ಪ್ರಧಾನ ಮಂತ್ರಿಯವರ ಕಛೇರಿ

ಯು ಎನ್ ಜಿ ಎ ವೇಳೆ ಕ್ಯಾರಿಕಾಮ್ ನಾಯಕರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

Posted On: 26 SEP 2019 3:30AM by PIB Bengaluru

ಯು ಎನ್ ಜಿ ಎ ವೇಳೆ ಕ್ಯಾರಿಕಾಮ್ ನಾಯಕರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನ್ಯೂಯಾರ್ಕ್ ನಲ್ಲಿ  2019ರ ಸೆಪ್ಟೆಂಬರ್ 25ರಂದು ವಿಶ್ವಸಂಸ್ಥೆಯ ಮಹಾಧಿವೇಶನದ ನೇಪಥ್ಯದಲ್ಲಿ ಕ್ಯಾರಿಕಾಮ್ ಗುಂಪಿನ  ರಾಷ್ಟ್ರಗಳ 14 ನಾಯಕರೊಂದಿಗೆ ಸಭೆ ನಡೆಸಿದರು. ಇದರಿಂದಾಗಿ ಭಾರತ ಮತ್ತು ಕೆರೆಬಿಯನ್ ರಾಷ್ಟ್ರಗಳ ನಡುವಿನ ಐತಿಹಾಸಿಕ ಹಾಗೂ ಸೌಹಾರ್ದ ಸಂಬಂಧಕ್ಕೆ ಹೊಸ ಆಯಾಮ ದೊರಕಿತು. ಸೆಂಟ್ ಲೂಸಿಯಾದ ಪ್ರಧಾನಮಂತ್ರಿ ಗೌರವಾನ್ವಿತ ಅಲೆನ್ ಚಾಸ್ಟೆನೆಟ್ ಅವರು ಪ್ರಸ್ತುತ ಕ್ಯಾರಿಕಾಮ್ ಅಧ್ಯಕ್ಷರಾಗಿದ್ದು ಅವರು ಸಭೆಯ ಸಹ- ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಭೆಯಲ್ಲಿ ಆಂಟಿಗುವಾ ಮತ್ತು ಬರ್ಬುಡಾ, ಬಾರ್ಬಡೋಸ್, ಡೊಮಿನಿಕಾ, ಜಮೈಕಾ, ಸೆಂಟ್ ಕಿಚ್ ಅಂಡ್ ನೇವಿಸ್, ಸೆಂಟ್ ಲೂಸಿಯಾ, ಸೆಂಟ್ ವಿನ್ಸೆಂಟ್ ಮತ್ತು ಗ್ರನಡಿನ್ಸ್, ಟ್ರಿನಿಡಾಡ್ ಮತ್ತು ಟೊಬ್ಯಾಗೋದ ಸರ್ಕಾರಗಳ ಮುಖ್ಯಸ್ಥರು, ಸುರಿನಾಮೆಯ ಉಪಾಧ್ಯಕ್ಷರು ಬಹಮಾಸ್, ಬೆಲಿಜಿ, ಗ್ರೆನಡ, ಹೈಟಿ ಮತ್ತು ಗಯಾನಾದ ವಿದೇಶಾಂಗ ಸಚಿವರುಗಳು ಸಭೆಯಲ್ಲಿ ಭಾಗಿಯಾಗಿದ್ದರು.

ಪ್ರಾದೇಶಿಕ ಮಟ್ಟದಲ್ಲಿ ಕ್ಯಾರಿಕಾಮ್ ನಾಯಕರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಡೆಸಿದ ಮೊದಲ ಸಭೆ ಇದಾಗಿತ್ತು ಮತ್ತು ಅದರಲ್ಲಿ ಕೇವಲ ದ್ವಿಪಕ್ಷೀಯ ಮಾತ್ರವಲ್ಲದೆ, ಪ್ರಾದೇಶಿಕ ಸನ್ನಿವೇಶಗಳಿಗೆ ಅನುಗುಣವಾಗಿ ಭಾರತ ಮತ್ತು ಕೆರೆಬಿಯನ್ ಪಾಲುದಾರ ರಾಷ್ಟ್ರಗಳ ನಡುವಿನ ಸಂಬಂಧ ಇನ್ನಷ್ಟು ಬಲವರ್ಧನೆ ಹಾಗೂ ವಿಸ್ತರಣೆ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಯಿತು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕ್ಯಾರಿಕಾಮ್ ನೊಂದಿಗೆ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಪಾಲುದಾರಿಕೆ ಬಲವರ್ಧನೆಗೆ ಭಾರತ ಸಂಪೂರ್ಣ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು. ಅವರು ಒಂದು ಮಿಲಿಯನ್ ಗೂ ಅಧಿಕ ಭಾರತೀಯ ಅನಿವಾಸಿಯರು ಕೆರೆಬಿಯನ್ ರಾಷ್ಷ್ರಗಳಿದ್ದು, ಅವರು ಕ್ರಿಯಾಶೀಲವಾಗಿದ್ದಾರೆ ಮತ್ತು ಕೆರೆಬಿಯನ್ ನೊಂದಿಗಿನ ಸ್ನೇಹಕ್ಕೆ ಅವರು ಕೊಂಡಿಯಾಗಿದ್ದಾರೆ ಎಂದರು.

ಸಭೆಯಲ್ಲಿ ರಾಜಕೀಯ ಮತ್ತು ಸಾಂಸ್ಥಿಕ ಮಾತುಕತೆ ಪ್ರಕ್ರಿಯೆ ಬಲವರ್ಧನೆಗೆ ಆರ್ಥಿಕ ಸಹಕಾರ ಉತ್ತೇಜನಕ್ಕೆ ಹಾಗೂ ವ್ಯಾಪಾರ ಮತ್ತು ಬಂಡವಾಳ ಹೂಡಿಕೆ ಹೆಚ್ಚಳ ಜನರ ನಡುವಿನ ಸಂಬಂಧಗಳ ಉತ್ತೇಜನದ ಬಗ್ಗೆ ಹೆಚ್ಚಿನ ಸಮಾಲೋಚನೆ ನಡೆಯಿತು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಪ್ರಕೋಪ ನಿರ್ವಹಣೆ ಮತ್ತು ಸ್ಥಿತಿ ಸ್ಥಾಪಕತ್ವ ವಲಯದಲ್ಲಿ ಸಹಕಾರ ಮತ್ತು ಅಭಿವೃದ್ಧಿ ನೆರವು, ಸಾಮರ್ಥ್ಯವೃದ್ಧಿಗೆ ಕ್ಯಾರಿಕಾಮ್ ರಾಷ್ಟ್ರಗಳೊಂದಿಗೆ ಪಾಲುದಾರಿಕೆ ಹೊಂದಲು ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿದರು. ಅಂತಾರಾಷ್ಟ್ರೀಯ ಸೌರ ಮೈತ್ರಿಯನ್ನು ಮತ್ತು ಪ್ರಕೋಪ ಸ್ಥಿತಿ ಸ್ಥಾಪಕತ್ವ ಮೂಲಸೌಕರ್ಯ ಮೈತ್ರಿಯನ್ನು ಸೇರ್ಪಡೆಯಾಗುವಂತೆ ಅವರು ಕ್ಯಾರಿಕಾಮ್ ರಾಷ್ಟ್ರಗಳಿಗೆ ಆಹ್ವಾನ ನೀಡಿದರು. ಪ್ರಧಾನಿ ಅವರು, ಡೋರಿಯನ್  ಚಂಡಮಾರುತದಿಂದ ಆದ ಹಾನಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದರು ಮತ್ತು ಬಹಮಾಸ್ ದ್ವೀಪಕ್ಕೆ ಭಾರೀ ಹಾನಿಯಾಗಿತ್ತು. ಇದಕ್ಕೆ ಭಾರತ ತಕ್ಷಣದ ಆರ್ಥಿಕ ನೆರವಾಗಿ ಒಂದು ಮಿಲಿಯನ್ ಅಮೆರಿಕನ್ ಡಾಲರ್ ಒದಗಿಸಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕ್ಯಾರಿಕಾಮ್ ರಾಷ್ಟ್ರಗಳಲ್ಲಿ ಸಮುದಾಯ ಅಭಿವೃದ್ಧಿ ಯೋಜನೆಗಳಿಗೆ 14 ಮಿಲಿಯನ್ ಅಮೆರಿಕನ್ ಡಾಲರ್ ಅನುದಾನ ಘೋಷಿಸಿದರು ಮತ್ತು ಸೌರಶಕ್ತಿ, ನವೀಕರಿಸಬಹುದಾದ ಇಂಧನ ಮತ್ತು ಹವಾಮಾನ ವೈಪರೀತ್ಯ ಸಂಬಂಧಿ ಯೋಜನೆಗಳಿಗೆ ಹೆಚ್ಚುವರಿಯಾಗಿ 150 ಮಿಲಿಯನ್ ಸಾಲ ನೀಡುವುದಾಗಿ ಪ್ರಕಟಿಸಿದರು. ಗಯಾನಾದ ಜಾರ್ಜ್ ಟೌನ್ ನಲ್ಲಿ ಮಾಹಿತಿ ತಂತ್ರಜ್ಞಾನ ಕುರಿತ ಜೇಷ್ಠತಾ ಪ್ರಾದೇಶಿಕ ಕೇಂದ್ರವನ್ನು ಸ್ಥಾಪಿಸುವುದಾಗಿ ಅವರು ಪ್ರಕಟಿಸಿದರು ಮತ್ತು ಬಿಲಿಜಿ ಸೇರಿ ಇತರೆ ರಾಷ್ಟ್ರಗಳಲ್ಲಿ ಭಾರತ ಹಣಕಾಸು ಒದಗಿಸುತ್ತಿರುವ ಪ್ರಾದೇಶಿಕ ವೃತ್ತಿಪರ ತರಬೇತಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುವುದು  ಎಂದರು. ಕ್ಯಾರಿಕಾಮ್ ರಾಷ್ಟ್ರಗಳ ಅಗತ್ಯತೆಗಳನ್ನು ಆಧರಿಸಿ ಭಾರತದ ಕಡೆಯಿಂದ ಸಾಮರ್ಥ್ಯವೃದ್ಧಿ ಕೋರ್ಸ್ ಗಳು, ತರಬೇತಿ ಮತ್ತು ಭಾರತೀಯ ತಜ್ಞರನ್ನು ನಿಯೋಜನೆ ಮೇಲೆ ಕಳುಹಿಸುವುದಕ್ಕೆ ಒಪ್ಪಲಾಯಿತು. ಕ್ಯಾರಿಕಾಮ್ ನ  ಸಂಸದೀಯ ನಿಯೋಗವನ್ನು ಆದಷ್ಟು ಬೇಗ ಭಾರತಕ್ಕೆ ಭೇಟಿ ನೀಡುವಂತೆ ಅವರು ಆಹ್ವಾನ ನೀಡಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಸ್ತಾಪಿಸಿದ್ದ ಸಂಬಂಧಗಳ ಬಲವರ್ಧನೆ ಮತ್ತು ಎರಡೂ ಕಡೆಯ ಸಹಕಾರ ಮತ್ತು ಆಯಾ ಸರ್ಕಾರಗಳಿಗೆ ಪೂರ್ಣ ಬೆಂಬಲದ ಮರು ಭರವಸೆಗಳನ್ನು ಕ್ಯಾರಿಕಾಮ್ ನಾಯಕರು ಸ್ವಾಗತಿಸಿದರು.

ಸಾಧ್ಯವಾದ ಎಲ್ಲ ವಲಯಗಳಲ್ಲಿ ಸಹಕಾರ ವಲಯ ಮತ್ತು ಹೇಗೆ ಮುಂದುವರಿಯಬೇಕೆಂಬ ಬಗ್ಗೆ ಕ್ಷಿಪ್ರ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಜಂಟಿ ಕಾರ್ಯಪಡೆಯನ್ನು ರಚಿಸಲು ನಿರ್ಧರಿಸಲಾಯಿತು.

 

*******



(Release ID: 1586845) Visitor Counter : 131