ಇಂಧನ ಸಚಿವಾಲಯ
ತೌಕ್ತೆ ಚಂಡಮಾರುತದಿಂದಾಗಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಮರುಸ್ಥಾಪನೆಗಾಗಿ ಸಕ್ರಿಯ ಕ್ರಮಗಳನ್ನು ಕೈಗೊಂಡ ವಿದ್ಯುತ್ ಸಚಿವಾಲಯ
Posted On:
21 MAY 2021 11:03AM by PIB Bengaluru
ತೌಕ್ತೆ ಚಂಡಮಾರುತದಿಂದ ಉಂಟಾಗಿರುವ ಕಠಿಣ ಪರಿಸ್ಥಿತಿಯಿಂದ ಹೊರಬರಲು ಸಾಧ್ಯವಾದ ಎಲ್ಲಾ ನೆರವನ್ನು ಒದಗಿಸುವ ನಿಟ್ಟಿನಲ್ಲಿ ಇಂಧನ ಸಚಿವಾಲಯವು (ಕಾರ್ಯದರ್ಶಿ, ಇಂಧನ) ರಾಜ್ಯ ವಿದ್ಯುತ್ ಘಟಕಗಳು, ಪಿಜಿಸಿಐಎಲ್, ಆರ್ಇಸಿ, ಪಿಒಎಸ್ಒಸಿಒ(POSOCO) ಜೊತೆ ನಿಯಮಿತ ಪರಿಶೀಲನಾ ಸಭೆಗಳನ್ನು ನಡೆಸುತ್ತಿದೆ.
ತೌಕ್ತೆ ಚಂಡಮಾರುತದಿಂದಾಗಿ ಹೆಚ್ಚು ಹಾನಿಗೊಳಗಾದ ಗುಜರಾತ್ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಡಿಯುವಿನಲ್ಲಿ ವಿದ್ಯುತ್ ಪುನಸ್ಥಾಪನೆ ಕಾರ್ಯಗಳನ್ನು ತ್ವರಿತಗೊಳಿಸುವ ಉದ್ದೇಶದಿಂದ ಇಂಧನ ಕಾರ್ಯದರ್ಶಿ ನಿನ್ನೆ ವಿಶೇಷ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಗುಜರಾತ್ ಇಂಧನ ಸಚಿವಾಲಯದ ಎಸಿಎಸ್, ʻಪಿಜಿಸಿಐಎಲ್ʼ ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ʻಐಇಇಎಂಎʼ ಅಧ್ಯಕ್ಷರು ಸೇರಿದಂತೆ ಇತರರು ಭಾಗವಹಿಸಿದ್ದರು.
150 ಕ್ಕೂ ಹೆಚ್ಚು ಅನುಭವಿ ಸಿಬ್ಬಂದಿಯನ್ನು ಹೊಂದಿರುವ ತಂಡವು ʻಇಆರ್ಎಸ್- ತುರ್ತು ಪುನಸ್ಥಾಪನೆ ವ್ಯವಸ್ಥೆʼಯೊಂದಿಗೆ (ಇದು ಹತ್ತು 220 ಕೆವಿ ಟವರ್ಗಳನ್ನು ಬದಲಾಯಿಸಬಲ್ಲದು) ಗುಜರಾತ್ಗೆ ತಲುಪಿದೆ. ಅತಿ ಹೆಚ್ಚು ಹಾನಿಗೊಳಗಾದ ಡಿಯುಗೆ ವಿದ್ಯುತ್ ಪೂರೈಕೆ ಮಾಡುವ 220 ಕೆವಿ ಮಾರ್ಗವನ್ನು ಪುನಸ್ಥಾಪಿಸುವ ಕೆಲಸ ಪ್ರಾರಂಭವಾಗಿದೆ ಎಂದು ಪಿಜಿಸಿಐಎಲ್ ಮಾಹಿತಿ ನೀಡಿದೆ.
66 ಕೆವಿ ವ್ಯವಸ್ಥೆಯ ಮರುಸ್ಥಾಪನೆ ಕಾರ್ಯಗಳಿಗಾಗಿ ಸಂಪರ್ಕಿಸಬಹುದಾದ ಗುತ್ತಿಗೆದಾರರ ಪಟ್ಟಿಯನ್ನು ಸಹ ಪಿಜಿಸಿಐಎಲ್ ಒದಗಿಸಿದೆ. ಮರುಸ್ಥಾಪನೆ ಕಾರ್ಯಗಳನ್ನು ತ್ವರಿತಗೊಳಿಸುವ ಸಲುವಾಗಿ ವಿದ್ಯುತ್ ಉಪಕರಣಗಳ ತಯಾರಕರು ಮತ್ತು ಪ್ರಸರಣ ಮಾರ್ಗಗಳನ್ನು ಸ್ಥಾಪಿಸುವಲ್ಲಿ ತೊಡಗಿರುವ ಪ್ರಮುಖ ಗುತ್ತಿಗೆದಾರರೊಂದಿಗೆ ಸಮನ್ವಯ ಸಾಧಿಸುವುದಾಗಿ ಐಇಇಎಂಎ ಭರವಸೆ ನೀಡಿದೆ. ವಿವಿಧ ರಾಜ್ಯ ಸರಕಾರಗಳು ಪುನಸ್ಥಾಪನೆ ಕಾರ್ಯಗಳಿಗೆ ಅಗತ್ಯ ಸಾಮಗ್ರಿ ಮತ್ತು ಮಾನವ ಸಂಪನ್ಮೂಲವನ್ನು ಒದಗಿಸುವ ಭರವಸೆ ನೀಡಿವೆ.
(Release ID: 1720624)