ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ನರೇಂದ್ರ ಮೋದಿ ಅವರಿಂದ ರಾಷ್ಟ್ರೀಯ ಗ್ರಾಮೀಣ ಸ್ವರಾಜ್ ಅಭಿಯಾನಕ್ಕೆ ಚಾಲನೆ: ಆದಿವಾಸಿಗಳ ಸಮಗ್ರ ಅಭಿವೃದ್ಧಿಗೆ ದಿಕ್ಸೂಚಿಯ ಅನಾವರಣ

Posted On: 24 APR 2018 3:15PM by PIB Bengaluru

ಪ್ರಧಾನಿ ನರೇಂದ್ರ ಮೋದಿ ಅವರಿಂದ ರಾಷ್ಟ್ರೀಯ ಗ್ರಾಮೀಣ ಸ್ವರಾಜ್ ಅಭಿಯಾನಕ್ಕೆ ಚಾಲನೆ: ಆದಿವಾಸಿಗಳ ಸಮಗ್ರ ಅಭಿವೃದ್ಧಿಗೆ ದಿಕ್ಸೂಚಿಯ ಅನಾವರಣ 
 

ಮಧ್ಯಪ್ರದೇಶದ ಮಾಂಡ್ಲಾದಲ್ಲಿ ಬುಧವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಗ್ರಾಮೀಣ ಸ್ವರಾಜ್ ಅಭಿಯಾನಕ್ಕೆ ಚಾಲನೆ ನೀಡಿದರು. ಮುಂದಿನ ಐದು ವರ್ಷದಲ್ಲಿ ಆದಿವಾಸಿಗಳ ಸಮಗ್ರ ಅಭಿವೃದ್ಧಿಗೆ ದಿಕ್ಸೂಚಿಯೊಂದನ್ನು ಅವರು ಅನಾವರಣಗೊಳಿಸಿದರು. 

ಮಾಂಡ್ಲಾ ಜಿಲ್ಲೆಯ ಮನೇರಿಯಲ್ಲಿ ಇಂಡಿಯನ್ ಆಯಿಲ್ ಕಂಪನಿಯ ಎಲ್.ಪಿ.ಜಿ ಬಾಟ್ಲಿಂಗ್ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಿದರು. ಜತೆಗೆ, ಸ್ಥಳೀಯ ಸರ್ಕಾರದ ವಿವರಸೂಚಿಕೆಯನ್ನು ಚಾಲನೆಗೊಳಿಸಿದರು. 

ಪ್ರತಿಶತ ನೂರರಷ್ಟು ಹೊಗೆರಹಿತ ಅಡುಗೆ ಮನೆ, ಇಂದ್ರಧನುಷ್ ಮಿಷನ್ನಡಿ ಪ್ರತಿಶತ ನೂರರಷ್ಟು ಲಸಿಕೆ ಹಾಕುವಿಕೆಯನ್ನು ದಾಖಲಿಸಿದ ಮತ್ತು ಸೌಭಾಗ್ಯ ಯೋಜನೆಯಡಿ ಪ್ರತಿಶತ ನೂರರಷ್ಟು ವಿದ್ಯುದೀಕರಣಗೊಂಡ ಗ್ರಾಮ ಪಂಚಾಯಿತಿಗಳ ಸರಪಂಚರನ್ನು ಸನ್ಮಾನಿಸಿದರು. 

ದೇಶದೆಲ್ಲೆಡೆಯಿಂದ ಆಗಮಿಸಿದ ಪಂಚಾಯತ್ ರಾಜ್ ಜನಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧಿಯವರ ಗ್ರಾಮೋದಯದಿಂದ ರಾಷ್ಟ್ರೋದಯ ಕರೆಯನ್ನು ಹಾಗೂ ಗ್ರಾಮಸ್ವರಾಜ್ ಕಲ್ಪನೆಯನ್ನು ಸ್ಮರಿಸಿಕೊಂಡರು. ರಾಷ್ಟ್ರೀಯ ಪಂಚಾಯತ್ ದಿನದಂದು ಮಧ್ಯಪ್ರದೇಶದಲ್ಲಿ ಇರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಮಹಾತ್ಮ ಗಂಧಿಯವರು ಯಾವಾಗಲೂ "ಗ್ರಾಮ ಸ್ವರಾಜ್ಯ'ದ ಮಹತ್ವವನ್ನು ಎತ್ತಿ ಹಿಡಿದಿದ್ದರು. ಗ್ರಾಮಗಳಲ್ಲಿ ಸೇವೆ ಸಲ್ಲಿಸುವ ಬದ್ಧತೆಯನ್ನು ಎಲ್ಲರೂ ಮರು ದೃಢೀಕರಿಸಬೇಕೆಂದು ಹೇಳಿದರು. 

ಗ್ರಾಮೀಣಾಭಿವೃದ್ಧಿಗೆ ಆಯವ್ಯಯದ ಬೆಂಬಲ ಇರಬೇಕು. ಆದರೆ, ಕಳೆದ ಐದು ವರ್ಷದಿಂದ ಈ ಬಗೆಗಿನ ಸಂವಾದದಲ್ಲಿ ಪರಿವರ್ತನೆ ಆಗಿದೆ. ಯೋಜನೆಯೊಂದಕ್ಕೆ ಬಿಡುಗಡೆಗೊಂಡ ಅನುದಾನವು ಸಮರ್ಪಕವಾಗಿ ಬಳಕೆ ಯಾಗ ಬೇಕು, ಸಮಯಕ್ಕೆ ಸರಿಯಾಗಿ ಕೆಲಸ ಆಗಬೇಕು ಹಾಗೂ ಪಾರದರ್ಶಕವಾಗಿ ಬಳಸಲ್ಪಡಬೇಕೆಂದು ಜನ ಮಾತಾಡಿಕೊಳ್ಳುತ್ತಿದ್ದಾರೆ ಎಂದು ಪ್ರಧಾನಿ ವಿವರಿಸಿದರು. 

ಜನರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇದು ಮಕ್ಕಳ ಭವಿಷ್ಯಕ್ಕೆ ಅಗತ್ಯ ಎಂದು ನುಡಿದರು. 

ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ತಿಳಿಸಿದ ಅವರು, ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು ನೀರಿನ ಸಂರಕ್ಷಣೆಗೆ ಗಮನ ನೀಡಬೇಕು ಮತ್ತು ಪ್ರತಿ ಹನಿ ನೀರನ್ನು ಸಂರಕ್ಷಿಸಬೇಕು ಎಂದರು. 

ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕ ಒಳಗೊಳ್ಳುವಿಕೆಯಲ್ಲಿ ಜನಧನ ಯೋಜನೆಯ ಪ್ರಾಮುಖ್ಯತೆ ಕುರಿತು ಮಾತನಾಡಿದರು. ವನ ಜನಧನ ಯೋಜನೆಯು ಆದಿವಾಸಿಗಳ ಸಬಲೀಕರಣಕ್ಕೆ ಹಾಗೂ ಗೋಬರ್ ಧನ ಯೋಜನೆಯು ತ್ಯಾಜ್ಯವನ್ನು ಇಂಧನವಾಗಿ ಪರಿವರ್ತಿಸುವ ಮೂಲಕ ರೈತರನ್ನು ಸ್ವಾವಲಂಬಿಗಳನ್ನಾಗಿಸಲಿದೆ ಎಂದರು. 

ಗ್ರಾಮಗಳ ಬದಲಾವಣೆಯಿಂದ ದೇಶದ ಬದಲಾವಣೆ ಸಾಧ್ಯವಾಗಲಿದೆ ಎಂದ ಅವರು, ಕೇಂದ್ರ ಸರ್ಕಾರವು ಇತ್ತೀಚೆಗೆ ತೆಗೆದುಕೊಂಡ ಕ್ರಮಗಳಿಂದ ಮಹಿಳೆಯರ ಸುರಕ್ಷತೆಯು ಇನ್ನಷ್ಟು ಖಾತ್ರಿಗೊಳ್ಳಲಿದೆ ಎಂದರು. 



(Release ID: 1530342) Visitor Counter : 116