• Sitemap
  • Advance Search
Infrastructure

"ಎಲ್ಲರಿಗೂ ನೀರು, ನೀರಿಗಾಗಿ ಎಲ್ಲರೂ: ಜನರು, ಪಂಚಾಯಿತಿಗಳು ಮತ್ತು ಜಲ ಜೀವನ್ ಮಿಷನ್"

Posted On: 13 MAR 2026 12:01PM

ಸುರಕ್ಷಿತ ಕುಡಿಯುವ ನೀರಿನ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಪೈಪ್‌ಲೈನ್‌ಗಳು, ಪಂಪ್‌ಗಳು ಮತ್ತು ಶೇಖರಣಾ ರಚನೆಗಳಂತಹ ಮೂಲಸೌಕರ್ಯಗಳ ಅಗತ್ಯವಿದೆ. ಆದರೆ ಉಕ್ಕು ಮತ್ತು ಕಾಂಕ್ರೀಟ್‌ನ ಈ ಜಾಲಗಳ ಆಚೆಗೆ, ನೀರಿನ ವ್ಯವಸ್ಥೆಗಳು ಪ್ರತಿದಿನವೂ ಅವುಗಳನ್ನು ನಡೆಸುವ ಜನರ ಮೂಲಕ ಸುಸ್ಥಿರವಾಗಿರುತ್ತವೆ. ಜಲ ಜೀವನ್ ಮಿಷನ್ ಅಡಿಯಲ್ಲಿ, ಚುನಾಯಿತ ಪ್ರತಿನಿಧಿಗಳು, ಮುಂಚೂಣಿ ಕಾರ್ಯಕರ್ತರು, ಸ್ವಸಹಾಯ ಗುಂಪುಗಳ ಸದಸ್ಯರು, ತರಬೇತಿ ಪಡೆದ ಸ್ವಯಂಸೇವಕರು ಮತ್ತು ತಾಂತ್ರಿಕ ಸಿಬ್ಬಂದಿಗಳು ಗ್ರಾಮೀಣ ಮಟ್ಟದಲ್ಲಿ ಒಗ್ಗೂಡಿ ಸ್ಥಳೀಯ ನೀರು ಸರಬರಾಜು ವ್ಯವಸ್ಥೆಗಳನ್ನು ನಿರ್ವಹಿಸಲು, ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಣೆ ಮಾಡಲು ಶ್ರಮಿಸುತ್ತಿದ್ದಾರೆ. ಇದು ಗ್ರಾಮೀಣ ಮನೆಗಳಿಗೆ ಸುರಕ್ಷಿತ ಕುಡಿಯುವ ನೀರನ್ನು ತಲುಪಿಸಲು ಬೆಂಬಲ ನೀಡುತ್ತಿದೆ.

ಆಗಸ್ಟ್ 2019ರಲ್ಲಿ ಪ್ರಾರಂಭವಾದ ಜಲ ಜೀವನ್ ಮಿಷನ್, ಪ್ರತಿಯೊಂದು ಗ್ರಾಮೀಣ ಮನೆಗಳಿಗೂ ಕಾರ್ಯನಿರ್ವಹಿಸುವ ಮನೆ ನಳ ಸಂಪರ್ಕ ಮೂಲಕ ಸುರಕ್ಷಿತ ಮತ್ತು ಸಮರ್ಪಕ ಕುಡಿಯುವ ನೀರನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮದ ಆರಂಭದಲ್ಲಿ, ಕೇವಲ 3.23 ಕೋಟಿ ಗ್ರಾಮೀಣ ಮನೆಗಳು ಮಾತ್ರ ನಳದ ನೀರಿನ ಸಂಪರ್ಕವನ್ನು ಹೊಂದಿದ್ದವು. 3 ಮಾರ್ಚ್ 2026 ರ ಹೊತ್ತಿಗೆ, ದೇಶಾದ್ಯಂತ 15.82 ಕೋಟಿಗೂ ಹೆಚ್ಚು ಗ್ರಾಮೀಣ ಕುಟುಂಬಗಳು ತಮ್ಮ ಮನೆಗಳಲ್ಲಿ ನಳದ ನೀರಿನ ಪೂರೈಕೆಯನ್ನು ಹೊಂದಿವೆ ಎಂದು ವರದಿಯಾಗಿದೆ. ಇದು ಸಾರ್ವತ್ರಿಕ ಗ್ರಾಮೀಣ ಕುಡಿಯುವ ನೀರಿನ ವ್ಯಾಪ್ತಿಗೆ ಭಾರತದ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಕೇಂದ್ರ ಬಜೆಟ್ 2026-27 ಈ ಮಿಷನ್‌ಗಾಗಿ ₹67,670 ಕೋಟಿ ಹಂಚಿಕೆಯನ್ನು ಪ್ರಸ್ತಾಪಿಸಿದೆ ಮತ್ತು ಯೋಜನೆಯನ್ನು 2028 ರವರೆಗೆ ವಿಸ್ತರಿಸಲಾಗಿದೆ. ದೇಶಾದ್ಯಂತ ಗ್ರಾಮೀಣ ಕುಡಿಯುವ ನೀರಿನ ಮೂಲಸೌಕರ್ಯದ ಈ ಕ್ಷಿಪ್ರ ವಿಸ್ತರಣೆಗೆ ತಳಮಟ್ಟದಲ್ಲಿ ಕೆಲಸ ಮಾಡುವ ಸಾವಿರಾರು ವ್ಯಕ್ತಿಗಳ ಶ್ರಮವು ಬೆಂಬಲವಾಗಿದೆ.

ಹಳ್ಳಿಗಳಾದ್ಯಂತ, ನೀರಿನ ವ್ಯವಸ್ಥೆಯನ್ನು ನೋಡಿಕೊಳ್ಳುವ, ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡುವ ಮತ್ತು ತಮ್ಮ ಸಮುದಾಯಗಳಿಗೆ ನೀರಿನ ಗುಣಮಟ್ಟವನ್ನು ರಕ್ಷಿಸುವ ಜನರ ಸಮರ್ಪಣೆಯಲ್ಲಿ ಈ ಪ್ರಯತ್ನಗಳು ಕಂಡುಬರುತ್ತವೆ. ಇಂತಹ ಕೊಡುಗೆಗಳನ್ನು ಸಂಭ್ರಮಿಸಲು ಮತ್ತು ಪ್ರೋತ್ಸಾಹಿಸಲು, ಜಲ ಮಹೋತ್ಸವ 2026 ರ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರಿನ ಆಡಳಿತವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಗಣ್ಯ ವ್ಯಕ್ತಿಗಳಿಗೆ ರಾಷ್ಟ್ರಪತಿಗಳು ಪ್ರಶಸ್ತಿ ನೀಡಿ ಗೌರವಿಸಿದರು. ಈ ರಾಷ್ಟ್ರವ್ಯಾಪಿ ಅಭಿಯಾನವನ್ನು ಮಾರ್ಚ್ 8 ರಿಂದ ಮಾರ್ಚ್ 22 ರವರೆಗೆ ಆಯೋಜಿಸಲಾಗುತ್ತಿದ್ದು, ಜಲ ಜೀವನ್ ಮಿಷನ್ ಅಡಿಯಲ್ಲಿ 'ಜನ ಭಾಗಿದಾರಿ'ಯನ್ನು (ಜನರ ಸಹಭಾಗಿತ್ವ) ಉತ್ತೇಜಿಸಲಾಗುತ್ತಿದೆ. ಈ ಕೆಳಗಿನ ಕಥೆಗಳು ಕೆಲವು ವ್ಯಕ್ತಿಗಳ ಪಯಣ ಮತ್ತು ಅವರ ಸಮುದಾಯಗಳಲ್ಲಿ ಗ್ರಾಮೀಣ ಕುಡಿಯುವ ನೀರಿನ ಸೇವೆಗಳನ್ನು ಉಳಿಸಿಕೊಳ್ಳುವಲ್ಲಿ ಅವರು ವಹಿಸುವ ಪಾತ್ರದ ಒಂದು ನೋಟವನ್ನು ನೀಡುತ್ತವೆ.

ಸ್ಥಳೀಯ ಸಹಭಾಗಿತ್ವದ ಮೂಲಕ ಗ್ರಾಮದ ನೀರಿನ ವ್ಯವಸ್ಥೆಗಳ ಸುಸ್ಥಿರತೆ

ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯ ಮಂಕುರ್ ಗ್ರಾಮ ಪಂಚಾಯತ್‌ನಲ್ಲಿ, ಗ್ರಾಮದ ಕುಡಿಯುವ ನೀರಿನ ವ್ಯವಸ್ಥೆಯ ಕಾರ್ಯನಿರ್ವಹಣೆಯು ಗ್ರಾಮೀಣ ಮೂಲಸೌಕರ್ಯವನ್ನು ಉಳಿಸಿಕೊಳ್ಳುವಲ್ಲಿ ಸ್ಥಳೀಯ ಸಹಭಾಗಿತ್ವವು ವಹಿಸಬಹುದಾದ ಪಾತ್ರವನ್ನು ಪ್ರತಿಬಿಂಬಿಸುತ್ತದೆ.

ಗ್ರಾಮ ಪ್ರಧಾನ್ ರಚನಾ ದೇವಿ ಅವರ ನೇತೃತ್ವದಲ್ಲಿ, ಮೌ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯು ಗ್ರಾಮದ ಎಲ್ಲಾ 340 ಮನೆಗಳಿಗೆ ನಳದ ಸಂಪರ್ಕವನ್ನು ಖಚಿತಪಡಿಸಿತು, ಇದರಿಂದ ಸುಮಾರು 1,971 ನಿವಾಸಿಗಳಿಗೆ ಅನುಕೂಲವಾಗಿದೆ. ಮೂಲಸೌಕರ್ಯಗಳ ನಿರ್ಮಾಣದ ಜೊತೆಗೆ, ವ್ಯವಸ್ಥೆಯು ದೀರ್ಘಕಾಲದವರೆಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳನ್ನು ಮಾಡಲಾಗಿದೆ.

ಗ್ರಾಮದ ನೀರು ಸರಬರಾಜು ವ್ಯವಸ್ಥೆಯ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಬೆಂಬಲ ನೀಡಲು, ಪ್ರತಿ ಮನೆಯವರು ಮಾಸಿಕ ₹50 ಬಳಕೆದಾರರ ಶುಲ್ಕವನ್ನು ನೀಡುತ್ತಾರೆ. ಗ್ರಾಮವು ಪ್ರಸ್ತುತ ಪ್ರತಿ ತಿಂಗಳು ಸುಮಾರು ₹5,275 ಸಂಗ್ರಹಿಸುತ್ತಿದ್ದು, ಇದನ್ನು ದೈನಂದಿನ ಕಾರ್ಯಾಚರಣೆಯ ಅಗತ್ಯಗಳನ್ನು ಪೂರೈಸಲು ಬಳಸಲಾಗುತ್ತದೆ.

ಗ್ರಾಮದ ನೀರು ಮತ್ತು ನೈರ್ಮಲ್ಯ ಸಮಿತಿಯ ನಿಯಮಿತ ಸಭೆಗಳಲ್ಲಿ ಬಿಲ್ಲಿಂಗ್, ಆದಾಯ ಸಂಗ್ರಹಣೆ ಮತ್ತು ಸೇವಾ ವಿತರಣೆಯನ್ನು ಪರಿಶೀಲಿಸಲಾಗುತ್ತದೆ. ಈ ಸಭೆಗಳು ನೀರು ಸರಬರಾಜು ವ್ಯವಸ್ಥೆಯ ನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಸಾಮೂಹಿಕ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತವೆ. ರಚನಾ ದೇವಿ ಅವರು ಸಮಿತಿಯಲ್ಲಿ ಮಹಿಳೆಯರು ಮತ್ತು ಪರಿಶಿಷ್ಟ ಜಾತಿ ಸಮುದಾಯದ ಸದಸ್ಯರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಿದ್ದಾರೆ, ಇದು ಗ್ರಾಮ ಮಟ್ಟದಲ್ಲಿ ಸಮಗ್ರ ಜಲ ಆಡಳಿತವನ್ನು ಬಲಪಡಿಸಿದೆ.

ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ನೀರಿನ ಹರಿವನ್ನು ನಿರಂತರವಾಗಿಸುವುದು

ಲಡಾಖ್‌ನ ಲೇಹ್ ಜಿಲ್ಲೆಯ ಎತ್ತರದ ಪ್ರದೇಶದಲ್ಲಿರುವ ಮಾಥೋ ಗ್ರಾಮದಲ್ಲಿ, ವಿಶ್ವಾಸಾರ್ಹ ಕುಡಿಯುವ ನೀರಿನ ವ್ಯವಸ್ಥೆಯನ್ನು ನಿರ್ವಹಿಸಲು ನಿರಂತರ ತಾಂತ್ರಿಕ ಶ್ರಮ ಹಾಗೂ ಸ್ಥಳೀಯ ಸಂಸ್ಥೆಗಳು ಮತ್ತು ಕ್ಷೇತ್ರ ಸಿಬ್ಬಂದಿಗಳ ನಡುವೆ ಸಮನ್ವಯದ ಅಗತ್ಯವಿದೆ.

ಗ್ರಾಮದ ಕುಡಿಯುವ ನೀರಿನ ಮೂಲಸೌಕರ್ಯಗಳ ಅಳವಡಿಕೆ ಮತ್ತು ನಿರ್ವಹಣೆಯಲ್ಲಿ ಪಬ್ಲಿಕ್ ಹೆಲ್ತ್ ಇಂಜಿನಿಯರಿಂಗ್ ಲೈನ್‌ಮ್ಯಾನ್ ಆದ ತ್ಸೆರಿಂಗ್ ದೋರ್ಜೆ ಪ್ರಮುಖ ಪಾತ್ರ ವಹಿಸಿದ್ದಾರೆ. ಸವಾಲಿನ ಭೂಪ್ರದೇಶ ಮತ್ತು ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿ ಕೆಲಸ ಮಾಡುವ ಮೂಲಕ, ಅವರು ಜಲ ಜೀವನ್ ಮಿಷನ್ ಅಡಿಯಲ್ಲಿ ಮಾಥೋ ಗ್ರಾಮದ ಮನೆಗಳಿಗೆ ವಿಶ್ವಾಸಾರ್ಹ ನಳದ ನೀರಿನ ಸಂಪರ್ಕಗಳು ಸಿಗುವಂತೆ ಶ್ರಮಿಸಿದ್ದಾರೆ. ಅಲ್ಲದೆ, ಸಮುದಾಯದ ಸದಸ್ಯರ ಸಾಮೂಹಿಕ ಪ್ರಯತ್ನಗಳೊಂದಿಗೆ ಗ್ರಾಮದಲ್ಲಿ ಕುಡಿಯುವ ನೀರಿನ ಸೇವೆಗಳ ವಿಸ್ತರಣೆ ಮತ್ತು ಕಾರ್ಯನಿರ್ವಹಣೆಗೆ ಅವರು ನೀಡಿದ ಬೆಂಬಲವು, ಗ್ರಾಮೀಣ ನೀರು ಸರಬರಾಜು ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಆಡಳಿತಾತ್ಮಕ ಮತ್ತು ತಾಂತ್ರಿಕ ಸಿಬ್ಬಂದಿ ಹೇಗೆ ಕೊಡುಗೆ ನೀಡುತ್ತಾರೆ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ.

ಗುಜರಾತ್‌ನಲ್ಲಿ ನೀರಿನ ಗುಣಮಟ್ಟ ಕಾಯುತ್ತಿರುವ ಮಹಿಳೆಯರು

ಗುಜರಾತ್‌ನ ನವಸಾರಿ ಜಿಲ್ಲೆಯ ಗಣದೇವಿ ತಾಲೂಕಿನ ಮಾಣಿಕ್‌ಪುರ ಗ್ರಾಮದಲ್ಲಿ, ಗ್ರಾಮದ ನೀರಿನ ಗುಣಮಟ್ಟ ತಂಡದ ಸಕ್ರಿಯ ಭಾಗವಹಿಸುವಿಕೆಯ ಮೂಲಕ ನೀರಿನ ಗುಣಮಟ್ಟದ ಮೇಲ್ವಿಚಾರಣೆ ನಡೆಯುತ್ತಿದೆ. ಈ ತಂಡದ ಸದಸ್ಯೆಯಾದ ಫಾಲ್ಗುಣಿಬೆನ್ ಸಂಜಯಭಾಯ್ ರಾಥೋಡ್ ಅವರು, ಜಲ ಜೀವನ್ ಮಿಷನ್ ಅಡಿಯಲ್ಲಿ ಗ್ರಾಮದ ಮನೆಗಳಿಗೆ ಸುರಕ್ಷಿತ ನೀರು ಪೂರೈಕೆಯಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಫೀಲ್ಡ್ ಟೆಸ್ಟ್ ಕಿಟ್ ಬಳಸಿ ನಿಯಮಿತವಾಗಿ ಕುಡಿಯುವ ನೀರಿನ ಪರೀಕ್ಷೆಯನ್ನು ನಡೆಸುತ್ತಾರೆ.

ಕಳೆದ ಮೂರು ತಿಂಗಳಲ್ಲಿ, ಅವರು ಗ್ರಾಮದ ಎಲ್ಲಾ ವಸತಿ ಪ್ರದೇಶಗಳಿಂದ ಮಾದರಿಗಳನ್ನು ಸಂಗ್ರಹಿಸಿ, ಮನೆ ಮಟ್ಟದಲ್ಲಿ 19 ನೀರಿನ ಮಾದರಿಗಳನ್ನು ಪರೀಕ್ಷಿಸಿದ್ದಾರೆ. ಪರೀಕ್ಷೆಯ ಜೊತೆಗೆ, ಸಮುದಾಯದಲ್ಲಿ ನೀರಿನ ಗುಣಮಟ್ಟ ಮತ್ತು ಮನೆ ಮಟ್ಟದಲ್ಲಿ ಕ್ಲೋರಿನೀಕರಣದಂತಹ ಸೋಂಕುನಿವಾರಕ ಪದ್ಧತಿಗಳ ಬಗ್ಗೆ ಜಾಗೃತಿ ಚಟುವಟಿಕೆಗಳನ್ನು ಉತ್ತೇಜಿಸುವ ಮೂಲಕ ಸುರಕ್ಷಿತ ಕುಡಿಯುವ ನೀರನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತಿದ್ದಾರೆ.

ನೀರಿನ ಗುಣಮಟ್ಟದ ಪರೀಕ್ಷಾ ಫಲಿತಾಂಶಗಳನ್ನು ಅವರು ಸಮುದಾಯದೊಂದಿಗೆ ಹಂಚಿಕೊಳ್ಳುವುದನ್ನೂ ಖಚಿತಪಡಿಸುತ್ತಾರೆ. ನೀರಿನ ಗುಣಮಟ್ಟದ ಬಗ್ಗೆ ಯಾವುದೇ ಆತಂಕವಿದ್ದರೆ, ನಿಗದಿತ ನಿಯಮಗಳ ಪ್ರಕಾರ ಪ್ರಯೋಗಾಲಯ ಪರೀಕ್ಷೆಯ ಮೂಲಕ ಮಾದರಿಗಳನ್ನು ಮರುಪರಿಶೀಲಿಸಲಾಗುತ್ತದೆ. ಗ್ರಾಮ ಪಂಚಾಯತ್‌ನ ಚುನಾಯಿತ ಸದಸ್ಯೆಯೂ ಆಗಿರುವ ಫಾಲ್ಗುಣಿಬೆನ್ ಅವರು, 'ಭುಲ್ಕು ಮಹಿಳಾ ಬಚತ್ ಮಂಡಲ' ಎಂಬ ಸ್ವಸಹಾಯ ಗುಂಪಿನೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯಾಗಿಯೂ ಸೇವೆ ಸಲ್ಲಿಸುತ್ತಾ ಸಾರ್ವಜನಿಕ ಆರೋಗ್ಯ ಜಾಗೃತಿ ಮತ್ತು ಸಮುದಾಯ ಸಂಘಟನೆಯಲ್ಲಿ ಕೊಡುಗೆ ನೀಡುತ್ತಿದ್ದಾರೆ.

ನೀರಿನ ಗುಣಮಟ್ಟದ ಮೇಲ್ವಿಚಾರಣೆ ಮತ್ತು ಸಮುದಾಯದ ಸಹಭಾಗಿತ್ವದಲ್ಲಿ ಅವರ ತೊಡಗಿಸಿಕೊಳ್ಳುವಿಕೆಯು, ಗ್ರಾಮದಲ್ಲಿ ಸುರಕ್ಷಿತ ಕುಡಿಯುವ ನೀರಿನ ನಿರ್ವಹಣೆಯನ್ನು ಬಲಪಡಿಸಲು ಸಹಕಾರಿಯಾಗಿದೆ.

ಸಿಕ್ಕಿಂನಲ್ಲಿ ಸ್ವಾವಲಂಬಿ ಜಲ ನಿರ್ವಹಣೆಗೆ ಮುನ್ನುಡಿ ಬರೆದ ಸಮುದಾಯ ನಾಯಕತ್ವ

ಸಿಕ್ಕಿಂನಲ್ಲಿ, ಇಬ್ಬರು ಮಹಿಳಾ ಸರ್ಪಂಚರು ತಮ್ಮ ಹಳ್ಳಿಗಳನ್ನು ಸ್ವಾವಲಂಬಿ ಜಲ ನಿರ್ವಹಣೆಯತ್ತ ಕೊಂಡೊಯ್ಯಲು ನೆರವಾಗಿದ್ದಾರೆ. ಸರ್ಕಾರದ ಗ್ರಾಮೀಣ ನಳದ ನೀರು ಸರಬರಾಜು ಯೋಜನೆಯು ಅವರ ಹಳ್ಳಿಗಳನ್ನು ತಲುಪಿದಾಗ, ಶೀಲಾ ಸುಬ್ಬಾ ಮತ್ತು ಪುಷ್ಪಾ ಸಿಂಚುರಿ ಅವರು ಆರಂಭದಲ್ಲಿಯೇ ಈ ಪ್ರಯತ್ನದಲ್ಲಿ ಕೈಜೋಡಿಸಿ ನಿವಾಸಿಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ಪ್ರಾರಂಭಿಸಿದರು.

ಅವರು ತಮ್ಮ ಗ್ರಾಮಗಳ ವಿವಿಧ ವಾರ್ಡ್‌ಗಳಿಗೆ ಮತ್ತು ಮನೆ ಮನೆಗಳಿಗೆ ಭೇಟಿ ನೀಡಿ, ವಿಶ್ವಾಸಾರ್ಹ ಕುಡಿಯುವ ನೀರಿನ ಮಹತ್ವ ಮತ್ತು ಅದರಲ್ಲಿ ಸಮುದಾಯದ ಪಾತ್ರದ ಅಗತ್ಯವನ್ನು ವಿವರಿಸಿದರು. ಗ್ರಾಮಸ್ಥರು ಚರ್ಚೆ ಮತ್ತು ಯೋಜನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಂತೆ, ವ್ಯವಸ್ಥೆಯನ್ನು ಹೇಗೆ ಸುಸ್ಥಿತಿಯಲ್ಲಿಡಬೇಕು ಎಂಬ ಬಗ್ಗೆ ಅವರಲ್ಲಿ ಸಾಮೂಹಿಕ ಅರಿವು ಮೂಡಿತು. ಇದು ಪ್ರತಿ ಕುಟುಂಬವು ಬಳಕೆದಾರರ ಶುಲ್ಕವನ್ನು (User Charges) ನೀಡಲು ಸುಲಭವಾಯಿತು, ತನ್ಮೂಲಕ ಗ್ರಾಮಗಳು ತಮ್ಮದೇ ಆದ ನೀರು ಸರಬರಾಜು ವ್ಯವಸ್ಥೆಯನ್ನು ಸುಸ್ಥಿರವಾಗಿ ನಿರ್ವಹಿಸಲು ಸಾಧ್ಯವಾಯಿತು.

ದರಮ್‌ದಿನ್ ಬ್ಲಾಕ್ ಅಡಿಯಲ್ಲಿ ಬರುವ ರುಂಬುಕ್ ಜಿಪಿಯು ನಲ್ಲಿ, ಸರ್ಪಂಚ್ ಶೀಲಾ ಸುಬ್ಬಾ ಅವರು ಗ್ರಾಮದ ನೀರು ಸರಬರಾಜು ವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ಸಾರ್ವಜನಿಕರ ಸಕ್ರಿಯ ಸಹಭಾಗಿತ್ವವನ್ನು ಪ್ರೋತ್ಸಾಹಿಸಿದ್ದಾರೆ. ನಿಯಮಿತ ಸಭೆಗಳು ಮತ್ತು ಜಾಗೃತಿ ಕಾರ್ಯಕ್ರಮಗಳ ಮೂಲಕ, ಗ್ರಾಮಸ್ಥರು ಯೋಜನೆ ಮತ್ತು ನಿರ್ವಹಣಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಇಂದು, ಹಳ್ಳಿಯ ಎಲ್ಲಾ ಮನೆಗಳ ಜೊತೆಗೆ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳೂ ನಳದ ನೀರಿನ ಸಂಪರ್ಕವನ್ನು ಹೊಂದಿವೆ. ಸಮುದಾಯದ ಈ ಪಾತ್ರವು ನೀರು ಸರಬರಾಜು ವ್ಯವಸ್ಥೆಯ ಸುಗಮ ಕಾರ್ಯಾಚರಣೆಗೆ ಮತ್ತು ಯಾವುದೇ ಅಡಚಣೆಗಳು ಉಂಟಾದಾಗ ಅವುಗಳನ್ನು ಶೀಘ್ರವಾಗಿ ಪರಿಹರಿಸಲು ಸಹಾಯ ಮಾಡುತ್ತದೆ.

ಅಪ್ಪರ್ ತಾಂಬೊಂಗ್ ಜಿಪಿಯು ನಲ್ಲಿ, ಸರ್ಪಂಚ್ ಪುಷ್ಪಾ ಸಿಂಚುರಿ ಅವರು ಗ್ರಾಮದ ನೀರು ಸರಬರಾಜು ವ್ಯವಸ್ಥೆಯ ಆರ್ಥಿಕ ಸುಸ್ಥಿರತೆಯನ್ನು ಬಲಪಡಿಸುವತ್ತ ಗಮನಹರಿಸಿದ್ದಾರೆ. ಇಲ್ಲಿನ ಮನೆಗಳು ನಿಯಮಿತವಾಗಿ ಬಳಕೆದಾರರ ಶುಲ್ಕವನ್ನು ನೀಡುತ್ತವೆ ಮತ್ತು ಸಂಗ್ರಹವಾದ ಹಣವನ್ನು ದುರಸ್ತಿ ಹಾಗೂ ನಿರ್ವಹಣೆಗಾಗಿ ಪಾರದರ್ಶಕವಾಗಿ ಬಳಸಲಾಗುತ್ತದೆ. ಶಿಸ್ತಿನ ಆರ್ಥಿಕ ನಿರ್ವಹಣೆ, ಲಭ್ಯವಿರುವ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆ ಮತ್ತು ಸಮುದಾಯದ ಸಕ್ರಿಯ ಸಹಭಾಗಿತ್ವದಿಂದಾಗಿ, ಗ್ರಾಮವು ವಿಶ್ವಾಸಾರ್ಹ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿದೆ.

ಗ್ರಾಮಗಳಾದ್ಯಂತ ನಳದ ನೀರಿನ ಲಭ್ಯತೆಯ ವಿಸ್ತರಣೆ

ಜಾರ್ಖಂಡ್‌ನ ಕಾಂಚನಪುರ ಗ್ರಾಮ ಪಂಚಾಯತ್‌ನಲ್ಲಿ, ಮುಖಿಯಾ ಪಿಂಕಿ ರಾಣಾ ಅವರ ನೇತೃತ್ವದಲ್ಲಿ ಗ್ರಾಮೀಣ ಕುಡಿಯುವ ನೀರಿನ ಲಭ್ಯತೆಯನ್ನು ವಿಸ್ತರಿಸುವ ಪ್ರಯತ್ನಗಳು ಹಲವಾರು ಹಳ್ಳಿಗಳನ್ನು ತಲುಪಿವೆ.

ಪಿಂಕಿ ರಾಣಾ ಅವರ ಅಧಿಕಾರಾವಧಿಯಲ್ಲಿ, ಪಂಚಾಯತ್ ವ್ಯಾಪ್ತಿಯ ಹಲವಾರು ವಸತಿ ಪ್ರದೇಶಗಳಲ್ಲಿ ಶೇಕಡಾ 100ರಷ್ಟು 'ಕಾರ್ಯನಿರ್ವಹಿಸುವ ಮನೆ ನಳ ಸಂಪರ್ಕ' ಗುರಿಯನ್ನು ಸಾಧಿಸಲಾಯಿತು. ಈ ವಿಸ್ತರಣೆಯು ಕಾಂಚನಪುರ ಗ್ರಾಮದ 670 ಮನೆಗಳು, ಹೆತ್ಲಾಗ್‌ನ 384 ಮನೆಗಳು ಮತ್ತು ಗೋವಿಂದಪುರದ 357 ಮನೆಗಳನ್ನು ತಲುಪಿದೆ.

ಈ ಸಾಧನೆಯೊಂದಿಗೆ, ಈ ಹಳ್ಳಿಗಳಲ್ಲಿ ಪೈಪ್ ಮೂಲಕ ಕುಡಿಯುವ ನೀರಿನ ಸೇವೆಗಳ ಯಶಸ್ವಿ ವಿಸ್ತರಣೆಯನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ, ಪಂಚಾಯತ್ ಅನ್ನು 'ಹರ್ ಘರ್ ಜಲ್' (ಪ್ರತಿ ಮನೆಗೂ ನೀರು) ಪಂಚಾಯತ್ ಎಂದು ಗುರುತಿಸಲಾಗಿದೆ. ಮನೆಗಳು ನಿಯಮಿತವಾಗಿ ಬಳಕೆದಾರರ ಶುಲ್ಕವನ್ನು ನೀಡಲು ಪ್ರೋತ್ಸಾಹಿಸುವ ಪ್ರಯತ್ನಗಳನ್ನೂ ಮಾಡಲಾಗಿದೆ. ಈ ವಂತಿಗೆಗಳು ಕಾಲಾನಂತರದಲ್ಲಿ ನೀರು ಸರಬರಾಜು ವ್ಯವಸ್ಥೆಯ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಬೆಂಬಲ ನೀಡುತ್ತವೆ.

ಸಮುದಾಯದ ಸಹಭಾಗಿತ್ವದ ಮೂಲಕ ಗ್ರಾಮೀಣ ಜಲ ವ್ಯವಸ್ಥೆಗಳ ಸುಸ್ಥಿರತೆ

ಲಡಾಖ್, ಗುಜರಾತ್, ಜಾರ್ಖಂಡ್, ಕರ್ನಾಟಕ, ಉತ್ತರ ಪ್ರದೇಶ ಮತ್ತು ಸಿಕ್ಕಿಂನ ಉದಾಹರಣೆಗಳು ಗ್ರಾಮೀಣ ಕುಡಿಯುವ ನೀರಿನ ವ್ಯವಸ್ಥೆಗಳ ಕಾರ್ಯನಿರ್ವಹಣೆಯು ಮೂಲಸೌಕರ್ಯ ಮತ್ತು ಸ್ಥಳೀಯ ಸಹಭಾಗಿತ್ವದ ಸಂಯೋಜಿತ ಬಲವನ್ನು ಹೇಗೆ ಅವಲಂಬಿಸಿವೆ ಎಂಬುದನ್ನು ವಿವರಿಸುತ್ತವೆ. ಜಲ ಜೀವನ್ ಮಿಷನ್ ಅಡಿಯಲ್ಲಿ ನಿರ್ಮಿಸಲಾದ ಮೂಲಸೌಕರ್ಯಗಳ ಜೊತೆಗೆ, ಗ್ರಾಮ ಪಂಚಾಯತ್‌ಗಳು, ಮುಂಚೂಣಿ ಕಾರ್ಯಕರ್ತರು, ಮಹಿಳಾ ಗುಂಪುಗಳು, ತರಬೇತಿ ಪಡೆದ ಸ್ವಯಂಸೇವಕರು ಮತ್ತು ತಾಂತ್ರಿಕ ಸಿಬ್ಬಂದಿಗಳ ತೊಡಗಿಸಿಕೊಳ್ಳುವಿಕೆಯು ಗ್ರಾಮ ಮಟ್ಟದಲ್ಲಿ ಈ ವ್ಯವಸ್ಥೆಗಳ ದೈನಂದಿನ ಕಾರ್ಯನಿರ್ವಹಣೆಗೆ ಕೊಡುಗೆ ನೀಡುತ್ತದೆ. ಇಂತಹ ಸಹಭಾಗಿತ್ವದ ಮೂಲಕ, ಸಮುದಾಯಗಳು ಗ್ರಾಮೀಣ ನೀರು ಸರಬರಾಜು ಮೂಲಸೌಕರ್ಯಗಳ ಕಾರ್ಯಾಚರಣೆ, ನಿರ್ವಹಣೆ ಮತ್ತು ಮೇಲ್ವಿಚಾರಣೆಯನ್ನು ಬೆಂಬಲಿಸುತ್ತಿವೆ, ಇದು ದೇಶಾದ್ಯಂತದ ಮನೆಗಳಿಗೆ ಕುಡಿಯುವ ನೀರಿನ ಸೇವೆಗಳು ನಿರಂತರವಾಗಿ ತಲುಪುವುದನ್ನು ಖಚಿತಪಡಿಸಲು ಸಹಾಯ ಮಾಡುತ್ತಿದೆ.

References

Ministry of Jal Shakti

· https://www.pib.gov.in/PressReleasePage.aspx?PRID=2236518&reg=3&lang=2

· https://www.pib.gov.in/PressReleasePage.aspx?PRID=2236669&reg=3&lang=2

· https://www.pib.gov.in/PressReleasePage.aspx?PRID=2237015&reg=3&lang=1

Click here for pdf file

 

*****

(Features ID: 157832) आगंतुक पटल : 16
Provide suggestions / comments
इस विज्ञप्ति को इन भाषाओं में पढ़ें: English , Urdu , हिन्दी , Bengali , Malayalam
National Portal Of India
STQC Certificate