ಶಿಕ್ಷಣ ಸಚಿವಾಲಯ
ಕೇಂದ್ರ ಶಿಕ್ಷಣ ಸಚಿವರು ‘ಭಾರತ್ ಇನೋವೇಟ್ಸ್ 2026’ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು
‘ಭಾರತ್ ಇನೋವೇಟ್ಸ್’ ಯುವ ನಾವೀನ್ಯಕಾರನ್ನು ಜಾಗತಿಕ ಅವಕಾಶಗಳು, ಉದ್ಯಮ ಮತ್ತು ಜಾಲಗಳೊಂದಿಗೆ ಸಂಪರ್ಕಿಸುತ್ತದೆ: ಶ್ರೀ ಪ್ರಲ್ಹಾದ್ ಜೋಶಿ
ನಾವೀನ್ಯತೆ, ಸಂಶೋಧನೆ, ತಂತ್ರಜ್ಞಾನ ಮತ್ತು ಉದ್ಯಮಶೀಲತೆ ಭಾರತದ ಅಭಿವೃದ್ಧಿಯ ಪಯಣದ ಕೇಂದ್ರಬಿಂದುಗಳಾಗಿವೆ: ಕೇಂದ್ರ ಶಿಕ್ಷಣ ಸಚಿವರು
ಪ್ರಕಟಣಾ ದಿನಾಂಕ:
09 SEP 2026 7:29PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಅಭಿವೃದ್ಧಿಯ ಪಯಣದ ಕೇಂದ್ರ ಸ್ಥಾನದಲ್ಲಿ ನಿರಂತರವಾಗಿ ನಾವೀನ್ಯತೆ, ಸಂಶೋಧನೆ, ತಂತ್ರಜ್ಞಾನ ಮತ್ತು ಉದ್ಯಮಶೀಲತೆಗೆ ಆದ್ಯತೆ ನೀಡಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ಹೇಳಿದರು. ಫ್ರಾನ್ಸ್ ನ ನೈಸ್ ನಲ್ಲಿ 2026ರ ಜೂನ್ 14ರಿಂದ 16ರವರೆಗೆ ನಡೆದ ‘ಭಾರತ-ಫ್ರಾನ್ಸ್ ನಾವೀನ್ಯತಾ ವರ್ಷ’ದ ಅಂಗವಾಗಿ ಆಯೋಜಿಸಲಾಗಿದ್ದ ಮೊದಲ ‘ಭಾರತ್ ಇನೋವೇಟ್ಸ್’ ಕಾರ್ಯಕ್ರಮದ ಕುರಿತು ಸಿದ್ಧಪಡಿಸಲಾದ ‘ಭಾರತ್ ಇನೋವೇಟ್ಸ್ 2026’ ಸ್ಮರಣ ಸಂಚಿಕೆಯನ್ನು ನವದೆಹಲಿಯಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಪ್ರಧಾನಮಂತ್ರಿಯವರ ಈ ದೂರದೃಷ್ಟಿಯನ್ನು ‘ಭಾರತ್ ಇನೋವೇಟ್ಸ್’ ಪ್ರತಿಬಿಂಬಿಸಿದ್ದು, ಯುವ ನಾವೀನ್ಯಕಾರರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಹಾಗೂ ಜಾಗತಿಕ ಮಟ್ಟದ ವಿವಿಧ ಪಾಲುದಾರರೊಂದಿಗೆ ಸಂಪರ್ಕ ಸಾಧಿಸಲು ಅವಕಾಶಗಳನ್ನು ಒದಗಿಸಿದೆ ಎಂದು ಶ್ರೀ ಜೋಶಿ ಹೇಳಿದರು. ‘ಭಾರತ್ ಇನೋವೇಟ್ಸ್’ನಂತಹ ಉಪಕ್ರಮಗಳು ಯುವ ಭಾರತದ ಆತ್ಮವಿಶ್ವಾಸ ಮತ್ತು ಆಶೋತ್ತರಗಳನ್ನು ಪ್ರತಿಬಿಂಬಿಸುವುದರ ಜೊತೆಗೆ, ದೇಶದ ಉನ್ನತ ಶಿಕ್ಷಣ ಮತ್ತು ಸಂಶೋಧನಾ ವ್ಯವಸ್ಥೆಯ ಸಾಮರ್ಥ್ಯವನ್ನು ತೋರಿಸಿವೆ. ಯುವ ಪ್ರತಿಭೆಗಳನ್ನು ಅವಕಾಶಗಳು, ಉದ್ಯಮ ಮತ್ತು ಜಾಗತಿಕ ಜಾಲಗಳೊಂದಿಗೆ ಸಂಪರ್ಕಿಸಿದಾಗ ಏನನ್ನು ಸಾಧಿಸಬಹುದು ಎಂಬುದನ್ನು ‘ಭಾರತ್ ಇನೋವೇಟ್ಸ್’ ತೋರಿಸಿಕೊಟ್ಟಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರ ಶಿಕ್ಷಣ ರಾಜ್ಯ ಸಚಿವರಾದ ಡಾ. ಸುಕಾಂತ ಮಜುಮ್ದಾರ್ ಅವರು, ವಿಕಸಿತ ಭಾರತ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಮಹತ್ವದ ಪಾತ್ರವನ್ನು ಒತ್ತಿ ಹೇಳಿದರು. ರಾಷ್ಟ್ರೀಯ ಶಿಕ್ಷಣ ನೀತಿ 2020 ಸಂಶೋಧನೆ, ನಾವೀನ್ಯತೆ, ಸೃಜನಶೀಲತೆ ಮತ್ತು ವೈಜ್ಞಾನಿಕ ಮನೋಭಾವಕ್ಕೆ ಆದ್ಯತೆ ನೀಡಿದೆ. ‘ಭಾರತ್ ಇನೋವೇಟ್ಸ್’ನಂತಹ ಉಪಕ್ರಮಗಳು ಈ ಆದ್ಯತೆಗಳನ್ನು ಫಲಿತಾಂಶಗಳಾಗಿ ಪರಿವರ್ತಿಸಲು ವೇದಿಕೆಯನ್ನು ಒದಗಿಸಿವೆ ಎಂದು ಅವರು ಹೇಳಿದರು.

ಈ ಸ್ಮರಣ ಸಂಚಿಕೆಯಲ್ಲಿ ದೇಶದಾದ್ಯಂತ ಭರವಸೆಯ ಡೀಪ್-ಟೆಕ್ ನಾವೀನ್ಯಕಾರರನ್ನು ಗುರುತಿಸಿ, ಆಯ್ಕೆ ಮಾಡುವುದರಿಂದ ಹಿಡಿದು ಅವರನ್ನು ನೈಸ್ ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವವರೆಗೆ ‘ಭಾರತ್ ಇನೋವೇಟ್ಸ್’ ಸಾಗಿಬಂದ ಪಯಣವನ್ನು ದಾಖಲಿಸಲಾಗಿದೆ. ಈ ಉಪಕ್ರಮದ ಮೂಲಕ ನಡೆದ ವಿವಿಧ ಚಟುವಟಿಕೆಗಳು, ಸಂವಾದಗಳು ಮತ್ತು ಅದರಿಂದ ಹೊರಹೊಮ್ಮಿದ ಫಲಿತಾಂಶಗಳನ್ನೂ ಇದು ಒಳಗೊಂಡಿದೆ.
‘ಭಾರತ್ ಇನೋವೇಟ್ಸ್’ ಎಂಬುದು ಭಾರತದ ಉನ್ನತ ಶಿಕ್ಷಣ ಮತ್ತು ಸಂಶೋಧನಾ ವ್ಯವಸ್ಥೆಯಿಂದ ಹೊರಹೊಮ್ಮುತ್ತಿರುವ ಹೆಚ್ಚಿನ ಸಾಮರ್ಥ್ಯದ ಡೀಪ್-ಟೆಕ್ ಆವಿಷ್ಕಾರಗಳನ್ನು ಗುರುತಿಸಿ, ಪೋಷಿಸುವ ಉದ್ದೇಶದಿಂದ ಶಿಕ್ಷಣ ಸಚಿವಾಲಯ ಕೈಗೊಂಡಿರುವ ಉಪಕ್ರಮವಾಗಿದೆ. ಆವಿಷ್ಕಾರಕರನ್ನು ಕೈಗಾರಿಕೆ, ಹೂಡಿಕೆದಾರರು ಮತ್ತು ಈ ವ್ಯವಸ್ಥೆಯ ಇತರ ಪಾಲುದಾರರೊಂದಿಗೆ ಸಂಪರ್ಕಿಸುವುದು, ತಂತ್ರಜ್ಞಾನಗಳನ್ನು ಉತ್ಪನ್ನಗಳು ಮತ್ತು ಸೇವೆಗಳಾಗಿ ಪರಿವರ್ತಿಸುವ ಪ್ರಕ್ರಿಯೆಯನ್ನು ವೇಗಗೊಳಿಸುವುದು ಹಾಗೂ ಜಾಗತಿಕ ಮಾರುಕಟ್ಟೆಗಳು ಮತ್ತು ಪೂರೈಕೆ ಸರಪಳಿಗಳ ಪರಿಚಯ ಕಲ್ಪಿಸುವುದು ಇದರ ಉದ್ದೇಶವಾಗಿದೆ.
ಪ್ರಯೋಗಾಲಯದಿಂದ ಮಾರುಕಟ್ಟೆಗೆ ಹಾಗೂ ಕ್ಯಾಂಪಸ್ ನಿಂದ ಜಗತ್ತಿಗೆ ಸುಗಮ ಮಾರ್ಗವನ್ನು ನಿರ್ಮಿಸುವ ಗುರಿಯನ್ನು ‘ಭಾರತ್ ಇನೋವೇಟ್ಸ್’ ಹೊಂದಿದೆ. ಇದರ ಮೊದಲ ಆವೃತ್ತಿಯು ದೇಶದಾದ್ಯಂತದ 120 ಡೀಪ್-ಟೆಕ್ ನವೋದ್ಯಮಗಳು ಹಾಗೂ ನಾವೀನ್ಯಕಾರರನ್ನು ಮತ್ತು 45 ಸಂಶೋಧನಾ ಯೋಜನೆಗಳನ್ನು ಒಂದೆಡೆ ತಂದಿತು. ತಮ್ಮ ತಂತ್ರಜ್ಞಾನಗಳನ್ನು ಪ್ರದರ್ಶಿಸಲು, ಉದ್ಯಮ ಮತ್ತು ಹೂಡಿಕೆದಾರರೊಂದಿಗೆ ಸಂವಾದ ನಡೆಸಲು ಹಾಗೂ ಅಂತಾರಾಷ್ಟ್ರೀಯ ಸಹಯೋಗ ಮತ್ತು ಮಾರುಕಟ್ಟೆ ಅವಕಾಶಗಳನ್ನು ಅನ್ವೇಷಿಸಲು ಅವರಿಗೆ ವೇದಿಕೆಯನ್ನು ಒದಗಿಸಿತು.

ಈ ಸ್ಮರಣ ಸಂಚಿಕೆಯು ಈ ಸಂಪೂರ್ಣ ಪಯಣವನ್ನು ದಾಖಲಿಸುವುದರ ಜೊತೆಗೆ, ಭಾರತದ ವಿದ್ಯಾರ್ಥಿಗಳು, ಸಂಶೋಧಕರು, ಬೋಧಕ ವರ್ಗದ ಸದಸ್ಯರು, ನವೋದ್ಯಮಗಳು, ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಈ ವ್ಯವಸ್ಥೆಯ ಪಾಲುದಾರರ ವೈಜ್ಞಾನಿಕ ಸಾಮರ್ಥ್ಯ, ಉದ್ಯಮಶೀಲತಾ ಮನೋಭಾವ ಹಾಗೂ ನಾವೀನ್ಯತಾ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ.
ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ. ಅಜಯ್ ಕುಮಾರ್ ಸೂದ್; ನೀತಿ ಆಯೋಗದ ಸದಸ್ಯ ಪ್ರೊ. ಅಭಯ್ ಕರಂದೀಕರ್; ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ದೀಪ್ತಿ ಗೌರ್ ಮುಖರ್ಜಿ ಮತ್ತು ಕೇಂದ್ರ ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿಗಳು ಹೈಬ್ರಿಡ್ ಮಾದರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಐಐಟಿ ಕಾನ್ಪುರ, ಐಐಟಿ ಮದ್ರಾಸ್ ಮತ್ತು ಐಐಟಿ ಬಾಂಬೆ ನಿರ್ದೇಶಕರು; ಹಿರಿಯ ಶಿಕ್ಷಣ ತಜ್ಞರು; ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಜೈವಿಕ ತಂತ್ರಜ್ಞಾನ ಇಲಾಖೆ, ರಕ್ಷಣಾ ಉತ್ಪಾದನಾ ಇಲಾಖೆ ಹಾಗೂ ಇನ್-ಸ್ಪೇಸ್ (IN-SPACe) ಪ್ರತಿನಿಧಿಗಳು ಆನ್ಲೈನ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
*****
(ಪ್ರಕಟಣೆ ಐ.ಡಿ.: 2308555)
ವಿಸಿಟರ್ ಕೌಂಟರ್ : 16