ಪ್ರಧಾನ ಮಂತ್ರಿಯವರ ಕಛೇರಿ

ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿಯವರ ಭಾಷಣ

Posted On: 19 NOV 2020 12:01PM by PIB Bengaluru

ನಮಸ್ತೆ,

ನನ್ನ ಸಂಪುಟ ಸಹೋದ್ಯೋಗಿ ಶ್ರೀ ರವಿಶಂಕರ್ ಪ್ರಸಾದ್ ಅವರೇ, ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರೇ ಮತ್ತು ತಂತ್ರಜ್ಞಾನ ಲೋಕದ ನನ್ನ ಎಲ್ಲ ಆತ್ಮೀಯ ಸ್ನೇಹಿತರೇ. ತಂತ್ರಜ್ಞಾನದ ನೆರವಿನಿಂದ ತಂತ್ರಜ್ಞಾನವನ್ನು ಕುರಿತ ಮಹತ್ವದ ಶೃಂಗಸಭೆಯನ್ನು ಆಯೋಜಿಸುತ್ತಿರುವುದು ಬಹಳ ಸೂಕ್ತವಾಗಿದೆ.

ಸ್ನೇಹಿತರೇ, ನಾವು ಐದು ವರ್ಷಗಳ ಹಿಂದೆ ಡಿಜಿಟಲ್ ಇಂಡಿಯಾ ಅಭಿಯಾನ ಪ್ರಾರಂಭಿಸಿದೆವು. ಇಂದು, ಡಿಜಿಟಲ್ ಇಂಡಿಯಾವನ್ನು ಸರ್ಕಾರದ ಯಾವುದೇ ಒಂದು ಸಾಮಾನ್ಯ ಉಪಕ್ರಮವಾಗಿ ನೋಡಲಾಗುತ್ತಿಲ್ಲ ಎಂದು ಹೇಳಲು ನನಗೆ ಸಂತೋಷವಾಗುತ್ತಿದೆ. ಡಿಜಿಟಲ್ ಇಂಡಿಯಾ ವಿಶೇಷವಾಗಿ, ಬಡವರಿಗೆ, ಹಿಂದುಳಿದವರಿಗೆ ಮತ್ತು ಸರ್ಕಾರದಲ್ಲಿರುವವರಿಗೆ ಒಂದು ಜೀವನ ವಿಧಾನವಾಗಿದೆ. ಡಿಜಿಟಲ್ ಇಂಡಿಯಾದಿಂದಾಗಿ, ನಮ್ಮ ರಾಷ್ಟ್ರವು ಮಾನವ ಕೇಂದ್ರಿತ ಅಭಿವೃದ್ಧಿ ವಿಧಾನವನ್ನು ಕಂಡಿದೆ. ಬೃಹತ್ ಪ್ರಮಾಣದಲ್ಲಿ ತಂತ್ರಜ್ಞಾನವನ್ನು ಬಳಸುತ್ತಿರುವುದರಿಂದ ನಾಗರಿಕರು ಹಲವಾರು ಬದಲಾವಣೆಗಳನ್ನು ಕಂಡಿದ್ದಾರೆ ಮತ್ತು ಇದರ ಪ್ರಯೋಜನಗಳು ಎಲ್ಲರಿಗೂ ಸ್ಪಷ್ಟವಾಗಿ ಗೋಚರಿಸುತ್ತಿವೆ.

ನಮ್ಮ ಸರ್ಕಾರವು ಡಿಜಿಟಲ್ ಮತ್ತು ತಂತ್ರಜ್ಞಾನಗಳ ಮಾರುಕಟ್ಟೆಯನ್ನು ಸೃಷ್ಟಿಸಿರುವುದು ಮಾತ್ರವಲ್ಲ, ಇದನ್ನು ಎಲ್ಲಾ ಯೋಜನೆಗಳ ಪ್ರಮುಖ ಭಾಗವನ್ನಾಗಿ ಮಾಡಿದೆ. ತಂತ್ರಜ್ಞಾನವೇ ಮೊದಲು ಎಂಬುದು ತಮ್ಮ ಆಡಳಿತ ಮಾದರಿಯಾಗಿದ್ದು, ತಂತ್ರಜ್ಞಾನದ ಮೂಲಕ ಕೋಟ್ಯಂತರ ರೈತರು ಒಂದೇ ಕ್ಲಿಕ್ನಲ್ಲಿ ಹಣಕಾಸು ನೆರವು ಪಡೆಯುತ್ತಿದ್ದಾರೆ. ಕಟ್ಟುನಿಟ್ಟಾದ ಲಾಕ್ಡೌನ್ಸಂದರ್ಭದಲ್ಲಿಯೂ ತಂತ್ರಜ್ಞಾನದಿಂದಾಗಿ ಭಾರತದ ಬಡವರು ಸೂಕ್ತ ಮತ್ತು ತ್ವರಿತ ನೆರವು ಪಡೆಯಲು ಸಾಧ್ಯವಾಯಿತು. ಇಷ್ಟೊಂದು ಬೃಹತ್ ಪ್ರಮಾಣದ ಪರಿಹಾರ ಕಾರ್ಯಗಳಿಗೆ ಸಮನಾಗಿರುವ ಯೋಜನೆಗಳು ಬಹಳಷ್ಟು ಇಲ್ಲ. ತಂತ್ರಜ್ಞಾನದಿಂದಾಗಿ ವಿಶ್ವದ ಅತಿದೊಡ್ಡ ಆರೋಗ್ಯ ಯೋಜನೆಯಾದ ಆಯುಷ್ಮಾನ್ ಭಾರತ್ ಅನ್ನು ಯಶಸ್ವಿಯಾಗಿ ನಿರ್ವಹಿಸಲಾಗುತ್ತಿದೆ. ಯೋಜನೆ ಭಾರತದ ಬಡವರಿಗೆ ವಿಶೇಷವಾಗಿ ಸಹಾಯ ಮಾಡಿದೆ. ಅವರು ಇನ್ನು ಮುಂದೆ ಭಾರತದ ಯಾವುದೇ ಭಾಗದಲ್ಲಿ ಉತ್ತಮ ಗುಣಮಟ್ಟದ ಮತ್ತು ಕೈಗೆಟುಕುವ ಆರೋಗ್ಯ ಸೇವೆಯನ್ನು ಪಡೆಯಬಹುದು.

ಸೇವೆಯ ಉತ್ತಮ ವಿತರಣೆ ಮತ್ತು ದಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಮ್ಮ ಸರ್ಕಾರವು ಡೇಟಾ ವಿಶ್ಲೇಷಣೆಯ ಬಲವನ್ನು ಬಳಸಿದೆ. ಸುಮಾರು 25 ವರ್ಷಗಳ ಹಿಂದೆ ಭಾರತಕ್ಕೆ ಇಂಟರ್ನೆಟ್ ಬಂದಿತು. ವರದಿಯ ಪ್ರಕಾರ, ಇಂಟರ್ನೆಟ್ ಸಂಪರ್ಕಗಳ ಸಂಖ್ಯೆ ಇತ್ತೀಚೆಗೆ 750 ಮಿಲಿಯನ್ ದಾಟಿದೆ. ಆದರೆ ಇದರಲ್ಲಿ ಅರ್ಧದಷ್ಟು ಸಂಖ್ಯೆಗಳು ಕಳೆದ ನಾಲ್ಕು ವರ್ಷಗಳಲ್ಲಿ ಸೇರಿಕೊಂಡಿವೆ ಎಂದು ನಿಮಗೆ ತಿಳಿದಿದೆಯೇ? ನಮ್ಮ ಯೋಜನೆಗಳು ಕಡತಗಳನ್ನು  ಮೀರಿ, ಜನಜೀವನವನ್ನು ಇಷ್ಟೊಂದು ತ್ವರಿತಗತಿಯಲ್ಲಿ ಮತ್ತು ಪ್ರಮಾಣದಲ್ಲಿ ಬದಲಾಯಿಸಲು ತಂತ್ರಜ್ಞಾನವೇ ಪ್ರಮುಖ ಕಾರಣವಾಗಿದೆ. ಇಂದು, ತ್ವರಿತವಾಗಿ ಮತ್ತು ಪಾರದರ್ಶಕತೆಯಿಂದ ಬಡವರು ತಮ್ಮ ಮನೆಯನ್ನು ನಿರ್ಮಿಸಲು ನಾವು ಸಹಾಯ ಮಾಡಿರುವುದು ತಂತ್ರಜ್ಞಾನದಿಂದ. ಇಂದು, ನಾವು ತಂತ್ರಜ್ಞಾನದಿಂದಾಗಿ ನಾವು ಎಲ್ಲರಿಗೂ ವಿದ್ಯುತ್ ಒದಗಿಸಲು ಸಾಧ್ಯವಾಗಿದೆ, ಟೋಲ್ ಬೂತ್ಗಳನ್ನು ವೇಗವಾಗಿ ದಾಟುತ್ತಿದ್ದೇವೆ, ಕಡಿಮೆ ಅವಧಿಯಲ್ಲಿ ಹೆಚ್ಚು ಜನರಿಗೆ ಲಸಿಕೆ ಹಾಕುವ ವಿಶ್ವಾಸವನ್ನು ತಂತ್ರಜ್ಞಾನ ನಮಗೆ ನೀಡಿದೆ.

ಸ್ನೇಹಿತರೇ, ತಂತ್ರಜ್ಞಾನದ ವಿಷಯಕ್ಕೆ ಬಂದರೆ, ಒಟ್ಟಿಗೆ ಕಲಿಯುವುದು ಮತ್ತು ಬೆಳೆಯುವುದು ಮುಂದಿರುವ ಹಾದಿ. ವಿಧಾನದಿಂದ ಪ್ರೇರಿತರಾಗಿ, ಭಾರತದಲ್ಲಿ ಹಲವಾರು ಇನ್ಕ್ಯುಬೇಶನ್ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ, ಭಾರತದಲ್ಲಿ ಹ್ಯಾಕಥಾನ್ಗಳ ದೊಡ್ಡ ಸಂಸ್ಕೃತಿಯೇ ಬೆಳೆದಿದೆ. ಅವುಗಳಲ್ಲಿ ಕೆಲವಕ್ಕೆ ನಾನೂ ಹೋಗಿದ್ದೇನೆ. ನಮ್ಮ ಯುವ ಮನಸ್ಸುಗಳು ಒಗ್ಗೂಡಿ ನಮ್ಮ ದೇಶ ಮತ್ತು ಭೂಮಿ ಎದುರಿಸುತ್ತಿರುವ ಪ್ರಮುಖ ಸವಾಲುಗಳನ್ನು ಪರಿಹರಿಸುವ ಮಾರ್ಗಗಳ ಬಗ್ಗೆ ಯೋಚಿಸುತ್ತಿವೆ. ಸಿಂಗಾಪುರ ಮತ್ತು ಆಸಿಯಾನ್ ರಾಷ್ಟ್ರಗಳೊಂದಿಗೆ ಸಹಯೋಗಕ್ಕೆ ಇದೇ ರೀತಿಯ ಹ್ಯಾಕಥಾನ್ಗಳು ನೆರವಾಗಿವೆ. ಕೌಶಲ್ಯ ಮತ್ತು ಯಶಸ್ಸಿಗೆ ವಿಶ್ವಪ್ರಸಿದ್ಧವಾಗಿರುವ ನಮ್ಮ ಸ್ಟಾರ್ಟ್ ಅಪ್ ಸಮುದಾಯಕ್ಕೆ ಭಾರತ ಸರ್ಕಾರವು ಬೆಂಬಲ ನೀಡುತ್ತಿದೆ.

ಸ್ನೇಹಿತರೇ, प्रतिकूल परिस्थितियाँ प्रतिभा बाहर का प्रभाव. - ಪ್ರತಿಕೂಲ ಸಂದರ್ಭಗಳು ಪ್ರತಿಭೆಗಳು ಹೊರಹೊಮ್ಮಲು ಕಾರಣವಾಗುತ್ತವೆ- ಎಂಬುದನ್ನು ನಾವು ಕೇಳಿದ್ದೇವೆ. ಸವಾಲುಗಳು ನಮ್ಮಲ್ಲಿನ ಉತ್ತಮವಾದದ್ದನ್ನು ಹೊರತರುತ್ತವೆ. ಬಹುಶಃ ಇದು ಭಾರತದ ಅನೇಕ ಟೆಕ್ಕಿಗಳಿಗೆ ಅನ್ವಯಿಸುತ್ತದೆದೆ. ಗ್ರಾಹಕನ ಒತ್ತಡ ಹೆಚ್ಚಾದಾಗ ಅಥವಾ ಕೆಲಸದ ಗಡುವು ಮುಗಿಯುವ ಸಂದರ್ಭದಲ್ಲಿ ನಿಮಗೆ ಅದರ ಅನುಭವಾವಾಗಿರುತ್ತದೆ. ನಿಮಗೇ ಗೊತ್ತಿಲ್ಲದ ನಿಮ್ಮ ಪ್ರತಿಭೆ ಹೊರಬರಲು ಆರಂಭಿಸುತ್ತದೆ. ಜಾಗತಿಕ ಲಾಕ್ಡೌನ್ಗಳು, ಪ್ರಯಾಣದ ನಿರ್ಬಂಧಗಳು ಜನರನ್ನು ತಮ್ಮ ಕೆಲಸದ ಸ್ಥಳಗಳಿಂದ ದೂರವಿರಿಸಿ ಮನೆಗಗಳಿಗೆ ನಿರ್ಬಂಧಿಸಿದವು. ಅಂತಹ ಸಮಯದಲ್ಲಿ, ನಮ್ಮ ಟೆಕ್ ಕ್ಷೇತ್ರದ ಸ್ಥಿತಿಸ್ಥಾಪಕತ್ವವು ಕಂಡುಬಂತು. ಮನೆಯಿಂದ ಮತ್ತು ಎಲ್ಲಿಂದಲಾದರೂ ಕೆಲಸ ಮುಂದುವರಿಸಲು ತಾಂತ್ರಿಕ ಪರಿಹಾರಗಳನ್ನು ಬಳಸಿತು. ಜನರನ್ನು ಒಟ್ಟುಗೂಡಿಸುವಲ್ಲಿ ಟೆಕ್ ಉದ್ಯಮವು ಒಂದು ಹೊಸ ಆವಿಷ್ಕಾರದ ಅವಕಾಶವನ್ನು ಕಂಡುಕೊಂಡಿತು.

ಕೋವಿಡ್ -19 ಸಾಂಕ್ರಾಮಿಕವು ನಮ್ಮ ಹಾದಿಯಲ್ಲಿನ ಒಂದು ತಿರುವೇ ಹೊರತು ಅಂತ್ಯವಲ್ಲ. ಒಂದು ದಶಕದಲ್ಲಿ ಆಗಿರದ ತಂತ್ರಜ್ಞಾನದ ಅಳವಡಿಕೆ ಕೆಲವೇ ತಿಂಗಳುಗಳಲ್ಲಿ ಸಂಭವಿಸಿದೆ. ಎಲ್ಲಿಂದಲಾದರೂ ಕೆಲಸ ಮಾಡುವುದು ಹೊಸ ರೂಢಿಯಾಗಿದೆ ಮತ್ತು ಅದೇ ಮುಂದುವರೆಯಲಿದೆ. ಶಿಕ್ಷಣ, ಆರೋಗ್ಯ, ಶಾಪಿಂಗ್ ಇತ್ಯಾದಿ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಮಾಣದ ತಂತ್ರಜ್ಞಾನ ಅಳವಡಿಕೆ ಕಂಡುಬರುತ್ತಿದೆ. ಏಕೆಂದರೆ, ಟೆಕ್-ಪ್ರಪಂಚದ ಕೆಲವು ಅದ್ಭುತ ಮನಸ್ಸುಗಳೊಂದಿಗೆ ನೇರವಾಗಿ ತೊಡಗಿಸಿಕೊಳ್ಳಲು ಅವಕಾಶ ನನಗೆ ಸಿಕ್ಕಿದೆ, ನಾನು ವಿಶ್ವಾಸದಿಂದ ಹೇಳಲು ಬಯಸುತ್ತೇನೆ. ನಿಮ್ಮ ಪ್ರಯತ್ನಗಳಿಗೆ ಧನ್ಯವಾದಗಳು, ತಂತ್ರಜ್ಞಾನವನ್ನು ಬಳಸಿಕೊಂಡು ಭೌತಿಕ-ಡಿಜಿಟಲ್ ಸಮನ್ವಯದ ಮೂಲಕ ಬಳಕೆದಾರರ ಅನುಭವವನ್ನು ನಾವು ಖಂಡಿತವಾಗಿಯೂ ಉತ್ತಮಗೊಳಿಸಬಹುದು. ನಾವು ಖಂಡಿತವಾಗಿಯೂ ತಾಂತ್ರಿಕ ಪರಿಕರಗಳನ್ನು ಹೆಚ್ಚು ಬಳಕೆದಾರ ಸ್ನೇಹಿಯನ್ನಾಗಿ ಮಾಡಬಹುದು.

ಸ್ನೇಹಿತರೇ, ಕೈಗಾರಿಕಾ ಯುಗದ ಸಾಧನೆಗಳು ಆಗಿ ಹೋಗಿವೆ. ಈಗ, ನಾವು ಮಾಹಿತಿ ಯುಗದ ಮಧ್ಯದಲ್ಲಿದ್ದೇವೆ. ಭವಿಷ್ಯವು ನಮ್ಮ ನಿರೀಕ್ಷೆಗೂ ಮೊದಲೇ ಬರಲಿದೆ, ನಾವು ಹಳೆ ಕಾಲದ ಚಿಂತನೆಗಳನ್ನು ಬಿಡಬೇಕು. ಕೈಗಾರಿಕಾ ಯುಗದಲ್ಲಿ, ಬದಲಾವಣೆ ಎಂಬುದು ಒಂದೇ ದಿಕ್ಕಿನಲ್ಲಿತ್ತು ಆದರೆ ಮಾಹಿತಿ ಯುಗದಲ್ಲಿ, ಬದಲಾವಣೆಯು ಬಹು ಆಯಾಮದ್ದಾಗಿದೆ ಮತ್ತು ಬೃಹತ್ತಾಗಿದೆ. ಕೈಗಾರಿಕಾ ಯುಗದಲ್ಲಿ ಮೊದಲು ಕಾರ್ಯಪ್ರವೃತ್ತರಾಗುವುದು ಮುಖ್ಯವಾಗಿತ್ತು. ಮಾಹಿತಿ ಯುಗದಲ್ಲಿ ಉತ್ತಮವಾಗಿ ಕಾರ್ಯಪ್ರವೃತ್ತರಾಗುವುದು ಮುಖ್ಯವಾಗಿದೆ ಎಂದು ಅವರು ಒತ್ತಿ ಹೇಳಿದರು. ಯಾರು ಬೇಕಾದರೂ, ಯಾವುದೇ ಸಮಯದಲ್ಲಿ ಮಾರುಕಟ್ಟೆಯಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ಸಮೀಕರಣಗಳನ್ನು ಮುರಿಯುವ ಉತ್ಪನ್ನವನ್ನು ತಯಾರಿಸಬಹುದು.

ಕೈಗಾರಿಕಾ ಯುಗದಲ್ಲಿ, ಗಡಿಗಳು ಮುಖ್ಯವಾಗಿದ್ದವು. ಆದರೆ ಮಾಹಿತಿ ಯುಗವು ಗಡಿಗಳನ್ನು ಮೀರಿದ್ದಾಗಿದೆ. ಕೈಗಾರಿಕಾ ಯುಗದಲ್ಲಿ, ಕಚ್ಚಾ ವಸ್ತುಗಳನ್ನು ಪಡೆಯುವುದು ಒಂದು ಪ್ರಮುಖ ಸವಾಲಾಗಿತ್ತು. ಮತ್ತು ಅದು ಕೆಲವರಿಗೆ ಮಾತ್ರ ಲಭ್ಯವಾಗುತ್ತಿತ್ತು. ಮಾಹಿತಿ ಯುಗದಲ್ಲಿ, ಕಚ್ಚಾ ವಸ್ತುವಾಗಿರುವ ಮಾಹಿತಿಯು, ನಮ್ಮ ಮುಂದೆಯೇ ಎಲ್ಲೆಡೆ ಇದೆ ಮತ್ತು ಪ್ರತಿಯೊಬ್ಬರಿಗೂ ಅದು ಲಭ್ಯವಿದೆ. ಮಾಹಿತಿ ಯುಗದಲ್ಲಿ ಭಾರತವು ಒಂದು ದೇಶವಾಗಿ ವಿಶಿಷ್ಟ ಸ್ಥಾನದಲ್ಲಿದೆ. ಭಾರತವು ಉತ್ತಮ ಬುದ್ಧಿಮತ್ತೆಯವರನ್ನು ಮತ್ತು ದೊಡ್ಡ ಮಾರುಕಟ್ಟೆಯನ್ನು ಹೊಂದಿದೆ. ನಮ್ಮ ಸ್ಥಳೀಯ ತಂತ್ರಜ್ಞಾನಗಳು ಜಾಗತಿಕ ಮಟ್ಟಕ್ಕೇರುವ ಸಾಮರ್ಥ್ಯವನ್ನು ಹೊಂದಿವೆ. ಭಾರತದಲ್ಲಿ ವಿನ್ಯಾಸಗೊಳಿಸಲಾದ ತಂತ್ರಜ್ಞಾನಗಳನ್ನು ಜಗತ್ತಿಗೆ ನಿಯೋಜಿಸುವ ಸಮಯ ಈಗ ಬಂದಿದೆ.

ಸ್ನೇಹಿತರೇ, ನಮ್ಮ ನೀತಿ ನಿರ್ಧಾರಗಳು ಯಾವಾಗಲೂ ತಂತ್ರಜ್ಞಾನ ಮತ್ತು ನಾವೀನ್ಯತೆಗಳ ಉದ್ಯಮವನ್ನು ಉದಾರೀಕರಣಗೊಳಿಸುವ ಗುರಿಯನ್ನು ಹೊಂದಿವೆ. ಇತ್ತೀಚೆಗೆ, ನಾವು ಐಟಿ ಉದ್ಯಮದ ಮೇಲಿನ ಅನುಸರಣೆ ಹೊರೆಯನ್ನು ಸರಾಗಗೊಳಿಸಿದ್ದೇವೆ. ಇದಲ್ಲದೆ, ನಾವು ಯಾವಾಗಲೂ ಟೆಕ್ ಉದ್ಯಮದಲ್ಲಿ ಪಾಲುದಾರರೊಂದಿಗೆ ತೊಡಗಿಸಿಕೊಳ್ಳಲು ಪ್ರಯತ್ನಿಸಿದ್ದೇವೆ ಮತ್ತು ಭಾರತಕ್ಕೆ ಭವಿಷ್ಯದ  ನೀತಿ ಚೌಕಟ್ಟುಗಳನ್ನು ರೂಪಿಸುತ್ತೇವೆ. ನೀವೆಲ್ಲರೂ ಉದ್ಯಮದ ಚಾಲಕರು. ನಮ್ಮ ಉತ್ಪನ್ನ ಮಟ್ಟದ ಆವಿಷ್ಕಾರಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಪ್ರಜ್ಞಾಪೂರ್ವಕ ಪ್ರಯತ್ನವನ್ನು ನಾವು ಮಾಡಬಹುದೇ? ಚೌಕಟ್ಟಿನ ಮಟ್ಟದ ಮನೋಭಾವವು ಅನೇಕ ಯಶಸ್ವಿ ಉತ್ಪನ್ನಗಳ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಸಾಮರ್ಥ್ಯವನ್ನು ಹೊಂದಿದೆ. ಒಂದು ಚೌಕಟ್ಟನ್ನು ಸೃಷ್ಟಿಸುವುದು ಅನೇಕರಿಗೆ ಮೀನು ಹಿಡಿಯಲು ಕಲಿಸಿದಂತೆ ಮತ್ತು ಮೀನುಗಾರಿಕೆಗೆ ಬಲೆ ಮತ್ತು ಮೀನುಗಳಿರುವ ಸರೋವರವನ್ನು ಅವರಿಗೆ ಒದಗಿಸಿದಂತೆ!

ಚೌಕಟ್ಟಿನ-ಮಟ್ಟದ ಮನಸ್ಥಿತಿಯ ಒಂದು ಉದಾಹರಣೆಯೆಂದರೆ ಯುಪಿಐ. ಸಾಂಪ್ರದಾಯಿಕ ಉತ್ಪನ್ನ-ಮಟ್ಟದ ಚಿಂತನೆಯು ನಾವು ಕೇವಲ ಡಿಜಿಟಲ್ ಪಾವತಿ ಉತ್ಪನ್ನವನ್ನು ಸೃಷ್ಟಿಸುತ್ತೇವೆ ಎಂದುಕೊಂಡಿತ್ತು. ಬದಲಾಗಿ, ನಾವು ಪ್ರತಿಯೊಬ್ಬರೂ ತಮ್ಮ ಡಿಜಿಟಲ್ ಪಾವತಿ ಉತ್ಪನ್ನಗಳನ್ನು ಮತ್ತು ಪ್ಲಗ್-ಇನ್ ಡಿಜಿಟಲ್ ಪಾವತಿಗಳನ್ನು ಹೋಸ್ಟ್ ಮಾಡಬಹುದಾದ ಯುಪಿಐ ಅನ್ನು ಭಾರತಕ್ಕೆ ನೀಡಿದ್ದೇವೆ. ಇದು ಅನೇಕ ಉತ್ಪನ್ನಗಳ ಸಬಲೀಕರಣಕ್ಕೆ ಕಾರಣವಾಯಿತು. ಕಳೆದ ತಿಂಗಳು 2 ಬಿಲಿಯನ್ ಗೂ ಹೆಚ್ಚಿನ ವಹಿವಾಟುಗಳನ್ನು ದಾಖಲಿಸಿದೆ. ನಾವು ಇದೇ ಮಾದರಿಯಲ್ಲಿ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ನಲ್ಲೂ ಮಾಡುತ್ತಿದ್ದೇವೆ. ನೀವು ಸ್ವಾಮಿತ್ವ ಯೋಜನೆಯ ಬಗ್ಗೆ ಕೇಳಿರಬಹುದು. ಇದು ನಮ್ಮ ಗ್ರಾಮೀಣ ಪ್ರದೇಶದ ಲಕ್ಷಾಂತರ ಜನರಿಗೆ ಭೂಮಿಯ ಹಕ್ಕು ಪತ್ರಗಳನ್ನು ನೀಡುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಡ್ರೋನ್ಗಳಂತಹ ತಂತ್ರಜ್ಞಾನದ ಮೂಲಕವೂ ಇದನ್ನು ಸಾಧಿಸಲಾಗುವುದು. ಇದು ಅನೇಕ ವಿವಾದಗಳನ್ನು ಕೊನೆಗೊಳಿಸುವುದಲ್ಲದೆ ಜನರನ್ನು ಸಶಸಕ್ತಗೊಳಿಸುತ್ತದೆ. ಆಸ್ತಿ ಹಕ್ಕುಗಳನ್ನು ನೀಡಿದ ನಂತರ, ತಂತ್ರಜ್ಞಾನದ ಪರಿಹಾರಗಳು ಸಮೃದ್ಧಿಯನ್ನು ಖಚಿತಪಡಿಸುತ್ತವೆ.

ಸ್ನೇಹಿತರೇ, ರಕ್ಷಣಾ ಕ್ಷೇತ್ರದ ವಿಕಸನಕ್ಕೆ ತಂತ್ರಜ್ಞಾನವು ವೇಗವನ್ನು ಒದಗಿಸುತ್ತಿದೆ. ಹಿಂದೆ ಯಾರು ಉತ್ತಮ ಕುದುರೆ ಮತ್ತು ಆನೆಗಳನ್ನು ಹೊಂದಿದ್ದಾರೆ ಎಂಬುದರ ಮೇಲೆ ಯುದ್ಧಗಳ ಗೆಲುವು ನಿರ್ಧಾರವಾಗುತ್ತಿತ್ತು.  ನಂತರ ಸಿಡಿಗುಂಡುಗಳ ಯುಗ ಬಂದಿತು. ಈಗ, ಜಾಗತಿಕ ಸಂಘರ್ಷಗಳಲ್ಲಿ ತಂತ್ರಜ್ಞಾನವು ಬಹಳ ಮುಖ್ಯ ಪಾತ್ರ ವಹಿಸುತ್ತಿದೆ. ಸಾಫ್ಟ್ವೇರ್ನಿಂದ ಡ್ರೋನ್‌, ಯುಎವಿಗಳವರೆಗೆ ತಂತ್ರಜ್ಞಾನವು ರಕ್ಷಣಾ ಕ್ಷೇತ್ರವನ್ನು ಮರು ವ್ಯಾಖ್ಯಾನಿಸಿದೆ.

ಸ್ನೇಹಿತರೇ, ತಂತ್ರಜ್ಞಾನ ಬಳಕೆಯನ್ನು ಹೆಚ್ಚಿಸುತ್ತಿರುವುದರಿಂದ  ಡೇಟಾ ಸಂರಕ್ಷಣೆ ಮತ್ತು ಸೈಬರ್ ಸುರಕ್ಷತೆಯು ಅಗತ್ಯವಾಗಿದೆ. ಸೈಬರ್ ದಾಳಿ ಮತ್ತು ವೈರಸ್ಗಳ ವಿರುದ್ಧ ಡಿಜಿಟಲ್ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ಬಳಸುವ ಸೈಬರ್ ಭದ್ರತಾ ಪರಿಹಾರಗಳನ್ನು ರೂಪಿಸುವಲ್ಲಿ ಯುವಕರು ಪ್ರಮುಖ ಪಾತ್ರ ವಹಿಸಬೇಕು. ಇಂದು ನಮ್ಮ ಹಣಕಾಸು ತಂತ್ರಜ್ಞಾನ ಉದ್ಯಮವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಲಕ್ಷಾಂತರ ಜನರು ಯಾವುದೇ ಹಿಂಜರಿಕೆಯಿಲ್ಲದೆ ವಹಿವಾಟು ನಡೆಸುತ್ತಿದ್ದಾರೆ. ಇದು ಜನರ ಇಟ್ಟಿರುವ ನಂಬಿಕೆಯಿಂದಾಗಿ, ಅದನ್ನು ಸಂರಕ್ಷಿಸುವುದು ಮತ್ತು ಬಲಪಡಿಸುವುದು ಬಹಳ ಮುಖ್ಯವಾಗಿದೆ. ಉತ್ತಮ ಡೇಟಾ ಆಡಳಿತ ಚೌಕಟ್ಟು ಸಹ ನಮ್ಮ ಆದ್ಯತೆಯಾಗಿದೆ.

ಸ್ನೇಹಿತರೇ, ಇಂದು ನಾನು ಮುಖ್ಯವಾಗಿ ಮಾಹಿತಿ ತಂತ್ರಜ್ಞಾನದತ್ತ ಗಮನಹರಿಸಿದ್ದರೂ, ನಾವೀನ್ಯತೆಯ ವ್ಯಾಪ್ತಿ ಮತ್ತು ಅಗತ್ಯವು ವಿಜ್ಞಾನ ಕ್ಷೇತ್ರಗಳಲ್ಲಿಯೂ ಸಹ ಪ್ರಸ್ತುತವಾಗಿದೆ. ಜೈವಿಕ ವಿಜ್ಞಾನ, ಎಂಜಿನಿಯರಿಂಗ್ ಮುಂತಾದ ವಿಜ್ಞಾನ ಕ್ಷೇತ್ರಗಳಲ್ಲಿ ನಾವೀನ್ಯತೆಯ ವ್ಯಾಪ್ತಿ ಮತ್ತು ಅವಶ್ಯಕತೆ ಪ್ರಸ್ತುತವಾಗಿದೆ. ನಾವೀನ್ಯತೆಯು ಪ್ರಗತಿಗೆ ಮುಖ್ಯವಾಗಿದೆ. ಪ್ರತಿಭಾವಂತ ಯುವಜನರು ಮತ್ತು ಅವರ ಉತ್ಸಾಹದಿಂದಾಗಿ ನಾವೀನ್ಯತೆಯ ವಿಷಯದಲ್ಲಿ ಭಾರತಕ್ಕೆ ಸ್ಪಷ್ಟವಾದ ಪ್ರಯೋಜನವಿದೆ. ನಮ್ಮ ಯುವಕರ ಸಾಮರ್ಥ್ಯ ಮತ್ತು ತಂತ್ರಜ್ಞಾನದ ಸಾಧ್ಯತೆಗಳಿಗೆ ಕೊನೆಯೆಂಬುದಿಲ್ಲ. ನಮ್ಮಲ್ಲಿರುವ ಅತ್ಯುತ್ತಮವಾದುದನ್ನು ನೀಡಲು ಮತ್ತು ಅವುಗಳ ಪ್ರಯೋಜನ ಪಡೆಯಲು ಇದು ಸುಸಮಯವಾಗಿದೆ. ನಮ್ಮ ಮಾಹಿತಿ ತಂತ್ರಜ್ಞಾನ ಕ್ಷೇತ್ರವು ನಮ್ಮನ್ನು ಹೆಮ್ಮೆಪಡುವಂತೆ ಮಾಡುತ್ತದೆ ಎಂಬ ಭರವಸೆ ನನಗಿದೆ.

ಧನ್ಯವಾದಗಳು.

***



(Release ID: 1674010) Visitor Counter : 244