ಪ್ರಧಾನ ಮಂತ್ರಿಯವರ ಕಛೇರಿ

ಜಾಗತಿಕ ಆಯುರ್ವೇದ ಉತ್ಸವದಲ್ಲಿ ಪ್ರಧಾನ ಮಂತ್ರಿಯವರ ಭಾಷಣ

Posted On: 12 MAR 2021 10:11PM by PIB Bengaluru

ಎಲ್ಲರಿಗೂ ನಮಸ್ಕಾರ

ಸಚಿವಾಲಯದ ನನ್ನ ಸಹೋದ್ಯೋಗಿಗಳೇ, ಕಿರೆನ್ ರಿಜಿಜು ಜಿ, ಮುರಳೀಧರನ್ ಜಿ, ಜಾಗತಿಕ ಆಯುರ್ವೇದ ಉತ್ಸವದ ಪ್ರಧಾನ ಕಾರ್ಯದರ್ಶಿ ಡಾ.ಗಂಗಾಧರನ್ ಜಿ, ಎಫ್‌ಐಸಿಸಿಐ ಅಧ್ಯಕ್ಷ ಉದಯ್ ಶಂಕರ್ ಜಿ, ಡಾ. ಸಂಗೀತ ರೆಡ್ಡಿ ಜಿ.

ಆತ್ಮೀಯ ಸ್ನೇಹಿತರೆ,

ನಾಲ್ಕನೇ ಜಾಗತಿಕ ಆಯುರ್ವೇದ ಉತ್ಸವದಲ್ಲಿ ಮಾತನಾಡುತ್ತಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ.  ಅನೇಕ ತಜ್ಞರು ತಮ್ಮ ಅಭಿಪ್ರಾಯಗಳನ್ನು ಮತ್ತು ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ ಎನ್ನುವುದನ್ನು ತಿಳಿದು ಸಂತೋಷವಾಗುತ್ತಿದೆ. ಪ್ರತಿನಿಧಿಸುವ ದೇಶಗಳ ಸಂಖ್ಯೆಯು 25ಕ್ಕಿಂತ ಹೆಚ್ಚಿದೆ.  ಇವು ಅತ್ಯುತ್ತಮ ಚಿಹ್ನೆಗಳು. ಇದು ಆಯುರ್ವೇದ ಮತ್ತು ಸಾಂಪ್ರದಾಯಿಕ  ಔಷಧದ ಬಗೆಗಿನ ಆಸಕ್ತಿಯನ್ನು ತೋರಿಸುತ್ತದೆ.  ಈ ವೇದಿಕೆಯ ಮುಖಾಂತರ  ನಾನು ವಿಶ್ವದಾದ್ಯಂತ ಆಯುರ್ವೇದದಲ್ಲಿ ಕೆಲಸ ಮಾಡುತ್ತಿರುವ ಎಲ್ಲರ ಶ್ರಮವನ್ನು ಪ್ರಶಂಸಿಸಲು ಬಯಸುತ್ತೇನೆ.  ಅವರ ಉತ್ಸಾಹ ಮತ್ತು ನಿರಂತರ ಕಾರ್ಯವು ಇಡೀ ಮಾನವಕುಲಕ್ಕೆ ಪ್ರಯೋಜನವನ್ನು ನೀಡುತ್ತದೆ.

ಸ್ನೇಹಿತರೇ,

ಭಾರತೀಯ ಸಂಸ್ಕೃತಿಯು ಪ್ರಕೃತಿ ಮತ್ತು ಪರಿಸರಕ್ಕೆ ನೀಡುವ ಗೌರವದೊಂದಿಗೆ ಆಯುರ್ವೇದವು ನಿಕಟ ಸಂಬಂಧ ಹೊಂದಿದೆ. ನಮ್ಮ ಪಠ್ಯಗಳು ಆಯುರ್ವೇದವನ್ನು ಅದ್ಭುತವಾಗಿ ವಿವರಿಸಿದೆ: : हिता-हितम् सुखम् दुखम्, आयुः तस्य हिता-हितम्। मानम् च तच्च यत्र उक्तम्, आयुर्वेद स उच्यते॥ ಆಯುರ್ವೇದವು ಅನೇಕ ಅಂಶಗಳನ್ನು ನೋಡಿಕೊಳ್ಳುತ್ತದೆ. ಇದು ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಖಾತ್ರಿಗೊಳಿಸುತ್ತದೆ. ಆಯುರ್ವೇದವನ್ನು ಸಮಗ್ರ ಮಾನವ ವಿಜ್ಞಾನ ಎಂದು ಸರಿಯಾಗಿ ವರ್ಣಿಸಬಹುದು.  ಸಸ್ಯಗಳಿಂದ ನಿಮ್ಮ ಊಟದ ತಟ್ಟೆಯವರೆಗೆ, ದೈಹಿಕ ಶಕ್ತಿಯ ವಿಷಯಗಳಿಂದ ಹಿಡಿದು ಮಾನಸಿಕ ಸ್ವಾಸ್ಥ್ಯದವರೆಗೆ, ಆಯುರ್ವೇದ ಮತ್ತು ಸಾಂಪ್ರದಾಯಿಕ ಔಷಧದ ಪ್ರಭಾವವು ಅಪಾರವಾಗಿದೆ.

ಸ್ನೇಹಿತರೇ,

ಇದನ್ನು ಹೇಳಲಾಗಿದೆ: 'स्वस्थस्य स्वास्थ्य, आतुरस्य विकार प्रशमनंಇದರರ್ಥವೇನೆಂದರೆ  ದೇಹದಲ್ಲಿ ಈಗಾಗಲೇ ಇರುವ ರೋಗಗಳನ್ನು ಗುಣಪಡಿಸುವುದರ ಜೊತೆಗೆ, ಆಯುರ್ವೇದವು ದೇಹದ ಒಟ್ಟಾರೆ ಆರೋಗ್ಯವನ್ನು ಸಹ ರಕ್ಷಿಸುತ್ತದೆ. ರೋಗಕ್ಕಿಂತಲೂ ಹೆಚ್ಚು, ಆಯುರ್ವೇದವು ನಿರೋಗದ ಬಗ್ಗೆ ಮಾತನಾಡುತ್ತದೆ, ಇದರಲ್ಲಿ ಆಶ್ಚರ್ಯವೇನಿಲ್ಲ.  ಹಿಂದಿನ ದಿನಗಳಲ್ಲಿ, ಯಾರಾದರೂ ವೈದ್ಯರ ಬಳಿಗೆ ಹೋದರೆ, ಅವನಾಗಲೀ ಅಥವಾ ಅವಳಾಗಲೀ ಔಷಧಿ ಮಾತ್ರವಲ್ಲದೆ ಕೆಲವು ಮಂತ್ರಗಳನ್ನೂ ಸಹ ಪಡೆಯುತ್ತಿದ್ದರು: भोजन करें आराम से, सब चिंता को मार। चबा-चबा कर खाइए, वैद्य न आवे द्वार॥  ಇದರರ್ಥವೇನೆಂದರೆ  ಯಾವುದೇ ಉದ್ವೇಗವಿಲ್ಲದೆ ನಿಮ್ಮ ಆಹಾರವನ್ನು ಆನಂದಿಸಿ. ಆಹಾರದ ಪ್ರತಿ ಅಗಿಯುವಿಕೆಯನ್ನು ಆನಂದಿಸಿ, ಅದನ್ನು ತಾಳ್ಮೆಯಿಂದ ಅಗಿಯಿರಿ…  ಈ ರೀತಿಯಾಗಿ ನೀವು ಎಂದಿಗೂ ವೈದ್ಯರಾಜರ ಮನೆಗೆ ಹೋಗಬೇಕಾಗಿರಲಿಲ್ಲ.

ಸ್ನೇಹಿತರೇ,

ಜೂನ್ 2020 ರಲ್ಲಿ, ನಾನು ಫೈನಾನ್ಷಿಯಲ್ ಟೈಮ್ಸ್ನ ಲೇಖನವೊಂದನ್ನು ನೋಡಿದೆ. ಅದರ ಶೀರ್ಷಿಕೆ ಹೀಗಿತ್ತು - ಕೊರೊನಾವೈರಸ್ 'ಆರೋಗ್ಯ ಪ್ರಭಾವಲಯ' ಉತ್ಪನ್ನಗಳಿಗೆ ಉತ್ತೇಜನ ನೀಡುತ್ತದೆ. ಕೋವಿಡ್-19 ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿ ಬೇಡಿಕೆ ಸ್ಥಿರವಾಗಿ ಏರುತ್ತಿರುವ ಅರಿಶಿನ, ಶುಂಠಿ ಮತ್ತು ಇತರ ಮಸಾಲೆಗಳನ್ನು ಈ ಲೇಖನ ಉಲ್ಲೇಖಿಸುತ್ತದೆ.  ಪ್ರಸ್ತುತ ಪರಿಸ್ಥಿತಿಯು ಆಯುರ್ವೇದ ಮತ್ತು ಸಾಂಪ್ರದಾಯಿಕ ಔಷಧಿಗಳು ಜಾಗತಿಕವಾಗಿ ಇನ್ನಷ್ಟು ಜನಪ್ರಿಯವಾಗಲು ಸರಿಯಾದ ಸಮಯವನ್ನು ಒದಗಿಸುತ್ತದೆ. ಅದರ ಬಗ್ಗೆ ಆಸಕ್ತಿ ಹೆಚ್ಚುತ್ತಿದೆ. ಆಧುನಿಕ ಮತ್ತು ಸಾಂಪ್ರದಾಯಿಕ ಔಷಧಿಗಳು ಮತ್ತಷ್ಟು ಸ್ವಾಸ್ಥ್ಯಕ್ಕೆ ಹೇಗೆ ಮುಖ್ಯವೆಂದು ಜಗತ್ತು ನೋಡುತ್ತಿದೆ.  ಆಯುರ್ವೇದದ ಪ್ರಯೋಜನಗಳನ್ನು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಅದರ ಪಾತ್ರವನ್ನು ಜನರು ಅರಿತುಕೊಳ್ಳುತ್ತಿದ್ದಾರೆ. ಜನರು ಕಾಧಾ, ತುಳಸಿ, ಕರಿಮೆಣಸನ್ನು ತಮ್ಮ ಜೀವನದ ಅವಿಭಾಜ್ಯ ಅಂಗಗಳನ್ನಾಗಿ ಮಾಡಿಕೊಳ್ಳುತ್ತಿದ್ದಾರೆ.

ಸ್ನೇಹಿತರೇ,

ಪ್ರವಾಸೋದ್ಯಮದ ಅನೇಕ ಅಭಿರುಚಿಗಳು ಇಂದು ಇವೆ.  ಆದರೆ, ಭಾರತವು ನಿಮಗೆ ವಿಶೇಷವಾಗಿ ನೀಡುತ್ತಿರುವುದು ಸ್ವಾಸ್ಥ್ಯ ಪ್ರವಾಸೋದ್ಯಮ, ನಾನು ಮತ್ತೆ ಹೇಳುತ್ತಿದ್ದೇನೆ ಸ್ವಾಸ್ಥ್ಯ ಪ್ರವಾಸೋದ್ಯ. ಸ್ವಾಸ್ಥ್ಯ ಪ್ರವಾಸೋದ್ಯಮದ ತಿರುಳು - ಅನಾರೋಗ್ಯಕ್ಕೆ ಚಿಕಿತ್ಸೆ, ಮತ್ತಷ್ಟು ಸ್ವಾಸ್ಥ್ಯ. ಮತ್ತು, ನಾನು ಸ್ವಾಸ್ಥ್ಯ ಪ್ರವಾಸೋದ್ಯಮದ ಬಗ್ಗೆ ಮಾತನಾಡುವಾಗ, ಅದರ ಪ್ರಬಲ ಸ್ತಂಭವೆಂದರೆ ಆಯುರ್ವೇದ ಮತ್ತು ಸಾಂಪ್ರದಾಯಿಕ ಔಷಧ. ಸುಂದರವಾದ ಕೇರಳ ರಾಜ್ಯದಲ್ಲಿ ಹಚ್ಚ ಹಸಿರಿನಿಂದ ಕೂಡಿದ ಪರಿಸರದಲ್ಲಿ ನೀವೇ ಡಿಟಾಕ್ಸ್ ಆಗುವ ಸೇವೆಯ್ನು ಪಡೆಯುವುದನ್ನು ಕಲ್ಪಿಸಿಕೊಳ್ಳಿ.  ಉತ್ತರಾಖಂಡದ ಪರ್ವತ ಮಾರುತಗಳಿಂದ, ನದಿಯ ಮೂಲಕ, ಯೋಗವನ್ನು ನೀವೇ ಮಾಡುವುದನ್ನು ಕಲ್ಪಿಸಿಕೊಳ್ಳಿ.  ಈಶಾನ್ಯದ ಹಚ್ಚ ಹಸಿರಿನ ಕಾಡುಗಳ ಮಧ್ಯದಲ್ಲಿರುವುದನ್ನು ನೀವೇ ಊಹಿಸಿಕೊಳ್ಳಿ.  ನಿಮ್ಮ ಜೀವನದಲ್ಲಿರುವ ಗಡುವನ್ನು ಮತ್ತು ಸಮಯಸೂಚಿಗಳು ನಿಮಗೆ ಒತ್ತಡ ನೀಡುತ್ತಿದ್ದರೆ, ಭಾರತದ ಸಮಯರಹಿತ ಸಂಸ್ಕೃತಿಯನ್ನು ಸ್ಪರ್ಶಿಸುವ ಸಮಯ ಇದು.  ನಿಮ್ಮ ದೇಹಕ್ಕೆ ಚಿಕಿತ್ಸೆ ಅಥವಾ ನಿಮ್ಮ ಮನಸ್ಸಿಗೆ ಪ್ರಶಾಂತತೆ  ನೀಡಲು ನೀವು ಬಯಸುತ್ತಿರುವಿರಾದರೆ, ಭಾರತಕ್ಕೆ ಬನ್ನಿ.

ಸ್ನೇಹಿತರೇ,

ಆಯುರ್ವೇದದ ಜನಪ್ರಿಯತೆಯಿಂದಾಗಿ ಒಂದು ಮಹತ್ತರವಾದ ಅವಕಾಶವು ನಮ್ಮನ್ನು ಕಾಯುತ್ತಿದೆ.  ನಾವು ಆ ಅವಕಾಶವನ್ನು ಕಳೆದುಕೊಳ್ಳಬಾರದು. ಸಾಂಪ್ರದಾಯಿಕವನ್ನು ಆಧುನಿಕತೆಯೊಂದಿಗೆ ಸಂಯೋಜಿಸುವ ಮೂಲಕ ಅನೇಕ ಲಾಭಗಳಿವೆ. ಯುವಕರು ವ್ಯಾಪಕವಾದ ಆಯುರ್ವೇದ ಉತ್ಪನ್ನಗಳನ್ನು ಬಳಸುತ್ತಿದ್ದಾರೆ. ಆಯುರ್ವೇದವನ್ನು ಸಾಕ್ಷ್ಯಾಧಾರಿತ ವೈದ್ಯಕೀಯ ವಿಜ್ಞಾನಗಳೊಂದಿಗೆ ಸಂಯೋಜಿಸುವ ಪ್ರಜ್ಞೆ ಬೆಳೆಯುತ್ತಿದೆ. ಅಂತೆಯೇ, ಜನಪ್ರಿಯವಾಗುತ್ತಿರುವ ಇತರ ವಿಷಯಗಳಾವುವೆಂದರೆ: ಆಯುರ್ವೇದ ಪೂರಕಗಳು. ವೈಯಕ್ತಿಕ ಆರೈಕೆ ಉತ್ಪನ್ನಗಳು ಆಯುರ್ವೇದವನ್ನು ಕೇಂದ್ರೀಕರಿಸಿದೆ. ಉತ್ಪನ್ನಗಳ ಪ್ಯಾಕೇಜಿಂಗನ್ನು ಹೆಚ್ಚು ಚೆಂದವಾಗಿಸಲಾಗಿದೆ. ಆಯುರ್ವೇದ ಮತ್ತು ಸಾಂಪ್ರದಾಯಿಕ ಔಷಧದ ಬಗೆಗಿನ ಸಂಶೋಧನೆಗಳನ್ನು  ತೀವ್ರವಾಗಿಸಲು ನಾನು ನಮ್ಮ ಶಿಕ್ಷಣ ತಜ್ಞರನ್ನು ಕೋರುತ್ತೇನೆ. ಆಯುರ್ವೇದ ಉತ್ಪನ್ನಗಳಿಗೆ ವಿಶೇಷ ಗಮನ ಕೊಡಲು ನಮ್ಮ ಸ್ಟಾರ್ಟ್ ಅಪ್ ಸಮುದಾಯವನ್ನು ನಾನು ಒತ್ತಾಯಿಸುತ್ತೇನೆ. ನಾನು ಯುವಕರನ್ನು ವಿಶೇಷವಾಗಿ ಪ್ರಶಂಸಿಸಲು ಬಯಸುವ ಒಂದು ವಿಷಯವೆಂದರೆ, ನಮ್ಮ ಸಾಂಪ್ರದಾಯಿಕ ಸ್ವರೂಪದ ಗುಣಪಡಿಸುವಿಕೆಯನ್ನು ಜಾಗತಿಕವಾಗಿ ಅರ್ಥವಾಗುವ ಭಾಷೆಯಲ್ಲಿ ಪ್ರಸ್ತುತಪಡಿಸಲು ಅವರು ಮುಂದಾಗಿದ್ದಾರೆ. ನಮ್ಮ ನೆಲದ ಆಚಾರಗಳು ಮತ್ತು ನಮ್ಮ ಯುವಕರ ಉದ್ಯಮ ಮನೋಭಾವವು ಅದ್ಭುತಗಳನ್ನು ಮಾಡಬಲ್ಲದು ಎಂದು ನಾನು ಬಲವಾಗಿ ಭಾವಿಸುವುದರಲ್ಲಿ ಆಶ್ಚರ್ಯವಿಲ್ಲ.

ಸ್ನೇಹಿತರೇ,

ಸರ್ಕಾರದ ಪರವಾಗಿ ನಾನು ಆಯುರ್ವೇದ ಜಗತ್ತಿಗೆ ಸಂಪೂರ್ಣ ಬೆಂಬಲ ನೀಡುತ್ತೇನೆ. ಭಾರತವು ರಾಷ್ಟ್ರೀಯ ಆಯುಷ್ ಮಿಷನ್ ಅನ್ನು ಸ್ಥಾಪಿಸಿದೆ. ಆಯುಷ್ ವೈದ್ಯಕೀಯ ವ್ಯವಸ್ಥೆಯನ್ನು ನ್ಯಾಯಯುತ ವೆಚ್ಚದ ಆಯುಷ್ ಸೇವೆಗಳ ಮೂಲಕ ಉತ್ತೇಜಿಸಲು ರಾಷ್ಟ್ರೀಯ ಆಯುಷ್ ಮಿಷನ್ ಪ್ರಾರಂಭಿಸಲಾಗಿದೆ. ಶೈಕ್ಷಣಿಕ ವ್ಯವಸ್ಥೆಗಳನ್ನು ಬಲಪಡಿಸಲು ಸಹ ಇದು ಕಾರ್ಯನಿರ್ವಹಿಸುತ್ತಿದೆ. ಇದು ಆಯುರ್ವೇದ, ಸಿದ್ಧ, ಯುನಾನಿ ಮತ್ತು ಹೋಮಿಯೋಪತಿ ಔಷಧಿಗಳ ಗುಣಮಟ್ಟದ ನಿಯಂತ್ರಣವನ್ನು ಜಾರಿಗೊಳಿಸಲು ಮತ್ತು ಕಚ್ಚಾ ವಸ್ತುಗಳ ಸುಸ್ಥಿರ ಲಭ್ಯತೆಯನ್ನು ಖಾತರಿಪಡಿಸುತ್ತದೆ. ಸರ್ಕಾರ ವಿವಿಧ ಗುಣಮಟ್ಟದ ನಿಯಂತ್ರಣ ಕ್ರಮಗಳನ್ನೂ ಸಹ ಕೈಗೊಳ್ಳುತ್ತಿದೆ ಆಯುರ್ವೇದ ಮತ್ತು ಇತರ ಭಾರತೀಯ ಔಷಧಿ ವ್ಯವಸ್ಥೆಗಳಿಗೆ ಸಂಬಂಧಿಸಿದ ನಮ್ಮ ನೀತಿಯನ್ನು ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯ ಸಾಂಪ್ರದಾಯಿಕ ಔಷಧಿ ಕಾರ್ಯತಂತ್ರ 2014-2023ರೊಂದಿಗೆ ಜೋಡಿಸಲಾಗಿದೆ. ಭಾರತದಲ್ಲಿ ಸಾಂಪ್ರದಾಯಿಕ ಔಷಧಕ್ಕಾಗಿ ಗ್ಲೋಬಲ್ ಸೆಂಟರ್ ಸ್ಥಾಪಿಸುವುದನ್ನೂ ಸಹ ಡಬ್ಲ್ಯುಎಚ್‌ಒ ಪ್ರಕಟಿಸಿದೆ. ಇದನ್ನು ನಾವು ಸ್ವಾಗತಿಸುತ್ತೇವೆ. ಆಯುರ್ವೇದ ಮತ್ತು ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಅಧ್ಯಯನ ಮಾಡಲು ಈಗಾಗಲೇ ವಿವಿಧ ದೇಶಗಳ ವಿದ್ಯಾರ್ಥಿಗಳು ಭಾರತಕ್ಕೆ ಬರುತ್ತಿದ್ದಾರೆ ಎನ್ನುವುದನ್ನು ತಿಳಿದರೆ ನಿಮಗೆ ಸಂತೋಷವಾಗುತ್ತದೆ.  ವರ್ಲ್ಡ್ ವೈಡ್ ವೆಲ್ನೆಸ್ ಬಗ್ಗೆ ಯೋಚಿಸಲು ಇದು ಸೂಕ್ತ ಸಮಯ. ಬಹುಶಃ ಈ ವಿಷಯದ ಬಗ್ಗೆ ಜಾಗತಿಕ ಶೃಂಗಸಭೆಯನ್ನು ಆಯೋಜಿಸಬಹುದು. ಮುಂದಿನ ದಿನಗಳಲ್ಲಿ ನಾವು ಆಯುರ್ವೇದ ಮತ್ತು ಆಹಾರದ ಬಗ್ಗೆಯೂ ಯೋಚಿಸಬೇಕು. ಆಯುರ್ವೇದಕ್ಕೆ ಸಂಬಂಧಿಸಿದ ಆಹಾರ ವಸ್ತುಗಳು ಮತ್ತು ಉತ್ತಮ ಆರೋಗ್ಯವನ್ನು ನೀಡುವ ಆಹಾರ ಪದಾರ್ಥಗಳು. ಕೆಲವು ದಿನಗಳ ಹಿಂದೆ ವಿಶ್ವಸಂಸ್ಥೆಯು 2023 ಅನ್ನು ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸಿತು ಎಂಬುದು ನಿಮ್ಮಲ್ಲಿ ಅನೇಕರಿಗೆ ತಿಳಿದಿರುತ್ತದೆ.  ಸಿರಿಧಾನ್ಯಗಳ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸೋಣ.

ಸ್ನೇಹಿತರೇ,

ಮಹಾತ್ಮ ಗಾಂಧಿಯವರು ಹೇಳಿದ ಮಾತಿನೊಂದಿಗೆ  ನಾನು ನನ್ನ ಮಾತನ್ನು ಮುಕ್ತಾಯಗೊಳಿಸುತ್ತೇನೆ.  “ಆಯುರ್ವೇದವನ್ನು ನಾನು ಹೆಚ್ಚು ಗೌರವಿಸುತ್ತೇನೆ. ಇದು ಭಾರತದ ಪ್ರಾಚೀನ ವಿಜ್ಞಾನಗಳಲ್ಲಿ ಒಂದಾಗಿದೆ, ಇದು ಅದರ ಸಾವಿರಾರು ಹಳ್ಳಿಗಳಲ್ಲಿನ ಲಕ್ಷಾಂತರ ಜನರ ಆರೋಗ್ಯವನ್ನು ಖಾತ್ರಿಗೊಳಿಸುತ್ತದೆ. ಪ್ರತಿಯೊಬ್ಬ ನಾಗರಿಕನು ಆಯುರ್ವೇದ ತತ್ವಗಳಿಗೆ ಅನುಸಾರವಾಗಿ ಜೀವನ ನಡೆಸಬೇಕೆಂದು ನಾನು ಸಲಹೆ ನೀಡುತ್ತೇನೆ.  ಔಷಧಾಲಯ ಮತ್ತು ವೈದ್ಯರಾಜ್ ಎಲ್ಲರೂ ಆಯುರ್ವೇದಕ್ಕೆ ಸಾಧ್ಯವಾದಷ್ಟು ಉತ್ತಮ ಸೇವೆಯನ್ನು ನೀಡಲು ಸಾಧ್ಯವಾಗಲು ನನ್ನ ಆಶೀರ್ವಾದವನ್ನು ಹೊಂದಿದ್ದಾರೆ”. ಮಹಾತ್ಮ ಗಾಂಧಿಯವರು ಇದನ್ನು ನೂರು ವರ್ಷಗಳ ಹಿಂದೆ ಹೇಳಿದರು. ಆದರೆ ಅವರ ಭಾವನೆಯು ಈಗಲೂ ಅನ್ವಯಿಸುತ್ತದೆ. ಆಯುರ್ವೇದದಲ್ಲಿ ನಮ್ಮ ಸಾಧನೆಗಳನ್ನು ನಾವು ಮುಂದುವರಿಸೋಣ. ನಮ್ಮ ನೆಲಕ್ಕೆ ಜಗತ್ತನ್ನೇ ತರುವ ಆಯುರ್ವೇದವು ಒಂದು ಪ್ರೇರಕ ಶಕ್ತಿಯಾಗಿರಲಿ. ಇದು ನಮ್ಮ ಯುವಕರಿಗೆ ಸಮೃದ್ಧಿಯನ್ನು ಸೃಷ್ಟಿಸಲಿ. ಈ ಸಮ್ಮೇಳನಕ್ಕೆ ಎಲ್ಲಾ ಯಶಸ್ಸನ್ನು ಬಯಸುತ್ತೇನೆ. ಭಾಗವಹಿಸಿದ ಎಲ್ಲರಿಗೂ ನನ್ನ ಶುಭಾಶಯಗಳು.

ಧನ್ಯವಾದಗಳು.

ಬಹಳ ಧನ್ಯವಾದಗಳು.

***



(Release ID: 1704782) Visitor Counter : 341