ಪ್ರಧಾನ ಮಂತ್ರಿಯವರ ಕಛೇರಿ

ಸಾಮಾನ್ಯ ವರ್ಗದ ಬಡವರಿಗೆ 10 % ಮೀಸಲಾತಿ ವಿಧೇಯಕ ಚಾರಿತ್ರಿಕ ಕ್ರಮ ಮತ್ತು ಸರಕಾರ ಬಡವರ ಬಗ್ಗೆ ಹೊಂದಿರುವ ಬದ್ದತೆಯ ಪ್ರತಿಫಲನ, ಎಂದಿದ್ದಾರೆ ಪ್ರಧಾನಮಂತ್ರಿ. 

Posted On: 09 JAN 2019 4:00PM by PIB Bengaluru

ಸಾಮಾನ್ಯ ವರ್ಗದ ಬಡವರಿಗೆ 10 % ಮೀಸಲಾತಿ ವಿಧೇಯಕ ಚಾರಿತ್ರಿಕ ಕ್ರಮ ಮತ್ತು ಸರಕಾರ ಬಡವರ ಬಗ್ಗೆ ಹೊಂದಿರುವ ಬದ್ದತೆಯ ಪ್ರತಿಫಲನ, ಎಂದಿದ್ದಾರೆ ಪ್ರಧಾನಮಂತ್ರಿ. 
 

ಈಶಾನ್ಯ ಮತ್ತು ಅಸ್ಸಾಂನ ಜನರ ಹಕ್ಕುಗಳನ್ನು ರಕ್ಷಿಸಲಾಗುವುದು ಎಂದು ಪ್ರಧಾನಮಂತ್ರಿ ಭರವಸೆ. ಭ್ರಷ್ಟಾಚಾರ ಮತ್ತು ಮಧ್ಯವರ್ತಿಗಳ ವಿರುದ್ದ ಸರಕಾರದ ಆಂದೋಲನ ಮುಂದುವರಿಯಲಿದೆ: ಪ್ರಧಾನಮಂತ್ರಿ, 

ಸೋಲಾಪುರ-ತುಳಜಾಪುರ-ಒಸ್ಮಾನಾಬಾದ್ ಹೆದ್ದಾರಿ –ಹೊಸ ಎನ್.ಎಚ್-52 ರ ಚತುಷ್ಪಥ ಸೆಕ್ಷನ್ ಲೋಕಾರ್ಪಣೆ, ತುಳಜಾಪುರ ಮೂಲಕ ಸೋಲಾಪುರ-ಒಸ್ಮಾನಾಬಾದ್ 

ರೈಲು ಮಾರ್ಗಕ್ಕೆ ಅನುಮೋದನೆ : ಪ್ರಧಾನಮಂತ್ರಿ ಆವಾಸ್ ಯೋಜನಾ ಅಡಿಯಲ್ಲಿ ಸೋಲಾಪುರದಲ್ಲಿ 30,000 ಮನೆಗಳ ನಿರ್ಮಾಣ-ಪ್ರಧಾನ ಮಂತ್ರಿ. 

ಸಾಮಾನ್ಯ ವರ್ಗದ ಬಡವರಿಗೆ 10 % ಮೀಸಲಾತಿ ನೀಡುವ ಸಂವಿಧಾನ ತಿದ್ದುಪಡಿ ವಿಧೇಯಕ ಬಡವರನ್ನು ಮೇಲಕ್ಕೆತ್ತುವ ನಿಟ್ಟಿನಲ್ಲಿ ಐತಿಹಾಸಿಕ ಕ್ರಮ ಮತ್ತು ಇದು ಸಬ್ ಕಾ ಸಾಥ್ , ಸಬ್ ಕಾ ವಿಕಾಸ್ ಗೆ ಸರಕಾರದ ಬದ್ಧತೆಯನ್ನು ಪ್ರತಿಫಲಿಸುತ್ತದೆ ಎಂದು ಪ್ರಧಾನ ಮಂತ್ರಿ ಹೇಳಿದ್ದಾರೆ. ಮಹಾರಾಷ್ಟ್ರದ ಸೋಲಾಪುರದಲ್ಲಿ ಇಂದು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಲೋಕ ಸಭೆಯಲ್ಲಿ ಈ ವಿಧೇಯಕದ ಅಂಗೀಕಾರ ಈ ವಿಷಯದಲ್ಲಿ ಸುಳ್ಳು ಹರಡುತ್ತಿರುವವರಿಗೆ ಒಂದು ಬಲಯುತವಾದ ಉತ್ತರ ಎಂದರಲ್ಲದೆ ಈ ವಿಧೇಯಕ ರಾಜ್ಯ ಸಭೆಯಲ್ಲಿಯೂ ಅಂಗೀಕಾರಗೊಳ್ಳುವ ಭರವಸೆ ವ್ಯಕ್ತಪಡಿಸಿದರು. “ನಾವು ಸಾಮಾನ್ಯ ವರ್ಗದ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ 10 % ಮೀಸಲಾತಿ ಒದಗಿಸುವ ಚಾರಿತ್ರಿಕ ವಿಧೇಯಕವನ್ನು ನಿನ್ನೆ ಲೋಕಸಭೆಯಲ್ಲಿ ಅಂಗೀಕರಿಸಿದ್ದೇವೆ. ಇದು ನಮ್ಮ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಿರ್ಧಾರವನ್ನು ಬಲಯುತಗೊಳಿಸಿದೆ “ ಎಂದು ಪ್ರಧಾನ ಮಂತ್ರಿ ಅವರು ಹೇಳಿದರು. 

ನಾಗರಿಕತ್ವ ತಿದ್ದುಪಡಿ ವಿಧೇಯಕ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು ಅಸ್ಸಾಂ ಮತ್ತು ಈಶಾನ್ಯದ ಜನರ ಹಕ್ಕುಗಳು ಮತ್ತು ಅವಕಾಶಗಳನ್ನು ರಕ್ಷಿಸಲಾಗುವುದು ಎಂದರು. “ ವಿಧೇಯಕವು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನಗಳಲ್ಲಿ ವಾಸಿಸುವ ಭಾರತ ಮಾತೆಯ ಪುತ್ರರು ಮತ್ತು ಪುತ್ರಿಯರಿಗೆ ಭಾರತೀಯ ಪೌರತ್ವವನ್ನು ಕೊಡುವುದಕ್ಕೆ ಇದ್ದ ತಡೆಗಳನ್ನು ನಿವಾರಿಸಿದೆ. ಇತಿಹಾಸದ ಏಳು-ಬೀಳುಗಳನ್ನು ನೋಡಿದ ಬಳಿಕ , ಈ ನಮ್ಮ ಸಹೋದರರು ಮತ್ತು ಸಹೋದರಿಯರು ಭಾರತದ ಭಾಗವಾಗಲು ಇಚ್ಚಿಸಿದ್ದಾರೆ” ಎಂದೂ ಪ್ರಧಾನ ಮಂತ್ರಿ ಅವರು ಹೇಳಿದರು. 

ತಮ್ಮ ವಿರುದ್ದ ತೀಕ್ಷ್ಣವಾದ ದೂಷಣೆಯ ಹೊರತಾಗಿಯೂ ಭ್ರಷ್ಟಾಚಾರ ಮತ್ತು ಮಧ್ಯವರ್ತಿಗಳ ವಿರುದ್ಧ ತಮ್ಮ ಸರಕಾರದ ಕ್ರಮ ಅನಿರ್ಬಂಧಿತವಾಗಿ ಮುಂದುವರಿಯುವುದು ಎಂದು ಪ್ರಧಾನ ಮಂತ್ರಿ ಅವರು ಹೇಳಿದರು. ಭ್ರಷ್ಟಾಚಾರದ ವಿರುದ್ದ ಮತ್ತು ಮಧ್ಯವರ್ತಿಗಳ ವಿರುದ್ದ ಜನತೆಯ ಬೆಂಬಲ ಮತ್ತು ಆಶೀರ್ವಾದಗಳೊಂದಿಗೆ ತಾವು ಧೈರ್ಯದಿಂದ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದುದಾಗಿ ಅವರು ನುಡಿದರು. 

ಈ ವಲಯದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಕಾರ್ಯಾರಂಭಗೊಳಿಸಿ ಮತ್ತು ಹಲವು ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಪ್ರಧಾನ ಮಂತ್ರಿ ಅವರು ಸೋಲಾಪುರದ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ್ರಧಾನಮಂತ್ರಿ ಅವರು ಪ್ರಧಾನ ಮಂತ್ರಿ ಆವಾಸ್ ಯೋಜನಾ ಅಡಿಯಲ್ಲಿ 30,000 ಮನೆಗಳ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು. ಇದರಿಂದ ಚಿಂದಿ ಆಯುವವರಿಗೆ, ರಿಕ್ಷಾ ಚಾಲಕರಿಗೆ, ಜವಳಿ ಕಾರ್ಮಿಕರಿಗೆ, ಬೀಡಿ ಕಾರ್ಮಿಕರಿಗೆ,ಇತ್ಯಾದಿ ಬಡ ವಸತಿ ರಹಿತರಿಗೆ ಪ್ರಯೋಜನವಾಗಲಿದೆ. ಇದಕ್ಕೆ ಒಟ್ಟು 1811.33 ಕೋ.ರೂ. ವೆಚ್ಚವಾಗಲಿದೆ. “ ಇಂದು ನಾವು ಬಡ ಕಾರ್ಮಿಕರ ಕುಟುಂಬಗಳಿಗಾಗಿ 30,000 ಮನೆಗಳನ್ನು ನಿರ್ಮಿಸುವ ಯೋಜನೆಯನ್ನು ಉದ್ಘಾಟಿಸಿದ್ದೇವೆ. ಈ ಯೋಜನೆಯ ಫಲಾನುಭವಿಗಳೆಂದರೆ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರು, ರಿಕ್ಷಾ ಎಳೆಯುವವರು, ಅಟೋ ಚಾಲಕರು ಮತ್ತಿತರರು. ಆದಷ್ಟು ಬೇಗ ನಿಮ್ಮ ಮನೆಯ ಬೀಗದ ಕೈ ನಿಮ್ಮ ಕೈ ಸೇರುತ್ತದೆ ಎಂಬುದನ್ನು ನಾನು ಖಾತ್ರಿಯಾಗಿ ಹೇಳುತ್ತೇನೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಮಧ್ಯಮ ವರ್ಗದ ಕುಟುಂಬಗಳಿಗೆ ಮನೆ ಕೈಗೆಟಕುವ ದರದಲ್ಲಿ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸಲಾಗಿದೆ.ಈಗ ಅವರು 20 ವರ್ಷಗಳ ಅವಧಿಯ ಮನೆ ಸಾಲದಲ್ಲಿ 6 ಲಕ್ಷ ರೂ.ಗಳ ವರೆಗೆ ಉಳಿತಾಯ ಮಾಡಬಹುದು. ಇದು ಸರಕಾರವು ಜೀವನಕ್ಕೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಪ್ರತಿಫಲನ ಎಂದರು. 

ತಾವು ಶಿಲಾನ್ಯಾಸ ಮಾಡಿದ ಯೋಜನೆಗಳನ್ನು ಉದ್ಘಾಟಿಸುವ ತಮ್ಮ ಬದ್ದತೆಯನ್ನು ಕಾಪಾಡಿಕೊಂಡಿರುವ ಪ್ರಧಾನ ಮಂತ್ರಿ ಅವರು ಹೊಸ ಎನ್.ಎಚ್. -52 ರ 98.717 ಕಿ.ಮೀ. ಉದ್ದದ ರಸ್ತೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಇದು ಮಹಾರಾಷ್ಟ್ರದ ಪ್ರಮುಖ ಮರಾಠಾವಾಡಾ ವಲಯದ ಜೊತೆ ಸೋಲಾಪುರದ ಸಂಪರ್ಕವನ್ನು ಸುಧಾರಿಸಲಿದೆ. ಎನ್.ಎಚ್.-52 ಈಗ ಸೋಲಾಪುರ- ತುಳಜಾಪುರ- ಒಸ್ಮಾನಾಬಾದ್ ಹೆದ್ದಾರಿಯಲ್ಲಿ ಚತುಷ್ಪಥ ರಸ್ತೆಯನ್ನು ಹೊಂದಿದೆ. ಇದರ ಅಂದಾಜು ವೆಚ್ಚ 972.50 ಕೋ.ರೂ.ಗಳು. ಪ್ರಧಾನ ಮಂತ್ರಿ ಅವರು 2014 ರಲ್ಲಿ ಈ ಕಾಮಗಾರಿಗೆ ಶಿಲಾನ್ಯಾಸ ಮಾಡಿದ್ದರು. ಎನ್.ಎಚ್. -52 ರಸ್ತೆ ಸುರಕ್ಷಾ ವ್ಯವಸ್ಥೆಗಳಾದ 2 ಪ್ರಮುಖ, 17 ಸಣ್ಣ ಸೇತುವೆಗಳು, 4 ವಾಹನ ಅಂಡರ್ ಪಾಸ್ ಗಳು, ಮತ್ತು 10 ಪಾದಚಾರಿ ಅಂಡರ್ ಪಾಸ್ ಗಳನ್ನು ಒಳಗೊಂಡಿದೆ. ಇದಲ್ಲದೆ ತುಳಜಾಪುರದಲ್ಲಿ 3.4 ಕಿ.ಮೀ. ಬೈಪಾಸ್ ಹೊಂದಿದ್ದು, ಇದು ನಗರದ ದಟ್ಟಣೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. 

ಉತ್ತಮ ಸಂಪರ್ಕಕ್ಕಾಗಿ ಮತ್ತು ಜೀವಿಸುವುದಕ್ಕೆ ಅನುಕೂಲಕರ ವಾತಾವರಣವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಹೆದ್ದಾರಿಗಳನ್ನು ವಿಸ್ತರಣೆ ಮಾಡುವ ಸರಕಾರದ ಚಿಂತನೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನ ಮಂತ್ರಿ ಅವರು “ ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 40,000 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿಗಳನ್ನು ಸೇರಿಸಲಾಗಿದೆ , ಇಅದಕ್ಕೆ 5.5 ಲಕ್ಷ ಕೋ.ರೂ. ವೆಚ್ಚವಾಗಿದೆ, ಸುಮಾರು 52 ಸಾವಿರ ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಹಂತದಲ್ಲಿದೆ “ ಎಂದರು. 

ಈ ವಲಯದಲ್ಲಿ ರೈಲು ಸಂಪರ್ಕಕ್ಕೆ ಉತ್ತೇಜನವನ್ನು ಪ್ರಕಟಿಸಿದ ಪ್ರಧಾನ ಮಂತ್ರಿ ಅವರು ಸರಕಾರವು ಅಂದಾಜು 1000 ಕೋ.ರೂ. ವೆಚ್ಚದಲ್ಲಿ ತುಳಜಾಪುರ ಮೂಲಕ ಸೋಲಾಪುರ-ಒಸ್ಮಾನಾಬಾದ್ ರೈಲು ಮಾರ್ಗಕ್ಕೆ ಅಂಗೀಕಾರ ನೀಡಿದೆ ಎಂದರು. ಪ್ರಾದೇಶಿಕ ವಾಯು ಸಂಪರ್ಕ ಯೋಜನೆ –ಉಡಾನ್ ಯೋಜನಾ ಅಡಿಯಲ್ಲಿ ಸೋಲಾಪುರದಿಂದ ವಿಮಾನ ಹಾರಾಟ ಆರಂಭಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದರು. 

ಸ್ವಚ್ಚ ಭಾರತ್ ಮತ್ತು ಸ್ವಸ್ಥ ಭಾರತ್ ನ ತಮ್ಮ ಚಿಂತನೆಯ ಭಾಗವಾಗಿ ಪ್ರಧಾನ ಮಂತ್ರಿಯವರು ಸೋಲಾಪುರದಲ್ಲಿ ಭೂಗತ ತ್ಯಾಜ್ಯ ಚರಂಡಿ ವ್ಯವಸ್ಥೆಯನ್ನು ಮತ್ತು ಮೂರು ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಇದು ಪಟ್ಟಣದ ಚರಂಡಿ ವ್ಯಾಪ್ತಿಯನ್ನು ವಿಸ್ತರಿಸಲಿದೆ ಮತ್ತು ನಗರದ ನೈರ್ಮಲ್ಯೀಕರಣ ವ್ಯವಸ್ಥೆಯನ್ನು ಸುಧಾರಿಸಲಿದೆ. 

ಸೋಲಾಪುರ ಸ್ಮಾರ್ಟ್ ಸಿಟಿಯಲ್ಲಿ ಪ್ರದೇಶ ಆಧಾರಿತ ಅಭಿವೃದ್ದಿಯ ಅಂಗವಾಗಿ ಉಜಾನಿ ಅಣೆಕಟ್ಟೆಯಿಂದ ಸೋಲಾಪುರಕ್ಕೆ ನೀರು ಒದಗಿಸುವ ನೀರು ಪೂರೈಕೆ ಮತ್ತು ಅಮೃತ್ ಯೋಜನೆ ಅಡಿ ಭೂಗತ ತ್ಯಾಜ್ಯ ಚರಂಡಿ ವ್ಯವಸ್ಥೆಯಡಿ ತ್ಯಾಜ್ಯ ಚರಂಡಿ ವ್ಯವಸ್ಥೆ ಸುಧಾರಿಸುವ ಸಂಯುಕ್ತ ಯೋಜನೆಗೆ ಪ್ರಧಾನ ಮಂತ್ರಿ ಅವರು ಶಿಲಾನ್ಯಾಸ ನೆರವೇರಿಸಿದರು. ತಂತ್ರಜ್ಞಾನ ಬಳಸಿ ಸೇವಾ ಪೂರೈಕೆ ಮತ್ತು ಸಾರ್ವಜನಿಕ ಆರೋಗ್ಯ ಸುಧಾರಣೆಯನ್ನು ಮಾಡುವ ಮೂಲಕ ಇದು ನಾಗರಿಕರಿಗೆ ಸ್ಮಾರ್ಟ್ ಫಲಿತವನ್ನು ಒದಗಿಸಲಿದೆ. 

ಈ ಎಲ್ಲಾ ಕ್ರಮಗಳು ಸೋಲಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನತೆಗೆ ರಸ್ತೆ ಮತ್ತು ಸಾರಿಗೆ ಸಂಪರ್ಕ , ನೀರು ಪೂರೈಕೆ, ನೈರ್ಮಲ್ಯೀಕರಣ, ಉದ್ಯೋಗ ಸೃಷ್ಟಿ ಇತ್ಯಾದಿ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಿ ಪ್ರಗತಿಯ ಹಾದಿಯಲ್ಲಿ ಬಹು ದೂರ ಕೊಂಡೊಯ್ಯುವ ನಿರೀಕ್ಷೆ ಇದೆ 



(Release ID: 1559313) Visitor Counter : 108