Farmer's Welfare
ಕೃಷಿಯಲ್ಲಿ ಚಕ್ರೀಯ ಆರ್ಥಿಕತೆ: ತ್ಯಾಜ್ಯದಿಂದ ಸಂಪತ್ತು
Posted On:
17 FEB 2026 10:19AM
|
ಪ್ರಮುಖ ಅಂಶಗಳು
- ಭಾರತದ ಕೃಷಿ ತ್ಯಾಜ್ಯಗಳು ವಾರ್ಷಿಕವಾಗಿ 18,000 MW ಗಿಂತಲೂ ಹೆಚ್ಚು ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ.
- ಬೆಳೆ ತ್ಯಾಜ್ಯ ನಿರ್ವಹಣಾ ಉಪಕ್ರಮಗಳ ಅಡಿಯಲ್ಲಿ, ಸರ್ಕಾರವು 2018-19 ರಿಂದ 2025-26ರ ನಡುವೆ ₹3,926 ಕೋಟಿ ಆರ್ಥಿಕ ನೆರವು ನೀಡಿದೆ.
- ಇದರ ಜೊತೆಗೆ, ಸುಸ್ಥಿರ ತ್ಯಾಜ್ಯ ನಿರ್ವಹಣೆಯನ್ನು ಉತ್ತೇಜಿಸಲು 42,000 ಕ್ಕೂ ಹೆಚ್ಚು ಕಸ್ಟಮ್ ಹೈರಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಮತ್ತು 3.24 ಲಕ್ಷ ಯಂತ್ರಗಳನ್ನು ನಿಯೋಜಿಸಲಾಗಿದೆ.
- ಗೋಬರ್-ಧನ್ ಯೋಜನೆಯಡಿ, 14 ಜನವರಿ 2026 ರ ಹೊತ್ತಿಗೆ ದೇಶದ ಶೇ. 51.4 ರಷ್ಟು ಜಿಲ್ಲೆಗಳಲ್ಲಿ 979 ಬಯೋಗ್ಯಾಸ್ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಇವು ಸಗಣಿ, ಬೆಳೆ ತ್ಯಾಜ್ಯ ಮತ್ತು ಆಹಾರದ ತ್ಯಾಜ್ಯವನ್ನು ಶುದ್ಧ ಇಂಧನ ಹಾಗೂ ಸಾವಯವ ಗೊಬ್ಬರವಾಗಿ ಪರಿವರ್ತಿಸುತ್ತಿವೆ.
- ಚಕ್ರೀಯ ಕೃಷಿಯು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್ಡಿಜಿs) ಬೆಂಬಲಿಸುತ್ತದೆ. ವಿಶೇಷವಾಗಿ 2022 ರಲ್ಲಿ ಜಾಗತಿಕವಾಗಿ ಉತ್ಪತ್ತಿಯಾದ 1.05 ಬಿಲಿಯನ್ ಟನ್ ಆಹಾರದ ತ್ಯಾಜ್ಯದ ಸಮಸ್ಯೆಯನ್ನು ಇದು ಎದುರಿಸುತ್ತದೆ (ಇದರಲ್ಲಿ ಶೇ. 60 ರಷ್ಟು ಮನೆಗಳಿಂದಲೇ ಉತ್ಪತ್ತಿಯಾದದ್ದಾಗಿದೆ).
|
ಪೀಠಿಕೆ

ತ್ಯಾಜ್ಯ ಉತ್ಪಾದನೆಯು ಬೆಳೆಯುತ್ತಿರುವ ಪ್ರಮಾಣವು ಆರ್ಥಿಕ ಪರಿಣಾಮಗಳೊಂದಿಗೆ ಒಂದು ಗಂಭೀರ ಪರಿಸರ ಸವಾಲಾಗಿ ಹೊರಹೊಮ್ಮಿದೆ. ಭಾರತದಲ್ಲಿ, ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಯನ್ನು ಖಾತ್ರಿಪಡಿಸುವಲ್ಲಿ ಕೃಷಿಯು ಪ್ರಮುಖ ಪಾತ್ರ ವಹಿಸುತ್ತದೆಯಾದರೂ, ಇದು ಕೃಷಿ ಚಟುವಟಿಕೆ, ಕೊಯ್ಲು ಮತ್ತು ಸಂಸ್ಕರಣೆಯ ಸಮಯದಲ್ಲಿ ಗಮನಾರ್ಹ ಪ್ರಮಾಣದ ತ್ಯಾಜ್ಯವನ್ನು ಉತ್ಪಾದಿಸುತ್ತದೆ. ಕೃಷಿ ತ್ಯಾಜ್ಯದ ಅಸಮರ್ಪಕ ನಿರ್ವಹಣೆಯು ಗಾಳಿ, ಮಣ್ಣು ಮತ್ತು ನೀರನ್ನು ಕಲುಷಿತಗೊಳಿಸುವ ಪರಿಸರ ಮಾಲಿನ್ಯದ ದೊಡ್ಡ ಮೂಲವಾಗಿದೆ. ದೇಶದಲ್ಲಿ ವಾರ್ಷಿಕವಾಗಿ ಅಂದಾಜು 350 ಮಿಲಿಯನ್ ಟನ್ ಕೃಷಿ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ, ಇದು ಬೆಳೆಗಳ ಉಳಿಕೆಗಳು, ಹೊಟ್ಟು, ಹುಲ್ಲು ಮತ್ತು ಆಹಾರ ಸಂಸ್ಕರಣಾ ಚಟುವಟಿಕೆಗಳ ಉಪ-ಉತ್ಪನ್ನಗಳನ್ನು ಒಳಗೊಂಡಿದೆ. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಪ್ರಕಾರ, ಭಾರತದ ಕೃಷಿ ತ್ಯಾಜ್ಯಗಳು ವಾರ್ಷಿಕವಾಗಿ 18,000 MW ಗಿಂತಲೂ ಹೆಚ್ಚು ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ. ಇಂಧನ ಉತ್ಪಾದನೆಯ ಜೊತೆಗೆ, ಈ ಉಳಿಕೆಗಳನ್ನು ಪೋಷಕಾಂಶ ಭರಿತ ಸಾವಯವ ಗೊಬ್ಬರಗಳನ್ನು ತಯಾರಿಸಲು ಬಳಸಬಹುದು. ಇಂತಹ ಗೊಬ್ಬರಗಳು ಮಣ್ಣಿನ ಆರೋಗ್ಯವನ್ನು ಸುಧಾರಿಸಲು ಮತ್ತು ಕೃಷಿಯಲ್ಲಿ ರಾಸಾಯನಿಕಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಇದಲ್ಲದೆ, ಜಾಗತಿಕವಾಗಿ ಮಾನವ ಬಳಕೆಗಾಗಿ ಉತ್ಪಾದಿಸುವ ಅಂದಾಜು 1.3 ಬಿಲಿಯನ್ ಟನ್ ಆಹಾರವು ವಾರ್ಷಿಕವಾಗಿ ವ್ಯರ್ಥವಾಗುತ್ತಿದೆ. ಅಷ್ಟೇ ಅಲ್ಲದೆ, ಮುನ್ಸಿಪಲ್ ಘನತ್ಯಾಜ್ಯದ ಒಟ್ಟು ಪ್ರಮಾಣದ ಮೂರನೇ ಒಂದು ಭಾಗದಷ್ಟು ಜೈವಿಕವಾಗಿ ವಿಘಟನೀಯ ತ್ಯಾಜ್ಯವು ಮನೆಗಳ ಅಡುಗೆಮನೆಯಲ್ಲೇ ಉತ್ಪತ್ತಿಯಾಗುತ್ತದೆ. ಆಹಾರದ ತ್ಯಾಜ್ಯ, ಕೃಷಿ ತ್ಯಾಜ್ಯ ಮತ್ತು ಇತರ ಜೈವಿಕ ವಿಘಟನೀಯ ತ್ಯಾಜ್ಯಗಳನ್ನು ಸರಿಯಾಗಿ ನಿರ್ವಹಿಸದಿದ್ದಾಗ, ಅವು ಕಸದ ಗುಪ್ಪೆಗಳಲ್ಲಿ ಕೊಳೆತು ಮೀಥೇನ್ ಮತ್ತು ಇತರ ಹಸಿರುಮನೆ ಅನಿಲಗಳನ್ನು ಬಿಡುಗಡೆ ಮಾಡುತ್ತವೆ. ಇದು ವಾಯು ಮತ್ತು ಅಂತರ್ಜಲ ಮಾಲಿನ್ಯಕ್ಕೆ ಕಾರಣವಾಗುತ್ತದೆ, ಕೆಟ್ಟ ವಾಸನೆಯನ್ನು ಹರಡುತ್ತದೆ ಮತ್ತು ಪರಿಸರ ನಾಶವನ್ನು ವೇಗಗೊಳಿಸುತ್ತದೆ, ಆ ಮೂಲಕ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತೀವ್ರಗೊಳಿಸುತ್ತದೆ. ಆದ್ದರಿಂದ, ಭೂಬಳಕೆ, ಸಂಪನ್ಮೂಲಗಳ ಸದ್ಬಳಕೆ ಮತ್ತು ಸುಸ್ಥಿರ ತ್ಯಾಜ್ಯ ನಿರ್ವಹಣಾ ಪರಿಹಾರಗಳು ಪರಿಸರ ಕಾಳಜಿಯ ಜೊತೆಗೆ ಆರ್ಥಿಕ ಅನಿವಾರ್ಯತೆಗಳೂ ಆಗಿವೆ.
ಬೆಳವಣಿಗೆ ಮತ್ತು ಸುಸ್ಥಿರತೆಯನ್ನು ಸಮತೋಲನಗೊಳಿಸಲು ಚಕ್ರೀಯ ಆರ್ಥಿಕತೆಯನ್ನು ನಿರ್ಮಿಸುವುದು

"ತ್ಯಾಜ್ಯದಿಂದ ಸಂಪತ್ತು" ಎಂಬ ವಿಧಾನವನ್ನು ಅಳವಡಿಸಿಕೊಳ್ಳುವ ಪ್ರಾಮುಖ್ಯತೆಯು, ತ್ಯಾಜ್ಯವನ್ನು ಆರ್ಥಿಕ ಹೊರೆ ಮತ್ತು ಪರಿಸರ ಸಮಸ್ಯೆಯಾಗಿ ನೋಡುವ ಬದಲು ಅದನ್ನು ಒಂದು ಮೌಲ್ಯಯುತ ಸಂಪನ್ಮೂಲವಾಗಿ ಮರುಕಲ್ಪಿಸಿಕೊಳ್ಳುವುದರಲ್ಲಿದೆ. ಇದು ಆರ್ಥಿಕತೆಯೊಳಗಿನ ವಸ್ತುಗಳ ಹರಿವಿನ ಬಗ್ಗೆ ಪುನರ್ವಿಮರ್ಶೆಯನ್ನು ಮಾಡುವುದನ್ನು ಅನಿವಾರ್ಯವಾಗಿಸುತ್ತದೆ, ಜೊತೆಗೆ ಮೌಲ್ಯದ ಮರುಪಡೆಯುವಿಕೆ, ಮರುಬಳಕೆ ಮತ್ತು ಮರುಸಂಯೋಜನೆಯನ್ನು ಹೇಳುತ್ತದೆ. ಉತ್ಪನ್ನಗಳು ಮತ್ತು ಪ್ರಕ್ರಿಯೆಗಳ ಸಂಪೂರ್ಣ ಜೀವನಚಕ್ರದಲ್ಲಿ ಸಂಪನ್ಮೂಲದ ದಕ್ಷತೆಯನ್ನು ಹೆಚ್ಚಿಸಲು 'ಚಕ್ರೀಯ ಆರ್ಥಿಕತೆ' ಅತ್ಯಂತ ಸಮಗ್ರ ಮತ್ತು ವಿಸ್ತರಿಸಬಹುದಾದ ವಿಧಾನವಾಗಿ ಹೊರಹೊಮ್ಮಿದೆ.
ಚಕ್ರೀಯತೆಯ ತಿರುಳು ಉತ್ಪಾದನೆ ಮತ್ತು ಬಳಕೆಯ ಮಾದರಿಗಳಲ್ಲಿ ವ್ಯವಸ್ಥಿತ ರೂಪಾಂತರವನ್ನು ಪ್ರತಿನಿಧಿಸುತ್ತದೆ. ಇದು ಪ್ರತಿ ಹಂತದಲ್ಲಿ ತ್ಯಾಜ್ಯವನ್ನು ಇಲ್ಲವಾಗಿಸುವ ಜೊತೆಗೆ ಕಚ್ಚಾ ವಸ್ತುಗಳು, ನೀರು ಮತ್ತು ಶಕ್ತಿಯ ಬಳಕೆಯನ್ನು ಕನಿಷ್ಠಗೊಳಿಸುವ ಗುರಿಯನ್ನು ಹೊಂದಿದೆ. ಈ ವಿಧಾನವು ಆರು 'R' (6 Rs) ತತ್ವಗಳಿಂದ ಮಾರ್ಗದರ್ಶಿಸಲ್ಪಟ್ಟಿದೆ - ಕಡಿಮೆ ಮಾಡುವುದು, ಮರುಬಳಕೆ, ಮರುಚಕ್ರಗೊಳಿಸುವುದು, ನವೀಕರಿಸುವುದು, ಮರುಪಡೆಯುವುದು ಮತ್ತು ದುರಸ್ತಿ ಮಾಡುವುದು. ಇದು ವಸ್ತುಗಳು ದೀರ್ಘಕಾಲದವರೆಗೆ ಉತ್ಪಾದಕ ಬಳಕೆಯಲ್ಲಿ ಉಳಿಯುವುದನ್ನು ಖಚಿತಪಡಿಸುತ್ತದೆ. ಈ ಮಾದರಿಯ ಒಂದು ವಿಶಿಷ್ಟ ಲಕ್ಷಣವೆಂದರೆ "ನೈಜ ಮರುಚಕ್ರಗೊಳಿಸುವಿಕೆ". ಇದರಲ್ಲಿ ತ್ಯಾಜ್ಯವನ್ನು ಅದರ ಗುಣಮಟ್ಟಕ್ಕೆ ಧಕ್ಕೆಯಾಗದಂತೆ ಅದರ ಮೂಲ ರೂಪಕ್ಕೆ ಮರಳಿ ಪರಿವರ್ತಿಸಲಾಗುತ್ತದೆ, ಇದು ಹೆಚ್ಚಿನ ಮೌಲ್ಯದ ಮರುಪಡೆಯುವಿಕೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು 'ಡೌನ್ಸೈಕ್ಲಿಂಗ್' (ಗುಣಮಟ್ಟ ಕುಸಿಯುವಿಕೆ) ನಿಂದಾಗುವ ನಷ್ಟವನ್ನು ತಪ್ಪಿಸುತ್ತದೆ.
|
ಚಕ್ರೀಯ ಆರ್ಥಿಕತೆಯ ತತ್ವಗಳು ಭಾರತದ ಆರ್ಥಿಕ ಚಟುವಟಿಕೆ ಮತ್ತು ಪರಿಸರ ಸುಸ್ಥಿರತೆಯ ನಡುವೆ ಸಮತೋಲನ ಸಾಧಿಸಲು ನೆರವಾಗುವ ಒಂದು ಪ್ರಾಯೋಗಿಕ ಹಾಗೂ ದೂರದೃಷ್ಟಿಯ ಪರಿಹಾರವನ್ನು ನೀಡುತ್ತವೆ. 2050ರ ಹೊತ್ತಿಗೆ, ಭಾರತದ ಚಕ್ರೀಯ ಆರ್ಥಿಕತೆಯ ಮಾರುಕಟ್ಟೆ ಮೌಲ್ಯವು 2 ಟ್ರಿಲಿಯನ್ ಡಾಲರ್ ತಲುಪುವ ಮತ್ತು 10 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.
ಈ ಸಾಮರ್ಥ್ಯವನ್ನು ಸಾಕಾರಗೊಳಿಸಲು, ಪ್ರಕೃತಿಯ ದಕ್ಷ ಮತ್ತು ಪುನರುತ್ಪಾದಕ ಮರುಚಕ್ರ ಪ್ರಕ್ರಿಯೆಗಳಿಂದ ಸ್ಫೂರ್ತಿ ಪಡೆದು, ಆರ್ಥಿಕ ವಿಸ್ತರಣೆಯನ್ನು ಪರಿಸರ ಸಂರಕ್ಷಣೆಯೊಂದಿಗೆ ಸಂಯೋಜಿಸುವ ಅಗತ್ಯವಿದೆ. ಇಂತಹ ವ್ಯವಸ್ಥೆಗಳು ಸಂಪನ್ಮೂಲಗಳ ಗರಿಷ್ಠ ಬಳಕೆ ಮತ್ತು ಕನಿಷ್ಠ ತ್ಯಾಜ್ಯಕ್ಕೆ ಮಾದರಿಯಾಗಿದ್ದು, ಆ ಮೂಲಕ ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ಮಾರ್ಗವನ್ನು ಒದಗಿಸುತ್ತವೆ.
|
ಉತ್ಪಾದನೆಯಿಂದ ಬಳಕೆಯವರೆಗೆ ಕೃಷಿ ತ್ಯಾಜ್ಯವನ್ನು ಅರ್ಥಮಾಡಿಕೊಳ್ಳುವುದು
ಕೃಷಿ ತ್ಯಾಜ್ಯವು ಹೊಲದಿಂದ ಊಟದ ತಟ್ಟೆಯವರೆಗಿನ ಪ್ರಯಾಣದ ಉದ್ದಕ್ಕೂ ಉತ್ಪತ್ತಿಯಾಗುತ್ತದೆ. ಇದು ಬೆಳೆಗಳ ಉಳಿಕೆಗಳು, ಪ್ರಾಣಿಗಳ ಸಗಣಿ/ಗೊಬ್ಬರ, ಸಂಸ್ಕರಣಾ ಉಪ-ಉತ್ಪನ್ನಗಳು ಮತ್ತು ಬೆಳೆ ಬೆಳೆಯುವಾಗ, ಜಾನುವಾರು ಸಾಕಣೆ, ಕೊಯ್ಲಿನ ನಂತರದ ನಿರ್ವಹಣೆ ಹಾಗೂ ಧಾನ್ಯಗಳು, ಹಣ್ಣುಗಳು, ತರಕಾರಿಗಳು, ಕಬ್ಬು, ಎಣ್ಣೆಕಾಳುಗಳು ಮತ್ತು ಡೈರಿ ಉತ್ಪನ್ನಗಳ ಸಂಸ್ಕರಣೆಯ ಸಮಯದಲ್ಲಿ ಉತ್ಪತ್ತಿಯಾಗುವ ದ್ರವ ತ್ಯಾಜ್ಯಗಳನ್ನು ಒಳಗೊಂಡಿದೆ.

ಬೆಳೆ ಉಳಿಕೆಗಳು / ಕುಳೆ: ಕೃಷಿ ತ್ಯಾಜ್ಯದ ಚಕ್ರವು ಕೊಯ್ಲಿನ ನಂತರದ ಹಂತದಲ್ಲಿ ಪ್ರಾರಂಭವಾಗುತ್ತದೆ, ಅಂದರೆ ಬೆಳೆಗಳ ಕೊಯ್ಲಾದ ಮೇಲೆ ಕಾಂಡಗಳು, ಹುಲ್ಲು ಮತ್ತು ಕುಳೆಗಳು ಹೊಲದಲ್ಲಿ ಉಳಿಯುತ್ತವೆ. ಈ ಜೈವಿಕ ರಾಶಿಯ ಗಮನಾರ್ಹ ಭಾಗವನ್ನು ದನಗಳ ಮೇವು, ಕಾಂಪೋಸ್ಟ್ ಗೊಬ್ಬರ, ಜೈವಿಕ ಅನಿಲ, ಮಲ್ಚಿಂಗ್ ಅಥವಾ ಇಂಧನವಾಗಿ ಉತ್ಪಾದಕ ರೀತಿಯಲ್ಲಿ ಬಳಸಲಾಗುತ್ತದೆ. ಆದಾಗ್ಯೂ, ಮುಂದಿನ ಬೆಳೆ ಬಿತ್ತನೆಗಾಗಿ ಭೂಮಿಯನ್ನು ತ್ವರಿತವಾಗಿ ಸಿದ್ಧಪಡಿಸುವ ಉದ್ದೇಶದಿಂದ ಇಂದಿಗೂ ಗಣನೀಯ ಪ್ರಮಾಣದ ಉಳಿಕೆಗಳನ್ನು ಹೊಲದಲ್ಲಿಯೇ ಸುಡಲಾಗುತ್ತದೆ. ಹೀಗೆ ಬೆಳೆ ಉಳಿಕೆಗಳನ್ನು ಸುಡುವುದರಿಂದ ಮಣ್ಣಿನ ಪೋಷಕಾಂಶಗಳು ನಾಶವಾಗುತ್ತವೆ, ಮಣ್ಣಿನ ಆರೋಗ್ಯವು ಕ್ಷೀಣಿಸುತ್ತದೆ ಮತ್ತು ಹಸಿರುಮನೆ ಅನಿಲಗಳ ಬಿಡುಗಡೆಗೆ ಕಾರಣವಾಗುತ್ತದೆ.
|
ಬಯೋಮಾಸ್ ಎಂದರೇನು?
ಬಯೋಮಾಸ್ ಎನ್ನುವುದು ಜೀವಂತ ಅಥವಾ ಇತ್ತೀಚೆಗೆ ಜೀವಂತವಾಗಿದ್ದ ಸಸ್ಯಗಳು ಮತ್ತು ಪ್ರಾಣಿಗಳಿಂದ ಪಡೆದ ಸಾವಯವ ವಸ್ತುಗಳನ್ನು ಸೂಚಿಸುತ್ತದೆ. ಇದನ್ನು ಇಂಧನ, ವಿವಿಧ ವಸ್ತುಗಳು ಅಥವಾ ಪೋಷಕಾಂಶಗಳ ಮೂಲವಾಗಿ ಬಳಸಬಹುದು.
|
ಪ್ರಾಣಿಜನ್ಯ ತ್ಯಾಜ್ಯಗಳು, ಉಪ-ಉತ್ಪನ್ನಗಳು ಮತ್ತು ಮೃತದೇಹಗಳು: ಪಶುಸಂಗೋಪನೆಯು ಕೃಷಿ ತ್ಯಾಜ್ಯದ ಪ್ರಮುಖ ಮೂಲವಾಗಿದೆ, ವಿಶೇಷವಾಗಿ ಭಾರತದಲ್ಲಿ ದೊಡ್ಡ ಪ್ರಮಾಣದ ಪ್ರಾಣಿ ಸಂಪತ್ತು ಇರುವುದರಿಂದ ಅಪಾರ ಪ್ರಮಾಣದ ಸಗಣಿ ಮತ್ತು ಹಾಸಿಗೆ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಸಾಂಕ್ರಾಮಿಕ ರೋಗಗಳು ಹರಡಿದ ಸಂದರ್ಭದಲ್ಲಿ, ಸೋಂಕು ಮತ್ತು ಪ್ರಾಣಿಜನ್ಯ ರೋಗಗಳ ಹರಡುವಿಕೆಯನ್ನು ತಡೆಯಲು ಪ್ರಾಣಿಗಳ ಮೃತದೇಹಗಳನ್ನು ಸುರಕ್ಷಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ವಿಲೇವಾರಿ ಮಾಡುವುದು ಅತ್ಯಗತ್ಯ. ಆದ್ದರಿಂದ, ಮೃತದೇಹಗಳ ಸರಿಯಾದ ನಿರ್ವಹಣೆಯು ಪರಿಸರಕ್ಕೆ ಪೂರಕವಾದ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಸುರಕ್ಷಿತವಾದ ವಿಲೇವಾರಿ ಪದ್ಧತಿಗಳನ್ನು ಖಚಿತಪಡಿಸಿಕೊಳ್ಳಲು ಮೂಲಸೌಕರ್ಯ, ಹಣಕಾಸು ಮತ್ತು ತಾಂತ್ರಿಕ ಸಾಮರ್ಥ್ಯವನ್ನು ವಿಸ್ತರಿಸುವ ಪ್ರಾಮುಖ್ಯತೆಯನ್ನು ಹೇಳುತ್ತದೆ.
ಕೊಯ್ಲಿನ ನಂತರದ ನಷ್ಟಗಳು: ಕೊಯ್ಲಿನ ನಂತರದ ನಷ್ಟಗಳು ಎಂದರೆ ಉತ್ಪನ್ನದ ಪ್ರಮಾಣ ಮತ್ತು ಗುಣಮಟ್ಟ ಎರಡರಲ್ಲೂ ಕಂಡುಬರುವ ಅಳೆಯಬಹುದಾದ ಇಳಿಕೆಗಳು. ಈ ನಷ್ಟಗಳು ಕೊಯ್ಲಿನ ನಂತರದ ವ್ಯವಸ್ಥೆಯ ಯಾವುದೇ ಹಂತದಲ್ಲಿ ಸಂಭವಿಸಬಹುದು. ಆಹಾರದ ನಷ್ಟವು ತೂಕ ಅಥವಾ ಪ್ರಮಾಣದಲ್ಲಿನ ಇಳಿಕೆಯಂತಹ ಪರಿಮಾಣಾತ್ಮಕವಾಗಿರಬಹುದು ಅಥವಾ ಪೋಷಕಾಂಶಗಳ ನಷ್ಟ ಮತ್ತು ರುಚಿ, ಬಣ್ಣ, ವಿನ್ಯಾಸ ಅಥವಾ ನೋಟದಲ್ಲಿನ ಅನಪೇಕ್ಷಿತ ಬದಲಾವಣೆಗಳಂತಹ ಗುಣಾತ್ಮಕವಾಗಿರಬಹುದು. ಕೊಯ್ಲಿನ ನಂತರದ ಪೂರೈಕೆ ಸರಪಳಿಯ ಉತ್ತಮ ನಿರ್ವಹಣೆಯು ತ್ಯಾಜ್ಯವನ್ನು ಕಡಿಮೆ ಮಾಡುತ್ತದೆ, ನೈಜ ಬಳಕೆಯನ್ನು ಹೆಚ್ಚಿಸುತ್ತದೆ ಮತ್ತು ಆರ್ಥಿಕತೆಯಾದ್ಯಂತ ಆದಾಯವನ್ನು ವೃದ್ಧಿಸುತ್ತದೆ.
ಆಹಾರದ ತ್ಯಾಜ್ಯ: ಆಹಾರದ ತ್ಯಾಜ್ಯವು ಮಾರುಕಟ್ಟೆಗಳು, ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು ಮನೆಗಳಂತಹ ಮೌಲ್ಯ ಸರಪಳಿಯ ನಂತರದ ಹಂತಗಳಲ್ಲಿ ಸಂಭವಿಸುತ್ತದೆ, ಅಲ್ಲಿ ತಿನ್ನಲು ಯೋಗ್ಯವಾದ ಆಹಾರವನ್ನು ಎಸೆಯಲಾಗುತ್ತದೆ. ಇಂತಹ ವ್ಯರ್ಥವು ಹಸಿರುಮನೆ ಅನಿಲ ಹೊರಸೂಸುವಿಕೆಗೆ ಗಮನಾರ್ಹ ಕೊಡುಗೆ ನೀಡುತ್ತದೆ. ಆದಾಗ್ಯೂ, ಉದಯೋನ್ಮುಖ ತಂತ್ರಜ್ಞಾನಗಳು ಆಹಾರದ ತ್ಯಾಜ್ಯವನ್ನು 'ಇಂಜಿನಿಯರ್ಡ್ ಬಯೋಚಾರ್' ನಂತಹ ಮೌಲ್ಯವರ್ಧಿತ ಉತ್ಪನ್ನಗಳಾಗಿ ಪರಿವರ್ತಿಸುತ್ತಿವೆ. ಇದು ಇಂಗಾಲವನ್ನು ಹೀರಿಕೊಳ್ಳುವ, ಮಣ್ಣಿನ ಆರೋಗ್ಯವನ್ನು ಸುಧಾರಿಸುವ ಮತ್ತು ಪರಿಸರದ ಕಲುಷಿತ ಅಂಶಗಳನ್ನು ತೆಗೆದುಹಾಕುವ ಸಾಮರ್ಥ್ಯವನ್ನು ಹೊಂದಿದೆ. ತ್ಯಾಜ್ಯವನ್ನು ಸಂಪನ್ಮೂಲವನ್ನಾಗಿ ಪರಿವರ್ತಿಸುವ ಮೂಲಕ, ಆಹಾರ ತ್ಯಾಜ್ಯ ನಿರ್ವಹಣೆಯು ಕೃಷಿ ಮತ್ತು ಆಹಾರ ವ್ಯವಸ್ಥೆಗಳಲ್ಲಿ ಚಕ್ರೀಯತೆಯ ಪ್ರಮುಖ ಆಧಾರಸ್ತಂಭವಾಗಿ ವಿಕಸನಗೊಳ್ಳುತ್ತಿದೆ.
|
ಬಯೋಚಾರ್ ಮತ್ತು ಇಂಜಿನಿಯರ್ಡ್ ಬಯೋಚಾರ್ ಎಂದರೇನು?
ಬಯೋಚಾರ್: ಇದು ಇಂಗಾಲದ ಅಂಶವು ಹೆಚ್ಚಾಗಿರುವ ಒಂದು ವಸ್ತುವಾಗಿದೆ. ಕಡಿಮೆ ಆಮ್ಲಜನಕವಿರುವ ಪರಿಸ್ಥಿತಿಯಲ್ಲಿ ಕೃಷಿ ತ್ಯಾಜ್ಯ ಅಥವಾ ಮರದ ಉಳಿಕೆಗಳಂತಹ ಜೈವಿಕ ರಾಶಿಯನ್ನು ಹೆಚ್ಚಿನ ಶಾಖದಲ್ಲಿ ಕಾಯಿಸುವ ಮೂಲಕ ಇದನ್ನು ತಯಾರಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು 'ಪೈರೋಲಿಸಿಸ್' ಎಂದು ಕರೆಯಲಾಗುತ್ತದೆ.
|
ಕೃಷಿಯಲ್ಲಿ ಚಕ್ರೀಯತೆಯನ್ನು ಉತ್ತೇಜಿಸುತ್ತಿರುವ ಸರ್ಕಾರದ ಉಪಕ್ರಮಗಳು
ತ್ಯಾಜ್ಯವನ್ನು ಮೌಲ್ಯಯುತ ಸಂಪನ್ಮೂಲಗಳನ್ನಾಗಿ ಪರಿವರ್ತಿಸುವ ಮೂಲಕ ಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿ ಚಕ್ರೀಯತೆಯನ್ನು ಉತ್ತೇಜಿಸಲು ಸರ್ಕಾರವು ವಿವಿಧ ನೀತಿಗಳನ್ನು ಜಾರಿಗೆ ತರುತ್ತಿದೆ. ಗಾಲ್ವನೈಸಿಂಗ್ ಆರ್ಗ್ಯಾನಿಕ್ ಬಯೋ-ಆಗ್ರೋ ರಿಸೋರ್ಸಸ್ ಧನ್ ಮತ್ತು ಬೆಳೆ ಉಳಿಕೆ ನಿರ್ವಹಣೆ ಅಂತಹ ಉಪಕ್ರಮಗಳು ಕೃಷಿ, ಪ್ರಾಣಿಜನ್ಯ ಮತ್ತು ಆಹಾರದ ತ್ಯಾಜ್ಯವನ್ನು ಸಾವಯವ ಗೊಬ್ಬರವಾಗಿ ಮಾರ್ಪಡಿಸುತ್ತಿವೆ.

ಈ ಯೋಜನೆಗಳಿಗೆ ಪೂರಕವಾಗಿ, ಕೃಷಿ ಮೂಲಸೌಕರ್ಯ ನಿಧಿ (ಎಐಎಫ್) ಮತ್ತು ಪಶುಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿ ಕೃಷಿ ತ್ಯಾಜ್ಯವನ್ನು ಮೌಲ್ಯಯುತವಾಗಿ ಪರಿವರ್ತಿಸುವ ಮೂಲಸೌಕರ್ಯಗಳ ಅಭಿವೃದ್ಧಿಗೆ ಬೆಂಬಲ ನೀಡುತ್ತವೆ. ಹೆಚ್ಚುವರಿಯಾಗಿ, ಜಲಶಕ್ತಿ ಅಭಿಯಾನವು ಗೃಹಬಳಕೆಯ ಮತ್ತು ಕೈಗಾರಿಕಾ ತ್ಯಾಜ್ಯನೀರನ್ನು ಕೃಷಿ, ಭೂದೃಶ್ಯ ಮತ್ತು ತೋಟಗಾರಿಕೆ ಸೇರಿದಂತೆ ಕುಡಿಯಲು ಯೋಗ್ಯವಲ್ಲದ ಉದ್ದೇಶಗಳಿಗಾಗಿ ಮರುಬಳಕೆ ಮಾಡಲು ಪ್ರೋತ್ಸಾಹಿಸುತ್ತದೆ. ಈ ಎಲ್ಲಾ ಉಪಕ್ರಮಗಳು ಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿ ಸಂಪನ್ಮೂಲಗಳ ಮರುಪಡೆಯುವಿಕೆ, ಮರುಬಳಕೆ ಮತ್ತು ಮೌಲ್ಯವರ್ಧನೆಯನ್ನು ಉತ್ತೇಜಿಸುವ ಮೂಲಕ 'ತ್ಯಾಜ್ಯದಿಂದ ಸಂಪತ್ತು' ಎಂಬ ವಿಧಾನದತ್ತ ಕಾರ್ಯನಿರ್ವಹಿಸುತ್ತಿವೆ.
ಬೆಳೆ ಉಳಿಕೆಗಳು ಮತ್ತು ಜೈವಿಕ ರಾಶಿಯನ್ನು ಸಂಪನ್ಮೂಲಗಳಾಗಿ ಪರಿವರ್ತಿಸುವುದು
ಗಾಲ್ವನೈಸಿಂಗ್ ಆರ್ಗ್ಯಾನಿಕ್ ಬಯೋ-ಆಗ್ರೋ ರಿಸೋರ್ಸಸ್ ಧನ್: ಈ ಯೋಜನೆಯು ಜಾನುವಾರುಗಳ ಸಗಣಿ, ಬೆಳೆ ಉಳಿಕೆಗಳು ಮತ್ತು ಆಹಾರದ ತ್ಯಾಜ್ಯವನ್ನು ಸಂಕುಚಿತ ಜೈವಿಕ ಅನಿಲ ಮತ್ತು ಸಾವಯವ ಗೊಬ್ಬರವಾಗಿ ಪರಿವರ್ತಿಸಲು ವಿವಿಧ ಸಚಿವಾಲಯಗಳನ್ನು ಒಟ್ಟುಗೂಡಿಸುತ್ತದೆ. ಪಾರದರ್ಶಕತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸರ್ಕಾರವು 2023 ರಲ್ಲಿ ಏಕೀಕೃತ ಗೋಬರ್-ಧನ್ ಪೋರ್ಟಲ್ ಅನ್ನು ಪ್ರಾರಂಭಿಸಿತು. 14 ಜನವರಿ 2026 ರ ಹೊತ್ತಿಗೆ, ಈ ಯೋಜನೆಯು ಭಾರತದ ಶೇ. 51.4 ರಷ್ಟು ಜಿಲ್ಲೆಗಳನ್ನು ಒಳಗೊಂಡಿದೆ ಮತ್ತು 979 ಕಾರ್ಯನಿರ್ವಹಿಸುವ ಜೈವಿಕ ಅನಿಲ ಘಟಕಗಳನ್ನು ಹೊಂದಿದೆ, ಇದು ಸುಸ್ಥಿರ ತ್ಯಾಜ್ಯ ನಿರ್ವಹಣೆಯಲ್ಲಿ ಗಮನಾರ್ಹ ಪ್ರಗತಿಯನ್ನು ಸೂಚಿಸುತ್ತದೆ. ಇದಲ್ಲದೆ, ಭಾರತೀಯ ಕೃಷಿ ಸಂಶೋಧನಾ ಮಂಡಳಿ ರೈತರಿಗೆ ಮಣ್ಣಿನ ಆರೋಗ್ಯವನ್ನು ಹೆಚ್ಚಿಸಲು 'ಬಯೋಗ್ಯಾಸ್ ಸ್ಲರಿ' ಅನ್ನು ಬಳಸಲು ಸಹಾಯ ಮಾಡಲು ಬೆಳೆ-ನಿರ್ದಿಷ್ಟ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸಿದೆ.
ಹೆಚ್ಚುವರಿಯಾಗಿ, ಯೋಜನೆಯ ಪ್ರಭಾವವನ್ನು ಹೆಚ್ಚಿಸಲು ಸರ್ಕಾರವು ನಿಯಮಗಳನ್ನು ಸರಳಗೊಳಿಸಿದೆ ಮತ್ತು ಉದ್ದೇಶಿತ ಪ್ರೋತ್ಸಾಹಕಗಳನ್ನು ಪರಿಚಯಿಸಿದೆ. ಕಾರ್ಬನ್ ಕ್ರೆಡಿಟ್ ಟ್ರೇಡಿಂಗ್ನಲ್ಲಿ ಸಂಕುಚಿತ ಜೈವಿಕ ಅನಿಲವನ್ನು ಸೇರಿಸುವುದು, ಸಿಬಿಜಿ-ಮಿಶ್ರಿತ ಇಂಧನಗಳ ಮೇಲಿನ ತೆರಿಗೆ ವಿನಾಯಿತಿ ಮತ್ತು ರಸಗೊಬ್ಬರ ನಿಯಂತ್ರಣ ಆದೇಶದ ಅಡಿಯಲ್ಲಿ ಸಾವಯವ ಗೊಬ್ಬರದ ನಿಯಮಗಳ ಸರಳೀಕರಣವು ಜೈವಿಕ ಅನಿಲ ಅಳವಡಿಕೆಯನ್ನು ವೇಗಗೊಳಿಸಿದೆ, ಖಾಸಗಿ ಹೂಡಿಕೆಯನ್ನು ಆಕರ್ಷಿಸಿದೆ ಮತ್ತು ರಾಷ್ಟ್ರೀಯ 'ತ್ಯಾಜ್ಯದಿಂದ ಸಂಪತ್ತು' ಪರಿಸರ ವ್ಯವಸ್ಥೆಯನ್ನು ಬಲಪಡಿಸಿದೆ.
ಬೆಳೆ ಉಳಿಕೆ ನಿರ್ವಹಣೆ: ಸಿಆರ್ಎಂ ಉಪಕ್ರಮವು ಬೆಳೆ ಉಳಿಕೆಗಳನ್ನು ನೇರವಾಗಿ ಮಣ್ಣಿನಲ್ಲಿ ಸೇರಿಸುವ ಅಥವಾ ಮಲ್ಚ್ ಆಗಿ ಬಳಸುವ 'ಇನ್-ಸಿಟು' ನಿರ್ವಹಣೆ ಮತ್ತು ಕಾಂಪೋಸ್ಟ್, ಜೈವಿಕ ಅನಿಲ ಉತ್ಪಾದನೆ ಅಥವಾ ಜೈವಿಕ ಇಂಧನಕ್ಕಾಗಿ ಉಳಿಕೆಗಳನ್ನು ಸಂಗ್ರಹಿಸುವ 'ಎಕ್ಸ್-ಸಿಟು' ನಿರ್ವಹಣೆಯನ್ನು ಉತ್ತೇಜಿಸುವ ಮೂಲಕ ಬೆಳೆ ಉಳಿಕೆಗಳನ್ನು ಸುಡುವುದನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಈ ಪದ್ಧತಿಗಳು ಮಣ್ಣಿನ ಆರೋಗ್ಯವನ್ನು ಸುಧಾರಿಸಲು, ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತವೆ.
ಈ ಯೋಜನೆಯಡಿಯಲ್ಲಿ, 2018-19 ರಿಂದ 2025-26 ರವರೆಗೆ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ದೆಹಲಿ ಮತ್ತು ICAR ಗೆ 3,926.16 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈ ಅವಧಿಯಲ್ಲಿ, ರಾಜ್ಯಗಳು ಬೆಳೆ ಉಳಿಕೆ ನಿರ್ವಹಣಾ ಯಂತ್ರಗಳಿಗಾಗಿ 42,000 ಕ್ಕೂ ಹೆಚ್ಚು ಕಸ್ಟಮ್ ಹೈರಿಂಗ್ ಕೇಂದ್ರಗಳನ್ನು ಸ್ಥಾಪಿಸಿವೆ ಮತ್ತು ಈ ಕೇಂದ್ರಗಳಿಗೆ ಹಾಗೂ ವೈಯಕ್ತಿಕ ರೈತರಿಗೆ 3.24 ಲಕ್ಷಕ್ಕೂ ಹೆಚ್ಚು ಯಂತ್ರಗಳನ್ನು ಪೂರೈಸಲಾಗಿದೆ.
ಕೃಷಿ ತ್ಯಾಜ್ಯವನ್ನು ಮೌಲ್ಯಯುತವಾಗಿ ಪರಿವರ್ತಿಸಲು ಮೂಲಸೌಕರ್ಯ ನಿರ್ಮಾಣ
ಕೃಷಿ ಮೂಲಸೌಕರ್ಯ ನಿಧಿ (ಎಐಎಫ್): ಸಾವಯವ ಕೃಷಿಯಲ್ಲಿ ತೊಡಗಿರುವ ಪೂರೈಕೆ ಸರಪಳಿಗಳು ಸೇರಿದಂತೆ ಒಟ್ಟಾರೆ ಕೃಷಿ ಮೌಲ್ಯ ಸರಪಳಿಗಳನ್ನು ಬಲಪಡಿಸುವಲ್ಲಿ ಎಐಎಫ್ ಪ್ರಮುಖ ಪಾತ್ರ ವಹಿಸುತ್ತದೆ. ಸಾವಯವ ರೈತರು, ರೈತ ಉತ್ಪಾದಕ ಸಂಸ್ಥೆಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಕೃಷಿ-ಉದ್ಯಮಿಗಳು ಗೋದಾಮುಗಳು, ಶೈತ್ಯಾಗಾರಗಳು, ವಿಂಗಡಣೆ ಮತ್ತು ವರ್ಗೀಕರಣ ಘಟಕಗಳು ಹಾಗೂ ಪ್ರಾಥಮಿಕ ಸಂಸ್ಕರಣಾ ಕೇಂದ್ರಗಳನ್ನು ಸ್ಥಾಪಿಸಲು ಎಐಎಫ್ ಬೆಂಬಲವನ್ನು ಸದುಪಯೋಗಪಡಿಸಿಕೊಂಡಿದ್ದಾರೆ.
- 2020-21ರಲ್ಲಿ ಪ್ರಾರಂಭಿಸಲಾದ ಎಐಎಫ್ (ಕೃಷಿ ಮೂಲಸೌಕರ್ಯ ನಿಧಿ), ಕೊಯ್ಲಿನ ನಂತರದ ಮೂಲಸೌಕರ್ಯ ಮತ್ತು ಕೃಷಿ ಮಟ್ಟದ ಆಸ್ತಿಗಳ ಅಭಿವೃದ್ಧಿಗಾಗಿ ಮಧ್ಯಮದಿಂದ ದೀರ್ಘಾವಧಿಯ ಸಾಂಸ್ಥಿಕ ಸಾಲವನ್ನು ಒದಗಿಸುತ್ತದೆ.
- 2025ರ ಹೊತ್ತಿಗೆ, ಎಐಎಫ್ ಯೋಜನೆಯು ಸಾವಯವ ಪರಿಕರಗಳ ಉತ್ಪಾದನೆಗೆ ಸಂಬಂಧಿಸಿದ 545 ಯೋಜನೆಗಳಿಗೆ ಬೆಂಬಲ ನೀಡಿದೆ. ಇವುಗಳಿಗೆ ಒಟ್ಟು ₹850 ಕೋಟಿ ಸಾಲವನ್ನು ಮಂಜೂರು ಮಾಡಲಾಗಿದ್ದು, ಇದು ಪರಿಸರ ಸುಸ್ಥಿರತೆ ಮತ್ತು ಆರ್ಥಿಕವಾಗಿ ಲಾಭದಾಯಕವಾದ ಸಾವಯವ ಕೃಷಿಗೆ ಸಿಗುತ್ತಿರುವ ಹೆಚ್ಚಿನ ಮಾನ್ಯತೆಯನ್ನು ಎತ್ತಿ ತೋರಿಸುತ್ತದೆ.
- ಹೆಚ್ಚುವರಿಯಾಗಿ, ಕೃಷಿ ವಲಯದಲ್ಲಿ ಒಟ್ಟು ₹1,07,502 ಕೋಟಿ ಹೂಡಿಕೆಯನ್ನು ಕ್ರೋಢೀಕರಿಸುವ ಮೂಲಕ, 1,13,419 ಯೋಜನೆಗಳಿಗೆ ₹66,310 ಕೋಟಿ ಹಣವನ್ನು ಮಂಜೂರು ಮಾಡಲಾಗಿದೆ. ಎಐಎಎಫ್ ಅಡಿಯಲ್ಲಿ ಬೆಂಬಲಿತವಾದ ಪ್ರಮುಖ ಯೋಜನೆಗಳು ಈ ಕೆಳಗಿನಂತಿವೆ:
- 30,202 ಕಸ್ಟಮ್ ಹೈರಿಂಗ್ ಕೇಂದ್ರಗಳು (ಬಾಡಿಗೆ ಆಧಾರಿತ ಯಂತ್ರೋಪಕರಣ ಕೇಂದ್ರಗಳು),
- 22,827 ಸಂಸ್ಕರಣಾ ಘಟಕಗಳು,
- 15,982 ಗೋದಾಮುಗಳು,
- 3,703 ವಿಂಗಡಣೆ ಮತ್ತು ವರ್ಗೀಕರಣ ಘಟಕಗಳು,
- 2,454 ಶೈತ್ಯಾಗಾರ ಯೋಜನೆಗಳು, ಮತ್ತು
- ಸುಮಾರು 38,251 ಇತರ ಕೊಯ್ಲಿನ ನಂತರದ ನಿರ್ವಹಣಾ ಯೋಜನೆಗಳು.
ಇದರೊಂದಿಗೆ ಸುಸ್ಥಿರ ಸಮುದಾಯ ಕೃಷಿ ಆಸ್ತಿಗಳ ಸೃಷ್ಟಿಗೂ ಒತ್ತು ನೀಡಲಾಗಿದೆ. ಈ ಉಪಕ್ರಮಗಳು ಮೌಲ್ಯವರ್ಧನೆಯನ್ನು ಸುಧಾರಿಸಲು, ಕೊಯ್ಲಿನ ನಂತರದ ನಷ್ಟವನ್ನು ಕಡಿಮೆ ಮಾಡಲು ಮತ್ತು ರೈತರಿಗೆ ಹೆಚ್ಚಿನ ಆದಾಯದ ಅವಕಾಶಗಳನ್ನು ಒದಗಿಸಲು ಕೊಡುಗೆ ನೀಡುತ್ತವೆ.
ಪಶುಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿ: ಪಶುಸಂಗೋಪನೆ ಮೌಲ್ಯ ಸರಪಳಿಯಾದ್ಯಂತ ಮೂಲಸೌಕರ್ಯವನ್ನು ಬಲಪಡಿಸಲು, ಕೇಂದ್ರ ಸರ್ಕಾರವು 2020 ರಲ್ಲಿ ಆತ್ಮನಿರ್ಭರ ಭಾರತ ಅಭಿಯಾನದಡಿ ₹15,000 ಕೋಟಿ ನಿಧಿಯೊಂದಿಗೆ ಎಎಚ್ಐಡಿಎಫ್ ಅನ್ನು ಪ್ರಾರಂಭಿಸಿದೆ. ಮಾಂಸ ಮತ್ತು ಡೈರಿ ಸಂಸ್ಕರಣೆ, ಪಶು ಆಹಾರ ತಯಾರಿಕೆ ಮತ್ತು 'ತ್ಯಾಜ್ಯದಿಂದ ಸಂಪತ್ತು' ನಿರ್ವಹಣೆಯಲ್ಲಿ ಖಾಸಗಿ ಮತ್ತು ಸಹಕಾರಿ ಹೂಡಿಕೆಗಳನ್ನು ಉತ್ತೇಜಿಸಲು ಈ ನಿಧಿಯನ್ನು ವಿನ್ಯಾಸಗೊಳಿಸಲಾಗಿದೆ. ಇದು ಪಶುಸಂಗೋಪನಾ ವಲಯದಲ್ಲಿ ಮೌಲ್ಯವರ್ಧನೆ, ದಕ್ಷತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಡೈರಿ ಪರಿಸರ ವ್ಯವಸ್ಥೆಯಲ್ಲಿ ಸುಸ್ಥಿರತೆ ಮತ್ತು ಚಕ್ರೀಯತೆಯನ್ನು ಅಳವಡಿಸಲು, ಸರ್ಕಾರವು ನಿರ್ದಿಷ್ಟ ಉದ್ದೇಶಗಳೊಂದಿಗೆ ಮೂರು ವಿಶೇಷ ಬಹು-ರಾಜ್ಯ ಸಹಕಾರ ಸಂಘಗಳ ರಚನೆಯನ್ನು ಪ್ರಾರಂಭಿಸಿದೆ:
- ಜಾನುವಾರುಗಳ ಉತ್ಪಾದಕತೆಯನ್ನು ಹೆಚ್ಚಿಸುವ ಪಶು ಆಹಾರ, ಖನಿಜ ಮಿಶ್ರಣಗಳು ಮತ್ತು ತಾಂತ್ರಿಕ ಪರಿಕರಗಳನ್ನು ಪೂರೈಸುವುದು.
- ಸಹಕಾರಿ ಮಾದರಿಗಳ ಮೂಲಕ ಸಗಣಿ ಮತ್ತು ಕೃಷಿ ತ್ಯಾಜ್ಯವನ್ನು ಸಾವಯವ ಗೊಬ್ಬರ ಹಾಗೂ ಜೈವಿಕ ಅನಿಲವಾಗಿ ಪರಿವರ್ತಿಸಿ, ಸಾವಯವ ಗೊಬ್ಬರ ಉತ್ಪಾದನೆ ಮತ್ತು ಸುಸ್ಥಿರ ತ್ಯಾಜ್ಯ ಬಳಕೆಯನ್ನು ಉತ್ತೇಜಿಸುವುದು.
- ಸತ್ತ ಪ್ರಾಣಿಗಳ ಚರ್ಮ, ಮೂಳೆ ಮತ್ತು ಕೊಂಬುಗಳ ವೈಜ್ಞಾನಿಕ ನಿರ್ವಹಣೆಯನ್ನು ಸುಗಮಗೊಳಿಸುವುದು. ಆ ಮೂಲಕ ಜವಾಬ್ದಾರಿಯುತ ವಿಲೇವಾರಿಯನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ ಪಶುಸಂಗೋಪನಾ ವಲಯದಲ್ಲಿ ಹೆಚ್ಚುವರಿ ಮೌಲ್ಯದ ಮೂಲಗಳನ್ನು ಸೃಷ್ಟಿಸುವುದು.
ಈ ವಿಧಾನವು ನೈಸರ್ಗಿಕ ಕೃಷಿ ಪದ್ಧತಿಗಳನ್ನು ಬೆಂಬಲಿಸುತ್ತದೆ, ತ್ಯಾಜ್ಯವನ್ನು ಕನಿಷ್ಠಗೊಳಿಸುವ ಮೂಲಕ ಚಕ್ರೀಯತೆಯನ್ನು ಉತ್ತೇಜಿಸುತ್ತದೆ ಮತ್ತು ಪರಿಸರ ಸ್ನೇಹಿ ಮಣ್ಣಿನ ಪೋಷಕಾಂಶಗಳ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುತ್ತದೆ. ಈ ಮೂಲಕ ಪಶುಸಂಗೋಪನಾ ವಲಯದ ಸ್ಥಿತಿಸ್ಥಾಪಕತ್ವ ಮತ್ತು ದೀರ್ಘಕಾಲದ ಸುಸ್ಥಿರತೆಯನ್ನು ಹೆಚ್ಚಿಸುತ್ತದೆ.
ಸುಸ್ಥಿರ ಕೃಷಿಗಾಗಿ ಜಲ ನಿರ್ವಹಣೆ: ಜಲಶಕ್ತಿ ಅಭಿಯಾನದ ಅಡಿಯಲ್ಲಿನ ಉಪಕ್ರಮಗಳು
ಜಲಶಕ್ತಿ ಸಚಿವಾಲಯವು 'ನಮಾಮಿ ಗಂಗೆ', ಪಿಎಂಕೆಎಸ್ವೈ-ಜಲಾನಯನ ಅಭಿವೃದ್ಧಿ ಮತ್ತು ಜಲಶಕ್ತಿ ಅಭಿಯಾನದಂತಹ ಯೋಜನೆಗಳ ಮೂಲಕ ಗೃಹಬಳಕೆಯ ಮತ್ತು ಕೈಗಾರಿಕಾ ತ್ಯಾಜ್ಯನೀರನ್ನು ಸಂಸ್ಕರಿಸಿ, ಅವುಗಳನ್ನು ಕೃಷಿ, ಭೂದೃಶ್ಯ ಮತ್ತು ತೋಟಗಾರಿಕೆಯಂತಹ ಕುಡಿಯಲು ಯೋಗ್ಯವಲ್ಲದ ಉದ್ದೇಶಗಳಿಗಾಗಿ ಮರುಬಳಕೆ ಮಾಡುವುದನ್ನು ಉತ್ತೇಜಿಸುತ್ತದೆ.
ಸಚಿವಾಲಯವು ಜಲಾನಯನ ಅಭಿವೃದ್ಧಿ, ಮಳೆನೀರು ಕೊಯ್ಲು, ಸಾಂಪ್ರದಾಯಿಕ ಜಲಮೂಲಗಳ ಪುನಶ್ಚೇತನ ಮತ್ತು ಅಂತರ್ಜಲ ಮರುಪೂರಣಕ್ಕೆ ಬೆಂಬಲ ನೀಡುವ ಮೂಲಕ ಜಲ ಸಂರಕ್ಷಣೆ ಮತ್ತು ನೀರಿನ ಮೂಲಗಳ ಸುಸ್ಥಿರತೆಯ ಮೇಲೆ ಗಮನ ಹರಿಸುತ್ತದೆ. ಈ ಪ್ರಯತ್ನಗಳು ನೀರಾವರಿಗಾಗಿ ನೀರಿನ ಲಭ್ಯತೆಯನ್ನು ಸುಧಾರಿಸುತ್ತವೆ, ಅಂತರ್ಜಲದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತವೆ ಮತ್ತು ಕೃಷಿ ಹಾಗೂ ಸಂಬಂಧಿತ ವಲಯಗಳಲ್ಲಿ ಸಂಪನ್ಮೂಲ-ದಕ್ಷ ಮತ್ತು ಸುಸ್ಥಿರ ಜಲ ನಿರ್ವಹಣಾ ವಿಧಾನವನ್ನು ಪ್ರೋತ್ಸಾಹಿಸುತ್ತವೆ.
ತ್ಯಾಜ್ಯನೀರಿನ ಮರುಬಳಕೆಯ ಉಪಕ್ರಮಗಳಿಗೆ ಪೂರಕವಾಗಿ, ಆಗಸ್ಟ್ 2019 ರಲ್ಲಿ ಪ್ರಾರಂಭಿಸಲಾದ ಜಲ ಜೀವನ್ ಮಿಷನ್-ಹರ್ ಘರ್ ಜಲ್ ಗ್ರಾಮೀಣ ಪ್ರದೇಶಗಳಲ್ಲಿ ಸುರಕ್ಷಿತ ಮತ್ತು ಸಮರ್ಪಕ ಕುಡಿಯುವ ನೀರಿನ ಸಾರ್ವತ್ರಿಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಗಮನ ಹರಿಸುತ್ತದೆ. ಈ ಮಿಷನ್ ಪ್ರತಿ ವ್ಯಕ್ತಿಗೆ ದಿನಕ್ಕೆ 55 ಲೀಟರ್ ಕುಡಿಯುವ ನೀರನ್ನು ಒದಗಿಸುವ ಕಾರ್ಯಕಾರಿ ಮನೆ ನಳ ಸಂಪರ್ಕಗಳನ್ನು ಒದಗಿಸುತ್ತದೆ. ಆ ಮೂಲಕ ಜಲ ಭದ್ರತೆ ಮತ್ತು ಸುಸ್ಥಿರ ಜಲ ಆಡಳಿತದ ಭಾರತದ ದೀರ್ಘಕಾಲದ ಗುರಿಗಳನ್ನು ಬಲಪಡಿಸುತ್ತದೆ.
|
ಸುಸ್ಥಿರ ಅಭಿವೃದ್ಧಿ ಗುರಿಗಳೊಂದಿಗೆ (ಎಸ್ಡಿಜಿ) ಸಂಯೋಜಿತವಾದ ಚಕ್ರೀಯ ಕೃಷಿ ಪದ್ಧತಿಗಳು
ಜಾಗತಿಕ ಮಟ್ಟದಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್ಡಿಜಿs) ಸಾಧಿಸುವಲ್ಲಿ ಚಕ್ರೀಯ ಕೃಷಿಯು ನಿಕಟವಾದ ಸಂಬಂಧವನ್ನು ಹೊಂದಿದೆ. ಇದು ಎಸ್ಡಿಜಿ 2 ಗುರಿಯನ್ನು ಬೆಂಬಲಿಸುತ್ತದೆ, ಇದು "ಹಸಿವನ್ನು ಕೊನೆಗಾಣಿಸುವುದು, ಆಹಾರ ಭದ್ರತೆಯನ್ನು ಸಾಧಿಸುವುದು, ಪೌಷ್ಟಿಕಾಂಶವನ್ನು ಸುಧಾರಿಸುವುದು ಮತ್ತು ಸುಸ್ಥಿರ ಕೃಷಿಯನ್ನು ಉತ್ತೇಜಿಸುವ" ಗುರಿಯನ್ನು ಹೊಂದಿದೆ.
ವಿಶೇಷವಾಗಿ, ಎಸ್ಡಿಜಿ ಸೂಚಕ 2.4.1 ಮಣ್ಣಿನ ಆರೋಗ್ಯವನ್ನು ಸುಧಾರಿಸುವ ಮತ್ತು ರಾಸಾಯನಿಕ ಬಳಕೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ 'ಸ್ಥಿತಿಸ್ಥಾಪಕ ಕೃಷಿ ವ್ಯವಸ್ಥೆಗಳ' ಅಗತ್ಯವನ್ನು ಉಲ್ಲೇಖಿಸುತ್ತವೆ. ಭಾರತದಲ್ಲಿ, ಕಾಂಪೋಸ್ಟ್ ತಯಾರಿಕೆ, ಬಯೋಚಾರ್ ಬಳಕೆ ಮತ್ತು ಜೈವಿಕ ರಾಶಿ ಮರುಬಳಕೆಯಂತಹ ಪದ್ಧತಿಗಳು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಮೂಲಕ, ಉತ್ಪಾದಕತೆಯನ್ನು ಸುಧಾರಿಸುವ ಮೂಲಕ ಮತ್ತು ಪರಿಸರ ಸ್ನೇಹಿ ಸುಸ್ಥಿರ ಕೃಷಿಯನ್ನು ಉತ್ತೇಜಿಸುವ ಮೂಲಕ ಈ ಉದ್ದೇಶಗಳಿಗೆ ಕೊಡುಗೆ ನೀಡುತ್ತಿವೆ.
ಇದಲ್ಲದೆ, ಚಕ್ರೀಯ ಕೃಷಿಯು ಜಾಗತಿಕ ಆಹಾರ ವ್ಯರ್ಥವನ್ನು ಕಡಿಮೆ ಮಾಡುವ ಮೂಲಕ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಬೆಂಬಲಿಸುತ್ತದೆ. 2022 ರಲ್ಲಿ ಜಾಗತಿಕ ಆಹಾರ ವ್ಯರ್ಥವು 1.05 ಬಿಲಿಯನ್ ಟನ್ಗಳಿಗೆ ತಲುಪಿತ್ತು, ಅದರಲ್ಲಿ ಶೇಕಡಾ 60 ರಷ್ಟು ಮನೆಗಳ ಮಟ್ಟದಲ್ಲೇ ಉತ್ಪತ್ತಿಯಾಗಿದೆ.
|
ಉಪಸಂಹಾರ
ಕೃಷಿಯಲ್ಲಿ ಚಕ್ರೀಯ ಆರ್ಥಿಕತೆಯತ್ತ ಭಾರತವು ಸಾಗುತ್ತಿರುವ ಕ್ರಮವು, ಪರಿಸರ ಸುಸ್ಥಿರತೆ ಮತ್ತು ಆರ್ಥಿಕ ಬೆಳವಣಿಗೆಗಳು ಪರಸ್ಪರ ಪೂರಕವಾಗಿರಬಲ್ಲವು ಎಂಬುದನ್ನು ನಿರೂಪಿಸುತ್ತದೆ. ಕೃಷಿ ಮತ್ತು ಆಹಾರ ತ್ಯಾಜ್ಯದ ಪ್ರಮಾಣವು ದೊಡ್ಡ ಮಟ್ಟದ ಕಳವಳವನ್ನು ಉಂಟುಮಾಡುತ್ತದೆಯಾದರೂ, ಉದ್ದೇಶಿತ ನೀತಿಗಳು, ಆಯಕಟ್ಟಿನ ಮೂಲಸೌಕರ್ಯ ಹೂಡಿಕೆಗಳು ಮತ್ತು ಸಮನ್ವಯದ ಸಾಂಸ್ಥಿಕ ಕ್ರಮಗಳು ಇಂದು ತ್ಯಾಜ್ಯವನ್ನು ಇಂಧನ, ಸಾವಯವ ಪರಿಕರಗಳು, ಜಲಸಂಪನ್ಮೂಲಗಳು ಮತ್ತು ಜೀವನೋಪಾಯದ ಅವಕಾಶಗಳನ್ನಾಗಿ ಪರಿವರ್ತಿಸುತ್ತಿವೆ. ಗೋಬರ್-ಧನ್, ಬೆಳೆ ಉಳಿಕೆ ನಿರ್ವಹಣಾ ಕಾರ್ಯಕ್ರಮಗಳು, ಕೃಷಿ ಮೂಲಸೌಕರ್ಯ ನಿಧಿ (ಎಐಎಫ್) ಮತ್ತು ಪಶುಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿ ನಂತಹ ಪ್ರಮುಖ ಉಪಕ್ರಮಗಳು ಮಣ್ಣಿನ ಫಲವತ್ತತೆ ಮತ್ತು ಜಲ ಭದ್ರತೆಯನ್ನು ಹೆಚ್ಚಿಸಲು ಹಾಗೂ ಕೃಷಿ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸಲು ಚಕ್ರೀಯ ಕೃಷಿಗಿರುವ ಸಾಮರ್ಥ್ಯವನ್ನು ಪ್ರತಿನಿಧಿಸುತ್ತವೆ. ಈಗಾಗಲೇ ಯಶಸ್ವಿಯಾದ ಕ್ರಮಗಳನ್ನು ವಿಸ್ತರಿಸುವ ಮೂಲಕ, ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸುವ ಮೂಲಕ ಮತ್ತು ಆರ್ಥಿಕ ಪ್ರೋತ್ಸಾಹಕಗಳನ್ನು ಪರಿಸರ ಸಂರಕ್ಷಣೆಯೊಂದಿಗೆ ಸಂಯೋಜಿಸುವ ಮೂಲಕ, ಚಕ್ರೀಯ ಕೃಷಿಯು ದೀರ್ಘಕಾಲೀನ ಆಹಾರ ಭದ್ರತೆ, ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಅಂತರ್ಗತ ಗ್ರಾಮೀಣಾಭಿವೃದ್ಧಿಯನ್ನು ಖಾತ್ರಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆ ಮೂಲಕ ಇದು ಕೃಷಿ ತ್ಯಾಜ್ಯವನ್ನು ಸುಸ್ಥಿರ ಸಮೃದ್ಧಿಯ ಅಡಿಗಲ್ಲನ್ನಾಗಿ (cornerstone) ಪರಿವರ್ತಿಸುತ್ತದೆ.
References
Ministry of Agriculture & Farmers Welfare
Indian Council of Agricultural Research (ICAR)
Ministry of New & Renewable Energy / Energy-linked Platforms
Ministry of Food Processing Industries
Ministry of Housing & Urban Affairs
Ministry of Fisheries, Animal Husbandry & Dairying
Department of Administrative Reforms & Public Grievances (DARPG)
Ministry of Environment, Forest and Climate Change
Ministry of Jal Shakti
Parliament of India (Sansad)
International & Multilateral Organisations / Research
Click here for pdf file.
******
(Explainer ID: 157435)
आगंतुक पटल : 15
Provide suggestions / comments