ಪ್ರಧಾನ ಮಂತ್ರಿಯವರ ಕಛೇರಿ

ಒಡಿಶಾ ಮತ್ತು ಪೂರ್ವ ಭಾರತದ ಸಮಗ್ರ ಅಭಿವೃದ್ಧಿಗೆ ಸರಕಾರ ಬದ್ಧ: ಪ್ರಧಾನ ಮಂತ್ರಿ.

Posted On: 15 JAN 2019 3:09PM by PIB Bengaluru

ಒಡಿಶಾ ಮತ್ತು ಪೂರ್ವ ಭಾರತದ ಸಮಗ್ರ ಅಭಿವೃದ್ಧಿಗೆ ಸರಕಾರ ಬದ್ಧ: ಪ್ರಧಾನ ಮಂತ್ರಿ.

 

ಬಾಲಂಗೀರ್ ಗೆ ಪ್ರಧಾನ ಮಂತ್ರಿ ಭೇಟಿ; ಒಡಿಶಾಕ್ಕೆ1500  ಕೋ.ರೂ.ಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ, ಜಾರ್ಸುಗುಡ್ಡದಲ್ಲಿ ಬಹುಮಾದರಿ ಸರಕು ಸಾಗಣೆ ಪಾರ್ಕ್ (ಎಂ.ಎಂ.ಎಲ್.ಪಿ.) ರಾಷ್ಟ್ರಕ್ಕೆ ಸಮರ್ಪಣೆ, ಸಂಪರ್ಕ ಹೆಚ್ಚಿಸುವ ಆರು ರೈಲ್ವೇ ಯೋಜನೆಗಳ ಉದ್ಘಾಟನೆ, ಬಾಲಂಗೀರ್ ಮತ್ತು ಬಿಚ್ಚುಪಾಲಿ ನಡುವಣ ಹೊಸ ರೈಲ್ವೇ ಮಾರ್ಗ ಉದ್ಘಾಟನೆ.

 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಒಡಿಶಾದ ಬಾಲಂಗೀರ್ ಗೆ ಭೇಟಿ ನೀಡಿದರು. ಅವರು 1500 ಕೋ.ರೂ. ಮೊತ್ತದ ಹಲವು ಅಭಿವೃದ್ದಿ ಯೋಜನೆಗಳನ್ನು ಆರಂಭಿಸಿದರು ಮತ್ತು ಹಲವು ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದರು.

 

ಪ್ರಧಾನ ಮಂತ್ರಿ ಅವರು ಇಂದು ಬೆಳಿಗ್ಗೆ ರಾಯ್ಪುರದಲ್ಲಿರುವ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣಕ್ಕೆ ಆಗಮಿಸಿದರು, ಬಳಿಕ ಬಾಲಂಗೀರ್ ಗೆ ತೆರಳಿದರು. ಬಾಲಂಗೀರ್ ನಲ್ಲಿ ಅವರು ಬಹು ಮಾದರಿ ಸರಕು ಸಾಗಣೆ ಪಾರ್ಕ್ (ಎಂ.ಎಂ.ಎಲ್.ಪಿ.) ಜಾರ್ಸುಗುಡವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಎಂ.ಎಂ.ಎಲ್.ಪಿ.ಯು ಜಾರ್ಸುಗುಡವನ್ನು ಈ ವಲಯದ ಸರಕು ಸಾಗಾಣಿಕೆಯ ಪ್ರಮುಖ ತಾಣವನ್ನಾಗಿಸಲಿದೆ. ರೈಲು ಯೋಜನೆಗಳಿಗೆ ಉತ್ತೇಜನ ನೀಡಲು 115 ಕೋ.ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣವಾದ  ಬಾಲಂಗೀರ್-ಬಿಚ್ಚುಪಲ್ಲಿ ರೈಲ್ವೇ ಮಾರ್ಗವನ್ನು ಶ್ರೀ ಮೋದಿ ಅವರು ಉದ್ಘಾಟಿಸಿದರು.

 

ಒಡಿಶಾದ ಜನತೆಗೆ ತಮ್ಮ ಬದ್ದತೆಯನ್ನು ಸ್ಪಷ್ಟಪಡಿಸಿದ ಪ್ರಧಾನ ಮಂತ್ರಿ  ಅವರು ಕಳೆದ ಮೂರು ವಾರಗಳಲ್ಲಿ ತಾವು ಇಲ್ಲಿಗೆ ಮೂರನೇ ಬಾರಿಗೆ ಭೇಟಿ ನೀಡುತ್ತಿರುವುದನ್ನು ಪ್ರಸ್ತಾಪಿಸಿದರು. ಬಾಲಂಗಿರ್ ನ ರೈಲ್ವೇ ಯಾರ್ಡಿನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು “ ಸರಕಾರವು ಪೂರ್ವ ಭಾರತ ಮತ್ತು ಒಡಿಶಾವನ್ನು ಅಭಿವೃದ್ದಿ ಮಾಡಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ, ಬಾಲಂಗಿರ್ ನಲ್ಲಿ ಸರಣಿ ಅಭಿವೃದ್ಧಿ ಯೋಜನೆಗಳ ಆರಂಭ ಈ ನಿಟ್ಟಿನಲ್ಲಿಯ ಹೆಜ್ಜೆ” ಎಂದರು.

 

ನಾಗವಲ್ಲಿ ನದಿಗೆ ಅಡ್ಡವಾಗಿ ನಿರ್ಮಿಸಲಾದ ಹೊಸ ಸೇತುವೆಯನ್ನು , ಬಾರ್ಪಾಲಿ-ದುಂಗಾರಿಪಾಲಿ ಹಾಗು ಬಾಲಂಗಿರ್-ದಿಯೋಗಾಂ ನಡುವಣ ರೈಲ್ವೇ ಮಾರ್ಗದ ದ್ವಿಪಥ ಕಾಮಗಾರಿ, ಜಾರ್ಸುಗುಡ-ವಿಜಯನಗರಂ ಮತ್ತು ಸಂಬಾಲ್ಪುರ-ಅಂಗುಲ್ ಮಾರ್ಗಗಳ 813 ಕಿಲೋ ಮೀಟರ್ ವಿದ್ಯುದ್ದೀಕರಣವನ್ನು ಪ್ರಧಾನ ಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. 15.81 ಕೋ.ರೂ. ಅಂದಾಜು ವೆಚ್ಚದಲ್ಲಿ ಒಡಿಶಾದ ಸೋನೇಪುರದಲ್ಲಿ ನಿರ್ಮಾಣಗೊಳ್ಳಲಿರುವ  ಕೇಂದ್ರೀಯ ವಿದ್ಯಾಲಯಕ್ಕೆ ಪ್ರಧಾನ ಮಂತ್ರಿ ಅವರು ಶಿಲಾನ್ಯಾಸ ನೆರವೇರಿಸಿದರು. ಶಿಕ್ಷಣ ಮತ್ತು ಸಂಪರ್ಕದ ಮಹತ್ವವನ್ನು ಪ್ರಸ್ತಾವಿಸಿದ ಅವರು “ ಶಿಕ್ಷಣ ಮಾನವ ಸಂಪನ್ಮೂಲವನ್ನು ಅಭಿವೃದ್ದಿ ಮಾಡುತ್ತದೆ, ಆದರೆ ಸಂಪರ್ಕವು ಇಂತಹ ಸಂಪನ್ಮೂಲವನ್ನು ಅವಕಾಶಗಳನ್ನಾಗಿ ಪರಿವರ್ತಿಸುತ್ತದೆ . ಆರು ರೈಲ್ವೇ ಯೋಜನೆಗಳ ಉದ್ಘಾಟನೆ ಸಂಪರ್ಕವನ್ನು ಹೆಚ್ಚಿಸುವ ನಮ್ಮ ಯತ್ನದ ಭಾಗ. ಇದು ಜನರ ಚಲನೆಗೆ ಅನುಕೂಲ ಮಾಡಿಕೊಡುತ್ತದೆ. ಕೈಗಾರಿಕೆಗಳಿಗೆ ಖನಿಜ ಸಂಪನ್ಮೂಲಗಳ ಲಭ್ಯತೆ ಹೆಚ್ಚಲಿದೆ, ಮತ್ತು ರೈತರಿಗೆ ತಮ್ಮ ಉತ್ಪನ್ನಗಳನ್ನು ದೂರದ ಮಾರುಕಟ್ಟೆಗಳಿಗೆ ರವಾನಿಸಲು ಸಹಾಯ ಮಾಡುತ್ತದೆ, ಒಡಿಶಾದ ನಾಗರಿಕರಿಗೆ ಜೀವಿಸುವ ಅವಕಾಶಗಳನ್ನು ಉತ್ತಮಪಡಿಸುತ್ತದೆ.” ಎಂದರು.

 

ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ತಮ್ಮ ಬದ್ದತೆಯನ್ನು ಪ್ರಸ್ತಾವಿಸಿದ ಪ್ರಧಾನ ಮಂತ್ರಿ ಅವರು ಇದು ನಮ್ಮ ಸಾಂಸ್ಕೃತಿಕ ಕೊಂಡಿಗಳನ್ನು ಬಲಪಡಿಸುತ್ತದೆ ಮತ್ತು ರಾಜ್ಯದ ಪ್ರವಾಸೋದ್ಯಮ ಸಾಮರ್ಥ್ಯವನ್ನು ವರ್ಧಿಸುತ್ತದೆ ಎಂದರು. ಗಂಧಹಾರಾಡಿ (ಭೌಧ) ಯಲ್ಲಿರುವ ನೀಲಮಹಾದೇವ ಮತ್ತು ಸಿದ್ದೇಶ್ವರ ದೇವಾಲಯಗಳ ಪುನರ್ನವೀಕರಣ ಮತ್ತು ಪುನರ್ಸ್ಥಾಪನಾ ಕಾಮಗಾರಿಯ ಬಗ್ಗೆ ಅವರು ಹರ್ಷ ವ್ಯಕ್ತಪಡಿಸಿದರು. ಕಾಳಹಂದಿಯ ಬಾಲಂಗೀರ್ ಮತ್ತು ಅಸುರ್ಘರ್ ಕೋಟೆ ಹಾಗು ಸ್ಮಾರಕಗಳ ಪುನರ್ಸ್ಥಾಪನಾ ಮತ್ತು ನವೀಕರಣ ಕಾಮಗಾರಿಯನ್ನು ಅವರು ಉದ್ಘಾಟಿಸಿದರು. 



(Release ID: 1560072) Visitor Counter : 117