ಕೃಷಿ ಸಚಿವಾಲಯ
azadi ka amrit mahotsav

ಪುನರುತ್ಪಾದಕ ಕೃಷಿಯಡಿ ಭಾರತದ ಮೊದಲ ಮಣ್ಣಿನ ಇಂಗಾಲ ಪಾವತಿಯಲ್ಲಿ ರೈತರನ್ನು ಕೇಂದ್ರ ಸ್ಥಾನದಲ್ಲಿರಿಸಿದ ಕೇಂದ್ರ ಸರ್ಕಾರ


ಪಂಜಾಬ್ ಮತ್ತು ಹರಿಯಾಣದ 2,500ಕ್ಕೂ ಅಧಿಕ ರೈತರಿಗೆ ₹2.9 ಕೋಟಿಗೂ ಅಧಿಕ ನೆರವು ವಿತರಣೆ

ಪ್ರಕಟಣಾ ದಿನಾಂಕ: 17 SEP 2026 12:09PM by PIB Bengaluru

ಭಾರತದ ಕೃಷಿ ಇಂಗಾಲ ಮಾರುಕಟ್ಟೆ ನೀತಿಯಿಂದ ತೋಟದ ಹಂತಕ್ಕೆ ಸಾಗಿದೆ, ಪಂಜಾಬ್ ಮತ್ತು ಹರಿಯಾಣದ 2,500ಕ್ಕೂ ಅಧಿಕ ಸಣ್ಣ ಹಿಡುವಳಿದಾರರು ಪುನರುತ್ಪಾದಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಡಿಜಿಟಲ್ ಪಾವತಿಗಳನ್ನು ಸ್ವೀಕರಿಸಲು ಸಿದ್ಧರಾಗಿದ್ದಾರೆ. ಲುಧಿಯಾನದ ಪಂಜಾಬ್ ಕೃಷಿ ವಿಶ್ವವಿದ್ಯಾಲಯದಲ್ಲಿ (ಪಿಎಯು) ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮೊದಲ ಪಾವತಿಗಳನ್ನು ಬಿಡುಗಡೆ ಮಾಡಲಾಯಿತು, ಇದು ರೈತರಿಗೆ ಸುಸ್ಥಿರ ಕೃಷಿ ಪದ್ಧತಿಗಳು ಮತ್ತು ಹೆಚ್ಚುವರಿ ಆದಾಯದ ನಡುವಿನ ಹೊಸ ಸಂಪರ್ಕವನ್ನು ಗುರುತಿಸುತ್ತದೆ. ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯ (ಡಿಎಆರ್ ಇ) ಕಾರ್ಯದರ್ಶಿ ಮತ್ತುಐಸಿಎಆರ್ ನ ಮಹಾನಿರ್ದೇಶಕ ಡಾ. ಎಂ. ಎಲ್. ಜಾಟ್ ಅವರು ಪಂಜಾಬ್ ಮತ್ತು ಹರಿಯಾಣದ 2,550 ರೈತರಿಗೆ ನೇರ ನಗದು ವರ್ಗಾವಣೆ (ಡಿಬಿಟಿ)ಗೆ ಚಾಲನೆ ನೀಡಿದರು.

ಈ ಪಾವತಿಗಳು 2019 ರಲ್ಲಿ ಐಸಿಎಆರ್ ನ ತಾಂತ್ರಿಕ ಮಾರ್ಗದರ್ಶನದೊಂದಿಗೆ ಆರಂಭಿಸಲಾದ ಗ್ರೋ ಇಂಡಿಗೊ ರೈತ ಕಾರ್ಬನ್ ಕಾರ್ಯಕ್ರಮವಾದ 'ಆಡಿ' ಯ ಭಾಗವಾಗಿದೆ. ಈ ಕಾರ್ಯಕ್ರಮದಡಿಯಲ್ಲಿ, ರೈತರು 2019 ಮತ್ತು 2022 ರ ನಡುವೆ ನೇರ ಬಿತ್ತನೆ ಅಕ್ಕಿ (Direct Seeded Rice-ಡಿಎಸ್ ಆರ್), ಕಡಿಮೆ ಬೇಸಾಯ ಮತ್ತು ಬೆಳೆ ತ್ಯಾಜ್ಯ ನಿರ್ವಹಣೆಯಂತಹ ಅಭ್ಯಾಸಗಳನ್ನು ಅಳವಡಿಸಿಕೊಂಡರು. ಅದರ ಪರಿಣಾಮವಾಗಿ ಹಸಿರುಮನೆ-ಅನಿಲ ಕಡಿತ ಮತ್ತು ಮಣ್ಣಿನ ಇಂಗಾಲದಲ್ಲಿನ ಹೆಚ್ಚಳವನ್ನು ಅಳೆಯಲಾಯಿತು ಮತ್ತು ಇಂಗಾಲದ ಕ್ರೆಡಿಟ್‌ಗಳನ್ನು ನೀಡುವ ಮೊದಲು ಸ್ವತಂತ್ರವಾಗಿ ಪರಿಶೀಲಿಸಲಾಯಿತು. ಈ ಕಾರ್ಯಕ್ರಮವು ಏಳು ರಾಜ್ಯಗಳಲ್ಲಿ ಎರಡು ಮಿಲಿಯನ್ ಎಕರೆಗಳಿಗಿಂತ ಅಧಿಕ ಮತ್ತು 100,000ಕ್ಕೂ ಅಧಿಕ ರೈತರನ್ನು ಒಳಗೊಂಡಿದೆ ಮತ್ತು ವೆರಾ VM0042 ವಿಧಾನದ ಅಡಿಯಲ್ಲಿ ಕೃಷಿ ಇಂಗಾಲದ ಕ್ರೆಡಿಟ್‌ಗಳನ್ನು ನೀಡಿದೆ.

ಈ ಕಾರ್ಯಕ್ರಮವು ಪಂಜಾಬ್ ಮತ್ತು ಹರಿಯಾಣದಲ್ಲಿ ಕೃಷಿ ಪುನರುತ್ಪಾದನದ ಕಡೆಗೆ ವಿಶಾಲವಾದ ಪರಿವರ್ತನೆಯ ಮೇಲೆ ರೂಪಿಸಲ್ಪಟ್ಟಿದೆ, ಇದರಲ್ಲಿ ಮಣ್ಣಿನ ಆರೋಗ್ಯ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುವ ಗುರಿ ಹೊಂದಿರುವ ಬೆಳೆಗಳ ತ್ಯಾಜ್ಯ ನಿರ್ವಹಣೆ, ನೀರಿನ ಸಂರಕ್ಷಣೆ ಮತ್ತು ಕೃಷಿ ವ್ಯವಸ್ಥೆಗಳು ಸೇರಿವೆ. ಹಸಿರುಮನೆ-ಅನಿಲ ಲೆಕ್ಕಪತ್ರ ನಿರ್ವಹಣೆ, ಬೆಳೆ-ಸಿಮ್ಯುಲೇಶನ್ ಮಾಡೆಲಿಂಗ್, ಮಣ್ಣು-ಮಾದರಿ ಪ್ರೋಟೋಕಾಲ್‌ಗಳು, ಸಾಧನ ಮೌಲ್ಯೀಕರಣ, ಕ್ಷೇತ್ರ-ತಂಡ ತರಬೇತಿ ಮತ್ತು ಉಪಗ್ರಹ ಮತ್ತು ದೂರ ಸಂವೇದನಾ ವಿಧಾನಗಳು ಸೇರಿವೆ. ನವದೆಹಲಿಯ ಐಸಿಎಆರ್–ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಎಆರ್‌ಐ) ಈ ಪ್ರಕ್ರಿಯೆಗಳಿಗೆ ಕೊಡುಗೆ ನೀಡಿದೆ, ಆದರೆ ಗ್ರೋ ಇಂಡಿಗೊ ಕೂಡ ಪುನರುತ್ಪಾದಕ ಕೃಷಿಯನ್ನು ಉತ್ತೇಜಿಸಲು ವಲಯ 1 ರ ಐಸಿಎಆರ್–ಕೃಷಿ ತಂತ್ರಜ್ಞಾನ ಅನ್ವಯ ಸಂಶೋಧನಾ ಸಂಸ್ಥೆ (ಎಟಿಎಆರ್‌ಐ) ಯೊಂದಿಗೆ ಕೆಲಸ ಮಾಡುತ್ತಿದೆ.

ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ಅಡಿಯಲ್ಲಿ ಪಂಜಾಬ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮತ್ತು ರೈತರು ಮತ್ತು ಕೃಷಿ ಸಂಸ್ಥೆಗಳೊಂದಿಗೆ ಸಮಾಲೋಚನೆಯಲ್ಲಿ ತೊಡಗಿಸಿಕೊಂಡಾಗ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ರೈತ ಕೇಂದ್ರಿತ ಕೃಷಿ ಸಂಶೋಧನೆ ಮತ್ತು ಸುಸ್ಥಿರ ತಂತ್ರಜ್ಞಾನಗಳನ್ನು ತೋಟದ ಮಟ್ಟದ ಅಳವಡಿಕೆಗೆ ಒತ್ತು ನೀಡಿದ್ದಾರೆ. ನೇರ ಬಿತ್ತನೆ ಅಕ್ಕಿ ಮತ್ತು ತ್ಯಾಜ್ಯ ನಿರ್ವಹಣಾ ಪದ್ಧತಿಗಳ ಮಹತ್ವವನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದ್ದರು. 2025ರ ಜೂನ್ ನಲ್ಲಿ ಪಂಜಾಬ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಅವರು ರೈತರೊಂದಿಗೆ ಸಂವಹನ ನಡೆಸಿದರು ಮತ್ತು ಅಭಿಯಾನದ ಭಾಗವಾಗಿ ಕೃಷಿ ಪದ್ಧತಿಗಳನ್ನು ಪರಿಶೀಲಿಸಿದ್ದರು.

ಡಿಎಆರ್ ಇ ಕಾರ್ಯದರ್ಶಿ ಮತ್ತು ಐಸಿಎಆರ್ ನ ಮಹಾನಿರ್ದೇಶಕ ಡಾ. ಎಂ. ಎಲ್. ಜಾಟ್, ವೈಜ್ಞಾನಿಕ ಮೌಲ್ಯಮಾಪನ ಮತ್ತು ಕಠಿಣ ಪರಿಶೀಲನೆಯ ನೆರವಿನಿಂದ ಹವಾಮಾನ-ಸ್ಮಾರ್ಟ್ ಕೃಷಿ ಪದ್ಧತಿಗಳು ಸಣ್ಣ ಹಿಡುವಳಿದಾರ ರೈತರಿಗೆ ಹೆಚ್ಚುವರಿ ಆದಾಯದ ಅವಕಾಶಗಳನ್ನು ಹೇಗೆ ಸೃಷ್ಟಿಸಬಹುದು ಎಂಬುದನ್ನು ಈ ಉಪಕ್ರಮವು ಪ್ರದರ್ಶಿಸುತ್ತದೆ ಎಂದು ಹೇಳಿದರು. ಭಾಗವಹಿಸಿರುವ ರೈತರನ್ನು ಅವರು ಅಭಿನಂದಿಸಿದರು ಮತ್ತು ಈ ಉಪಕ್ರಮವನ್ನು ಬೆಂಬಲಿಸುವ ವೈಜ್ಞಾನಿಕ ಚೌಕಟ್ಟಿಗೆ ಐಸಿಎಆರ್ ಸಂಸ್ಥೆಗಳ ಕೊಡುಗೆಯನ್ನು ಶ್ಲಾಘಿಸಿದರು.

ಕಾರ್ಬನ್ ಪಾವತಿಗಳು ಪರಿಸರ ಪ್ರಯೋಜನಗಳನ್ನು ಉತ್ಪಾದಿಸುವ ಪದ್ದತಿಗಳಿಗೆ ಆರ್ಥಿಕ ಪ್ರೋತ್ಸಾಹವನ್ನು ಒದಗಿಸುತ್ತವೆ. ಸಾಂಪ್ರದಾಯಿಕ ನಾಟಿಗೆ ಹೋಲಿಸಿದರೆ ನೇರ ಬಿತ್ತನೆ ಭತ್ತ ನೀರಾವರಿ ಅವಶ್ಯಕತೆಗಳನ್ನು ಕಡಿಮೆ ಮಾಡಬಹುದು, ಆದರೆ ಸುಧಾರಿತ ಬೆಳೆಯ ತ್ಯಾಜ್ಯ ನಿರ್ವಹಣೆಯು ಕೂಳೆ ಸುಡುವಿಕೆ ಮತ್ತು ಸಂಬಂಧಿತ ವಾಯು ಮಾಲಿನ್ಯವನ್ನು ತಗ್ಗಿಸಲು ಸಹಾಯ ಮಾಡುತ್ತದೆ. 2019–2022ರ ಅವಧಿಯಲ್ಲಿ ದಾಖಲಾದ ಹೊಲಗಳಿಗೆ, ಈ ಕಾರ್ಯಕ್ರಮವು 45 ಶತಕೋಟಿ ಲೀಟರ್ ನೀರು ಮತ್ತು ಎರಡು ಲಕ್ಷ ಟನ್‌ಗಳಿಗಿಂತ ಹೆಚ್ಚು ಬೆಳೆ ತ್ಯಾಜ್ಯಗಳನ್ನು ಬೆಂಕಿಯಿಂದ ದೂರವಿಡುತ್ತದೆ ಎಂದು ಅಂದಾಜಿಸಿದೆ, ಇದು ಅಂದಾಜು 1,000 ಟನ್ ಇಂಗಾಲ PM2.5 ಹೊರಸೂಸುವಿಕೆಯನ್ನು ತಪ್ಪಿಸುತ್ತದೆ.

ರೈತರಿಗೆ ತಮ್ಮ ಹೊಲಗಳಿಂದ ಉತ್ಪತ್ತಿಯಾಗುವ ಇಂಗಾಲದ ಕ್ರೆಡಿಟ್‌ಗಳಲ್ಲಿ ಅವರ ಪಾಲಿನ ಪ್ರಕಾರ ಪಾವತಿಸಲಾಯಿತು. ಕ್ರೆಡಿಟ್‌ಗಳು ಸಂಪೂರ್ಣವಾಗಿ ಮಾರಾಟವಾಗುವ ಮೊದಲು ಗ್ರೋ ಇಂಡಿಗೊ ತನ್ನ ಸ್ವಂತ ನಿಧಿಯಿಂದ ಡಿಜಿಟಲ್ ರೂಪದಲ್ಲಿ ಪಾವತಿಗಳನ್ನು ಬಿಡುಗಡೆ ಮಾಡಿತು, ಇದರಿಂದಾಗಿ ಮಾರಾಟದ ಆದಾಯಕ್ಕಾಗಿ ಕಾಯದೆ ರೈತರು ಪಾವತಿಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ. ರೈತರು ಖಚಿತವಾದ ಮುಂಗಡ ಪಾವತಿ ಮತ್ತು ಕ್ರೆಡಿಟ್‌ಗಳನ್ನು ಮಾರಾಟ ಮಾಡಿದ ನಂತರ ನಿವ್ವಳ ಇಂಗಾಲದ ಆದಾಯದ 75 ಪ್ರತಿಶತದ ನಡುವೆ ಆಯ್ಕೆ ಮಾಡಬಹುದು. ಮೊದಲ ವಿತರಣೆಯು ಸುಮಾರು 30,000 ಎಕರೆ ಮತ್ತು 50,000 ಕ್ಕೂ ಹೆಚ್ಚು ಕಾರ್ಬನ್ ಕ್ರೆಡಿಟ್‌ಗಳನ್ನು ಒಳಗೊಂಡಿತ್ತು, ಭಾಗವಹಿಸುವ ರೈತರು ಸರಿಸುಮಾರು 3,000 ರೂಪಾಯಿಗಳಿಂದ 15,000 ರೂಪಾಯಿಗಳವರೆಗೆ ಪಡೆದರು.

ಪಾವತಿಗಳು ಹಲವು-ವರ್ಷಗಳ ಮಾಪನ ಮತ್ತು ಸ್ವತಂತ್ರ ಪರಿಶೀಲನೆಯ ಪ್ರಕ್ರಿಯೆ ಅನುಸರಿಸಿದವು. 2022 ರ ನಂತರ ಕಾರ್ಯಕ್ರಮಕ್ಕೆ ಸೇರಿದ ರೈತರು ಮುಂದಿನ ಮೇಲ್ವಿಚಾರಣಾ ಚಕ್ರದ ಭಾಗವಾಗಿದ್ದಾರೆ ಮತ್ತು ಅವರ ಇಂಗಾಲದ ಕ್ರೆಡಿಟ್‌ಗಳನ್ನು ನೀಡುತ್ತಿದ್ದಂತೆ ಪಾವತಿಗಳನ್ನು ಸ್ವೀಕರಿಸುತ್ತಾರೆ.

ಗ್ರೋ ಇಂಡಿಗೊದ ಕಾರ್ಯನಿರ್ವಾಹಕ ನಿರ್ದೇಶಕಿ ಡಾ. ಉಷಾ ಬರ್ವಾಲೆ ಜೆಹರ್, “ಈ ಪಾವತಿಯನ್ನು ಭಾರತದಲ್ಲಿ ರೈತರು ತಮ್ಮ ಮಣ್ಣಿನಲ್ಲಿ ಸಂಗ್ರಹವಾಗಿರುವ ಇಂಗಾಲಕ್ಕೆ ಪಾವತಿಸಿದ ಮೊದಲ ನಿದರ್ಶನ’’ ಎಂದು ವಿವರಿಸಿದರು ಮತ್ತು ವೈಜ್ಞಾನಿಕ ಮೌಲ್ಯಮಾಪನ ಮತ್ತು ಪರಿಶೀಲನಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ರೈತರ ನಂಬಿಕೆ ಮತ್ತು ತಾಳ್ಮೆಯನ್ನು ಶ್ಲಾಘಿಸಿದರು. ಲುಧಿಯಾನದ ನೂರ್ಪುರ್ ಬೆಟ್‌ನ ಹರಿಂದರ್‌ಜೀತ್ ಗಿಲ್ ಮತ್ತು ಸಂಗ್ರೂರಿನ ಅಮನ್‌ದೀಪ್ ಕೌರ್ ಕೂಡ ತಮ್ಮ ಅನುಭವಗಳನ್ನು ಹಂಚಿಕೊಂಡರು, ನಿರಂತರ ಪುನರುತ್ಪಾದನಾ ಪದ್ಧತಿಗಳು ಮತ್ತು ಬೆಳೆ ತ್ಯಾಜ್ಯ ಸುಡುವಿಕೆಯನ್ನು ತಪ್ಪಿಸುವುದರೊಂದಿಗೆ ಸಂಬಂಧಿಸಿದ ಆರ್ಥಿಕ ಮತ್ತು ಪರಿಸರ ಪ್ರಯೋಜನಗಳನ್ನು ಎತ್ತಿ ತೋರಿಸಿದರು.

ಈ ಉಪಕ್ರಮವು ಐಸಿಎಆರ್, ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆಗಳು) ಮತ್ತು ರಾಜ್ಯ ಸಂಸ್ಥೆಗಳಿಂದ ನೆರವಿನ ವ್ಯಾಪಕ ಕೃಷಿ ಪರಿವರ್ತನೆಯ ಭಾಗವಾಗಿದೆ. ಕೃಷಿ ವ್ಯವಸ್ಥೆಗಳಲ್ಲಿ ಸುಸ್ಥಿರತೆ ಮತ್ತು ಉತ್ಪಾದಕತೆಯನ್ನು ಸಂಯೋಜಿಸುವ ಉದ್ದೇಶದಿಂದ, ತ್ಯಾಜ್ಯ ಧಾರಣ, ಕನಿಷ್ಠ ಮಣ್ಣಿನ ಅಡಚಣೆ, ಡಿಎಸ್ಆರ್, ವೈವಿಧ್ಯಮಯ ಬೆಳೆ, ಸುಧಾರಿತ ಮಣ್ಣಿನ ಜೀವಶಾಸ್ತ್ರ ಮತ್ತು ಪರಿಣಾಮಕಾರಿ ನೀರಿನ ಬಳಕೆಯಂತಹ ಪದ್ಧತಿಗಳನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳಲು ತೋಟದ ಮಟ್ಟದ ಅನುಭವಗಳು ಅಡಿಪಾಯವನ್ನು ಒದಗಿಸುತ್ತಿವೆ.

ಪಂಜಾಬ್ ಕೃಷಿ ಬೆಂಕಿಯ ಘಟನೆಗಳಲ್ಲಿ ಗಣನೀಯ ಕುಸಿತವನ್ನು ದಾಖಲಿಸಿದೆ. ಸರ್ಕಾರಿ ಮಾಹಿತಿಯ ಪ್ರಕಾರ, 2025 ರ ಭತ್ತದ ಕೊಯ್ಲು ಋತುವಿನಲ್ಲಿ ಪಂಜಾಬ್ 5,114 ಕೃಷಿ ಅಗ್ನಿ ಆಕಸ್ಮಿಕ ಘಟನೆಗಳನ್ನು ದಾಖಲಿಸಿದೆ, ಇದು ಪ್ರಸ್ತುತ ಚೌಕಟ್ಟಿನ ಅಡಿಯಲ್ಲಿ ಮೇಲ್ವಿಚಾರಣೆ ಆರಂಭವಾದ ನಂತರದ ಅತ್ಯಂತ ಕಡಿಮೆ ಸಂಖ್ಯೆಯಾಗಿದೆ, ಇದು 2021 ಕ್ಕೆ ಹೋಲಿಸಿದರೆ ಶೇ.93 ರಷ್ಟು ಕಡಿತ ಮತ್ತು 2022 ಕ್ಕೆ ಹೋಲಿಸಿದರೆ ಶೇ. 90ರಷ್ಟು ಕಡಿತವನ್ನು ಪ್ರತಿನಿಧಿಸುತ್ತದೆ. ಮೋಗಾದಲ್ಲಿನ ರಣಸಿನ್ಹ್ ಕಲಾನ್ ಮಾದರಿ, ಅಲ್ಲಿ ಗ್ರಾಮವು ಶೇ.100ರಷ್ಟುತ್ಯಾಜ್ಯ-ಸುಡುವಿಕೆ-ಮುಕ್ತ ಸ್ಥಿತಿಯನ್ನು ಕಾಯ್ದುಕೊಂಡಿದೆ. ಸತತ ಆರು ವರ್ಷಗಳ ಕಾಲ 1,310 ಎಕರೆಗಳು, ನಿರಂತರ ತ್ಯಾಜ್ಯ-ನಿರ್ವಹಣಾ ಪ್ರಯತ್ನಗಳ ಸಾಮರ್ಥ್ಯವನ್ನು ಮತ್ತಷ್ಟು ಪ್ರದರ್ಶಿಸುತ್ತವೆ.

ಈ ಬೆಳವಣಿಗೆಗಳ ಮಹತ್ವವು ಅಂತಾರಾಷ್ಟ್ರೀಯ ಕೃಷಿ ಸಹಕಾರಕ್ಕೂ ವಿಸ್ತರಿಸುತ್ತದೆ. ಭಾರತದ ಅಧ್ಯಕ್ಷತೆಯಲ್ಲಿ2026ರ ಜೂನ್ ನಲ್ಲಿ ಇಂದೋರ್‌ನಲ್ಲಿ ನಡೆದ 16 ನೇ ಬ್ರಿಕ್ಸ್ ಕೃಷಿ ಸಚಿವರ ಸಭೆಯು, ಮೋದಿಪುರಂನ ಐಸಿಎಆರ್-ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಿಂಗ್ ಸಿಸ್ಟಮ್ ರಿಸರ್ಚ್ (ಐಐಎಫ್‌ಎಸ್‌ಆರ್) ಆರಂಭಿಕ ಸಮನ್ವಯದೊಂದಿಗೆ ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಉತ್ಪಾದಕತೆಗಾಗಿ ಕೃಷಿ ಪರಿಸರ ವಿಜ್ಞಾನ ಮತ್ತು ಪುನರುತ್ಪಾದಕ ಕೃಷಿಯ ಮೇಲಿನ ಶ್ರೇಷ್ಠತೆಯ ಕೇಂದ್ರಗಳ ಬ್ರಿಕ್ಸ್ ನೆಟ್‌ವರ್ಕ್ ಅನ್ನು ಸ್ಥಾಪಿಸಲು ಒಪ್ಪಿಕೊಂಡಿತು. 2026ರ ಸೆಪ್ಟೆಂಬರ್ ನಲ್ಲಿ ಅಂಗೀಕರಿಸಲ್ಪಟ್ಟ ಬ್ರಿಕ್ಸ್ ನವದೆಹಲಿ ಘೋಷಣೆಯು, ಈ ಜಾಲದ ಮೂಲಕ ಸಹಕಾರ ಬಲವರ್ಧನೆಯನ್ನು ಸ್ವಾಗತಿಸಿತು.

ಲುಧಿಯಾನ ಉಪಕ್ರಮವು ಭಾರತದ ಕೃಷಿ ಪರಿವರ್ತನೆಯ ಮೂರು ಪರಸ್ಪರ ಸಂಬಂಧ ಹೊಂದಿರುವ ಆಯಾಮಗಳನ್ನು ಒಗ್ಗೂಡಿಸುತ್ತದೆ: ರೈತ ಕೇಂದ್ರಿತ, ಕ್ಷೇತ್ರ ಆಧಾರಿತ ಕೃಷಿ ಸಂಶೋಧನೆ; ಐಸಿಎಆರ್‌ನ ಪ್ರಯೋಗಾಲಯದಿಂದ ಭೂಮಿಗೆ ವಿಧಾನ ಅದರ ಸಂಶೋಧನಾ ಸಂಸ್ಥೆಗಳು, ಎಟಿಎಆರ್‌ಐಗಳು ಮತ್ತು ಕೆವಿಕೆಗಳ ಮೂಲಕ; ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಹಂಚಿಕೊಳ್ಳಲು ಮತ್ತು ಅಳೆಯಲು ಅಂತಾರಾಷ್ಟ್ರೀಯ ಸಹಕಾರ ಹೊಂದಲು ನೆರವಾಗಲಿವೆ. ಸಂಪನ್ಮೂಲ ಸಂರಕ್ಷಣೆ, ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಸುಸ್ಥಿರ ಕೃಷಿ ಉತ್ಪಾದನೆಗೆ ಕೊಡುಗೆ ನೀಡುವಾಗ, ವೈಜ್ಞಾನಿಕವಾಗಿ ಅಳೆಯಲಾದ ಪರಿಸರ ಫಲಿತಾಂಶಗಳನ್ನು ರೈತರಿಗೆ ಆರ್ಥಿಕ ಪ್ರೋತ್ಸಾಹದೊಂದಿಗೆ ಹೇಗೆ ಸಂಯೋಜಿಸಬಹುದು ಎಂಬುದನ್ನು ಮೊದಲ ಮಣ್ಣು-ಇಂಗಾಲದ ಪಾವತಿಗಳು ನಿರೂಪಿಸುತ್ತವೆ.

 

*****


(ಪ್ರಕಟಣೆ ಐ.ಡಿ.: 2311475) ವಿಸಿಟರ್ ಕೌಂಟರ್ : 23
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati , Tamil