Infrastructure
ನದಿ ಪಾತ್ರದ ನಿರ್ವಹಣಾ ಯೋಜನೆ: ಜಲ ಆಡಳಿತದ ಬಲವರ್ಧನೆ
Posted On:
17 APR 2026 12:51PM
ಪ್ರಮುಖ ಅಂಶಗಳು
- ಆರ್ಬಿಎಂ ಯೋಜನೆ (ನದಿ ಪಾತ್ರದ ನಿರ್ವಹಣಾ ಯೋಜನೆ) ಮೇಲ್ಮೈ ಮತ್ತು ಅಂತರ್ಜಲ ಸಂಪನ್ಮೂಲಗಳ ಸುಸ್ಥಿರ ಬಳಕೆ, ರಕ್ಷಣೆ ಮತ್ತು ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ನದಿ ಪಾತ್ರದ ಮಟ್ಟದ ಯೋಜನೆಯನ್ನು ಉತ್ತೇಜಿಸುತ್ತದೆ.
- ಈ ಯೋಜನೆಯು 2026-27 ರಿಂದ 2030-31ರ ಅವಧಿಯಲ್ಲಿ ಮುಂದುವರಿಯಲಿದ್ದು, ಇದರ ಅಂದಾಜು ವೆಚ್ಚ ₹2183 ಕೋಟಿ ಆಗಿದೆ. ಇದನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸಲಿದೆ.
- ಈ ಯೋಜನೆಯು ಬ್ರಹ್ಮಪುತ್ರ, ಬರಾಕ್, ತೀಸ್ತಾ ಮತ್ತು ಸಿಂಧೂ ನದಿಯಂತಹ ಪ್ರಮುಖ ನದಿ ಪಾತ್ರಗಳಿಗೆ ಆದ್ಯತೆ ನೀಡುತ್ತದೆ.
- ಯೋಜನೆಯ ನಿಖರತೆ ಮತ್ತು ಭವಿಷ್ಯದ ಯೋಜನೆಗಳನ್ನು ಸುಧಾರಿಸಲು ಜಿಐಎಸ್, ರಿಮೋಟ್ ಸೆನ್ಸಿಂಗ್, ಲಿಡಾರ್ ಮತ್ತು ಡ್ರೋನ್ ಆಧಾರಿತ ಸಮೀಕ್ಷೆಗಳಂತಹ ಆಧುನಿಕ ಸಾಧನಗಳನ್ನು ಬಳಸಲಾಗುತ್ತಿದೆ.
|
ಪೀಠಿಕೆ
ನೀರು ಅತ್ಯಂತ ನಿರ್ಣಾಯಕ ನೈಸರ್ಗಿಕ ಸಂಪನ್ಮೂಲಗಳಲ್ಲಿ ಒಂದಾಗಿದ್ದು, ಪರಿಸರ ವ್ಯವಸ್ಥೆಗಳು, ಜೀವನೋಪಾಯಗಳು ಮತ್ತು ಆರ್ಥಿಕ ಅಭಿವೃದ್ಧಿಯನ್ನು ಬೆಂಬಲಿಸುತ್ತದೆ. ಇದು ಕೃಷಿ, ಕೈಗಾರಿಕೆ, ಇಂಧನ ಉತ್ಪಾದನೆ ಮತ್ತು ಒಟ್ಟಾರೆ ಮಾನವ ಕಲ್ಯಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಮಾಜವು ವಿವಿಧ ಉದ್ದೇಶಗಳಿಗಾಗಿ ನೀರಿನ ಮೇಲೆ ಅವಲಂಬಿತವಾಗಿರುವುದರಿಂದ, ನೀರಿನ ಸಮರ್ಥ ಮತ್ತು ಸಮನ್ವಯ ಬಳಕೆಯ ಅಗತ್ಯವು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿದೆ.
ನದಿ ಪಾತ್ರದ ನಿರ್ವಹಣೆ (ಆರ್ಬಿಎಂ) ಎಂಬುದು ನದಿ ಪಾತ್ರಗಳಲ್ಲಿನ ನೀರಿನ ಸಂಪನ್ಮೂಲಗಳ ನಿರ್ವಹಣೆ, ರಕ್ಷಣೆ, ಸುಧಾರಣೆ ಮತ್ತು ಸುಸ್ಥಿರ ಬಳಕೆಗಾಗಿ ರೂಪಿಸಲಾದ ಒಂದು ಸಮಗ್ರ ಯೋಜನೆಯಾಗಿದೆ. ಈ ಸಂಪನ್ಮೂಲಗಳು ನದಿಗಳು, ಕೆರೆಗಳು, ತೊರೆಗಳು, ಅಂತರ್ಜಲ ಮತ್ತು ಅದಕ್ಕೆ ಸಂಬಂಧಿಸಿದ ಪರಿಸರ ವ್ಯವಸ್ಥೆಗಳನ್ನು ಒಳಗೊಂಡಿರುತ್ತವೆ. ಈ ವಿಧಾನವು ನೀರಿನ ಸಂಪನ್ಮೂಲಗಳ ಗರಿಷ್ಠ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಸಮಗ್ರ ಯೋಜನೆ ಮತ್ತು ಅಭಿವೃದ್ಧಿಗೆ ಒತ್ತು ನೀಡುತ್ತದೆ. ಭಾರತದಂತಹ ಸಂಕೀರ್ಣ ಮತ್ತು ಪರಸ್ಪರ ಸಂಬಂಧ ಹೊಂದಿರುವ ನದಿ ವ್ಯವಸ್ಥೆಗಳಿರುವ ದೇಶದಲ್ಲಿ, ಪ್ರವಾಹ, ಸವಕಳಿ, ಅಸಮಾನ ನೀರಿನ ಹಂಚಿಕೆ ಮತ್ತು ಪರಿಸರ ಅವನತಿಯಂತಹ ಸವಾಲುಗಳನ್ನು ಎದುರಿಸಲು ನದಿ ಪಾತ್ರದ ಮಟ್ಟದ ಯೋಜನೆಯು ಅತ್ಯಗತ್ಯವಾಗಿದೆ. ಈ ಸವಾಲುಗಳನ್ನು ಗುರುತಿಸಿ, ನದಿ ಪಾತ್ರದ ನಿರ್ವಹಣಾ (ಆರ್ಬಿಎಂ) ಯೋಜನೆಯನ್ನು ವ್ಯವಸ್ಥಿತ ಮತ್ತು ವೈಜ್ಞಾನಿಕ ರೀತಿಯಲ್ಲಿ ಜಾರಿಗೆ ತರಲಾಗುತ್ತಿದೆ.
ನದಿ ಪಾತ್ರದ ನಿರ್ವಹಣಾ (ಆರ್ಬಿಎಂ) ಯೋಜನೆಯ ಅವಲೋಕ
ಆರ್ಬಿಎಂ ಯೋಜನೆಯು ಜಲಶಕ್ತಿ ಸಚಿವಾಲಯದ ಅಡಿಯಲ್ಲಿರುವ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆಯ ಒಂದು ಕೇಂದ್ರ ವಲಯದ ಯೋಜನೆಯಾಗಿದೆ. ಮೇಲ್ಮೈ ನೀರು ಮತ್ತು ಅಂತರ್ಜಲ ವ್ಯವಸ್ಥೆಗಳನ್ನು ಒಳಗೊಂಡಂತೆ ನದಿ ಪಾತ್ರದ ಮಟ್ಟದಲ್ಲಿ ಜಲಸಂಪನ್ಮೂಲಗಳ ಸಮಗ್ರ ಯೋಜನೆ, ತನಿಖೆ ಮತ್ತು ಅಭಿವೃದ್ಧಿಯನ್ನು ಸುಗಮಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಇದನ್ನು ಬ್ರಹ್ಮಪುತ್ರ ಮಂಡಳಿ, ಕೇಂದ್ರ ಜಲ ಆಯೋಗ ಮತ್ತು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ಎಂಬ ಮೂರು ಪ್ರಮುಖ ಸಂಸ್ಥೆಗಳ ಮೂಲಕ ಜಾರಿಗೆ ತರಲಾಗುತ್ತಿದೆ. ಈ ಯೋಜನೆಯು ನದಿ ಪಾತ್ರದ ಮಾಸ್ಟರ್ ಪ್ಲಾನ್ಗಳ ತಯಾರಿಕೆ, ಯೋಜನೆಗಳ ಸಮೀಕ್ಷೆ ಮತ್ತು ತನಿಖೆ ಹಾಗೂ ಬಹುಪಯೋಗಿ ಯೋಜನೆಗಳ ಯೋಜನೆಯಂತಹ ಚಟುವಟಿಕೆಗಳಿಗೆ ಬೆಂಬಲ ನೀಡುತ್ತದೆ.

ಭೌಗೋಳಿಕ ವ್ಯಾಪ್ತಿ ಮತ್ತು ಆದ್ಯತೆಯ ಕ್ಷೇತ್ರಗಳು
ಆರ್ಬಿಎಂ ಯೋಜನೆಯು ಪ್ರಮುಖವಾಗಿ ವ್ಯೂಹಾತ್ಮಕವಾಗಿ ಮಹತ್ವದ ಮತ್ತು ಸಮೃದ್ಧ ಜಲಸಂಪನ್ಮೂಲ ಹೊಂದಿದ್ದರೂ ಅಭಿವೃದ್ಧಿಯಾಗದ ಪ್ರದೇಶಗಳ ಮೇಲೆ ಕೇಂದ್ರೀಕರಿಸುತ್ತದೆ, ವಿಶೇಷವಾಗಿ:
- ಈಶಾನ್ಯ ರಾಜ್ಯಗಳ ನದಿ ಪಾತ್ರಗಳು.
- ಜಮ್ಮು ಮತ್ತು ಕಾಶ್ಮೀರ / ಲಡಾಖ್ನಲ್ಲಿನ ಸಿಂಧೂ ನದಿ ಪಾತ್ರ.
- ಬ್ರಹ್ಮಪುತ್ರ, ಬರಾಕ್, ತೀಸ್ತಾ ಮತ್ತು ಸಿಂಧೂ ನದಿಯಂತಹ ಪ್ರಮುಖ ಪಾತ್ರಗಳು.
ಈ ಕೆಳಗಿನ ಅಂಶಗಳಲ್ಲಿನ ಪ್ರಾಮುಖ್ಯತೆಯ ಕಾರಣದಿಂದಾಗಿ ಈ ನದಿ ಪಾತ್ರಗಳಿಗೆ ಆದ್ಯತೆ ನೀಡಲಾಗಿದೆ:
- ರಾಷ್ಟ್ರೀಯ ಜಲ ಭದ್ರತೆ.
- ಗಡಿಯಾಚೆಗಿನ ನೀರಿನ ನಿರ್ವಹಣೆ.
- ಪ್ರವಾಹ ನಿಯಂತ್ರಣ ಮತ್ತು ಸವಕಳಿ ನಿರ್ವಹಣೆ.
- ಪರಿಸರ ಸಮತೋಲನ.
ಯೋಜನೆಯ ಯೋಜನೆ ಮತ್ತು ಅಭಿವೃದ್ಧಿಗಾಗಿ ಕೇಂದ್ರದ ಬೆಂಬಲದ ಅಗತ್ಯವಿರುವ ಜಮ್ಮು ಮತ್ತು ಕಾಶ್ಮೀರ, ಸಿಕ್ಕಿಂ, ಮಿಜೋರಾಂ, ಮಣಿಪುರ ಮತ್ತು ನಾಗಾಲ್ಯಾಂಡ್ ಅಂತಹ ರಾಜ್ಯಗಳಲ್ಲಿನ ಸಾಮರ್ಥ್ಯದ ಕೊರತೆಯನ್ನು ಸಹ ಈ ಯೋಜನೆಯು ನೀಗಿಸುತ್ತದೆ.
ಹಣಕಾಸಿನ ವೆಚ್ಚ ಮತ್ತು ಅವಧಿ
ಆರ್ಬಿಎಂ ಯೋಜನೆಯನ್ನು 16ನೇ ಹಣಕಾಸು ಆಯೋಗದ ಅವಧಿಯಾದ 2026–27 ರಿಂದ 2030–31ರವರೆಗೆ ಮುಂದುವರಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಅಂದಾಜು ₹2183 ಕೋಟಿ ಹಣಕಾಸಿನ ವೆಚ್ಚವನ್ನು ನಿಗದಿಪಡಿಸಲಾಗಿದ್ದು, ಇದನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸಲಿದೆ. ಈ ಹಿಂದಿನ ಹಂತದಲ್ಲಿ ಅಂದರೆ 2021–22 ರಿಂದ 2025–26ರವರೆಗೆ, ಈ ಯೋಜನೆಗೆ ಒಟ್ಟು ₹1276 ಕೋಟಿ ಬಜೆಟ್ ಮೀಸಲಿಡಲಾಗಿತ್ತು. ಇದು ಸಮಗ್ರ ಜಲಸಂಪನ್ಮೂಲ ಯೋಜನೆ ಮತ್ತು ಅಭಿವೃದ್ಧಿಯ ಕಡೆಗೆ ಸರ್ಕಾರದ ನಿರಂತರ ಮತ್ತು ಹೆಚ್ಚಿದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಸಾಂಸ್ಥಿಕ ಚೌಕಟ್ಟು
ಆರ್ಬಿಎಂ ಯೋಜನೆಯು ಎರಡು ಪ್ರಮುಖ ಅಂಶಗಳನ್ನು ಒಳಗೊಂಡಿದೆ:
1. ಬ್ರಹ್ಮಪುತ್ರ ಮಂಡಳಿ ಘಟಕ
ಈಶಾನ್ಯ ಪ್ರದೇಶದಲ್ಲಿ ನದಿ ಪಾತ್ರದ ಮಟ್ಟದ ಯೋಜನೆ ಮತ್ತು ಪ್ರವಾಹ ನಿರ್ವಹಣೆಯಲ್ಲಿ ಬ್ರಹ್ಮಪುತ್ರ ಮಂಡಳಿಯು ಪ್ರಮುಖ ಪಾತ್ರ ವಹಿಸುತ್ತದೆ. ಇದರ ಪ್ರಮುಖ ಕಾರ್ಯಗಳು ಹೀಗಿವೆ:
- ಸಮೀಕ್ಷೆಗಳು ಮತ್ತು ತನಿಖೆಗಳು ಹಾಗೂ ಮಾಸ್ಟರ್ ಪ್ಲಾನ್ ರೂಪಿಸುವುದು: ಕಾಲಕಾಲಕ್ಕೆ ಈ ಯೋಜನೆಗಳನ್ನು ಪೂರ್ಣವಾಗಿ ಅಥವಾ ಭಾಗಶಃ ಪರಿಷ್ಕರಿಸುವುದು.
- ಪ್ರವಾಹ ನಿಯಂತ್ರಣ ಮತ್ತು ಸವಕಳಿ ತಡೆ: ನೀರಾವರಿ, ಜಲವಿದ್ಯುತ್, ನೌಕಾಯಾನ ಮತ್ತು ಇತರ ಪ್ರಯೋಜನಕಾರಿ ಉದ್ದೇಶಗಳಿಗಾಗಿ ಜಲಸಂಪನ್ಮೂಲಗಳ ಅಭಿವೃದ್ಧಿ ಮತ್ತು ಬಳಕೆಯನ್ನು ಗಮನದಲ್ಲಿಟ್ಟುಕೊಂಡು ಪ್ರವಾಹ ನಿಯಂತ್ರಣ, ದಂಡೆಯ ಸವಕಳಿ ತಡೆಗಟ್ಟುವಿಕೆ ಮತ್ತು ಒಳಚರಂಡಿ ಸುಧಾರಣೆಗೆ ಕ್ರಮ ಕೈಗೊಳ್ಳುವುದು.
- ಅಭಿವೃದ್ಧಿ ಕ್ರಮಗಳು: ಸಾಧ್ಯವಿರುವ ಮಟ್ಟಿಗೆ, ಅಂತಹ ಅಭಿವೃದ್ಧಿಗೆ ಅಗತ್ಯವಾದ ಕಾಮಗಾರಿಗಳು ಮತ್ತು ಕ್ರಮಗಳನ್ನು ಸೂಚಿಸುವುದು.
- ವರದಿಗಳ ತಯಾರಿ: ಕೇಂದ್ರ ಸರ್ಕಾರವು ಅನುಮೋದಿಸಿದ ಮಾಸ್ಟರ್ ಪ್ಲಾನ್ನಲ್ಲಿ ಪ್ರಸ್ತಾವಿಸಲಾದ ಅಣೆಕಟ್ಟುಗಳು ಮತ್ತು ಇತರ ಯೋಜನೆಗಳಿಗೆ ಸಂಬಂಧಿಸಿದಂತೆ ವಿವರವಾದ ವರದಿಗಳು ಮತ್ತು ಅಂದಾಜುಗಳನ್ನು ಸಿದ್ಧಪಡಿಸುವುದು.
ಮಂಡಳಿಯು ಈ ಕೆಳಗಿನ ಕೆಲಸಗಳನ್ನೂ ಕೈಗೊಳ್ಳುತ್ತದೆ:
- ನಿರ್ಣಾಯಕ ಪ್ರದೇಶಗಳಲ್ಲಿ ಸವಕಳಿ ವಿರೋಧಿ ಕಾಮಗಾರಿಗಳು: (ಉದಾಹರಣೆಗೆ: ಮಾಜುಲಿ ದ್ವೀಪ ಮತ್ತು ಇತರ ಸೂಕ್ಷ್ಮ ಪ್ರದೇಶಗಳ ರಕ್ಷಣೆ).
- ಒಳಚರಂಡಿ ಅಭಿವೃದ್ಧಿ ಯೋಜನೆಗಳು.
- ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎತ್ತರಿಸಿದ ವೇದಿಕೆಗಳ ನಿರ್ಮಾಣ.
- ಸುಸ್ಥಿರ ಬಳಕೆಗಾಗಿ ಜಲಸಂಪನ್ಮೂಲಗಳ ಅಭಿವೃದ್ಧಿ ಮತ್ತು ನಿರ್ವಹಣೆ: (ಸ್ಥಳೀಯ ಜನರ ಜಲ ನಿರ್ವಹಣಾ ಪದ್ಧತಿಗಳ ವೈಜ್ಞಾನಿಕ ಪ್ರಸರಣ ಮತ್ತು ಸ್ಪ್ರಿಂಗ್ಶೆಡ್ ನಿರ್ವಹಣಾ ಕಾಮಗಾರಿಗಳು).
- ಜಲಸಂಪನ್ಮೂಲ ನಿರ್ವಹಣೆಯಲ್ಲಿ ಸಾಮರ್ಥ್ಯ ವೃದ್ಧಿ: ( ನಿಹಾರಿ ಸಂಸ್ಥೆಯಲ್ಲಿ ಈಶಾನ್ಯ ರಾಜ್ಯಗಳ ಮತ್ತು ಬ್ರಹ್ಮಪುತ್ರ ಮಂಡಳಿಯ ಅಧಿಕಾರಿಗಳಿಗೆ ತರಬೇತಿ).
2. ಜಲಸಂಪನ್ಮೂಲ ಅಭಿವೃದ್ಧಿ ಯೋಜನೆಯ ತನಿಖೆ
ಐಡಬ್ಲುಆಋಡಿಎಸ್ ಘಟಕವನ್ನು ಈ ಕೆಳಗಿನ ಸಂಸ್ಥೆಗಳ ಮೂಲಕ ಜಾರಿಗೆ ತರಲಾಗುತ್ತದೆ:
ಕೇಂದ್ರ ಜಲ ಆಯೋಗ: ಆರ್ಬಿಎಂ ಯೋಜನೆಯಡಿ, ಕೇಂದ್ರ ಜಲ ಆಯೋಗವು ಜಲಸಂಪನ್ಮೂಲ ಯೋಜನೆಗಳಿಗಾಗಿ ಸಮೀಕ್ಷೆ, ತನಿಖೆ ಮತ್ತು ವಿವರವಾದ ಯೋಜನಾ ವರದಿಗಳ (ಡಿಪಿಆರ್) ತಯಾರಿಕೆಯನ್ನು ಕೈಗೊಳ್ಳುತ್ತದೆ. ಈ ಕೆಳಗಿನ ನದಿ ಪಾತ್ರಗಳಲ್ಲಿ ಡಿಪಿಆರ್ ತಯಾರಿಕೆಗೆ ಆದ್ಯತೆ ನೀಡಲಾಗುತ್ತದೆ:
- ಸಿಂಧೂ ನದಿ ಪಾತ್ರ
- ಬ್ರಹ್ಮಪುತ್ರ ನದಿ ಪಾತ್ರ
- ಬರಾಕ್ ನದಿ ಪಾತ್ರ
- ತೀಸ್ತಾ ನದಿ ಪಾತ್ರ
ಈ ಯೋಜನೆಗಳು ದೂರದ ಮತ್ತು ಕಠಿಣ ಭೂಪ್ರದೇಶಗಳಲ್ಲಿ, ವಿಶೇಷವಾಗಿ ಈಶಾನ್ಯ ಭಾರತ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿವೆ. ಅಲ್ಲಿ ಕೆಲಸದ ಅವಧಿ ಸೀಮಿತವಾಗಿದ್ದು, ಸಾಗಾಟ ವ್ಯವಸ್ಥೆಯು ಸವಾಲಿನಿಂದ ಕೂಡಿದೆ. ಈ ಡಿಪಿಆರ್ಗಳ ಪೂರ್ಣಗೊಳಿಸುವಿಕೆಯಿಂದ ಈ ಕೆಳಗಿನ ಪ್ರಯೋಜನಗಳನ್ನು ನಿರೀಕ್ಷಿಸಲಾಗಿದೆ:
- ನೀರಾವರಿ ಸಾಮರ್ಥ್ಯದ ವಿಸ್ತರಣೆ.
- ಜಲವಿದ್ಯುತ್ ಉತ್ಪಾದನೆ.
- ಸುಧಾರಿತ ಪ್ರವಾಹ ನಿಯಂತ್ರಣ.
- ಫಲಾನುಭವಿ ಪ್ರದೇಶಗಳ ಸಾಮಾಜಿಕ-ಆರ್ಥಿಕ ಅಭಿವೃದ್ಧಿ.
ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (ಎನ್ಡಬ್ಲುಡಿಎ): ಎನ್ಡಬ್ಲುಡಿಎ ಘಟಕವು ರಾಷ್ಟ್ರಮಟ್ಟದಲ್ಲಿ ಜಲಸಂಪನ್ಮೂಲ ಯೋಜನೆಯ ಮೇಲೆ ಕೇಂದ್ರೀಕರಿಸುತ್ತದೆ, ವಿಶೇಷವಾಗಿ ನದಿಗಳ ಜೋಡಣೆ ಕಾರ್ಯಕ್ರಮದ ಅಡಿಯಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಪ್ರಮುಖ ಕಾರ್ಯಗಳು:
- ಪೂರ್ವ-ಸಾಧ್ಯತಾ ವರದಿಗಳು, ಸಾಧ್ಯತಾ ವರದಿಗಳು ಮತ್ತು ವಿವರವಾದ ಯೋಜನಾ ವರದಿಗಳ ತಯಾರಿ.
- ನೀರಿನ ಸಮತೋಲನ ಅಧ್ಯಯನಗಳನ್ನು ನಡೆಸುವುದು.
- ನದಿ ಪಾತ್ರಗಳ ನಡುವಿನ ನೀರು ವರ್ಗಾವಣೆ ಯೋಜನೆಗಳನ್ನು ರೂಪಿಸುವುದು.
ಕಾರ್ಯಚಟುವಟಿಕೆಯ ಪ್ರಮುಖ ಕ್ಷೇತ್ರಗಳು
ಆರ್ಬಿಎಂ ಚೌಕಟ್ಟಿನ ಅಡಿಯಲ್ಲಿ ಸರಣಿ ಸಮನ್ವಯ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತದೆ. ಇವುಗಳಲ್ಲಿ ನದಿ ಪಾತ್ರದ ಯೋಜನೆ, ಯೋಜನಾ ತನಿಖೆಗಳು ಮತ್ತು ಪ್ರವಾಹ, ಸವಕಳಿ ಹಾಗೂ ಒಳಚರಂಡಿ ವ್ಯವಸ್ಥೆಗಳ ನಿರ್ವಹಣೆಯ ಹಸ್ತಕ್ಷೇಪಗಳು ಸೇರಿವೆ.
ನದಿ ಪಾತ್ರದ ಯೋಜನೆ ನದಿ ಪಾತ್ರದ ಯೋಜನೆಯು ಈ ಚೌಕಟ್ಟಿನ ಅಡಿಪಾಯವಾಗಿದೆ. ಇದು ನದಿ ಪಾತ್ರದ ಮಾಸ್ಟರ್ ಪ್ಲಾನ್ಗಳ ತಯಾರಿ ಮತ್ತು ನಿಯತಕಾಲಿಕ ನವೀಕರಣವನ್ನು ಒಳಗೊಂಡಿರುತ್ತದೆ. ಈ ಯೋಜನೆಗಳು ಪ್ರತಿ ನದಿ ಪಾತ್ರದೊಳಗಿನ ಜಲಸಂಪನ್ಮೂಲಗಳ ಅಭಿವೃದ್ಧಿ, ಬಳಕೆ ಮತ್ತು ಸಂರಕ್ಷಣೆಗಾಗಿ ದೀರ್ಘಕಾಲೀನ ಮಾರ್ಗಸೂಚಿಯನ್ನು ಒದಗಿಸುತ್ತವೆ.
ಸಮೀಕ್ಷೆ ಮತ್ತು ತನಿಖೆ ಮಾಹಿತಿ ಆಧಾರಿತ ನಿರ್ಧಾರ ಕೈಗೊಳ್ಳುವಿಕೆಯನ್ನು ಬೆಂಬಲಿಸಲು ವ್ಯಾಪಕವಾದ ಸಮೀಕ್ಷೆ ಮತ್ತು ತನಿಖಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ. ಇದು ಕೊರೆಯುವಿಕೆ ಮತ್ತು ಡ್ರಿಫ್ಟಿಂಗ್ ಕಾರ್ಯಾಚರಣೆಗಳು, ಜಲವಿಜ್ಞಾನ ಮತ್ತು ಭೂಗೋಳದ ಸಮೀಕ್ಷೆಗಳು ಹಾಗೂ ಮಾಸ್ಟರ್ ಪ್ಲಾನ್ ಮತ್ತು ವಿವರವಾದ ಯೋಜನಾ ವರದಿಗಳ ತಯಾರಿಕೆಗೆ ಅಗತ್ಯವಿರುವ ಪ್ರಾಥಮಿಕ ಮತ್ತು ದ್ವಿತೀಯಕ ದತ್ತಾಂಶಗಳ ಸಂಗ್ರಹಣೆಯನ್ನು ಒಳಗೊಂಡಿರುತ್ತದೆ.
ಯೋಜನಾ ಅಭಿವೃದ್ಧಿ ಯೋಜನಾ ಅಭಿವೃದ್ಧಿಯು ಬಹುಪಯೋಗಿ ಜಲಸಂಪನ್ಮೂಲ ಯೋಜನೆಗಳಿಗಾಗಿ ವಿವರವಾದ ಯೋಜನಾ ವರದಿಗಳ ತಯಾರಿಕೆಯ ಮೇಲೆ ಕೇಂದ್ರೀಕರಿಸುತ್ತದೆ. ಇದು ಪ್ರವಾಹ ಮತ್ತು ಸವಕಳಿ ನಿರ್ವಹಣೆ, ಒಳಚರಂಡಿ ಅಭಿವೃದ್ಧಿ ಮತ್ತು ವ್ಯವಸ್ಥಿತ ಯೋಜನಾ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಇತರ ಉಪಕ್ರಮಗಳ ಯೋಜನೆಯನ್ನು ಸಹ ಒಳಗೊಂಡಿದೆ.
ಪ್ರವಾಹ ಮತ್ತು ಸವಕಳಿ ನಿರ್ವಹಣೆ ಸೂಕ್ಷ್ಮ ಪ್ರದೇಶಗಳಲ್ಲಿ ಪ್ರವಾಹ ಮತ್ತು ನದಿ ದಂಡೆಯ ಸವಕಳಿಯ ಪ್ರಭಾವವನ್ನು ಕಡಿಮೆ ಮಾಡಲು ವಿಶೇಷ ಕ್ರಮಗಳನ್ನು ಜಾರಿಗೆ ತರಲಾಗುತ್ತದೆ. ಇವುಗಳಲ್ಲಿ ಸವಕಳಿ ವಿರೋಧಿ ಕಾಮಗಾರಿಗಳು, ಪ್ರವಾಹ ನಿಯಂತ್ರಣ ಕ್ರಮಗಳು ಮತ್ತು ಸಮುದಾಯಗಳು, ಮೂಲಸೌಕರ್ಯ ಹಾಗೂ ಕೃಷಿ ಭೂಮಿಯನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ಬಯೋ-ಎಂಜಿನಿಯರಿಂಗ್ ಹಸ್ತಕ್ಷೇಪಗಳು ಸೇರಿವೆ.
ಒಳಚರಂಡಿ ಅಭಿವೃದ್ಧಿ ನೀರಿನ ಹರಿವನ್ನು ಸುಧಾರಿಸಲು ಮತ್ತು ನೀರು ನಿಲ್ಲುವ ಸಮಸ್ಯೆ ಇರುವ ಪ್ರದೇಶಗಳಲ್ಲಿ ಒಳಚರಂಡಿ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತದೆ. ಈ ಪ್ರಯತ್ನಗಳು ಭೂಮಿಯ ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಉತ್ತಮ ಜಲ ನಿರ್ವಹಣೆಯನ್ನು ಬೆಂಬಲಿಸಲು ಸಹಾಯ ಮಾಡುತ್ತವೆ.
ಸಮುದಾಯ ಆಧಾರಿತ ಹಸ್ತಕ್ಷೇಪಗಳು ಸ್ಥಳೀಯ ಜಲ ನಿರ್ವಹಣಾ ಪದ್ಧತಿಗಳನ್ನು ಬಲಪಡಿಸುವಲ್ಲಿ ಸಮುದಾಯ ಆಧಾರಿತ ಉಪಕ್ರಮಗಳು ಪ್ರಮುಖ ಪಾತ್ರವಹಿಸುತ್ತವೆ. ಇವುಗಳಲ್ಲಿ ಸ್ಥಳೀಯ ಮತ್ತು ಬುಡಕಟ್ಟು ಸಮುದಾಯಗಳಲ್ಲಿ ಸುಧಾರಿತ ನೀರಿನ ಬಳಕೆಯನ್ನು ಉತ್ತೇಜಿಸುವುದು, ಸ್ಪ್ರಿಂಗ್ಶೆಡ್ ನಿರ್ವಹಣೆ ಮತ್ತು ಜಲಮೂಲ ಹಾಗೂ ನದಿ ಪಾತ್ರದ ಪರಿಸರ ವ್ಯವಸ್ಥೆಗಳ ಅಭಿವೃದ್ಧಿಯಂತಹ ಚಟುವಟಿಕೆಗಳು ಸೇರಿವೆ.
ಯೋಜನೆಯ ವ್ಯೂಹಾತ್ಮಕ ಪ್ರಾಮುಖ್ಯತೆ ಆರ್ಬಿಎಂ ಯೋಜನೆಯು ರಾಷ್ಟ್ರೀಯ ಜಲ ಭದ್ರತೆ, ಗಡಿಯಾಚೆಗಿನ ನದಿ ನಿರ್ವಹಣೆ, ಈಶಾನ್ಯದ ಪ್ರವಾಹ ಪೀಡಿತ ಪ್ರದೇಶಗಳು ಮತ್ತು ಹಿಮಾಲಯದ ನದಿಗಳಲ್ಲಿನ ಜಲವಿದ್ಯುತ್ ಸಾಮರ್ಥ್ಯಕ್ಕೆ ನಿರ್ಣಾಯಕವಾಗಿರುವ ನದಿ ಪಾತ್ರಗಳ ಮೇಲೆ ಕೇಂದ್ರೀಕರಿಸುತ್ತದೆ.

ಜಲಸಂಪನ್ಮೂಲ ಯೋಜನೆಯಲ್ಲಿ ಆರ್ಥಿಕ ಮತ್ತು ತಾಂತ್ರಿಕ ಸಾಮರ್ಥ್ಯದ ಕೊರತೆಯನ್ನು ಹೊಂದಿರುವ ಹಿಂದುಳಿದ ರಾಜ್ಯಗಳಿಗೂ ಈ ಯೋಜನೆಯು ಬೆಂಬಲ ನೀಡುತ್ತದೆ.
ಆರ್ಬಿಎಮ್ ಯೋಜನೆಯಡಿ ಪ್ರಗತಿ ಮತ್ತು ಸಾಧನೆಗಳು (2021-26) ಕಾಲಾನಂತರದಲ್ಲಿ, ನದಿ ಪಾತ್ರದ ನಿರ್ವಹಣಾ ಚೌಕಟ್ಟಿನ ಅಡಿಯಲ್ಲಿ ನಡೆಸಲಾದ ಸುಸ್ಥಿರ ಪ್ರಯತ್ನಗಳು ಪ್ರತ್ಯಕ್ಷವಾಗಿ ಉತ್ತಮ ಫಲಿತಾಂಶಗಳನ್ನು ನೀಡಿವೆ. ಸುಧಾರಿತ ನದಿ ಪಾತ್ರದ ಅಧ್ಯಯನಗಳಿಂದ ಹಿಡಿದು ವರ್ಧಿತ ಪ್ರವಾಹ ಮತ್ತು ಸವಕಳಿ ನಿಯಂತ್ರಣ ಕ್ರಮಗಳವರೆಗೆ, ಈ ಸಾಧನೆಗಳು ಸ್ಥಿರವಾದ ಸಾಂಸ್ಥಿಕ ಮತ್ತು ತಾಂತ್ರಿಕ ಪ್ರಗತಿಯನ್ನು ಪ್ರದರ್ಶಿಸುತ್ತವೆ.
ನದಿ ಪಾತ್ರದ ಯೋಜನೆ ಮತ್ತು ಮಾಸ್ಟರ್ ಪ್ಲಾನ್ಗಳು
- ಬ್ರಹ್ಮಪುತ್ರ ಮತ್ತು ಬರಾಕ್ ನದಿ ಪಾತ್ರಗಳ ಪ್ರಮುಖ ನದಿ ವ್ಯವಸ್ಥೆಗಳಿಗಾಗಿ ನದಿ ಪಾತ್ರದ ಮಾಸ್ಟರ್ ಪ್ಲಾನ್ಗಳ ತಯಾರಿಕೆ ಮತ್ತು ನವೀಕರಣ.
- ಸಮಗ್ರ ಜಲಸಂಪನ್ಮೂಲ ಯೋಜನೆ ಮತ್ತು ಪ್ರವಾಹ ನಿರ್ವಹಣಾ ಕಾರ್ಯತಂತ್ರಗಳನ್ನು ಬೆಂಬಲಿಸಲು ನದಿ ಪಾತ್ರದ ಮಟ್ಟದ ಅಧ್ಯಯನಗಳನ್ನು ಕೈಗೊಳ್ಳಲಾಗಿದೆ.
- ಬ್ರಹ್ಮಪುತ್ರ ನದಿಯ ಪ್ರವಾಹ ಮತ್ತು ಸವಕಳಿಯಿಂದ ಮಾಜುಲಿ ದ್ವೀಪಕ್ಕೆ ಗಣನೀಯ ರಕ್ಷಣೆ ನೀಡಲಾಗಿದೆ.

ಅಸ್ಸಾಂನ ಮಾಜುಲಿಯ ಸುಮೋಯಿಮಾರಿಯಲ್ಲಿ ದಂಡೆ ರಕ್ಷಣಾ ಕಾಮಗಾರಿಯ ನಂತರದ ನೋಟ.
ಯೋಜನೆಗಳ ಸಮೀಕ್ಷೆ ಮತ್ತು ತನಿಖೆ
- ಈಶಾನ್ಯ ಪ್ರದೇಶ ಮತ್ತು ಹಿಮಾಲಯದ ಪ್ರದೇಶಗಳ ನದಿ ಪಾತ್ರಗಳಲ್ಲಿ ವ್ಯಾಪಕವಾದ ಸಮೀಕ್ಷೆ ಮತ್ತು ತನಿಖಾ ಕಾರ್ಯಗಳನ್ನು ನಡೆಸಲಾಗಿದೆ.
- ಕ್ಷೇತ್ರ ತನಿಖೆಗಳು ಭೂಗೋಳದ ಸಮೀಕ್ಷೆಗಳು, ಭೂವೈಜ್ಞಾನಿಕ ತನಿಖೆಗಳು ಮತ್ತು ಜಲವಿಜ್ಞಾನದ ದತ್ತಾಂಶ ಸಂಗ್ರಹಣೆಯನ್ನು ಒಳಗೊಂಡಿವೆ.
- ಈ ಅಧ್ಯಯನಗಳು ಭವಿಷ್ಯದ ನೀರಾವರಿ, ಜಲವಿದ್ಯುತ್ ಮತ್ತು ಬಹುಪಯೋಗಿ ಯೋಜನೆಗಳಿಗೆ ಅಡಿಪಾಯವಾಗಿವೆ.
ಡಿಪಿಆರ್ಗಳ ತಯಾರಿ (ಸಿಡಬ್ಲುಸಿ ಘಟಕ)
- ಬ್ರಹ್ಮಪುತ್ರ, ಬರಾಕ್, ತೀಸ್ತಾ ಮತ್ತು ಸಿಂಧೂ (ಜಮ್ಮು ಮತ್ತು ಕಾಶ್ಮೀರ / ಲಡಾಖ್) ನದಿ ಪಾತ್ರಗಳಲ್ಲಿನ ಹಲವಾರು ಜಲಸಂಪನ್ಮೂಲ ಯೋಜನೆಗಳಿಗಾಗಿ ವಿವರವಾದ ಯೋಜನಾ ವರದಿಗಳನ್ನು ಸಿದ್ಧಪಡಿಸಲಾಗಿದೆ.
- ದೂರದ ಮತ್ತು ಆಯಕಟ್ಟಿನ ಪ್ರಮುಖ ಪ್ರದೇಶಗಳಲ್ಲಿನ ಯೋಜನೆಗಳಿಗಾಗಿ ಡಿಪಿಆರ್ಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಇದು ನೀರಾವರಿ, ಜಲವಿದ್ಯುತ್ ಮತ್ತು ಪ್ರವಾಹ ನಿಯಂತ್ರಣದಲ್ಲಿ ಭವಿಷ್ಯದ ಹೂಡಿಕೆಗೆ ದಾರಿ ಮಾಡಿಕೊಡುತ್ತದೆ.
ಎನ್ಡಬ್ಲುಡಿಎ ಅಡಿಯಲ್ಲಿನ ಪ್ರಗತಿ (ನದಿಗಳ ಜೋಡಣೆ)
- ರಾಷ್ಟ್ರೀಯ ದೃಷ್ಟಿಕೋನ ಯೋಜನೆಯ ಭಾಗವಾಗಿ 30 ನದಿ ಜೋಡಣೆ ಯೋಜನೆಗಳನ್ನು ಗುರುತಿಸುವ ಮೂಲಕ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯು ಗಮನಾರ್ಹ ತಾಂತ್ರಿಕ ಪ್ರಗತಿಯನ್ನು ಸಾಧಿಸಿದೆ. ಗುರುತಿಸಲಾದ ಎಲ್ಲಾ ಜೋಡಣೆಗಳಿಗೆ ಪೂರ್ವ-ಸಾಧ್ಯತಾ ವರದಿಗಳು ಪೂರ್ಣಗೊಂಡಿವೆ.
- 26 ಯೋಜನೆಗಳಿಗೆ ಸಾಧ್ಯತಾ ವರದಿಗಳನ್ನು ಅಂತಿಮಗೊಳಿಸಲಾಗಿದೆ ಮತ್ತು ಬಿಹಾರದ ಕೋಸಿ-ಮೇಚಿ ಅಂತರ-ರಾಜ್ಯ ಜೋಡಣೆ ಯೋಜನೆ ಸೇರಿದಂತೆ 15 ಜೋಡಣೆ ಯೋಜನೆಗಳಿಗೆ ವಿವರವಾದ ಯೋಜನಾ ವರದಿಗಳನ್ನು ಸಿದ್ಧಪಡಿಸಲಾಗಿದೆ. ಈ ಅಧ್ಯಯನಗಳು ನದಿ ಪಾತ್ರಗಳ ನಡುವಿನ ನೀರು ವರ್ಗಾವಣೆ ಮತ್ತು ದೀರ್ಘಕಾಲೀನ ಜಲ ಭದ್ರತಾ ಯೋಜನೆಗೆ ಬೆಂಬಲ ನೀಡುತ್ತವೆ.
ಪ್ರವಾಹ ಮತ್ತು ಸವಕಳಿ ನಿರ್ವಹಣೆ (ಬ್ರಹ್ಮಪುತ್ರ ಮಂಡಳಿ)
- ಈಶಾನ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಸವಕಳಿ ವಿರೋಧಿ ಮತ್ತು ಪ್ರವಾಹ ನಿರ್ವಹಣಾ ಕಾಮಗಾರಿಗಳ ಅನುಷ್ಠಾನ.
- ಮಾಜುಲಿ ದ್ವೀಪ (ಅಸ್ಸಾಂ) ಮತ್ತು ಬ್ರಹ್ಮಪುತ್ರದ ಇತರ ಸವಕಳಿ ಪೀಡಿತ ಪ್ರದೇಶಗಳಂತಹ ನಿರ್ಣಾಯಕ ಸ್ಥಳಗಳಲ್ಲಿ ರಕ್ಷಣಾ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
- ಪ್ರವಾಹದ ಸಮಯದಲ್ಲಿ ಆಶ್ರಯ ನೀಡಲು ಎತ್ತರಿಸಿದ ವೇದಿಕೆಗಳ ನಿರ್ಮಾಣ.
- ನೀರು ನಿಲ್ಲುವ ಅಥವಾ ಒಳಚರಂಡಿ ದಟ್ಟಣೆ ಇರುವ ಪ್ರದೇಶಗಳಲ್ಲಿ ಒಳಚರಂಡಿ ಅಭಿವೃದ್ಧಿ ಯೋಜನೆಗಳ ಅನುಷ್ಠಾನ.

ಅಸ್ಸಾಂನ ಮಾಜುಲಿಯ ಸಲ್ಮಾರಾ ಬೆಸಮಾರಾ ವ್ಯಾಪ್ತಿಯಲ್ಲಿರುವ ಸ್ಪರ್ ಸಂಖ್ಯೆ 2.
ಸಮುದಾಯ ಆಧಾರಿತ ಹಸ್ತಕ್ಷೇಪಗಳು
- ಈಶಾನ್ಯದ ಗುಡ್ಡಗಾಡು ಪ್ರದೇಶಗಳಲ್ಲಿ ಸ್ಪ್ರಿಂಗ್ ಶೆಡ್ ನಿರ್ವಹಣೆ ಮತ್ತು ಜಲಮೂಲಗಳ ಅಭಿವೃದ್ಧಿ ಅನುಷ್ಠಾನ.
- ಗ್ರಾಮೀಣ ಮತ್ತು ಬುಡಕಟ್ಟು ಸಮುದಾಯಗಳಲ್ಲಿ ನೀರಿನ ಲಭ್ಯತೆ ಮತ್ತು ಸ್ಥಳೀಯ ಜಲ ನಿರ್ವಹಣಾ ಪದ್ಧತಿಗಳನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಉಪಕ್ರಮಗಳು, ಹಾಗೂ ಅತ್ಯುತ್ತಮ ಸ್ಥಳೀಯ ಪದ್ಧತಿಗಳನ್ನು ವೈಜ್ಞಾನಿಕ ಸುಧಾರಣೆಗಳೊಂದಿಗೆ ಜನಪ್ರಿಯಗೊಳಿಸುವುದು.
ತಾಂತ್ರಿಕ ಸಾಮರ್ಥ್ಯದ ಬಲವರ್ಧನೆ
- ಸಮೀಕ್ಷೆ ಮತ್ತು ಯೋಜನೆಯಲ್ಲಿ ಆಧುನಿಕ ತಂತ್ರಜ್ಞಾನಗಳ ಅಳವಡಿಕೆ, ಅಂದರೆ ಭೌಗೋಳಿಕ ಮಾಹಿತಿ ವ್ಯವಸ್ಥೆ (GIS) ಮತ್ತು ರಿಮೋಟ್ ಸೆನ್ಸಿಂಗ್, ಲಿಡಾರ್ ಮತ್ತು ಡ್ರೋನ್ ಆಧಾರಿತ ಸಮೀಕ್ಷೆಗಳು ಹಾಗೂ ಸುಧಾರಿತ ಜಲವಿಜ್ಞಾನದ ಮಾಡೆಲಿಂಗ್ ಉಪಕರಣಗಳ ಬಳಕೆ.
- ಡಿಪಿಆರ್ ತಯಾರಿಕೆ ಮತ್ತು ನದಿ ಪಾತ್ರದ ಅಧ್ಯಯನಗಳಲ್ಲಿ ನಿಖರತೆ ಮತ್ತು ದಕ್ಷತೆಯ ಸುಧಾರಣೆ.
ವಿಶೇಷ ವರ್ಗ ಮತ್ತು ಗಡಿ ರಾಜ್ಯಗಳಿಗೆ ಬೆಂಬಲ
- ಈಶಾನ್ಯ ರಾಜ್ಯಗಳು, ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಸಿಕ್ಕಿಂಗೆ ಕೇಂದ್ರೀಕೃತ ತಾಂತ್ರಿಕ ಮತ್ತು ಹಣಕಾಸಿನ ಬೆಂಬಲ ನೀಡಲಾಗಿದೆ.
- ಸಾಮರ್ಥ್ಯದ ಮಿತಿಗಳಿದ್ದಾಗ್ಯೂ ಈ ಪ್ರದೇಶಗಳು ಜಲಸಂಪನ್ಮೂಲ ಯೋಜನೆಯನ್ನು ಕೈಗೊಳ್ಳಲು ಸಾಧ್ಯವಾಗುವಂತೆ ಮಾಡಲಾಗಿದೆ.
ನಿರಂತರ ಫಲಿತಾಂಶಗಳ ಸ್ವರೂಪ
- ಈ ಯೋಜನೆಯು ನದಿ ಪಾತ್ರದ ಯೋಜನೆ, ಡಿಪಿಆರ್ ತಯಾರಿಕೆ ಮತ್ತು ಪ್ರವಾಹ ನಿರ್ವಹಣಾ ಕಾಮಗಾರಿಗಳಂತಹ ದೀರ್ಘಕಾಲೀನ ಚಟುವಟಿಕೆಗಳ ನಿರಂತರತೆಯನ್ನು ಯಶಸ್ವಿಯಾಗಿ ಕಾಯ್ದುಕೊಂಡಿದೆ.
- ರಾಜ್ಯಗಳು ಮತ್ತು ಕೇಂದ್ರ ಸಂಸ್ಥೆಗಳ ಮೂಲಕ ಅನುಷ್ಠಾನಗೊಳಿಸಲು ಭವಿಷ್ಯದ ಜಲಸಂಪನ್ಮೂಲ ಯೋಜನೆಗಳ ಸರಣಿಯನ್ನು ಸಿದ್ಧಪಡಿಸಲಾಗಿದೆ.
ಅಳೆಯಬಹುದಾದ ಫಲಿತಾಂಶಗಳು ಮತ್ತು ಅಭಿವೃದ್ಧಿಯ ಲಾಭಗಳು ನದಿ ಪಾತ್ರದ ನಿರ್ವಹಣಾ (ಆರ್ಬಿಎಂ) ಯೋಜನೆಯು ಪ್ರಮುಖ ನದಿ ಪಾತ್ರಗಳಲ್ಲಿ ಜಲಸಂಪನ್ಮೂಲ ಯೋಜನೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಅಳೆಯಬಹುದಾದ ಸುಧಾರಣೆಗಳಿಗೆ ಕಾರಣವಾಗಿದೆ. ಈ ಫಲಿತಾಂಶಗಳು ಸುಸ್ಥಿರ ಜಲ ನಿರ್ವಹಣೆ ಮತ್ತು ಪ್ರಾದೇಶಿಕ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಯೋಜನೆಯು ನೀಡಿದ ಕೊಡುಗೆಯನ್ನು ಪ್ರತಿಬಿಂಬಿಸುತ್ತವೆ.

ಉಪಸಂಹಾರ
ಭಾರತದ ನದಿ ವ್ಯವಸ್ಥೆಗಳನ್ನು ಸಮನ್ವಯದೊಂದಿಗೆ ಮತ್ತು ದೂರದೃಷ್ಟಿಯ ರೀತಿಯಲ್ಲಿ ನಿರ್ವಹಿಸುವ ಸಾಮರ್ಥ್ಯವನ್ನು ಬಲಪಡಿಸುವಲ್ಲಿ 'ನದಿ ಪಾತ್ರದ ನಿರ್ವಹಣಾ ಚೌಕಟ್ಟು' ಒಂದು ಪ್ರಮುಖ ಹೆಜ್ಜೆಯಾಗಿದೆ. ವೈಜ್ಞಾನಿಕ ಮೌಲ್ಯಮಾಪನಗಳು, ಮೂಲಸೌಕರ್ಯಗಳ ಸಿದ್ಧತೆ ಮತ್ತು ಸಾಂಸ್ಥಿಕ ಸಹಯೋಗವನ್ನು ಉತ್ತೇಜಿಸುವ ಮೂಲಕ, ಈ ಉಪಕ್ರಮವು ಆಯಕಟ್ಟಿನ ಪ್ರಮುಖ ಪ್ರದೇಶಗಳಲ್ಲಿ ಹೆಚ್ಚು ಚೇತೋಹಾರಿ ಜಲ ವ್ಯವಸ್ಥೆಗಳಿಗೆ ಅಡಿಪಾಯ ಹಾಕಿದೆ. ಹವಾಮಾನ ವೈಪರೀತ್ಯ, ಜನಸಂಖ್ಯೆಯ ಬೆಳವಣಿಗೆ ಮತ್ತು ವಿವಿಧ ವಲಯಗಳಲ್ಲಿ ನೀರಿನ ಹೆಚ್ಚುತ್ತಿರುವ ಬೇಡಿಕೆಯಂತಹ ಉದಯೋನ್ಮುಖ ಸವಾಲುಗಳನ್ನು ಎದುರಿಸುವಲ್ಲಿ ಇದರ ನಿರಂತರ ಅನುಷ್ಠಾನವು ಪ್ರಮುಖ ಪಾತ್ರ ವಹಿಸುತ್ತದೆ. ಅದೇ ಸಮಯದಲ್ಲಿ, ನಿರಂತರ ತಾಂತ್ರಿಕ ಬೆಂಬಲ ಮತ್ತು ಉದ್ದೇಶಿತ ಹೂಡಿಕೆಗಳು ಪ್ರವಾಹ ರಕ್ಷಣೆ, ನೀರಿನ ಸಂಗ್ರಹಣೆ ಮತ್ತು ಸಂಪನ್ಮೂಲ ಬಳಕೆಗಾಗಿ ಬಲವಾದ ವ್ಯವಸ್ಥೆಗಳನ್ನು ನಿರ್ಮಿಸಲು ದುರ್ಬಲ ಮತ್ತು ದೂರದ ಪ್ರದೇಶಗಳಿಗೆ ಸಹಾಯ ಮಾಡುತ್ತವೆ.
ದೀರ್ಘಾವಧಿಯಲ್ಲಿ, ನದಿ ಪಾತ್ರದ ನಿರ್ವಹಣೆಯ ಯಶಸ್ಸು ಕೇವಲ ಭೌತಿಕ ಮೂಲಸೌಕರ್ಯಗಳ ಮೇಲೆ ಮಾತ್ರವಲ್ಲದೆ, ಸಂಸ್ಥೆಗಳ ನಡುವಿನ ನಿರಂತರ ಸಮನ್ವಯ, ಆಧುನಿಕ ತಂತ್ರಜ್ಞಾನಗಳ ಅಳವಡಿಕೆ ಮತ್ತು ಸಮುದಾಯದ ಭಾಗವಹಿಸುವಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ಈ ಎಲ್ಲಾ ಪ್ರಯತ್ನಗಳು ಒಟ್ಟಾಗಿ ದೇಶದಾದ್ಯಂತ ಸುಧಾರಿತ ಜಲ ಭದ್ರತೆ, ಹೆಚ್ಚಿನ ಪ್ರಾದೇಶಿಕ ಸ್ಥಿರತೆ ಮತ್ತು ಸಮತೋಲಿತ ಸಾಮಾಜಿಕ-ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುತ್ತವೆ.
References
Ministry of Jal Shakti
See In PDF
*****
(Explainer ID: 158238)
आगंतुक पटल : 15
Provide suggestions / comments