ಪ್ರಧಾನ ಮಂತ್ರಿಯವರ ಕಛೇರಿ

ಅಗರ್ತಲಾಕ್ಕೆ ಪ್ರಧಾನಮಂತ್ರಿ ಭೇಟಿ

ಪ್ರಕಟಣಾ ದಿನಾಂಕ: 09 FEB 2019 6:57PM by PIB Bengaluru

ಅಗರ್ತಲಾಕ್ಕೆ ಪ್ರಧಾನಮಂತ್ರಿ ಭೇಟಿ 
 

ಗರ್ಜೀ –ಬೆಲೋನಿಯಾ ರೈಲು ಮಾರ್ಗದ ಉದ್ಘಾಟನೆ, ತ್ರಿಪುರಾದ ಹಲವು ಅಭಿವೃದ್ಧಿ ಯೋಜನೆಗಳ ಅನಾವರಣ, ಎಚ್.ಐ.ಆರ್.ಎ ಮಾದರಿಯ ಅಭಿವೃದ್ಧಿ – ಹೆದ್ದಾರಿ, ಐ ವೇ, ರೈಲು, ವಿಮಾನಯಾನ ಎಲ್ಲವೂ ತ್ರಿಪುರಾದಲ್ಲಿದೆ ಎಂದು ಪ್ರಧಾನಮಂತ್ರಿ ಹೇಳಿಕೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ತ್ರಿಪುರಾದ  ತಮ್ಮ ದಿನವಿಡೀ ಪ್ರವಾಸದ ಮೂರನೇ ಹಾಗೂ ಕೊನೆಯ ಚರಣದಲ್ಲಿ ಅಗರ್ತಲಾಕ್ಕೆ ಭೇಟಿ ನೀಡಿದರು. ಅವರು ಗರ್ಜೀ – ಬೆಲೋನಿಯಾ ರೈಲು ಮಾರ್ಗ ಮತ್ತು ರಾಜ್ಯದ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು.

ಪ್ರಧಾನಮಂತ್ರಿಯವರು ಮಹಾರಾಜಾ ಬಿರ್ ಬಿಕ್ರಮ್ ಕಿಶೋರ್ ಮಾಣಿಕ್ಯ ಬಹಾದ್ದೂರ್ ಅವರ ಪ್ರತಿಮೆಯನ್ನು ಅಗರ್ತಲಾದ ಮಹಾರಾಜಾ ಬೀರ್ ಬಿಕ್ರಮ್ ವಿಮಾನ ನಿಲ್ದಾಣದಲ್ಲಿ ಅನಾವರಣ ಮಾಡಿದರು. ಮಹಾರಾಜಾ ಬಿರ್ ಬಿಕ್ರಂ ಕಿಶೋರ್ ಅವರ ಪಾತ್ರವನ್ನು ಶ್ಲಾಘಿಸಿ, ಮಹಾರಾಜ್ ಅವರು ತ್ರಿಪುರಾದ ಬಗ್ಗೆ ದೂರದೃಷ್ಟಿ ಉಳ್ಳವರಾಗಿದ್ದರು ಮತ್ತು ಅಗರ್ತಲಾ ನಗರ ನಿರ್ಮಾಣಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.  ಅವರ ಪ್ರತಿಮೆಯನ್ನು ಅನಾವರಣ ಮಾಡಲು ತಾವು ಹೆಮ್ಮೆ ಪಡುವುದಾಗಿ ತಿಳಿಸಿದರು.

ತ್ರಿಪುರಾ ಅಭಿವೃದ್ಧಿಯ ಕುರಿತಂತೆ ಮಾತನಾಡಿದ ಪ್ರಧಾನಮಂತ್ರಿಯವರು, ಪ್ರಗತಿ ಈಗ ಹೊಸ ದಿಕ್ಕಿನಲ್ಲಿ ಸಾಗಿದೆ ಎಂದರು. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸರ್ಕಾರ ತ್ರಿಪುರಾದ ಅಭಿವೃದ್ದಿಗಾಗಿ ಸಾಕಷ್ಟು ಹಣವನ್ನು ಬಿಡುಗಡೆ ಮಾಡಿದೆ ಎಂದರು. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಂ.ಎಸ್.ಪಿ. ದರದಲ್ಲಿ ಬೆಳೆ ಖರೀದಿ ಆಗಿದೆ ಎಂಬುದನ್ನು ತಾವು ಕೇಳಿದ್ದಾಗಿ ತಿಳಿಸಿದರು.

ಪ್ರಧಾನಮಂತ್ರಿಯವರು ಇಲ್ಲಿನ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ಗರ್ಜೀ – ಬೆಲೋನಿಯಾ ರೈಲು ಮಾರ್ಗವನ್ನು ಫಲಕ ಅನಾವರಣ ಮಾಡುವ ಮೂಲಕ ಉದ್ಘಾಟಿಸಿದರು.  ಈ ಮಾರ್ಗವು ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಹೆಬ್ಬಾಗಿಲಾಗಿ ತ್ರಿಪುರಾವನ್ನು ಉತ್ತೇಜಿಸಲಿದೆ ಎಂದರು.

ಇದೇ ಸಂದರ್ಭದಲ್ಲಿ ಅವರು ನರಸಿಂಗರ್ ನಲ್ಲಿ  ತ್ರಿಪುರಾ ತಾಂತ್ರಿಕ ಸಂಸ್ಥೆಯ ಹೊಸ ಸಮುಚ್ಚಯವನ್ನು ಉದ್ಘಾಟಿಸಿದರು. ಚುನಾವಣೆ ಸಂದರ್ಭದಲ್ಲಿ ತಾವು ಇಲ್ಲಿಗೆ ಆಗಮಿಸಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಎಚ್.ಐ.ಆರ್.ಎ. ಮಾದರಿ ಅಭಿವೃದ್ಧಿ ಅಂದರೆ ಹೆದ್ದಾರಿ, ಐವೇ, ರೈಲು ಮತ್ತು ವಾಯುಮಾರ್ಗದ ಅಭಿವೃದ್ಧಿಯ ಬಗ್ಗೆ ಮಾತನಾಡಿದ್ದನ್ನು ಸ್ಮರಿಸಿದರು.

ಅಗರ್ತಲಾ ಸಬ್ರೂಮ್ ರಾಷ್ಟ್ರೀಯ ಹೆದ್ದಾರಿ, ಹಮ್ ಸಫರ್ ಎಕ್ಸ್ ಪ್ರೆಸ್, ಅಗರ್ತಲಾ ಡಿಯೋಗರ್ ಎಕ್ಸ್ ಪ್ರೆಸ್, ಅಗರ್ತಲಾ ಹೊಸ ಟರ್ಮಿನಲ್ ಈ ಮಾದರಿಯ ಭಾಗಗಳಾಗಿವೆ ಎಂದರು.

ನಕಲಿ ಫಲಾನುಭವಿಗಳನ್ನು ದೂರ ಮಾಡುವ ಕುರಿತಂತೆ ಮಾತನಾಡಿದ ಪ್ರಧಾನಮಂತ್ರಿಯವರು, ಈ ಹಿಂದೆ ಪ್ರಗತಿ ಕೇವಲ ಕಾಗದದಲ್ಲಿ ಮಾತ್ರ ಇರುತ್ತಿತ್ತು ಎಂದರು. ತ್ರಿಪುರಾ ಒಂದರಲ್ಲೆ 62 ಸಾವಿರ ಫಲಾನುಭವಿಗಲು ಇದ್ದರು ಎಂದು ನಾನು ಕೇಳಿದ್ದೇನೆ. ಅವರು ನಿಮ್ಮ ಹಣವನ್ನು ಪಡೆಯುತ್ತಿದ್ದರು ಎಂದರು. ಆದಾಗ್ಯೂ, ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸುಮಾರು 8 ಕೋಟಿ ನಕಲಿ ಫಲಾನುಭವಿಗಳನ್ನು ವ್ಯವಸ್ಥೆಯಿಂದ ಕಿತ್ತು ಹಾಕಲಾಗಿದೆ ಎಂದರು.

ರೈತರು ಮತ್ತು ಅನೌಪಚಾರಿಕ ವಲಯದ ಬಗ್ಗೆ ತಮಗಿರುವ ಬದ್ಧತೆಯನ್ನು ಒತ್ತಿಹೇಳಿದ ಪ್ರಧಾನಮಂತ್ರಿಯವರು, ಪ್ರಧಾನಮಂತ್ರಿ ಶ್ರಮ ಯೋಗಿ ಮಾನ್ ಧನ್ ಪಿಂಚಣಿ ಯೋಜನೆ ಮೂಲಕ ಅಸಂಘಟಿತ ವಲಯದ ಕಾರ್ಮಿಕರಿಗೆ 60 ವರ್ಷ ಪೂರ್ಣಗೊಂಡ ಬಳಿಕ ಮಾಸಿಕ 3 ಸಾವಿರ ರೂಪಾಯಿ ಪಿಂಚಣಿ ನೀಡುವ ಯೋಜನೆ ರೂಪಿಸಲಾಗಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ವಾರ್ಷಿಕ 6 ಸಾವಿರ ರೂಪಾಯಿಗಳನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತಿದೆ. ಮೀನುಗಾರಿಕೆಗೆ ಪ್ರತ್ಯೇಕ ಇಲಾಖೆ ಮಾಡಿರುವುದು ಮೀನುಗಾರರಿಗೆ ದೊಡ್ಡ ಪ್ರಯೋಜನ ತರಲಿದೆ ಎಂದರು.

ಈ ಎಲ್ಲ ಕ್ರಮಗಳು ಸರ್ಕಾರದ ಉದ್ದೇಶದ ಪ್ರತಿಬಿಂಬ ಎಂದೂ ಅವರು ಹೇಳಿದರು.

ಮೂರು ಈಶಾನ್ಯ ರಾಜ್ಯಗಳ ದಿನವಿಡೀ ಕಾರ್ಯಕ್ರಮದ ತರುವಾಯ ಪ್ರಧಾನಮಂತ್ರಿಯವರು ನವ ದೆಹಲಿಗೆ ಮರಳಿದರು. ಅವರು ನಾಳೆ ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ.

 


(ಪ್ರಕಟಣೆ ಐ.ಡಿ.: 1563748) ವಿಸಿಟರ್ ಕೌಂಟರ್ : 91
ಪ್ರಕಟಣೆಯನ್ನು ಇದರಲ್ಲಿ ಓದಿ: Assamese , English , Urdu , Marathi , हिन्दी , Gujarati , Tamil