ಪ್ರಧಾನ ಮಂತ್ರಿಯವರ ಕಛೇರಿ

ಪುದುಚೆರಿಯಲ್ಲಿ ಹಲವು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರ ಭಾಷಣ

Posted On: 25 FEB 2021 12:47PM by PIB Bengaluru

ಪುದುಚೆರಿ ಗೌರವಾನ್ವಿತ ಲೆಫ್ಟಿನೆಂಟ್ ಗವರ್ನರ್,

ಗೌರವಾನ್ವಿತ ಅತಿಥಿಗಳೇ,

ನನ್ನ ಆತ್ಮೀಯ ಮಿತ್ರರೇ,

ಪುದುಚೆರಿಯ ದೈವತ್ವ ನನ್ನನ್ನು ಮತ್ತೆ ಪವಿತ್ರ ಭೂಮಿಗೆ ಕರೆಯಿಸಿಕೊಂಡಿದೆ. ಸರಿಯಾಗಿ ಮೂರು ವರ್ಷಗಳ ಹಿಂದೆ ಇದೇ ದಿನ ನಾನು ಪುದುಚೆರಿಯಲ್ಲಿದ್ದೆ. ನೆಲ ಸಂತರು, ವಿದ್ವಾಂಸರು ಮತ್ತು ಕವಿಗಳ ತವರೂರು. ಇದು ಭಾರತ ಮಾತೆಯ ಕ್ರಾಂತಿಕಾರಿಗಳ ತವರೂರು ಸಹ ಹೌದು. ಮಹಾಕವಿ ಸುಬ್ರಮಣ್ಯ ಭಾರತಿಯವರು ಇಲ್ಲಿ ನೆಲೆಸಿದ್ದರು. ಶ್ರೀ ಅರಬಿಂದೊ ಅವರು ಕಡಲ ತಟದಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ಪುದುಚೆರಿ ಭಾರತದ ಪಶ್ಚಿಮ ಮತ್ತು ಪೂರ್ವ ಕರಾವಳಿಯನ್ನು ಹೊಂದಿದೆ. ನೆಲ ವೈವಿಧ್ಯದ ಸಂಕೇತವಾಗಿದೆ. ಇಲ್ಲಿನ ಜನರು ಐದು ಭಿನ್ನ ಭಾಷೆಗಳಲ್ಲಿ ಮಾತನಾಡುತ್ತಾರೆ ಮತ್ತು ನಾನಾ ಧರ್ಮಗಳಲ್ಲಿ ನಂಬಿಕೆ ಹೊಂದಿದ್ದಾರೆ. ಆದರೆ ಎಲ್ಲರೂ ಒಂದೇ ಎಂಬ ಭಾವನೆಯಲ್ಲಿ ಬಾಳ್ವೆ ನಡೆಸುತ್ತಿದ್ದಾರೆ.

ಮಿತ್ರರೇ,

ಇಂದು ಪುದುಚೆರಿಯ ಜನರ ಜೀವನನ್ನು ಸುಧಾರಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತಿರುವ ಸಂಭ್ರಮದಲ್ಲಿದ್ದೇವೆ. ಕಾಮಗಾರಿಗಳು ನಾನಾ ವಲಯಕ್ಕೆ ಸಂಬಂಧಿಸಿದ್ದಾಗಿವೆ. ಮರು ನಿರ್ಮಾಣಗೊಂಡ ಮರಿಯಾ ಕಟ್ಟಡದ ಉದ್ಘಾಟನೆ ಮಾಡುತ್ತಿರುವುದು ನನಗೆ ಹೆಮ್ಮೆ ತಂದಿದೆ. ಕಟ್ಟಡದ ಪರಂಪರೆ ಉಳಿಸಿಕೊಂಡು   ಹಳೆಯ ಸ್ವರೂಪದಲ್ಲಿಯೇ ಮರು ನಿರ್ಮಾಣ ಮಾಡಲಾಗಿದೆ. ಇದು ಸುಂದರ ಪ್ರಮೊನೇಡ್ ಕಡಲ ತೀರದ ಸೊಬಗನ್ನು ಹಚ್ಚಿಸುತ್ತದೆ ಹಾಗೂ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲಿದೆ.

ಮಿತ್ರರೇ,

ನಮ್ಮ ಅಭಿವೃದ್ಧಿಯ ಅಗತ್ಯಗಳನ್ನು ಪೂರೈಸಲು ಭಾರತಕ್ಕೆ ವಿಶ್ವ ದರ್ಜೆಯ ಮೂಲಸೌಕರ್ಯ ಅಗತ್ಯವಿದೆ. ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿ 45-ಎಗೆ ಶಿಲಾನ್ಯಾಸ ನೆರವೇರಿಸಿದ್ದು ನಿಮ್ಮೆಲ್ಲರಿಗೂ ಸಂತಸ ತಂದಿದೆ. ಕಾರೈಕಲ್ ಜಿಲ್ಲೆಯನ್ನು ಒಳಗೊಂಡಂತೆ 56 ಕಿ.ಮೀ. ಉದ್ದದ ಸತ್ತನಾಥಪುರಂ-ನಾಗಪಟ್ಟಣಂ ಮಾರ್ಗ ಇದಾಗಿದೆ. ಖಂಡಿತವಾಗಿಯೂ ಇದರಿಂದ ಸಂಪರ್ಕ ಸುಧಾರಿಸಲಿದೆ ಮತ್ತು ಆರ್ಥಿಕ ಚಟುವಟಿಕೆಗಳು ವೇಗ ಪಡೆದುಕೊಳ್ಳಲಿವೆ. ಇದೇ ವೇಳೆ ಪವಿತ್ರ ಶನೀಶ್ವರ ದೇವಾಲಯಕ್ಕೆ ಸಂಪರ್ಕವನ್ನು ಸುಧಾರಿಸಲಿದೆ. ಅಲ್ಲದೆ ಇದು ಅಂತಾರಾಜ್ಯ ಸಂಪರ್ಕವನ್ನು ಸುಲಭಗೊಳಿಸಿ ಬೆಸಲಿಕ್ ಆಫ್ ಅವರ್ ಲೇಡಿ ಆಫ್ ಗುಡ್ ಹೆಲ್ತ್ ಮತ್ತು ನಗೋರ್ ದರ್ಗಾಕ್ಕೆ ಸಂಪರ್ಕ ಕಲ್ಪಿಸುತ್ತದೆ.

ಮಿತ್ರರೇ,

ಭಾರತ ಸರ್ಕಾರ ಗ್ರಾಮೀಣ ಮತ್ತು ಕರಾವಳಿ ಸಂಪರ್ಕ ಸುಧಾರಣೆಗೆ ಹಲವು ಪ್ರಯತ್ನಗಳನ್ನು ಕೈಗೊಂಡಿದೆ. ಇದರಿಂದ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಲಾಭವಾಗಲಿದೆ. ಭಾರತದಾದ್ಯಂತ ನಮ್ಮ ರೈತರು ಅನುಶೋಧನೆಗಳಲ್ಲಿ ತೊಡಗಿದ್ದಾರೆ. ಅವರು ಬೆಳೆದ ಬೆಳೆಗೆ ಉತ್ತಮ ಮಾರುಕಟ್ಟೆಗಳನ್ನು ಖಾತ್ರಿಪಡಿಸುವುದು ನಮ್ಮ ಕರ್ತವ್ಯವಾಗಿದೆ. ಉತ್ತಮ ರಸ್ತೆಗಳು ಕೆಲಸವನ್ನು ಖಂಡಿತ ಮಾಡುತ್ತವೆ. ನಾಲ್ಕು ಪಥದ ರಸ್ತೆಯಿಂದಾಗಿ ಪ್ರದೇಶಕ್ಕೆ ಕೈಗಾರಿಕೆಗಳನ್ನು ಆಕರ್ಷಿಸಲು ಸಾಧ್ಯವಾಗಲಿದೆ ಮತ್ತು ಸ್ಥಳೀಯ ಯುವಜನತೆಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

ಮಿತ್ರರೇ,

ಸಮೃದ್ಧಿ, ಉತ್ತಮ ಆರೋಗ್ಯದ ಜೊತೆ ನಿಕಟ ಸಂಬಂಧ ಹೊಂದಿದೆ. ಕಳೆದ ಏಳು ವರ್ಷಗಳಲ್ಲಿ ದೈಹಿಕ ಕ್ಷಮತೆ ಮತ್ತು ಸ್ವಾಸ್ಥ್ಯ ಸುಧಾರಿಸುವ ನಿಟ್ಟಿನಲ್ಲಿ ಭಾರತ ಹಲವು ಪ್ರಯತ್ನಗಳನ್ನು ಕೈಗೊಂಡಿದೆ. ಇಲ್ಲಿನ ಕ್ರೀಡಾ ಸಂಕೀರ್ಣದಲ್ಲಿ 400 ಮೀಟರ್ ಉದ್ದದ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕಿಗೆ ಶಂಕುಸ್ಥಾಪನೆ ನೆರವೇರಿಸಿದ್ದು ನನಗೆ ಆನಂದ ಉಂಟುಮಾಡಿದೆ. ಇದು ನಮ್ಮ ಖೇಲೋ ಇಂಡಿಯಾ ಯೋಜನೆಯ ಭಾಗವಾಗಿದೆ. ಇದು ಭಾರತದ ಯುವಜನರಲ್ಲಿರುವ ಕ್ರೀಡಾ ಪ್ರತಿಭೆಯನ್ನು ಪೋಷಿಸಲಿದೆ. ಕ್ರೀಡೆ ನಮಗೆ ಟೀಮ್ ವರ್ಕ್ ಅನ್ನು, ನೈತಿಕತೆಯನ್ನು ಮತ್ತು ಎಲ್ಲಕ್ಕಿಂತ ಮಿಗಿಲಾಗಿ ನಮಗೆ ಕ್ರೀಡಾ ಸ್ಫೂರ್ತಿಯನ್ನು ಕಲಿಸುತ್ತದೆ. ಪುದುಚೆರಿಯಲ್ಲಿ ಉತ್ತಮ ಕ್ರೀಡಾ ಸೌಕರ್ಯಗಳು ಲಭ್ಯವಾಗುವುದರಿಂದ ರಾಜ್ಯದ ಯುವಜನತೆ ರಾಷ್ಟ್ರೀಯ ಮತ್ತು ಜಾಗತಿಕ ಕ್ರೀಡಾ ಕೂಟಗಳಲ್ಲಿ ತಮ್ಮ ಶ್ರೇಷ್ಠತೆಯನ್ನು ಪ್ರದರ್ಶಿಸಲಿದ್ದಾರೆ. ಲಾವಸ್ ಪೇಟೆಯಲ್ಲಿ ನಿರ್ಮಿಸಿರುವ 100 ಹಾಸುಗೆಗಳ ಬಾಲಕಿಯರ ವಸತಿ ನಿಲಯವನ್ನು ಇಂದು ಉದ್ಘಾಟಿಸಲಾಗಿದ್ದು, ಅದು ಕೂಡ ಕ್ರೀಡಾ ಪ್ರತಿಭೆಗಳಿಗೆ ನೆರವು ನೀಡುವ ಮತ್ತೊಂದು ಉಪಕ್ರಮವಾಗಿದೆ. ವಿದ್ಯಾರ್ಥಿನಿಲಯ ಹಾಕಿ, ವಾಲಿಬಾಲ್, ಭಾರ ಎತ್ತುವ ಸ್ಪರ್ಧೆ, ಕಬಡ್ಡಿ ಮತ್ತು ಹ್ಯಾಂಡ್ ಬಾಲ್ ಆಟಗಾರರಿಗೆ ವಾಸ್ತವ್ಯ ಒದಗಿಸಲಿದೆ. ಇಲ್ಲಿನ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಎಸ್ಎಐ ತರಬೇತಿದಾರರಿಂದ ತರಬೇತಿ ಪಡೆಯಲಿದ್ದಾರೆ.

ಮಿತ್ರರೇ,

ಮುಂಬರುವ ವರ್ಷಗಳಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಲಿರುವ ಮತ್ತೊಂದು ವಲಯವೆಂದರೆ ಆರೋಗ್ಯ ರಕ್ಷಣಾ ವಲಯ. ಯಾವ ರಾಷ್ಟ್ರ ಆರೋಗ್ಯ ರಕ್ಷಣಾ ವಲಯದಲ್ಲಿ ಹೆಚ್ಚಿನ ಹೂಡಿಕೆ ಮಾಡುತ್ತದೋ ಅದು ಪ್ರಕಾಶಿಸುತ್ತದೆ. ಸರ್ವರಿಗೂ ಗುಣಮಟ್ಟದ ಆರೋಗ್ಯ ರಕ್ಷಣೆ ಒದಗಿಸುವ ನಮ್ಮ ಧ್ಯೇಯಕ್ಕೆ ಅನುಗುಣವಾಗಿ ನಾನು ಜೆಐಪಿಎಂಇಆರ್ ನಲ್ಲಿ ರಕ್ತದಾನ ಕೇಂದ್ರವನ್ನು ಉದ್ಘಾಟಿಸಿದೆ. ಯೋಜನೆ ಸುಮಾರು 28 ಕೋಟಿ ರೂ.ಗಳ ವೆಚ್ಚದ್ದಾಗಿದೆ. ಹೊಸ ಸೌಕರ್ಯ ದೀರ್ಘಾವಧಿವರೆಗೆ ರಕ್ತ ಸಂಗ್ರಹ, ರಕ್ತ ಉತ್ಪನ್ನಗಳು ಮತ್ತು ಸ್ಟೆಮ್ ಸೆಲ್ ಬ್ಯಾಂಕಿಂಗ್ ಸೇರಿದಂತೆ ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡಿದೆ. ಸೌಕರ್ಯ ಒಂದು ಸಂಶೋಧನಾ ಪ್ರಯೋಗಾಲಯವಾಗಿ ಕಾರ್ಯನಿರ್ವಹಿಸಲಿದೆ ಮತ್ತು ರಕ್ತ ಮರು ಪೂರಣಕ್ಕೆ ಸಂಬಂಧಿಸಿದ ಎಲ್ಲಾ ಆಯಾಮಗಳ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡುವ ತರಬೇತಿ ಕೇಂದ್ರವಾಗಲಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ ವರ್ಷದ ಬಜೆಟ್ ನಲ್ಲಿ ಆರೋಗ್ಯ ರಕ್ಷಣಾ ವಲಯದ ಬಜೆಟ್ ಅನುದಾನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

ಮಿತ್ರರೇ,

ಶ್ರೇಷ್ಠ ಕವಿ ತಿರುವಳ್ಳವರ್ ಅವರು ಹೀಗೆ ಹೇಳಿದ್ದರು:-

கேடில் விழுச்செல்வம் கல்வி ஒருவற்கு

மாடல்ல மற்றை யவை

ಅದರ ಅರ್ಥ: ಕಲಿಕೆ ಮತ್ತು ಶಿಕ್ಷಣ ಇವುಗಳೇ ನಿಜವಾದ ಸಂಪತ್ತು. ಆದರೆ ಇತರೆಲ್ಲಾ ವಿಷಯಗಳು ಯಾವುದೂ ಸ್ಥಿರವಲ್ಲ ಎಂಬುದು. ಗುಣಮಟ್ಟದ ಆರೋಗ್ಯ ರಕ್ಷಣೆ ಉತ್ತೇಜನಕ್ಕೆ ನಮಗೆ ಗುಣಮಟ್ಟದ ಆರೋಗ್ಯ ವೃತ್ತಿಪರರ ಅಗತ್ಯವಿದೆ. ನಿಟ್ಟಿನಲ್ಲಿ ವೈದ್ಯಕೀಯ ಕಾಲೇಜಿನ ಕಾರೈಕಲ್ ನಲ್ಲಿ ಹೊಸ ಕ್ಯಾಂಪಸ್ ನಿರ್ಮಾಣದ ಒಂದನೇ ಹಂತಕ್ಕೆ ಚಾಲನೆ ನೀಡಲಾಗಿದೆ. ಪರಿಸರಸ್ನೇಹಿ ಸಂಕೀರ್ಣದಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಬೋಧಿಸಲು ಅಗತ್ಯವಾದ ಎಲ್ಲಾ ಆಧುನಿಕ ಬೋಧನಾ ಸೌಕರ್ಯಗಳು ಒಳಗೊಂಡಿವೆ.

ಮಿತ್ರರೇ,

ಇಲ್ಲಿನ ಕರಾವಳಿ ತೀರವೇ ಪುದುಚೆರಿಗೆ ಸ್ಫೂರ್ತಿ ತುಂಬುತ್ತದೆ. ಇಲ್ಲಿ ಮೀನುಗಾರಿಕೆ, ಬಂದರು ಮತ್ತು ನೀಲಿ ಆರ್ಥಿಕತೆಯಲ್ಲಿ ಹೆಚ್ಚಿನ ಸಾಮರ್ಥ್ಯವಿದೆ. ಸಾಗರಮಾಲಾ ಯೋಜನೆಯಡಿ ಪುದುಚೆರಿ ಬಂದರು ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದು ನನಗೆ ಹೆಮ್ಮೆ ತಂದಿದೆ. ಇದು ಒಮ್ಮೆ ಪೂರ್ಣಗೊಂಡರೆ ಮೀನುಗಾರಿಕಾ ಕಾರ್ಯಾಚರಣೆಗಳಿಗಾಗಿ ಬಂದರು ಬಳಸಿ, ಸಮುದ್ರಕ್ಕಿಳಿಯುವ ನಮ್ಮ ಮೀನುಗಾರರಿಗೆ ತುಂಬಾ ಸಹಾಯವಾಗಲಿದೆ. ಅಲ್ಲದೆ ಇದು ತುಂಬಾ ಅಗತ್ಯವಾಗಿದ್ದ ಚೆನ್ನೈಗೆ ಸಮುದ್ರ ಸಂಪರ್ಕವನ್ನು ಕಲ್ಪಿಸಲಿದೆ. ಪುದುಚೆರಿಯ ಕೈಗಾರಿಕೆಗಳ ಸರಕು ಸಾಗಾಣೆಗೆ ಇದು ನೆರವು ನೀಡಲಿದ್ದು, ಚೆನ್ನೈ ಬಂದರಿನ ಮೇಲಿನ ಒತ್ತಡವನ್ನು ತಗ್ಗಿಸಲಿದೆ. ಅಲ್ಲದೆ ಇದು ಕರಾವಳಿಯ ನಗರಗಳಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲಗಳನ್ನು ತೆರೆಯಲಿದೆ.

ಮಿತ್ರರೇ,

ಹಲವು ಕಲ್ಯಾಣ ಯೋಜನೆಗಳಲ್ಲಿ ಪುದುಚೆರಿ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಉತ್ತೇಜನದಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಿದೆ. ಇಲ್ಲಿನ ಜನರನ್ನು ತಮ್ಮ ಆಯ್ಕೆಗಳನ್ನು ಮಾಡಿಕೊಳ್ಳುವಂತೆ ಸಬಲೀಕರಣಗೊಳಿಸಲಾಗಿದೆ. ಇಲ್ಲಿರುವ ಸರ್ಕಾರ ಮತ್ತು ಖಾಸಗಿ ವಲಯ ಎರಡಕ್ಕೂ ಸೇರಿದ ಹಲವು ಶಿಕ್ಷಣ ಸಂಸ್ಥೆಗಳು ಶ್ರೀಮಂತ ಮಾನವ ಸಂಪನ್ಮೂಲ ಪುದುಚೆರಿಯಲ್ಲಿ ಲಭ್ಯವಾಗುವಂತೆ ಮಾಡಿದೆ. ಇಲ್ಲಿ ಕೈಗಾರಿಕೆಗಳು ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ ಮತ್ತು ಸಾಕಷ್ಟು ಉದ್ಯೋಗ ಮತ್ತು ಅವಕಾಶಗಳನ್ನು ಸೃಷ್ಟಿಸಲಿದೆ. ಪುದುಚೆರಿಯ ಜನರು ಪ್ರತಿಭಾವಂತರು. ನೆಲ ಸುಂದರವಾದುದು. ನಾನು ಇಲ್ಲಿರುವುದು ಪುದುಚೆರಿಯ ಅಭಿವೃದ್ಧಿಯಲ್ಲಿ ಸರ್ಕಾರಕ್ಕೆ ಸಾಧ್ಯವಾದ ಎಲ್ಲ ನೆರವನ್ನು ನನ್ನ ಸರ್ಕಾರ ನೀಡಲಿದೆ ಎಂದು ನಿಮಗೆ ಖುದ್ದು ಭರವಸೆ ನೀಡುವುದಕ್ಕಾಗಿ. ಇಂದು ಆರಂಭಿಸಿರುವ ಅಭಿವೃದ್ಧಿ ಕಾಮಗಾರಿಗಳಿಗಾಗಿ ನಾನು ಮತ್ತೊಮ್ಮೆ ಪುದುಚೆರಿಯ ಜನರಿಗೆ ಅಭಿನಂದನೆಗಳನ್ನು ಹೇಳಲು ಬಯಸುತ್ತೇನೆ.  

ಧನ್ಯವಾದಗಳು, ತುಂಬಾ ತುಂಬಾ ಧನ್ಯವಾದಗಳು

ವಣಕ್ಕಂ

***



(Release ID: 1700765) Visitor Counter : 133