದರಿಯಲ್ಲಿ ಭೌತಿಕವಾಗಿ ಮತ್ತು ವರ್ಚುವಲ್ ಆಗಿ ಆರಂಭ ಮಾಡಲಾಯಿತು. ಛತ್ತೀಸ್ ಗಢದ ರಾಜ್ಯಪಾಲ ಶ್ರೀಮತಿ ಅನುಸೂಯಾ ಉಯಿಕೋವ್ ಮತ್ತು ಪ್ರಧಾನ ಮಂತ್ರಿಗಳ ಸಲಹೆಗಾರ ಶ್ರೀ ಭಾಸ್ಕರ ಖುಲ್ಬೇ ಅವರು ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಪಾಲ್ಗೊಂಡರೆ, ಬುಡಕಟ್ಟು ವ್ಯವಹಾರಗಳ ಸಹಾಯಕ ಸಚಿವರಾದ ಶ್ರೀಮತಿ  ರೇಣುಕಾ ಸಿಂಗ್ , ಟ್ರೈಫೆಡ್ ಉಪಾಧ್ಯಕ್ಷೆ ಶ್ರೀಮತಿ ಪ್ರತಿಭಾ ಬ್ರಹ್ಮ , ಬುಡಕಟ್ಟು ವ್ಯವಹಾರಗಳ ಕಾರ್ಯದರ್ಶಿ ಶ್ರೀ ಅನಿಲ್ ಝಾ, ಟ್ರೈಫೆಡ್ ಆಡಳಿತ ನಿರ್ದೇಶಕ ಶ್ರೀ ಪರವೀರ ಕೃಷ್ಣ ಮತ್ತು ಇತರ ಹಿರಿಯ ಅಧಿಕಾರಿಗಳು ಖುದ್ದು ಹಾಜರಿದ್ದರು.

ಸಮಾರಂಭದಲ್ಲಿ ಮಾತನಾಡಿದ ಶ್ರೀ ಮುಂಡಾ ಅವರು “ ಟ್ರೈಫೆಡ್ ನ ಹೊಸ ಕಟ್ಟಡವನ್ನು ಉದ್ಘಾಟಿಸಲು  ಮತ್ತು ಅದರ  ಕೆಲವು ಗಮನಾರ್ಹ ಉಪಕ್ರಮಗಳನ್ನು ಅನಾವರಣ ಮಾಡಲು  ನಾನು ಸಂತೋಷಿಸುತ್ತೇನೆ. ಸಂಕಲ್ಪ್ ಸೇ ಸಿದ್ಧಿ-ವನ್ ಧನ್ ಆಂದೋಲನದಂತಹ ಕಾರ್ಯಕ್ರಮಗಳನ್ನು ಅನುಷ್ಟಾನಿಸಲು ಟ್ರೈಫೆಡ್ ಮುಂದಾಗಿದೆ. ಇಂತಹ ನಿರ್ಣಾಯಕವಾದ ಆಂದೋಲನ ಅನುಷ್ಟಾನದಿಂದಾಗಿ ದೇಶದಲ್ಲಿಯ ಬುಡಕಟ್ಟು ಪರಿಸರ ವ್ಯವಸ್ಥೆ ಖಂಡಿತವಾಗಿಯೂ ಪರಿವರ್ತನೆಗೊಳ್ಳುತ್ತದೆ. ಬುಡಕಟ್ಟು ಜನತೆಗೆ ಇಂದು ಸ್ಮರಣಾರ್ಹ ದಿನ. ಟ್ರೈಫೆಡ್ ತಂಡದ ಹಲವಾರು ವರ್ಷಗಳ ಮೌಲ್ಯಯುತ ಪ್ರಯತ್ನಗಳು ಸಂಯೋಜಿಸಲ್ಪಟ್ಟಿರುವುದನ್ನು ಇಂದು ಕಾಣಬಹುದು. ಬುಡಕಟ್ಟು ವ್ಯವಹಾರಗಳ ಸಚಿವಾಲಯ ಮತ್ತು ಟ್ರೈಫೆಡ್ ತಂಡ ಕಳೆದ ಎರಡು ವರ್ಷಗಳ ಕಠಿಣ ಪರಿಸ್ಥಿತಿಯ ನಡುವೆಯೂ ಇದನ್ನು ಸಾಧಿಸಿರುವುದು ಶ್ಲಾಘನೀಯ”  ಎಂದರು. 

“ ದೇಶದ ಇಡೀ ಬುಡಕಟ್ಟು ಸಮುದಾಯವನ್ನು ಉದ್ಯೋಗಾಧಾರಿತ ಕಾರ್ಯಕ್ರಮಗಳ ಜೊತೆ ಜೋಡಿಸುವುದು ಟ್ರೈಫೆಡ್ ನ ಗುರಿಯಾಗಿದೆ ಮತ್ತು ಈ ಕಾರ್ಯಕ್ರಮದಲ್ಲಿ ನಾವು ಖಚಿತವಾಗಿಯೂ ಯಶಸ್ಸನ್ನು ಸಾಧಿಸುತ್ತೇವೆ. ಇದಕ್ಕಾಗಿ ನಾವು ನಮ್ಮ ಉತ್ಪನ್ನಗಳನ್ನು ಇ-ವಾಣಿಜ್ಯ ವೇದಿಕೆಗೆ ತರಬೇಕಾಗಿದೆ. ಡಿಜಿಟೈಸೇಶನ್ ಇಲ್ಲದೆ ಇಂದಿನ ಮಾರುಕಟ್ಟೆಯಲ್ಲಿ ನಾವು ಮುನ್ನಡೆ ಸಾಧಿಸುವುದು ಸಾಧ್ಯವಿಲ್ಲ. ಇಂದಿನ ಕಾಲಮಾನದಲ್ಲಿ ನಾವು ತಂತ್ರಜ್ಞಾನವನ್ನು ನಿರ್ಲಕ್ಷಿಸಲಾಗದು. ನಾವು ತಂತ್ರಜ್ಞಾನದೊಂದಿಗೆ  ಮುಂದಡಿ ಇಟ್ಟರೆ ಆಗ ನಮ್ಮ ಮಾರುಕಟ್ಟೆ ಸಾಮರ್ಥ್ಯ ಇನ್ನಷ್ಟು ವೃದ್ಧಿಯಾಗುತ್ತದೆ. ಟ್ರೈಫೆಡ್ ನೈಸರ್ಗಿಕ ಉತ್ಪನ್ನಗಳನ್ನು ಸಹಜ ಮಾದರಿಯಲ್ಲಿ ಮಾರುಕಟ್ಟೆ ಮಾಡಬೇಕು. ಟ್ರೈಫೆಡ್ ನ ಅತ್ಯಂತ ದೊಡ್ಡ ಶಕ್ತಿ ಎಂದರೆ ನೈಸರ್ಗಿಕ ಉತ್ಪನ್ನಗಳು” ಎಂದೂ ಶ್ರೀ ಮುಂಡಾ ಹೇಳಿದರು.

ಕಾರ್ಯಕ್ರಮದಲ್ಲಿ ವಿಶೇಷವಾಗಿ ಹಾಜರಿದ್ದ,   ಛತ್ತೀಸ್ ಗಢದ ರಾಜ್ಯಪಾಲರಾದ ಅನುಸೂಯಾ ಉಯಿಕೇವ್ ಬುಡಕಟ್ಟು ಜನರ ಜೀವನೋಪಾಯ ಮೂಲತಹ ಅರಣ್ಯ ಸಂಪನ್ಮೂಲಗಳನ್ನು ಅವಲಂಭಿಸಿದೆ ಎಂದರು. ಅವರು ನಿಸರ್ಗದ ಆರಾಧಕರು ಮತ್ತು ಪ್ರಕೃತಿಗೆ ಅನುಗುಣವಾಗಿ ಬದುಕುವವರು, ಅವರಿಗೆ ಅರಣ್ಯದಲ್ಲಿ ಕಂಡುಬರುವ ಗಿಡ ಗಂಟಿಗಳ ಬಗ್ಗೆ  ಉತ್ತಮ ಜ್ಞಾನವಿದೆ. ಈ ಅರಣ್ಯೋತ್ಪನ್ನಗಳ ವೈದ್ಯಕೀಯ ಮಹತ್ವದ ಬಗ್ಗೆ ಬಹಳಷ್ಟು ತಿಳಿದಿದೆ. ಇದಲ್ಲದೆ, ಬುಡಕಟ್ಟು ಜನರು ಅತ್ಯುತ್ತಮ ಕರಕುಶಲಗಾರರೂ ಆಗಿರುತ್ತಾರೆ. ಬುಡಕಟ್ಟು ಜನರ ಉತ್ಪನ್ನಗಳು ಸ್ಥಳೀಯ ಮಟ್ಟದಲ್ಲಿ ಉತ್ತಮ  ಬೆಲೆಯನ್ನು ಅವರಿಗೆ ತಂದುಕೊಡಲಾರವು ಆದರೆ ಅವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚು ಮೌಲ್ಯವನ್ನು ತಂದುಕೊಡುತ್ತವೆ.ಈಗ ಟ್ರೈಫೆಡ್ ನ ಹೊಸ ಉಪಕ್ರಮಗಳ ಮೂಲಕ ಬುಡಕಟ್ಟು ಜನರಿಗೆ ಅವರ ಉತ್ಪನ್ನಗಳನ್ನು ಮಾರಾಟ ಮಾಡಲು ಉತ್ತಮ ವೇದಿಕೆ ಲಭ್ಯವಾಗಲಿದೆ, ಇದರಿಂದ ಅವರ ಆದಾಯ ಹೆಚ್ಚಲಿದೆ ಮತ್ತು ಅವರ ಜೀವನ ಮಟ್ಟ ಸುಧಾರಿಸಲಿದೆ. ಛತ್ತೀಸ್ ಗಢ ಸಹಿತ ದೇಶದ ವಿವಿಧೆಡೆ ಟ್ರೈಬ್ಸ್ ಇಂಡಿಯಾ ಮಳಿಗೆಗಳನ್ನು ಆರಂಭಿಸಿದುದಕ್ಕಾಗಿ ಟ್ರೈಫೆಡ್ ಅಭಿನಂದನೆಗೆ ಅರ್ಹವಾಗಿದೆ, ಎಂದವರು ಹೇಳಿದರು.

ಬುಡಕಟ್ಟು ವ್ಯವಹಾರಗಳ ಸಹಾಯಕ ಸಚಿವರಾದ ಶ್ರೀಮತಿ ರೇಣುಕಾ ಸಿಂಗ್ ಮಾತನಾಡಿ ” ಇಂದು ಅನಾವರಣಗೊಂಡ ಹೊಸ ಉಪಕ್ರಮಗಳು ಬುಡಕಟ್ಟು ಸಶಕ್ತೀಕರಣದ ಎಲ್ಲಾ ಅಂಶಗಳ ಬಗ್ಗೆ ಕಾಳಜಿ ವಹಿಸುತ್ತವೆ. ಬುಡಕಟ್ಟು ಜೀವನ ಶೈಲಿಯ ಶ್ರೀಮಂತಿಕೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನೈಸರ್ಗಿಕ ಉತ್ಪನ್ನಗಳ ಬುಟ್ಟಿ  ಮತ್ತು ಅತ್ಯಾಕರ್ಷಕವಾಗಿ ವಿನ್ಯಾಸ ಮಾಡಲ್ಪಟ್ಟ ಉತ್ತಮ ಗುಣಮಟ್ಟದ ಉತ್ಪನ್ನಗಳು ಸುಸ್ಥಿರವಾದಂತಹವು ಮಾತ್ರವಲ್ಲ ವೈವಿಧ್ಯಮಯವಾದ ವರ್ಣಮಯ ಕಾಫಿ ಟೇಬಲ್ ಪುಸ್ತಕದ ಮೂಲಕ ಸಂಸ್ಕೃತಿಯನ್ನು ಕಾಪಿಡುತ್ತವೆ “ ಎಂದರು. ವನ್ ಧನ್ ಕೇಂದ್ರಗಳು ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿಯೂ ಕಾರ್ಯಾಚರಿಸುತ್ತಿದ್ದವು ಮತ್ತು ಈ ಸಂಕಷ್ಟದ ಸಮಯದಲ್ಲಿಯೂ ಬುಡಕಟ್ಟು ಜನರ ಜೀವನೋಪಾಯವನ್ನು ಖಾತ್ರಿಪಡಿಸಿದ್ದವು ಎಂದೂ ಅವರು ನುಡಿದರು. 

 

ಪ್ರಧಾನ ಮಂತ್ರಿ ಅವರ ಸಲಹೆಗಾರರಾದ ಶ್ರೀ ಭಾಸ್ಕರ ಖುಲ್ಬೇ ಅವರು ಟ್ರೈಫೆಡ್ ತಂಡವನ್ನು ಅವರ ಹೊಸ ಕಟ್ಟಡಕ್ಕಾಗಿ ಅಭಿನಂದಿಸಿದರಲ್ಲದೆ “ ಬುಡಕಟ್ಟು ಜನಸಮುದಾಯಕ್ಕೆ ಪ್ರಯೋಜನಕಾರಿಯಾದಂತಹ ಹಲವಾರು ಉಪಕ್ರಮಗಳನ್ನು ಇಂದು ಕಾರ್ಯಾರಂಭ ಮಾಡಿರುವುದಕ್ಕಾಗಿ ನಾನು ಸಂತೋಷಪಡುತ್ತೇನೆ” ಎಂದರು.

ಬುಡಕಟ್ಟು ವ್ಯವಹಾರಗಳ ಕಾರ್ಯದರ್ಶಿ, ಶ್ರೀ ಅನಿಲ್ ಕುಮಾರ್ ಝಾ ಮಾತನಾಡಿ ಶಿಕ್ಷಣ, ಆರೋಗ್ಯ ಮತ್ತು ಜೀವನೋಪಾಯಗಳು ಬುಡಕಟ್ಟು ಜನಸಮುದಾಯದಲ್ಲಿ ಗಮನ ಹರಿಸಬೇಕಾದ ಮೂರು ಮುಖ್ಯ ಸಂಗತಿಗಳಾಗಿವೆ. ಟ್ರೈಫೆಡ್ ಬುಡಕಟ್ಟು ಜನರನ್ನು ಆತ್ಮನಿರ್ಭರ ಮಾಡುವ ನಿಟ್ಟಿನಲ್ಲಿ ಅಂತರ-ತಲೆಮಾರು ಪರಿವರ್ತನಾಶೀಲ ಉಪಕ್ರಮಗಳನ್ನು ಕೈಗೊಂಡಿರುವುದು ಅಭಿನಂದನೀಯ ಸಂಗತಿ ಎಂದರು.

ಟ್ರೈಫೆಡ್ ಆಡಳಿತ ನಿರ್ದೇಶಕ ಶ್ರೀ ಪ್ರವೀರ ಕೃಷ್ಣ “ ಟ್ರೈಫೆಡ್ ತನ್ನ ಉದ್ದೇಶ ಈಡೇರಿಕೆಯಲ್ಲಿ ಸತತವಾಗಿ ಕಾರ್ಯನಿರತವಾಗಿದೆ, ಆ ಮೂಲಕ ಬುಡಕಟ್ಟು ಜನರನ್ನು ಆತ್ಮನಿರ್ಭರ ಮಾಡುವಲ್ಲಿ ಮತ್ತು ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ.  ಈ ನಿಟ್ಟಿನಲ್ಲಿ ಅದು ಕೈಗೊಂಡ ಕಾರ್ಯಚಟುವಟಿಕೆಗಳ ಬಗ್ಗೆ  ಇದೊಂದು ಪಕ್ಷಿನೋಟ. ಈ ನಿಟ್ಟಿನಲ್ಲಿ ತಂಡವು ಸತತವಾಗಿ ಕಾರ್ಯನಿರತವಾಗಿರುತ್ತದೆ ಮತ್ತು ಅದನ್ನು ಮುನ್ನಡೆಸುತ್ತದೆ” ಎಂದರು.

ಹೊಸದಿಲ್ಲಿಯ ಓಕ್ಲಾ ಕೈಗಾರಿಕಾ ಪ್ರದೇಶದ ಮೂರನೇ ಹಂತದ ಎನ್.ಎಸ್.ಐ.ಸಿ. ಸಂಕೀರ್ಣದಲ್ಲಿರುವ  ಟ್ರೈಫೆಡ್ ನ ಹೊಸ ಕಚೇರಿ ಆವರಣ ಸುಮಾರು 30,000 ಚದರ ಅಡಿ ಸ್ಥಳಾವಕಾಶವನ್ನು ಹೊಂದಿದೆ ಮತ್ತು ಅತ್ಯಾಧುನಿಕ ಮೂಲಸೌಕರ್ಯವನ್ನು ಒಳಗೊಂಡಿದೆ ಹಾಗು ವೀಡಿಯೋ ಕಾನ್ಫರೆನ್ಸಿಂಗ್ ಗೆ ಎರಡು ಸಮ್ಮೇಳನ ಸಭಾಂಗಣಗಳು ಮತ್ತು ಇತರ ಅತ್ಯಾಧುನಿಕ ಸವಲತ್ತುಗಳನ್ನು ಹೊಂದಿದೆ. ಇದು ಬುಡಕಟ್ಟು ವ್ಯವಹಾರಗಳ ಸಚಿವರು, ಆಡಳಿತ ನಿರ್ದೇಶಕರು, ಹಿರಿಯ ಅಧಿಕಾರಿಗಳು ಮತ್ತು ಎಲ್ಲಾ ಸಿಬ್ಬಂದಿಗೆ ಕಚೇರಿ ಸ್ಥಳಾವಕಾಶವನ್ನು ಹೊಂದಿದೆ.

ಶ್ರೀ ಮುಂಡಾ ಅವರು ಜಗದಾಲ್ಪುರದಲ್ಲಿ 2, ರಾಂಚಿಯಲ್ಲಿ 3 ಮತ್ತು ಜೆಮ್ ಶೆಡ್ಪುರದಲ್ಲಿ 1 ಹಾಗು ಸಾರಾನಾಥದಲ್ಲಿ 1 ಸಹಿತ ಒಟ್ಟು 7 ಟ್ರೈಬ್ಸ್ ಇಂಡಿಯಾ ಮಳಿಗೆಗಳನ್ನು ಉದ್ಘಾಟಿಸಿದರು. ದೇಶಾದ್ಯಂತ ಬುಡಕಟ್ಟು ಉತ್ಪನ್ನಗಳನ್ನು ಪ್ರದರ್ಶಿಸುವ ಮಳಿಗೆಗಳು ನಿರ್ದಿಷ್ಟ ಜಿ.ಐ. ಟ್ಯಾಗ್ ಹೊಂದಿರುತ್ತವೆ ಮತ್ತು ವನ್ ಧನ್ ಕಾರ್ನರ್ ಗಳು ವಿವಿಧ ಜಿ.ಐ. ಟ್ಯಾಗಿನ ಮತ್ತು ದೇಶದ ವಿವಿಧೆಡೆಯ ನೈಸರ್ಗಿಕ ಉತ್ಪನ್ನಗಳನ್ನು ಪ್ರದರ್ಶಿಸುತ್ತವೆ. ಸಾರಾನಾಥ ಮಳಿಗೆಯು ಎ.ಎಸ್.ಐ. ಪರಂಪರಾ ತಾಣದಲ್ಲಿ ಸಂಸ್ಕೃತಿ ಸಚಿವಾಲಯದ ಮೊದಲ ಯಶಸ್ವೀ ಸಹಯೋಗಲ್ಲಿ ನಿರ್ಮಾಣವಾದ ಮಳಿಗೆಯಾಗಿದೆ. ಈ ಮಳಿಗೆಗಳೊಂದಿಗೆ ಟ್ರೈಬ್ಸ್ ಇಂಡಿಯಾದ ಒಟ್ಟು ಮಳಿಗೆಗಳ ಸಂಖ್ಯೆ 141 ಕ್ಕೇರಿದೆ.

ಇಂದು ಅನಾವರಣಗೊಂಡ ಅತ್ಯಂತ ಗಮನಾರ್ಹವಾದ ಉಪಕ್ರಮ ಎಂದರೆ “ಸಂಕಲ್ಪ್ ಸೇ ಸಿದ್ಧಿ- ವನ್ ಧನ್ ಆಂದೋಲನ”. ಬುಡಕಟ್ಟು ಜನರ ಸಶಕ್ತೀಕರಣಕ್ಕಾಗಿ ಟ್ರೈಫೆಡ್ ಹಲವಾರು ಗಮನಾರ್ಹ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುತ್ತಿದೆ. ಕಳೆದ ಎರಡು ವರ್ಷಗಳಲ್ಲಿ “ಕಿರು ಅರಣ್ಯ ಉತ್ಪನ್ನಗಳನ್ನು (ಎಂ.ಎಫ್.ಪಿ.) ಕನಿಷ್ಟ ಬೆಂಬಲ ಬೆಲೆ (ಎಂ.ಎಸ್.ಪಿ.) ಮತ್ತು ಎಂ.ಎಫ್.ಪಿ.ಗಾಗಿರುವ ಮೌಲ್ಯ ಸರಪಳಿ ಅಭಿವೃದ್ಧಿ ಮೂಲಕ ಮಾರುಕಟ್ಟೆ ಮಾಡಲು ವ್ಯವಸ್ಥೆ” ಯಿಂದಾಗಿ ಬುಡಕಟ್ಟು ಪರಿಸರ ವ್ಯವಸ್ಥೆಯ ಮೇಲೆ ಪ್ರಮುಖವಾದ ರೀತಿಯಲ್ಲಿ ಪರಿಣಾಮವಾಗಿದೆ. ಅದೇ ಯೋಜನೆಯ ಘಟಕಗಳಾದ ವನ್ ಧನ್ ಬುಡಕಟ್ಟು ನವೋದ್ಯಮಗಳು ಬುಡಕಟ್ಟು ಜನರಿಗೆ ಮತ್ತು ಅರಣ್ಯವಾಸಿಗಳಿಗೆ ಹಾಗು ಮನೆಯಲ್ಲಿ ಕೆಲಸ ಮಾಡುವ ಬುಡಕಟ್ಟು ಕರಕುಶಲಕರ್ಮಿಗಳಿಗೆ ಉದ್ಯೋಗ ಜನಕ ಮೂಲವಾಗಿದೆ. ಎರಡು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ 37,362 ವನ್ ಧನ್ ವಿಕಾಸ ಕೇಂದ್ರ (ವಿ.ಡಿ.ವಿ.ಕೆ.) ಗಳನ್ನು ತಲಾ 300 ಅರಣ್ಯವಾಸಿಗಳನ್ನು ಒಳಗೊಂಡ  2240 ವನ್ ಧನ್ ವಿಕಾಸ್ ಕೇಂದ್ರ ಗುಚ್ಛಗಳನ್ನಾಗಿ (ವಿ.ಡಿ.ವಿ.ಕೆ.ಸಿ.ಗಳು) ಪರಿವರ್ತಿಸಲು ಟ್ರೈಫೆಡ್ ಮಂಜೂರಾತಿ ನೀಡಿದ್ದು, ಅವುಗಳಲ್ಲಿ 1200 ವಿ.ಡಿ.ವಿ.ಕೆ. ಗುಚ್ಛಗಳು ಕಾರ್ಯಾಚರಿಸುತ್ತಿವೆ. ಇದಲ್ಲದೆ ಎರಡು ಟ್ರೈಫುಡ್ ಯೋಜನೆಗಳು ಜಗದಾಲ್ಪುರ ಮತ್ತು ರಾಯಘರ್ (ಮಹಾರಾಷ್ಟ್ರ) ಗಳಲ್ಲಿ ಶೀಘ್ರವೇ ಅಸ್ತಿತ್ವಕ್ಕೆ ಬರಲಿವೆ. ವನ್ ಧನ್ ಕೇಂದ್ರಗಳ ಫಲಾನುಭವಿಗಳಿಂದ ಖರೀದಿಸಿದ ವಿವಿಧ ಅರಣ್ಯ ಉತ್ಪನ್ನಗಳಿಗೆ ಮೌಲ್ಯ ವರ್ಧನೆಯನ್ನು ಇಲ್ಲಿ ಮಾಡಲಾಗುವುದು. ಟ್ರೈಫೆಡ್ ಈಗ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳು ಹೊಂದಿರುವ ವಿವಿಧ ಯೋಜನೆಗಳನ್ನು ಸಂಯೋಜಿಸಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಲು ಯೋಜಿಸಿದೆ. ಮತ್ತು ವಿವಿಧ ಬುಡಕಟ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಅವುಗಳ ತ್ವರಿತ ಅನುಷ್ಠಾನ ಕ್ಕಾಗಿ ಆಂದೋಲನ ರೀತಿಯಲ್ಲಿ “ಸಂಕಲ್ಪ್ ಸೇ ಸಿದ್ಧಿ-ವನ್ ಧನ್ ಆಂದೋಲನ” ದಡಿಯಲ್ಲಿ ಅನುಷ್ಠಾನಕ್ಕೆ ತರಲು ಉದ್ದೇಶಿಸಿದೆ. ಈ ಆಂದೋಲನದ ಮೂಲಕ 50,000 ವನ್ ಧನ್ ವಿಕಾಸ ಕೇಂದ್ರಗಳ ಸ್ಥಾಪನೆ, 3000 ಹಾಥ್ ಬಜಾರ್ ಗಳು, 600 ಗೋಡೌನ್ ಗಳು, 200 ಕಿರು ಟ್ರೈಪುಡ್ ಘಟಕಗಳು, 100 ಸಾಮಾನ್ಯ ಸೌಲಭ್ಯ ಕೇಂದ್ರಗಳು, 100 ಟ್ರೈಪುಡ್ ಪಾರ್ಕ್ ಗಳು, 100 ಎಸ್.ಎಫ್.ಯು.ಆರ್.ಟಿ.ಐ. ಗುಚ್ಛಗಳು, 200 ಟ್ರೈಬ್ಸ್ ಇಂಡಿಯಾ ಚಿಲ್ಲರೆ ಮಳಿಗೆಗಳು, ಟ್ರೈಫುಡ್ ಇ-ವಾಣಿಜ್ಯ ವೇದಿಕೆಗಳು ಮತ್ತು ಟ್ರೈಬ್ಸ್ ಇಂಡಿಯಾ ಬ್ರ್ಯಾಂಡ್ ಗಳ ಗುರಿಯನ್ನು ಇಟ್ಟುಕೊಳ್ಳಲಾಗಿದೆ.   

ಇಂದು ಆರಂಭಿಸಲಾದ ಇತರ ಉಪಕ್ರಮಗಳಲ್ಲಿ ವನ್ ಧನ್ ಸಾಫ್ಟ್ವೇರ್ ಅಪ್ಲಿಕೇಶನ್ ಸೇರಿದೆ. ವನ್ ಧನ್ ಪ್ರಸ್ತಾಪಗಳನ್ನು ಆನ್ ಲೈನ್ ಮೂಲಕ ಪಡೆಯಲು ಮತ್ತು ಸಂಸ್ಕರಿಸಲು ಇದು ಸಹಾಯ ಮಾಡಲಿದೆ. ಮಾತ್ರವಲ್ಲ ಈ ಸಾಫ್ಟ್ವೇರ್ ಅಪ್ಲಿಕೇಶನ್ ಜಿ.ಐ.ಎಸ್. ಸಮಗ್ರೀಕರಣವನ್ನು ಒಳಗೊಂಡಿದ್ದು, ಅದು ವನ್ ಧನ್ ಯೋಜನಾ ಅನುಷ್ಠಾನ ಕಾರ್ಯಚಟುವಟಿಕೆಗಳ ಮೇಲೆ ನಿಗಾ ಇಡಲಿದೆ. ಹಾಗು ಸಂಬಂಧಿತ ವರದಿಗಳನ್ನು ತಯಾರಿಸಲಿದೆ. ದ್ವಿಮುಖ ಸಂಪರ್ಕ ಪ್ರಕ್ರಿಯೆಯನ್ನು ಸಾಧ್ಯಮಾಡುವ ಪ್ರಸ್ತಾವದೊಂದಿಗೆ  ಡಿಜಿಟಲ್ ಸಂಪರ್ಕ ಕಾರ್ಯಕ್ರಮವನ್ನೂ ಇಂದು ಉದ್ಘಾಟಿಸಲಾಗಿದೆ.

ಶ್ರೀಮಂತ ಬುಡಕಟ್ಟು ಸಂಸ್ಕೃತಿಯನ್ನು ಪರಿಚಯಿಸುವುದಲ್ಲದೆ ವಿವಿಧ ಕಲಾ ಪ್ರಕಾರಗಳನ್ನು ಅನುಸರಿಸುತ್ತಿರುವ ಮತ್ತು ಕರಕುಶಲ ಕಲೆಗಳನ್ನು ಕೈಗೊಳ್ಳುತ್ತಿರುವ ಬಗೆಗಿನ ವಿವಿಧ ಬುಡಕಟ್ಟುಗಳ ಯಾನವನ್ನು ತೋರಿಸುವುದಲ್ಲದೆ ಟ್ರೈಫೆಡ್ ಹೇಗೆ ಅವರ ಜೀವನೋಪಾಯಗಳ ಮೇಲೆ ಪರಿಣಾಮ ಬೀರಿದೆ ಎಂಬುದನ್ನೂ ಚಿತ್ರಿಸುವ ಟ್ರೈಬ್ಸ್ ಇಂಡಿಯಾ ಕಾಫಿ ಟೇಬಲ್ ಪುಸ್ತಕವನ್ನೂ ಇಂದು ಅನಾವರಣಗೊಳಿಸಲಾಗಿದೆ. ಟ್ರೈಬ್ಸ್ ಇಂಡಿಯಾವನ್ನು ಉಡುಗೊರೆಗಳಿಗೆ ಅಂತಿಮ ತಾಣವನ್ನಾಗಿಸುವ ಆಂದೋಲನದೊಂದಿಗೆ ಟ್ರೈಫೆಡ್ ವಿಶಿಷ್ಟ ಕರಕುಶಲಕಲೆಗಳ ಬುಟ್ಟಿಯನ್ನು  ತಯಾರಿಸಿದೆ. ಜಿ.ಐ.ಉತ್ಪನ್ನಗಳು ಮತ್ತು ದೇಶದ ವಿವಿಧ ಭಾಗಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಉತ್ಪನ್ನಗಳು ಇದರಲ್ಲಿವೆ. ಈ ಬುಟ್ಟಿಗಳನ್ನು ಇಂದು ಅನಾವರಣಗೊಳಿಸಲಾಗಿದೆ. ಇವು ಭಾರತ ಮತ್ತು ವಿದೇಶಗಳಲ್ಲಿಯೂ ಕೂಡಾ ವಿಶಿಷ್ಟ ಉಡುಗೊರೆಗಳನ್ನು ನೀಡುವುದಕ್ಕೆ ಲಭ್ಯವಾಗಲಿವೆ. ಟ್ರೈಫೆಡ್ ಕರಕುಶಲ ವಸ್ತುಗಳು ಮತ್ತು ಆದಾಯ ತರುವ ತರಬೇತಿ ಕಾರ್ಯಕ್ರಮಗಳ ಮೂಲಕ ಬುಡಕಟ್ಟು ಕರಕುಶಲಕರ್ಮಿಗಳ ಅಭಿವೃದ್ಧಿಗೆ ಕೌಶಲ್ಯಾಭಿವೃದ್ಧಿ ಮತ್ತು ವಿನ್ಯಾಸ ಅಭಿವೃದ್ಧಿ ಕಾರ್ಯಾಗಾರಗಳನ್ನು ನಡೆಸುತ್ತದೆ.

ಜಾಗತಿಕ ಸಾಂಕ್ರಾಮಿಕದ ಅವಧಿಯಲ್ಲಿ ಬುಡಕಟ್ಟು ಕರಕುಶಲಕರ್ಮಿಗಳ ಕೌಶಲ್ಯ ಅಭಿವೃದ್ಧಿಗೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಮತ್ತು 17 ತರಬೇತಿ ಕಾರ್ಯಕ್ರಮಗಳನ್ನು ಅನುಮೋದಿಸಲಾಗಿದ್ದು 340 ಬುಡಕಟ್ಟು ಕಲಾವಿದರಿಗೆ ಪ್ರಯೋಜನವಾಗಿದೆ ಹಾಗು 170 ಹೊಸ ವಿನ್ಯಾಸದ ಉತ್ಪನ್ನಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಋಷಿಕೇಶದಲ್ಲಿ ಬೋಕ್ಸಾ ಬುಡಕಟ್ಟು ಕರಕುಶಲಕರ್ಮಿಗಳಿಗೆ ಮತ್ತು ಜೈಪುರದಲ್ಲಿ ಮೀನಾ ಬುಡಕಟ್ಟು ಕರಕುಶಲಕರ್ಮಿಗಳಿಗೆ ಆಯೋಜಿಸಿದ ವಿನ್ಯಾಸ ಕಾರ್ಯಾಗಾರ ತರಬೇತಿ ಕಾರ್ಯಕ್ರಮಗಳಲ್ಲಿ   ಪೂರ್ಣಗೊಳಿಸಲಾದ 25 ಹೊಸ ವಿನ್ಯಾಸದ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ.

****



(Release ID: 1727487) Visitor Counter : 249


Read this release in: English , Urdu , Hindi , Punjabi