• Sitemap
  • Advance Search
Social Welfare

ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣೆ ಮತ್ತು ಮೇಲ್ವಿಚಾರಣಾ ವ್ಯವಸ್ಥೆ (ಸಿಪಿಗ್ರಾಮ್ಸ್‌)

Posted On: 09 AUG 2026 9:44AM

 

ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣೆ ಮತ್ತು ಮೇಲ್ವಿಚಾರಣಾ ವ್ಯವಸ್ಥೆಯು (ಸಿಪಿಗ್ರಾಮ್ಸ್‌) ಡಿಜಿಟಲ್ ನಾವೀನ್ಯತೆ, ಸಾಂಸ್ಥಿಕ ಸುಧಾರಣೆಗಳು ಮತ್ತು ನಾಗರಿಕ-ಕೇಂದ್ರಿತ ಸೇವಾ ವಿತರಣೆಯ ಮೂಲಕ ಭಾರತದಲ್ಲಿ ಸಾರ್ವಜನಿಕ ಕುಂದುಕೊರತೆ ನಿವಾರಣೆಯನ್ನು ಪರಿವರ್ತಿಸಿದೆ. ಎಲ್ಲಾ ಕೇಂದ್ರ ಸಚಿವಾಲಯಗಳು, ಇಲಾಖೆಗಳು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಂದೇ ವೇದಿಕೆಯ ಮೂಲಕ ಸಂಪರ್ಕಿಸುವ ಸಿಪಿಗ್ರಾಮ್ಸ್‌, ಪ್ರತಿಯೊಬ್ಬ ನಾಗರಿಕನ ಧ್ವನಿಯನ್ನು ಆಲಿಸಿ ಪರಿಹರಿಸುವುದನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ, ಕಾಲಮಿತಿಯಲ್ಲಿ ಕುಂದುಕೊರತೆಗಳನ್ನು ಪರಿಹರಿಸಲು ಅನುವು ಮಾಡಿಕೊಡುತ್ತದೆ, ಜವಾಬ್ದಾರಿಯನ್ನು ಉತ್ತೇಜಿಸುತ್ತದೆ ಮತ್ತು ಪಾರದರ್ಶಕ ಆಡಳಿತವನ್ನು ಬಲಪಡಿಸುತ್ತದೆ.

ಸಿಪಿಗ್ರಾಮ್ಸ್ (ಸಿಪಿಗ್ರಾಮ್ಸ್‌): ಸ್ಪಂದನಾಶೀಲ ಆಡಳಿತದ ಮೂಲಕ ನಾಗರಿಕರ ಸಬಲೀಕರಣ

ಪರಿಣಾಮಕಾರಿ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆಯು ಸ್ಪಂದನಾಶೀಲ ಆಡಳಿತದ ಮೂಲಾಧಾರವಾಗಿದೆ. ಇದು ಸರ್ಕಾರದ ಸಂಸ್ಥೆಗಳು ಜವಾಬ್ದಾರಿಯುತವಾಗಿ, ಪಾರದರ್ಶಕವಾಗಿ ಮತ್ತು ಸುಲಭವಾಗಿ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳುವ ಜೊತೆಗೆ, ಸಾರ್ವಜನಿಕ ಸೇವಾ ವಿತರಣೆಯ ಕುರಿತು ತಮ್ಮ ಕಳವಳಗಳನ್ನು ವ್ಯಕ್ತಪಡಿಸಲು ನಾಗರಿಕರಿಗೆ ಒಂದು ವೇದಿಕೆಯನ್ನು ಒದಗಿಸುತ್ತದೆ.

ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣೆ ಮತ್ತು ಮೇಲ್ವಿಚಾರಣಾ ವ್ಯವಸ್ಥೆಯು (ಸಿಪಿಗ್ರಾಮ್ಸ್‌) ಸರ್ಕಾರದ ಪ್ರಮುಖ ಡಿಜಿಟಲ್ ಕುಂದುಕೊರತೆ ನಿವಾರಣಾ ವೇದಿಕೆಯಾಗಿದೆ. ದಿನದ 24 ಗಂಟೆಯೂ ನಾಗರಿಕರಿಗೆ ಲಭ್ಯವಿರುವ ಸಿಪಿಗ್ರಾಮ್ಸ್‌, ಎಲ್ಲಾ ಕೇಂದ್ರ ಸಚಿವಾಲಯಗಳು, ಇಲಾಖೆಗಳು, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಏಕೈಕ ಪೋರ್ಟಲ್ ಅನ್ನು ಒದಗಿಸುತ್ತದೆ.

ನಾಗರಿಕರು ಸಾರ್ವಜನಿಕ ಸೇವಾ ವಿತರಣೆಗೆ ಸಂಬಂಧಿಸಿದ ಕುಂದುಕೊರತೆಗಳನ್ನು ದಾಖಲಿಸಬಹುದು ಮತ್ತು ಪಾರದರ್ಶಕ ಹಾಗೂ ತಂತ್ರಜ್ಞಾನ-ಚಾಲಿತ ಪ್ರಕ್ರಿಯೆಯ ಮೂಲಕ ಅವುಗಳ ಪರಿಹಾರವನ್ನು ಟ್ರ್ಯಾಕ್ ಮಾಡಬಹುದು.

ಕಳೆದ ದಶಕದಲ್ಲಿ, ಸಿಪಿಗ್ರಾಮ್ಸ್‌ ಕೇವಲ ಕುಂದುಕೊರತೆ ನೋಂದಣಿ ಪೋರ್ಟಲ್‌ನಿಂದ ಸಮಗ್ರ ಆಡಳಿತ ವೇದಿಕೆಯಾಗಿ ವಿಕಸನಗೊಂಡಿದೆ. ಇದು ದೇಶಾದ್ಯಂತ ಸಾರ್ವಜನಿಕ ಸೇವಾ ವಿತರಣೆಯನ್ನು ಬಲಪಡಿಸಲು ಮತ್ತು ನಿರಂತರವಾಗಿ ಸುಧಾರಿಸಲು ಡಿಜಿಟಲ್ ನಾವೀನ್ಯತೆ, ಕೃತಕ ಬುದ್ಧಿಮತ್ತೆ ಆಧಾರಿತ ಮೇಲ್ವಿಚಾರಣೆ ಮತ್ತು ನಾಗರಿಕರ ಅಭಿಪ್ರಾಯವನ್ನು ಬಳಸಿಕೊಳ್ಳುತ್ತದೆ.

ಸಿಪಿಗ್ರಾಮ್ಸ್‌ ನ ವಿಕಾಸ

2014 ರಿಂದ, ಭಾರತದ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆಯು ಪ್ರಮುಖ ಪರಿವರ್ತನೆಗೆ ಸಾಕ್ಷಿಯಾಗಿದೆ. ಇದು ವಿಭಜಿತ ಮತ್ತು ಹೆಚ್ಚಾಗಿ ಹಸ್ತಚಾಲಿತ ಪ್ರಕ್ರನೆಯಿಂದ, ದಕ್ಷತೆ, ಪಾರದರ್ಶಕತೆ ಮತ್ತು ನಾಗರಿಕರ ತೃಪ್ತಿಯ ಮೇಲೆ ಕೇಂದ್ರೀಕರಿಸಿದ ತಂತ್ರಜ್ಞಾನ-ಚಾಲಿತ ವೇದಿಕೆಯಾಗಿ ವಿಕಸನಗೊಂಡಿದೆ.

ವಾರ್ಷಿಕವಾಗಿ ನಿರ್ವಹಿಸಲಾಗುವ ಕುಂದುಕೊರತೆಗಳ ಸಂಖ್ಯೆಯು 2014 ರಲ್ಲಿ ಸುಮಾರು 3.01 ಲಕ್ಷದಿಂದ 2024 ರಲ್ಲಿ ಸುಮಾರು 27 ಲಕ್ಷಗಳಿಗೆ, ಅಂದರೆ ಸುಮಾರು ಒಂಭತ್ತು ಪಟ್ಟು ಹೆಚ್ಚಾಗಿದೆ. ಇದು ಸಾರ್ವಜನಿಕರ ಹೆಚ್ಚುತ್ತಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ.

ಕುಂದುಕೊರತೆ ನಿವಾರಣಾ ಜಾಲವು ಸಹ ಗಣನೀಯವಾಗಿ ವಿಸ್ತರಿಸಿದೆ. ಕುಂದುಕೊರತೆ ನಿವಾರಣಾ ಅಧಿಕಾರಿಗಳ ಸಂಖ್ಯೆಯು 2014 ರಲ್ಲಿ 10,232 ಇದ್ದದ್ದು, 2025 ರ ವೇಳೆಗೆ 1.11 ಲಕ್ಷಕ್ಕೂ ಅಧಿಕಕ್ಕೆ ಏರಿದೆ.

ಈ ಸುಧಾರಣೆಗಳು ಸೇವಾ ವಿತರಣೆಯನ್ನು ಸುಧಾರಿಸಿವೆ ಮತ್ತು ವಿಳಂಬವನ್ನು ಕಡಿಮೆ ಮಾಡಿವೆ. ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಸರಾಸರಿ ಕುಂದುಕೊರತೆ ವಿಲೇವಾರಿ ಸಮಯವು 2014 ರಲ್ಲಿ 157 ದಿನಗಳಿದ್ದದ್ದು, 2025 ರ ವೇಳೆಗೆ ಕೇವಲ 15 ದಿನಗಳಿಗೆ ಇಳಿದಿದೆ.

ಸಿಪಿಗ್ರಾಮ್ಸ್‌ ಹೇಗೆ ಕೆಲಸ ಮಾಡುತ್ತದೆ?

ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣೆ ಮತ್ತು ಮೇಲ್ವಿಚಾರಣಾ ವ್ಯವಸ್ಥೆಯು (ಸಿಪಿಗ್ರಾಮ್ಸ್‌) ಪರಿಣಾಮಕಾರಿ ಮತ್ತು ಸುಲಭವಾಗಿ ಲಭ್ಯವಿರುವ ಕುಂದುಕೊರತೆ ನಿವಾರಣೆಯನ್ನು ಖಚಿತಪಡಿಸಿಕೊಳ್ಳಲು ತಂತ್ರಜ್ಞಾನ, ಜವಾಬ್ದಾರಿ ಮತ್ತು ನಾಗರಿಕರ ಭಾಗವಹಿಸುವಿಕೆಯನ್ನು ಸಂಯೋಜಿಸುವ ಸಮಗ್ರ ಡಿಜಿಟಲ್ ಪರಿಸರ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

  • ನೋಂದಣಿ: ನಾಗರಿಕರು ಒಮ್ಮೆ ನೋಂದಣಿ ಮಾಡಿಕೊಳ್ಳಬಹುದು ಮತ್ತು https://pgportal.gov.in/ ಮೂಲಕ ಆನ್‌ಲೈನ್‌ನಲ್ಲಿ ದೂರು ದಾಖಲಿಸಬಹುದು. ಅವರು ಸಿಪಿಗ್ರಾಮ್ಸ್‌ ಮೊಬೈಲ್ ಅಪ್ಲಿಕೇಶನ್ (ಉಮಂಗ್‌ ನೊಂದಿಗೆಯೂ ಸಂಯೋಜಿಸಲ್ಪಟ್ಟಿದೆ) ಮೂಲಕ ಅಥವಾ ದೇಶಾದ್ಯಂತ 2.5 ಲಕ್ಷ ಗ್ರಾಮ ಮಟ್ಟದ ಉದ್ಯಮಿಗಳೊಂದಿಗೆ ಸಂಬಂಧ ಹೊಂದಿರುವ 5 ಲಕ್ಷಕ್ಕೂ ಅಧಿಕ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಒಂದರ ಮೂಲಕವೂ ದೂರುಗಳನ್ನು ದಾಖಲಿಸಬಹುದು. ಪೋಸ್ಟ್ ಮೂಲಕ ಸ್ವೀಕರಿಸುವ ಆಫ್‌ಲೈನ್ ದೂರುಗಳನ್ನು ಡಿಜಿಟೈಜ್ ಮಾಡಲಾಗುತ್ತದೆ ಮತ್ತು ವ್ಯವಸ್ಥೆಗೆ ಅಪ್‌ಲೋಡ್ ಮಾಡಲಾಗುತ್ತದೆ.

  • ಸ್ವಯಂಚಾಲಿತ ರೂಟಿಂಗ್ ಮತ್ತು ವರ್ಗೀಕರಣ:ದೂರುಗಳನ್ನು ಸೂಕ್ತ ಅಧಿಕಾರಿಗೆ ಸ್ವಯಂಚಾಲಿತವಾಗಿ ರವಾನಿಸಲು ಕೊನೆಯ ಹಂತದ ಕುಂದುಕೊರತೆ ನಿವಾರಣಾ ಅಧಿಕಾರಿಯ ಮ್ಯಾಪಿಂಗ್ ಅನ್ನು ಈ ವ್ಯವಸ್ಥೆಯು ಸುಲಭಗೊಳಿಸುತ್ತದೆ. ಸಿಪಿಗ್ರಾಮ್ಸ್‌ ನಲ್ಲಿ ದಾಖಲಿಸಲಾದ ಕುಂದುಕೊರತೆಯ ಸ್ಥಿತಿಯನ್ನು, ದೂರು ದಾಖಲಿಸುವ ಸಮಯದಲ್ಲಿ ನೀಡಲಾದ ವಿಶಿಷ್ಟ ನೋಂದಣಿ ಐಡಿ ಬಳಸಿ ಟ್ರ್ಯಾಕ್ ಮಾಡಬಹುದು.
  • 21 ದಿನಗಳಲ್ಲಿ ಪರಿಹಾರ: ಆಗಸ್ಟ್ 2024 ರಲ್ಲಿ ಹೊರಡಿಸಲಾದ "ಸಾರ್ವಜನಿಕ ಕುಂದುಕೊರತೆಗಳ ಪರಿಣಾಮಕಾರಿ ನಿವಾರಣೆಗಾಗಿ ಸಮಗ್ರ ಮಾರ್ಗಸೂಚಿಗಳು",ಕಾಲಮಿತಿಯನ್ನು 30  ದಿನಗಳಿಂದ 21 ದಿನಗಳಿಗೆ ತರ್ಕಬದ್ಧಗೊಳಿಸಿವೆ. ಇದು ಮೀಸಲಾದ ಕುಂದುಕೊರತೆ ಕೋಶಗಳು, ಮೂಲ ಕಾರಣಗಳ ವಿಶ್ಲೇಷಣೆ ಮತ್ತು ಬಲಪಡಿಸಲಾದ ಮೇಲ್ಮನವಿ ವಿಧಾನಗಳನ್ನು ಕಡ್ಡಾಯಗೊಳಿಸಿದೆ. ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಸರಾಸರಿ ಕುಂದುಕೊರತೆ ವಿಲೇವಾರಿ ಸಮಯವು 2014 ರಲ್ಲಿ 157 ದಿನಗಳಿದ್ದದ್ದು, 2025 ರ ವೇಳೆಗೆ 15 ದಿನಗಳಿಗೆ ಇಳಿದಿದೆ.
  • ಪ್ರತಿಕ್ರಿಯೆ ಮತ್ತು ಮೇಲ್ಮನವಿ: ಪರಿಹಾರದ ನಂತರ, ಮೀಸಲಾದ ಪ್ರತಿಕ್ರಿಯೆ ಕರೆ ಕೇಂದ್ರವು ನಾಗರಿಕರ ತೃಪ್ತಿಯನ್ನು ಅಂದಾಜು ಮಾಡಲು ನೇರವಾಗಿ ಅವರನ್ನು ಸಂಪರ್ಕಿಸುತ್ತದೆ. ಒಂದು ವೇಳೆ ತೃಪ್ತಿಪಡದಿದ್ದರೆ, ನಾಗರಿಕರು ಮೇಲ್ಮನವಿ ಅಧಿಕಾರಿಯ ಮೂಲಕ ಮೇಲ್ಮನವಿ ಸಲ್ಲಿಸಬಹುದು. ಈ ಮೇಲ್ಮನವಿಯನ್ನು ಅವರು 30 ದಿನಗಳೊಳಗೆ ಪರಿಹರಿಸಬೇಕಾಗುತ್ತದೆ.

ಈ ಕೆಳಗಿನ ಸಮಸ್ಯೆಗಳನ್ನು ಪರಿಹಾರಕ್ಕಾಗಿ ಸ್ವೀಕರಿಸಲಾಗುವುದಿಲ್ಲ:

  • ಆರ್‌ಟಿಐ ವಿಷಯಗಳು
  • ನ್ಯಾಯಾಲಯಕ್ಕೆ ಸಂಬಂಧಿಸಿದ / ವಿಚಾರಣಾಧೀನ ವಿಷಯಗಳು
  • ಧಾರ್ಮಿಕ ವಿಷಯಗಳು
  • ಶಿಸ್ತು ಕ್ರಮಗಳು ಇತ್ಯಾದಿಗಳನ್ನು ಒಳಗೊಂಡಂತೆ ತಮ್ಮ ಸೇವಾ ವಿಷಯಗಳಿಗೆ ಸಂಬಂಧಿಸಿದ ಸರ್ಕಾರಿ ನೌಕರರ ಕುಂದುಕೊರತೆಗಳು.

ಸಿಪಿಗ್ರಾಮ್ಸ್‌ ಕಾರ್ಯರೂಪದಲ್ಲಿ: ಗುಜರಾತ್‌ನಲ್ಲಿ ರಸ್ತೆ ಸುರಕ್ಷತೆಯ ವರ್ಧನೆ

ಗುಜರಾತ್‌ನ ರಾಜ್‌ಕೋಟ್‌ನಲ್ಲಿರುವ ಆಶಾಪುರಿ ಚೌಕ್ಡಿ ಸೇತುವೆಯ ಮೇಲಿನ ಕಾರ್ಯನಿರತ ಹೆದ್ದಾರಿ ಭಾಗದಲ್ಲಿ ಅಸುರಕ್ಷಿತ ರಸ್ತೆ ಪರಿಸ್ಥಿತಿಗಳು, ಕಳಪೆ ನಿರ್ವಹಣೆ ಮತ್ತು ಸುರಕ್ಷತಾ ಕ್ರಮಗಳ ಕೊರತೆಯ ಕುರಿತು ಶ್ರೀ ಹರ್ಷ ಅವರು ಕುಂದುಕೊರತೆಯನ್ನು ಎತ್ತಿದ್ದರು. ಸಿಪಿಗ್ರಾಮ್ಸ್‌ ಮೂಲಕ ಈ ಸಮಸ್ಯೆಯನ್ನು ಮೇಲ್ದರ್ಜೆಗೇರಿಸಲಾಯಿತು. ಪರಿಶೀಲನೆಯ ನಂತರ, ನಿರ್ಮಾಣ ಚಟುವಟಿಕೆಗಳನ್ನು ಸರಳೀಕರಿಸಲಾಯಿತು, ಸಾರ್ವಜನಿಕರ ಬಳಕೆಗಾಗಿ ಅಂಡರ್‌ಪಾಸ್‌ಗಳನ್ನು ತೆರೆಯಲಾಯಿತು ಮತ್ತು ಬಾಕಿ ಉಳಿದಿರುವ ಕೆಲಸಗಳನ್ನುತ್ವರಿತಗೊಳಿಸಲಾಯಿತು. ಇದರ ಜೊತೆಗೆ, ಬ್ಯಾರಿಕೇಡ್‌ಗಳು, ರಿಫ್ಲೆಕ್ಟರ್‌ಗಳು, ಎಚ್ಚರಿಕೆ ಫಲಕಗಳು ಮತ್ತು ಟ್ರಾಫಿಕ್ ಮಾರ್ಷಲ್‌ಗಳಂತಹ ಸುರಕ್ಷತಾ ವ್ಯವಸ್ಥೆಗಳನ್ನು ಬಲಪಡಿಸಲಾಯಿತು. ಕೇವಲ 4 ದಿನಗಳಲ್ಲಿ ಕುಂದುಕೊರತೆ ಸಂಪೂರ್ಣವಾಗಿ ಪರಿಹಾರಗೊಂಡಿತು.

 

ಸೂಚಕ

ಪ್ರಮಾಣ / ಅಂಕಿ ಅಂಶ

ಕುಂದುಕೊರತೆಗಳ ನಿವಾರಣೆ (ಜೂನ್ 2026)

1,99,968

ಪ್ರತಿ ತಿಂಗಳು 1 ಲಕ್ಷಕ್ಕೂ ಅಧಿಕ ವಿಲೇವಾರಿ ಮಾಡಿದ ಸತತ ತಿಂಗಳುಗಳು

46 ತಿಂಗಳುಗಳು

ಸರಾಸರಿ ವಿಲೇವಾರಿ ಸಮಯ (2026)

14 ದಿನಗಳು

ಸಾರ್ವಜನಿಕರ ತೃಪ್ತಿ ದರ (ಜನವರಿ - ಜೂನ್ 2026)

76%

ಹೊಸ ಬಳಕೆದಾರರ ನೋಂದಣಿ (ಜೂನ್ 2026)

83,544

ಸಿಪಿಗ್ರಾಮ್ಸ್‌ ನಲ್ಲಿ ಮ್ಯಾಪ್ ಮಾಡಲಾದ ಕುಂದುಕೊರತೆ ನಿವಾರಣಾಧಿಕಾರಿಗಳು (ಜೂನ್ 2026 ರವರೆಗೆ)

1,09,125

ಸಾರ್ವಜನಿಕ ಕುಂದುಕೊರತೆ ನಿವಾರಣೆಯ ಪರಿವರ್ತನೆ: 10-ಹಂತದ ಸುಧಾರಣಾ ಕಾರ್ಯಕ್ರಮ

 

ಪ್ರಧಾನ ಮಂತ್ರಿಯವರ ಪರಿಶೀಲನೆಯ ನಂತರ, 2022 ರಲ್ಲಿ ಸಿಪಿಗ್ರಾಮ್ಸ್‌ ನ ವಿಕಾಸದಲ್ಲಿ 10-ಹಂತದ ಸುಧಾರಣಾ ಕಾರ್ಯಕ್ರಮದ ಪರಿಚಯವು ಒಂದು ಪ್ರಮುಖ ತಿರುವು ಆಯಿತು. ಅಂದಿನಿಂದ, ನಿರಂತರ ಮೇಲ್ವಿಚಾರಣೆ ಮತ್ತು ಗುರಿ ಆಧಾರಿತ ಸುಧಾರಣೆಗಳು ಕುಂದುಕೊರತೆ ನಿವಾರಣಾ ಚೌಕಟ್ಟನ್ನು ಬಲಪಡಿಸಿವೆ, ಇದನ್ನು ಹೆಚ್ಚು ಪರಿಣಾಮಕಾರಿ, ಸುಲಭವಾಗಿ ಪ್ರವೇಶಿಸಬಹುದಾದ ಮತ್ತು ನಾಗರಿಕ-ಕೇಂದ್ರಿತವನ್ನಾಗಿ ಮಾಡಿದೆ.

ಸುಧಾರಣಾ ಚೌಕಟ್ಟು ಹತ್ತು ಪ್ರಮುಖ ಮಧ್ಯಸ್ಥಿಕೆಗಳನ್ನು ಒಳಗೊಂಡಿದೆ:

 ಸಿಪಿಗ್ರಾಮ್ಸ್‌ 7.0 ರ ಸಾರ್ವತ್ರಿಕೀಕರಣ

ಸಿಪಿಗ್ರಾಮ್ಸ್‌ 7.0 ನ ಸಾರ್ವತ್ರಿಕೀಕರಣವು ಹಿಂದಿನ ಹಸ್ತಚಾಲಿತ ಮುಂದೂಡುವಿಕೆಯ ಪ್ರಕ್ರಿಯೆಯನ್ನು ಬದಲಾಯಿಸುವ ಮೂಲಕ, ಸೂಕ್ತ ಅಧಿಕಾರಿಗೆ ಕುಂದುಕೊರತೆಗಳ ಸ್ವಯಂಚಾಲಿತ ಮಾರ್ಗನಿರ್ದೇಶನವನ್ನು ಸಕ್ರಿಯಗೊಳಿಸಿತು. 2022 ರ ವೇಳೆಗೆ, ಎಲ್ಲಾ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳನ್ನು ಪ್ಲಾಟ್‌ಫಾರ್ಮ್‌ಗೆ ಸೇರಿಸಿಕೊಳ್ಳಲಾಗಿದ್ದು, ಇದು ವೇಗವಾದ ಮತ್ತು ಹೆಚ್ಚು ಪರಿಣಾಮಕಾರಿ ಕುಂದುಕೊರತೆ ನಿವಾರಣೆಯನ್ನು ಖಚಿತಪಡಿಸುತ್ತದೆ.

 ತಾಂತ್ರಿಕ ವರ್ಧನೆಗಳು

ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯ ಏಕೀಕರಣವು ನೈಜ-ಸಮಯದ ವಿಶ್ಲೇಷಣೆ, ಮಾದರಿ ಗುರುತಿಸುವಿಕೆ ಮತ್ತು ವ್ಯವಸ್ಥಿತ ಸಮಸ್ಯೆಗಳ ಗುರುತಿಸುವಿಕೆಯ ಮೂಲಕ ಕುಂದುಕೊರತೆ ನಿರ್ವಹಣೆಯನ್ನು ಬಲಪಡಿಸಿದೆ. ಸುಧಾರಿತ ಡ್ಯಾಶ್‌ಬೋರ್ಡ್‌ಗಳು ಮತ್ತು ಡೇಟಾ ವಿಶ್ಲೇಷಣೆಯು ಪುರಾವೆ-ಆಧಾರಿತ ನಿರ್ಧಾರ-ತೆಗೆದುಕೊಳ್ಳುವಿಕೆಯನ್ನು ಮತ್ತು ಸಾರ್ವಜನಿಕ ಸೇವಾ ವಿತರಣೆಯಲ್ಲಿ ನಿರಂತರ ಸುಧಾರಣೆಯನ್ನು ಬೆಂಬಲಿಸುತ್ತದೆ. ಮೂಲ ಕಾರಣಗಳನ್ನು ಗುರುತಿಸುವ ಮೂಲಕ ಮತ್ತು ನೀತಿ ಬದಲಾವಣೆಗಳನ್ನು ಜಾರಿಗೆ ತರುವ ಮೂಲಕ, ಈ ವ್ಯವಸ್ಥೆಯು ಸಮರ್ಥ ಕುಂದುಕೊರತೆ ನಿವಾರಣೆ ಮತ್ತು ನಿರಂತರ ಆಡಳಿತ ಸುಧಾರಣೆಯನ್ನು ಖಚಿತಪಡಿಸುತ್ತದೆ.

 ಭಾಷಾ ಒಳಗೊಳ್ಳುವಿಕೆ

ಕುಂದುಕೊರತೆ ನಿವಾರಣೆಯನ್ನು ಹೆಚ್ಚು ಸುಲಭವಾಗಿ ಪ್ರವೇಶಿಸುವಂತೆ ಮಾಡಲು, ಸಿಪಿಗ್ರಾಮ್ಸ್‌ ಇಂಗ್ಲಿಷ್ ಜೊತೆಗೆ ಸಂವಿಧಾನದ 22 ಪರಿಶಿಷ್ಟ ಭಾಷೆಗಳಲ್ಲಿ ಸಲ್ಲಿಕೆಗಳನ್ನು ಬೆಂಬಲಿಸುತ್ತದೆ. 'ಭಾಷಿನಿ'ಯ ಜೊತೆಗಿನ ಏಕೀಕರಣವು ನಾಗರಿಕರು ಬಳಸುವ ಭಾಷೆಯಲ್ಲೇ ಉತ್ತರಿಸಲು ಕುಂದುಕೊರತೆ ನಿವಾರಣಾ ಅಧಿಕಾರಿಗಳಿಗೆ ಅನುವು ಮಾಡಿಕೊಡುತ್ತದೆ.

 ಕುಂದುಕೊರತೆ ನಿವಾರಣಾ ಮೌಲ್ಯಮಾಪನ ಮತ್ತು ಸೂಚ್ಯಂಕ

ಕಾರ್ಯಕ್ಷಮತೆಯ ಮಾನದಂಡದ ಚೌಕಟ್ಟಾಗಿ ಪರಿಚಯಿಸಲ್ಪಟ್ಟ GRAI, ಕುಂದುಕೊರತೆ ನಿವಾರಣೆಯ ಪರಿಣಾಮಕಾರಿತ್ವದ ಕುರಿತು ಸಚಿವಾಲಯಗಳು ಮತ್ತು ಇಲಾಖೆಗಳನ್ನು ಮೌಲ್ಯಮಾಪನ ಮಾಡುತ್ತದೆ ಮತ್ತು ಹೆಚ್ಚಿನ ದಕ್ಷತೆ, ಹೊಣೆಗಾರಿಕೆ ಹಾಗೂ ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸುತ್ತದೆ.

 ಪ್ರತಿಕ್ರಿಯೆ ಕಾಲ್ ಸೆಂಟರ್

ಪ್ರತಿಕ್ರಿಯೆ ಕಾಲ್ ಸೆಂಟರ್ ಪರಿಹರಿಸಲಾದ ಕುಂದುಕೊರತೆಗಳ ಕುರಿತು ನಾಗರಿಕರ ಪ್ರತಿಕ್ರಿಯೆಯನ್ನು ಸಂಗ್ರಹಿಸುತ್ತದೆ, ಇದು ಸೇವಾ ಗುಣಮಟ್ಟವನ್ನು ಮೌಲ್ಯಮಾಪನ ಮಾಡಲು ಮತ್ತು ಕುಂದುಕೊರತೆ ಪರಿಹಾರದಲ್ಲಿ ಸುಧಾರಿಸಬೇಕಾದ ಕ್ಷೇತ್ರಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.

 ಒನ್ ನೇಷನ್ - ಒನ್ ಪೋರ್ಟಲ್

ರಾಜ್ಯ ಕುಂದುಕೊರತೆ ಪೋರ್ಟಲ್‌ಗಳು ಮತ್ತು ಇತರ ಸರ್ಕಾರಿ ಪ್ಲಾಟ್‌ಫಾರ್ಮ್‌ಗಳನ್ನು ಸಿಪಿಗ್ರಾಮ್ಸ್‌ ನೊಂದಿಗೆ ಏಕೀಕರಿಸುವುದರಿಂದ ದೇಶಾದ್ಯಂತ ಏಕೀಕೃತ ಮತ್ತು ಸುವ್ಯವಸ್ಥಿತ ಕುಂದುಕೊರತೆ ನಿವಾರಣಾ ಪರಿಸರ ವ್ಯವಸ್ಥೆ ರೂಪುಗೊಂಡಿದೆ.

 ಒಳಗೊಳ್ಳುವಿಕೆ ಮತ್ತು ಹೊರಬರುವಿಕೆ

ಸಾಮಾನ್ಯ ಸೇವಾ ಕೇಂದ್ರಗಳ ಜೊತೆಗಿನ ಏಕೀಕರಣದ ಮೂಲಕ ಸಿಪಿಗ್ರಾಮ್ಸ್‌ ಕುಂದುಕೊರತೆ ನಿವಾರಣಾ ಸೇವೆಗಳ ಪ್ರವೇಶವನ್ನು ವಿಸ್ತರಿಸಿದೆ, ಇದು ಗ್ರಾಮೀಣ ಮತ್ತು ದೂರದ ಪ್ರದೇಶಗಳ ನಾಗರಿಕರಿಗೆ ತಮ್ಮ ಕುಂದುಕೊರತೆಗಳನ್ನು ನೋಂದಾಯಿಸಲು ಸಕ್ರಿಯಗೊಳಿಸುತ್ತದೆ.

 ತರಬೇತಿ ಮತ್ತು ಸಾಮರ್ಥ್ಯ ವರ್ಧನೆ

ಸೇವೋತ್ತಮ ಚೌಕಟ್ಟಿನಡಿಯಲ್ಲಿ ನಿಯಮಿತ ತರಬೇತಿ ಕಾರ್ಯಕ್ರಮಗಳು ಕುಂದುಕೊರತೆ ಅಧಿಕಾರಿಗಳ ಸಾಮರ್ಥ್ಯವನ್ನು ಬಲಪಡಿಸುತ್ತವೆ ಮತ್ತು ಕುಂದುಕೊರತೆ ನಿವಾರಣೆಯ ಗುಣಮಟ್ಟವನ್ನು ಹೆಚ್ಚಿಸುತ್ತವೆ.

 ಮೇಲ್ವಿಚಾರಣೆ ಮತ್ತು ವಿಮರ್ಶೆ

ಮಾಸಿಕ ಕಾರ್ಯಕ್ಷಮತೆ ವರದಿಗಳು, ವಿಮರ್ಶಾ ಸಭೆಗಳು ಮತ್ತು ನೋಡಲ್ ಕುಂದುಕೊರತೆ ಅಧಿಕಾರಿಗಳು ಹಾಗೂ ಮೇಲ್ಮನವಿ ಪ್ರಾಧಿಕಾರಗಳೊಂದಿಗೆ ನಿರಂತರ ಸಂಪರ್ಕವು ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಕುಂದುಕೊರತೆಗಳ ಸಮಯೋಚಿತ ಪರಿಹಾರವನ್ನು ಖಚಿತಪಡಿಸುತ್ತದೆ.

 ಡೇಟಾ ಸ್ಟ್ರಾಟೆಜಿ ಯೂನಿಟ್

ಡಿಎಆರ್‌ಪಿಜಿ ಯಲ್ಲಿನ ಮೀಸಲಾದ ಡೇಟಾ ಸ್ಟ್ರಾಟೆಜಿ ಯೂನಿಟ್ ಪ್ರವೃತ್ತಿಗಳನ್ನು ಗುರುತಿಸಲು, ನೀತಿ ಸುಧಾರಣೆಗಳನ್ನು ಬೆಂಬಲಿಸಲು ಮತ್ತು ಕುಂದುಕೊರತೆ ನಿವಾರಣಾ ಪ್ರಕ್ರಿಯೆಗಳನ್ನು ಅತ್ಯುತ್ತಮವಾಗಿಸಲು ಸುಧಾರಿತ ವಿಶ್ಲೇಷಣೆಯನ್ನು ಬಳಸಿಕೊಳ್ಳುತ್ತದೆ.

ಸಮಾಧಾನ್ ದಿದಿ: ಕೃತಕ ಬುದ್ಧಿಮತ್ತೆಯ ಮೂಲಕ ಸಾರ್ವಜನಿಕ ಕುಂದುಕೊರತೆ ನಿವಾರಣೆಯ ಪ್ರಜಾಪ್ರಭುತ್ವೀಕರಣ

ಪ್ರಮುಖ ತಾಂತ್ರಿಕ ಪ್ರಗತಿಯಲ್ಲಿ, ಸರ್ಕಾರವು 30 ಮೇ 2026 ರಂದು ಕೃತಕ ಬುದ್ಧಿಮತ್ತೆ ಸಕ್ರಿಯಗೊಳಿಸಿದ ಸಿಪಿಗ್ರಾಮ್ಸ್‌ ಧ್ವನಿ ಚಾಟ್‌ಬಾಟ್ "ಸಮಾಧಾನ್ ದಿದಿ"ಯನ್ನು ಪ್ರಾರಂಭಿಸಿತು.

ಈ ಉಪಕ್ರಮವು ವ್ಯವಸ್ಥೆಯನ್ನು ಹೆಚ್ಚು ಸುಲಭವಾಗಿ ಪ್ರವೇಶಿಸಬಹುದಾದ ಮತ್ತು ಎಲ್ಲರನ್ನು ಒಳಗೊಳ್ಳುವಂತೆ ಮಾಡುವ ಮೂಲಕ ಸಾರ್ವಜನಿಕ ಕುಂದುಕೊರತೆ ನಿವಾರಣೆಯನ್ನು ಪ್ರಜಾಪ್ರಭುತ್ವಗೊಳಿಸುವಲ್ಲಿ ಮಹತ್ವಪೂರ್ಣ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ. ನಾಗರಿಕರು ಸಂಕೀರ್ಣವಾದ ನಮೂನೆಗಳು ಅಥವಾ ಆಡಳಿತಾತ್ಮಕ ವರ್ಗಗಳನ್ನು ನ್ಯಾವಿಗೇಟ್ ಮಾಡದೆ, ಕೇವಲ ತಮ್ಮ ಆದ್ಯತೆಯ ಭಾಷೆಯಲ್ಲಿ ಮಾತನಾಡುವ ಮೂಲಕ ಕುಂದುಕೊರತೆಗಳನ್ನು ನೋಂದಾಯಿಸಿಕೊಳ್ಳಬಹುದು.

ಈ ಚಾಟ್‌ಬಾಟ್ ಭಾಷಿನಿಯ ಸ್ಪೀಚ್-ಟು-ಟೆಕ್ಸ್ಟ್, ಟೆಕ್ಸ್ಟ್-ಟು-ಸ್ಪೀಚ್, ಅನುವಾದ ಮತ್ತು ಲಿಪ್ಯಂತರ ಸಾಮರ್ಥ್ಯಗಳೊಂದಿಗೆ ಸುಧಾರಿತ ಕೃತಕ ಬುದ್ಧಿಮತ್ತೆಯನ್ನು ಸಂಯೋಜಿಸುತ್ತದೆ. ನಾಗರಿಕರ ಸಮಸ್ಯೆಯನ್ನು ವಿಶ್ಲೇಷಿಸುವ ಮೂಲಕ, ಅಗತ್ಯವಿರುವಲ್ಲಿ ಬುದ್ಧಿವಂತ ಫಾಲೋ-ಅಪ್ ಒಳಹರಿವುಗಳನ್ನು ಕೋರುವ ಜೊತೆಗೆ ಸಿಸ್ಟಮ್ ಸ್ವಯಂಚಾಲಿತವಾಗಿ ಸಂಬಂಧಿತ ಸಚಿವಾಲಯ, ಇಲಾಖೆ, ವರ್ಗ ಮತ್ತು ಉಪ-ವರ್ಗವನ್ನು ಗುರುತಿಸುತ್ತದೆ.

ಪ್ರಸ್ತುತ ಭಾಷಿನಿ ಮೂಲಕ ಬೆಂಬಲಿತವಾಗಿರುವ 22 ಭಾಷೆಗಳನ್ನು ಮೀರಿ, ಇತರ ಹಲವಾರು ಪ್ರಾದೇಶಿಕ ಮತ್ತು ಸ್ಥಳೀಯ ಭಾಷೆಗಳಿಗೂ ಬೆಂಬಲವನ್ನು ವಿಸ್ತರಿಸುವ ಪ್ರಯತ್ನಗಳು ನಡೆಯುತ್ತಿವೆ. ಸರ್ಕಾರದ ಸೇವೆಗಳನ್ನು ಪಡೆಯಲು ಭಾಷೆಯು ಇನ್ನು ಮುಂದೆ ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಇದು ಖಚಿತಪಡಿಸುತ್ತದೆ.

ಮುಂದಿನ ಪೀಳಿಗೆಯ ಸಿಪಿಗ್ರಾಮ್ಸ್‌ ಅಭಿವೃದ್ಧಿ

ಡಿಎಆರ್‌ಪಿಜಿ ಮುಂದಿನ ಪೀಳಿಗೆಯ ಸಿಪಿಗ್ರಾಮ್ಸ್‌ ಉಪಕ್ರಮವನ್ನು ಮುನ್ನಡೆಸುತ್ತಿದೆ. ಇದು ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನಗಳ ಮೂಲಕ ಭಾರತದ ಸಾರ್ವಜನಿಕ ಕುಂದುಕೊರತೆ ನಿವಾರಣಾ ಪರಿಸರ ವ್ಯವಸ್ಥೆಯನ್ನು ಆಧುನೀಕರಿಸುವ ಗುರಿಯನ್ನು ಹೊಂದಿರುವ ಪ್ರಮುಖ ಯೋಜನೆಯಾಗಿದೆ. ಪ್ರವೇಶಿಸುವಿಕೆ, ದಕ್ಷತೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಈ ಪ್ಲಾಟ್‌ಫಾರ್ಮ್, ಹೆಚ್ಚು ತಡೆರಹಿತ ಮತ್ತು ನಾಗರಿಕ-ಕೇಂದ್ರಿತ ಕುಂದುಕೊರತೆ ನಿವಾರಣಾ ಅನುಭವವನ್ನು ತಲುಪಿಸಲು ಪ್ರಯತ್ನಿಸುತ್ತದೆ.

ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಈಗಾಗಲೇ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ. ಒಮ್ಮೆ ಇದು ಕಾರ್ಯಾರಂಭಗೊಂಡರೆ, ಮುಂದಿನ ಪೀಳಿಗೆಯ ಸಿಪಿಗ್ರಾಮ್ಸ್‌ ಹಲವಾರು ಸುಧಾರಿತ ವೈಶಿಷ್ಟ್ಯಗಳನ್ನು ಒಳಗೊಳ್ಳಲಿದೆ, ಅವುಗಳೆಂದರೆ:

ಧ್ವನಿ-ಸಕ್ರಿಯಗೊಳಿಸಿದ ಕುಂದುಕೊರತೆ ನೋಂದಣಿ ಮತ್ತು ಚಾಟ್‌ಬಾಟ್ ಬೆಂಬಲ

 

  • ಎಐ ಆಧಾರಿತ ಕುಂದುಕೊರತೆ ವರ್ಗೀಕರಣ ಮತ್ತು ಬುದ್ಧಿವಂತ ರೂಟಿಂಗ್

 

  • ರಾಜ್ಯ ಕುಂದುಕೊರತೆ ವರ್ಗಗಳನ್ನು ಏಕೀಕೃತ ವೇದಿಕೆಗೆ ಸಂಯೋಜಿಸುವುದು

 

  • ಇಂಗ್ಲಿಷ್ ಹೊರತುಪಡಿಸಿ, ಸಂವಿಧಾನದ 22 ಪರಿಶಿಷ್ಟ ಭಾಷೆಗಳಲ್ಲಿ ಬಹುಭಾಷಾ ಬೆಂಬಲ

 

  • ಇಮೇಲ್, ಸಾಮಾಜಿಕ ಮಾಧ್ಯಮ ಮತ್ತು ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಒಮ್ನಿ-ಚಾನೆಲ್ ಕುಂದುಕೊರತೆ ನೋಂದಣಿ

 

  • ಸಮಯೋಚಿತ ಕುಂದುಕೊರತೆ ಪರಿಹಾರಕ್ಕಾಗಿ ಸ್ವಯಂಚಾಲಿತ ಉಲ್ಬಣಗೊಳಿಸುವಿಕೆಯ ಕಾರ್ಯವಿಧಾನಗಳು

 

  • ವಿಕೇಲಾಂಗ ವ್ಯಕ್ತಿಗಳಿಗೆ ಪ್ರವೇಶಿಸುವಿಕೆ ವೈಶಿಷ್ಟ್ಯಗಳು

 

  • ನೈಜ-ಸಮಯದ ವಿಶ್ಲೇಷಣೆ ಮತ್ತು ವರದಿ ಮಾಡುವ ಡ್ಯಾಶ್‌ಬೋರ್ಡ್‌ಗಳು

 

  • ಪರಿಹಾರದ ಗುಣಮಟ್ಟವನ್ನು ನಿರ್ಣಯಿಸಲು ಮತ್ತು ವರ್ಗಾವಣೆ ಅಥವಾ ಪರಿಣಾಮಕಾರಿ ಪರಿಹಾರವಿಲ್ಲದೆ ಮುಕ್ತಾಯಗೊಳಿಸುವ ಮೂಲಕ ವಿಲೇವಾರಿ ಮಾಡಲಾದ ಪ್ರಕರಣಗಳನ್ನು ಗುರುತಿಸಲು ಕುಂದುಕೊರತೆ ನಿವಾರಣೆಯ ಎಐ-ಸಕ್ರಿಯಗೊಳಿಸಿದ ಮೌಲ್ಯಮಾಪನ

ಮುಂದಿನ ಪೀಳಿಗೆಯ ಸಿಪಿಗ್ರಾಮ್ಸ್‌ ಕುಂದುಕೊರತೆ ನಿವಾರಣೆಯನ್ನು ಹೆಚ್ಚು ಸುಲಭವಾಗಿ ಪ್ರವೇಶಿಸಬಹುದಾದ, ಸ್ಪಂದಿಸುವ ಮತ್ತು ಪಾರದರ್ಶಕವಾಗಿಸುವ ನಿರೀಕ್ಷೆಯಿದೆ, ಜೊತೆಗೆ ನಾಗರಿಕ-ಕೇಂದ್ರಿತ ಆಡಳಿತವನ್ನು ಬಲಪಡಿಸುತ್ತದೆ.
 

ನಾಗರಿಕ-ಕೇಂದ್ರಿತ ಆಡಳಿತವನ್ನು ಬಲಪಡಿಸುವುದು

ಕಳೆದ ದಶಕದಲ್ಲಿ, ಸಿಪಿಗ್ರಾಮ್ಸ್‌ ವಿಶ್ವದ ಅತಿ ದೊಡ್ಡ ಡಿಜಿಟಲ್ ಸಾರ್ವಜನಿಕ ಕುಂದುಕೊರತೆ ನಿವಾರಣಾ ವೇದಿಕೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ನಿರಂತರ ಸುಧಾರಣೆಗಳು, ತಾಂತ್ರಿಕ ಆವಿಷ್ಕಾರಗಳು ಮತ್ತು ನಾಗರಿಕರ ತೃಪ್ತಿಯ ಮೇಲೆ ಬಲವಾದ ಗಮನಹರಿಸುವಿಕೆಯ ಮೂಲಕ, ಈ ವೇದಿಕೆಯು ನಾಗರಿಕರು ಸರ್ಕಾರದ ಸಂಸ್ಥೆಗಳೊಂದಿಗೆ ಸಂವಹನ ನಡೆಸುವ ವಿಧಾನವನ್ನು ಪರಿವರ್ತಿಸಿದೆ.

ಸಮಯೋಚಿತ ಕುಂದುಕೊರತೆ ಪರಿಹಾರವನ್ನು ಸಕ್ರಿಯಗೊಳಿಸುವ ಮೂಲಕ, ಹೊಣೆಗಾರಿಕೆಯನ್ನು ಉತ್ತೇಜಿಸುವ ಮೂಲಕ ಮತ್ತು ನಾಗರಿಕರ ಪ್ರತಿಕ್ರಿಯೆಯ ಮೂಲಕ ಸೇವಾ ವಿತರಣೆಯನ್ನು ನಿರಂತರವಾಗಿ ಸುಧಾರಿಸುವ ಮೂಲಕ, ಸಿಪಿಗ್ರಾಮ್ಸ್‌ ಸ್ಪಂದಿಸುವ ಮತ್ತು ನಾಗರಿಕ-ಕೇಂದ್ರಿತ ಆಡಳಿತದ ಅಡಿಪಾಯವನ್ನು ಬಲಪಡಿಸಿದೆ. ಭಾರತವು ವಿಕಸಿತ ಭಾರತ 2047ರ ದೃಷ್ಟಿಕೋನದತ್ತ ಮುನ್ನಡೆಯುತ್ತಿರುವಂತೆ, ಸಮರ್ಥ, ಪಾರದರ್ಶಕ ಮತ್ತು ಸುಲಭವಾಗಿ ಪ್ರವೇಶಿಸಬಹುದಾದ ಕುಂದುಕೊರತೆ ನಿವಾರಣಾ ವ್ಯವಸ್ಥೆಯ ಮೂಲಕ ಪ್ರತಿಯೊಬ್ಬ ನಾಗರಿಕನ ಧ್ವನಿಯನ್ನು ಕೇಳಲಾಗುತ್ತದೆ ಮತ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಖಚಿತಪಡಿಸುವಲ್ಲಿ ಸಿಪಿಗ್ರಾಮ್ಸ್‌ ಪ್ರಮುಖ ಪಾತ್ರ ವಹಿಸುವುದನ್ನು ಮುಂದುವರೆಸಿದೆ.

 

 

References

Ministry of Personnel, Public Grievances & Pensions:

https://pgportal.gov.in/

DARPG_Monthly_Report_Central_April_2026.pdf

https://www.pib.gov.in/PressReleasePage.aspx?PRID=2266985&reg=3&lang=1   

Click here to see PDF

 

******

(Explainer ID: 159497) आगंतुक पटल : 155
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Gujarati , Kannada , Malayalam