ಪ್ರಧಾನ ಮಂತ್ರಿಯವರ ಕಛೇರಿ

ಶ್ರೀ ಗುರುನಾನಕ್ ದೇವ್ ಜಿ ಬೋಧಿಸಿದ ಮೌಲ್ಯಗಳು ಮತ್ತು ತತ್ವಗಳನ್ನು ಎತ್ತಿಹಿಡಿಯಲು ಪ್ರಧಾನಮಂತ್ರಿ ಕರೆ

Posted On: 09 NOV 2019 1:56PM by PIB Bengaluru

ಶ್ರೀ ಗುರುನಾನಕ್ ದೇವ್ ಜಿ ಬೋಧಿಸಿದ ಮೌಲ್ಯಗಳು ಮತ್ತು ತತ್ವಗಳನ್ನು ಎತ್ತಿಹಿಡಿಯಲು ಪ್ರಧಾನಮಂತ್ರಿ ಕರೆ


ಶ್ರೀ ಗುರುನಾನಕ್ ದೇವ್ ಜಿ ಅವರ 550ನೇ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸ್ಮಾರಕ ನಾಣ್ಯ ಬಿಡುಗಡೆ ಮತ್ತು ಕರ್ತಾರ್ ಪುರ್ ಕಾರಿಡಾರ್  ಉದ್ಘಾಟನಾ ಸಮಾರಂಭದಲ್ಲಿ ಭಾಗಿ   
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶ್ರೀ ಗುರುನಾನಕ್ ದೇವ್ ಜಿ ಅವರು ಬೋಧಿಸಿದ ಮೌಲ್ಯಗಳು ಮತ್ತು ತತ್ವಗಳನ್ನು ಎತ್ತಿಹಿಡಿಯುವಂತೆ ಕರೆ ನೀಡಿದರು. ಅವರು ಡೇರಾ ಬಾಬಾ ನಾನಕ್ ನಲ್ಲಿ ಆಯೋಜಿಸಿದ್ದ ಸಮಗ್ರ ತಪಾಸಣಾ ಕೇಂದ್ರ(ಐಸಿಪಿ) ಮತ್ತು ಕರ್ತಾರ್ ಪುರ್ ಕಾರಿಡಾರ್ ಉದ್ಘಾಟನೆಯ ವಿಶೇಷ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಅವರು ಶ್ರೀ ಗುರುನಾನಕ್ ದೇವ್ ಜಿ ಅವರ 550ನೇ ಜನ್ಮದಿನಾಚರಣೆ ನೆನಪಿಗಾಗಿ ನಾಣ್ಯವನ್ನು ಬಿಡುಗಡೆ ಮಾಡಿದರು. 

ಭಾರೀ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಪವಿತ್ರ ಕ್ಷೇತ್ರ ಡೇರಾ ಬಾಬಾ ನಾನಕ್ ನಲ್ಲಿ ಕರ್ತಾರ್ ಪುರ್ ಕಾರಿಡಾರ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸುತ್ತಿರುವುದು ತಮಗೆ ಹೆಮ್ಮೆ ಎನಿಸುತ್ತಿದೆ ಎಂದರು. 

ಇದಕ್ಕೂ ಮುನ್ನ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ ಪ್ರಧಾನಮಂತ್ರಿ ಅವರಿಗೆ, ‘ಕ್ವಾಮಿ ಸೇವಾ ಪ್ರಶಸ್ತಿ’ಯನ್ನು ನೀಡಿ ಗೌರವಿಸಿತು. ಪ್ರಧಾನಮಂತ್ರಿ ಅವರು ಈ ಗೌರವವನ್ನು ಶ್ರೀ ಗುರುನಾನಕ್ ದೇವ್ ಜಿ ಅವರ ಪಾದ ಕಮಲಗಳಿಗೆ ಅರ್ಪಿಸುವುದಾಗಿ ಹೇಳಿದರು. 

ಪ್ರಧಾನಮಂತ್ರಿ ಅವರು, 550ನೇ ಶ್ರೀ ಗುರುನಾನಕ್ ಜಯಂತಿ ಸಂದರ್ಭದಲ್ಲಿ ಐಸಿಪಿ ಮತ್ತು ಕರ್ತಾರ್ ಪುರ್ ಕಾರಿಡಾರ್ ಉದ್ಘಾಟಿಸುತ್ತಿರುವುದು ದೇವ್ ಜಿ ಅವರ ಆಶೀರ್ವಾದದಿಂದ, ಇದರಿಂದಾಗಿ ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್ ಗೆ ಬೆಳೆಸುವ ಪ್ರಯಾಣದ ಅವಧಿ ತಗ್ಗಲಿದೆ ಎಂದರು.

ಪ್ರಧಾನಮಂತ್ರಿಗಳು ಎಸ್ ಜಿ ಪಿ ಸಿ ಮತ್ತು ಪಂಜಾಬ್ ಸರ್ಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು ಮತ್ತು ಗಡಿಯುದ್ಧಕ್ಕೂ ಯಾತ್ರಾರ್ಥಿಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ದಾಖಲೆಯ ಅವಧಿಯಲ್ಲಿ ಕಾರಿಡಾರ್ ನಿರ್ಮಿಸಿದವರಿಗೂ ಸಹ ಪ್ರಧಾನಮಂತ್ರಿ ಕೃತಜ್ಞತೆ ಸಲ್ಲಿಸಿದರು. ಅಲ್ಲದೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರಿಗೂ ಹಾಗೂ ಗಡಿಯ ಇನ್ನೊಂದು ಭಾಗದಲ್ಲಿ ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ  ಅಭಿನಂದನೆ ಸಲ್ಲಿಸಿದರು. 

ಶ್ರೀ ಗುರುನಾನಕ್ ದೇವ್ ಜಿ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಸ್ಫೂರ್ತಿ ತುಂಬುವವರು ಎಂದು ಪ್ರಧಾನಮಂತ್ರಿ ಬಣ್ಣಿಸಿದರು. ಶ್ರೀ ಗುರುನಾನಕ್ ದೇವ್ ಜಿ ಅವರು ಕೇವಲ ಗುರುಗಳಲ್ಲ, ಅವರೊಂದು ಸಿದ್ಧಾಂತ ಮತ್ತು ಜೀವನಕ್ಕೆ ಅವರು ಆಧಾರಸ್ಥಂಬ ಎಂದು ಪ್ರಧಾನಿ ಹೇಳಿದರು

ಶ್ರೀ ಗುರುನಾನಕ್ ದೇವ್ ಜಿ ಅವರು ನೈಜ ಮೌಲ್ಯಗಳೊಂದಿಗೆ ಬದುಕುವ ಪ್ರಾಮುಖ್ಯತೆಗಳನ್ನು ನಮಗೆ ಬೋಧಿಸಿದರು ಮತ್ತು ಪ್ರಾಮಾಣಿಕತೆ ಹಾಗೂ ಆತ್ಮವಿಶ್ವಾಸ ಆಧರಿಸಿದ ಆರ್ಥಿಕ ವ್ಯವಸ್ಥೆಯನ್ನು ನಮಗೆ ತಿಳಿಸಿಕೊಟ್ಟರು ಎಂದರು. 

ಶ್ರೀ ಗುರುನಾನಕ್ ದೇವ್ ಜಿ ಅವರು ನಮಗೆ ಸಮಾಜದಲ್ಲಿ, ಸಮಾನತೆ, ಸಹೋದರತೆ ಮತ್ತು ಏಕತೆಯನ್ನು ಬೋಧಿಸಿದರು ಮತ್ತು ಹಲವು ಸಾಮಾಜಿಕ ಪಿಡುಗುಗಳನ್ನು ತೊಡೆದು ಹಾಕಲು ಅವರು ಹೋರಾಟ ನಡೆಸಿದ್ದರು ಎಂದು ಪ್ರಧಾನಿ ಹೇಳಿದರು. 

ಶ್ರೀ ಗುರುನಾನಕ್ ದೇವ್ ಜಿ ಅವರ ದಿವ್ಯ ತೇಜಸ್ಸತು ತುಂಬಿರುವ ಅತ್ಯಂತ ಪವಿತ್ರ ಸ್ಥಳ ಕರ್ತಾರ್ ಪುರ್ ಎಂದು ಬಣ್ಣಿಸಿದ ಪ್ರಧಾನಮಂತ್ರಿ ಈ ಕಾರಿಡಾರ್ ಸಹಸ್ರಾರು ಭಕ್ತರು ಮತ್ತು ಯಾತ್ರಾರ್ಥಿಗಳಿಗೆ ನೆರವಾಗಲಿದೆ ಎಂದರು.

ಪ್ರಧಾನಮಂತ್ರಿ ಅವರು ಕಳೆದ ಐದು ವರ್ಷಗಳಿಂದೀಚೆಗೆ ತಮ್ಮ ಸರ್ಕಾರ, ದೇಶದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದರು. ಶ್ರೀ ಗುರುನಾನಕ್ ದೇವ್ ಜಿ ಅವರ 550ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ದೇಶಾದ್ಯಂತ ಮತ್ತು ವಿಶ್ವದಲ್ಲಿ ನಮ್ಮ ರಾಯಭಾರ ಕಚೇರಿಗಳ ಮೂಲಕ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಪ್ರಧಾನಮಂತ್ರಿ ಹೇಳಿದರು.

ಅವರು ದೇಶಾದ್ಯಂತ 350ನೇ ಗುರು ಗೋವಿಂದ ಸಿಂಗ್ ಜನ್ಮದಿನವನ್ನು ಆಚರಿಸಿದ್ದನ್ನು ನೆನಪು ಮಾಡಿಕೊಂಡರು ಮತ್ತು ಗುರು ಗೋವಿಂದ ಸಿಂಗ್ ಜಿ ಅವರ ಗೌರವಾರ್ಥ ಗುಜರಾತ್ ನ ಜಾಮ್ ನಗರದಲ್ಲಿ 750 ಹಾಸಿಗೆಗಳ ಆಧುನಿಕ ಆಸ್ಪತ್ರೆ ನಿರ್ಮಿಸಲಾಗಿದೆ ಎಂದು ಉಲ್ಲೇಖಿಸಿದರು. 

ಯುನೆಸ್ಕೋ ಸಹಕಾರದೊಂದಿಗೆ ಗುರುವಾಣಿಯನ್ನು ವಿಶ್ವದ ಇತರೆ ಭಾಷೆಗಳಿಗೆ ಭಾಷಾಂತರ ಮಾಡಲಾಗುತ್ತಿದ್ದು, ಅದರಿಂದ ಯುವ ಜನರಿಗೆ ಅನುಕೂಲವಾಗಲಿದೆ ಎಂದು ಪ್ರಧಾನಿ ಅವರು ಹೇಳಿದರು. ಸುಲ್ತಾನ್ ಪುರ್ ಲೋಧಿಯನ್ನು ಪಾರಂಪರಿಕ ನಗರವನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಉಲ್ಲೇಖಿಸಿದ ಅವರು, ಶ್ರೀ ಗುರುನಾನಕ್ ದೇವ್ ಜಿ ಅವರಿಗೆ ಸಂಬಂಧಿಸಿದ ಎಲ್ಲ ಸ್ಥಳಗಳಿಗೆ ಸಂಪರ್ಕ ಕಲ್ಪಿಸಲು ವಿಶೇಷ ರೈಲು ಸೇವೆ ಆರಂಭಿಸಲಾಗಿದೆ ಎಂದು ಸಹ ಹೇಳಿದರು. ಶ್ರೀ ಅಕಲ್ ತಕ್ಥ್, ಧಮ್ ದಾಮಾ ಸಾಹೀಬ್, ತೇಜ್ ಪುರ್ ಸಾಹೀಬ್, ಕೇಶ್ ಘರ್ ಸಾಹೀಬ್, ಪಾಟ್ನಾ ಸಾಹೀಬ್ ಮತ್ತು ಹುಜೂರ್ ಸಾಹೀಬ್ ಗಳಿಗೆ ರೈಲು ಹಾಗೂ ರಸ್ತೆ ಸಂಪರ್ಕವನ್ನು ಬಲವರ್ಧನೆಗೊಳಿಸಲಾಗಿದೆ ಹಾಗೂ ಅಮೃತ್ ಸರ್ ಮತ್ತು ನಾಂದೇಡ್ ನಡುವೆ ವಿಶೇಷ ವಿಮಾನ ಸಂಚಾರ ಸೇವೆಯನ್ನು ಆರಂಭಿಸಲಾಗಿದೆ. ಅದೇ ರೀತಿ ಅಮೃತ್ ಸರದಿಂದ ಲಂಡನ್ ಗೆ ಏರ್ ಇಂಡಿಯಾ ವಿಶೇಷ ವಿಮಾನ ಆರಂಭಿಸಿದ್ದು, ಅದರಲ್ಲಿ ಓಂಕಾರ ಸಂದೇಶವನ್ನು ಪ್ರಸಾರ ಮಾಡಲಾಗುತ್ತದೆ.

ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಅದರಿಂದ ಜಗತ್ತಿನೆಲ್ಲೆಡೆ ಇರುವ ಹಲವು ಸಿಖ್ ಕುಟುಂಬಗಳಿಗೆ ಅನುಕೂಲವಾಗಿದೆ. ಹಲವು ವರ್ಷಗಳಿಂದ ವಿದೇಶದಲ್ಲಿ ನೆಲೆಸಿರುವವರು ಭಾರತಕ್ಕೆ ಬಂದಾಗ ಆಗುವ ಅಡೆತಡೆಗಳನ್ನು ನಿವಾರಿಸಲಾಗಿದೆ. ಇದೀಗ  ಹಲವು ಕುಟುಂಬಗಳು ವೀಸಾ ಮತ್ತು ಒಸಿಐ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಬಹುದು. ಅವರು ಭಾರತದಲ್ಲಿನ ತಮ್ಮ ಸಂಬಂಧಿಗಳನ್ನು ಸುಲಭವಾಗಿ ಭೇಟಿ ಮಾಡಬಹುದು ಮತ್ತು ಯಾತ್ರಾ ಕೇಂದ್ರಗಳಿಗೆ ಭೇಟಿ ನೀಡಬಹುದು.

ಕೇಂದ್ರ ಸರ್ಕಾರದ ಮತ್ತೆರಡು ನಿರ್ಧಾರಗಳಿಂದ ಸಿಖ್ ಕುಟುಂಬಗಳಿಗೆ ಅನುಕೂಲವಾಗಿದೆ ಎಂದು  ಅವರು ಹೇಳಿದರು. ಅದರಲ್ಲಿ ಒಂದು ಸಂವಿಧಾನದ ಕಲಂ 370 ರದ್ದುಗೊಳಿಸಿರುವುದು. ಇದರಿಂದಾಗಿ ಜಮ್ಮು ಮತ್ತು ಕಾಶ್ಮೀರ್ ಹಾಗೂ ಲೇಹ್ ನಲ್ಲಿದ್ದ ಸಿಖ್ ಸಮುದಾಯಗಳಿಗೆ ದೇಶದ ಇತರ ಭಾಗಗಳಲ್ಲಿ ದೊರೆಯುತ್ತಿದ್ದಂತೆ ಸಮಾನ ಹಕ್ಕುಗಳು ದೊರಕಲಿವೆ. ಅದೇ ರೀತಿ ಪೌರತ್ವ ತಿದ್ದುಪಡಿ ಮಸೂದೆಯಿಂದ ಇದೀಗ ಸಿಖ್ ಜನರು ಇದೀಗ ದೇಶದ ಪ್ರಜೆಗಳಾಗುವುದು ಅತ್ಯಂತ ಸುಲಭವಾಗಿದೆ.

ಶ್ರೀ ಗುರುನಾನಕ್ ದೇವ್ ಜಿ ಅವರಿಂದ ಹಿಡಿದು ಶ್ರೀ ಗೋವಿಂದ್ ಜಿ ಅವರ ವರೆಗೆ ಹಲವು ಧಾರ್ಮಿಕ ಗುರುಗಳು ಭಾರತದ ಏಕತೆ ಮತ್ತು ಭದ್ರತೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಹಲವು ಸಿಖ್ ಜನರು ಭಾರತದಲ್ಲಿ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ. ಇದನ್ನೆಲ್ಲ ಗುರುತಿಸಿ, ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಜಲಿಯನ್ ವಾಲಾಬಾಗ್ ಸ್ಮಾರಕವನ್ನು ಆಧುನೀಕರಣಗೊಳಿಸಲಾಗುತ್ತಿದೆ ಎಂದು ಉಲ್ಲೇಖಿಸಿದರು. ಅವರು ಸಿಖ್ ವಿದ್ಯಾರ್ಥಿಗಳು ತಮ್ಮ ಕೌಶಲ್ಯವೃದ್ಧಿಸಿಕೊಳ್ಳಲು ಹಾಗೂ ಸ್ವಯಂ ಉದ್ಯೋಗ ಕೈಗೊಳ್ಳಲು ಹೆಚ್ಚಿನ ಗಮನಹರಿಸಲಾಗುತ್ತಿದೆ, ಈ ನಿಟ್ಟಿನಲ್ಲಿ ಸುಮಾರು 27 ಲಕ್ಷ ಸಿಖ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು. 



(Release ID: 1592691) Visitor Counter : 166