ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)

ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಪ್ರಸರಣ ಮತ್ತು ವಿತರಣೆಯನ್ನು ಬಲಪಡಿಸಲು ಪರಿಷ್ಕೃತ ವೆಚ್ಚ ಅಂದಾಜುಗಳಿಗೆ ಸಂಪುಟದ ಅನುಮೋದನೆ

Posted On: 16 MAR 2021 3:59PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿಯು, ಅಂತರ್-ರಾಜ್ಯ ಪ್ರಸರಣ ಮತ್ತು ವಿತರಣಾ ವ್ಯವಸ್ಥೆಗಳನ್ನು ಬಲಪಡಿಸುವ ಮೂಲಕ ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಹೆಜ್ಜೆ ಇರಿಸಿದೆ. ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಅಂದಾಜು 9129.32 ಕೋಟಿ ರೂ. ವೆಚ್ಚದಲ್ಲಿ ಪ್ರಸರಣ ಮತ್ತು ವಿತರಣೆಯನ್ನು ಬಲಪಡಿಸುವ ಸಮಗ್ರ ಯೋಜನೆಯ ಪರಿಷ್ಕೃತ ವೆಚ್ಚ ಅಂದಾಜಿಗೆ (ಆರ್‌ಸಿಇ) ಸಂಪುಟ ಸಭೆ ಅನುಮೋದನೆ ನೀಡಿದೆ.
ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದ ಸಹಯೋಗದೊಂದಿಗೆ ವಿದ್ಯುತ್ ಸಚಿವಾಲಯದ ಅಧೀನದಲ್ಲಿರುವ ಸಾರ್ವಜನಿಕ ವಲಯದ (ಪಿಎಸ್‌ಯು) ʻಪವರ್‌ಗ್ರೀಡ್ʼ ಮೂಲಕ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಈಗಾಗಲೇ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳನ್ನು 2021ರ ಡಿಸೆಂಬರ್ ವೇಳೆಗೆ ಹಂತ ಹಂತವಾಗಿ ಕಾರ್ಯಾರಂಭ ಮಾಡಲು ಹಾಗೂ ಇನ್ನೂ ಕೈಗೆತ್ತಿಕೊಳ್ಳದ ಕಾಮಗಾರಿಗಳನ್ನು ಪರಿಷ್ಕೃತ ಅಂದಾಜು ವೆಚ್ಚದ ಅನುಮೋದನೆಯಿಂದ 36 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.  ಪ್ರಸರಣ ಮತ್ತು ವಿತರಣಾ ವ್ಯವಸ್ಥೆಯು ಅಸ್ಥಿತ್ವಕ್ಕೆ ಬಂದು ಕಾರ್ಯಾಚರಣೆ ಆರಂಭಿಸಿದ ಬಳಿಕ ಆಯಾ ರಾಜ್ಯಗಳ ಒಡೆತನ ಮತ್ತು ನಿರ್ವಹಣೆಗೆ ಅದು ಒಳಪಡಲಿದೆ.

ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನ ಸಮಗ್ರ ಆರ್ಥಿಕ ಅಭಿವೃದ್ಧಿಗೆ ಸರಕಾರದ ಬದ್ಧತೆ ಪ್ರದರ್ಶಿಸುವುದು ಮತ್ತು ದೂರದ ಸ್ಥಳಗಳಿಗೆ ಗ್ರಿಡ್ ಸಂಪರ್ಕವನ್ನು ಒದಗಿಸುವ ಮೂಲಕ ರಾಜ್ಯಗಳಲ್ಲಿ ಅಂತರ್-ರಾಜ್ಯ ಪ್ರಸರಣ ಮತ್ತು ವಿತರಣಾ ಮೂಲಸೌಕರ್ಯಗಳನ್ನು ಬಲಪಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಈ ಯೋಜನೆಯ ಅನುಷ್ಠಾನದಿಂದ ವಿಶ್ವಾಸಾರ್ಹ ವಿದ್ಯುತ್ ಗ್ರಿಡ್ ರಚನೆಗೆ ಕಾರಣವಾಗಲಿದೆ ಮತ್ತು ಮುಂಬರುವ ಲೋಡ್ ಕೇಂದ್ರಗಳಿಗೆ ರಾಜ್ಯಗಳ ಸಂಪರ್ಕ ಸುಧಾರಣೆಯಾಗಲಿದೆ. ಆ ಮೂಲಕ ಗ್ರಿಡ್ ಸಂಪರ್ಕಿತ ವಿದ್ಯುತ್‌ನ ಪ್ರಯೋಜನಗಳನ್ನು ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ದೂರದ ಊರುಗಳು ಮತ್ತು ಗಡಿ ಪ್ರದೇಶಗಳು ಸೇರಿದಂತೆ ಎಲ್ಲಾ ಗ್ರಾಮಗಳು ಮತ್ತು ಪಟ್ಟಣಗಳಿಗೆ ಹಾಗೂ ಎಲ್ಲಾ ವರ್ಗದ ಫಲಾನುಭವಿ ಗ್ರಾಹಕರಿಗೆ ವಿಸ್ತರಿಸಲು ನೆರವಾಗಲಿದೆ.

ಈ ಯೋಜನೆಯು ಈ ರಾಜ್ಯಗಳ ತಲಾ ವಿದ್ಯುತ್ ಬಳಕೆಯನ್ನು ಹೆಚ್ಚಿಸುತ್ತದೆ ಮತ್ತು ಒಟ್ಟು ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ.

ಯೋಜನಾ ಅನುಷ್ಠಾನ ಏಜೆನ್ಸಿಗಳು ತಮ್ಮ ನಿರ್ಮಾಣ ಕಾರ್ಯಗಳಲ್ಲಿ ಗಣನೀಯ ಸಂಖ್ಯೆಯ ಸ್ಥಳೀಯ ಮಾನವ ಸಂಪನ್ಮೂಲವನ್ನು ನೇಮಿಸಿಕೊಳ್ಳುತ್ತಿವೆ, ಆ ಮೂಲಕ ನುರಿತ ಮತ್ತು ಕೌಶಲ್ಯರಹಿತ ಸ್ಥಳೀಯ ಮಾನವ ಸಂಪನ್ಮೂಲಕ್ಕೆ ಸಾಕಷ್ಟು ಉದ್ಯೋಗವನ್ನು ಸೃಷ್ಟಿಸುತ್ತಿವೆ.

ಯೋಜನೆ ಪೂರ್ಣಗೊಂಡ ನಂತರ ನೂತನ ಪ್ರಸರಣ ಮತ್ತು ವಿತರಣಾ ವ್ಯವಸ್ಥೆ ರೂಪುಗೊಳ್ಳುವ ಕಾರಣ, ಪ್ರಮಾಣಿತ ಮಾನದಂಡಗಳ ಪ್ರಕಾರ ಅದರ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಹೆಚ್ಚುವರಿ ಸ್ಥಳೀಯ ಮಾನವ ಸಂಪನ್ಮೂಲದ ಅಗತ್ಯವಿರುತ್ತದೆ. ಹಾಗಾಗಿ ಇದರಿಂದ ರಾಜ್ಯಗಳಿಗೆ ಸಾಕಷ್ಟು ಹೆಚ್ಚುವರಿ ಸ್ಥಳೀಯ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.
ಹಿನ್ನೆಲೆ:
ಆರಂಭದಲ್ಲಿ, 2014ರ ಡಿಸೆಂಬರ್‌ನಲ್ಲಿ ವಿದ್ಯುತ್ ಸಚಿವಾಲಯದ ಕೇಂದ್ರ ವಲಯ ಯೋಜನೆಯಾಗಿ ಈ ಯೋಜನೆಯನ್ನು ಅನುಮೋದಿಸಲಾಯಿತು. ಈ ಯೋಜನೆಯ ಸಂಪೂರ್ಣ ವೆಚ್ಚವನ್ನು ವಿದ್ಯುತ್ ಸಚಿವಾಲಯದ ಕೇಂದ್ರ ವಲಯ ಯೋಜನೆಯ ಮೂಲಕ ಭಾರತ ಸರಕಾರವು ಭರಿಸಲಿದೆ.

***



(Release ID: 1705214) Visitor Counter : 177