• Skip to Content
  • Sitemap
  • Advance Search
Economy

ಕ್ರಿಯಾಶೀಲ ಎಐ (AI in Action): ಭಾರತದ ದೈನಂದಿನ ಸವಾಲುಗಳಿಗೆ ಪ್ರಾಯೋಗಿಕ ಪರಿಹಾರಗಳನ್ನು ಪ್ರದರ್ಶಿಸುತ್ತಿರುವ ಸ್ಟಾರ್ಟ್‌ಅಪ್‌ಗಳು

Posted On: 20 FEB 2026 1:48PM

ಪೀಠಿಕೆ

ಭಾರತ್ ಮಂಟಪದಲ್ಲಿ 'ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026' ಮತ್ತೊಂದು ರೋಚಕ ದಿನಕ್ಕೆ ಸಾಕ್ಷಿಯಾಯಿತು. ಭೇಟಿ ನೀಡುವವರ ದಂಡೇ ಸಭಾಂಗಣಗಳತ್ತ ಹರಿದುಬರುತ್ತಿದ್ದು, ಸಂವಾದಗಳು ಚಿಗುರೊಡೆಯುತ್ತಿವೆ ಮತ್ತು ಆವರಣದಾದ್ಯಂತ ಅನಾವರಣಗೊಂಡಿರುವ ನವೀನ ಆವಿಷ್ಕಾರಗಳನ್ನು ಜನರು ಕುತೂಹಲದಿಂದ ಅನ್ವೇಷಿಸುತ್ತಿದ್ದಾರೆ.

ಪದರ್ಶನ ಮಳಿಗೆಗಳಲ್ಲಿನ ಆರಂಭಿಕ ಸಂವಾದಗಳಿಂದ ಹಿಡಿದು ನವೋದ್ಯಮಿಗಳು ಮತ್ತು ನೀತಿ ನಿರೂಪಕರ ನಡುವಿನ ಉತ್ಸಾಹಭರಿತ ಚರ್ಚೆಗಳವರೆಗೆ, ಇಡೀ ದಿನವು ಅತ್ಯಂತ ಚಟುವಟಿಕೆಯಿಂದ ಕೂಡಿತ್ತು. ನೇರ ಪ್ರಾತ್ಯಕ್ಷಿಕೆಗಳ ಸುತ್ತ ನೆರೆದಿದ್ದ ಸಣ್ಣ ಗುಂಪುಗಳು ಒಂದು ಪ್ರಮುಖ ಸಂದೇಶವನ್ನು ಉಲ್ಲೇಖಿಸಿತು: ಎಐ ಇನ್ನು ಮುಂದೆ ಕೇವಲ ಮೂಲಮಾದರಿಗಳಿಗೆ ಸೀಮಿತವಾಗಿಲ್ಲ, ಅದು ದೈನಂದಿನ ವ್ಯವಸ್ಥೆಗಳಲ್ಲಿ ತನ್ನ ಸ್ಥಾನವನ್ನು ಕಂಡುಕೊಳ್ಳುತ್ತಿದೆ.

ಹೊಸ ತಂತ್ರಜ್ಞಾನಗಳನ್ನು ಪ್ರಾಯೋಗಿಕ ಸಾರ್ವಜನಿಕ ಅನ್ವಯಿಕೆಗಳಾಗಿ ಪರಿವರ್ತಿಸುವಲ್ಲಿ ಸರ್ಕಾರವು ನೀಡುತ್ತಿರುವ ನಿರಂತರ ಒತ್ತು, ಕೃತಕ ಬುದ್ಧಿಮತ್ತೆಯಲ್ಲಿ ಹೇಗೆ ಪ್ರತಿಫಲಿಸುತ್ತಿದೆ ಎಂಬುದರ ಮೇಲೆ ಸಂಪೂರ್ಣ ಗಮನ ಕೇಂದ್ರೀಕೃತವಾಗಿತ್ತು. ಆವರಣದಾದ್ಯಂತ ಕೇವಲ ಆಲೋಚನೆಗಳನ್ನು ಪ್ರಸ್ತುತಪಡಿಸಲಿಲ್ಲ; ಬದಲಾಗಿ ಅವುಗಳನ್ನು ನೈಜ ಪ್ರಪಂಚದ ಅನ್ವಯಿಕೆಗಳ ಮೇಲೆ ಗಮನವಿಟ್ಟು ಪ್ರದರ್ಶಿಸಲಾಯಿತು, ಪರೀಕ್ಷಿಸಲಾಯಿತು ಮತ್ತು ಚರ್ಚಿಸಲಾಯಿತು.

ಈ ಶೃಂಗಸಭೆಯು ಕೇವಲ ಸಂವಾದವಾಗಿ ಉಳಿಯದೆ, ಪ್ರಾಯೋಗಿಕ ಮನೋಭಾವ ಮತ್ತು ಮುಕ್ತ ವಿನಿಮಯದ ಮೂಲಕ ಸಮಸ್ಯೆಗಳಿಗೆ ಪರಿಹಾರ ನೀಡುವ ವೇದಿಕೆಯಾಗಿ ವಿಕಸನಗೊಂಡಿತು. ಇಲ್ಲಿ ಆಲೋಚನೆಗಳನ್ನು ಸ್ಪಷ್ಟ ಮತ್ತು ಪ್ರಾಯೋಗಿಕ ಅನ್ವಯಿಕೆಗಳಾಗಿ ಪರಿವರ್ತಿಸಲಾಯಿತು. ಈ ಶೃಂಗಸಭೆಯು ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಟಾರ್ಟ್‌ಅಪ್‌ಗಳು, ಸಂಶೋಧಕರು, ಉದ್ಯಮದ ನಾಯಕರು ಮತ್ತು ನವೋದ್ಯಮಿಗಳನ್ನು ಒಂದೆಡೆ ಸೇರಿಸಿದೆ. ಎಐ ಸಂಶೋಧನೆಯನ್ನು ಸಾರಿಗೆ, ಶಿಕ್ಷಣ, ಆಡಳಿತ, ಮೂಲಸೌಕರ್ಯ ಮತ್ತು ಇತರ ಕ್ಷೇತ್ರಗಳಲ್ಲಿ ಬಳಸಬಹುದಾದ ಪ್ರಾಯೋಗಿಕ ಪರಿಹಾರಗಳನ್ನಾಗಿ ಪರಿವರ್ತಿಸುವ ರಾಷ್ಟ್ರೀಯ ಪ್ರಯತ್ನವನ್ನು ಇದು ಪ್ರತಿಬಿಂಬಿಸುತ್ತದೆ.

ಎಐ ಮೂಲಕ ತರಬೇತಿ

ಭೇಟಿ ನೀಡುವವರು ಪ್ರದರ್ಶನ ಸಭಾಂಗಣಕ್ಕೆ ಕಾಲಿಡುತ್ತಿದ್ದಂತೆ, ವಿದ್ಯಾರ್ಥಿಗಳ ಗುಂಪೊಂದು 'ಸ್ಟಡಿ ಡ್ಯಾಶ್‌ಬೋರ್ಡ್' ಅನ್ನು ಪ್ರದರ್ಶಿಸುತ್ತಿರುವ ಪರದೆಯ ಸುತ್ತ ನೆರೆದಿದ್ದಾರೆ.

ಈ ವೇದಿಕೆಯ ಹೆಸರು ಸಾಥಿ. ಇದು ಶಿಕ್ಷಣ ಸಚಿವಾಲಯ ಮತ್ತು ಐಐಟಿ ಕಾನ್ಪುರದ ಒಂದು ಉಪಕ್ರಮವಾಗಿದೆ. 2023 ರಲ್ಲಿ ಪ್ರಾರಂಭವಾದ ಈ ವೇದಿಕೆಯು ಎಂಟು ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (JEE, NEET, CLAT, ICAR, CUET, SSC, RRB ಮತ್ತು IBPS) ಸಂಪೂರ್ಣ ಉಚಿತವಾದ, ಎಐ-ಚಾಲಿತ ವೈಯಕ್ತಿಕ ಸಿದ್ಧತೆ ಮತ್ತು ಮಾರ್ಗದರ್ಶನ ಬೆಂಬಲವನ್ನು ಒದಗಿಸುತ್ತದೆ.

ಸಾಥಿ ವೇದಿಕೆಯು ಎಐ-ಆಧಾರಿತ ಸಂದೇಹ ಪರಿಹಾರ, ಅಧ್ಯಯನ ಯೋಜನೆ ಜನರೇಟರ್‌ಗಳು, ಗೊಂದಲ ಪತ್ತೆಹಚ್ಚುವ ಸಾಧನಗಳು ಮತ್ತು ಸ್ವಯಂಚಾಲಿತ ಪ್ರತಿಲಿಪಿ ಸಾರಾಂಶವನ್ನು  ನೀಡುತ್ತದೆ. ವಿದ್ಯಾರ್ಥಿಗಳು ಯಾವಾಗಲೂ ನಿಗದಿತ ಸಮಯದಲ್ಲೇ ಅಧ್ಯಯನ ಮಾಡುವುದಿಲ್ಲ ಎಂಬುದನ್ನು ಗುರುತಿಸಿ, ಅವರ ಅನುಕೂಲಕ್ಕೆ ತಕ್ಕಂತೆ ಕಲಿಯಲು ಸಹಾಯ ಮಾಡಲು ತಂಡವು ಎಐ-ಚಾಲಿತ ವೈಶಿಷ್ಟ್ಯಗಳನ್ನು ಸಂಯೋಜಿಸಿದೆ.

ಐಐಟಿ ಕಾನ್ಪುರದ ಸಾಫ್ಟ್‌ವೇರ್ ಇಂಜಿನಿಯರ್ ಆದ ಶ್ರೀ ಧ್ರುವ್ ಗಾರ್ಗ್ ಅವರು ವಿವರಿಸುವಂತೆ, “ವಿದ್ಯಾರ್ಥಿಗಳು ಯಾವಾಗಲೂ ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ಅಧ್ಯಯನ ಮಾಡುವುದಿಲ್ಲ ಎಂದು ನಾವು ಅರಿತುಕೊಂಡೆವು. ಆದ್ದರಿಂದ, ನಾವು ಎಐ ಕನ್ವೆನ್ಷನಲ್ ಟೂರ್, ಜನ್-ಝಡ್ ಕಲಿಯುವವರಿಗೆ ವಿಶೇಷವಾಗಿ ಸಹಕಾರಿಯಾದ ನಿಮೋನಿಕ್ಸ್ ಮತ್ತು ನೆನಪಿನ ಸಹಾಯಕಗಳು ಹಾಗೂ ಎಐ ವಿಶುವಲ್ ಪ್ರಾಬ್ಲಮ್ ಸಾಲ್ವರ್ ಅಂತಹ ವೈಶಿಷ್ಟ್ಯಗಳನ್ನು ಸೇರಿಸಿದ್ದೇವೆ. ಇದರಿಂದ ಅವರು ಮನೆಯಲ್ಲಿ ಕುಳಿತು ಯಾವುದೇ ಸಮಯದಲ್ಲಿ ಬೇಕಾದರೂ ಅಧ್ಯಯನ ಮಾಡಬಹುದು.”

ವಿದ್ಯಾರ್ಥಿಗಳು ತಾವು ಆರಿಸಿಕೊಂಡ ವಿಷಯಗಳಲ್ಲಿ ಲಭ್ಯವಿರುವ ಅಧ್ಯಯನದ ಅವಧಿಗೆ ಅನುಗುಣವಾಗಿ, ತಮಗೆ ಬೇಕಾದ ರೀತಿಯಲ್ಲಿ ವೈಯಕ್ತಿಕ ಅಧ್ಯಯನ ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳಬಹುದು. ಈ ವ್ಯವಸ್ಥೆಯು ಉಪನ್ಯಾಸಗಳ ಪ್ರತಿಲಿಪಿಗಳಿಂದ ಪ್ರಮುಖ ಸೂತ್ರಗಳು ಮತ್ತು ಸಾರಾಂಶಗಳನ್ನು ಹೊರತೆಗೆಯುತ್ತದೆ ಹಾಗೂ ವಿದ್ಯಾರ್ಥಿಗಳಿಗೆ ಪದೇ ಪದೇ ಉಂಟಾಗುವ ಪರಿಕಲ್ಪನಾ ಗೊಂದಲಗಳನ್ನು ಗುರುತಿಸಿ ಎತ್ತಿ ತೋರಿಸುತ್ತದೆ. ಪ್ರಸ್ತುತ ಈ ವಿಷಯಗಳು 13 ಭಾರತೀಯ ಭಾಷೆಗಳಲ್ಲಿ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಭಾಷೆಗಳಿಗೆ ವಿಸ್ತರಿಸುವ ಕೆಲಸ ನಡೆಯುತ್ತಿದೆ.

ಆಯ್ದ ಸರ್ಕಾರಿ ಶಾಲೆಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತಂದ ಆರಂಭಿಕ ಹಂತದಲ್ಲೇ ಆಶಾದಾಯಕ ಫಲಿತಾಂಶಗಳು ಕಂಡುಬಂದಿವೆ ಎಂದು ಶ್ರೀ ಗಾರ್ಗ್ ಅವರು ಒತ್ತಿಹೇಳಿದ್ದಾರೆ. ಇದರಲ್ಲಿ JEE ಪರೀಕ್ಷೆಯಲ್ಲಿ ಅರ್ಹತೆ ಪಡೆದವರ ಸಂಖ್ಯೆ ಶೇ. 50 ರಷ್ಟು ಮತ್ತು NEET ಪರೀಕ್ಷೆಯಲ್ಲಿ ಅರ್ಹತೆ ಪಡೆದವರ ಸಂಖ್ಯೆ ಶೇ. 80 ರಷ್ಟು ಹೆಚ್ಚಾಗಿದೆ. ಖಾಸಗಿ ಕೋಚಿಂಗ್ ಪಡೆಯಲು ಆರ್ಥಿಕ ಶಕ್ತಿಯಿಲ್ಲದ ವಿದ್ಯಾರ್ಥಿಗಳಿಗೆ ಈ ಸೌಲಭ್ಯವನ್ನು ತಲುಪಿಸುವುದರ ಮೇಲೆ ಹೆಚ್ಚಿನ ಗಮನಹರಿಸಲಾಗಿದೆ.

ಕ್ಯಾಮೆರಾಗಳನ್ನು ಎಐ ಆಧಾರಿತ ಬುದ್ಧಿವಂತ ವ್ಯವಸ್ಥೆಗಳಾಗಿ ಪರಿವರ್ತಿಸುವುದು

ಶಿಕ್ಷಣದ ನಂತರದ ಸ್ವಲ್ಪ ದೂರದ ನಡಿಗೆಯಲ್ಲಿ, ಸಂಭಾಷಣೆಯು ಕಣ್ಗಾವಲು ವ್ಯವಸ್ಥೆಗಳ ಕಡೆಗೆ ಹೊರಳುತ್ತದೆ.

ಗುರುಗ್ರಾಮ ಮೂಲದ ಹತ್ತು ವರ್ಷ ಹಳೆಯದಾದ 'iiris: Value Catalysts' ಮಳಿಗೆಯಲ್ಲಿ, ಭದ್ರತಾ ವಿನ್ಯಾಸ ವಿಭಾಗದ ವ್ಯವಸ್ಥಾಪಕರಾದ ಶ್ರೀ ಜಿಯಾ ಅಹ್ಮದ್ ಅವರು ಸಾಂಪ್ರದಾಯಿಕ ಭದ್ರತಾ ಪರಿಹಾರಗಳಲ್ಲಿ ಎಐ ಅನ್ನು ಅಳವಡಿಸುವ ಬಗ್ಗೆ ವಿವರಿಸಿದರು. "ನಿಮ್ಮಲ್ಲಿ ಒಂದು ಗೋದಾಮು ಅಥವಾ ರಿಯಲ್ ಎಸ್ಟೇಟ್ ಆಸ್ತಿ ಇದೆ ಎಂದು ಭಾವಿಸೋಣ. ನಾವು ಮೊದಲು ಅದರ ಸಮಗ್ರ ಭದ್ರತಾ ಅಪಾಯದ ಮೌಲ್ಯಮಾಪನ ಮಾಡುತ್ತೇವೆ ಮತ್ತು ಆಯಾ ಅವಶ್ಯಕತೆಗಳಿಗೆ ಅನುಗುಣವಾಗಿ ಎಐ ಆಧಾರಿತ ಭದ್ರತಾ ಪರಿಹಾರಗಳನ್ನು ವಿನ್ಯಾಸಗೊಳಿಸುತ್ತೇವೆ," ಎಂದು ಅವರು ಹೇಳುತ್ತಾರೆ.

ಹಾರ್ಡ್‌ವೇರ್‌ಗಳನ್ನು ಬದಲಿಸುವ ಬದಲು, 'iiris' ಸಂಸ್ಥೆಯು ಅಸ್ತಿತ್ವದಲ್ಲಿರುವ ಸಾಂಪ್ರದಾಯಿಕ ಕ್ಯಾಮೆರಾ ವ್ಯವಸ್ಥೆಗಳಿಗೆ ಎಐ ಚಾಲಿತ ಸಾಫ್ಟ್‌ವೇರ್ ಮೂಲಕ ಶಕ್ತಿ ತುಂಬುತ್ತದೆ. "ಹಿಂದೆ, ಕಣ್ಗಾವಲು ವ್ಯವಸ್ಥೆಗಳು ಸಂಪೂರ್ಣವಾಗಿ ಮನುಷ್ಯರ ಮೇಲ್ವಿಚಾರಣೆಯನ್ನೇ ಅವಲಂಬಿಸಿದ್ದವು. ಯಾವುದಾದರೂ ಘಟನೆ ನಡೆದರೆ, ಇಡೀ ರೆಕಾರ್ಡಿಂಗ್ ಅನ್ನು ಮೊದಲಿನಿಂದ ಪರಿಶೀಲಿಸಬೇಕಿತ್ತು. ಇದು ಸಮಯ ಮತ್ತು ಶ್ರಮ ಎರಡನ್ನೂ ಹೆಚ್ಚು ವ್ಯಯ ಮಾಡುತ್ತಿತ್ತು," ಎಂದು ಅವರು ಬೆಟ್ಟು ಮಾಡಿದರು.

ಶ್ರೀ ಅಹ್ಮದ್ ಅವರು ಮುಂದುವರಿದು ವಿವರಿಸುತ್ತಾರೆ: "ಈಗ, ಎಐ ಚಾಲಿತ ಪರಿಕರಗಳೊಂದಿಗೆ, ಒಂದೇ ಒಂದು ಕಮಾಂಡ್ ನೀಡುವ ಮೂಲಕ ಎಲ್ಲಾ ಸಂಬಂಧಿತ ಮಾಹಿತಿಯನ್ನು ಒಮ್ಮೆಗೇ ಪಡೆಯಬಹುದು. ಬಟ್ಟೆಯ ಬಣ್ಣ ಅಥವಾ ಸಮಯದ ಅವಧಿಯಂತಹ ಗುಣಲಕ್ಷಣಗಳ ಆಧಾರದ ಮೇಲೆ ಕ್ಷಣಾರ್ಧದಲ್ಲಿ ವಿಡಿಯೋ ತುಣುಕುಗಳನ್ನು ಶೋಧಿಸಿ ಪಡೆಯಬಹುದು. ಅಲ್ಲದೆ, ಕ್ಯಾಮೆರಾಗಳು, ಮೋಷನ್ ಸೆನ್ಸರ್‌ಗಳು ಮತ್ತು ಇತರ ಸಾಧನಗಳನ್ನು ಪರಸ್ಪರ ಜೋಡಿಸುವುದರಿಂದ, ಯಾವುದೇ ಅಪಾಯದ ಸೂಚನೆ ದೊರೆತಾಗ ನೈಜ ಸಮಯದಲ್ಲಿ  ಎಚ್ಚರಿಕೆಗಳನ್ನು ನೀಡುತ್ತದೆ. ಇದು ಭದ್ರತಾ ಕ್ರಮಗಳ ವೇಗ ಮತ್ತು ದಕ್ಷತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ."

ಈ ಸಂಸ್ಥೆಯು ಪ್ರಸ್ತುತ ಮಥುರಾದಲ್ಲಿರುವ ವಿಶ್ವದ ಅತಿ ಎತ್ತರದ ದೇವಾಲಯವಾದ ಬೃಂದಾವನ ಚಂದ್ರೋದಯ ಮಂದಿರ ಸೇರಿದಂತೆ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಭದ್ರತಾ ಅಪಾಯದ ಮೌಲ್ಯಮಾಪನಗಳನ್ನು ನಡೆಸುತ್ತಿದೆ. ಅನುಭವಿ ವೃತ್ತಿಪರರು ಎಐ ಬಳಸಿ ವ್ಯವಸ್ಥಿತವಾಗಿ ಅಪಾಯವನ್ನು ತಗ್ಗಿಸುವುದರ ಮೇಲೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಎಂದು ಶ್ರೀ ಅಹ್ಮದ್ ತಿಳಿಸಿದ್ದಾರೆ.

ಹಳಿಗಳು ಹದಗೆಡುವ ಮುನ್ನವೇ ಕಣ್ಗಾವಲು

'ರೈಲ್‌ಲ್ಯಾಬ್ಸ್: ರೈಲ್ವೆ ಡಿಜಿಟಲ್ ಸೇಫ್ಟಿ' ಸಂಸ್ಥೆಯ ಸಹ-ಸಂಸ್ಥಾಪಕರಾದ ಶ್ರೀ ಸುಮಿತ್ ಆನಂದ್ ಅವರು, ಸ್ವಾಯತ್ತ ಟ್ರ್ಯಾಕ್ ತಪಾಸಣಾ ರೋಬೋಟ್ ಆಗಿರುವ 'ಅರಿಸ್ಟಾ' (Arista) ವನ್ನು ಹೆಮ್ಮೆಯಿಂದ ಪರಿಚಯಿಸುತ್ತಾರೆ. ರೈಲ್‌ಲ್ಯಾಬ್ಸ್‌ನ ಈ 'ಅರಿಸ್ಟಾ', ಸ್ವಾಯತ್ತ ಹಾಗೂ ಎಐ-ಚಾಲಿತ ತಪಾಸಣಾ ಸಾಮರ್ಥ್ಯಗಳ ಮೂಲಕ ರೈಲ್ವೆ ಹಳಿಗಳ ನಿರ್ವಹಣೆಯಲ್ಲಿ ಕ್ರಾಂತಿ ಉಂಟುಮಾಡುತ್ತಿದೆ.

ಅವರು ವಿವರಿಸುವಂತೆ, “ಇದಕ್ಕೆ ಅದರ ಸುತ್ತಮುತ್ತಲಿನ ಪರಿಸರದ ಆಧಾರದ ಮೇಲೆ ತರಬೇತಿ ನೀಡಲಾಗಿದೆ. ರೈಲ್ವೆ ಹಳಿಗಳಲ್ಲಿನ ಮೇಲ್ಮೈ ಹಂತದ ಮತ್ತು ಆಂತರಿಕ ಬಿರುಕುಗಳನ್ನು ಪತ್ತೆಹಚ್ಚಲು ನಾವು ಪ್ರಮುಖವಾಗಿ ಅಲ್ಟ್ರಾಸಾನಿಕ್ ದೋಷ ಪತ್ತೆ ತಂತ್ರಜ್ಞಾನವನ್ನು ಬಳಸುತ್ತೇವೆ.” ಈ ರೋಬೋಟ್ ಹಳಿಗಳ ಪ್ರೊಫೈಲಿಂಗ್‌ಗಾಗಿ ಲೇಸರ್‌ಗಳನ್ನು ಮತ್ತು ಬಿರುಕುಗಳನ್ನು ಪತ್ತೆಹಚ್ಚಲು ಎಐ-ಆಧಾರಿತ ದೃಶ್ಯ ಕ್ಯಾಮೆರಾಗಳನ್ನು ಬಳಸುತ್ತದೆ. ಶ್ರೀ ಆನಂದ್ ಅವರು ಮುಂದೆ ವಿವರಿಸುತ್ತಾ, “ಒಂದು ವೇಳೆ ಹಳಿಯ ಫಿಶ್ ಪ್ಲೇಟ್‌ಗಳು ಇಲ್ಲದಿದ್ದರೆ, ಬೋಲ್ಟ್‌ಗಳು ಕಳಚಿಕೊಂಡಿದ್ದರೆ ಅಥವಾ ಇತರ ಯಾವುದೇ ರಚನಾತ್ಮಕ ದೋಷಗಳಿದ್ದರೆ, ಈ ವ್ಯವಸ್ಥೆಯು ಅವುಗಳನ್ನೆಲ್ಲ ಪತ್ತೆಹಚ್ಚುತ್ತದೆ,” ಎಂದರು.

“ಇದು ಪ್ರಸ್ತುತ ಚಾಲ್ತಿಯಲ್ಲಿರುವ ಮಾನವ ಚಾಲಿತ ತಪಾಸಣಾ ವಿಧಾನಗಳಿಗಿಂತ ತಪಾಸಣಾ ದಕ್ಷತೆಯನ್ನು ಶೇಕಡಾ 200 ರಷ್ಟು ಹೆಚ್ಚಿಸುತ್ತದೆ,” ಎಂದು ಅವರು ತಿಳಿಸಿದರು.

ಅಲ್ಲೇ ಹತ್ತಿರದಲ್ಲಿ ನಿಂತಿದ್ದ ರೈಲ್‌ಲ್ಯಾಬ್ಸ್‌ನ ಕಾರ್ಯಾಚರಣಾ ವ್ಯವಸ್ಥಾಪಕರಾದ ಶ್ರೀ ನಿಶ್ಚಲ್ ರಂಜನ್ ಅವರು ಈಗಾಗಲೇ ಮಾರುಕಟ್ಟೆಯಲ್ಲಿರುವ 'ಚಕ್ರವ್ಯೂಹ' ಎಂಬ ಮತ್ತೊಂದು ಉತ್ಪನ್ನವನ್ನು ವಿವರಿಸಿದರು. ಅವರ ಪ್ರಕಾರ, ಇದು ರೈಲು ಅಥವಾ ಕೋಚ್‌ನ ಚಕ್ರಗಳು ಚಿಪ್ ಆಗುವ ಅಥವಾ ಸವೆಯುವ ಸಾಧ್ಯತೆಯನ್ನು ಮೊದಲೇ ಊಹಿಸುವ ವ್ಯವಸ್ಥೆಯಾಗಿದ್ದು, ಹಳಿ ತಪ್ಪುವಿಕೆಯನ್ನು  ತಡೆಯುತ್ತದೆ. ಈ ಉತ್ಪನ್ನವು ಈಗಾಗಲೇ ಮುಂಬೈ, ಅಗರ್ತಲಾ ಮತ್ತು ರಾಂಚಿ ಸೇರಿದಂತೆ ವಿವಿಧ ನಗರಗಳ 20 ಎಲ್‌ಎಚ್‌ಬಿ  ಮತ್ತು ತೇಜಸ್ ಕೋಚ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಅವರು ಹೇಳುತ್ತಾರೆ, "ಚಕ್ರಗಳ ದೋಷಗಳು ಸಂಭವಿಸುವ ಮೊದಲೇ ಅವುಗಳನ್ನು ಗುರುತಿಸುವ ಮೂಲಕ, ಈ ವ್ಯವಸ್ಥೆಯು ಮುನ್ನೆಚ್ಚರಿಕೆ ರೈಲ್ವೆ ಸುರಕ್ಷತೆಯನ್ನು ಬಲಪಡಿಸುತ್ತದೆ." ಈ ತಂಡದ ಪಾಲಿಗೆ ಡಿಜಿಟಲ್ ಸುರಕ್ಷತೆಯೆಂದರೆ ಮಾನವ ಮೇಲ್ವಿಚಾರಣೆಯನ್ನು ಬದಲಿಸುವುದಲ್ಲ, ಬದಲಾಗಿ ನಿಖರತೆಯೊಂದಿಗೆ ಅದನ್ನು ಇನ್ನಷ್ಟು ಸದೃಢಗೊಳಿಸುವುದು. "ಎರಡು ಮಿಲಿಮೀಟರ್‌ಗಿಂತ ದೊಡ್ಡದಾದ ಬಿರುಕು ಕೂಡ ಅಪಾಯಕಾರಿಯಾಗಬಹುದು," ಎಂದು ಹೇಳುತ್ತಾ, ಆರಂಭಿಕ ಪತ್ತೆಹಚ್ಚುವಿಕೆಯು ಕೇವಲ ತಾಂತ್ರಿಕ ಐಷಾರಾಮಿಯಲ್ಲ, ಬದಲಾಗಿ ಸುರಕ್ಷತೆಯ ಅನಿವಾರ್ಯತೆ ಎಂದು ಅವರು ವಿವರಿಸಿದರು.

ಒಟ್ಟಾರೆಯಾಗಿ ಈ ಉತ್ಪನ್ನಗಳು ಆರಂಭಿಕ ಪತ್ತೆಹಚ್ಚುವಿಕೆ ಮತ್ತು ಹಳಿ ತಪ್ಪುವುದನ್ನು ತಡೆಯುವ ಮೂಲಕ ರೈಲ್ವೆಯ ಸುರಕ್ಷತಾ ವ್ಯವಸ್ಥೆಯನ್ನು ಗಮನಾರ್ಹವಾಗಿ ಸುಧಾರಿಸುವ ಭರವಸೆ ನೀಡುತ್ತವೆ. ಇಂತಹ ಪ್ರಾಯೋಗಿಕ ಸನ್ನಿವೇಶಗಳಲ್ಲಿ ಎಐ  ಬಳಕೆ ಮಾಡುವುದರಿಂದ ನೈಜ ಜೀವನದಲ್ಲಿ ಉತ್ತಮ ಗುಣಮಟ್ಟದ ಫಲಿತಾಂಶಗಳನ್ನು ಪಡೆಯಬಹುದು.

ಈ ಕಥೆಗಳ ಸುತ್ತ ಎಐ ಶೃಂಗಸಭೆಯು ಕ್ರಮೇಣ ವೇಗವನ್ನು ಪಡೆದುಕೊಳ್ಳುತ್ತಿದೆ. ಸಭಾಂಗಣದಾದ್ಯಂತ ಪರದೆಗಳು ಬೆಳಗುತ್ತಿವೆ. ಪ್ರಾತ್ಯಕ್ಷಿಕೆ ಘಟಕಗಳು ಮೃದುವಾಗಿ ಶಬ್ದ ಮಾಡುತ್ತಿವೆ. ನೀತಿ ನಿರೂಪಕರು, ವಿದ್ಯಾರ್ಥಿಗಳು, ತಂತ್ರಜ್ಞರು ಮತ್ತು ಉದ್ಯಮದ ಪ್ರತಿನಿಧಿಗಳು ಮಳಿಗೆಗಳ ನಡುವೆ ಸಂಚರಿಸುತ್ತಾ, ಪ್ರಶ್ನೆಗಳನ್ನು ಕೇಳಲು ಮತ್ತು ನೇರ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಲು ಅಲ್ಲಿಲ್ಲಿ ನಿಲ್ಲುತ್ತಿದ್ದಾರೆ.

ಉಪಸಂಹಾರ

ಸಂಜೆ ಹತ್ತಿರವಾಗುತ್ತಿದ್ದಂತೆ ಮತ್ತು ಸಭಾಂಗಣದ ದೀಪಗಳು ಮಂದವಾಗುತ್ತಿದ್ದಂತೆ, ಭೇಟಿ ನೀಡುವವರು ಇನ್ನೂ ಅಲ್ಲೇ ಉಳಿದು ಇಂಟರ್ಫೇಸ್‌ಗಳನ್ನು ಪರಿಶೀಲಿಸುತ್ತಾ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಈ ಶೃಂಗಸಭೆಯು ತಕ್ಷಣದ ಬದಲಾವಣೆಯ ಭರವಸೆ ನೀಡುವುದಿಲ್ಲ. ಬದಲಾಗಿ, ದೈನಂದಿನ ಜೀವನವನ್ನು ರೂಪಿಸುವ ಕ್ಷೇತ್ರಗಳಲ್ಲಿ ಬುದ್ಧಿವಂತ ವ್ಯವಸ್ಥೆಗಳ (intelligent systems) ಸ್ಥಿರವಾದ ಏಕೀಕರಣವನ್ನು ಇದು ಪ್ರತಿಬಿಂಬಿಸುತ್ತದೆ. ಸಾರಿಗೆ ಕಾರಿಡಾರ್‌ಗಳು, ದೇವಾಲಯದ ಸಂಕೀರ್ಣಗಳು, ತರಗತಿಗಳು ಮತ್ತು ಇನ್ನೂ ಅನೇಕ ಕಡೆಗಳಲ್ಲಿ, ದಕ್ಷತೆ, ಲಭ್ಯತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಎಐ ಅನ್ನು ಅಸ್ತಿತ್ವದಲ್ಲಿರುವ ಚೌಕಟ್ಟುಗಳಿಗೆ ಸೇರಿಸಲಾಗುತ್ತಿದೆ.

ಆ ಹಂತ ಹಂತದ ಏಕೀಕರಣದಲ್ಲೇ ಭಾರತದ ಅಭಿವೃದ್ಧಿ ಪಯಣದಲ್ಲಿ ಎಐನ ಅಚಲ ಭರವಸೆ ಅಡಗಿದೆ.

References

Others

https://impact.indiaai.gov.in/

Click here to see PDF

 

*****

 

(Features ID: 157519) आगंतुक पटल : 12
Provide suggestions / comments
इस विज्ञप्ति को इन भाषाओं में पढ़ें: English , हिन्दी , Bengali , Malayalam
Link mygov.in
National Portal Of India
STQC Certificate