Farmer's Welfare
ಸಹಕಾರ ಕ್ಷೇತ್ರದಲ್ಲಿ ವಿಕೇಂದ್ರೀಕೃತ ಧಾನ್ಯ ಸಂಗ್ರಹಣೆ ಯೋಜನೆ
"ಭಾರತದ ವಿಕೇಂದ್ರೀಕೃತ ಧಾನ್ಯ ಸಂಗ್ರಹಣೆಯನ್ನು ಬಲಪಡಿಸುವುದು"
Posted On:
03 SEP 2026 12:15PM
|
ಭಾರತದ ವಿಸ್ತರಿಸುತ್ತಿರುವ ಕೃಷಿ ಉತ್ಪಾದನೆ ಮತ್ತು ಆಹಾರ ಭದ್ರತಾ ಪ್ರಯತ್ನಗಳು ದೇಶಾದ್ಯಂತ ವಿಕೇಂದ್ರೀಕೃತ ಧಾನ್ಯ ಸಂಗ್ರಹಣಾ ಮೂಲಸೌಕರ್ಯದ ಮಹತ್ವವನ್ನು ಹೆಚ್ಚಿಸಿವೆ. 2023ರಲ್ಲಿ ಪ್ರಾರಂಭಿಸಲಾದ ಸಹಕಾರ ಕ್ಷೇತ್ರದಲ್ಲಿನ ವಿಕೇಂದ್ರೀಕೃತ ಧಾನ್ಯ ಸಂಗ್ರಹಣೆ ಯೋಜನೆಯನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪಿಎಸಿಎಸ್) ಮೂಲಕ ಸಂಗ್ರಹಣೆ, ಸಂಸ್ಕರಣೆ, ಖರೀದಿ ಮತ್ತು ವಿತರಣಾ ವ್ಯವಸ್ಥೆಗಳನ್ನು ಸುಧಾರಿಸಲು ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯು ಚಾಲ್ತಿಯಲ್ಲಿರುವ ಸರ್ಕಾರಿ ಯೋಜನೆಗಳನ್ನು ಒಗ್ಗೂಡಿಸುವ ಮೂಲಕ ಸಮಗ್ರ, ಸಹಕಾರ-ನೇತೃತ್ವದ ವಿಧಾನವನ್ನು ಅಳವಡಿಸಿಕೊಂಡಿದೆ. ಇದನ್ನು ಸಾಂಸ್ಥಿಕ ಸಮನ್ವಯ ಮತ್ತು ಆರ್ಥಿಕ ಬೆಂಬಲ ವ್ಯವಸ್ಥೆಗಳ ಮೂಲಕ ಬೆಂಬಲಿಸಲಾಗುತ್ತಿದೆ. 9,750 ಮೆಟ್ರಿಕ್ ಟನ್ ಸಂಗ್ರಹಣಾ ಸಾಮರ್ಥ್ಯದೊಂದಿಗೆ 11 ರಾಜ್ಯಗಳು/ಪಿಎಸಿಎಸ್ ಗಳಲ್ಲಿ ಪ್ರಾಯೋಗಿಕ ಯೋಜನೆಗಳೊಂದಿಗೆ ಪ್ರಾರಂಭವಾದ ಈ ಉಪಕ್ರಮವು ಸ್ಥಿರವಾಗಿ ವಿಸ್ತರಿಸಿದೆ. ಜುಲೈ 2026ರ ವೇಳೆಗೆ, ದೇಶಾದ್ಯಂತ 313 ಪಿಎಸಿಎಸ್ ಗಳಲ್ಲಿ ಗೋದಾಮು ನಿರ್ಮಾಣವು ಪೂರ್ಣಗೊಂಡಿದ್ದು, 1.80 ಲಕ್ಷ ಮೆಟ್ರಿಕ್ ಟನ್ಗಿಂತಲೂ (ಎಲ್ಎಂಟಿ) ಹೆಚ್ಚು ಸಂಗ್ರಹಣಾ ಸಾಮರ್ಥ್ಯವನ್ನು ಸೃಷ್ಟಿಸಲಾಗಿದೆ. ಈ ಚೌಕಟ್ಟು ಗುಣಮಟ್ಟದ ಮಾನದಂಡಗಳು, ಪಾರದರ್ಶಕತೆ ಮತ್ತು ಕಾರ್ಯಾಚರಣೆಯ ಸಾಮರ್ಥ್ಯಕ್ಕೂ ಒತ್ತು ನೀಡುತ್ತದೆ.
|
ಬೆಳೆಯುತ್ತಿರುವ ಕೃಷಿ ಆರ್ಥಿಕತೆಗೆ ಸಂಗ್ರಹಣಾ ಸಾಮರ್ಥ್ಯದ ನಿರ್ಮಾಣ
ಭಾರತದ ಧಾನ್ಯ ಸಂಗ್ರಹಣಾ ವ್ಯವಸ್ಥೆಯು ಸಾಂಪ್ರದಾಯಿಕ ಸಂಗ್ರಹಣಾ ಪದ್ಧತಿಗಳು, ವಿಕೇಂದ್ರೀಕೃತ ಪ್ರಾದೇಶಿಕ ವ್ಯವಸ್ಥೆಗಳು ಮತ್ತು ಆಧುನಿಕ ಮೂಲಸೌಕರ್ಯಗಳ ಸಂಯೋಜನೆಯ ಮೂಲಕ ವಿಕಸನಗೊಂಡಿದೆ. ಈ ಸಮಗ್ರ ವಿಧಾನವು ಆಹಾರ ಸಂರಕ್ಷಣೆಯನ್ನು ಬಲಪಡಿಸಿದೆ ಮತ್ತು ದೇಶದ ಆಹಾರ ಭದ್ರತೆಗೆ ಬೆಂಬಲ ನೀಡಿದೆ. ಮಣ್ಣಿನ ಮಡಕೆಗಳು, ಭೂಗತ ಗುಂಡಿಗಳು ಮತ್ತು ಮಣ್ಣಿನ ಲೇಪನದ ಸಂಗ್ರಹಣಾ ರಚನೆಗಳಂತಹ ಸಾಂಪ್ರದಾಯಿಕ ಸಂಗ್ರಹಣಾ ವಿಧಾನಗಳು ಗೋದಾಮುಗಳು ಮತ್ತು ಸಿಲೋ ಆಧಾರಿತ ಮೂಲಸೌಕರ್ಯಗಳೊಂದಿಗೆ ಇಂದಿಗೂ ಮುಂದುವರಿದಿವೆ. ಆದಾಗ್ಯೂ, ಹೆಚ್ಚುತ್ತಿರುವ ಕೃಷಿ ಉತ್ಪಾದನೆ ಮತ್ತು ವಿಸ್ತರಿಸುತ್ತಿರುವ ಆಹಾರ ಭದ್ರತೆಯ ಅಗತ್ಯತೆಗಳು ದೇಶಾದ್ಯಂತ ಆಧುನಿಕ, ವಿಕೇಂದ್ರೀಕೃತ ಸಂಗ್ರಹಣಾ ಸೌಲಭ್ಯಗಳ ಅಗತ್ಯವನ್ನು ಹೆಚ್ಚಿಸಿವೆ.
ಮೂರನೇ ನಿರೀಕ್ಷಿತ ಅಂದಾಜಿನ (2025-26) ಪ್ರಕಾರ, ದೇಶದ ಒಟ್ಟು ಆಹಾರ ಧಾನ್ಯಗಳ ಉತ್ಪಾದನೆಯು 376.563 ಮಿಲಿಯನ್ ಟನ್ಗಳಷ್ಟಿರಬಹುದು ಎಂದು ಅಂದಾಜಿಸಲಾಗಿದೆ. ಇದು ಕಳೆದ ವರ್ಷದ 357.732 ಮಿಲಿಯನ್ ಟನ್ ಉತ್ಪಾದನೆಗಿಂತ ಸುಮಾರು 18.8 ಮಿಲಿಯನ್ ಟನ್ (ಶೇಕಡಾ 5.3) ಹೆಚ್ಚಾಗಿದೆ. ಭಾರತವು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ, 2013 ರ ಅಡಿಯಲ್ಲಿ ಸುಮಾರು 80 ಕೋಟಿ ಜನರನ್ನು ತಲುಪುವ ವಿಶ್ವದ ಅತಿ ದೊಡ್ಡ ಆಹಾರ ಭದ್ರತಾ ಕಾರ್ಯಕ್ರಮಗಳಲ್ಲಿ ಒಂದನ್ನು ನಡೆಸುತ್ತಿದೆ. ಈ ಅಗತ್ಯತೆಗಳನ್ನು ಪೂರೈಸುವುದು ಧಾನ್ಯ ಸಂಗ್ರಹಣಾ ಸೌಲಭ್ಯಗಳ ಬಲವಾದ ಜಾಲವನ್ನು ಅವಲಂಬಿಸಿದೆ. ಭಾರತೀಯ ಆಹಾರ ನಿಗಮ (ಎಫ್ಸಿಐ) ಮತ್ತು ರಾಜ್ಯ ಸಂಸ್ಥೆಗಳು ನಿರ್ವಹಿಸುವ ಕೇಂದ್ರೀಕೃತ ಸಂಗ್ರಹಣಾ ಮೂಲಸೌಕರ್ಯವು ಪ್ರಮುಖವಾಗಿದ್ದರೂ, ವಿಕೇಂದ್ರೀಕೃತ ಸೌಲಭ್ಯಗಳು ಸಹ ಅಷ್ಟೇ ಅಗತ್ಯವಾಗಿವೆ. ಸಹಕಾರ ಸಚಿವಾಲಯವು ಉತ್ಪಾದನಾ ಕೇಂದ್ರಗಳಿಗೆ ಹತ್ತಿರವಿರುವ ಸಂಗ್ರಹಣಾ ಸೌಲಭ್ಯಗಳ ಅಗತ್ಯವನ್ನು ಎತ್ತಿಹಿಡಿದಿದೆ. ಈ ಸೌಲಭ್ಯಗಳು ಖರೀದಿ ಕೇಂದ್ರಗಳ ನಡುವಿನ ಸಾರಿಗೆ ವೆಚ್ಚವನ್ನು ಕಡಿಮೆ ಮಾಡುವುದು, ಆಹಾರ ಧಾನ್ಯಗಳ ಪೋಲಾಗುವುದನ್ನು ತಡೆಯುವುದು ಮತ್ತು ಆಹಾರ ಭದ್ರತೆಗೆ ಬೆಂಬಲ ನೀಡುವತ್ತ ಗಮನಹರಿಸುತ್ತವೆ.

ಈ ಸಂದರ್ಭದಲ್ಲಿ, ಸಹಕಾರ ಕ್ಷೇತ್ರದಲ್ಲಿನ ವಿಕೇಂದ್ರೀಕೃತ ಧಾನ್ಯ ಸಂಗ್ರಹಣೆ ಯೋಜನೆಯನ್ನು 31 ಮೇ 2023 ರಂದು ಪ್ರಾಯೋಗಿಕ ಯೋಜನೆಯಾಗಿ ಜಾರಿಗೆ ತರಲಾಯಿತು. ಈ ಉಪಕ್ರಮವು ಸಹಕಾರ ಸಂಘಗಳ ಮೂಲಕ ವಿಕೇಂದ್ರೀಕೃತ ಧಾನ್ಯ ಸಂಗ್ರಹಣೆಯನ್ನು ಬಲಪಡಿಸುವತ್ತ ಪ್ರಮುಖ ಹೆಜ್ಜೆಯನ್ನಿಟ್ಟಿತು. ಸಹಕಾರ ಚೌಕಟ್ಟಿನಲ್ಲಿ ನೆಲೆಗೊಂಡಿರುವ ಈ ಉಪಕ್ರಮವು ಈ ಕೆಳಗಿನವುಗಳನ್ನು ಸಾಧಿಸುವ ಗುರಿಯನ್ನು ಹೊಂದಿದೆ:
- ಆಹಾರ ಧಾನ್ಯಗಳ ಪೋಲಾಗುವುದನ್ನು ಕಡಿಮೆ ಮಾಡುವುದು ಮತ್ತು ಆಹಾರ ಭದ್ರತೆಯನ್ನು ಬಲಪಡಿಸುವುದು,
- ರೈತರು ನಷ್ಟದ ಮಾರಾಟವನ್ನು ತಪ್ಪಿಸಲು ಮತ್ತು ಉತ್ತಮ ಬೆಲೆಯನ್ನು ಪಡೆಯಲು ಹೆಚ್ಚಿನ ನಮ್ಯತೆಯನ್ನು ಒದಗಿಸುವುದು,
- ಖರೀದಿ ಕೇಂದ್ರಗಳು, ಗೋದಾಮುಗಳು ಮತ್ತು ನ್ಯಾಯಬೆಲೆ ಅಂಗಡಿಗಳ ನಡುವಿನ ಸಾರಿಗೆ ವೆಚ್ಚವನ್ನು ಕಡಿಮೆ ಮಾಡುವುದು,
- ಕೃಷಿ ಚಟುವಟಿಕೆಗಳ ವೈವಿಧ್ಯೀಕರಣದ ಮೂಲಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪಿಎಸಿಎಸ್) ಪಾತ್ರವನ್ನು ವಿಸ್ತರಿಸುವುದು (ಪಿಎಸಿಎಸ್ ಎಂದರೆ ಗ್ರಾಮೀಣ ಸಾಲಗಾರರಿಗೆ ಅಲ್ಪಾವಧಿ ಸಾಲ ಮತ್ತು ಹಣಕಾಸು ಸೇವೆಗಳನ್ನು ಒದಗಿಸುವ ಹಾಗೂ ಮರುಪಾವತಿ ಸಂಗ್ರಹಣೆಯನ್ನು ಸುಗಮಗೊಳಿಸುವ ಗ್ರಾಮ ಮಟ್ಟದ ಸಂಸ್ಥೆಗಳಾಗಿವೆ). ಮತ್ತು,
- ರೈತರಿಗೆ ಹೆಚ್ಚಿನ ಆದಾಯದ ಅವಕಾಶಗಳನ್ನು ಬೆಂಬಲಿಸುವುದು.
ಸಮಗ್ರ ಮೂಲಸೌಕರ್ಯ ಮತ್ತು ಒಗ್ಗೂಡುವಿಕೆಯ ಚೌಕಟ್ಟು
ಸಹಕಾರ ಕ್ಷೇತ್ರದಲ್ಲಿನ ವಿಕೇಂದ್ರೀಕೃತ ಧಾನ್ಯ ಸಂಗ್ರಹಣೆ ಯೋಜನೆಯು ಪಿಎಸಿಎಸ್ ಹಂತದಲ್ಲಿ ಸಮಗ್ರ ಕೃಷಿ ಮೂಲಸೌಕರ್ಯವನ್ನು ಸೃಷ್ಟಿಸಲು ಶ್ರಮಿಸುತ್ತದೆ. ಈ ಕಾರ್ಯವಿಧಾನವು ಚಾಲ್ತಿಯಲ್ಲಿರುವ ಸರ್ಕಾರಿ ಯೋಜನೆಗಳ ಒಗ್ಗೂಡುವಿಕೆಯ ಮೂಲಕ ಕಾರ್ಯನಿರ್ವಹಿಸುತ್ತದೆ:
- ಕೃಷಿ ಮೂಲಸೌಕರ್ಯ ನಿಧಿ ಯೋಜನೆ: ಕೊಯ್ಲೋತ್ತರ ಮೂಲಸೌಕರ್ಯಗಳ ಸೃಷ್ಟಿ ಮತ್ತು ಮೇಲ್ದರ್ಜೆಗೇರಿಸಲು ಧನಸಹಾಯ ಮತ್ತು ಬಡ್ಡಿ ಸಬ್ಸಿಡಿ ಬೆಂಬಲವನ್ನು ಒದಗಿಸುತ್ತದೆ.
- ಕೃಷಿ ಮಾರುಕಟ್ಟೆ ಮೂಲಸೌಕರ್ಯ ಯೋಜನೆ: ಆಹಾರ ಧಾನ್ಯ ಸಂಗ್ರಹಣಾ ಸೌಲಭ್ಯಗಳ ನಿರ್ಮಾಣಕ್ಕಾಗಿ ಹಿಂಬದಿ ಬಂಡವಾಳ ಸಬ್ಸಿಡಿಯನ್ನು ಒದಗಿಸುತ್ತದೆ.
- ಕೃಷಿ ಯಾಂತ್ರೀಕರಣದ ಉಪ-ಅಭಿಯಾನ: ಕಸ್ಟಮ್ ಹೈರಿಂಗ್ ಕೇಂದ್ರಗಳ ಸ್ಥಾಪನೆ ಮತ್ತು ಕೃಷಿ ಯಂತ್ರೋಪಕರಣಗಳ ಲಭ್ಯತೆಯನ್ನು ಸುಗಮಗೊಳಿಸುತ್ತದೆ.
- ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ನಿಯಮಬದ್ಧಗೊಳಿಸುವಿಕೆ ಯೋಜನೆ (PMFME): ಕಿರು ಆಹಾರ ಸಂಸ್ಕರಣಾ ಘಟಕಗಳ ನಿಯಮಬದ್ಧಗೊಳಿಸುವಿಕೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಈ ಯೋಜನೆಗಳ ಒಗ್ಗೂಡುವಿಕೆಯು ಪಿಎಸಿಎಸ್ ಗಳು ಸಮಗ್ರ ಗ್ರಾಮೀಣ ಸೇವಾ ಕೇಂದ್ರಗಳಾಗಿ ವಿಕಸನಗೊಳ್ಳಲು ಸಹಾಯ ಮಾಡುತ್ತದೆ. ಇದು ಕೃಷಿ ಮೂಲಸೌಕರ್ಯವನ್ನು ಬಲಪಡಿಸುತ್ತದೆ, ಮೌಲ್ಯವರ್ಧನೆ ಸರಪಳಿಯನ್ನು ವೃದ್ಧಿಸುತ್ತದೆ ಮತ್ತು ರೈತರ ಆದಾಯವನ್ನು ಉತ್ತಮಗೊಳಿಸುತ್ತದೆ.
ಸಹಕಾರ ಕ್ಷೇತ್ರದಲ್ಲಿನ ವಿಕೇಂದ್ರೀಕೃತ ಧಾನ್ಯ ಸಂಗ್ರಹಣೆ ಯೋಜನೆಯಡಿಯಲ್ಲಿ ಲಭ್ಯವಿರುವ ಪ್ರಮುಖ ಸೌಲಭ್ಯಗಳು ಮತ್ತು ಸೇವೆಗಳು:
- ಕಸ್ಟಮ್ ಹೈರಿಂಗ್ ಕೇಂದ್ರಗಳು: ರೈತರಿಗೆ ಬಾಡಿಗೆಗೆ ನೀಡಲು ಪಿಎಸಿಎಸ್ ಗಳು ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ಈ ಕೇಂದ್ರಗಳು ನೆರವಾಗುತ್ತವೆ. ಉಪಕರಣಗಳಲ್ಲಿ ಟ್ರ್ಯಾಕ್ಟರ್ಗಳು, ಹಾರ್ವೆಸ್ಟರ್ಗಳು, ಟಿಲ್ಲರ್ಗಳು ಮತ್ತು ಇತರ ಕೃಷಿ ಯಂತ್ರಗಳು ಸೇರಿರಬಹುದು.
- ನ್ಯಾಯಬೆಲೆ ಅಂಗಡಿಗಳು: ಇವು ಸ್ಥಳೀಯ ಸಮುದಾಯಗಳಲ್ಲಿ ಧಾನ್ಯ ವಿತರಣೆ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ಮಾರಾಟವನ್ನು ಸುಗಮಗೊಳಿಸುತ್ತವೆ.
- ಪ್ರಾಥಮಿಕ ಸಂಸ್ಕರಣಾ ಘಟಕಗಳು: ಧಾನ್ಯ ಶುಚಿಗೊಳಿಸುವಿಕೆ, ವಿಂಗಡಣೆ ಮತ್ತು ಒಣಗಿಸುವಿಕೆಯಂತಹ ಸಂಸ್ಕರಣಾ ಚಟುವಟಿಕೆಗಳನ್ನು ಇವು ಕೈಗೊಳ್ಳುತ್ತವೆ; ಆ ಮೂಲಕ ಬೆಳೆಯ ಗುಣಮಟ್ಟ ಮತ್ತು ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸುತ್ತವೆ.
- ಖರೀದಿ ಕೇಂದ್ರಗಳು: ರಾಜ್ಯ ಸಂಸ್ಥೆಗಳು ಮತ್ತು ಎಫ್ಸಿಐ ಗಾಗಿ ಪಿಎಸಿಎಸ್ ಗಳು ಧಾನ್ಯ ಖರೀದಿ ಮಾಡಲು ಇವು ಬೆಂಬಲ ನೀಡುತ್ತವೆ.
- ಸಿಲೋ-ಆಧಾರಿತ ಸಂಗ್ರಹಣೆ : ಈ ಯೋಜನೆಯು ಸಹಕಾರ ಸಂಗ್ರಹಣಾ ಮಾದರಿಯಡಿಯಲ್ಲಿ 50 ಮೆಟ್ರಿಕ್ ಟನ್, 100 ಎಂಟಿ, ಮತ್ತು 200 ಎಂಟಿ ಸಾಮರ್ಥ್ಯದ ಸಿಲೋ-ಆಧಾರಿತ ಸಂಗ್ರಹಣಾ ಮೂಲಸೌಕರ್ಯಕ್ಕೆ ಅವಕಾಶ ಕಲ್ಪಿಸುತ್ತದೆ.

ಅನುಷ್ಠಾನದ ಚೌಕಟ್ಟು ಮತ್ತು ಸಂಸ್ಥೆಗಳ ಆಯ್ಕೆ
ಅನುಷ್ಠಾನದ ಚೌಕಟ್ಟು ಈ ಯೋಜನೆಯಡಿಯಲ್ಲಿ ಭಾಗವಹಿಸುವ ಪಿಎಸಿಎಸ್ ಗಳಿಗಾಗಿ ಸಾಂಸ್ಥಿಕ ಮತ್ತು ಅರ್ಹತಾ ಮಾನದಂಡಗಳನ್ನು ಸಹ ವಿಧಿಸುತ್ತದೆ.
"ಮಾರ್ಗದರ್ಶಿಕಾ" (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ಪ್ರಕಾರ, ಪಿಎಸಿಎಸ್ ಗಳನ್ನು ಜಿಲ್ಲಾ ಸಹಕಾರ ಅಭಿವೃದ್ಧಿ ಸಮಿತಿಗಳು ಗುರುತಿಸುತ್ತವೆ ಮತ್ತು ಅನುಮೋದಿಸುತ್ತವೆ. ಧಾನ್ಯ ಸಂಗ್ರಹಣೆಯ ಬೇಡಿಕೆ ಇರುವ ಪ್ರದೇಶಗಳಲ್ಲಿ ಪಿಎಸಿಎಸ್ ಗಳನ್ನು ಆಯ್ಕೆ ಮಾಡಲಾಗುತ್ತದೆ.
ಈ ಯೋಜನೆಯು ಮೂಲಸೌಕರ್ಯ ಅಭಿವೃದ್ಧಿಗಾಗಿ ಭೂಮಿಗೆ ಸಂಬಂಧಿಸಿದ ಷರತ್ತುಗಳನ್ನು ಸಹ ನಿಗದಿಪಡಿಸುತ್ತದೆ. ಪಿಎಸಿಎಸ್ ಗಳು ಆದ್ಯತೆಯ ಮೇರೆಗೆ ಸ್ವಂತ ಭೂಮಿಯನ್ನು ಹೊಂದಿರಬೇಕು. ಆ ಭೂಮಿಯು ನೀರು ನಿಲ್ಲುವಂಥದ್ದಾಗಿರಬಾರದು ಅಥವಾ ಅರಣ್ಯ ಪ್ರದೇಶಗಳಲ್ಲಿ ಇರಬಾರದು. ಭೂಮಿಯ ಬಳಕೆಗೆ ಪಿಎಸಿಎಸ್ ಸದಸ್ಯರ ಸಮ್ಮತಿ ಅಗತ್ಯವಿದೆ. ಗುತ್ತಿಗೆಗೆ ಪಡೆದ ಭೂಮಿಯಾಗಿದ್ದರೆ, ಗುತ್ತಿಗೆಯ ಅವಧಿಯು 20 ವರ್ಷಗಳಿಗಿಂತ ಹೆಚ್ಚಿರಬೇಕು.

ಅನುಷ್ಠಾನದ ಕಾರ್ಯವಿಧಾನ
ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮವು ಸಹಕಾರ ಕ್ಷೇತ್ರದಲ್ಲಿನ ವಿಕೇಂದ್ರೀಕೃತ ಧಾನ್ಯ ಸಂಗ್ರಹಣೆ ಯೋಜನೆಯ ಅನುಷ್ಠಾನ ಸಂಸ್ಥೆಯಾಗಿದೆ. ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಮನ್ವಯದ ಮೂಲಕ ಈ ಅನುಷ್ಠಾನಕ್ಕೆ ಬೆಂಬಲ ನೀಡಲಾಗುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ, ಸಚಿವಾಲಯಗಳ ನಡುವಿನ ಸಮಿತಿ ಯೋಜನೆಯ ಒಟ್ಟಾರೆ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುತ್ತದೆ. ರಾಷ್ಟ್ರೀಯ ಮಟ್ಟದ ಸಮನ್ವಯ ಸಮಿತಿಯು ಭಾಗವಹಿಸುವ ಸಂಸ್ಥೆಗಳು ಮತ್ತು ಏಜೆನ್ಸಿಗಳ ನಡುವೆ ಕಾರ್ಯಾಚರಣೆಯ ಸಮನ್ವಯವನ್ನು ಬೆಂಬಲಿಸುತ್ತದೆ. ರಾಜ್ಯ ಸಹಕಾರ ಅಭಿವೃದ್ಧಿ ಸಮಿತಿಗಳು ಮತ್ತು ಜಿಲ್ಲಾ ಸಹಕಾರ ಅಭಿವೃದ್ಧಿ ಸಮಿತಿಗಳು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಅನುಷ್ಠಾನ ಹಾಗೂ ಸಮನ್ವಯಕ್ಕೆ ಬೆಂಬಲ ನೀಡುತ್ತವೆ.
ಆರ್ಥಿಕ ಬೆಂಬಲ ಮತ್ತು ಯೋಜನೆಯ ಕಾರ್ಯಸಾಧ್ಯತೆ:
ಯೋಜನೆಯಡಿಯಲ್ಲಿ ಯೋಜನಾ ಕಾರ್ಯಸಾಧ್ಯತೆಯನ್ನು ಸುಧಾರಿಸಲು ಸರ್ಕಾರವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಇವುಗಳಲ್ಲಿ ಎಎಂಐ ಯೋಜನೆಯಡಿಯಲ್ಲಿನ ಸಬ್ಸಿಡಿಯನ್ನು ಶೇಕಡಾ 25 ರಿಂದ ಶೇಕಡಾ 33.33 ಕ್ಕೆ ಹೆಚ್ಚಿಸುವುದು, ಮಾರ್ಜಿನ್ ಹಣದ ಅಗತ್ಯವನ್ನು ಶೇಕಡಾ 20 ರಿಂದ ಶೇಕಡಾ 10 ಕ್ಕೆ ಇಳಿಸುವುದು ಮತ್ತು ಗೋದಾಮು ನಿರ್ಮಾಣದ ವೆಚ್ಚದ ಮಾನದಂಡಗಳ ಪರಿಷ್ಕರಣೆ ಸೇರಿವೆ.
ಅರ್ಹ ಯೋಜನೆಗಳಡಿಯಲ್ಲಿ ಬಡ್ಡಿ ಸಬ್ಸಿಡಿ ಮತ್ತು ಸಾಲ ಬೆಂಬಲ ಕಾರ್ಯವಿಧಾನಗಳ ಮೂಲಕವೂ ಆರ್ಥಿಕ ನೆರವು ಲಭ್ಯವಿದೆ. ಎಎಂಐ ಯೋಜನೆಯಡಿಯಲ್ಲಿ, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಅರ್ಹ ಯೋಜನೆಗಳಿಗೆ ಸಬ್ಸಿಡಿ ತಲುಪಿಸುವ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ. ರಾಜ್ಯ ಸಹಕಾರ ಬ್ಯಾಂಕ್ಗಳು ಮತ್ತು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ಗಳು ಪಿಎಸಿಎಸ್ ಗಳಿಗೆ ಪ್ರಾಥಮಿಕ ಸಾಲ ನೀಡುವ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುತ್ತವೆ. ಅನುಷ್ಠಾನದ ಚೌಕಟ್ಟಿನಡಿಯಲ್ಲಿ ಸಾಲವನ್ನು ಮಂಜೂರು ಮಾಡುವ ಮತ್ತು ವಿತರಿಸುವ ಜವಾಬ್ದಾರಿಯನ್ನು ಈ ಸಂಸ್ಥೆಗಳು ಹೊಂದಿರುತ್ತವೆ.
ಭಾಗವಹಿಸುವ ಸಹಕಾರ ಸಂಘಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಈ ಯೋಜನೆಯು ನಬಾರ್ಡ್ನ ವಿಶೇಷ ಮರುಕಳುಹಿಸುವಿಕೆ ಸೌಲಭ್ಯವನ್ನು ಬಳಸಿಕೊಳ್ಳುತ್ತದೆ. ಎಐಎಫ್ ಅಡಿಯಲ್ಲಿ ಲಭ್ಯವಿರುವ ಶೇಕಡಾ 3 ರ ಬಡ್ಡಿ ಸಬ್ಸಿಡಿಯೊಂದಿಗೆ ಸಂಯೋಜಿಸಿದಾಗ, ಯೋಜನೆಯಡಿಯಲ್ಲಿ ಪಿಎಸಿಎಸ್ ಗಳ ಪರಿಣಾಮಕಾರಿ ಸಾಲದ ಬಡ್ಡಿದರವು ಶೇಕಡಾ 1 ಕ್ಕೆ ಕಡಿಮೆಯಾಗುತ್ತದೆ.
ನಿಗದಿತ ಷರತ್ತುಗೊಳಪಟ್ಟು, ಯೋಜನೆಯಡಿಯಲ್ಲಿ ನಿರ್ಮಿಸಲಾದ ಅರ್ಹ ಗೋದಾಮುಗಳ ಖಚಿತ ಬಾಡಿಗೆ ಸೌಲಭ್ಯವನ್ನು ಒದಗಿಸಲು ಎಫ್ಸಿಐ ಗೂ ಅಧಿಕಾರ ನೀಡಲಾಗಿದೆ. ಈ ಕ್ರಮವು ಸಂಗ್ರಹಣಾ ಯೋಜನೆಗಳ ಆರ್ಥಿಕ ಕಾರ್ಯಸಾಧ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಪಿಎಸಿಎಸ್ ಗಳ ಹೆಚ್ಚಿನ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ.
ಈ ರಚನೆಯು ಕಾರ್ಯಾಚರಣೆಗೆ ಬಂದ ನಂತರ, ಹಂತ ಹಂತದ ವಿಸ್ತರಣಾ ತಂತ್ರದ ಮೂಲಕ ಅನುಷ್ಠಾನವು ಪ್ರಗತಿಯನ್ನು ಕಂಡಿತು.
ಪ್ರಾಯೋಗಿಕ ಹಂತದಿಂದ ವಿಸ್ತರಣೆಯತ್ತ
ಈ ಯೋಜನೆಯು ಪ್ರಾಯೋಗಿಕ ಯೋಜನೆಗಳಿಂದ ಪ್ರಾರಂಭವಾಗಿ, ಬೃಹತ್ ಮಟ್ಟದ ವಿಸ್ತರಣೆಯತ್ತ ಸಾಗುವ ಹಂತ ಹಂತದ ಅನುಷ್ಠಾನ ತಂತ್ರದ ಮೂಲಕ ಪ್ರಗತಿಯನ್ನು ಕಂಡಿದೆ. ಪ್ರಾಯೋಗಿಕ ಹಂತದಡಿಯಲ್ಲಿ, 11 ರಾಜ್ಯಗಳ 11 ಪಿಎಸಿಎಸ್ ಗಳಲ್ಲಿ ಗೋದಾಮು ನಿರ್ಮಾಣವು ಪೂರ್ಣಗೊಂಡಿದ್ದು, 9,750 ಮೆಟ್ರಿಕ್ ಟನ್ ಸಂಗ್ರಹಣಾ ಸಾಮರ್ಥ್ಯವನ್ನು ಸೃಷ್ಟಿಸಲಾಗಿದೆ. ಈ ಪ್ರಾಯೋಗಿಕ ಯೋಜನೆಗಳನ್ನು ಮಹಾರಾಷ್ಟ್ರ, ಉತ್ತರ ಪ್ರದೇಶ, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಉತ್ತರಾಖಂಡ, ತಮಿಳುನಾಡು, ತೆಲಂಗಾಣ, ಅಸ್ಸಾಂ, ಕರ್ನಾಟಕ ಮತ್ತು ತ್ರಿಪುರಾಗಳಲ್ಲಿ ಜಾರಿಗೆ ತರಲಾಗಿತ್ತು. ಈ ಪ್ರಾಯೋಗಿಕ ಯೋಜನೆಗಳು ಪ್ರಮುಖ ಕಾರ್ಯಾಚರಣೆಯ ತಡಿಪಾಯವನ್ನು ಒದಗಿಸಿವೆ ಹಾಗೂ ಸಹಕಾರ ಮಟ್ಟದಲ್ಲಿ ಸ್ಥಳೀಯ ಸಂಗ್ರಹಣಾ ಮೂಲಸೌಕರ್ಯದ ಸಾಕಾರತೆಯನ್ನು ಪ್ರದರ್ಶಿಸಿವೆ.
ಈ ತಡಿಪಾಯದ ಮೇಲೆ ನಿರ್ಮಿತವಾದ ಅನುಷ್ಠಾನವು ಗಮನಾರ್ಹವಾಗಿ ವಿಸ್ತರಿಸಿದೆ. ಜುಲೈ 2026 ರ ವೇಳೆಗೆ, ಯೋಜನೆಯಡಿಯಲ್ಲಿ 1012 ಪಿಎಸಿಎಸ್ ಅಥವಾ ಸಹಕಾರ ಸಂಘಗಳನ್ನು ಗುರುತಿಸಲಾಗಿದೆ. ಜುಲೈ 2026 ರ ವೇಳೆಗೆ, 313 ಪಿಎಸಿಎಸ್ ಗಳಲ್ಲಿ ಗೋದಾಮುಗಳ ನಿರ್ಮಾಣವು ಪೂರ್ಣಗೊಂಡಿದ್ದು, 1.80 ಲಕ್ಷ ಮೆಟ್ರಿಕ್ ಟನ್ಗಿಂತಲೂ ಹೆಚ್ಚಿನ ಸಂಗ್ರಹಣಾ ಸಾಮರ್ಥ್ಯವನ್ನು ಸೃಷ್ಟಿಸಲಾಗಿದೆ.

ಕಾರ್ಯರೂಪದಲ್ಲಿ ಸಹಕಾರ ಸಂಗ್ರಹಣೆ: ನೆರ್ಪಿಂಗಲೈ ಪಿಎಸಿಎಸ್
ಈ ಪ್ರಗತಿಯು ಕಲ್ಪನೆಯಿಂದ ಬೃಹತ್ ಮಟ್ಟದ ಅನುಷ್ಠಾನದತ್ತ ಸಾಗುತ್ತಿರುವ ಪರಿವರ್ತನೆಯನ್ನು ಪ್ರತಿಬಿಂಬಿಸುತ್ತದೆ.
|
ಮಹಾರಾಷ್ಟ್ರದ ಅಮರಾವತಿಯಲ್ಲಿರುವ 'ನೆರ್ಪಿಂಗಲೈ ಪಿಎಸಿಎಸ್', ಸಹಕಾರ ಕ್ಷೇತ್ರದಲ್ಲಿನ ವಿಕೇಂದ್ರೀಕೃತ ಧಾನ್ಯ ಸಂಗ್ರಹಣೆ ಯೋಜನೆಯಡಿಯಲ್ಲಿ 3,000 ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮನ್ನು ನಿರ್ಮಿಸಿದೆ. ಈ ಯೋಜನೆಗೆ ಕೃಷಿ ಮಾರುಕಟ್ಟೆ ಮೂಲಸೌಕರ್ಯ ಮತ್ತು ಕೃಷಿ ಮೂಲಸೌಕರ್ಯ ನಿಧಿ ಯೋಜನೆಗಳಡಿಯಲ್ಲಿ ನೆರವು ದೊರೆತಿದೆ. ನಬಾರ್ಡ್ನ ಮರುಕಳುಹಿಸುವಿಕೆ ಬೆಂಬಲದೊಂದಿಗೆ, ಈ ಯೋಜನೆಯ ಪರಿಣಾಮಕಾರಿ ಸಾಲದ ಬಡ್ಡಿದರವನ್ನು ಶೇಕಡಾ 1 ಕ್ಕೆ ಇಳಿಸಲಾಗಿದೆ.
ಸುಮಾರು 300 ರೈತರು ಈ ಗೋದಾಮಿನಲ್ಲಿ ಸುಮಾರು 32,000 ಚೀಲ ಸೋಯಾಬೀನ್ ಧಾನ್ಯವನ್ನು ಸಂಗ್ರಹಿಸುತ್ತಿದ್ದಾರೆ. ಸಂಗ್ರಹಿಸಿದ ಬೆಳೆಯ ಆಧಾರದ ಮೇಲೆ ಸಹಕಾರ ಸಂಘವು ಸುಮಾರು 4.50 ಕೋಟಿ ರೂಪಾಯಿಗಳ ಮುಂಗಡ ಸಾಲವನ್ನು ಒದಗಿಸಿದ್ದು, ರೈತರು ಹಣಕಾಸಿನ ನೆರವು ಪಡೆಯಲು ಮತ್ತು ನಷ್ಟದ ಮಾರಾಟವನ್ನು ತಪ್ಪಿಸಲು ಸಹಾಯ ಮಾಡಿದೆ.
ಈ ಪಿಎಸಿಎಸ್ ಗೋದಾಮಿನ ಬಾಡಿಗೆ ಆದಾಯದ ಮೂಲಕ ವಾರ್ಷಿಕವಾಗಿ ಸುಮಾರು 7.68 ಲಕ್ಷ ರೂಪಾಯಿಗಳನ್ನು ಮತ್ತು ವಾರ್ಷಿಕ ಬಡ್ಡಿ ಆದಾಯದ ಮೂಲಕ ಸುಮಾರು 54 ಲಕ್ಷ ರೂಪಾಯಿಗಳನ್ನು ಗಳಿಸುವ ನಿರೀಕ್ಷೆಯಿದೆ. ಈ ಗೋದಾಮು ಸುತ್ತಮುತ್ತಲಿನ ಪ್ರದೇಶಗಳ ರೈತರಿಗೆ ಸಂಗ್ರಹಣಾ ಸೌಲಭ್ಯದ ಲಭ್ಯತೆಯನ್ನು ಸುಧಾರಿಸಿದೆ ಮತ್ತು ಸಹಕಾರ ಸಂಘದ ಆದಾಯದ ತಡಿಪಾಯವನ್ನು ಬಲಪಡಿಸಿದೆ. ಜೊತೆಗೆ, ಈ ಉಪಕ್ರಮವು ಸ್ಥಳೀಯ ಉದ್ಯೋಗಾವಕಾಶಗಳನ್ನೂ ಸೃಷ್ಟಿಸಿದೆ. ವಿಕೇಂದ್ರೀಕೃತ ಸಂಗ್ರಹಣಾ ಮೂಲಸೌಕರ್ಯವು ರೈತರ ಬೆಂಬಲ ವ್ಯವಸ್ಥೆಗಳು ಮತ್ತು ಗ್ರಾಮೀಣ ಸಹಕಾರ ಸಂಸ್ಥೆಗಳಿಗೆ ಹೇಗೆ ನೆರವಾಗಬಲ್ಲದು ಎಂಬುದಕ್ಕೆ ಇದು ನಿದರ್ಶನವಾಗಿದೆ.

ಆಕರ: ಸಹಕಾರ ಸಚಿವಾಲಯ
ನೆರ್ಪಿಂಗಲೈ ಪಿಎಸಿಎಸ್ ಗೋದಾಮು ಮತ್ತು ಸಂಘದ ಸದಸ್ಯರು
|
ಗುಣಮಟ್ಟದ ಮಾನದಂಡಗಳು, ಬ್ರ್ಯಾಂಡಿಂಗ್ ಮತ್ತು ಪಾರದರ್ಶಕತೆ
ಯೋಜನೆಯಡಿಯಲ್ಲಿ ನಿರ್ಮಿಸಲಾದ ಸಂಗ್ರಹಣಾ ಮೂಲಸೌಕರ್ಯಗಳಿಗೆ ಏಕರೂಪದ ಬ್ರ್ಯಾಂಡಿಂಗ್ ಮಾರ್ಗಸೂಚಿಗಳನ್ನು ಈ ಯೋಜನೆಯು ಒದಗಿಸುತ್ತದೆ. ಪ್ರತಿಯೊಂದು ಸಂಗ್ರಹಣಾ ರಚನೆಯು ಅನುಮೋದಿತ ಧಾನ್ಯ ಸಂಗ್ರಹಣೆ ಲೋಗೋ ಮತ್ತು ನಿಗದಿತ ಬಣ್ಣಗಳ ವಿನ್ಯಾಸವನ್ನು ಪ್ರದರ್ಶಿಸಬೇಕು. ಈ ಉಪಕ್ರಮಕ್ಕೆ ಗುರುತಿಸಬಹುದಾದ ಗುರುತನ್ನು ಸೃಷ್ಟಿಸುವುದು ಮತ್ತು ಪಾಲುದಾರರಲ್ಲಿ ಜಾಗೃತಿಯನ್ನು ಬಲಪಡಿಸುವುದು ಇದರ ಉದ್ದೇಶವಾಗಿದೆ.

ಗುಣಮಟ್ಟದ ಭರವಸೆ:
ದಾಸ್ತಾನು ಮಳಿಗೆ ನಿರ್ಮಾಣ ಮತ್ತು ನಿರ್ವಹಣೆಗೆ ಈ ಮಾದರಿಯು ಗುಣಮಟ್ಟದ ಮಾನದಂಡಗಳನ್ನು ನಿಗದಿಪಡಿಸುತ್ತದೆ. ಸಂಗ್ರಹಣಾ ರಚನೆಗಳು ಗೋದಾಮು ಅಭಿವೃದ್ಧಿ ಮತ್ತು ನಿಯಂತ್ರಣ ಪ್ರಾಧಿಕಾರ ನಿಯಮಗಳಿಗೆ ಬದ್ಧವಾಗಿರಬೇಕು ಮತ್ತು ಸ್ಥಳೀಯ ಪರಿಸರ ಪರಿಸ್ಥಿತಿಗಳಿಗೆ ಸೂಕ್ತವಾಗಿರಬೇಕು. ಬೆಳೆ ಹಾಳಾಗುವುದನ್ನು ತಡೆಯಲು ಮತ್ತು ಧಾನ್ಯದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸರಿಯಾದ ಗಾಳಿ-ಬೆಳಕಿನ ವ್ಯವಸ್ಥೆಯೊಂದಿಗೆ ನಿರ್ಮಾಣದಲ್ಲಿ ಬಾಳಿಕೆ ಬರುವ, ತುಕ್ಕು ನಿರೋಧಕ ಸಾಮಗ್ರಿಗಳನ್ನು ಬಳಸಬೇಕಾಗುತ್ತದೆ.
ವಿನ್ಯಾಸದ ವಿವರಣೆಗಳು ಮತ್ತು ಸುರಕ್ಷತಾ ಮಾನದಂಡಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ನಿಯಮಿತ ತಪಾಸಣೆ ಮತ್ತು ಗುಣಮಟ್ಟ ಪರಿಶೋಧನೆಗಳು ಅಗತ್ಯವಿದೆ. ಅನುಷ್ಠಾನದ ವಿಧಾನದಡಿಯಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ಹೆಚ್ಚಿಸಲು ಯೋಜನೆ ನಿರ್ವಹಣಾ ಸಲಹೆಗಾರರು ನಿರ್ಮಾಣ ಚಟುವಟಿಕೆಗಳು ಮತ್ತು ವೆಚ್ಚದ ಕುರಿತು ಮಾಹಿತಿಯನ್ನು ಹಂಚಿಕೊಳ್ಳುವಾಗ, ಪಿಎಸಿಎಸ್ ಸದಸ್ಯರು ಯೋಜನೆಯ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಬೇಕೆಂದು ನಿರೀಕ್ಷಿಸಲಾಗುತ್ತದೆ.
ಈ ಯೋಜನೆಯಡಿಯಲ್ಲಿ ಸೃಷ್ಟಿಸಲಾದ ಮೂಲಸೌಕರ್ಯಗಳು ಬಾಳಿಕೆ ಬರುವಂತೆ, ಜವಾಬ್ದಾರಿಯುತವಾಗಿ ಮತ್ತು ದೀರ್ಘಾವಧಿಯಲ್ಲಿ ನಿಗದಿತ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಈ ಕ್ರಮಗಳ ಉದ್ದೇಶವಾಗಿದೆ.
ಭಾರತದ ವಿಕೇಂದ್ರೀಕೃತ ಧಾನ್ಯ ಸಂಗ್ರಹಣಾ ಜಾಲದ ಬಲವರ್ಧನೆ
ಸಹಕಾರ ಕ್ಷೇತ್ರದಲ್ಲಿನ ವಿಕೇಂದ್ರೀಕೃತ ಧಾನ್ಯ ಸಂಗ್ರಹಣೆ ಯೋಜನೆಯು ಸಹಕಾರ ಸಂಘಗಳ ಮೂಲಕ ಕೃಷಿ ಮೂಲಸೌಕರ್ಯವನ್ನು ಸುಧಾರಿಸುವತ್ತ ಸಮಗ್ರ ವಿಧಾನವನ್ನು ಪ್ರತಿನಿಧಿಸುತ್ತದೆ. ಪಿಎಸಿಎಸ್ ಹಂತದಲ್ಲಿ ಸಂಗ್ರಹಣೆ, ಸಂಸ್ಕರಣೆ, ಖರೀದಿ ಮತ್ತು ವಿತರಣೆಯನ್ನು ಜೋಡಿಸುವ ಮೂಲಕ, ಈ ಯೋಜನೆಯು ಉತ್ಪಾದನಾ ಕೇಂದ್ರಗಳಿಗೆ ಹತ್ತಿರದಲ್ಲೇ ಆಹಾರ ಧಾನ್ಯ ನಿರ್ವಹಣೆಯನ್ನು ಬಲಪಡಿಸುತ್ತದೆ.
ಈ ಉಪಕ್ರಮವು ಆಹಾರ ಭದ್ರತೆಯನ್ನು ದೃಢೀಕರಿಸುತ್ತದೆ, ಪೋಲಾಗುವುದನ್ನು ಕಡಿಮೆ ಮಾಡುತ್ತದೆ ಮತ್ತು ಗ್ರಾಮೀಣ ಸಹಕಾರ ಸಂಸ್ಥೆಗಳನ್ನು ಸಶಕ್ತಗೊಳಿಸುತ್ತದೆ. ಯೋಜನೆಯ ಹಂತ ಹಂತದ ವಿಸ್ತರಣೆಗೆ ಚಾಲ್ತಿಯಲ್ಲಿರುವ ಯೋಜನೆಗಳ ಒಗ್ಗೂಡುವಿಕೆ, ಸಾಂಸ್ಥಿಕ ಸಮನ್ವಯ ಮತ್ತು ಆರ್ಥಿಕ ಬೆಂಬಲ ವ್ಯವಸ್ಥೆಗಳ ಮೂಲಕ ಬೆಂಬಲ ನೀಡಲಾಗುತ್ತಿದೆ. ಈ ಚೌಕಟ್ಟು ದೇಶದಲ್ಲಿ ವಿಕೇಂದ್ರೀಕೃತ ಕೃಷಿ ಮೂಲಸೌಕರ್ಯ ಮತ್ತು ದೀರ್ಘಾವಧಿಯ ಆಹಾರ ಧಾನ್ಯ ನಿರ್ವಹಣಾ ವ್ಯವಸ್ಥೆಗಳನ್ನು ಬಲಪಡಿಸುವತ್ತ ಸಹಕಾರ-ನೇತೃತ್ವದ ವಿಧಾನವನ್ನು ಪ್ರತಿಬಿಂಬಿಸುತ್ತದೆ.
References
Ministry of Cooperation
https://www.cooperation.gov.in/en/worlds-largest-grain-storage-plan-cooperative-sector-0
https://www.pib.gov.in/PressReleasePage.aspx?PRID=2146718®=3&lang=2
https://www.cooperation.gov.in/sites/default/files/2025-08/DGSP%20English%20Margdarshika%20SOP.pdf
https://www.cooperation.gov.in/en/worlds-largest-decentralized-grain-storage-program-cooperative-sector-ensure-food-security
https://www.pib.gov.in/PressReleasePage.aspx?PRID=2241928®=3&lang=1
Ministry of Agriculture and Farmers Welfare and ICAR
http://www.ftic.co.il/2016NewDelhiPDF/PP047-052-A008-SESSION02.pdf
https://agriwelfare.gov.in/Documents/Time_Series_3rdAE_2025_26_En.pdf
Ministry of Consumer Affairs, Food & Public Distribution
https://dfpd.gov.in/WriteReadData/AnnualRecordUploadDocuments/b9c640b8-5889-4ffd-a62d-5b56c5d4f029_Food%20AR%202024-25%20English%20small%20size.pdf
https://www.pib.gov.in/PressReleasePage.aspx?PRID=2210211
Ministry of Finance
https://www.indiabudget.gov.in/economicsurvey/doc/echapter.pdf
PIB Backgrounder
https://www.pib.gov.in/PressReleseDetailm.aspx?PRID=2172351®=3&lang=2
https://www.pib.gov.in/PressReleasePage.aspx?PRID=2215759®=3&lang=2
https://www.pib.gov.in/FactsheetDetails.aspx?Id=150721®=48&lang=1
Click to see pdf
*****
(Explainer ID: 159835)
आगंतुक पटल : 7
Provide suggestions / comments