ಕೃಷಿ ಸಚಿವಾಲಯ
ನಕಲಿ ಬೀಜಗಳ ವಿರುದ್ಧ ಕಠಿಣ ಕ್ರಮ: ಸೆಪ್ಟೆಂಬರ್ 10 ರಂದು ರೈತ ಮುಖಂಡರೊಂದಿಗೆ ದೇಶವ್ಯಾಪಿ ಸಮಾಲೋಚನೆ ನಡೆಸಲಿದ್ದಾರೆ ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಕಠಿಣ ಬೀಜ ಕಾಯ್ದೆ ಜಾರಿಗೆ ಸಿದ್ಧತೆ: ಹೊಸ ಬೀಜ ಮಸೂದೆಯನ್ನು ಅಂತಿಮಗೊಳಿಸುವ ಮುನ್ನ ರೈತರ ಧ್ವನಿಗೆ ಕಿವಿಯಾಗಲಿದ್ದಾರೆ ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಬೀಜದ ಗುಣಮಟ್ಟದಲ್ಲಿ ಇನ್ನು ಮುಂದೆ ಇಲ್ಲ ರಾಜಿ: ಕೇಂದ್ರದಿಂದ ಕಠಿಣ ಹೊಸ ಕಾಯ್ದೆಗೆ ಯೋಜನೆ; ಸೆಪ್ಟೆಂಬರ್ 10 ರಂದು ರೈತ ಮುಖಂಡರೊಂದಿಗೆ ಚರ್ಚಿಸಲಿರುವ ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಶ್ರೀ ಶಿವರಾಜ್ ನೇತೃತ್ವದ ಪ್ರಮುಖ ಸಮಾಲೋಚನೆಯಲ್ಲಿ ಹೊಸ ಬೀಜ ಕಾಯ್ದೆಯ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲಿರುವ ರೈತರು
ಪ್ರಕಟಣಾ ದಿನಾಂಕ:
09 SEP 2026 5:03PM by PIB Bengaluru
ನಕಲಿ ಮತ್ತು ಕಳಪೆ ಗುಣಮಟ್ಟದ ಬಿತ್ತನೆ ಬೀಜಗಳಿಂದ ಉಂಟಾಗುವ ನಷ್ಟದಿಂದ ದೇಶದ ರೈತರನ್ನು ರಕ್ಷಿಸುವ ಉದ್ದೇಶದಿಂದ ಭಾರತ ಸರ್ಕಾರವು ನೂತನ ಹಾಗೂ ಕಠಿಣ 'ಬೀಜ ಕಾಯ್ದೆ'ಯನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಮೃದ್ಧ ಮತ್ತು ಸ್ವಾವಲಂಬಿ ಕೃಷಿ ಸಮುದಾಯದ ದೃಷ್ಟಿಕೋನವನ್ನು ಸಾಕಾರಗೊಳಿಸುವ ಮೋದಿ ಸರ್ಕಾರದ ಪ್ರಯತ್ನಗಳ ಭಾಗವಾಗಿ ಈ ಪ್ರಸ್ತಾವಿತ ಶಾಸನವನ್ನು ತರಲಾಗುತ್ತಿದೆ. ಪ್ರಸ್ತಾವಿತ ಶಾಸನವನ್ನು ಅಂತಿಮಗೊಳಿಸುವ ಮೊದಲು, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಸೆಪ್ಟೆಂಬರ್ 10 ರಂದು ಸಂಜೆ 4:00 ಗಂಟೆಗೆ ನವದೆಹಲಿಯ ಕೃಷಿ ಭವನದಲ್ಲಿ ದೇಶದಾದ್ಯಂತದ ಪ್ರಮುಖ ರೈತ ಸಂಘಟನೆಗಳ ಹಿರಿಯ ಮುಖಂಡರೊಂದಿಗೆ ಉನ್ನತ ಮಟ್ಟದ ಸಮಾಲೋಚನೆ ನಡೆಸಲಿದ್ದಾರೆ.
ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಕರೆದಿರುವ ಈ ಸಮಾಲೋಚನೆಯು, ರೈತರ ತಳಮಟ್ಟದ ಅನುಭವಗಳು, ಸಲಹೆಗಳು ಮತ್ತು ಕಳಕಳಿಗಳನ್ನು ನೇರವಾಗಿ ಕರಡು ಬೀಜ ಶಾಸನದಲ್ಲಿ ಅಳವಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಬೀಜ ಮಾಫಿಯಾಗಳ ಚಟುವಟಿಕೆಗಳಿಗೆ ತಡೆ ಒಡ್ಡಲು ಮತ್ತು ವಂಚನೆ ಹಾಗೂ ಕಳಪೆ ಗುಣಮಟ್ಟದ ಬೀಜಗಳಿಂದ ರೈತರನ್ನು ರಕ್ಷಿಸಲು ಬಲವಾದ ಮತ್ತು ಪರಿಣಾಮಕಾರಿ ನಿಯಂತ್ರಣ ಚೌಕಟ್ಟನ್ನು ನಿರ್ಮಿಸಲು ಸರ್ಕಾರ ಉದ್ದೇಶಿಸಿದೆ.
ಪ್ರಸ್ತಾವಿತ ಹೊಸ ಬೀಜ ಕಾಯ್ದೆಯು ನಕಲಿ, ಕಲಬೆರಕೆ ಅಥವಾ ಕಳಪೆ ಗುಣಮಟ್ಟದ ಬೀಜಗಳ ಮಾರಾಟದಲ್ಲಿ ತೊಡಗಿರುವ ಕಂಪನಿಗಳು ಮತ್ತು ವ್ಯಾಪಾರಿಗಳ ವಿರುದ್ಧ ಭಾರಿ ದಂಡ ಮತ್ತು ಜೈಲು ಶಿಕ್ಷೆ ಸೇರಿದಂತೆ ಕಠಿಣ ಕಾನೂನು ಕ್ರಮಕ್ಕೆ ಅವಕಾಶ ಕಲ್ಪಿಸುವ ನಿರೀಕ್ಷೆಯಿದೆ. ಕಳಪೆ ಗುಣಮಟ್ಟದ ಬೀಜಗಳು ರೈತನ ತಿಂಗಳುಗಟ್ಟಲೆ ಗಳ ಕಷ್ಟಪಟ್ಟು ಮಾಡಿದ ಗಳಿಕೆ ಮತ್ತು ವರ್ಷಗಳ ಶ್ರಮ ಹಾಗೂ ಪರಿಶ್ರಮವನ್ನು ಕಳೆದುಕೊಳ್ಳುವಂತೆ ಮಾಡಬಹುದು. ಹೊಸ ಕಾನೂನು ಬೀಜ ಗುಣಮಟ್ಟದ ಅತ್ಯುನ್ನತ ಮಾನದಂಡಗಳನ್ನು ಮತ್ತು ಪಾರದರ್ಶಕ, ಅಂತ್ಯದಿಂದ ಕೊನೆಯವರೆಗೆ ಪತ್ತೆಹಚ್ಚಬಹುದಾದ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಸಾಂಪ್ರದಾಯಿಕ ಬೀಜಗಳ ಮೇಲೆ ರೈತರ ಹಕ್ಕುಗಳನ್ನು ರಕ್ಷಿಸಬೇಕು ಎಂಬುದು ಸರ್ಕಾರದ ನಿಲುವಾಗಿದೆ.
ಸೆಪ್ಟೆಂಬರ್ 10 ರಂದು ನಡೆಯುವ ಸಮಾಲೋಚನೆಯು ದೇಶದಾದ್ಯಂತದ ರೈತ ಪ್ರತಿನಿಧಿಗಳನ್ನು ಒಂದೆಡೆ ಸೇರಿಸಲಿದೆ. ಭಾರತೀಯ ಕಿಸಾನ್ ಸಂಘ, ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನ ವಿವಿಧ ಬಣಗಳು, ಅಖಿಲ ಭಾರತ ಕಿಸಾನ್ ಸಮನ್ವಯ ಸಮಿತಿ (ಎಐಕೆಸಿಸಿ), ಕಿಸಾನ್ ಮಹಾಪಂಚಾಯತ್, ಭಾರತೀಯ ಕೃಷಕ್ ಸಮಾಜ, ಗಾಂವ್ ಕಿಸಾನ್ ಉನ್ನಯನ್ ಮತ್ತು ಸ್ವತಂತ್ರ ರೈತರ ಸಂಘಗಳ ಸೊಸೈಟಿ (ಎಸ್ ಐ ಎಫ್ ಎ) ನ ಹಿರಿಯ ನಾಯಕರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ, ರೈತರೊಂದಿಗೆ ಸಂವಾದ ಮತ್ತು ಒಮ್ಮತದ ಆಧಾರದ ಮೇಲೆ ನೀತಿಗಳನ್ನು ರೂಪಿಸಲು ಸರ್ಕಾರ ಬದ್ಧವಾಗಿದೆ ಎಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಒತ್ತಿ ಹೇಳಿದ್ದಾರೆ.
ಮುಂಬರುವ ಸಂಸತ್ತಿನ ಅಧಿವೇಶನಕ್ಕೂ ಮುನ್ನ ನಡೆಯುತ್ತಿರುವ ಈ ಪ್ರಮುಖ ಸಮಾಲೋಚನೆಯು, ಬಲವಾದ ನಿಯಂತ್ರಣ ಚೌಕಟ್ಟನ್ನು ರಚಿಸುವಲ್ಲಿ ಮತ್ತು ನಕಲಿ ಹಾಗೂ ಕಳಪೆ ಬೀಜಗಳ ನಿರಂತರ ಪಿಡುಗಿನಿಂದ ಭಾರತೀಯ ಕೃಷಿ ವಲಯವನ್ನು ರಕ್ಷಿಸುವಲ್ಲಿ ಒಂದು ಮಹತ್ವದ ಹೆಜ್ಜೆಯಾಗುವ ನಿರೀಕ್ಷೆಯಿದೆ.
******
(ಪ್ರಕಟಣೆ ಐ.ಡಿ.: 2308457)
ವಿಸಿಟರ್ ಕೌಂಟರ್ : 22