ಪ್ರಧಾನ ಮಂತ್ರಿಯವರ ಕಛೇರಿ

ʼಅಟ್‌ ಹೋಮ್‌ʼ ಕಾರ್ಯಕ್ರಮದಲ್ಲಿ ಗಣರಾಜ್ಯೋತ್ಸವ ಸ್ತಬ್ದ ಚಿತ್ರಗಳ ಕಲಾವಿದರು, ಎನ್.ಎಸ್.ಎಸ್. ಸ್ವಯಂ ಸೇವಕರು, ಎನ್.ಸಿ.ಸಿ. ಕೆಡೆಟ್‌ಗಳು, ಬುಡಕಟ್ಟು ಅತಿಥಿಗಳ ಜೊತೆ ಪ್ರಧಾನ ಮಂತ್ರಿ ಸಂವಾದ

Posted On: 24 JAN 2021 9:56PM by PIB Bengaluru

ಸಂಪುಟದಲ್ಲಿ ನನ್ನ ಹಿರಿಯ ಸಹೋದ್ಯೋಗಿಯಾಗಿರುವ ದೇಶದ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಜೀ, ಶ್ರೀ ಅರ್ಜುನ್ ಮುಂಡಾ ಜೀ, ಶ್ರೀ ಕಿರಣ್ ರೆಜಿಜು ಜೀ, ಶ್ರೀಮತಿ ರೇಣುಕಾ ಸಿಂಗ್ ಸರುತಾ ಜೀ ಮತ್ತು ದೇಶದ ವಿವಿಧೆಡೆಯಿಂದ ಬಂದಿರುವ ನನ್ನ ಪ್ರೀತಿಯ ಯುವ ಸಹೋದ್ಯೋಗಿಗಳೇ, ಕೊರೊನಾ ನಿಜವಾಗಿಯೂ ಬಹಳಷ್ಟು ಬದಲಾವಣೆಗಳಾನ್ನು ತಂದಿದೆ. ಮುಖಗವಸುಗಳು, ಕೊರೊನಾ ಪರೀಕ್ಷೆಗಳು, ಎರಡು ಯಾರ್ಡ್ ಅಂತರ, ಇವೆಲ್ಲವೂ ಈಗ ದಿನ ನಿತ್ಯದ ಬದುಕಿನ ಭಾಗವಾಗಿವೆ. ಈ ಮೊದಲು ನಾವು ನಮ್ಮ ಫೋಟೋ ತೆಗೆಸಿಕೊಳ್ಳುತ್ತಿದ್ದೆವು. ಕ್ಯಾಮರಾಮನ್ ಸ್ಮೈಲ್ ಎನ್ನುತ್ತಿದ್ದರು. ಈಗ ಅವರು ಕೂಡಾ ಹಾಗೆ ಹೇಳುವುದಿಲ್ಲ. ಇಲ್ಲಿ ಕೂಡಾ ಪ್ರತ್ಯೇಕ ಆಸನ ವ್ಯವಸ್ಥೆ ಇರುವುದನ್ನು ನಾವು ಕಾಣುತ್ತೇವೆ. ಅಂತರವನ್ನು ಕಾಪಾಡಬೇಕಾಗಿದೆ. ಆದಾಗ್ಯೂ ನಿಮ್ಮ ಉತ್ಸಾಹ ಮತ್ತು ಹುರುಪು ಹಾಗೆಯೇ ಇದೆ, ಅದರಲ್ಲಿ ಬದಲಾವಣೆ ಆಗಿಲ್ಲ.

ಸ್ನೇಹಿತರೇ,

ನೀವಿಲ್ಲಿಗೆ ದೇಶದ ಬೇರೆ ಬೇರೆ ಭಾಗಗಳಿಂದ ಬಂದಿದ್ದೀರಿ. ದೇಶದ ದೂರದ ಬುಡಕಟ್ಟು ಪ್ರಡೆಶಗಳಿಂದ ಬಂದ ಸಹೋದ್ಯೋಗಿಗಳು ಇದ್ದಾರೆ. ಎನ್.ಸಿ.ಸಿ.-ಎನ್.ಎಸ್.ಎಸ್.ಗಳ ಚೈತನ್ಯಭರಿತ ಯುವಜನತೆ ಕೂಡಾ ಇಲ್ಲಿದ್ದಾರೆ ಮತ್ತು ರಾಜಪಥದಲ್ಲಿ ಸ್ತಬ್ದಚಿತ್ರಗಳ ಮೂಲಕ ದೇಶಕ್ಕೆ ವಿವಿಧ ರಾಜ್ಯಗಳ ಸಂದೇಶವನ್ನು ಹರಡಲು ಕಲಾವಿದರು ಕೂಡಾ ಇದ್ದಾರೆ. ನೀವು ಸಂತೋಷದಿಂದ ರಾಜಪಥದಲ್ಲಿ ಹೆಜ್ಜೆ ಹಾಕುವಾಗ ಪ್ರತಿಯೊಬ್ಬ ದೇಶವಾಸಿ ಕೂಡಾ ಉತ್ಸಾಹವನ್ನು ಮೈಗೂಢಿಸಿಕೊಳ್ಳುತ್ತಾನೆ. ಭಾರತದ ಶ್ರೀಮಂತ ಕಲೆ, ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ನೀವು ಸ್ತಬ್ದಚಿತ್ರ ಮಾಡಿದಾಗ ಪ್ರತಿಯೊಬ್ಬ ದೇಶವಾಸಿಯು  ಹೆಮ್ಮೆಯಿಂದ ತಲೆ ಎತ್ತರಿಸುತ್ತಾನೆ. ಮತ್ತು ಪರೇಡ್ ಅವಧಿಯಲ್ಲಿ ನನ್ನ ಪಕ್ಕದಲ್ಲಿ ಕುಳಿತ ಕೆಲವು ಮುಖ್ಯಸ್ಥರಲ್ಲಿ ನಾನಿದನ್ನು ಕಂಡಿದ್ದೇನೆ. ಹಲವಾರು ಸಂಗತಿಗಳನ್ನು ನೋಡಿದಾಗ, ಅವರು ಆಶ್ಚರ್ಯಚಕಿತರಾಗುತ್ತಾರೆ. ನನ್ನಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳುತ್ತಾರೆ. ಮತ್ತು ದೇಶದ ಯಾವ ಮೂಲೆಯಲ್ಲಿ ಏನೇನು ಇದೆ  ಎಂಬುದನ್ನು ಹುಡುಕಿ ಶೋಧಿಸುತ್ತಾರೆ. ನಮ್ಮ ಬುಡಕಟ್ಟು ಜನರು ರಾಜಪಥದಲ್ಲಿ ಸಂಸ್ಕೃತಿಯ ವರ್ಣಮಯ ಜಗತ್ತನ್ನು ಪ್ರದರ್ಶಿಸಿದಾಗ, ಇಡೀ ಭಾರತ ಆ ವರ್ಣಗಳಲ್ಲಿ ಮುಳುಗೇಳುತ್ತದೆ.  ಗಣರಾಜ್ಯೋತ್ಸವದ ಪರೇಡ್ ಭಾರತದ ಶ್ರೇಷ್ಟ ಸಮಾಜೋ-ಸಾಂಸ್ಕೃತಿಕ ಪರಂಪರೆಯನ್ನು ಮತ್ತು ನಮ್ಮ ವ್ಯೂಹಾತ್ಮಕ ಸಾಮರ್ಥ್ಯವನ್ನು ಗೌರವಿಸುತ್ತದೆ. ಗಣರಾಜ್ಯೋತ್ಸವ ಪರೇಡ್ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವಕ್ಕೆ ಜೀವ ತಂದುಕೊಟ್ಟ ನಮ್ಮ ಸಂವಿಧಾನವನ್ನು ಗೌರವಿಸುತ್ತದೆ. ಜನವರಿ 26 ರ ಉತ್ತಮ ಸಾಧನೆ, ಪ್ರದರ್ಶನಕ್ಕಾಗಿ ನಿಮಗೆ ನನ್ನ ಶುಭ ಹಾರೈಕೆಗಳು. ನಿಮ್ಮಲ್ಲಿ ನನ್ನ ಕೋರಿಕೆಯೊಂದಿದೆ. ದಿಲ್ಲಿ ಬಹಳ ಚಳಿಯ ಚಳಿಗಾಲವನ್ನು ಅನುಭವಿಸುತ್ತಿದೆ. ದಕ್ಷಿಣದಿಂದ ಬಂದವರು ಕೆಲವು ಸಮಸ್ಯೆಗಳನ್ನು ಎದುರಿಸುತ್ತಿರಬಹುದು. ನೀವು ಇಲ್ಲಿ ಬಹಳ ದಿನಗಳಿಂದ ಇದ್ದಿರಬಹುದು, ಆದರೆ ನಿಮ್ಮಲ್ಲಿ ಬಹಳಷ್ಟು ಮಂದಿ ಈ ಚಳಿಗೆ ಹೊಂದಿಕೊಂಡಿಲ್ಲದೇ ಇರಬಹುದು.  ನೀವು ಕವಾಯತಿಗಾಗಿ ಹೋಗಲು ಬೆಳಿಗ್ಗೆ ಬೇಗ ಏಳಬೇಕಾಗುತ್ತದೆ. ನೀವು ನಿಮ್ಮ ಆರೋಗ್ಯದ ಬಗ್ಗೆ ಕೂಡಾ ಕಾಳಜಿವಹಿಸಿ ಎಂದು ನಾನು ಹೇಳುತ್ತೇನೆ.

ಸ್ನೇಹಿತರೇ,

ಈ ವರ್ಷ ನಮ್ಮ ದೇಶವು ಸ್ವಾತಂತ್ರ್ಯದ 75 ನೇ ವರ್ಷದಲ್ಲಿದೆ. ಗುರು ತೇಜ್ ಬಹಾದೂರ್ ಜೀ ಅವರ 400 ನೇ ಜನ್ಮ ವರ್ಷ  ಕೂಡಾ ಈ ವರ್ಷವೇ ಆಚರಣೆಯಾಗುತ್ತಿದೆ. ಈ ವರ್ಷ ನಾವು ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ 125 ನೇ ಜನ್ಮವರ್ಷವನ್ನು ಆಚರಿಸುತ್ತಿದ್ದೇವೆ. ಈಗ ದೇಶವು ನೇತಾಜಿ ಅವರ ಜನ್ಮದಿನವನ್ನು ಪರಾಕ್ರಮ ದಿವಸವನ್ನಾಗಿ ಆಚರಿಸಲು ನಿರ್ಧರಿಸಿದೆ. ಈ ಪರಾಕ್ರಮ ದಿವಸದ ಅಂಗವಾಗಿ , ನಾನು ನಿನ್ನೆ ಅವರ ಕರ್ಮ ಭೂಮಿ ಕೋಲ್ಕೊತ್ತಾದಲ್ಲಿದ್ದೆ. ಸ್ವಾತಂತ್ರ್ಯದ 75 ನೇ ವರ್ಷ, ಗುರು ತೇಜ್ ಬಹಾದ್ದೂರ್ ಜೀ  ಅವರ ಜೀವನ, ನೇತಾಜಿ ಅವರ ಶೌರ್ಯ, ಅವರ ಕಾರುಣ್ಯಗಳು, ಇವೆಲ್ಲ ನಮ್ಮೆಲ್ಲರಿಗೂ ಬಹಳ ದೊಡ್ಡ ಪ್ರೇರಣೆಗಳು. ನಮಗೆ ದೇಶದ ಸ್ವಾತಂತ್ರ್ಯಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುವ ಅವಕಾಶ ದೊರೆಯಲಿಲ್ಲ. ಯಾಕೆಂದರೆ ನಮ್ಮಲ್ಲಿರುವ ಬಹುತೇಕ ಮಂದಿ ಸ್ವಾತಂತ್ರ್ಯದ ಬಳಿಕ ಜನಿಸಿದವರು. ಆದರೆ ದೇಶವು ನಮಗೆ ನಮ್ಮಲ್ಲಿರುವ ಅತ್ಯುತ್ತಮವಾದುದನ್ನು ನೀಡುವ ಅವಕಾಶವನ್ನು ಒದಗಿಸಿದೆ. ನಾವು ದೇಶಕ್ಕಾಗಿ ಏನಾದರೂ ಒಳ್ಳೆಯದನ್ನು ಮಾಡಬಹುದಾಗಿದೆ ಮತ್ತು ಅದನ್ನು ಭಾರತವನ್ನು ಬಲಪಡಿಸುವುದಕ್ಕಾಗಿ ನಿರಂತರ ಮಾಡುತ್ತಾ ಬರಬೇಕಾಗುತ್ತದೆ.

ಸ್ನೇಹಿತರೇ,

ಗಣರಾಜ್ಯೋತ್ಸವದ ಪರೇಡ್ ನ ತಯಾರಿಯ ವೇಳೆ, ನೀವು ಈ ದೇಶ ಎಷ್ಟೊಂದು ವೈವಿಧ್ಯಮಯ ಎಂಬುದನ್ನು ಕಂಡುಕೊಂಡಿರಬಹುದು. ಅನೇಕ ಭಾಷೆಗಳು, ಅನೇಕ ಭಾಷಿಕ ವೈವಿಧ್ಯಗಳು, ವಿವಿಧ ರೀತಿಯ ತಿನ್ನುವ ಅಭ್ಯಾಸಗಳು!. ಪ್ರತಿಯೊಂದೂ ವೈವಿಧ್ಯಮಯ, ಆದಾಗ್ಯೂ ಭಾರತವು ಒಂದು. ಭಾರತವೆಂದರೆ ಸಾಮಾನ್ಯ ಮನುಷ್ಯನ ರಕ್ತ ಮತ್ತು ಬೆವರಿನ ಹಾಗು ಆತನ ಆಶೋತ್ತರಗಳು ಮತ್ತು ನಿರೀಕ್ಷೆಗಳ ಒಟ್ಟು ಶಕ್ತಿ. ಭಾರತ ಎಂದರೆ ಅನೇಕ ರಾಜ್ಯಗಳು, ಆದರೆ ಏಕ ದೇಶ, ಹಲವು ಸಮಾಜಗಳು ಆದರೆ ಒಂದು ಚಿಂತನೆ, ಹಲವು ಪಂಥಗಳು ಆದರೆ ಉದ್ದೇಶ ಒಂದೇ, ಹಲವು ಸಂಪ್ರದಾಯಗಳು ಆದರೆ ಒಂದು ಮೌಲ್ಯ, ಹಲವು ಭಾಷೆಗಳು ಆದರೆ ಒಂದು ಭಾವನೆ, ಹಲವು ಬಣ್ಣಗಳು ಆದರೆ ಒಂದೇ ತ್ರಿವರ್ಣ. ನಾವು ಒಂದೇ ಮಾತಿನಲ್ಲಿ ಹೇಳುವುದಾದರೆ, ಭಾರತದಲ್ಲಿ ಹಾದಿಗಳು ಹಲವು ಆದರೆ ಗುರಿಗಳು ಒಂದೇ. ಈ ಗುರಿ “ಏಕ ಭಾರತ್, ಶ್ರೇಷ್ಟ ಭಾರತ್”

ಸ್ನೇಹಿತರೇ,

ಇಂದು ಏಕ ಭಾರತ್, ಶ್ರೇಷ್ಟ ಭಾರತ್ ಎಂಬ ಶಾಶ್ವತ ಸ್ಪೂರ್ತಿ ದೇಶದ ಪ್ರತಿಯೊಂದು ಮೂಲೆ ಮೂಲೆಗಳಲ್ಲಿಯೂ ಕಾಣಬರುತ್ತಿದೆ. ಮತ್ತು ದಿನ ದಿನಕ್ಕೆ ಬಲಿಷ್ಟವಾಗುತ್ತಿದೆ. ಮಿಜೋರಾಂನ ನಾಲ್ಕು ವರ್ಷದ ಬಾಲಕಿ ವಂದೇ ಮಾತರಂ ಹಾಡಿರುವುದನ್ನು ನೀವು ನೋಡಿರಬಹುದು ಅಥವಾ ಕೇಳಿರಬಹುದು, ಅದು ಪ್ರತೀ ಕೇಳುಗನನ್ನು ಹೆಮ್ಮೆಪಡುವಂತೆ ಮಾಡುತ್ತದೆ. ಕೇರಳದ ಶಾಲಾ ಬಾಲಕಿ ಕಷ್ಟಪಟ್ಟು ಕಲಿತು ಹಿಮಾಚಲದ ಭಾಷೆಯಲ್ಲಿ ಅತ್ಯಂತ ಸ್ಪಷ್ಟ ಮತ್ತು ಸರಿಯಾಗಿ ಹಾಡನ್ನು ಹಾಡಿದರೆ, ಆಗ ಭಾರತದ ಶಕ್ತಿ ಕಾಣ ಸಿಗುತ್ತದೆ. ತೆಲುಗು ಮಾತನಾಡುವ ಬಾಲಕಿ ಹರ್ಯಾಣಾದ ತಿಂಡಿ ತಿನಿಸುಗಳ ಅಭ್ಯಾಸಗಳನ್ನು ಆಕೆಯ ಶಾಲಾ ಪ್ರಾಜೆಕ್ಟ್ ಅಂಗವಾಗಿ ಆಸಕ್ತಿದಾಯಕ ರೀತಿಯಲ್ಲಿ ಪ್ರಸ್ತುತಪಡಿಸಿದರೆ, ನಾವು ಭಾರತದ ಚಿಂತನೆಯಲ್ಲಿಯ ಹಿರಿತನವನ್ನು, ಹೆಚ್ಚುಗಾರಿಕೆಯನ್ನು  ಕಾಣುತ್ತೇವೆ.

ಸ್ನೇಹಿತರೇ

ಏಕ ಭಾರತ್, ಶ್ರೇಷ್ಟ ಭಾರತ್ ಪೋರ್ಟಲ್ ನ್ನು ಭಾರತದ ಶಕ್ತಿಯ ಕುರಿತಂತೆ ನಿರ್ಮಾಣ ಮಾಡಲಾಗಿದೆ ಮತ್ತು ಅದು ವಿಶ್ವಕ್ಕೆ ದೇಶವನ್ನು ಪರಿಚಯಿಸಲಿದೆ. ನೀವು ಡಿಜಿಟಲ್ ತಲೆಮಾರಿಗೆ ಸೇರಿದವರಾಗಿರುವ ಕಾರಣ, ನೀವಿದಕ್ಕೆ ಭೇಟಿ ನೀಡಬೇಕು. ಸುಮಾರು ಒಂದು ಸಾವಿರಕ್ಕೂ ಅಧಿಕ ಜನರು ಈ ಪೋರ್ಟಲಿನಲ್ಲಿ ತಮ್ಮ ವಲಯದ ಅಡುಗೆ, ಖಾದ್ಯಗಳನ್ನು ಹಂಚಿಕೊಂಡಿದ್ದಾರೆ. ಈ ಪೋರ್ಟಲಿಗೆ ಭೇಟಿ ನೀಡಲು ಸಮಯಾವಕಾಶ ಮಾಡಿಕೊಳ್ಳಿ. ಮತ್ತು ನಿಮ್ಮ ಕುಟುಂಬದವರಿಗೆ, ವಿಶೇಷವಾಗಿ ನಿಮ್ಮ ತಾಯಿಯವರಿಗೆ ತಿಳಿಸಿ, ಮತ್ತು ನೀವದನ್ನು ಆನಂದಿಸುತ್ತೀರಿ.

ಸ್ನೇಹಿತರೇ,

ಶಾಲೆಗಳು, ಕಾಲೇಜುಗಳು ಇತ್ಯಾದಿ  ಮುಚ್ಚಲ್ಪಟ್ಟಿದ್ದರೂ, ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ದೇಶದ ಯುವ ಜನತೆ ಡಿಜಿಟಲ್ ಸಾಧನಗಳ ಮೂಲಕ ಇತರ ರಾಜ್ಯಗಳ ಜೊತೆ ವೆಬಿನಾರ್ ಗಳನ್ನು ಮಾಡಿದ್ದಾರೆ. ಈ ವೆಬಿನಾರ್ ಗಳು ವಿವಿಧ ರಾಜ್ಯಗಳ ವಿವಿಧ ಸಂಗೀತ, ನೃತ್ಯ, ತಿನ್ನುವ ಅಭ್ಯಾಸಗಳ ಬಗ್ಗೆ ವಿಶೇಷ ಚರ್ಚೆಗಳನ್ನು ನಡೆಸಿವೆ. ಇಂದು ಸರಕಾರ ಕೂಡಾ ದೇಶಾದ್ಯಂತ ಭಾಷೆಗಳನ್ನು ಉತ್ತೇಜಿಸಲು ಪ್ರಯತ್ನಿಸುತ್ತಿದೆ, ಪ್ರತೀ ವಲಯ ಮತ್ತು ಪ್ರಾದೇಶಿಕ ಮಟ್ಟದ ಆಹಾರ ಮತ್ತು ಕಲಾ ಪ್ರಕಾರಗಳನ್ನು ಉತ್ತೇಜಿಸುತ್ತಿದೆ. ಪ್ರತೀ ರಾಜ್ಯಗಳ ಹಬ್ಬಗಳು ಮತ್ತು ಜೀವನ ವಿಧಾನದ ಬಗ್ಗೆ ಅರಿವು ಹೆಚ್ಚಬೇಕಾಗಿದೆ. ನಿರ್ದಿಷ್ಟವಾಗಿ, ದೇಶವು ಕೂಡಾ ನಮ್ಮ ಶ್ರೀಮಂತ ಬುಡಕಟ್ಟು ಸಂಪ್ರದಾಯಗಳಿಂದ, ಕಲೆ ಮತ್ತು ಕರಕುಶಲಕಲೆಗಳಿಂದ ಬಹಳಷ್ಟನ್ನು ಕಲಿಯಬಹುದಾಗಿದೆ. ಏಕ ಭಾರತ್, ಶ್ರೇಷ್ಟ ಭಾರತ್ ಆಂದೋಲನ ಈ ಎಲ್ಲ ಸಂಗತಿಗಳನ್ನು ಮುಂಚೂಣಿಗೆ ತರಲು ಸಹಾಯ ಮಾಡುತ್ತಿದೆ.

ಸ್ನೇಹಿತರೇ,

ಈಗಿನ ದಿನಮಾನಗಳಲ್ಲಿ, ನೀವು “ವೋಕಲ್ ಫಾರ್ ಲೋಕಲ್” ಶಬ್ದಗಳನ್ನು ಕೇಳಿರಬಹುದು; ದೇಶದಲ್ಲಿ ಈ ಬಗ್ಗೆ ಬಹಳಷ್ಟು ಮಾತನಾಡಲಾಗುತ್ತಿದೆ. ವೋಕಲ್ ಫಾರ್ ಲೋಕಲ್ ಎಂಬುದು ನಮ್ಮ ಮನೆಯ ಹತ್ತಿರ ತಯಾರಾಗುತ್ತಿರುವ ಉತ್ಪಾದನೆಗಳ ಬಗ್ಗೆ ಹೆಮ್ಮೆ ಪಡುವುದು ಮತ್ತು ಅವುಗಳಿಗೆ ಪ್ರೋತ್ಸಾಹ ಕೊಡುವುದು. ಆದರೆ ವೋಕಲ್ ಫಾರ್ ಲೋಕಲ್ ಗೆ ಹೆಚ್ಚಿನ ಬಲ ಬರುವುದು ಅದಕ್ಕೆ ಏಕ ಭಾರತ್ ಶ್ರೇಷ್ಟ ಭಾರತ್ ಸ್ಪೂರ್ತಿ ಜೊತೆಗೂಡಿದಾಗ. ನಾನು ತಮಿಳುನಾಡಿನಲ್ಲಿ ವಾಸಿಸುತ್ತಿದ್ದರೆ, ನಾನು ಹರ್ಯಾಣಾದಲ್ಲಿ ತಯಾರಾಗುತ್ತಿರುವ ಯಾವುದಾದರೂ ಒಂದು ಉತ್ಪನ್ನದ ಬಗ್ಗೆ ಹೆಮ್ಮೆ ಪಡಬೇಕು. ಅದೇ ರೀತಿ ನಾನು ಹಿಮಾಚಲದಲ್ಲಿ ವಾಸಿಸುತ್ತಿದ್ದರೆ, ನಾನು ಕೇರಳದ ಯಾವುದಾದರೊಂದರ ಬಗ್ಗೆ ಹೆಮ್ಮೆ ಪಡುವಂತಿರಬೇಕು. ದೇಶದಲ್ಲಿ ಸ್ಥಳೀಯ ಉತ್ಪಾದನೆಗಳ ತಲುಪುವಿಕೆ ಮತ್ತು ಅವುಗಳಲ್ಲಿ ಜಾಗತಿಕಗೊಳಿಸುವ ಶಕ್ತಿ ಒಂದು ವಲಯವು ಅದನ್ನು ಮೆಚ್ಚಿಕೊಂಡು, ಇತರ ವಲಯದ ಉತ್ಪನ್ನಗಳ ಬಗ್ಗೆ ಹೆಮ್ಮೆಪಟ್ಟುಕೊಂಡಾಗ ಮಾತ್ರ ಸಾಧ್ಯವಾಗುತ್ತದೆ.

ಸ್ನೇಹಿತರೇ,

ವೋಕಲ್ ಫಾರ್ ಲೋಕಲ್ ಮತ್ತು ಆತ್ಮನಿರ್ಭರ ಭಾರತದಂತಹ ಆಂದೋಲನಗಳ ಯಶಸ್ಸು ನಿಮ್ಮಂತಹ ಯುವಜನತೆಯನ್ನು ಆಧರಿಸಿದೆ. ಇಲ್ಲಿರುವ ಎನ್.ಸಿ.ಸಿ. ಮತ್ತು ಎನ್.ಎಸ್.ಎಸ್.ನ ಹಲವು ಯುವಜನತೆಗೆ ನಾನು ಸಣ್ಣದೊಂದು ಕೆಲಸ ಕೊಡಲು ಇಚ್ಛಿಸುತ್ತೇನೆ ಮತ್ತು ಈ ಸಂಗತಿಗಳನ್ನು ಅವರು ಅವರ  ಶಿಕ್ಷಣದ ಮೊದಲ ಭಾಗದಲ್ಲಿ  ಕಲಿತುಕೊಂಡಿದ್ದಾರೆ. ಮತ್ತು ದೇಶಾದ್ಯಂತ  ನಮ್ಮ ಎನ್.ಸಿ.ಸಿ.ಯ ಸ್ವಯಂಸೇವಕರು ನನಗೆ ಈ ನಿಟ್ಟಿನಲ್ಲಿ ಸಹಾಯ ಮಾಡುವುದು ಖಚಿತ. ನೀವು ಬೆಳಿಗ್ಗೆ ಎದ್ದಲ್ಲಿಂದ ರಾತ್ರಿ ಮಲಗುವಲ್ಲಿಯವರೆಗೆ ನೀವು ಬಳಸುವ ವಸ್ತುಗಳ ಬಗ್ಗೆ ಪಟ್ಟಿ ಮಾಡಿ. ಅದು ಟೂಥ್ ಪೇಸ್ಟ್ ಇರಲಿ, ಬ್ರಶ್ ಆಗಿರಲಿ, ಬಾಚಣಿಕೆ ಅಥವಾ ಇನ್ನೇನಾದರೂ ಆಗಿರಲಿ, ಮನೆಯಲ್ಲಿರುವ ಎ.ಸಿ., ಮೊಬೈಲ್ ಫೋನ್, ಏನಾದರೂ ಇರಲಿ ನಿಮಗೆ ದಿನಕ್ಕೆ ಎಷ್ಟೆಲ್ಲ ವಸ್ತುಗಳು ಬೇಕು ಮತ್ತು ಅವುಗಳಲ್ಲಿ ಎಷ್ಟು ವಸ್ತುಗಳು ನಮ್ಮ ಕಾರ್ಮಿಕರ ಬೆವರಿನ ವಾಸನೆ ಮತ್ತು ನಮ್ಮ ದೊಡ್ಡ ದೇಶದ ಮಣ್ಣಿನ ಪರಿಮಳವನ್ನು ಹೊಂದಿವೆ ಎಂಬುದನ್ನು ನೋಡಿ. ನಮ್ಮ ಬದುಕಿನಲ್ಲಿ ಬಂದಿರುವ ಅನೇಕ ವಸ್ತುಗಳು ವಿದೇಶದವು ಮತ್ತು ಅವುಗಳ ಬಗ್ಗೆ ನಮಗೆ ಅರಿವಿಲ್ಲ ಎಂಬುದು ಗೊತ್ತಾದಾಗ ನಮಗೆ ದಿಗ್ಭ್ರಮೆಯಾಗುತ್ತದೆ. ಒಮ್ಮೆ ನೀವು ಅವುಗಳತ್ತ ಗಮನ ಹರಿಸಿದರೆ ನಮಗೆ ತಿಳಿಯುತ್ತದೆಸ್ವಾವಲಂಬಿ ಭಾರತವನ್ನು ನಿರ್ಮಾಣ ಮಾಡುವ ಕೆಲಸ ನಮ್ಮಿಂದಲೇ ಆರಂಭಗೊಳ್ಳಬೇಕು ಎಂಬುದು. ಇದರರ್ಥ ನೀವು ಬಳಸುತ್ತಿರುವ ಯಾವುದೇ ವಿದೇಶಿ ವಸ್ತುವನ್ನು ನಾಳೆಯಿಂದಲೇ ಬಿಸಾಡಿಬಿಡಿ ಎಂಬುದಲ್ಲ. ಜಗತ್ತಿನಲ್ಲಿ ಉತ್ತಮವಾದುದಿದ್ದರೆ ಅದು ಇಲ್ಲಿ ಲಭಿಸುತ್ತಿಲ್ಲದಿದ್ದರೆ, ಅದನ್ನು ನೀವು ಕೊಳ್ಳಬಾರದು ಎಂದೂ ನಾನು ಹೇಳುತ್ತಿಲ್ಲ. ಅದು ಹಾಗೆ ಆಗಲಾರದು. ಆದರೆ ನಮಗೆ ಒಂದು ರೀತಿಯಲ್ಲಿ ದೈನಂದಿನ ಬದುಕಿನಲ್ಲಿ  ನಮ್ಮನ್ನು ಮಾನಸಿಕವಾಗಿ ಗುಲಾಮರನ್ನಾಗಿಸಿರುವ ಅನೇಕ ಸಂಗತಿಗಳು ಇವೆ ಎಂಬುದೂ ನಮಗೆ ತಿಳಿದಿಲ್ಲ. ನಾನು ನನ್ನ ಯುವ ಸಹೋದ್ಯೋಗಿಗಳಲ್ಲಿ ಮತ್ತು ಎನ್.ಸಿ.ಸಿ. ಹಾಗು ಎನ್.ಎಸ್.ಎಸ್.ನ ಶಿಸ್ತು ಬದ್ದ ಯುವಜನರಲ್ಲಿ  ಮನವಿ ಮಾಡುವುದೇನೆಂದರೆ ನಿಮ್ಮ ಕುಟುಂಬದೊಂದಿಗೆ ಸೇರಿ ಒಂದು ಪಟ್ಟಿ ಮಾಡಿ ಮತ್ತು ಅವುಗಳನ್ನು ಗಮನಿಸಿ. ಆ ಬಳಿಕ ನಾನು ಹೇಳಿದ್ದನ್ನು ನೀವು ನೆನಪಿಸಿಕೊಳ್ಳಬೇಕಾದ ಅಗತ್ಯ ಇಲ್ಲ. ಮತ್ತು ನಿಮ್ಮ ಆತ್ಮವೇ ನಮ್ಮ ದೇಶಕ್ಕೆ ನಾವು ಎಷ್ಟು ಹಾನಿ ಮಾಡಿದ್ದೇವೆ ಎಂಬುದನ್ನು ಹೇಳುತ್ತದೆ.

ಸ್ನೇಹಿತರೇ,

ಭಾರತವು ಯಾರಾದರೊಬ್ಬರು ಇದರ ಬಗ್ಗೆ ಬೋಧನೆ ನೀಡಿದರೆ ಅದು ಸ್ವಾವಲಂಬಿಯಾಗಲಾರದು, ಆದರೆ ನಾನು ಹೇಳಿದಂತೆ ಅದು ಈ ದೇಶದ ಯುವ ಸಹೋದ್ಯೋಗಿಗಳಿಂದ ಸಾಧ್ಯವಾಗಬಲ್ಲದು. ಮತ್ತು ನೀವು ಅದಕ್ಕೆ ಅವಶ್ಯವಾದ ಕೌಶಲ್ಯಗಳನ್ನು ಹೊಂದಿದ್ದರೆ, ಅದನ್ನು ಉತ್ತಮ ರೀತಿಯಲ್ಲಿ ಮಾಡಲು ಸಮರ್ಥರಾಗುತ್ತೀರಿ

ಸ್ನೇಹಿತರೇ,

ಈ ಕೌಶಲ್ಯಗಳ ಮಹತ್ವದ ಬಗ್ಗೆ ಆದ್ಯತೆಯನ್ನು ನೀಡಿ, 2014ರಲ್ಲಿ ಸರಕಾರ ರಚನೆಯಾಗುತ್ತಲೇ ಕೌಶಲ್ಯ ಅಭಿವೃದ್ಧಿಗಾಗಿ ವಿಶೇಷ ಸಚಿವಾಲಯವನ್ನು ರಚಿಸಲಾಯಿತು. ಈ ಆಂದೋಲನದಡಿಯಲ್ಲಿ 5.5 ಕೋಟಿಗೂ ಅಧಿಕ ಯುವಜನರು ವಿವಿಧ ಕಲೆ ಮತ್ತು ಕೌಶಲ್ಯಗಳಲ್ಲಿ ಇದುವರೆಗೆ ತರಬೇತಿ ಪಡೆದಿದ್ದಾರೆ. ಈ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದಲ್ಲಿ, ಬರೇ ತರಬೇತಿ ಮಾತ್ರ ನೀಡುತ್ತಿರುವುದಲ್ಲ, ಲಕ್ಷಾಂತರ ಯುವಜನರು ಉದ್ಯೋಗ ಪಡೆಯಲು, ಸ್ವಂತ ಉದ್ಯಮ ನಡೆಸಲು ಇದರಿಂದ ಸಹಾಯವಾಗಿದೆ. ಭಾರತ ಕೂಡಾ ಕೌಶಲ್ಯಯುಕ್ತ ಯುವಜನತೆಯನ್ನು ಹೊಂದಿದೆ, ಮತ್ತು ಅವರು ಹೊಂದಿರುವ ಕೌಶಲ್ಯ ಗುಚ್ಛಗಳಿಗೆ ಅನುಗುಣವಾಗಿ ಅವರಿಗೆ ಹೊಸ ಉದ್ಯೋಗಾವಕಾಶಗಳು ಲಭಿಸಬೇಕು ಎನ್ನುವುದು ಇದರ ಗುರಿಯಾಗಿದೆ.

ಸ್ನೇಹಿತರೇ,

ದೇಶದ ಹೊಸ ಶಿಕ್ಷಣ ನೀತಿಯು ಆತ್ಮನಿರ್ಭರ ಭಾರತಕ್ಕಾಗಿ ಯುವಜನತೆಯ ಕೌಶಲ್ಯಗಳ ಮೇಲೆ ಆದ್ಯ ಗಮನವನ್ನು ನೀಡುತ್ತದೆ. ಇದನ್ನು ನೋಡಲು ನೀವೂ ಸಮರ್ಥರಾಗಿದ್ದೀರಿ. ಅದು ಅಧ್ಯಯನದ ಜೊತೆ ಅದರ ಅನ್ವಯಿಕತೆಯನ್ನು ಒತ್ತಿ ಹೇಳುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯು ಯುವಜನತೆಗೆ ಅವರ ಆಸಕ್ತಿಗೆ ಅನುಗುಣವಾದ ವಿಷಯಗಳನ್ನು ಆಯ್ಕೆ ಮಾಡಲು ಸ್ವಾತಂತ್ರ್ಯವನ್ನು ಒದಗಿಸಿಕೊಡುತ್ತದೆ. ಅವರು ಯಾವಾಗ ಅಧ್ಯಯನ ಮಾಡಬೇಕು, ಅದನ್ನು ಯಾವಾಗ ನಿಲ್ಲಿಸಬೇಕು ಮತ್ತು ಯಾವಾಗ ಪುನರಾರಂಭ ಮಾಡಬೇಕು ಎಂಬ ಬಗ್ಗೆ ಅನುಕೂಲಕರ ಅವಕಾಶಗಳುಳ್ಳ ವ್ಯವಸ್ಥೆಯನ್ನು ರೂಪಿಸಲಾಗಿದೆ. ನಮ್ಮ ವಿದ್ಯಾರ್ಥಿಗಳು ತಾವಾಗಿಯೇ ಅವರಿಗೆ ಏನು ಬೇಕೋ ಅದನ್ನು ಮಾಡಿಕೊಳ್ಳಲು ಅವಕಾಶವನ್ನು ಇದರಲ್ಲಿ ಖಾತ್ರಿಪಡಿಸುವ ಪ್ರಯತ್ನಗಳನ್ನು ಮಾಡಲಾಗಿದೆ.

ಸ್ನೇಹಿತರೇ,

ನೂತನ ಶಿಕ್ಷಣ ನೀತಿಯು ವೃತ್ತಿ ಶಿಕ್ಷಣವನ್ನು ಇದೇ ಮೊದಲ ಬಾರಿಗೆ ಶಿಕ್ಷಣದ ಮುಖ್ಯವಾಹಿನಿಗೆ ತರುವ ಗಂಭೀರ ಪ್ರಯತ್ನವನ್ನು ಮಾಡಿದೆ. ಆರನೇಯ ತರಗತಿಯಿಂದಲೇ ಸ್ಥಳೀಯ ವೃತ್ತಿಗಳಿಗೆ ಮತ್ತು ಸ್ಥಳೀಯ ಆವಶ್ಯಕತೆಗಳಿಗೆ ಅನುಗುಣವಾಗಿ ಅವರ ಆಸಕ್ತಿಯ ಕೋರ್ಸನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ವಿದ್ಯಾರ್ಥಿಗಳಿಗೆ  ಒದಗಿಸಲಾಗಿದೆ. ಇವು ಬರೇ ಕಲಿಕೆಯ ಕೋರ್ಸುಗಳಲ್ಲ.  ಅವು ಕಲಿಯುವ ಮತ್ತು ಕಲಿಸುವ ಕೋರ್ಸುಗಳು. ಸ್ಥಳೀಯ ಕೌಶಲ್ಯಯುಕ್ತ ಕುಶಲಕರ್ಮಿಗಳು ಪ್ರಾಯೋಗಿಕ ಪಾಠಗಳನ್ನು ಕಲಿಸುತ್ತಾರೆ. ಆ ಬಳಿಕ  ಈ ಮೂಲಕ  ಎಲ್ಲಾ ಮಾಧ್ಯಮಿಕ ಶಾಲೆಗಳಲ್ಲಿ ಹಂತ ಹಂತವಾಗಿ ಅಕಾಡೆಮಿಕ್ ಶಿಸ್ತುಗಳ ಜೊತೆ  ವೃತ್ತಿ ಶಿಕ್ಷಣವನ್ನು ಬೆಸೆಯುವ, ಸಮಗ್ರಗೊಳಿಸುವ ಗುರಿಯನ್ನು ಹೊಂದಲಾಗಿದೆ. ನಾನಿದನ್ನು ಇಂದು  ನಿಮಗೆ ವಿವರವಾಗಿ ಹೇಳುತ್ತಿದ್ದೇನೆ, ಯಾಕೆಂದರೆ ನಿಮಗೆ ಹೆಚ್ಚು ಅರಿವು ಇದ್ದಷ್ಟು, ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ.

ಸ್ನೇಹಿತರೇ,

ನೀವೆಲ್ಲರೂ ಆತ್ಮನಿರ್ಭರ ಭಾರತ ಆಂದೋಲನದ ನೈಜ ಚುಕ್ಕಾಣಿಗರು.  ಅದು ಎನ್.ಸಿ.ಸಿ. ಇರಲಿ, ಅಥವಾ ಎನ್.ಎಸ್.ಎಸ್. ಅಥವಾ ಇತರ ಯಾವುದೇ ಸಂಘಟನೆ ಇರಲಿ, ನೀವು ದೇಶ ಬಿಕ್ಕಟ್ಟುಗಳನ್ನು ಎದುರಿಸಿದ ಪ್ರತಿಯೊಂದು ಸವಾಲಿನ ಸಂದರ್ಭಗಳಲ್ಲಿಯೂ ನಿಮ್ಮದೇ ಆದ ಪಾತ್ರವನ್ನು ಮೆರೆದಿದ್ದೀರಿ. ಕೊರೊನಾ ಅವಧಿಯಲ್ಲಿ ನೀವು ಸ್ವಯಂಸೇವಕರಾಗಿ ಮಾಡಿದ ಕೆಲಸವನ್ನು ಬರೇ ಪ್ರಶಂಸೆ ಮಾತ್ರದಿಂದ ಅಳೆಯಲಾಗದು. ನೀವು ಸ್ವಯಂಸೇವಕರಾಗಿ ಮುಂದೆ ಬಂದು ಸಹಾಯ ಮಾಡಿದ್ದೀರಿ ಮತ್ತು ದೇಶ ಹಾಗು ಸರಕಾರಕ್ಕೆ ಅವಶ್ಯ ಇದ್ದಾಗ ಆ ವ್ಯವಸ್ಥೆಗಳನ್ನು ಮಾಡಿದಿರಿ. ಆರೋಗ್ಯ ಸೇತು ಆಪ್ ನ್ನು ಜನಸಮೂಹದೆಡೆಗೆ ಕೊಂಡೊಯ್ಯುವುದಿರಲಿ, ಕೊರೊನಾ ಸೋಂಕಿನ ವಿಷಯದಲ್ಲಿ ಇತರ ಮಾಹಿತಿಗಳನ್ನು ನೀಡಿ ಜಾಗೃತಿ ಮೂಡಿಸುವುದಿರಲಿಅಲ್ಲೆಲ್ಲ ನೀವು ಬಹಳ ಶ್ಲಾಘನಾರ್ಹ ಕೆಲಸಗಳನ್ನು ಮಾಡಿದ್ದೀರಿ. ಈ ಕೊರೊನಾ ಅವಧಿಯಲ್ಲಿ ಫಿಟ್ ಇಂಡಿಯಾ ಆಂದೋಲನದ ಮೂಲಕ ದೈಹಿಕ ಕ್ಷಮತೆಗೆ ಸಂಬಂಧಿಸಿ ಜಾಗೃತಿ ಮೂಡಿಸುವಲ್ಲಿ ನಿಮ್ಮ ಪಾತ್ರ ಬಹಳ ಮಹತ್ವವಾದುದು.

ಸ್ನೇಹಿತರೇ,

ನೀವು ಇದುವರೆಗೆ ಏನು ಮಾಡಿದ್ದೀರೋ ಅದನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯುವ ಕಾಲ ಈಗ ಬಂದಿದೆ. ಮತ್ತು ನಾನು ಇದನ್ನು ನಿಮಗೆ ಹೇಳುತ್ತಿದ್ದೇನೆ ಯಾಕೆಂದರೆ ನಿಮಗೆ ದೇಶದ ಯಾವ ಭಾಗದಲ್ಲಿ ಬೇಕಾದರೂ ಸಂಪರ್ಕ ಇದೆ, ಪ್ರತೀ ಸಮಾಜವೂ ನಿಮಗೆ ತಿಳಿದಿದೆ. ಆದುದರಿಂದ ಈಗ ನಡೆಯುತ್ತಿರುವ ಕೊರೊನಾ ಲಸಿಕೆ ಆಂದೋಲನದಲ್ಲಿ ಸಹಾಯ ಮಾಡಲು ಮುಂದೆ ಬರಬೇಕು ಎಂದು ನಾನು ಮನವಿ ಮಾಡುತ್ತೇನೆ. ನೀವು ದೇಶದ  ಬಡವರಲ್ಲಿ ಬಡವರಿಗೆ ಮತ್ತು ಜನಸಾಮಾನ್ಯ ನಾಗರಿಕರಿಗೆ ಲಸಿಕೆ ಕುರಿತ ಸರಿಯಾದ ಮಾಹಿತಿಯನ್ನು ಒದಗಿಸಬೇಕು. ಭಾರತದ ವಿಜ್ಞಾನಿಗಳು ಕೊರೊನಾ ಲಸಿಕೆಯನ್ನು ಅಭಿವೃದ್ಧಿ ಮಾಡುವ ಮೂಲಕ ತಮ್ಮ ಕರ್ತವ್ಯ ಮಾಡಿದ್ದಾರೆ. ಈಗ ನಾವು ನಮ್ಮ ಕರ್ತವ್ಯ ಮಾಡಬೇಕಾಗಿದೆ. ಸುಳ್ಳುಗಳನ್ನು ಹರಡುವ ಪ್ರತೀ ವ್ಯವಸ್ಥೆಯನ್ನೂ ಮತ್ತು ಗಾಳಿ ಸುದ್ದಿಗಳನ್ನು ಹರಡುವ ವ್ಯವಸ್ಥೆಯನ್ನು ನಾವು ಸರಿಯಾದ ಮಾಹಿತಿ ನೀಡುವ ಮೂಲಕ ಸೋಲಿಸಬೇಕಾಗಿದೆ. ನಾವು ನಮ್ಮ ಗಣರಾಜ್ಯ ಬಲಿಷ್ಟವಾಗಿದೆ, ಅದು ಕರ್ತವ್ಯದ ಸ್ಪೂರ್ತಿಗೆ ಬದ್ಧವಾಗಿದೆ ಎಂಬುದನ್ನು ನೆನಪಿಸಿಕೊಳ್ಳಬೇಕು. ಈ ಸ್ಪೂರ್ತಿಯನ್ನು ನಾವು ಬಲಿಷ್ಟಗೊಳಿಸಬೇಕು. ಇದು ನಮ್ಮ ಗಣತಂತ್ರವನ್ನು ಬಲಿಷ್ಟಗೊಳಿಸುತ್ತದೆ ಮತ್ತು ಸ್ವಾವಲಂಬನೆಯ ನಮ್ಮ ನಿರ್ಧಾರವನ್ನು ಕೃತಿ ರೂಪಕ್ಕೆ ತರಲು ಸಹಾಯ ಮಾಡುತ್ತದೆ. ನಿಮಗೆಲ್ಲರಿಗೂ ಪ್ರಮುಖವಾದಂತಹ ಈ ರಾಷ್ಟ್ರೀಯ ಹಬ್ಬದಲ್ಲಿ ಭಾಗವಹಿಸುವಂತಹ ಅವಕಾಶ ಲಭಿಸಿದೆ. ಪರಸ್ಪರ ಮನಸ್ಸುಗಳನ್ನು ಬೆಸೆಯುವ, ದೇಶವನ್ನು ತಿಳಿಯುವ.  ಮತ್ತು ದೇಶಕ್ಕಾಗಿ ಏನನ್ನಾದರೂ ಮಾಡಲು ಬೇರೆ ಆಚರಣೆಗಳು ಇಲ್ಲ. ಈ ಅವಕಾಶ ನಿಮಗೆ ಸಿಕ್ಕಿದೆ. ನನಗೆ ಖಚಿತವಿದೆ, ಜನವರಿ 26 ರ ಈ ವೈಭವದ ಸಮಾರಂಭ ಮುಗಿಸಿ ನೀವು ನಿಮ್ಮ ಮನೆಗಳಿಗೆ ಮರಳಿದಾಗ, ನೀವು ನಿಮ್ಮೊಂದಿಗೆ ಇಲ್ಲಿಂದ ಹಲವಾರು ಸ್ಮರಣೀಯ ಸಂಗತಿಗಳನ್ನು ಕೊಂಡೊಯ್ಯುತ್ತೀರಿ. ಆದರೆ ಅದೇ ಸಮಯದಲ್ಲಿ ನಾವು ನಮ್ಮ ದೇಶಕ್ಕೆ ಅತ್ಯುತ್ತಮವಾದುದನ್ನೇ ನೀಡಬೇಕು ಎಂಬುದನ್ನು ಎಂದೂ ಮರೆಯಬೇಡಿ. ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು.

ಬಹಳ ಬಹಳ ಧನ್ಯವಾದಗಳು!.

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ, ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***



(Release ID: 1692606) Visitor Counter : 181