ರೈಲ್ವೇ ಸಚಿವಾಲಯ
ಮುಕುಟ್ ಬನ್ (ಆದಿಲಾಬಾದ್) ಮತ್ತು ಗಡ್ ಚಂದೂರ್ ನಡುವೆ 38.21 ಕಿ.ಮೀ ಹೊಸ ರೈಲು ಮಾರ್ಗಕ್ಕಾಗಿ ಭಾರತೀಯ ರೈಲ್ವೆಯಿಂದ ₹493 ಕೋಟಿ ಅನುಮೋದನೆ
ಹೊಸ ಮಾರ್ಗವು ಕಡಿಮೆ ದೂರದ ರೈಲು ಸಂಪರ್ಕವನ್ನು ಒದಗಿಸಲಿದೆ, ಸರಕು ಸಾಗಣೆ ಸಂಪರ್ಕವನ್ನು ಬಲಪಡಿಸಲಿದೆ ಮತ್ತು ಕೈಗಾರಿಕಾ ಹಾಗೂ ಗಣಿಗಾರಿಕೆ ಅಭಿವೃದ್ಧಿಗೆ ಅನುಕೂಲಕರವಾಗಲಿದೆ
ಪ್ರಕಟಣಾ ದಿನಾಂಕ:
18 SEP 2026 11:23AM by PIB Bengaluru
ಪ್ರಾದೇಶಿಕ ರೈಲು ಸಂಪರ್ಕವನ್ನು ಬಲಪಡಿಸುವ ಮತ್ತು ಪ್ರಯಾಣಿಕರು ಹಾಗೂ ಸರಕುಗಳ ವೇಗದ ಮತ್ತು ಹೆಚ್ಚು ಪರಿಣಾಮಕಾರಿ ಸಂಚಾರವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿ, ದಕ್ಷಿಣ ಮಧ್ಯ ರೈಲ್ವೆಯ ಮುಕುಟ್ ಬನ್ (ಆದಿಲಾಬಾದ್) ಮತ್ತು ಗಡ್ ಚಂದೂರ್ ನಡುವಿನ 38.21 ಕಿ.ಮೀ ಹೊಸ ರೈಲು ಮಾರ್ಗದ ನಿರ್ಮಾಣಕ್ಕೆ ಭಾರತೀಯ ರೈಲ್ವೆಯು ₹493 ಕೋಟಿ ವೆಚ್ಚದಲ್ಲಿ ಅನುಮೋದನೆ ನೀಡಿದೆ.
ಕೈಗಾರಿಕಾ ಮತ್ತು ಗಣಿಗಾರಿಕೆ ಕೇಂದ್ರಗಳಿಗೆ ಸಂಪರ್ಕವನ್ನು ಬಲಪಡಿಸುವುದು
ಯವತ್ಮಾಲ್ ಜಿಲ್ಲೆಯ ಮುಕುಟ್ ಬನ್ ಮತ್ತು ಚಂದ್ರಾಪುರ ಜಿಲ್ಲೆಯ ಗಡ್ ಚಂದೂರ್ ಪ್ರಮುಖ ಕೈಗಾರಿಕಾ ಮತ್ತು ಗಣಿಗಾರಿಕೆ ಕೇಂದ್ರಗಳಾಗಿದ್ದು, ಹಲವಾರು ಸಿಮೆಂಟ್ ಕಾರ್ಖಾನೆಗಳು, ವೆಸ್ಟರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ ನ ಕಲ್ಲಿದ್ದಲು ಗಣಿಗಳು ಮತ್ತು ಹತ್ತಿರದ ಸುಣ್ಣದಕಲ್ಲು ಗಣಿಗಳಿಗೆ ಸೇವೆಯನ್ನು ಒದಗಿಸುತ್ತಿವೆ. ಈ ಹೊಸ ರೈಲು ಮಾರ್ಗವು ಈ ಕೈಗಾರಿಕಾ ಪ್ರದೇಶಗಳಿಗೆ ರೈಲು ಸಂಪರ್ಕವನ್ನು ಬಲಪಡಿಸುತ್ತದೆ ಮತ್ತು ಸರಕು ಸಾಗಾಣಿಕೆಯನ್ನು ಪರಿಣಾಮಕಾರಿ ಮತ್ತು ಸುಲಭಗೊಳಿಸುತ್ತದೆ.
ಸರಕು ಸಾಗಾಣಿಕೆಯನ್ನು ಸುಧಾರಿಸಲು ಮತ್ತು ಪ್ರಸ್ತುತ ಜಾಲದ ದಟ್ಟಣೆಯನ್ನು ಕಡಿಮೆ ಮಾಡಲು ಕಡಿಮೆ ದೂರದ ಮಾರ್ಗ
ಹೊಸ ರೈಲು ಮಾರ್ಗವು ಕಡಿಮೆ ಅಂತರದ ಮತ್ತು ಹೆಚ್ಚು ಪರಿಣಾಮಕಾರಿ ರೈಲು ಮಾರ್ಗವನ್ನು ಒದಗಿಸುತ್ತದೆ, ಪ್ರಯಾಣದ ದೂರ, ಸಾರಿಗೆ ಸಮಯ ಮತ್ತು ಸಂಬಂಧಿತ ವೆಚ್ಚಗಳನ್ನು ಕಡಿಮೆ ಮಾಡುತ್ತದೆ. ಇದು ಪ್ರಸ್ತುತ ಇರುವ ವಾರ್ಧಾ-ಮಾಣಿಕ್ ಗಢ ವಿಭಾಗದ ದಟ್ಟಣೆಯನ್ನು ಕಡಿಮೆ ಮಾಡಲು ಪರ್ಯಾಯ ಮಾರ್ಗವನ್ನು ಒದಗಿಸುತ್ತದೆ ಮತ್ತು ಸರಕು ಸಾಗಾಣಿಕೆಯ ಸುಗಮ ಸಂಚಾರಕ್ಕೆ ಸಹಕಾರಿಯಾಗುತ್ತದೆ.
ವಿವರವಾದ ಯೋಜನಾ ವರದಿಯ (ಡಿಪಿಆರ್) ಪ್ರಕಾರ, ಈ ಯೋಜನೆಯು ಕಾರ್ಯಾರಂಭ ಮಾಡಿದ ನಂತರ ದಿನಕ್ಕೆ ಎರಡೂ ದಿಕ್ಕುಗಳಲ್ಲಿ ಎರಡು ಮೆಮು ರೈಲುಗಳ ಜೊತೆಗೆ 6.08 ಎಂ.ಟಿ.ಪಿ.ಎ. ಸರಕು ಸಾಗಾಣಿಕೆಗೆ ಬೆಂಬಲ ನೀಡುವ ನಿರೀಕ್ಷೆಯಿದೆ. ಸರಕು ಸಾಗಾಣಿಕೆಯಲ್ಲಿ ಕಲ್ಲಿದ್ದಲು ಮತ್ತು ಕೋಕ್, ಸಿಮೆಂಟ್, ಸ್ಪಾಂಜ್ ಐರನ್, ಲೋಹದ ತ್ಯಾಜ್ಯ (ಮೆಟಲ್ ಸ್ಕ್ರ್ಯಾಪ್), ಕಬ್ಬಿನ ಮತ್ತು ಉಕ್ಕು, ರಸಗೊಬ್ಬರಗಳು ಹಾಗೂ ಆಹಾರ ಧಾನ್ಯಗಳು ಸೇರಿರುತ್ತವೆ.
ಮಾಜ್ರಿ-ನಾಂದೇಡ್ ಮಾರ್ಗ ಮತ್ತು ಪ್ರಮುಖ ಸ್ಥಳಗಳಿಗೆ ನೇರ ಸಂಪರ್ಕ
ಈ ಹೊಸ ಮಾರ್ಗವು ಕಲ್ಲಿದ್ದಲು ಮತ್ತು ಸಿಮೆಂಟ್ ಪ್ರದೇಶಗಳು ಹಾಗೂ ಮಾಜ್ರಿ-ನಾಂದೇಡ್ ಮಾರ್ಗದ ನಡುವೆ ನೇರ ಸಂಪರ್ಕವನ್ನು ಒದಗಿಸುತ್ತದೆ, ಮಹಾರಾಷ್ಟ್ರ ಮತ್ತು ಕರ್ನಾಟಕದ ಜಾಲ್ನಾ, ಪರ್ಭಾಣಿ, ಛತ್ರಪತಿ ಸಂಭಾಜಿನಗರ ಮತ್ತು ಇತರ ತಾಣಗಳ ಕಡೆಗೆ ಕಲ್ಲಿದ್ದಲು, ಸಿಮೆಂಟ್ ಮತ್ತು ಆರ್ ಎಂ ಎಸ್ ಪಿ ಸಾಗಾಣಿಕೆಗೆ ಕಡಿಮೆ ದೂರದ ಮಾರ್ಗಗಳನ್ನು ಸುಲಭಗೊಳಿಸುತ್ತದೆ.
ದಟ್ಟಣೆಯಿಂದ ಕೂಡಿದ ಬಲ್ಹಾರ್ಷಾ-ನಾಗ್ಪುರ ಮಾರ್ಗದ ಮೇಲಿನ ಅವಲಂಬನೆ ತಗ್ಗಿಸುವುದು
ಈ ಯೋಜನೆಯು ಹೆಚ್ಚು ದಟ್ಟಣೆಯಿಂದ ಕೂಡಿದ ಬಲ್ಹಾರ್ಷಾ-ನಾಗ್ಪುರ ಅಧಿಕೆ ದಟ್ಟಣೆಯ ಜಾಲ (ಎಚ್ ಡಿ ಎನ್) ಮಾರ್ಗದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ, ಜೊತೆಗೆ ಯವತ್ಮಾಲ್ ಮತ್ತು ಚಂದ್ರಾಪುರ ಜಿಲ್ಲೆಗಳ ಕಡಿಮೆ ಸಂಪರ್ಕ ಹೊಂದಿರುವ ಪ್ರದೇಶಗಳಿಗೆ ರೈಲು ಸಂಪರ್ಕವನ್ನು ಹೆಚ್ಚಿಸುತ್ತದೆ. ಇದು ಸುಧಾರಿತ ರೈಲು ಮೂಲಸೌಕರ್ಯಗಳ ಮೂಲಕ ಈ ಭಾಗದ ಕೈಗಾರಿಕಾ ಮತ್ತು ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
ಪ್ರಾದೇಶಿಕ ರೈಲು ಮೂಲಸೌಕರ್ಯವನ್ನು ಬಲಪಡಿಸುವುದು
ಹೊಸ ರೈಲು ಮಾರ್ಗವು ಪ್ರಾದೇಶಿಕ ರೈಲ್ವೆ ಜಾಲಕ್ಕೆ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ಅತ್ಯಗತ್ಯ ಸರಕುಗಳ ಸಾಗಾಣಿಕೆಯನ್ನು ಸುಲಭಗೊಳಿಸುತ್ತದೆ ಮತ್ತು ಬೆಳೆಯುತ್ತಿರುವ ಸರಕು ಹಾಗೂ ಪ್ರಯಾಣಿಕರ ಅಗತ್ಯಗಳಿಗಾಗಿ ಹೆಚ್ಚುವರಿ ರೈಲು ಕಾರಿಡಾರ್ ಅನ್ನು ಒದಗಿಸುತ್ತದೆ. ಈ ಯೋಜನೆಯು ಪ್ರಸ್ತುತ ಇರುವ ರೈಲ್ವೆ ಜಾಲದ ಅತ್ಯಂತ ಪರಿಣಾಮಕಾರಿ ಬಳಕೆಗೆ ಕೊಡುಗೆ ನೀಡುವುದರ ಜೊತೆಗೆ ಪ್ರಾದೇಶಿಕ ಕೈಗಾರಿಕಾ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಬೆಂಬಲ ನೀಡುವ ನಿರೀಕ್ಷೆಯಿದೆ.
*****
(ಪ್ರಕಟಣೆ ಐ.ಡಿ.: 2311892)
ವಿಸಿಟರ್ ಕೌಂಟರ್ : 16